ಯಶೋಧರ ಚರಿತೆ
by ಜನ್ನ

X


ಜನ್ನನ

ಯಶೋಧರ ಚರಿತೆ




ಗದ್ಯಾನುವಾದ:

ತೆಕ್ಕುಂಜ ಗೋಪಾಲಕೃಷ್ಣ ಭಟ್ಟ



ಕರ್ನಾಟಕ ಸರ್ಕಾರ

ಕನ್ನಡ ಮತ್ತು ಸಂಸ್ಕೃತಿ ಇಲಾಖೆ

ಕನ್ನಡ ಭವನ, ಜೆ.ಸಿ.ರಸ್ತೆ

ಬೆಂಗಳೂರು - ‌೫೬೦ ೦೦೨


YESHODARA CHARITHE : A Kannada classic by Janna, Published
by Manu Baligar, Director, Department of Kannada and Culture,
Kannada Bhavana, J.C.Road, Bengaluru - 560 002.

ಈ ಆವೃತ್ತಿಯ ಹಕ್ಕು : ಕರ್ನಾಟಕ ಸರ್ಕಾರ

ಮುದ್ರಿತ ವರ್ಷ: ೨೦೧೧

ಪ್ರತಿಗಳು : ೧೦೦೦

ಪುಟಗಳು : xii + ೧೫೨

ಬೆಲೆ : ರೂ. ೪೫/-


ರಕ್ಷಾಪುಟ ವಿನ್ಯಾಸ : ಕೆ. ಚಂದ್ರನಾಥ ಆಚಾರ್ಯ







ಮುದ್ರಕರು :
ಮೆ|| ಮಯೂರ ಪ್ರಿಂಟ್ ಆ್ಯಡ್ಸ್
ನಂ. ೬೯, ಸುಬೇದಾರ್ ಛತ್ರಂ ರೋಡ್

ಬೆಂಗಳೂರು - ೫೬೦ ೦೨೦ ದೂ : ೨೩೩೪೨೭೨೪




ಬಿ.ಎಸ್. ಯಡಿಯೂರಪ್ಪ
ಮುಖ್ಯಮಂತ್ರಿಗಳು
ಸಿಎಂ/ಪಿಎಸ್/೨೬/೧೧




ವಿಧಾನಸೌಧ
ಬೆಂಗಳೂರು ೫೬೦ ೦೦೧

ಶುಭ ಸಂದೇಶ

ವಿಶ್ವ ಕನ್ನಡ ಸಮ್ಮೇಳನದ ಸಂಭ್ರಮಾಚರಣೆಯ ಸಂದರ್ಭದಲ್ಲಿ ಕನ್ನಡ
ನಾಡು ಏಕೀಕರಣಗೊಂಡು ೫೫ನೇ ವರ್ಷಕ್ಕೆ ಹೆಜ್ಜೆಯನ್ನಿಟ್ಟಿದೆ. ಈ ಸಂದರ್ಭವನ್ನು
ರಚನಾತ್ಮಕವಾಗಿ ದಾಖಲಿಸಿ ಸ್ಮರಣೀಯಗೊಳಿಸಬೇಕೆಂಬುದು ಸರ್ಕಾರದ
ಮಹದಾಶಯ. ಅದಕ್ಕಾಗಿ ಬೆಳಗಾವಿಯಲ್ಲಿ "ವಿಶ್ವ ಕನ್ನಡ ಸಮ್ಮೇಳನ" ವನ್ನು ಇದೇ
ಮಾರ್ಚ್ ತಿಂಗಳಿನಲ್ಲಿ ಆಯೋಜಿಸಲಾಗಿದೆ. ಇದನ್ನು ಅತ್ಯಂತ ಅರ್ಥಪೂರ್ಣವಾಗಿ
ಆಚರಿಸುವುದು ಕರ್ನಾಟಕ ಸರ್ಕಾರದ ಆಶಯವಾಗಿದೆ. ಇದರ ಅಂಗವಾಗಿ
ನಾಡಿನ ವಿವಿಧ ಕ್ಷೇತ್ರಗಳಲ್ಲಾಗಿರುವ ಪ್ರಗತಿಯ ಆತ್ಮಾವಲೋಕನದ ಜೊತೆಗೆ ಕನ್ನಡ
ಸಾಹಿತ್ಯದ ಸೃಜನಶೀಲ ಮತ್ತು ಸೃಜನೇತರ ಪ್ರಕಾರಗಳ ೧೦೦ ಕೃತಿಗಳನ್ನು ಕನ್ನಡದ
ಮೇರುಕೃತಿಗಳ ಮರುಮುದ್ರಣ ಯೋಜನೆಯಡಿ ಪ್ರಕಟಿಸಲಾಗುತ್ತಿದೆ. ಕನ್ನಡದ
ಖ್ಯಾತ ಲೇಖಕರ ಮಹತ್ವದ ಕೃತಿಗಳನ್ನು ಪ್ರಕಟಿಸಿ, ಸುಲಭ ಬೆಲೆಯಲ್ಲಿ ಸಾಹಿತ್ಯಾಸಕ್ತರಿಗೆ
ಒದಗಿಸುವ ಹಂಬಲ ನಮ್ಮದು.

ಈ ಸಾಹಿತ್ಯ ಮಾಲಿಕೆಯಲ್ಲಿನ ಕೃತಿರತ್ನಗಳನ್ನು ಕನ್ನಡಿಗರು ಸಹೃದಯತೆಯಿಂದ
ಸ್ವಾಗತಿಸುವ ಮೂಲಕ ಇವುಗಳ ಪ್ರಯೋಜನವನ್ನು ಪಡೆದುಕೊಂಡರೆ ಸರ್ಕಾರದ
ಈ ಯೋಜನೆ ಸಾರ್ಥಕವಾಗುತ್ತದೆ ಎಂದು ಭಾವಿಸುತ್ತೇನೆ.

ದಿನಾಂಕ ೨೪.೦೧.೨೦೧೧

(ಬಿ.ಎಸ್. ಯಡಿಯೂರಪ್ಪ)

ಗೋವಿಂದ ಎಂ. ಕಾರಜೋಳ

ವಿಧಾನಸೌಧ

ಕನ್ನಡ ಮತ್ತು ಸಂಸ್ಕೃತಿ,

ಬೆಂಗಳೂರು - ೦೧

ಸಣ್ಣ ನೀರಾವರಿ ಹಾಗೂ ಜವಳಿ ಸಚಿವರು

ಚೆನ್ನುಡಿ



ಕನ್ನಡ ಮತ್ತು ಸಂಸ್ಕೃತಿ ಇಲಾಖೆಯು ವಿಶ್ವ ಕನ್ನಡ ಸಮ್ಮೇಳನದ ಅಂಗವಾಗಿ
ಸುಮಾರು ೧೦೦ ಕನ್ನಡದ ಮೇರುಕೃತಿಗಳನ್ನು ಮರುಮುದ್ರಿಸಲು ಉದ್ದೇಶಿಸಿರುತ್ತದೆ.
ಈ ಯೋಜನೆಯಡಿ ಕನ್ನಡ ಸಾಹಿತ್ಯದ ಬೇರೆ ಬೇರೆ ಕಾಲಘಟ್ಟಗಳಲ್ಲಿ
ರಚನೆಗೊಂಡ ಕಥೆ, ಕಾದಂಬರಿ, ವಿಚಾರ ಸಾಹಿತ್ಯ, ಪ್ರಬಂಧ, ವಿಮರ್ಶೆ, ನಾಟಕ,
ಕವನ ಸಂಕಲನ- ಹೀಗೆ ಸಾಹಿತ್ಯದ ವಿವಿಧ ಪ್ರಕಾರಗಳ ಕೆಲವು ಪ್ರಾತಿನಿಧಿಕ
ಕೃತಿಗಳನ್ನು ಪ್ರಕಟಿಸಲಾಗುತ್ತಿದೆ. ಈ ಪ್ರಾತಿನಿಧಿಕ ಕೃತಿಗಳನ್ನು ಸರ್ಕಾರದಿಂದ ರಚಿತವಾದ
ಆಯ್ಕೆ ಸಮಿತಿಯು ಮುದ್ರಣಕ್ಕೆ ಆಯ್ಕೆ ಮಾಡಿರುತ್ತದೆ. ಈ ಕೃತಿಗಳನ್ನು ಮುದ್ರಣಕ್ಕೆ
ಆಯ್ಕೆ ಮಾಡಿದ ಆಯ್ಕೆ ಸಮಿತಿಯ ಎಲ್ಲಾ ವಿದ್ವಾಂಸರಿಗೂ ನನ್ನ ಧನ್ಯವಾದಗಳು.
ಈ ಮಹತ್ವದ ಕೃತಿಗಳನ್ನು ಸಹೃದಯ ಕನ್ನಡಿಗರಿಗೆ ಸುಲಭ ಬೆಲೆಯಲ್ಲಿ
ತಲುಪಿಸಬೇಕೆಂಬುದು ನಮ್ಮ ಹೆಗ್ಗುರಿಂಯಾಗಿರುತ್ತದೆ. ಕನ್ನಡ ಸಾಹಿತ್ಯದ
ಮೈಲಿಗಲ್ಲುಗಳಾಗಿರುವ ಈ ಪುಸ್ತಕಗಳು ಭಾವಿ ಪೀಳಿಗೆಯವರಿಗೆ ದಾರಿದೀಪಗಳಾಗಿವೆ.
ಈ ಕೃತಿಗಳ ಪ್ರಯೋಜನವನ್ನು ಕನ್ನಡ ಜನತೆ ಹಾಗೂ ವಿದ್ಯಾರ್ಥಿಗಳು ಪಡೆದರೆ
ನಮ್ಮ ಶ್ರಮ ಸಾರ್ಥಕವೆಂದು ಭಾವಿಸುತ್ತೇನೆ.

ದಿನಾಂಕ ೧೮.೦೧.೨೦೧೧

(ಗೋವಿಂದ ಎಂ. ಕಾರಜೋಳ)

ಅಧ್ಯಕ್ಷರ ಮಾತು

ಕರ್ನಾಟಕ ಸರ್ಕಾರದ ಕನ್ನಡ ಮತ್ತು ಸಂಸ್ಕೃತಿ ಇಲಾಖೆಯು ಕನ್ನಡದ
ಮೇರುಕೃತಿಗಳನ್ನು ಪುನರ್‌ಮುದ್ರಣ ಮಾಡಲು ಒಂದು ಯೋಜನೆಯನ್ನು
ಕೈಗೊಂಡಿತು. ಕೃತಿಗಳ ಆಯ್ಕೆಗಾಗಿ ಸರ್ಕಾರವು ಒ೦ದು ಸಮಿತಿಯನ್ನು ರಚಿಸಿತು.
ಈ ಮಹತ್ವದ ಯೋಜನೆಯ ಸಮಿತಿಯ ಅಧ್ಯಕ್ಷನಾಗಿ ಕಾರ್ಯನಿರ್ವಹಿಸುವ
ಸುಯೋಗ ನನ್ನದಾಯಿತು.
ಈ ಯೋಜನೆಯ ಮಹತ್ವವನ್ನು ನಾನು ವಿವರಿಸುವ ಅಗತ್ಯವಿಲ್ಲ. ಕನ್ನಡದ
ಶ್ರೇಷ್ಠ ಕೃತಿಗಳನ್ನು ಸುಲಭ ಬೆಲೆಗೆ ಕನ್ನಡಿಗರ ಕೈಗಳಲ್ಲಿರಿಸಲು ಕನ್ನಡ ಮತ್ತು
ಸಂಸ್ಕೃತಿ ಇಲಾಖೆಯು ಹಲವು ಯೋಜನೆಗಳನ್ನು ಕೈಗೊಂಡಿರುವುದಕ್ಕಾಗಿ
ಸರ್ಕಾರವನ್ನೂ ಇಲಾಖೆಯನ್ನೂ ಹೃತ್ಪೂರ್ವಕವಾಗಿ ಅಭಿನಂದಿಸುತ್ತೇನೆ. ಕನ್ನಡ
ಸಂಸ್ಕೃತಿಗೆ ಈ ಯೋಜನೆಗಳು ಮಹತ್ವದ ಕೊಡುಗೆಯನ್ನು ನೀಡುತ್ತವೆ.
ಕನ್ನಡದ ಮೇರುಕೃತಿಗಳನ್ನು ಆರಿಸುವುದು ಸುಲಭದ ಕೆಲಸವಲ್ಲ. ಇಂತಹ
ಆಯ್ಕೆಯಲ್ಲಿ ಬೇರೆ ಬೇರೆ ಅಭಿಪ್ರಾಯಗಳಿಗೆ ಸಾಧಾರವಾಗಿಯೇ ಅವಕಾಶವಿರುತ್ತದೆ.
ಕನ್ನಡ ನಾಡಿನ ಶ್ರೇಷ್ಠ ಸಾಹಿತಿಗಳು ಈ ಸಮಿತಿಯ ಸದಸ್ಯರಾಗಿದ್ದದ್ದು ಸುದೈವದ
ಸಂಗತಿ. ಕೃತಿಗಳನ್ನು ಚರ್ಜೆಸಿ ಮಹತ್ವದ ನಿರ್ಧಾರಕ್ಕೆ ಬಂದ ಸಮಿತಿಯು
ಕಷ್ಟಸಾಧ್ಯವಾದ ಕಾರ್ಯವನ್ನು ಸಾಧಿಸಿದೆ. ಇದಕ್ಕಾಗಿ ನಾನು ಸಮಿತಿಯ ಎಲ್ಲ
ಸದಸ್ಯರಿಗೂ ಕೃತಜ್ಞನಾಗಿದ್ದೇನೆ.
ಈ ಕಾರ್ಯದ ನಿರ್ವಹಣೆಯಲ್ಲಿ ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ
ನಿರ್ದೇಶಕರಾದ ಶ್ರೀ ಮನು ಬಳಿಗಾರ್‌ ಅವರು ನೆರವಾಗಿದ್ದಾರೆ. ಅವರ ಮತ್ತು
ಅವರ ಸಿಬ್ಬಂದಿಯವರ ಅಮೂಲ್ಯ ಸಹಕಾರಕ್ಕೆ ನಾನು ಕೃತಜ್ಞ.
ಕನ್ನಡ ನಾಡಿನ ಮನೆಮನೆಗಳಲ್ಲಿ ಸಾಹಿತ್ಯದ ಮಂಗಳ ದೀಪದ ಬೆಳಕನ್ನು
ಹರಡುವ ಈ ಯೋಜನೆಯ ಪೂರ್ಣಪ್ರಯೋಜನವನ್ನು ಕನ್ನಡಿಗರು ಪಡೆದುಕೊಳ್ಳಲಿ
ಎಂದು ಹಾರೈಸುತ್ತೇನೆ.

ದಿನಾಂಕ ೧೬.೧೨.೨೦೧೦

ಸಿರಿಗನ್ನಡಂ ಗೆಲ್ಗೆ!

ಎಲ್‌.ಎಸ್‌. ಶೇಷಗಿರಿ ರಾವ್‌

ಅಧ್ಯಕ್ಷ

ಕನ್ನಡದ ಮೇರುಕೃತಿಗಳ ಆಯ್ಕೆ ಸಮಿತಿ


ಹೊನ್ನುಡಿ

ನಾಡಿನ ಭಾಷೆ, ಸಂಸ್ಕೃತಿ ಮತ್ತು ಜನಜೀವನದ ಪರಿಮಾಣವನ್ನು ಅಳೆಯುವುದರಲ್ಲಿ ಅಲ್ಲಿನ ಸಾಹಿತ್ಯದ ಕೃತಿಗಳು ಮಹತ್ವದ ಪಾತ್ರವನ್ನು ವಹಿಸುತ್ತವೆ. ಸುಮಾರು ಎರಡು ಸಾವಿರದ ಐದನೂರು ವರ್ಷಗಳಿಗೂ ದೀರ್ಘವಾದ ಐತಿಹಾಸಿಕ ಪರಂಪರೆ ಚೆಲುವ ಕನ್ನಡ ನಾಡಿನದು. ಹಾಗೆಯೇ ಅದರ ಸಾಹಿತ್ಯ ಕೂಡ ಪಂಪ, ಕುಮಾರವ್ಯಾಸ, ಶರಣರು, ದಾಸರು ಮೊದಲಾದವರಿಂದ ಸಮೃದ್ಧವಾಗಿ ಬೆಳೆದಿದೆ. ಅದರ ಸಮೃದ್ಧತೆಗೆ ಏಳು ಜ್ಞಾನಪೀಠಗಳ ಗರಿಮೆಯೇ ಸಾಕ್ಷಿ.

ಕರ್ನಾಟಕವು ಏಕೀಕರಣಗೊಂಡು ೫೫ನೇ ವರ್ಷಕ್ಕೆ ಪಾದಾರ್ಪಣೆ ಮಾಡಿದೆ. ಈ ಸಂದರ್ಭದಲ್ಲಿ ಬೆಳಗಾವಿಯಲ್ಲಿ ವಿಶ್ವ ಕನ್ನಡ ಸಮ್ಮೇಳನವನ್ನು ಆಚರಿಸುತ್ತಿರುವುದು ಒಂದು ಐತಿಹಾಸಿಕವೂ ಹಾಗೂ ಮಹತ್ವಪೂರ್ಣವೂ ಆದ ವಿಶಿಷ್ಟ ಘಟನೆ.

ವಿಶ್ವ ಕನ್ನಡ ಸಮ್ಮೇಳನದ ಸಂಭ್ರಮಾಚರಣೆಯ ಅಂಗವಾಗಿ ಹಲವಾರು ಕಾರ್ಯಕ್ರಮಗಳನ್ನು ಆಯೋಜಿಸಲಾಗಿದೆ. ಕನ್ನಡ ನಾಡಿನ ವಿವಿಧ ಕ್ಷೇತ್ರಗಳಲ್ಲಾಗಿರುವ ಪ್ರಗತಿಯ ಆತ್ಮಾವಲೋಕನದ ಜೊತೆಗೆ ಕನ್ನಡ ಸಾಹಿತ್ಯದ ಸೃಜನಶೀಲ ಹಾಗೂ ಸೃಜನೇತರ ಪ್ರಕಾರದ ೧೦೧ ಕೃತಿಗಳನ್ನು, ಮೇರುಕೃತಿಗಳ ಮರುಮುದ್ರಣ ಯೋಜನೆಯಡಿ ಪ್ರಕಟಿಸಲಾಗುತ್ತಿದೆ.

ಈ ವಿಶಿಷ್ಟ ಕೃತಿಗಳನ್ನು ಆಯ್ಕೆ ಮಾಡಿದ ಆಯ್ಕೆ ಸಮಿತಿ ಅಧ್ಯಕ್ಷರಿಗೆ ಹಾಗೂ ಸದಸ್ಯರಿಗೆ ನನ್ನ ವಂದನೆಗಳು. ಈ ಸಾಹಿತ್ಯ ಮಾಲಿಕೆಯನ್ನು ಸಾಹಿತ್ಯಾಭಿಮಾನಿಗಳು ಸ್ವಾಗತಿಸುವ ಮೂಲಕ ಈ ಕೃತಿಗಳ ಸದುಪಯೋಗ ಪಡೆದುಕೊಳ್ಳುತ್ತಾರೆಂದು ಭಾವಿಸಿದ್ದೇನೆ.

ವಿಶೇಷಾಧಿಕಾರಿಗಳು
ವಿಶ್ವ ಕನ್ನಡ ಸಮ್ಮೇಳನ


ಎರಡು ನುಡಿ

ಕರ್ನಾಟಕ ಸರ್ಕಾರವು ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ವತಿಯಿಂದ
“ವಿಶ್ವ ಕನ್ನಡ ಸಮ್ಮೇಳನ'ದ ಅಂಗವಾಗಿ ಕನ್ನಡದ ಮೇರುಕೃತಿಗಳ ಮರುಮುದ್ರಣ
ಯೋಜನೆಯಡಿ ಕನ್ನಡ ಸಾರಸ್ವತ ಲೋಕವನ್ನು ಶ್ರೀಮಂತಗೊಳಿಸಿರುವ ಸಾಹಿತಿಗಳ
ಮಹತ್ವದ ಕೃತಿಗಳನ್ನು ಓದುಗರಿಗೆ ಒದಗಿಸಬೇಕೆಂಬ ಸದಾಶಯ ಹೊಂದಿರುತ್ತದೆ.
ಈ ಯೋಜನೆಯಡಿ ಸುಮಾರು ೧೦೦ ಕೃತಿಗಳನ್ನು ಪ್ರಕಟಿಸಲು ಉದ್ದೇಶಿಸಿದೆ.
ಈ ಕೃತಿಗಳನ್ನು ಆಯ್ಕೆಮಾಡಲು ಖ್ಯಾತ ವಿದ್ವಾಂಸರಾದ ಪ್ರೊ. ಎಲ್.ಎಸ್.
ಶೇಷಗಿರಿರಾವ್‌ರವರ ಅಧ್ಯಕ್ಷತೆಯಲ್ಲಿ ನಾಡಿನ ಹೆಸರಾಂತ ಸಾಹಿತಿ /
ವಿದ್ವಾಂಸರುಗಳನ್ನೊಳಗೊಂಡ ಆಯ್ಕೆ ಸಮಿತಿಯನ್ನು ರಚಿಸಿದೆ. ಈ ಆಯ್ಕೆ
ಸಮಿತಿಯು ಕನ್ನಡದ ಮೇರುಕೃತಿಗಳ ಮರುಮುದ್ರಣ ಯೋಜನೆಗೆ ಕನ್ನಡ ಸಾಹಿತ್ಯದ
ವಿವಿಧ ಕಾಲಘಟ್ಟಗಳಲ್ಲಿ ಬಂದ ಪ್ರಾತಿನಿಧಿಕ ಕೃತಿಗಳನ್ನು ಆಯ್ಕೆ ಮಾಡಿರುತ್ತದೆ.
ಆಯ್ಕೆ ಸಮಿತಿಯ ಅಧ್ಯಕ್ಷರು ಹಾಗೂ ಸದಸ್ಯರಿಗೆ ಸರ್ಕಾರದ ಪರವಾಗಿ ವಂದನೆಗಳು
ಸಲ್ಲುತ್ತವೆ. ಈ ಪುಸ್ತಕಗಳನ್ನು ಹೊರತರಲು ಅನುಮತಿ ನೀಡಿ ಸಹಕರಿಸಿದ ಎಲ್ಲಾ
ಲೇಖಕರು ಹಾಗೂ ಹಕ್ಕುದಾರರುಗಳಿಗೆ ನನ್ನ ಕೃತಜ್ಞತೆಗಳು ಸಲ್ಲುತ್ತವೆ. ಕನ್ನಡದ
ಮೇರುಕೃತಿ ಸಾಹಿತ್ಯ ಮಾಲಿಕೆಯನ್ನು ಓದುಗರು ಸ್ವಾಗತಿಸುತ್ತಾರೆಂದು ನಂಬಿದ್ದೇನೆ.

ದಿನಾಂಕ ೧೭.೦೧.೨೦೧೧

(ರಮೆಶ್ ಬಿ.ಝಳಕಿ) ಸರ್ಕಾರದ ಕಾರ್ಯದರ್ಶಿಗಳು
ಕನ್ನಡ ಮತ್ತು ಸಂಸ್ಕೃತಿ ಹಾಗೂ ವಾರ್ತಾ ಇಲಾಖೆ




ಪ್ರಕಾಶಕರ ಮಾತು

ಕರ್ನಾಟಕ ಸರ್ಕಾರದ ಕನ್ನಡ ಮತ್ತು ಸಂಸ್ಕೃತಿ ಇಲಾಖೆಯು ಕನ್ನಡದ
ಮೇರುಕೃತಿಗಳ ಮರುಮುದ್ರಣ ಯೋಜನೆಯಡಿ 'ವಿಶ್ವ ಕನ್ನಡ ಸಮ್ಮೇಳನ'ದ
ಅಂಗವಾಗಿ ಸುಮಾರು ನೂರು ಪುಸ್ತಕಗಳನ್ನು ಪ್ರಕಟಿಸಲು ಉದ್ದೇಶಿಸಿರುತ್ತದೆ.
ಈ ಯೋಜನೆಯಡಿ ಹಳಗನ್ನಡ, ನಡುಗನ್ನಡ ಮತ್ತು ಹೊಸಗನ್ನಡ ಈ ಮೂರೂ
ಕಾಲಘಟ್ಟಗಳಲ್ಲಿ ರಚನೆಗೊಂಡ, ಕನ್ನಡದಲ್ಲಿ ಮಹತ್ವದ ಕೃತಿಗಳೆಂದು
ಪರಿಗಣಿತವಾಗಿರುವ ಪುಸ್ತಕಗಳನ್ನು ಸರ್ಕಾರವು ನೇಮಿಸಿರುವ ಆಯ್ಕೆ ಸಮಿತಿಯು
ಮರುಮುದ್ರಣಕ್ಕೆ ಆಯ್ಕೆ ಮಾಡಿರುತ್ತದೆ. ಈ ಸಾಹಿತ್ಯ ಮಾಲೆಯಲ್ಲಿ ಈಗಾಗಲೇ
ಇಲಾಖೆಯು ಸಮಗ್ರ ಸಾಹಿತ್ಯ ಪ್ರಕಟಣೆಯಡಿ ಪ್ರಕಟಿಸಿರುವ ಲೇಖಕರ ಕೃತಿಗಳನ್ನು
ಪರಿಗಣಿಸಿರುವುದಿಲ್ಲ.
ಕನ್ನಡದ ಮೇರು ಕೃತಿಗಳ ಮರುಮುದ್ರಣಕ್ಕೆ ಪುಸ್ತಕಗಳನ್ನು ಆಯ್ಕೆ
ಮಾಡಿದ ಆಯ್ಕೆ ಸಮಿತಿಯ ಅಧ್ಯಕ್ಷರಾದ ಪ್ರೊ. ಎಲ್.ಎಸ್. ಶೇಷಗಿರಿ ರಾವ್‌ರವರಿಗೆ
ಹಾಗೂ ಸಮಿತಿಯ ಸದಸ್ಯರುಗಳಾದ ಡಾ. ಚಂದ್ರಶೇಖರ ಕಂಬಾರ,
ಡಾ. ಹಂಪ ನಾಗರಾಜಯ್ಯ, ಡಾ. ಎಂ.ಎಂ.ಕಲಬುರ್ಗಿ, ಡಾ. ದೊಡ್ಡರಂಗೇಗೌಡ,
ಡಾ. ಎಚ್.ಜೆ. ಲಕ್ಕಪ್ಪಗೌಡ, ಡಾ. ಅರವಿಂದ ಮಾಲಗತ್ತಿ, ಡಾ. ಎನ್.ಎಸ್.
ಲಕ್ಷ್ಮೀನಾರಾಯಣ ಭಟ್ಟ, ಡಾ. ಪಿ.ಎಸ್. ಶಂಕರ್, ಶ್ರೀಮತಿ ಸಾರಾ ಅಬೂಬಕ್ಕರ್,
ಡಾ. ಪ್ರಧಾನ್ ಗುರುದತ್ತ ಇವರುಗಳಿಗೆ ನನ್ನ ಕೃತಜ್ಞತೆಗಳು. ಈ ಯೋಜನೆಯಡಿ
ಮರುಮುದ್ರಣಕ್ಕೆ ಆಯ್ಕೆಯಾಗಿರುವ ಪುಸ್ತಕಗಳ ಮುದ್ರಣಕ್ಕೆ ಅನುಮತಿ ನೀಡಿದ
ಎಲ್ಲ ಲೇಖಕರಿಗೂ, ಹಕ್ಕುದಾರರಿಗೂ ಮತ್ತು ಕರಡಚ್ಚು ತಿದ್ದಿದವರಿಗೂ ನನ್ನ
ವಂದನೆಗಳು.

ಸದರಿ ಪ್ರಕಟಣಾ ಯೋಜನೆಯ ಪುಸ್ತಕಗಳನ್ನು ಹೊರತರಲು ಸಹಕರಿಸಿದ
ಶ್ರೀ ಎಚ್. ಶಂಕರಪ್ಪ, ಜಂಟಿ ನಿರ್ದೆಶಕರು, (ಸು.ಕ.), ಶ್ರೀಮತಿ ವೈ.ಎಸ್.ವಿಜಯಲಕ್ಷ್ಮಿ,
ಸಹಾಯಕ ನಿರ್ದೇಶಕರು ಹಾಗೂ ಪ್ರಕಟಣಾ ಶಾಖೆಯ ಸಿಬ್ಬಂದಿಗೆ ನನ್ನ ನೆನಕೆಗಳು.
ವಿಶ್ವ ಕನ್ನಡ ಸಮ್ಮೇಳನದ ಲಾಂಛನವನ್ನು ಸಿದ್ಧಪಡಿಸಿಕೊಟ್ಟ ಹಿರಿಯ ಕಲಾವಿದರಾದ
ಶ್ರೀ ಸಿ. ಚಂದ್ರಶೇಖರ ಅವರಿಗೂ ನನ್ನ ನೆನಕೆಗಳು ಹಾಗೂ ಈ ಪುಸ್ತಕಗಳನ್ನು
ಸುಂದರವಾಗಿ ಮುದ್ರಿಸಿಕೊಟ್ಟಿರುವ ಮಯೂರ ಪ್ರಿಂಟ್ ಆ್ಯಡ್ಸ್‌ನ ಮಾಲೀಕರಾದ


ಶ್ರೀ ಬಿ.ಎಲ್. ಶ್ರೀನಿವಾಸ್ ಮತ್ತು ಸಿಬ್ಬಂದಿ ವರ್ಗದವರಿಗೂ ನನ್ನ ನೆನಕೆಗಳು.
ಕನ್ನಡದ ಮೇರುಕೃತಿಗಳ ಮರುಮುದ್ರಣ ಯೋಜನೆಯಡಿ ಕನ್ನಡ ಓದುಗರಿಗೆ
ಹಲವಾರು ವರ್ಷಗಳಿಂದ ದೊರಕದೇ ಇದ್ದ ಎಷ್ಟೋ ಪುಸ್ತಕಗಳು ಲಭ್ಯವಾಗುತ್ತಿರುವುದು
ಹೆಮ್ಮೆಯ ಸಂಗತಿ. ಕನ್ನಡದ ಮೇರುಕೃತಿಗಳ ಮರುಮುದ್ರಣ ಯೋಜನೆಯಡಿ
ಸಾಹಿತ್ಯಾಭಿಮಾನಿಗಳಿಗೆ ಅಕ್ಷರ ದಾಸೋಹ ನಡೆಸುವ ಆಶಯ ನಮ್ಮದು.
ಈ ಕೃತಿಗಳನ್ನು ಕನ್ನಡಿಗರು ಸ್ವಾಗತಿಸುತ್ತಾರೆಂದು ನಂಬಿದ್ದೇನೆ.

ದಿನಾಂಕ ೧೧.೦೧.೨೦೧೧

ನಿರ್ದೇಶಕರು

ಕನ್ನಡ ಮತ್ತು ಸಂಸ್ಕೃತಿ ಇಲಾಖೆ





ಕನ್ನಡದ ಮೇರು ಕೃತಿಗಳ ಆಯ್ಕೆ ಸಮಿತಿ

ಅಧ್ಯಕ್ಷರು
ಪ್ರೊ. ಎಲ್.ಎಸ್. ಶೇಷಗಿರಿ ರಾವ್
ಸದಸ್ಯರು
ಡಾ|| ಚಂದ್ರಶೇಖರ ಕಂಬಾರ
ಡಾ|| ಎಂ.ಎಂ. ಕಲಬುರ್ಗಿ
ಡಾ|| ದೊಡ್ಡರಂಗೇಗೌಡ
ಡಾ|| ಅರವಿಂದ ಮಾಲಗತ್ತಿ
ಡಾ|| ಎನ್.ಎಸ್. ಲಕ್ಷ್ಮೀನಾರಾಯಣ ಭಟ್ಟ
ಡಾ|| ಪ್ರಧಾನ್ ಗುರುದತ್ತ
ಡಾ|| ಹಂಪ ನಾಗರಾಜಯ್ಯ
ಡಾ|| ಎಚ್.ಜೆ. ಲಕ್ಕಪ್ಪಗೌಡ
ಶ್ರೀಮತಿ ಸಾರಾ ಅಬೂಬಕ್ಕರ್
ಡಾ|| ಪಿ.ಎಸ್, ಶಂಕರ್
ಸದಸ್ಯ ಕಾರ್ಯದರ್ಶಿ
ಶ್ರೀ ಮನು ಬಳಿಗಾರ್, ಕ.ಆ.ಸೇ.
ನಿರ್ದೆಶಕರು
ಕನ್ನಡ ಮತ್ತು ಸಂಸ್ಕೃತಿ ಇಲಾಖೆ


ಪರಿವಿಡಿ



ಶುಭ ಸಂದೇಶ

iii

ಚೆನ್ನುಡಿ

iv

ಅಧ್ಯಕ್ಷರ ಮಾತು

v

ಹೊನ್ನುಡಿ

vi

ಎರಡು ನುಡಿ

vii

ಪ್ರಕಾಶಕರ ಮಾತು

viii

ಕನ್ನಡದ ಮೇರುಕೃತಿಗಳ ಆಯ್ಕಿ ಸಮಿತಿ

x


ಯಶೋಧರ ಚರಿತೆ

೧-೧೫೨






ಯಶೋಧರ ಚರಿತೆ

ಉಪೋದ್ಘಾತ

೧. ಕವಿ
'ಯಶೋಧರ ಚರಿತೆ'ಯನ್ನು ಬರೆದ ಕವಿ ಜನ್ನ. ಕಮ್ಮೆವಂಶದ ಕಾಶ್ಯಪ
ಗೋತ್ರದ “ಶಂಕರ” ಎಂಬುವನು ಹೊಯ್ಸಳ ನಾರಸಿಂಹನಲ್ಲಿ ಕಟಕೋಪಾ
ಧ್ಯಾಯನಾಗಿದ್ದನು. ಇವನಿಗೆ 'ಸುಮನೋಬಾಣ'ನೆಂಬ ಬಿರುದಿತ್ತು. ಈತನ ಹೆಂಡತಿ
ಗಂಗಾದೇವಿ. ಇವರಿಗೆ, ಅನಂತನಾಥಜಿನನು ಹುಟ್ಟಿದ ಆಷಾಡಕೃಷ್ಣ ತ್ರಯೋದಶೀ
ರೇವತಿ ನಕ್ಷತ್ರ* ಶಿವಯೋಗದಲ್ಲಿ ಜನ್ನನು ಹುಟ್ಟಿದನೆಂದು ಅವನೇ
ಹೇಳಿಕೊಂಡಿದ್ದಾನೆ. ಈತನ ಹೆಂಡತಿ “ರಾಯ ದಂಡಾಧಿನಾಥ ಕೃತಾಂತಂ
ಪಸರ್ವೆತ್ತ ಚಾಕಣನಪತ್ಯಂ ರೇಚಯಂ ಪೆತ್ತ ಪುತ್ರಿ” ಲಕುಮಾ ದೇವಿ. ಇವನ
ಧಾರ್ಮಿಕಗುರು ಕಾಣೂರ್ಗಣದ ಮಾಧವಚಂದ್ರ ಶಿಷ್ಯನಾದ ಗಂಡವಿಮುಕ್ತ
ರಾಮಚಂದ್ರಮುನಿ. ಚಾಳುಕ್ಯ ಜಗದೇಕಮಲ್ಲನಲ್ಲಿ ಕಟಕೋಪಾಧ್ಯಾಯನಾಗಿಯೂ
ಅಭಿನವ ಶರ್ಮವರ್ಮನೆಂಬ ಬಿರುದುಳ್ಳವನಾಗಿಯೂ ಇದ್ದ ಎರಡನೆಯ
ನಾಗವರ್ಮನು ಇವನ ಉಪಾಧ್ಯಾಯನಾಗಿದ್ದನು. ಸೂಕ್ತಿಸುಧಾರ್ಣವವನ್ನು ಬರೆದ
ಮಲ್ಲಿಕಾರ್ಜುನನು ಈತನ ಸೋದರಿಯ ಪತಿ; ಮತ್ತು ಶಬ್ದಮಣಿದರ್ಪಣವನ್ನು
ಬರೆದ ಕೇಶಿರಾಜನು ಇವನ ಸೋದರಳಿಯ.
ಜನ್ನನೇ ಹೇಳಿಕೊಂಡಂತೆ ಅವನು ವೀರಬಲ್ಲಾಳನ ಆಸ್ಥಾನಕವಿಯಾಗಿದ್ದು
ಅವನಿಂದ ಕವಿಚಕ್ರವರ್ತಿ ಎಂಬ ಬಿರುದನ್ನು ಪಡೆದನು. ಮಾತ್ರವಲ್ಲ, ಬಲ್ಲಾಳನ
ಮಗ ನರಸಿಂಹನಲ್ಲಿ ನಿಂದಿರೆ ದಂಢಾಧೀಶಂ ಕುಳ್ಳಿರೆ ಮಂತ್ರಿ ತೊಡಂಕೆ ಕವಿ”
ಯಾಗಿದ್ದನು; ಇವನ ಧರ್ಮಶ್ರದ್ದೆ ಇವನಿಗೆ ಅನಂತನಾಥನ ಬಸದಿಯನ್ನು
ಕಟ್ಟಿಸುವ ಹಾಗೂ ಪಾರ್ಶ್ವಜಿನೇಶ್ಚರನ ಬಸದಿಯ ದ್ವಾರವನ್ನು ಮಾಡಿಸುವ
–––––––––––––––
* ಅಷಾಢ ಕೃಷ್ಣತ್ರಯೋದಶಿಯಂದು ರೇವತೀನಕ್ಷತ್ರ ಬರುವುದು ಹೇಗೋ ತಿಳಿಯದು.
ಏಕೆಂದರೆ ಆಷಾಢಮಾಸದ ಪೌರ್ಣಮಿ ಪೂರ್ವಾಷಾಢ ಅಥವಾ ಉತ್ತರಾಷಾಢ
ನಕ್ಷತ್ರಗಳಲ್ಲಿಯೇ ಹೆಚ್ಚಾಗಿ ಬರುತ್ತದೆ. ಆನಂತರ ಹದಿಮೂರು ದಿವಸಗಳು ತ್ರಯೋದಶಿ

ಬರುವಾಗ, ರೇವತೀನಕ್ಷತ್ರ ದಾಟಿ ಎಷ್ಟೋ ದಿನಗಳ ಅವಧಿ ಕಳೆದಿರುತ್ತದೆ.


ಯಶೋಧರ ಚರಿತೆ

ಪ್ರೇರಣೆಯನ್ನು ಕೊಟ್ಟಿದೆ. ಇವನದು ಇತ್ತ ಕಯ್ಯಲ್ಲದೆ ಒಡ್ಡಿದ ಕಯ್ಯಲ್ಲ. ಇದೂ ಅಲ್ಲದೆ ತಾನು ರನ್ನನಂತೆ ವೈಯಾಕರಣನೂ ಪೊನ್ನನಂತೆ ಅಸಹಾಯ ಕವಿಯೂ ಆಗಿದ್ದುದನ್ನು ಅವನು ಹೇಳಿಕೊಂಡಿದ್ದಾನೆ.
ಜನ್ನನು ಚೆನ್ನರಾಯಪಟ್ಟಣದ ೧೭೯ನೆಯ ಶಾಸನವನ್ನೂ (ಕ್ರಿ. ಶ. ೧೧೯೧) ತರೀಕೆರೆಯ ೪೫ನೆಯ ಶಾಸನವನ್ನೂ (ಕ್ರಿ. ಶ. ೧೧೯೭) ಬರೆದನೆಂದು ಆಯಾ ಶಾಸನಗಳ ಅಂತ್ಯದ 'ಜನ್ನಯ್ಯನ ಕವಿತೆ' ಎಂಬ ಮಾತಿನಿಂದ ತಿಳಿದುಬರುತ್ತದೆ. ಅವನಿಗೆ ಸಾಹಿತ್ಯರತ್ನಾಕರ, ರಾಜವಿದ್ವತ್ಯಭಾಕಲಹಂಸ, ಕವಿ ವೃಂದಾರಕವಾಸವ, ಕವಿಕಲ್ಪಲತಾ ಮಂದಾರ ಮುಂತಾದ ಬಿರುದುಗಳಿವೆ. ಜನ್ನಮರಸ, ಜನ್ನಯ್ಯ ಜನ್ನಿಗ, ಜನಾರ್ದನ ಜಾನಕಿ ಮುಂತಾದ ಹೆಸರುಗಳಿಂದ ತನ್ನನ್ನು ಕರೆದುಕೊಂಡಿದ್ದಾನೆ.
ಮೇಲೆ ಹೇಳಿದ ಶಾಸನಗಳಲ್ಲದೆ, ಜನ್ನನು ಬರೆದುದು 'ಯಶೋಧರ ಚರಿತೆ' ಮತ್ತು 'ಅನಂತನಾಥ ಪುರಾಣ' ಎಂಬ ಗ್ರಂಥಗಳನ್ನು. ಸ್ಮರತಂತ್ರವೆಂಬ ಗ್ರಂಥವನ್ನೂ ಬರೆದಿದ್ದಾನೆಂದು ವಿದ್ವಾಂಸರು ಹೇಳುತ್ತಾರೆ. ಇವುಗಳಲ್ಲಿ ಅನಂತನಾಥ ಪುರಾಣವು ಹದಿನಾಲ್ಕನೆಯ ತೀರ್ಥಂಕರನಾದ ಅನಂತನಾಥನ ಚರಿತವಾಗಿದೆ. ಹದಿನಾಲ್ಕು ಆಶ್ವಾಸಗಳುಳ್ಳ ಈ ಕೃತಿ 'ಅರುಹನ ಮೂರ್ತಿಯಂತಿರೆ ನಿರಾಭರಣ'ವಾಗಿ ಮೆರೆಯುವುದೆಂದು ಹೇಳಿದ್ದಾನೆ. ಆದರೆ ಅನೇಕ ಅಲಂಕಾರಗಳು ಕಾವ್ಯದಲ್ಲಿ ಬರುತ್ತವೆ. ಇದು ಮುಖ್ಯವಾಗಿ ಧಾರ್ಮಿಕ ಕಥೆಯಾಗಿದ್ದು, ಮಧ್ಯದಲ್ಲಿ ಬರುವ 'ಚಂಡಶಾಸನನ ಕಥೆಯಿಂದ ಇದು ತನ್ನ ಹಿರಿಮೆಯನ್ನು ಹೆಚ್ಚಿಸಿಕೊಂಡಿದೆ. ಇದನ್ನು ಇವರು ಕ್ರಿ. ಶ.೧೨೩೦ರಲ್ಲಿ ಬರೆದು ಮುಗಿಸಿದನೆಂದು ಈ ಗ್ರಂಥದ ಅಂತ್ಯದಲ್ಲಿ ಬರುವ ಈ ಕೆಳಗಣ ಪದ್ಯದಿಂದ ಗೊತ್ತಾಗುತ್ತದೆ:

         ಶಕಸಂವತ್ಸರಮಂದು ಸಾಸಿರದ ನೂರೈವತ್ತೆರಟ್ಟಿನಂ
               ವಿಕೃತಾಬ್ದಂ ಬರೆ ಚೈತ್ರಶುದ್ಧ ದಶಮೀ ದೇವೇಜ್ಯನೊಳ್ಳುಷ್ಯತಾ
               ರಕದೊಳ್ಳಾಡಿಸಿದಂ ಪ್ರತಿಷ್ಠೆಯನನಂತ ಶ್ರೀ ಮುರಾಣಕ್ಕೆ ಕ
               ಮೈಕುಲಾಂಭೋರುಹಭಾನು ಜನ್ನಮರಸಂ ಸಾಹಿತ್ಯರತ್ನಾಕರಂ

(ಅ xiv; ಪ ೮೪)
೨. ಕಾವ್ಯ

ಯಶೋಧರ ಚರಿತೆಯೇ ಪ್ರಕೃತ ವಿಚಾರಕ್ಕೆ ಒಳಗಾಗಬೇಕಾದ ಗ್ರಂಥ.

ಯಶೋಧರ ಚರಿತೆ

ಆದುದರಿಂದ ಇದರ ವಿಷಯವಾಗಿ ಸ್ವಲ್ಪ ವಿಸ್ತಾರವಾಗಿ ಪರಿಶೀಲಿಸೋಣ.
ಯಶೋಧರ ಚರಿತೆಯ ವಿಷಯವಾಗಿ ಆರ್. ನರಸಿಂಹಾಚಾರ್ಯರು
ಬರೆದ 'ಕವಿಚರಿತೆ'ಯ ಪ್ರಥಮಾವೃತ್ತಿಯಲ್ಲಿ ಈ ಮಾತುಗಳಿವೆ:- “ಇದು ವರ್ಣಕ
ಪ್ರಬಂಧವು; ಇದರಲ್ಲಿ ಗದ್ಯಭಾಗವೇ ಇಲ್ಲ; ಸುಮಾರು ಎಂಟು ಹತ್ತು ವೃತ್ತಗಳು
ಹೊರತು ಉಳಿದುವೆಲ್ಲಾ ಕಂದ ಪದ್ಯಗಳೇ ಆಗಿವೆ. ಈ ಗ್ರಂಥವು ನಾಲ್ಕು
ಅವತಾರಗಳಾಗಿ ಭಾಗಿಸಲ್ಪಟ್ಟಿದೆ; ಇದರಲ್ಲಿ ಒಟ್ಟು ಕಂದ ವೃತ್ತಗಳು ಸಹ ೩೧೧
ಇವೆ ... ಇದೇ ಕಥೆಯನ್ನು ಈ ಕವಿಯ ಕಾಲಕ್ಕೆ ಹಿಂದೆ ಇತರ ಕವಿಗಳು
ಸಂಸ್ಕೃತದಲ್ಲಿಯೂ ಕನ್ನಡದಲ್ಲಿಯೂ ಬರದಿದ್ದರು ....
ಗ್ರಂಥಾವತಾರದಲ್ಲಿ ಇಪ್ಪತ್ತನೆಯ ತೀರ್ಥಂಕರನಾದ ಮುನಿಸುವ್ರತನನ್ನು
ಸ್ತುತಿಸಿ ಬಳಿಕ ಸಿದ್ಧಾದಿಗಳನ್ನೂ ವೀರಸೇನ, ಜಿನಸೇನ, ಸಿಂಹನಂದಿ, ಕೊಂಡ
ಕುಂದ, ಸಮಂತಭದ್ರ ಗುಣಭದ್ರ ಪೂಜ್ಯಪಾದ ಎಂಬಿವರುಗಳನ್ನು ಹೊಗಳಿದ್ದಾನೆ.
ಅನಂತರ-ಹುಲಿ ಪಾಯೆ ಗುರುಗಳ್ 'ಸಳಹೊಯ್' ಎಂದು ಕುಂಚದ ಸೆಳೆಯಂ
ಕೊಡಲು ಹುಲಿಯನಟ್ಟಿ ಹೊಯ್ಸಳನಾದನು. ಅವನ ಮಗ ವಿನಯಾದಿತ್ಯ;
ಅವನ ಪುತ್ರ ಎರೆಯುಂಗ; ಅವನ ಸುತ ಬಿಟ್ಟಿದೇವ; ಆತನ ಮಗ ನರಸಿಂಹ
; ಅವನ ಪುತ್ರ ವೀರಬಲ್ಲಾಳ – ಎಂದು ಹೊಯ್ಸಳ ರಾಜರ ಪರಂಪರೆಯನ್ನು
ಹೇಳಿ, ವೀರಬಲ್ಲಾಳನು ತನಗೆ ಸ್ವಾಮಿಯಾದುರಿಂದ ಅವನನ್ನು ವಿಶೇಷವಾಗಿ
ಸ್ತುತಿಸಿದ್ದಾನೆ. ಗ್ರಂಥಾಂತ್ಯದಲ್ಲಿಯೂ 'ಅಸಹಾಯ ಶೂರನ ಭುಜಕ್ಕೆ ಜಯಂ
ಸಮಸಲ್ಗೆ' ಎಂದು ವೀರಬಲ್ಲಾಳನನ್ನು ಆಶೀರ್ವದಿಸಿದ್ದಾನೆ ....”
ಯಶೋಧರ ಚರಿತೆಯನ್ನು ಜನ್ನನು ಬರೆದು ಮುಗಿಸಿದುದು
ಕ್ರಿ. ಶ. ೧೨೦೯ರಲ್ಲಿ ಎಂದು ಈ ಕೆಳಗಣ ಪದ್ಯದಿಂದ ತಿಳಿದುಬರುತ್ತದೆ:
ಶ್ರೀಗಿರಿದುರ್ಗಮಲ್ಲನೃಪರಾಜ್ಯದ ವತ್ಸರಮುತ್ತರೋತ್ತರ
ಕ್ಕಾಗಿರೆ ಶುಕ್ಲದಾಶ್ವಯುಜ ಕೃಷ್ಣದ ಪಂಚಮಿ ಪುಷ್ಯತಾರೆ ಪೂ
ರ್ಣಾಗುರುವಾಗೆ ಭೂತಳದೊಳೀ ಕೃತಿ ಪೆತ್ತುದು ಸುಪ್ರತಿಷ್ಠೆಯಂ
ಚಾಗದ ಭೋಗದಗ್ಗಳಿಕೆಯಂ ಮೆಳೆದಂ ಕವಿಭಾಳಲೋಚನಂ

(ಯಶೋಧರ ಚರಿತೆ : ೪-೮೬)

ಇದಿಷ್ಟು ಯಶೋಧರ ಚರಿತೆಯ ಬಾಹ್ಯ ಪರಿಚಯ ಮಾತ್ರ ಇನ್ನು,
ಕೃತಿಯ ಒಳಗನ್ನು ನೋಡಬಹುದು. 'ಕವಿಚರಿತೆ'ಯಲ್ಲಿ "ಮಾರಿದತ್ತನೆಂಬ ರಾಜನು
ಮಾರಿಗೆ ಬಲಿಕೊಡುವುದಕ್ಕಾಗಿ ಇಬ್ಬರು ಕುಲೀನರಾದ ಹುಡುಗರನ್ನು ಹಿಡಿದು

ತರಿಸಿದಾಗ ಅವರು ಹೇಳಿದ ಪೂರ್ವ ಕಥೆಯಿಂದ ಪರಹಿಂಸಾಸಕ್ತಿಯನ್ನು
ಬಿಟ್ಟು ಅವರನ್ನು ಬಿಡುಗಡೆ ಮಾಡಿ ತಪಂಬಟ್ಟನು-ಎಂಬುದೇ ಇದರ ಕಥಾಸಾರ”
ಎಂಬ ಮಾತಿದೆ. ಕೃತಿಯಲ್ಲಿ “ಅಭಯ ರುಚಿಕುಮಾರಂ ಮಾರಿದತ್ತಂಗೆ
ಹಿಂಸಾರಭಸಮತಿಗೆ ಸಯ್ಪಂ ಪೇಳ್ದು ಧರ್ಮಕ್ಕೆ ತಂದೀ ಶುಭಕಥನ” ಎಂಬ
ಮಾತು ಇದಕ್ಕೆ ಆಧಾರ. ಆದರೆ ಕೃತಿಗೆ 'ಯಶೋಧರ ಚರಿತೆ' ಎಂಬ
ಹೆಸರಿರುವುದರಿಂದ ಯಶೋಧರನು ಸಂಕಲ್ಪ ಹಿಂಸೆಯಿಂದ ಏನೇನು ಕಷ್ಟಗಳನ್ನು
ಯಾವ ಯಾವ ಜನ್ಮದಲ್ಲಿ ಹೇಗೆ ಹೇಗೆ ಅನುಭವಿಸಬೇಕಾಯಿತು ಎಂಬ
ವಸ್ತುವೇ ಇದರಲ್ಲಿ ಪ್ರಧಾನವೆಂಬುದನ್ನು ಅಂಗೀಕರಿಸಬೇಕಾಗುತ್ತದೆ. ಕಥೆಯಲ್ಲಿ
ಕುತೂಹಲವನ್ನುಂಟುಮಾಡುವುದಕ್ಕಾಗಿ ಕವಿ ಯಶೋಧರನು
ಅಭಯರುಚಿಯಾಗಿದ್ದ ಜನ್ಮದ ಅವಧಿಯಲ್ಲಿ ನಡೆದ ಘಟನೆಯಿಂದ ಕೃತಿಯನ್ನು
ತೊಡಗಿಸಿದ್ದಾನೆ, ಅಷ್ಟೆ, ಈ ಕಥೆಯ ಸಂಕ್ಷೇಪ ಸ್ವರೂಪವನ್ನು ಮೊದಲು
ನೋಡೋಣ.

೩. ಕಥಾಸಾರ
ಅಯೋಧ್ಯಾ ದೇಶದ ರಾಜಪುರದ ಮಾರಿದತ್ತರಾಜನು ಒಂದು ವಸಂತದಲ್ಲಿ
ಎಂದಿನಂತೆ ಚಂಡಮಾರಿ ದೇವತೆಯ ತೃಪ್ತಿಗಾಗಿ ನರಬಲಿ ಕೊಡುವುದಕ್ಕಾಗಿ
ಇಬ್ಬರು ಎಳೆಯರನ್ನು ಹಿಡಿತರಿಸುತ್ತಾನೆ. ಅವನ ಪ್ರಜೆಗಳು ಸಾವಿರಾರು ಸಂಖ್ಯೆಯ
ಪ್ರಾಣಿಗಳನ್ನು ತಂದಿದ್ದಾರೆ. ಆ ಸನ್ನಿವೇಶದಲ್ಲಿ ಅಲ್ಲಿಗೆ ತರಲ್ಪಟ್ಟ ಮರ್ತ್ಯಯುಗಲಕವು
ನಿಶ್ಚಿಂತೆಯಿಂದ ಮಾರಿಯ ಮನೆಯನ್ನು ಹೊಕ್ಕು, ಪದ್ಧತಿಯಂತೆ, ಅರಸನನ್ನು
ಹರಸಬೇಕೆಂದಿದ್ದಾಗ, ಅವರಲ್ಲಿ ಒಬ್ಬನಾದ ಅಭಯರುಚಿ ಕುಮಾರನು"ನಿರ್ಮಲ
ಧರ್ಮದಿಂದ ಪಾಲಿಸು ಧರೆಯಂ” ಎನ್ನುತ್ತಾನೆ. ಅವರ ರೂಪಧೈರ್ಯಗ:ಉ
ರಾಜನನ್ನು ಬೆರಗುಗೊಳಿಸುತ್ತದೆ. ಆಗ ಮಾರಿದತ್ತನಿಗೆ ಅವರ ವಿಷಯವನ್ನು
ತಿಳಿಯುವ ಕುತೂಹಲವುಂಟಾಯಿತು. ಅವನು ಪ್ರಶ್ನಿಸಿದಾಗ ಅಭಯರುಚಿ ತಮ್ಮ
ಜನ್ಮಾಂತರ ಕಥೆಯನ್ನು ಹೇಳುತ್ತಾನೆ.

ಉಜ್ಜಯಿನಿಯ ಯಶೌಘ ರಾಜನಿಗೆ ತನ್ನ ಮಡದಿ ಚಂದ್ರಮತಿಯಲ್ಲಿ
ಹುಟ್ಟಿದವನೇ ಯಶೋಧರ, ಅವನ 'ಮನ:ಪ್ರಿಯೆ' ಅಮೃತಮತಿ. ಯಶೌಘನು
ವೃದ್ಧಾಪ್ಯಕ್ಕಡಿಯಿಟ್ಟಾಗ ಮಗನಿಗೆ ಪಟ್ಟಕಟ್ಟಿ ತಪಸ್ಸಿಗೆ ಹೋಗುತ್ತಾನೆ. ಯಶೋಧರ
ಅಮೃತಮತಿಯರು ಪರಸ್ಪರಾನುಬದ್ದರಾಗಿ ಕಾಲ ಕಳೆಯುತ್ತಾರೆ.

ಒಂದು ರಾತ್ರಿ ಅವರಿಬ್ಬರೂ ಮಂಚದ ಮೇಲೆ ಮಲಗಿದ್ದಾಗ; ನಟ್ಟಿರುಳು

ಅಮೃತಮತಿಗೆ ಪಕ್ಕದ ಗಜಶಾಲೆಯ ಮಾವಟಿಗನ ಹಾಡಿನ ಇಂಚರ ಕೇಳುತ್ತದೆ.
ಅವಳು ಕೂಡಲೇ ಆತನಿಗೆ ತನ್ನ ಮನಸ್ಸನ್ನು 'ಪಸಾಯ ದಾನಂ ಗೊಟ್ಟಳು.'
ಅವನನ್ನು ನೋಡುವ, ಆಮೇಲೆ ಕೂಡುವ ಚಿಂತೆ ಅವಳಿಗೆ ಕಡಲ್ವರಿಯಿತು.
ಬೆಳಗಾದ ಮೇಲೆ ತನ್ನ ಕೆಳದಿಯನ್ನು ಆತನ ಬಳಿಗೆ ಕಳುಹಿಸುತ್ತಾಳೆ. ಅವಳು
ಅಷ್ಟವಂಕನನ್ನು ಕಂಡು ಹೇಸಿ ಘಕ್ಕನೆ ಮರಳುತ್ತಾಳೆ ಅತ್ಯಾತುರದಿಂದಿದ್ದ
ಅಮೃತಮತಿಯೊಡನೆ 'ಇಂತಹ ಕಾಮದೇವನನ್ನು ಹೇಗೆ ಹುಡುಕಿ ಒಲಿದೆಯೋ?
ಎಂದು ವ್ಯಂಗ್ಯವಾಗಿ ನುಡಿಯುತ್ತಾಳೆ. ಅಮೃತಮತಿಯ ಕಾಮ ಕೆರಳಿ, ವ್ಯಂಗ್ಯ
ತಿಳಿಯದೆ, ಆತನ ರೂಪವನ್ನು ತಿಳಿಯ ಬಯಸುತ್ತಾಳೆ. ಅಷ್ಟಾವಕ್ರನ ವಿಕಾರಗಳ
ವರ್ಣನೆಯನ್ನು ಕೇಳಿ, ಕಾಮದ ಕೋಟಲೆಯಿಂದ 'ಪೊಲ್ಲಮೆಯೆ ಲೇಸು
ನಲ್ಲರ ಮೆಯ್ಯೋ” ಎಂದು ಸಮಾಧಾನ ತಂದುಕೊಳ್ಳುತ್ತಾಳೆ. ಅನಂತರ ದೂತಿಗೆ
ಲಂಚವಿತ್ತು ಮಾವಟಿಗನ ಒಡನಾಟವನ್ನು ದಕ್ಕಿಸಿಕೊಂಡು, ಕ್ರಮಕ್ರಮವಾಗಿ
ಯಶೋಧರನಿಂದ ದೂರವಾಗುತ್ತಾಳೆ. ಇದರ ಸೋವು ಸಿಕ್ಕಿದ ಯಶೋಧರನು
ಪರೀಕ್ಷಿಸಿ ನೋಡಲು ಮುಂದಾಗುತ್ತಾನೆ. ಅಮೃತಮತಿ ಜಾರನಲ್ಲಿಗೆ ಹೋಗುವ
ಹೊತ್ತಿಗೆ ಅವಳನ್ನು ಹಿಂಬಾಲಿಸಿ ಗುಟ್ಟನ್ನು ತಿಳಿಯುತ್ತಾನೆ. ಆಗ ಅವಳನ್ನೂ
ಅವಳ ನಲ್ಲನನ್ನೂ ಎರಡು ಭಾಗ ಮಾಡಬೇಕೆಂಬ ಎಣಿಕೆ ಮೂಡಿ, ಕೂಡಲೇ
ಧೃತಿ ಬಂದು, ಕೊಲ್ಲದೆ ಅವನು ಮರಳುತ್ತಾನೆ. ಮರುದಿನ ತನ್ನ ಗುಟ್ಟು
ರಟ್ಟಾದುದು ಅಮೃತಮತಿಗೂ ಗೊತ್ತಾಗುತ್ತದೆ.

ಯಶೋಧರನು ಕದಡಿದ ಮನಸ್ಸಿನಿಂದ ತಾಯಿಯ ಬಳಿಗೆ ಹೋಗಿ
ಹಿಂದಿನ ರಾತ್ರಿಯ ಘಟನೆಯನ್ನು ಕನಸಿನ ರೂಪದಿಂದ ತಿಳಿಸುವನು. ಆ
ತಾಯಿ, ಚಂದ್ರಮತಿ, ಪ್ರಾಣಿ ಬಲಿಯನ್ನು ಕೊಟ್ಟು ಶಾಂತಿ ಮಾಡುವಂತೆ ಮಗನನ್ನು
ಒತ್ತಾಯಿಸುವಳು, ಕಟ್ಟಕಡೆಗೆ ಹಿಟ್ಟಿನ ಕೋಳಿಯನ್ನು ಬಲಿ ಕೊಡುವ ನಿರ್ಧಾರಕ್ಕೆ
ಇಬ್ಬರೂ ಬರುತ್ತಾರೆ. ಹಾಗೆ ಬಲಿಕೊಡುತ್ತಿದ್ದಾಗ ಹಿಟ್ಟಿನ ಕೋಳಿಯಲ್ಲಿ ಸೇರಿದ್ದ
ಬೆಂತರವೊಂದು ಕೋಳಿಯಂತೆ ಕೂಗುತ್ತದೆ. ದೊರೆಗೆ ದಿಗಿಲಾಗುತ್ತದೆ. ಅವನು
ಮನೆಗೆ ಬಂದು, ಮಗ ಯಶೋಮತಿಗೆ ಪಟ್ಟಕಟ್ಟಿ ತಪಸ್ಸಿಗೆ ಹೊರಡಲು
ಸಿದ್ಧನಾಗುತ್ತಾನೆ. ಅದನ್ನು ತಿಳಿದ ಅಮೃತಮತಿ ಅವನನ್ನೂ ಅತ್ತೆಯನ್ನೂ ಔತಣಕ್ಕೆ
ಬರಿಸಿ, ಅವರಿಬ್ಬರನ್ನೂ ವಿಷವಿಕ್ಕಿ ಕೊಲ್ಲುತ್ತಾಳೆ.

ಹಾಗೆ ಸತ್ತ ಈ ಇಬ್ಬರೂ ಹಲವು ಸಲ ಜನ್ಮವೆತ್ತಿ, ಕಡೆಗೆ ಯಶೋಮತಿಗೆ
ಅಭಯರುಚಿ ಅಭಯಮತಿಗಳೆಂಬ ಅವಳಿ ಮಕ್ಕಳಾಗಿ ಹುಟ್ಟುತ್ತಾರೆ. ಅವರು
ಎಳೆವೆಯಲ್ಲೆ ದೀಕ್ಷೆವಹಿಸಿ ಸುದತ್ತಾಚಾರ್ಯರ ಶಿಷ್ಯರಾಗುತ್ತಾರೆ. ಚರಿಗೆಗೆ



ಹೊರಟಾಗ ಮಾರಿದತ್ತನ ತಳಾರನಾದ ಚಂಡಕರ್ಮನು ಅವರನ್ನು ಹಿಡಿದು, ಚಂಡಮಾರಿ ದೇವತೆಯ ಮನೆಗೊಯ್ದಾಗ ಅಭಯರುಚಿ ಈ ಕಥೆಯನ್ನು ಹೇಳುತ್ತಾನೆ ಮಾರಿದತ್ತನ ಮನಸ್ಸು ಮಾರ್ಪಟ್ಟು ದೀಕ್ಷೆವಹಿಸುತ್ತಾನೆ. ಇವನು ಸತ್ತು, ಮುಂದೆ ಮೂರನೆಯ ಸ್ವರ್ಗದಲ್ಲಿ ದೇವನೆ ಆಗುತ್ತಾನೆ. ಅಭಯರುಚಿ ಅಭಯಮತಿಗಳೂ ಕಾಲಾಂತರದಲ್ಲಿ ಈಶಾನ ಕಲ್ಪದಲ್ಲಿ ಹುಟ್ಟುತ್ತಾರೆ. ಅಮೃತಮತಿ ಧೂಮಪ್ರಭೆಯೆಂಬ ನರಕದಲ್ಲಿ ತೊಳಲುತ್ತಾಳೆ.

೪ ಪರೀಶಲನ

ಇದಿಷ್ಟು ಕಥೆಯನ್ನು ಸ್ಕೂಲವಾಗಿ ನೋಡುವಾಗ ಕಾಣದ ಸಮಸ್ಯೆಗಳು ಸೂಕ್ಷಾವಲೋಕನ ಸಂದರ್ಭದಲ್ಲಿ ತಲೆಯೆತ್ತುತ್ತವೆ. ಎಲ್ಲವಕ್ಕಿಂತಲೂ ಪ್ರಮುಖವಾದುದು ಅಮೃತಮತಿಯ ವರ್ತನೆಯ ಸಮಸ್ಯೆ. ಯಶೋಧರನ ಕಬ್ಬಿನ ಬಿಲ್ಲಿಗೂ ನನೆಯ ನಾರಿಗೂ ಜನಮೋಹನ ಬಾಣವು ಹುಟ್ಟುವಂತೆ ಹುಟ್ಟಿದವನು ಮಾತ್ರವಲ್ಲದೆ, ಎಳೆವೆಯಿಂದಲೇ ಸೌಂದರ್ಯದ ಮೂರ್ತಿಯಾಗಿ ರೂಪುಗೊಂಡವನು. ತಾರುಣ್ಯದಲ್ಲಿ ಎಳೆಯ ಬೆಂಗಳು, ಪುಷ್ಪಬಾಣ, ಮಲಯಮಾರುತ ಇವುಗಳ ಆಕರ್ಷಕತೆಯನ್ನು ಪಡೆದವನು. ಇಂಥವನ ಮನಃಪ್ರಿಯೆ ಅಮೃತಮತಿ. “ಕನ್ಯಾ ವರಯತೇ ರೂಪಂ ಎಂಬ ಮಾತಿನಂತೆ ಅಮೃತಮತಿ ಯಶೋಧರನ ರೂಪವನ್ನು ಮೆಚ್ಚಿ ಅವನನ್ನು ವರಿಸಿದಳೆಂದಾದರೆ, ಅವನ ಸೌಂದರ್ಯಕ್ಕೆ ಅದೊಂದು ಪ್ರಶಸ್ತಿಯೇ ಸರಿ. ಅವನು ಸ್ವತಃ ರಾಜನಾಗಿದ್ದನೆಂದಮೇಲೆ ಅಧಿಕಾರ ಐಶ್ವರ್ಯಗಳೂ ಅವನಿಗೆ ಬೇಕಾದಷ್ಟಿದ್ದುವು ಎಂದು ಬೇರೆ ಹೇಳಬೇಕಾಗಿಲ್ಲ. ಅರಸುತನದಲ್ಲಿ ಕೂಡ ಅವನು ದುರ್ಬಲನೂ ಅಲ್ಲ; ಹೇಡಿಯೂ ಅಲ್ಲ. ಅವನ ಅಸಿಲತೆ (ಖಡ) ರಣಭೌತವಾಗಿತ್ತೆಂದು ಅವನೇ ಹೇಳುತ್ತಾನೆ. ಅದು ಅವನ ಹಿರಿಯರಿಂದ ಬಂದುದೆ೦ದಾಗಿದ್ದರೆ ಅವನು ಅದರ ಮೇಲೆ ಅಷ್ಟೊಂದು ಅಭಿಮಾನವಿರಿಸಿಕೊಳ್ಳುತ್ತಿದ್ದನೆ? ಅಂತೂ ಯಾವ ಬಗೆಯ ನ್ಯೂನತೆಯೂ ಇಲ್ಲದ ಯಶೋಧರ ಯಾವ ದುರ್ಗುಣವನ್ನೂ ಪಡೆದಿದ್ದನೆಂದಿಲ್ಲ. ಇಂತಹ ಯಶೋಧರಪತ್ನಿ ಅಮೃತಮತಿ. ಆಕೆ ಆತನಿಗೆ ಮನಃಪ್ರಿಯೆ. ಆದರೆ ಅವಳಿಗೆ ಅವನು ಮನಃಪ್ರಿಯನಾಗಿದ್ದನೆ? ಕವಿಯ ಈ ಒಂದು ಮಾತು ಇಲ್ಲಿ ವಿಚಾರಣೀಯ:

ಅಮೃತಮತಿ ಗಡ ಯಶೋಧರ

ಯಶೋಧರ ಚರಿತೆ

ನ ಮನಃಪ್ರಿಯೆ ಆಕೆ ದೀವಮಾಗೆ ಪುಳಿಂದಂ
ಸುಮನೋಬಾಣಂ ತದ್ಬೂ
ರಮಣನನೊಲಿದಂತೆ ಗೋರಿಗೊಳಿಸುತ್ತಿರ್ಕುಂ.

ಅದರ ಪ್ರಕಾರ, ಯಶೋಧರನು ಅಮೃತಮತಿಯಿಂದ ಆಕರ್ಷಿತನಾಗಿದ್ದನು. ಏಕೆ? ಕಾಮನ ಪ್ರಭಾವದಿಂದ ಎಂಬುದು ಸ್ಪಷ್ಟ ಎಂದರೆ ಯಶೋಧರನಲ್ಲಿ ಕಾಮುಕತೆಯಿತ್ತೆಂದು ಸಾಧಿಸುವಂತಿದೆ ಈ ಮಾತು. ಹಾಗೆಯೇ ಅಮೃತಮತಿ ಆತನನ್ನು ಒಲಿದಿದ್ದಳೆ? ಬೇಟೆಗಾರನ ದೀವಕ್ಕೆ ತನ್ನಿಂದಾಗಿ ಗೋರಿಗೊಳ್ಳುವ ಪ್ರಾಣಿಯಲ್ಲಿ ಪ್ರೀತಿ ಆಸಕ್ತಿ ಉಳಿಯುವುದೇ? ಮಾತ್ರವಲ್ಲ, ಬೇಟೆಗಾರನು ಅದೇ ದೀವವನ್ನು ಇನ್ನೊಂದು ಪ್ರಾಣಿಯನ್ನಾಕರ್ಷಿಸುವುದಕ್ಕೆ ಬಳಸುತ್ತಾನೆ. ಆ ಪ್ರಾಣಿಯೂ ಹಾನಿಗೊಳಗಾಗುತ್ತದೆ. ಇದನ್ನು ಹಿನ್ನೆಲೆಯಾಗಿಟ್ಟುಕೊಂಡು ಪರಿಭಾವಿಸಿದರೆ, ಯಶೋಧರನು ಅಮೃತಮತಿಯಲ್ಲಿ ಆಸಕ್ತನಾಗಿದ್ದನೇ ಹೊರತು, ಅಮೃತಮತಿ ಅವನಲ್ಲಿ ಅನುರಕ್ತಿಯಾಗಿದ್ದಳು ಎನ್ನುವಂತಿಲ್ಲ. ಆದರೆ ಮುಂದೆ

ಅಮೃತಮತಿ ಸಹಿತಮಾ ಚಂ
ದ್ರಮತಿಯ ಸುತನಂತು ಮೇಯುವ ದವಳಾರದೊಳ
ಭ್ರಮುವೆರಸಭಗಜಂ ವಿ
ಭ್ರಮದಿಂದಂ ಸೆಜ್ಜರಕ್ಕೆ ಬಂದವೊಲೆಸಗುಂ.

ಎಂಬ ಪದ್ಯ ಬರುತ್ತದೆ. ಸಾಲದುದಕ್ಕೆ “ಖಚರದಂಪತಿಗಳಿಲ್ ತಾಮೆಸೆದರ್' ಎಂದೂ 'ಮನೋಜನಾಡಿಸುವ ಜಂತ್ರದಂತಿರೆ ನೆರೆದರ್‌' ಎಂದೂ ಆ 'ಹೃದಯಪ್ರಿಯ'ರ ವಿಷಯ ಮಾತು ಬರುತ್ತದೆ. ಇವುಗಳಿಂದ ಅವರಿಬ್ಬರೂ ಪರಸ್ಪರ ಪ್ರೇಮಬದ್ದರಾಗಿದ್ದರೆಂದು ವಾದಿಸಬಹುದಾದರೂ, ಮುಂದಣ ಘಟನೆಯನ್ನು ಎಣಿಸುವಾಗ ಅವೆಲ್ಲ ಬರಿಯ ಅಲಂಕಾರಿಕ ವಾಕ್ಯಗಳೆಂದು ಮಾತ್ರ ಹೇಳಬೇಕಾಗುತ್ತದೆ. ಏಕೆಂದರೆ ಕರುಮಾಡದ ಪಕ್ಕದಲ್ಲಿದ್ದ ಪಟ್ಟದಾನೆಯ ಬದಗನು ವಿನೋದಕ್ಕೆ ಹಾಡುತ್ತಿದ್ದಾಗ, ಅದನ್ನು ಕೇಳಿ ಅಮೃತಮತಿ ತನ್ನ ಮನಸ್ಸನ್ನು ತೊಟ್ಟನೆ-ಏನೂ ವಿಚಾರಮಾಡದೆ-ವಸಾಯ ದಾನ ಕೊಟ್ಟಳಂತೆ! ಅವಳ ಮನಸ್ಸು ಮಾವನ್ನು ಮೆಚ್ಚದ ಮನಸ್ಸಾಗಿತ್ತು; ಅದು ಬೇವನ್ನೆ ಬಯಸುತ್ತಿತ್ತು. ಪಂಚೇಂದ್ರಿಯಗಳಲ್ಲಿ ಶ್ರವಣೇಂದ್ರಿಯವೊಂದರ ಆಕರ್ಷಣೆ ಅವಳಿಗೆ ತೀವ್ರವಾಯಿತು. ಅನಂತರವೇ 'ನೋಡುವ ಕೊಡುವ ಚಿಂತೆ ಕಡಲ್ವರಿದುದು.' ಯಾವುದಾದರೊಂದು ವ್ಯಕ್ತಿಯ ಹೆಸರು ಕೇಳಿದಾಗ, ನಾವು ಅವನ ಹಿರಿಮೆಯನ್ನೋ ಕೀಳ್ಮೆಯನ್ನೋ ಕೇಳಿದಾಗ, ನಾವು ಅವನ ಸ್ವರೂಪವನ್ನು ಕಲ್ಪಿಸಿಕೊಳ್ಳುವುದಿಲ್ಲವೆ? ಅದೇ ರೀತಿಯಲ್ಲಿ ಅವಳೂ ಇಂಪಾದ ಹಾಡು ಹಾಡುವವನು ಅತ್ಯಂತ ಸುಂದರವಾಗಿದ್ದಿರಬಹುದೆಂದು
ಕಲ್ಪಿಸಿರಬಹುದು.
ಅಮೃತಮತಿಯ ಕೆಳದಿ ಅವನನ್ನು ನೋಡಿ ಬಂದು ಆ ರೂಪಾಧಮನ
ವರ್ಣನೆಯನ್ನು ಮಾಡಿದಾಗ, ಅಮೃತಮತಿ ಒಮ್ಮೆ ವಿಹ್ವಲೆಯಾದಳು ನಿಜ.
ಆದರೆ 'ಮೆಚ್ಚಿದವರಿಗೆ ಮಸಣ ಸುಖ' ಎಂಬಂತೆ ಅವಳು 'ಪೊಲ್ಲಮೆಯೆ
ಲೇಸು ನಲ್ಲರ ಮೆಯ್ಯೊಳು'ಎನ್ನುತ್ತಾಳೆ. ಇನ್ನೂ ಮುಂದುವರಿಸಿ 'ಒಲವಾದೊಡೆ
ರೂಪಿನ ಕೋಟಲೆಯೇವುದೊ' ಎನ್ನುತ್ತಾಳೆ. ಇದರಿಂದ ಕೂಡ ಯಶೋಧರನ
ರೂಪದಲ್ಲಿ ಅವಳಿಗೆ ಒಲವಾಗಿರಲಿಲ್ಲ, ಏಕೆಂದರೆ ಅವನಲ್ಲಿ ಪೊಲ್ಲಮೆಯೆ ಇಲ್ಲ
ಎಂದು ಹೇಳಿದಂತಾಗುತ್ತದೆ. ಹಾಗೆಂದು ಅವಳಿಗೆ ಆ ವಿಕಟಾಂಗನಲ್ಲಿ
ರತಿಫಲಾಸ್ವಾದನದಲ್ಲಿ ರುಚಿಯಾಯಿತಂತೆ! ಅವಳಿಗೆ ಬರಿಯ ಕಾಮ ತೃಪ್ತಿಯ
ಕಡೆಗೆ ಒಲವಿದ್ದಿತೇ ಹೊರತು ರೂಪ-ಗುಣಗಳ ಕಡೆಗೆ ಒಲವಿರಲಿಲ್ಲ. ಆ ತೃಪ್ತಿ
ಅಷ್ಟವಂಕನಿಂದ ದೊರೆಯುವ ನಿರೀಕ್ಷೆ ಅವಳದು.


ಅಷ್ಟವಂಕನು ಎಷ್ಟು ಕುರೂಪಿಯೊ ಮತ್ತು ಎಷ್ಟು ಕುತ್ಸಿತನೊ ಅಷ್ಟೇ
ಕ್ರೂರನೂ ಹೌದು. ಅಮೃತಮತಿ ಈ ಜಾರನಲ್ಲಿಗೆ ಬಂದಾಗ ಒಮ್ಮೆ
ವಿಲಂಬವಾದುದಕ್ಕೆ ಆತನು ಅವಳ ಸ್ಥಾನ-ಮಾನ-ರೂಪ-ಯೌವನ ಮುಂತಾದ
ಯಾವುದನ್ನೂ ಲೆಕ್ಕಿಸದೆ– ಅವಳ ಮೇಲೆ ಒಂದಿಷ್ಟು ಒಲವಿಲ್ಲದೆ– ಅವಳ
ಸೌಕುಮಾರ್ಯವನ್ನು ಗಣನೆಗೆ ತಾರದೆ ಅವಳ 'ಕುರುಳ್ಗಳನೆಳೆದು ಬೆನ್ನ ಮಿಳಿಯಂ
ಕಳಹಂಸೆಗೆ ಗಿಡಿಗನೆರಗಿದಂತಿರೆ' ಬಡಿದನು, ಇಷ್ಟೇ ಅಲ್ಲ 'ತೋರ ಮುಡಿವಿಡಿದು
ಕುಡಿಯಂ ನಾರಂ ತದೆನಂತೆ ತದೆದು, ಬೀಟೆಯ ಕಾಲಿಂದ ಬಾರೇಳೆ”
ಬದಗನೊದೆದನು. ಇಂತಹ ಕ್ರೌರ್ಯವೂ ದಯಾಶೂನ್ಯತೆಯೂ ಅವನ ಆಕಾರಕ್ಕೆ,
ಸಂಸ್ಕಾರಕ್ಕೆ ಹುಟ್ಟಿಗೆ ತಕ್ಕುದಾದದ್ದೇ. ಆದರೆ ಅವಳು ಆಗಲೂ ಕೇರೆ ಪೊರಳ್ವಂತೆ
ಅವನ ಕಾಲಮೇಲೆ ಪೊರಳ್ದಳು. ಅವಳಿಗೆ ಯಶೋಧರನು 'ಅರಸೆಂಬ ಪಾತಕ'ನಾಗಿ
ಬಿಟ್ಟಿದ್ದಾನೆ. ಗಜವೆಡಂಗನಾದ ಅಷ್ಟವಂಕನ ದನಿ ಅವಳ ಕಿವಿಗೆ ಸವಿಯಾಗಿಯೂ
ಅವನ ರೂಪು ಅವಳ ಕಣ್ಣಿಗೆ ಸವಿಯಾಗಿಯೂ ಇವೆಯೆನ್ನುತ್ತಾಳೆ. ಅವನ
ಕರ್ಣಾನಂದಕರವಾದ ಗೀತಕ್ಕೆ ಅವಳು ಸೋತುಹೋದುದು ನಿಜವಾದರೂ,
ಆಮೇಲೆ ಅವನ ಗೀತವನ್ನು ಅವಳು ಕೇಳಿದುದಾಗಲಿ, ಅವನು ಹಾಡಿದುದಾಗಲಿ
ಇಲ್ಲವೇ ಇಲ್ಲ. ಎಂದ ಮೇಲೆ ಆಕೆ ಯಶೋಧರನಲ್ಲಿ ಅನುರಕ್ತೆಯಾಗಿ ಇರಲೇ
ಇಲ್ಲ; ಅವಳು ಮೊದಲು ಮೋಹಗೊಂಡುದು ಬದಗನ ಹಾಡಿನ ಸಕೃಚ್ಚಶ್ರವಣಕ್ಕೆ;
ಅನಂತರ ಅವನ ವಕ್ರಾಕಾರವನ್ನು ಕಣ್ಣಿಗೆ ಸವಿಯೆಂದು ಸಮಾಧಾನ

ಯಶೋಧರ ಚರಿತೆ

ತಂದುಕೊಂಡುದು ಎಂಬುದನ್ನು ತಿಳಿಯಬಹುದು. ಯಶೋಧರನಿಗೂ ಪೆಣ್
(ಅಮೃತಮತಿ) ತಪ್ಪಿ ನಡೆದಳೆಂದು ಕಂಡಿತಲ್ಲದೆ ಅಷ್ಟವಂಕನಲ್ಲಿ ಅವನು
ಅಪರಾಧವನ್ನು ಕಾಣಲಿಲ್ಲ. ಒಮ್ಮೆ ಅವರಿಬ್ಬರನ್ನೂ ಎರಡು ಭಾಗ ಮಾಡಬೇಕೆಂದು
ಕತ್ತಿಯೆತ್ತಿದ್ದನಾದರೂ ಅದು ಬರಿಯ ರೋಷದಿಂದ.
ಅಮೃತಮತಿಗೆ ತನ್ನ ವ್ಯಭಿಚಾರವು ರಾಜನಿಗೆ ಗೊತ್ತಾಯಿತೆಂದು ತಿಳಿದು
ಬಂದಾಗ ಅವನ ಕೊಲೆಗೂ ಮುಂದಾಗುತ್ತಾಳೆ ; ವಿಷವಿಕ್ಕಿ ಕೊಲ್ಲುತ್ತಾಳೆ. ತನ್ನ
ಕಾಮಕ್ಕೆ ಅಡ್ಡಿಯಾಗುವವನ ಮೇಲೆ ಕ್ರೋಧವುಂಟಾದುದು ಇದಕ್ಕೆ ಕಾರಣ.
ಅನಂತರ ತನ್ನರಮನೆಯಲ್ಲೇ ಆ ಬದಗನನ್ನು ಇರಿಸಿಕೊಳ್ಳುತ್ತಾಳೆ. ಇದನ್ನು
ಆಕೆಯ ಮಗ ಯಶೋಮತಿ ಏಕೆ ತಡೆಯಲಿಲ್ಲವೊ ತಿಳಿಯುವುದಿಲ್ಲ. ಅವನಿಗೆ
ಗೊತ್ತಿಲ್ಲದೆ ಇದು ನಡೆದುದೂ ಅಲ್ಲ. ಸಾಮಾನ್ಯ ಜನರು ಅಮೃತಮತಿಯ
ನೀಚವರ್ತನೆಯ ಕುರಿತು ಆಡಿಕೊಳ್ಳುತ್ತಿದ್ದರೆಂಬುದರಿಂದ ಇದು ಸಿದ್ದವಾಗುತ್ತದೆ.
ಅದೂ ಅಲ್ಲದೆ, “ತೊನ್ನನ ಕೂಟದಿಂದ ನಿನಗೂ ತೊನ್ನೂ ಉಂಟಾಗಿದೆ ; ಈ
ರೋಗಕ್ಕೆ ಮದ್ಯ ಮಾಂಸಗಳು ವಿಷ” ವೆಂದು ಹೇಳಿದರೂ ಅವಳು ಮಗನ
ಮಾತನ್ನೂ ಮನ್ನಿಸಲಿಲ್ಲವಂತೆ! ಎನ್ನುವಾಗ ಅವನಿಗೂ ಅವಳನ್ನೂ ತಡೆಯುವ
ಅಥವಾ ಅವಳನ್ನು ದಂಡಿಸುವ ಸಾಮರ್ಥ್ಯವಿರಲಿಲ್ಲವೆ? ಅಥವಾ ಅವನೂ
ಯಶೋಧರನಂತೆ 'ಮಾತೃದೇವ'ನಾಗಿ ಉಳಿದುಕೊಂಡನೆ? ಹೇಗೆ ಹೇಳುವುದು?
ಅಂತೂ ಅಮೃತಮತಿ ಬರಿಯ ಕಾಮುಕ ಸ್ತ್ರೀ ; ಅವಳಿಗೆ ಬದಗನ
ಇಂಪಾದ ಹಾಡೇ ಮುರುಳುಗೊಳಿಸುವ ಆಕರ್ಷಣೆಯಾಯಿತು. ಹಾಗೆ ಹುಚ್ಚಾದ
ಅವಳು ತಾನಾಗಿ ತಿಳಿ'ಯಾಗಲಿಲ್ಲ; ಉಳಿದವರು 'ತಿಳಿ'ಯಾಗಿಸಲು ಯತ್ನಿಸಲಿಲ್ಲ;
ಯತ್ನಿಸಿದ್ದಿರಬಹುದಾದರೂ ಅವರಾರೂ ಸಫಲರಾಗಲಿಲ್ಲ. ಅವಳು ಕಾಮದ
ಕೈಗೊಂಬೆಯಾಗಿ, ಅದಕ್ಕೆ ಅಡ್ಡಿಯಾಗಬಹುದಾಗಿದ್ದ ಗಂಡನನ್ನೂ ಅತ್ತೆಯನ್ನೂ
ವಿಷವಿಕ್ಕಿ ಕೊಲ್ಲುವ ಕ್ರೋಧಕ್ಕೆ ಒಳಗಾಗಿ ಬದುಕಿದ್ದಾಗಲೇ ಕುಷ್ಠದಿಂದ ಕೊಳೆತು,
ಸತ್ತಮೇಲೆ ಧೂಮಪ್ರಭೆಯೆಂಬ ಐದನೆಯ ನರಕದಲ್ಲಿ ಮುಳುಗಿದಳು.

ಬದಗನನ್ನು ಒಲಿದು ಅವಳು ಅವನನ್ನೆ ಅಂತ್ಯಕಾಲದವರೆಗೂ ಬಿಡದೆ
ಆರಾಧಿಸಿದ ಕಾರಣ ಅವಳ ಶುದ್ದಪ್ರಣಯವೆನ್ನಬಹುದೆ? ಹಾಗೆ
ಹೇಳಬಹುದೆಂದಾದರೆ ಅಧರ್ಮದ ವರ್ತನೆಯೆಲ್ಲವನ್ನೂ ಸರಿಯೆಂದು
ಸಮರ್ಥಿಸುವುದಕ್ಕೆ ಸಾಧ್ಯವಾಗದೇ? ಹೋಗಲಿ. ಅವನಾದರೂ ಅವಳನ್ನು
ಒಲಿದಿದ್ದನೆ? ಇಲ್ಲ ; ಒದೆದಿದ್ದ ! ವಾಲ್ಮೀಕಿ ರಾಮಾಯಣದ ಸುಂದರಕಾಂಡದಲ್ಲಿ
ಈ ಮಾತು ಬರುತ್ತದೆ:

೧೦

ಯಶೋಧರ ಚರಿತೆ

ಅಕಾಮಾಂ ಕಾಮಯಾನಸ್ಯ ಶರೀರಮುಖತಪ್ಯತೇ |
ಇಚ್ಛತಾಂ ಕಾಮಯಾನಸ್ಯ ಪ್ರೀತಿರ್ಭವತಿ ಶೋಭನಾ||
(ವಾಲ್ಮೀಕಿ ರಾಮಾಯಣ : ಸರ್ಗ ೨೨, ಶ್ಲೋ ೪೨)
(ಕಾಮವಿಲ್ಲದವಳನ್ನು ಕಾಮಿಸುವುದರಿಂದ ದೇಹಕ್ಕೆ ಸಂಕಟವೇ ಹೊರತು
ಸುಖವಿಲ್ಲ. ತಾನಾಗಿ ಇಷ್ಟಪಟ್ಟು ಕಾಮಿಸಿ ಬಂದವಳನ್ನು ಆದರಿಸುವುದರಿಂದ
ಸಂತೋಷವೂ ಹೆಚ್ಚು)
ಅಮೃತಮತಿ ತಾನಾಗಿ ಕಾಯಿಸಿ ಬಂದಳೆಂದು ಅಷ್ಟವಂಕನು ಅವಳನ್ನು
ಆದರಿಸಲಿಲ್ಲವೆಂದಾದಮೇಲೆ ಅವನಿಗೆ ಸಂತೋಷವೂ ಇದ್ದಿರಲಾರದು.
ವಾಮಃ ಕಾಮೋ ಮನುಷ್ಯಾಣಾಂ ಯಸ್ಮಿನ್ ಕಿಲ ನಿಬಧ್ಯತೇ |
ಜನೇ ತಸ್ಮಿನ್ಸ್ತ್ವನುಕ್ರೋಶ : ಸ್ನೇಹಶ್ಚ ಕಿಲ ಜಾಯತೇ||
(ವಾಲ್ಮೀಕಿರಾಮಾಯಣ: ಸುಂದರಕಾಂಡ, ಸರ್ಗ ೨೨ಶ್ಲೋ ೪೨)
(ಮನುಷ್ಯರಿಗೆ ಕಾಮವೆಂಬುದು ಬಹಳ ವಕ್ರವಾದುದು. ಆ ಕಾಮವು
ಯಾರಲ್ಲಿ ಪ್ರವರ್ತಿಸುವುದೋ ಆ ಜನ್ಮದಲ್ಲಿ ದಯೆಯೂ ಸ್ನೇಹವೂ ಹುಟ್ಟಿ
ಬಿಡುವುದು). ಎಂಬ ಮಾತಿನಂತೆ ಆ 'ಜಾರ'ನಿಗೆ ಅವಳಲ್ಲಿ ದಯೆಯೂ ಇರಲಿಲ್ಲ.
ಇಷ್ಟರಿಂದ ಸಿದ್ಧವಾಗುವುದು ಒಂದೇ ಒಂದು : ಅಮೃತಮತಿ ಬರಿಯ ಕಾಮುಕಸ್ತ್ರೀ;
ಜಾರೆ; ಜಾರಿದವಳು; ತಾನಾಗಿಯೇ ಜಾರುವುದಕ್ಕೆ ಹೋದವಳು; ಅದನ್ನೆ
ಮೆಚ್ಚಿದವಳು. ಅವಳ ವರ್ತನೆ ಸರ್ವಥಾ ನಿಂದನೀಯ; ಸರ್ವಾತ್ಮನಾ
ಖಂಡನೀಯ!

ಈ ಕೃತಿಯಲ್ಲಿ ಬರುವ ಬೇರೆ ಕೆಲವು ಸಮಸ್ಯೆಗಳನ್ನು ಇನ್ನು ನೋಡ
ಬಹುದು : ಯಶೋಧರ ಮತ್ತು ಚಂದ್ರಮತಿ ಸಂಕಲ್ಪ ಹಿಂಸೆಯಿಂದ ಆರು
ಬಾರಿ ತಿರ್ಯಗ್ಯೋನಿಯಲ್ಲಿ ಜನ್ಮವೆತ್ತಿ ಸತ್ತು, ಕೋಳಿಯ (ಆರನೆಯ) ಜನ್ಮದಲ್ಲಿದ್ದಾಗ
ವ್ರತವನ್ನು ಧರಿಸಿದ ಕಾರಣದಿಂದ ಮನುಷ್ಯ ಜನ್ಮವನ್ನು ಪಡೆಯುತ್ತಾರೆ; ಅಭಯರುಚಿ
ಅಭಯಮತಿಗಳಾಗಿ ಹುಟ್ಟುತ್ತಾರೆ. ಎಳವೆಯಲ್ಲಿ ಅವರು ಸುದತ್ತಾಚಾರ್ಯರ
ಶಿಷ್ಯರಾಗಿ, ಮರಣಾನಂತರ ಈಶಾನಕಲ್ಪದಲ್ಲಿ ಜನಿಸುತ್ತಾರೆ. ಈಶಾನಕಲ್ಪವೆಂದರೆ
ಜೈನರ ಪ್ರಕಾರ, ಹದಿನಾರು ಸ್ವರ್ಗಗಳಲ್ಲಿ ಎರಡನೆಯದು. ಮೂರನೆಯ ಸ್ವರ್ಗವು
ಇದಕ್ಕಿಂತ ಮೇಲಿರಬೇಕು ತಾನೆ. ಹಲವು ಪ್ರಾಣಿಗಳನ್ನು ಪ್ರತಿವರ್ಷವೂ ಹಿಂಸೆ
ಮಾಡುತ್ತಿದ್ದ ಮಾರಿದತ್ತನು ಅಭಯರುಚಿ ಹೇಳಿದ 'ಯಶೋಧರ ಚರಿತೆ'ಯನ್ನು
ಕೇಳಿದ ಮೇಲೆ ಉಗ್ರತಪವನ್ನಾಚರಿಸಿ, ಸಮಾಧಿ ಮರಣದ ಬಳಿಕ ಈ ಮೂರನೆಯ
ಸ್ವರ್ಗದಲ್ಲಿ ದೇವನೆ ಆಗುತ್ತಾನೆ. 

ಯಶೋಧರ ಚರಿತೆ

೧೧

ಸಂಕಲ್ಪ ಹಿಂಸೆಯಿಂದ ಕೊಲ್ಲಬೇಕೆಂದು ಎಣಿಸಿಕೊಂಡುದರಿಂದ ಬೇರೆ
ಬೇರೆ ಜನಗಳನ್ನು ಪಡೆದು, ನವೆದು, ಕಟ್ಟಕಡೆಗೆ ದೊರೆಯುವುದು ಎರಡನೆಯ
ಸ್ವರ್ಗ ; ನಿರಂತರ ಹಿಂಸೆಯ ಬಳಿಕ ದೊರೆಯುವುದು ಮೂರನೆಯ ಸ್ವರ್ಗ ;
ಅದೂ ಹಲವು ಜನ್ನಗಳನ್ನು ಪಡೆಯದೆ ಎನ್ನುವಾಗ ಸಂಕಲ್ಪ ಹಿಂಸೆಯೇ
ದೊಡ್ಡ ಪಾಪ ; ನಿಜವಾದ ಹಿಂಸೆ ಅಷ್ಟು ದೊಡ್ಡ ಪಾಪವಲ್ಲ, ಎಂದು
ತೋರಲಾರದೆ? ಇದಕ್ಕೆ ಸಮಾಧಾನ ಹೇಳುವುದಾದರೆ 'ಮನ ಏವ ಮನುಷ್ಯಾಣಾಂ
ಕಾರಣಂ ಬಂಧಮೋಕ್ಷಯೋಃ (ಮನುಷ್ಯರ ಬಂಧನಕ್ಕೂ ಮೋಕ್ಷಕ್ಕೂ ಮನಸ್ಸೇ
ಕಾರಣ) ಎಂಬ ಸೂಕ್ತಿಯನ್ನವಲಂಬಿಸಬೇಕು. ಮಾರಿದತ್ತ ಮಾಡುತ್ತಿದ್ದ ಹಿಂಸೆ
ಹಿಂಸೆಯೆಂಬ ಎಣಿಕೆಯಿಂದ ಮಾಡಿದುದಲ್ಲ ; ದೇವಿಯ ಅರ್ಚನೆ ಎಂಬ
ಭಾವನೆಯಿಂದ, ಯಶೋಧರನಾದರೋ, “ಜೀವದಯೆ ಜೈನ ಧರ್ಮಂ"
ಎಂಬುದನ್ನು ತಿಳಿದೂ, ಹಿಟ್ಟಿನ ಕೋಳಿಯನ್ನು ಕೊಲ್ಲುವುದಕ್ಕೆ ಮನಸ್ಸುಮಾಡಿ
ಅಪರಾಧವನ್ನು-ಪಾಪವನ್ನು ಮಾಡಿದವನು ಎನ್ನಬೇಕು.
ಹಾಗೆಂದು ಯಶೋಧರನು ಬೇರೆ ಹಿಂಸೆಯನ್ನು ಮಾಡಿಲ್ಲವೆ ? ಅವನ
ಅಸಿಲತೆ ರಣಧೌತವಾಗಿತ್ತು. ವಿಜಿಗೇಷು ವೃತ್ತಿ ರಾಜಧರ್ಮವಾದುದರಿಂದ ಅವನು
ಆ ರೀತಿ ಶತ್ರುಗಳನ್ನು ಕೊಂದಿದ್ದಾನೆಂದೂ, ಅದು ಅಪರಾಧವಾಗುವುದಿಲ್ಲವೆಂದೂ
ಇಲ್ಲಿ ಹೇಳಬಹುದೇ? ಹಾಗೆಯೇ ಅವನ ಮಗ ಯಶೋಮತಿ ಬೇಟೆಯ
ನೆವದಿಂದ ಎಷ್ಟು ಜೀವಹಿಂಸೆ ಮಾಡಿಲ್ಲ? ಅವನಿಗೇನು ಗತಿಯೊದಗಿತೋ
ತಿಳಿಯದು.
ಯಶೋಧರನು ಎರಡನೆಯದಾದ ಈಶಾನಕಲಕ್ಕೆ ಮಾತ್ರ ಅರ್ಹನಾದುದಕ್ಕೆ
ಅವನು ಸತ್ಯವ್ರತವನ್ನು ಪರಿಪಾಲಿಸದಿದ್ದುದೂ ಕಾರಣವಾಗಿರಬಹುದೆ? ಅಮೃತಮತಿ
ಅಷ್ಟವಂಕನಲ್ಲಿ ಕಾಮುಕತೆಯಿಂದ ವ್ಯಭಿಚಾರಿಯಾದಳೆಂಬುದನ್ನು ಅವನು ತನ್ನ
ತಾಯಿಗೆ ಹೇಳುವಾಗ ಕನಸಿನ ನೆವದಿಂದ ಮರೆಸಿ ಹೇಳಿದನು. ಇದರಿಂದಾಗಿ
ಅವನಿಗೆ ಈಶಾನಕಲ್ಪದಲ್ಲಿ ಜನ್ಮವೊದಗಿತೋ ಏನೋ. ಯಾವ ಸಂಧರ್ಭಗಳಲ್ಲಿ
ಸುಳ್ಳು ಹೇಳಬಹುದೆಂಬುದನ್ನು ಈ ಕೆಳಗಣ ಶ್ಲೋಕ ತಿಳಿಸುತ್ತದೆ:
ವಿವಾಹಕಾಲೇ ರತಿಸಂಪ್ರಯೋಗೇ
ಪ್ರಾಣಾತ್ಯಯೇ ಸರ್ವ ಧನಾಪಹಾರೇ
ವಿಪ್ರಸ್ಯಚಾರ್ಥೇಹ್ಯನೃತಂ ವದೇತ
ಪಂಚಾನೃತಾನ್ಯಾಹುರಪಾತಕಾನಿ ||
(ವಿವಾಹ ಕಾಲದಲ್ಲಿ, ಸಂಭೋಗ ಸಮಯದಲ್ಲಿ, ಪ್ರಾಣಪಾಯವು ಒದಗಿದಾಗ, ಸರ್ವಸ್ವವೂ ಅಪಹಾರವಾಗುತ್ತಿರುವಾಗ, ವಿಪ್ರರಿಗೋಸ್ಕರವಾಗಿ
ಅನೃತವನ್ನು ಹೇಳಬಹುದು. ಬಲ್ಲವರು ಈ ಐದು ಅನೃತಗಳು ಪಾಪವಲ್ಲ
ಎಂದು ಹೇಳುತ್ತಾರೆ.) ಇನ್ನೊಂದು ಸುಭಾಷಿತವು ಹೀಗಿದೆ:-
ಸ್ತ್ರೀಷು ನರ್ಮವಿವಾಹೇಚ ವೃತ್ಯರ್ಥೇ ಪ್ರಾಣಸಂಕಟೇ
ಗೋಬ್ರಾಹ್ಮಣಾರ್ಥೇ ಹಿಂಸಾಯಾಂ ನಾನೃತಂ ಸ್ಯಾಜ್ಜುಗುಪ್ಸಿತಂ
(ಹೆಂಗಸರಲ್ಲಿ, ನರ್ಮವಿವಾಹದಲ್ಲಿ ವೃತ್ತಿಗಾಗಿ, ಪ್ರಾಣಸಂಕಟದಲ್ಲಿ,
ಗೋಬ್ರಾಹ್ಮಣರ ಸಲುವಾಗಿ, ಹಿಂಸೆಯಲ್ಲಿ, ಸುಳ್ಳು ಜುಗುಪ್ಸೆಗೆ ಒಳಗಾಗುವುದಿಲ್ಲ.)
ಯಶೋಧರನಿಗೆ ಈ ಕಾರಣಗಳಲ್ಲಿ ಯಾವುದಾದರೊಂದು ಅನುಕೂಲವಾಗಿ
ಅವನನ್ನು ಪಾಪಕ್ಕೆ ಪಕ್ಕಾಗದಂತೆ ಮಾಡಿದೆಯೆನ್ನೊಣವೆ? ಹಾಗಿದ್ದರೆ ಒಂದಿಲ್ಲೊಂದು
ಕಾರಣವನ್ನು ನಮ್ಮ ನಮ್ಮ ಅನುಕೂಲತೆಗೆ ಹೊಂದಿಸಿಕೊಂಡು ಸುಳ್ಳು
ಹೇಳುವುದನ್ನು ಅಂಗೀಕರಿಸಬಹುದು.

ಇನ್ನೂ ಒಂದು ಕಾರಣವನ್ನು ಊಹಿಸಬಹುದು : ಯಶೋಧರನು
ನವಿಲಿನ ಜನ್ಮದಲ್ಲಿದ್ದಾಗ ಅಷ್ಟವಂಕನ ಕಣ್ಣನ್ನು ಕುಕ್ಕಿ ಪಾಪಕ್ಕೆ ಪಕ್ಕಾಗಿದ್ದಾನೆ.
ಇದು ಅವನಿಗೆ ಅರಿವಿಲ್ಲದೆ ಆದುದಲ್ಲ ; ಭವರೋಷದಿಂದ. ಎಂದರೆ
ಯಶೋಧರನಾಗಿದ್ದಾಗ ಬಂದ ಧೃತಿ ಅವನಿಗೆ ನವಿಲಾಗಿದ್ದಾಗ ಬರಲಿಲ್ಲ ;
ಇಲ್ಲಿ ಹಿಂಸಾ ಬುದ್ದಿಯೇ ಉಳಿಯಿತು. “ಜೀವದಯೆ ಜೈನಧರ್ಮಂ” ಎಂಬುದರಲ್ಲಿ
ಗಟ್ಟಿ ಮಾಡಿಕೊಂಡಿದ್ದವನಿಗೆ ತಾಯಿಯ ಹಿಂಸಾಬುದ್ಧಿಯನ್ನು
ನಿವಾರಿಸಲಾಗಲಿಲ್ಲವೆ? ಆಗಿತ್ತು ಎನ್ನೋಣ. ಏಕೆಂದರೆ ಅವಳು ಹಿಟ್ಟಿನ
ಕೋಳಿಯನ್ನು ಬಲಿಯಿತ್ತರೆ ಸಾಕು ಎಂಬಲ್ಲಿಯವರೆಗೆ ಬಂದಿದ್ದಳು. ಆದರೆ
ಯಶೋಧರನ ಮಗ ಯಶೋಮತಿಗೆ ಹಿಂಸಾ ಬುದ್ದಿಯೇ ಇರುವುದನ್ನು
ಕಾಣುವಾಗ ಅವನು ಇತರರನ್ನು ತಿದ್ದುವುದರಲ್ಲಿ ಸಮರ್ಥನಾಗಿದ್ದನೆನ್ನುವುದಕ್ಕೆ
ಆಧಾರ ಸಾಕಾಗದು ಅಥವಾ “ಮಾತೃದೇವ"ನಾಗಿ ತಾಯಿಯ ಮಾತಿಗೆ
ಅನುಮೋದನೆಯಿತ್ತನೆಂದರೆ 'ಗುರೋರಪ್ಯವಲಿಪ್ತಸ್ಯ ಕಾರ್ಯಕಾರ್ಯಮಜಾನತಃ
ಉತ್ಪಥಂ ಪ್ರತಿಪನ್ನಸ್ಯ ಕಾರ್ಯಂ ಭವತಿ ಶಾಸನಂ'||* (ಕಾರ್ಯಕಾರ್ಯಗಳನ್ನು ತಿಳಿಯದ
ಹಾಗೂ ಸನ್ಮಾರ್ಗವನ್ನು ಮೀರಿದ ಗರ್ವಿಷ್ಠನಾದ ಗುರುವಿಗೂ ಶಿಕ್ಷೆಯನ್ನು
ಮಾಡಬೇಕು) ಎಂಬುದಕ್ಕೆ ಬೆಲೆಯೇ ಇಲ್ಲವೆಂದಾಗುತ್ತದೆ. ಕಾರ್ಯಕಾರ್ಯ
ವಿವೇಚನೆಯಿಲ್ಲದೆ, ತಾಯಿ ಹೇಳಿದ್ದಾಳೆಂದು ಅವನು ನಡೆದುದು ಅವನ

*ವಾಲ್ಮೀಕಿರಾಮಾಯಣ- ಅಯೋಧ್ಯಾಕಾಂಡ; ಸರ್ಗ ೨೧-ಶ್ಲೋ ೧೩.

ದೌರ್ಬಲ್ಯದ ಅಥವಾ ಅವಿಚಾರಿತ ಕೃತ್ಯದ ದ್ಯೋತಕವಾಗುತ್ತದೆ.
'ಯಶೋಧರ ಚರಿತೆ'ಯಲ್ಲಿ ಬರುವ ಇನ್ನೊಂದು ತೊಡಕು ಹೀಗಿದೆ :
ಯಶೋಧರನೂ ಚಂದ್ರಮತಿಯೂ ಕೋಳಿಗಳಾಗಿ ಆರನೆಯ ಜನ್ಮದಲ್ಲಿದ್ದ
ಕಾಲದಲ್ಲಿಯೇ ಚಂಡಕರ್ಮನು ವ್ರತವನ್ನು ಧರಿಸಿದನು. ಕುಕ್ಕುಟ ಜನ್ಮವನ್ನು
ಕಳೆದು, ಅಭಯರುಚಿ ಅಭಯಮತಿಗಳಾಗಿ ಹುಟ್ಟಿ ಕೆಲವು ವರ್ಷಗಳು ಸಂದ
ಮೇಲೆ ಮಾರಿದತ್ತನು ನಡೆಯಿಸುತ್ತಿದ್ದ ಮಾರಿದೇವತೆಯ ಬಲಿಗಾಗಿ ಆ
ಮನುಷ್ಯಯುಗಲವನ್ನು ಅದೇ ಚಂಡಕರ್ಮನು ತರುತ್ತಾನೆ. ಇದರಿಂದ ಅವನು
ವ್ರತಭಂಗದ ಪಾಪಕ್ಕೂ ಒಳಗಾಗುವುದಿಲ್ಲವೇ? ಅವನಿಗೇನು ಗತಿಯಾಯಿತೆಂದು
ಕೃತಿಯಲ್ಲಿಲ್ಲ.*
ಮಾರಿದತ್ತರಾಜ ತನ್ನ ಸೋದರಳಿಯ-ಸೊಸೆಯರ ಗುರುತೂ ಇಲ್ಲದವನಂತೆ
ಕಾವ್ಯದಲ್ಲಿ ಚಿತ್ರಿತನಾಗಿದ್ದಾನೆ. ಇದು ಸುಸಂಗತವೆನ್ನಿ ಸೀತೆ? ರಾಜ ಕಾರ್ಯದಲ್ಲಿ
ಮಗ್ನನಾಗಿದ್ದ ಕಾರಣ ಅವನಿಗೆ ತನ್ನ ಸೋದರಿಯ ಮಕ್ಕಳ ವಿಷಯವೂ
ಗೊತ್ತಾಗಿರಲಿಲ್ಲ ಎನ್ನಬಹುದೇ? ಅವನಿಗೂ ಯಶೋಮತಿಗೂ
ವಿರಸತೆಯುಂಟಾಗಿ ಹಾಗಾಯಿತೆ ? ಕುಸುಮಾವಳಿಗಾದರೂ ತನ್ನ ಸೋದರ
ಮಾರಿದತ್ತನ ಮೇಲೆ ದ್ವೇಷವಿತ್ತೆ? ಇವೆಲ್ಲ ಪ್ರಶ್ನೆಗಳಿಗೆ ಸರಿಯಾದ
ಸಮಾಧಾನವೇನಿದೆಯೊ ಹೇಳಬರುವುದಿಲ್ಲ.
ಈ ವಿಷಯಗಳಾವುದನ್ನೂ ಲೆಕ್ಕಿಸದೆ ಕಾವ್ಯವನ್ನು ಓದುತ್ತಾ
ಹೋಗುವುದಾದರೆ, ಅದು ನಮ್ಮನ್ನು ಸೆಳೆಯುತ್ತದೆ. ಜನ್ಮಾಂತರದ ಕಥೆಗಳಿದ್ದರೂ
ಯಾವ ತೊಡಕೂ ಇಲ್ಲದೆ ಕಥೆ ಮುಂದೆ ಸಾಗುತ್ತದೆ. ಸಂದರ್ಭೋಚಿತವಾದ
ವರ್ಣನೆ, ಸುಂದರವಾದ ಶೈಲಿ ಆಕರ್ಷಕವಾಗಿವೆ. ಕೃತಿ ಸರಳವಾಗಿ ನಿರರ್ಗಳವಾಗಿ
ಚೇತೋಹಾರಿಯಾಗಿ ಮುಂದುವರಿಯುತ್ತದೆ. ಜನ್ನನಿಗೆ ಇದರಿಂದ ಒಂದು
ಉನ್ನತಸ್ಥಾನ ದೊರೆಯುತ್ತದೆ.


* ಈ ಸಮಸ್ಯೆಗೆ ಸಮಾಧಾನ ಹೇಳಬೇಕಾದರೆ ಮಾರಿದತ್ತನ ಬಳಿಯಿದ್ದ
ಚಂಡಕರ್ಮವೂ ಯಶೋಮತಿಗೆ ಕೋಳಿಗಳನ್ನು ಕಾಣಿಕೆ ಕೊಟ್ಟ ಚಂಡಕರ್ಮನೂ ಬೇರೆ
ಬೇರೆ ವ್ಯಕ್ತಿಗಳೆಂದು ತಿಳಿದುಕೊಳ್ಳಬೇಕು. ತಳಾರಿಕೆಯನ್ನು ವಹಿಸಿದವರಿಗೆಲ್ಲ 'ಚಂಡಕರ್ಮ'
ಎಂಬ ಹೆಸರನ್ನೇ ಪ್ರಯೋಗಿಸುವ ಪದ್ಧತಿ ಇತ್ತೋ ಏನೋ, ನಮ್ಮೂರಲ್ಲಿ 'ಭೂತ'ದ
ಪಾತ್ರಿಯಾಗುವವನಿಗೆ ಪರಂಪರೆಯಿಂದ ಒಂದೇ ಹೆಸರಿರುವುದು ಪದ್ಧತಿ. ಕೃತಿಯಲ್ಲಿ
ಇಬ್ಬರು ಚಂಡಕರ್ಮರಿದ್ದರೆಂದು ಸ್ಫುಟವಾಗಿ ಎಲ್ಲಿಯೂ ಹೇಳಿಲ್ಲವಾದರೂ ಪ್ರಕರಣದಿಂದ
ಹಾಗೆ ತಿಳಿದುಕೊಂಡರೆ ತಪ್ಪಾಗದು.

- ಕೆ. ವೆಂಕಟರಾಮಪ್ಪ

<


ಒಂದನೆಯ ಅವತಾರ

ಕಂ|| ಪುರುದೇವಾದಿಗಳೊಲಿಸಿದ
ಪರಮಶ್ರೀವಧುವನೊಲಿಸಿಯುಂ ಪರವನಿತಾ
ನಿರಪೇಕ್ಷಕನೆನಿಸಿದ ದೇ-
ವರದೇವಂ ಕುಡುಗೆ ಸುವ್ರತಂ ಸುವ್ರತಮಂ

ಜಿನಸಿದ್ಧ ಸೂರಿದೇಶಿಕ
ಮುನಿಗಳ ಚರಣಂಗಳೆಂಬ ಸರಸಿಜವನಮೀ
ಮನಮೆಂಬ ತುಂಬಿಯೆರಮ-
ನನುಕರಿಸುಗೆ ಭಕ್ತಿಯೆಂಬ ನವಪರಿಮಳದಿಂ

ಎನಗೆ ನಿಜಮಹಿಮೆಯಂ ನೆ-
ಟ್ಟನೆ ಮಾಡುಗೆ ಕೂರ್ತು ವೀರಸೇನಾಚಾರ್ಯ‌ರ್
ಜಿನಸೇನಾಚಾರ್ಯರ್ ಸಿಂ-
ಹಣಂದಿಗಳ್ ಸಂದ ಕೊಂಡ ಕುಂದಾಚಾರ್ಯರ್


೧. ಪುರುದೇವ (ಆದಿತೀರ್ಥಂಕರ)ನೇ ಮುಂತಾದವರು ಒಲಿಸಿಕೊಂಡಿದ್ದ
ಮುಕ್ತಿವಧುವನ್ನೇ ಸುವ್ರತನು ಕೂಡ ಒಲಿಸಿಕೊಂಡನು. ಆದರೂ ಈತನಿಗೆ
'ಪರವನಿತಾ ನಿರಪೇಕ್ಷಕ' ಎಂಬ ಒಳ್ಳೆಯ ಹೆಸರೇ ಬಂತು! ಇವನು ದೇವರ
ದೇವನೂ ಹೌದು. ಇಂತಹ ಸುವ್ರತನು ನಮಗೆ ಸುವ್ರತವನ್ನು ದಯಪಾಲಿಸಲಿ.
೨. ಜಿನ, ಸಿದ್ದ, ಆಚಾರ್ಯ, ಉಪಾಧ್ಯಾಯ ಮತ್ತು ಸಾಧುಗಳೆಂಬ ಪಂಚ
ಪರಮೇಷ್ಠಿಗಳ ಪಾದಗಳೇ ಕಮಲವನಗಳು. ಅವು ಭಕ್ತಿಯೆಂಬ ಪರಿಮಳವನ್ನು
ಪಸರಿಸಿ ಈ ಮನಸ್ಸೆಂಬಭ್ರಮರವನ್ನು ತಮ್ಮ ಮೇಲೆ ಎರಗುವಂತೆ
ಮಾಡಲಿ. ೩. ನನಗೆ ವೀರಸೇನಾಚಾರ್ಯರೂ ಜಿನಸೇನಾಚಾರ್ಯರೂ ಸಿಂಹಣಂದಿಗಳೂ
ಪ್ರಸಿದ್ದರಾದ ಕೊಂಡಕುಂದಾಚಾರ್ಯರೂ ಸ್ನೇಹಪೂರ್ವಕವಾಗಿ ತಮ್ಮ

ಯಶೋಧರ ಚರಿತೆ

೧೫



ಗಣಧರರೋ ಸ್ವಾಮಿಗಳೋ
ಗುಣದಿಂದಾಮರೆಯೆಮೆರಗಿ ಶುಭ್ರರೆಮೆಮ್ಮಂ
ತಣಿಪುಗೆ ಸಮಂತಭದ್ರರ
ಗುಣಭದ್ರರ ಪೂಜ್ಯಪಾದರಾಖ್ಯಾನಂಗಳ್

ಕ್ಷಿತಿಯೋಳ್ ಸಂಸ್ಕೃತದಿಂ ಪ್ರಾ-
ಕೃತದಿಂ ಕನ್ನಡದಿನಾದ್ಯರಾರ್ ಈ ಕೃತಿಯಂ
ಕೃತಿಮಾಡಿದರವರ್ಗಳ ಸನ್
ಮತಿ ಕೈಗುಡುಗೆಮಗೆ ಸರಸಪದಪದ್ಧತಿಯೊಳ್

ನಾಂದಿಯಿನನಂತರಂ ಕವಿ
ವೃಂದಾರಕವಾಸವಂಗೆ ಕವಿಕಲ್ಪಲತಾ
ಮಂದಾರಂಗೇಂ ಪ್ರಸ್ತುತ
ಮೆಂದೊಡೆ ಬಲ್ಲಾಳದೇವನನ್ವಯಕಥನಂ



ಮಹಿಮೆಯನ್ನು ಸರಿಯಾಗಿ ಉಂಟುಮಾಡಲಿ. ೪. ಅವರು ಗಣಧರರಾಗಿರಲಿ,
ಸ್ವಾಮಿಗಳಾಗಿರಲಿ, ಅವರಗುಣಗಳನ್ನು ನಾವು ತಿಳಿದುಕೊಂಡಿಲ್ಲ. ಆದರೆ ಅವರಿಗೆ
ನಮಸ್ಕರಿಸಿ ನಾವು ಪುನೀತರಾಗುವುದಂತೂ ನಿಶ್ಚಯ. ಅಂತಹ ಸಮಂತಭದ್ರರ,
ಗುಣಭದ್ರರ ಪೂಜ್ಯಪಾದರ ಅಖ್ಯಾನ (ಕತೆ)ಗಳು ನಮ್ಮನ್ನು ತಣಿಸಲಿ. ೫.
ಸಂಸ್ಕೃತದಲ್ಲಿ ಪ್ರಾಕೃತದಲ್ಲಿ ಕನ್ನಡದಲ್ಲಿ ಈ ಕೃತಿಯನ್ನು ಈ ಲೋಕದಲ್ಲಿ ಯಾರು
ಈ ಮೊದಲು ರಚಿಸಿದರೋ ಅವರ ಸನ್ಮತಿ ನಮಗೆ ಸರಸ ಪದಪ್ರಯೋಗ
ಪದ್ದತಿಯಲ್ಲಿ ನೆರವನ್ನೀಯಲಿ. ಅವರ ಸತ್ಕೃತಿಗಳಿಂದ ರಸವತ್ಪ್ರಯೋಗ ಸಿದ್ದಿಗೊಳ್ಳಲಿ.
೬. ನಾಂದಿಯಾಯಿತು. ಇನ್ನು ಮೇಲೆ ದೇವತಾ ಸ್ವರೂಪಿಗಳಾದ ಕವಿವೃಂದದಲ್ಲಿ
ದೇವೇಂದ್ರನಂತಿರುವ ಹಾಗೂ ಕಲ್ಪಲತೆಗಳಂತಿರುವ ಕವಿಗಳಲ್ಲಿ ಮಂದಾರದಂತೆ
ಮೇಲೆ ಪಡೆದ ನಾನು ಕೈಕೊಳ್ಳಬೇಕಾದ ಕಾರ್ಯವೆಂದರೆ ಬಲ್ಲಾಳದೇವನ

ಭಾವಕನತಿರಸಿಕಂ ಸಂ
ಭಾವಿತನಭ್ಯಸ್ತ ಶಾಸ್ತ್ರನನ್ವಿತನೆನಿಪಾ
ದೇವಂಗೆ ವಿಷಯವಲ್ಲದೆ
ದೇವಾನಾಂಪ್ರಿಯರ್ಗೆ ವಿಷಯವೇ ಸತ್ಕಾವ್ಯಂ

ಕೇಳಲೊಡಂ ಶಬ್ದಾರ್ಥಗು-
ಣಾಳಂಕೃತಿ ರೀತಿಭಾವರಸವೃತ್ತಿಗಳಂ
ಮೇಳವಿಸ [ಲ್] ಬಲ್ಲಂ ಬ
ಲ್ಲಾಳಂ ಸಾಹಿತ್ಯಕಮಳಮತ್ತಮರಾಳಂ

ಸಳನೆಂಬ ಯಾದವಂ ಹೊಯ್
ಸಳನಾದಂ ಶಶಕಪುರದ ವಾಸಂತಿಕೆಯೊಳ್
ಮುಳಿದು ಪಲಿ ಪಾಯ್ದುದುಂ ಹೊಯ್
ಸಳ ಎಂದೊಡೆ ಗುರುಗಳಿತ್ತು ಕುಂಚದ ಸೆಳೆಯಂ


ವಂಶವರ್ಣನೆ, ೭. ಕಲ್ಪನಾಶೀಲನೂ, ಆತಿರಸಿಕನೂ, ಸಂಭಾವಿತನೂ, ಶಾಸ್ತ್ರಗಳನ್ನು ಅಭ್ಯಾಸ ಮಾಡಿದವನೂ, ಎಲ್ಲ ಗುಗಳುಳ್ಳವನೂ ಆದ ಆ ದೇವನಿಗೆ ಹೊರತು ಸತ್ಕಾವ್ಯವು 'ದೇವಾನಾಂ ಪ್ರಿಯ(ಬೆಪ್ಪ)ನಿಗೆ ಗ್ರಾಹ್ಯವಾಗುವುದೇ ? ೮. ಕಾವ್ಯವನ್ನು ಕೇಳಿದ ಮಾತ್ರಕ್ಕೇ ಅವನು ಕಾವ್ಯದ ಶಬ್ದ ಅರ್ಥ, ಗುಣ, ಅಲಂಕಾರ, ರೀತಿ, ರಸ, ಭಾವ, ವೃತ್ತಿ ಎಂಬ ಕಾವ್ಯ ಸಂಬಂಧಿ ವಿಷಯಗಳನ್ನೆಲ್ಲ ಒಂದಕ್ಕೊಂದು ಹೊಂದಿಸಬಲ್ಲವನಾಗಿದ್ದಾನೆ. ಈ ಕಾರಣದಿಂದ ಅವನು ಸಾಹಿತ್ಯ ಕಮಲ ಮತ್ತಮರಾಳ [ಸಾಹಿತ್ಯವೆಂಬ ತಾವರೆಗಳಿಂದ ಮದವೇರಿಸಿಕೊಳ್ಳುವ ರಾಜಹಂಸ] ಎಂಬ ಬಿರುದನ್ನು ಪಡೆದಿದ್ದಾನೆ. ೯. ಶಶಕಪುರದ ವಾಸಂತಿಕೆಯಲ್ಲಿ ಹುಲಿಯೊಂದು ರೋಷದಿಂದ ಒಳನುಗ್ಗುತ್ತಿತ್ತು. ಆಗ ಯದುವಂಶದ ಸಳನೆಂಬುವನನ್ನು ಉದ್ದೇಶಿಸಿ, ತನ್ನ ಕುಂಚದ ಬೆತ್ತವನ್ನಿತ್ತು ಗುರುಗಳು 'ಹೊಯ್ಸಳ' ಎಂದರು. ಆದುದರಿಂದ ಹೊಯ್ಸಳನಾದನು.

ವಿನಯಾದಿತ್ಯನೆ ಹೊಯ್ಸಳ
ಜನಪತಿಗಳ ಕೀರ್ತಿಪುಂಡರೀಕಿನಿಗುನ್ಮೀ-
ಲನಮನೊಡರ್ಚಿದನೆಳೆಯಂ-
ಗ ನೃಪಾಲನ ತಂದೆ ಬಿಟ್ಟಿದೇವಂಗಜ್ಜಂ ೧೦

ಅರಸಾದಂ ಸಂವರಣೆಗೆ
ಪರರಾಷ್ಟಂ ಗಂಗವಾಡಿ ತೊಂಬತ್ತರು ಸಾ-
ಸಿರಮಂ ಬ್ರಹ್ಮಣದತ್ತಿಗೆ
ವರಸಪ್ತಮ ಚಕ್ರವರ್ತಿ ವಿಷ್ಣುನೃಪಾಲಂ ೧೧

ಈವಿರುವ ಕಾವ ಗುಣದಿಂ-
ದಾವಿಷ್ಣುವಿನೊರೆಗೆ ದೊರೆಗೆವರಲುಳು ದ ಧರಿ-
ತ್ರೀವಲ್ಲಭರೇನೇಚಲ
ದೇವಿಗಮೆರೆಯಂಗ ನೃಪತಿಗಂ ಪುಟ್ಟಿದರೇ ೧೨



೧೦. ವಿನಯಾದಿತ್ಯನು ಹೊಯ್ಸಳ ರಾಜರ ಕೀರ್ತಿಯೆಂಬ ಕಮಲ ಸರೋವರವನ್ನು
ಅರಳಿಸಿದನು. ಈತನು ಎರೆಯಂಗ ಎಂಬ ರಾಜನ ತಂದೆ, ಬಿಟ್ಟಿದೇವನಿಗೆ
ಈತನು ಅಜ್ಜ. ೧೧. ಮುಂದೆ ವಿಷ್ಣು ನೃಪಾಲ :[ಬಿಟ್ಟಿದೇವ]ನು ರಾಜನಾದನು.
ಪರರಾಷ್ಟ್ರವಾದ ಗಂಗವಾಡಿ ತೊಂಬತ್ತಾರು ಸಾವಿರವು ಅವನ
ಅಂಕೆಗೊಳಗಾಯಿತು. ಬಹು ಪ್ರದೇಶವನ್ನು ಬ್ರಾಹ್ಮಣ ದತ್ತಿಗೆ ವಿನಿಯೋಗಿಸಿದ
ಆತನು ಹೊಯ್ಸಳರಲ್ಲಿ ಏಳನೆಯ ಚಕ್ರವರ್ತಿಯಾಗಿದ್ದನು. ೧೨. ದಾನಕೊಡುವ
ಹೋರಾಡುವ ಹಾಗೂ ರಕ್ಷಿಸುವ ಗುಣದಿಂದ ಆ ವಿಷ್ಣುವಿನ ಸಮಕ್ಕೆ ಬರಲು
ಉಳಿದ ಯಾವ ಭೂಪತಿಗಳಿಗೂ ಸಾಧ್ಯವಾಗಲಿಲ್ಲ. ಉಳಿದವರೇನು ಏಚಲ
ದೇವಿಗೂ ಎರೆಯಂಗ ಭೂಪತಿಗೂ ಮಕ್ಕಳಾಗಿದ್ದರೆ ? ೧೩. ಧೀರನಿಧಿಯಾದ



ಧೀರನಿಧಿ ಬಿಟ್ಟಿದೇವನೊ-
ಳೋರಗೆ ಬಲ್ಲಾಳನಿಂತು ನರಸಿಂಹಸುತಂ-
ಗಾರೆಣೆ ಗಗನಂ ಗಗನಾ-
ಕಾರಮೆನಲ್ ತಮ್ಮೊಳೆಣೆ ಪಿತಾಮಹ ಪೌತ್ರರ್‌ ೧೩

ಆಳೂರುಗೆ ಬಲ್ಲಾಳನ
ದಾರುಯ ದಾವಣಿಯ ತುರಗದಳ ಖುರುಹತಿಯಂ
ಪೇಳೆ ಪೆಸರಿಲ್ಲದಂತಿರೆ
ಪಾಳೂದುವು ವೈರಿದುರ್ಗಮೆನಿತೊಳವನಿತುಂ ೧೪

ಆರೆಣೆಯೆಂಬೆನರುಂಬದ
ಬೀರಮನೀ ಜಗಮನಾವಗಂ ಸುತ್ತಿದ ಮು-
ನ್ನೀರೆಂಬುದು ಬಿರುದಿನ ಬೆ
ಳ್ಳಾರೆನಿಸಿದುದದಟರಾಯ ಕೋಳಾಹಳನಾ ೧೫


ಬಿಟ್ಟಿದೇವನಿಗೆ ಸಮಾನನಾದವನೇ ಬಲ್ಲಾಳನು. ಈತನು ನರಸಿಂಹನ ಮಗ.
ಈತನಿಗೆ ಸರಿಸಮಾನರಾದವರು ಬೇರೆ ಯಾರೂ ಇಲ್ಲ. ಈ ಅಜ್ಜ ಮೊಮ್ಮಕ್ಕಳು
“ಆಕಾಶವು ಆಕಾಶದಂತೆ' ಎನ್ನುವ ಹಾಗೆ ಪರಸ್ಪರ ಎಣೆಯಾಗಿದ್ದಾರೆ. ೧೪.
ಬಲ್ಲಾಳನು ಹಗೆಗಳ ಹಟಮಾರಿತನವನ್ನು ಕಂಡಾಗ ಅವರ ದುರ್ಗಗಳನ್ನು
ಆಕ್ರಮಿಸುತ್ತಿದ್ದನು. ಆಗ ಆತನ ಕಡೆಯ ವೀರಭಟರ ಹೊಡೆತಗಳಿಂದಲೂ,
ಲಾಯದಲ್ಲಿ ಕಟ್ಟಿಹಾಕಿ ಸಾಕಿದ ಅಶ್ವಸೈನ್ಯದ ಗೊರಸಿನ ಪೆಟ್ಟಿನಿಂದಲೂ ಶತ್ರುಗಳ
ಕೋಟೆಗಳೆಲ್ಲ ಹೇಳ ಹೆಸರಿಲ್ಲದಂತೆ ಹಾಳಾಗಿ ಹೋದವು. ೧೫. ಇಡೀ
ಭೂಮಂಡಲವನ್ನು ಸದಾ ಸುತ್ತಿಕೊಂಡಿರುವ ಸಾಗರವೂ, ಮಹಾವೀರನಾದ
ಬಲ್ಲಾಳನ ಕೀರ್ತಿಯ ಧವಳ ಪ್ರವಾಹದಂತೆ ಕಾಣುತ್ತಿತ್ತು. ಅವನು

ಚಲದ ಬಲದಸಕದಿಂ ಸಲೆ
ನಿಲೆ ನಾಲ್ಕು ದೆಸೆಯ ಮೂರುವರೆ ರಾಯರ ಮುಂ-
ದಲೆಯೊಳಗುಂದಲೆಯೆನೆ ನಿಂ-
ದಿವುದು ತೇಜಂ ಪ್ರತಾಪ ಚಕ್ರೇಶ್ವರನಾ೧೬

ನೆಗಳ್ದ ನೃಪರೊಳಗೆ ಮುಂ ಕವಿ-
ತೆಗೆ ಮುಂಜಂ ಭೋಜನುತ್ಪಲಂ ಶ್ರೀಹರ್ಷಂ
ಮಿಗಿಲವರಿಂ ಬಲ್ಲಾಳಂ
ದ್ವಿಗುಣಂ ತ್ರಿಗುಣಂ ಚತುರ್ಗುಣಂ ಪಂಚಗುಣಂ೧೭

ಆ ನೃಪನ ಸಭೆಯೊಳಖಿಳಕ-
ಳಾ ನಿಪುಣರ ನಟ್ಟನಡುವೆ ಬೊಟ್ಟೆ ಗೆಲಲ್
ತಾನೆ ಚತುರ್ವಿಧ ಪಂಡಿತ
ನೇನೆಂಬುದೊ ಸುಕವಿ ಭಾಳಲೋಚನನಳವಂ೧೮


ಸಾಗರಾಂತ ಧರಿತ್ರಿಯನ್ನೂ ತನ್ನ ಸ್ವಾಧೀನಪಡಿಸಿಕೊಂಡವನು; ಅರಸರಿಗೆಲ್ಲ
ಅಂಜಿಕೆಯನ್ನುಂಟುಮಾಡಿದವನು. ೧೬. ಅವನ ಚಲದ ಬಲದ ಎಸಕ ಅದ್ಭುತ
ವಾಗಿದೆ. ಪ್ರತಾಪ ಚಕ್ರೇಶ್ವರನಾದ ಆತನ ತೇಜಸ್ಸು ನಾಲ್ಕೂ ದಿಕ್ಕುಗಳಲ್ಲಿ
ಸ್ಥಿರಸ್ಥಾನವನ್ನು ಪಡೆದುಕೊಂಡಿದೆ. ಅಲ್ಲಿನ ಮೂರೂ ಮತ್ತು ಇತರ ಕೆಲವು
ರಾಜರ ಮುಂದಲೆಯಲ್ಲಿ ಅದು ವಿಶೇಷವಾಗಿ ನೆಲೆನಿಂತು ಅವರಿಗೆ ತೀವ್ರವಾದ
ಬಾಧೆಯನ್ನುಂಟುಮಾಡುತ್ತದೆ. ೧೭. ಹಿಂದೆ ಕವಿತೆಗೆ ಹೆಸರುಗೊಂಡವರೆಂದರೆ
ಮುಂಜ, ಭೋಜ, ಉತ್ಪಲ ಮತ್ತು ಶ್ರೀಹರ್ಷ ಎಂಬ ರಾಜರು. ಈ ಬಲ್ಲಾಳನು
ಅವರಿಗಿಂತ ಇಮ್ಮಡಿ, ಮುಮ್ಮಡಿ, ನಾಲ್ಮಡಿ, ಐಮಡಿ ಮಿಗಿಲಾಗಿದ್ದಾನೆ ೧೮. ಈ
ರಾಜನ ಆಸ್ಥಾನದಲ್ಲಿ ಅನೇಕ ಕಲಾನಿಪುಣರಿದ್ದಾರೆ. ಅವರೆಲ್ಲರ ಮಧ್ಯದಲ್ಲಿ
ಬೆರಳೆತ್ತಿನಿಂತು ಅವರನ್ನೆಲ್ಲ ಗೆಲ್ಲುವುದಕ್ಕೆ ಅತಿಸಮರ್ಥನಾದವನೇ ಜನ್ನ. ಅವನು
ಚತುರ್ವಿಧ ಪಂಡಿತನೆಂದಾದ ಮೇಲೆ ಅವನ ಆಳವನ್ನು ಏನೆನ್ನಲಿ? ಅವನು
ಸುಕವಿ ಭಾಳಲೋಚನನಾಗಿದ್ದಾನೆ. ೧೯. ವ್ಯಾಕರಣದಲ್ಲಿ ನಿಷ್ಣಾತನಾಗಿ



ನವ ವೈಯಾಕರಣಂ ತ-
ಕಳವಿನೋದಂ ಭರತ ಸುರತ ಶಾಸ್ತವಿಳಾಸಂ
ಕವಿರಾಜಶೇಖರಂ ಯಾ-
ದವರಾಜಚ್ಛತ್ರನಖಿಳಬುಧಜನಮಿತ್ರಂ೧೯

ಚದುರ ನಿಧಿ ಚಲದ ನೆಲೆ ಚಾ
ಗದ ಸಾಗರಮಣ್ಮಿನಾಗರಂ ಪೆಂಪಿನ ಸಂ-
ಪದಮಾಯದಾಯುವಾರೆಂ-
ಬುದೊ ಜನ್ನಂ ಕಮ್ಮೆಕುಲದ ತೊಡವಿನ ರನ್ನಂ೨೦

ಕನ್ನರನಾದರದಿಂ ಕುಡೆ
ಹೊನ್ನಂ ಮನಮೊಸೆದು ತೈಲಪಂ ಕುಡೆ ರನ್ನಂ
ಮನ್ನಿಸಿ ಬಲ್ಲಾಳಂ ಕುಡೆ
ಜನ್ನಂ ಕವಿಚಕ್ರವರ್ತಿವೆಸರಂ ಪಡೆದರ್೨೧


ನವವೈಯಾಕರಣನೆನ್ನಿಸಿದ್ದರೆ, ತರ್ಕದಲ್ಲಿ ವಿನೋದಗೊಳ್ಳುವ ವಿದ್ವತ್ತೆಯನ್ನು
ಪಡೆದಿದ್ದಾನೆ. ನಾಟ್ಯಶಾಸ್ತ್ರ ಕಾಮಶಾಸ್ತ್ರಗಳಲ್ಲಿ ಚೆನ್ನಾದ ತಿಳುವಳಿಕೆ ಪಡೆದು ಬೆಡಗನ್ನು
ಕಾಣಿಸಬಲ್ಲ ಜನ್ನನು ಕವಿ ರಾಜಶೇಖರನಾಗಿದ್ದಾನೆ. ಯಾದವ ರಾಜಚ್ಚತ್ರನಾಗಿ೧೦
ಎಲ್ಲ ವಿದ್ವಾಂಸರ ಗೆಳೆಯನೆನ್ನಿಸಿದ್ದಾನೆ. ೨೦. ಚಾತುರ್ಯದ ನಿಧಿಯಾಗಿ ಚಲದ
ನೆಲೆಯಾಗಿ, ತ್ಯಾಗದ ಸಾಗರವಾಗಿ, ಸಾಹಸದ ಆಗರವಾಗಿ, ಪಂಪಿನ ಸಂಪತ್ತು
ಎನ್ನಿಸಿ ಆಯದ ಬಾಳುವೆಯುಳ್ಳವನೇ ಜನ್ನನು. ಅವನು ಕಮ್ಮೆಕುಲದ ಆಭರಣದ
ರತ್ನವಾಗಿದ್ದಾನೆ. ೨೧. ಹಿಂದೆ ಪೊನ್ನನಿಗೆ ಕನ್ನರನು ಆದರದಿಂದ
ಕವಿಚಕ್ರವರ್ತಿಯೆಂಬ ಬಿರುದನ್ನು ಕೊಟ್ಟನು. ಜನ್ನನಿಗೆ ಬಲ್ಲಾಳನು ಮನ್ನಣೆಮಾಡಿ
ಈ ಕವಿಚಕ್ರವರ್ತಿಯೆಂಬ ಬಿರುದನ್ನು ಕೊಟ್ಟಿದ್ದಾನೆ. ೨೨. ಈತನ ಗುರುಗಳು

ಶ್ರೀಮತ್ಕಾಣೂರ್ಗಣ ಚಿಂ.
ತಾಮಣಿಗಳ್ ರಾಮಚಂದ್ರ ಗಂಡವಿಮುಕ್ತರ್
ತಾಮೆ ಗಡ ಗುರುಗಳೆನಿಪ ಮ-
ಹಾ ಮಹಿಮೆಗೆ ನೋಂತ ಭವ್ಯಚೂಡಾರತ್ನಂ೨೨

ವಾಣೀ ಪಾರ್ವತಿ ಮಾಡಿದ
ಜಾಣೆಂತುಟೊ ಭಾಳಲೋಚನಂ ಕವಿಸುಮನೋ-
ಬಾಣನ ಮಗನೆಂದಖಿಳ
ಕ್ಷೋಣಿಗೆ ಪೆಸರಾಯ್ತು ಕೂರ್ಮೆಗಿದು ಕೌತುಕಮೇ೨೩

ಶ್ರಾವಕಜನದುಪವಾಸಂ
ಜೀವದಯಾಷ್ಟಮಿಯೊಳಾಗೆ ಪಾರಣೆ ಕಿವಿಗ-
ಳ್ಗೀವಸ್ತು ಕಥನದಿಂದು-
ದ್ಭಾವಿಸೆ ಕವಿಭಾಳಲೋಚನಂ ವಿರಚಿದಂ೨೪



ರಾಮಚಂದ್ರ ಗ೦ಡ ವಿಮುಕ್ತರು. ಇವರು ಕಾಣೂರ್ಗಣದ
ಚಿಂತಾಮಣಿಗಳಾಗಿದ್ದವರು. ಇಂತಹ ಗುರುಗಳ ಪ್ರಭಾವದಿಂದಲೇ ಜನ್ನನು
ಮಹಾಮಹಿಮೆಯನ್ನು ಪಡೆದನು; ಎಲ್ಲ ಭವ್ಯರಲ್ಲಿ ಕಲೆಯ ರತ್ನದಂತೆ ಮೆರೆದನು.
೨೩. ವಾಣಿಯೂ ಪಾರ್ವತಿಯೂ ಸೇರಿ ಒಂದು ಪವಾಡವನ್ನೇ ಮಾಡಿದರು:
ಕವಿ ಸುಮನೋ ಬಾಣನಿಗೆ ಮಗನಾಗಿ ಕವಿ ಭಾಳಲೋಚನನೆಂಬವನಿದ್ದಾನೆ
ಎಂಬಂತೆ ಲೋಕಕ್ಕೆಲ್ಲ ಹೆಸರು ಹಬ್ಬಿಸಿದರು. ಅವರು ಪ್ರೀತಿಯಿಂದ ಈ ರೀತಿ
ಮಾಡಿದ್ದಾರೆಂದರೆ ಆಶ್ಚರ್ಯ ಪಡಬೇಕಾದುದೇ ಇಲ್ಲ.೧೧ ೨೪. ಜೀವದಯಾಷ್ಟಮಿ
(ನವರಾತ್ರಿಯ ಅಷ್ಟಮಿ)ಯ ಸಂದರ್ಭದಲ್ಲಿ ಶ್ರಾವಕಜನರು ಉಪವಾಸವನ್ನು
ಕೈಕೊಳ್ಳುತ್ತಾರೆ. ಅವರಿಗೆ ಕಿವಿಗಳ ಮುಖಾಂತರ ಪಾರಣೆಯಾಗುವ ಸಲುವಾಗಿ
ಈ ಒಂದು ಕಥೆಯಿರಲಿ ಎಂದೆಣಿಕೆಯಿಂದ ಜನ್ನನು ಈ ಕೃತಿಯನ್ನು ರಚಿಸಿದ್ದಾನೆ



ಇತಿಹಾಸವೆಂಬ ವಿಮಳಾ-
ಮೃತವಾರ್ಧಿಯೊಳೊಗೆದ ಕಲ್ಪಕುಜದಂತೆ ರಸಾ-
ನ್ವಿತಮಾಗಿರೆ ಕಥೇ ಬುಧಸಂ-
ತತಿಗಕ್ಷಯ ಸುಖಮನೀವುದೊಂದಚ್ಚರಿಯೇ೨೫

ಪರೆವುದು ದುರಿತತಮಿಸ್ರಂ
ಪೊರೆಯೇರುದಮಳದೃಷ್ಟಿಕುವಳಯ ವನಮಾ-
ಚರಿಪ ಜನಿಕ್ಕೆ ಯಶೋಧರ
ಚರಿತ ಕಥಾಶ್ರವಣಮೆಂಬ ಚಂದ್ರೋದಯದೊಳ್೨೬

ಶೀರ್ಷಾಭರಣವೆಂಬ ಧರೆಗು-
ತ್ಕರ್ಷಾ ವಿಳಾಸನದ ಭೂಮಿ ಸಕಳ ಜನಕ್ಕಂ
ಹರ್ಷಮನೀವುದು ಭಾರತ
ವರ್ಷದ ಸುವಿಷಯದೊಳ್ ರಾಜಪರ೦೨೭



೨೫. ಇತಿಹಾಸವೆಂಬುದು ನಿರ್ಮಲವಾದ ಅಮೃತದ ವಾರಧಿ. ಅದರಲ್ಲಿ ಹುಟ್ಟಿದ
ಕಲ್ಪವೃಕ್ಷದಂತೆ ಈ ಕಥೆ ರಸಾತ್ಮಕವಾಗಿ ಹುಟ್ಟಿದೆ. ಇದು ಬುಧ ಸಮುದಾಯಕ್ಕೆ
ಅಪಾರವಾದ ಸುಖವನ್ನು ಕೊಡುವುದರಲ್ಲಿ ಆಶ್ಚರ್ಯವೇನೂ ಇಲ್ಲ.೧೨ ೨೬.
ಯಶೋಧರ ಚರಿತವನ್ನು ಆಲಿಸುವುದೆಂದರೆ ಚಂದ್ರೋದಯವಾದಂತೆ. ಆಗ
ಕತ್ತಲೆಯಂತಿರುವ ಪಾಪವೆಲ್ಲ ತೊಲಗುತ್ತದೆ. ಧರ್ಮದಲ್ಲಿ ನಿಶ್ಚಲವಾದ ನಂಬುಗೆಯೇ
ನಿರ್ಮಲವಾದ ಸಮ್ಯಗ್ದೃಷ್ಟಿ, ಜೀವದಯಾಷ್ಟಮಿಯನ್ನು ಆಚರಿಸುವ ಜನರಿಗೆ
ಈ ಸಮ್ಯಗ್ದರ್ಶನವು ಈ ಕಥೆಯನ್ನು ಕೇಳಿದಾಗ ನೈದಿಲೆಗಳಂತೆ ತಾನಾಗಿಯೇ
ವಿಕಾಸಗೊಳ್ಳುತ್ತದೆ. ೨೭. ಭರತ ಖಂಡದ ಅಯೋಧ್ಯಾ ದೇಶಕ್ಕೆ ರಾಜಪುರವೇ ರಾಜಧಾನಿ.
ಅದು ಇಡೀ ಲೋಕಕ್ಕೆ ಒಂದು ಶಿರೋಭೂಷಣದಂತೆ ಶೋಭಿಸುತ್ತಿತ್ತು. ಅಲ್ಲಿ ಮೇಲು
ಮಟ್ಟದ ಸೊಬಗು ನೆಲೆನಿಂತು ಎಲ್ಲ ಜನರಿಗೂ ಸಂತೋಷವನ್ನು ಕೊಡುತ್ತಿತ್ತು.

ಮೇರು ನೃಪ ಪ್ರಾಸಾದಂ
ವಾರಧಿ ನಿಜಪರಿಖೆ ವಜ್ರವೇದಿಕೆ ತತ್ಪ್ರಾ-
ಕಾರಂ ಜಂಬೂದ್ವೀಪಾ
ಕಾರಮನಿಂಬಿಟ್ಟರೆಂಬಿನಂ ಪುರಮೆಸೆಗುಂ ೨೮

ಅದರೊಳಗೆ ಮೆರೆವ ಮಣಿ ಮಾ-
ಡದ ಲೋವೆಗಳಲ್ಲಿ ಕೋದ ಪೊಸಮುತ್ತಿನ ಮೊ
ತ್ತದೆ ಬೆಳಗು ಚಂದನಾಲೇ-
ಪದ ಪವನಂ ಕುಡುವುದುರಿವ ರವಿಗೆಡೆವಗಲೊಳ್ ೨೯

ಕಾರಿರುಳೊಳಮೆಳವಿಸಿಲಂ
ಪೂರಂ ಪರಿಯಿಪುವು ಬೀದಿಯೊಳ್ ನಿಜರುಚಿಯಿಂ
ಹೀರೆಯ ಹೂವಿನ ಬಣ್ಣದ
ನೇರಾಣಿಯ ಕುಸುರಿವೆಸದ ನೆಲೆಮಾಡಂಗಳ್ ೩೦



೨೮. ಅರಸನ ಅರಮನೆ ಮೇರುವಿನಂತೆ ಉತ್ತತವಾಗಿಯೂ ಭವ್ಯವಾಗಿಯೂ
ಮೆರೆಯುತ್ತದೆ ಆ ನಗರದಲ್ಲಿ. ಕಡಲು ಅದಕ್ಕಿರುವ ಕಂದರದಂತೆ ಶೋಭಿಸುತ್ತದೆ.
ವಜ್ರವೇದಿಕೆಯೇ ಅದರ ಪ್ರಾಕಾರವಾಗಿ ಪ್ರಕಾಶಿಸುತ್ತದೆ. ಒಟ್ಟಿನಲ್ಲಿ ರಾಜಪುರವು
ಜಂಬೂದ್ವೀಪದ ಸಾರವನ್ನೆಲ್ಲ ಇಲ್ಲಿಯೇ ಶೇಖರಿಸಿಟ್ಟಿದ್ದಾರೆಂಬಂತೆ
ಶೋಭಿಸುಸತ್ತದೆ. ೨೯. ಆ ನಗರದಲ್ಲಿ ಮೆರೆಯುತ್ತವೆ ಮಣಿಮಾಡಗಳು. ಅವುಗಳ
ಲೋವೆಗಳಲ್ಲಿ ಹೊಸ ಮುತ್ತಿನ ಸಮುದಾಯವನ್ನೇ ಕೋದು ಅಲಂಕರಿಸಿದ್ದಾರೆ.
ಅದರಿಂದ ಹಬ್ಬುತ್ತದೆ ತಂಪಾದ ಬೆಳಕು. ಈ ಬೆಳಕು ಆಕಾಶದಲ್ಲಿ ಹಗಲು
ಸಂಚರಿಸುವ ಸೂರ್ಯನಿಗೆ ಶ್ರೀಗಂಧದ ತಂಪಾದ ಲೇಪನವನ್ನು ಲೇಪಿಸುವಂತಿದೆ.
೩೦. ಕಗ್ಗತ್ತಲೆಯಲ್ಲೂ ಬೀದಿಯಲ್ಲೆಲ್ಲ ಎಳೆಬಿಸಿಲಿನ ಪ್ರವಾಹವೇ ಹಬ್ಬಿದಂತೆ
ತೋರುತ್ತದೆ. ಹೀರೆಯ ಹೂವಿನ ಬಣ್ಣದ ಚಿನ್ನದ ಕುಸುರಿಕೆಲಸದ ಉಪ್ಪರಿಗೆಗಳಿಂದ


೨೪

ಯಶೋಧರ ಚರಿತೆ

ನೆಲೆಮಾಡದೊಳೆಡೆಯಾಡುವ
ಕಲಹಂಸಾಲಸವಿಳಾಸವತಿಯರ ಮುಖಮಂ-
ಡಲಕೆ ಸರಿಯಾಗಲಾರದೆ
ಸಲೆ ಮಾಳ್ವಿಂ ಚಂದ್ರನಿಂತು ಚಾಂದ್ರಾಯಣಮಂ ೩೧

ಪಗಲನಿರುಳ್ ನಿಜರುಚಿಯಿಂ
ಮಿಗಿಸುವ ಜಿನಭವನದರುಣಮಣಿ ಕಲಶಂಗಳ್
ನಗುವುವು ಕೇತುಗಳಿಂ ಕೇ
ತುಗಳೊಳ್ ಕೆಳೆಗೊಂಡು ನಿಂದು ರವಿಮಂಡಲಮಂ ೩೨

ಅದು ಪಿರಿಯ ಸಿರಿಯ ಬಾಳ್ಮೊದ-
ಲದು ಚಾಗದ ಭೋಗದಾಗರಂ ಸಕಲಸುಖ-
ಕ್ಕದು ಜನ್ಮಭೂಮಿಯೆನಿಸದು-
ದದನಾಳ್ವಂ ಮಾರಿದತ್ತನೆಂಬ ನೃಪಾಲಂ ೩೩


ಈ ಶುಭ್ರಕಾಂತಿ ಪಸರಿಸುತ್ತವೆ. ೩೧. ಅತ್ಯುನ್ನತವಾದ ಆ ಉಪ್ಪರಿಗೆಗಳಲ್ಲಿ ಬೆಡಗಿಯರು ರಾಜಹಂಸಗಳಂತೆ ಮೆಲ್ಲನೆ ಅತ್ತಿಂದಿತ್ತ ಸಂಚರಿಸುತ್ತಾ ಇದ್ದಾರೆ. ಅವರ ಮುಖಮಂಡಲಕ್ಕೆ ಸಮನಾಗಲಾರದೆಹೋದುದರಿಂದಲೇ ಚಂದ್ರನು ಚಾಂದ್ರಾಯಣ ವ್ರತವನ್ನು ಆಚರಿಸುತ್ತಾನೆ.೧೩ ೩೨. ಅನೇಕ ಜಿನಭವನಗಳು ಆ ನಗರವನ್ನು ಅಲಂಕರಿಸಿವೆ. ಅವುಗಳ ಕಲಶಗಳು ಕೆಂಪು ಹರಳುಗಳಿಂದ ನಿರ್ಮಿತವಾಗಿರುವುದರಿಂದ ರಾತ್ರಿಯ ಹೊತ್ತಿನಲ್ಲೂ ಅರುಣೋದಯದ ಹೊಂಬಣ್ಣವನ್ನು ಮೀರಿಸಿ ಬೆಳಗುತ್ತವೆ. ಜಿನಮಂದಿರಗಳ ಧ್ವಜಗಳು ಬಹಳ ಮೇಲೆ ಏರಿ ನಿಂತು ಕೇತು ಗ್ರಹಗಳ ಮೈತ್ರಿಯನ್ನು ಪಡೆದು ಸೂರ್ಯಮಂಡಲವನ್ನೇ ಅಪಹಾಸ್ಯಮಾಡುತ್ತವೆ.೧೪ ೩೩. ರಾಜಪುರವು ಹೀಗೆ ಸಕಲ ಸಂಪತ್ಸಮೃದ್ದಿಗೂ ಜನ್ಮಭೂಮಿಯಾಗಿ ತ್ಯಾಗದ ತವರು, ಭೋಗದ ಭವನ ಎಂಬಂತಿತ್ತು. ಅದನ್ನು ಆಳುವವನು ಮಾರಿದತ್ತ ಎಂಬ ಅರಸ.

ಆ ಪುರದ ತೆಂಕವಂಕದೊ-
ಳಾಪೊತ್ತಮನೇಕ ಜೀವಹತಿ ತನಗೆ ಸುಖೋ-
ದ್ದೀಪನಮೆನಿಸುವ ಪಾಪಕ-
ಳಾಪಂಡಿತೆ ಚಂಡಮಾರಿದೇವತೆಯಿರ್ಪಳ್ ೩೪

ತನಗರಸುವೆರಸು ಪುರಜನ
ಮನಿತುಮಿಷಂ ಚೈತ್ರಮೆಂಬ ತಿಂಗಳೊಳಖಿಳಾ-
ರ್ಚನೆವೆರಸು ಜಾತ್ರೆ ನೆರೆಯದೊ-
ಡನಿತುಮ ನೊರ್ಮೊದಲೆ ವಿಳಯದೊಳ್ ನೆರೆಯಿಸುವಳ್ ೩೫

ಆ ದೇವಿಯ ಜಾತ್ರೆಗೆ ಮೊಳೆ
ವೋದೆಳವೆಳೆ ಸಿರದ ಗಾಳಮುರಿಯುಯ್ಯಲೆ ಕೈ-
ವೋದಸುಕೆ ಕೋಕಿಲಧ್ವನಿ
ಮೂದಲೆಯುಲಿಯಾಗೆ ಬಂದುದಂದು ಬಸಂತಂ ೩೬



೩೪. ಆ ರಾಜಪುರದ ದಕ್ಷಿಣ ಪಾರ್ಶ್ವದಲ್ಲಿ ನೆಲಸಿದ್ದಾಳೆ ಚಂಡಮಾರಿ ಎಂಬ
ಹೆಸರಿನ ದೇವತೆ. ಯಾವಾಗಲೂ ಅನೇಕ ಜೀವಿಗಳ ಹತ್ಯೆಯೇ ಅವಳಿಗೆ
ಸುಖೋದ್ದೀಪನ ಎನಿಸಿದೆ. ಪಾಪದ ಕಲೆಯಲ್ಲಿ ಒಳ್ಳೆಯ ಪಾಂಡಿತ್ಯ ಅವಳದು.
೩೫. ಆ ನಗರದ ಜನರೆಲ್ಲರೂ, ತಮ್ಮ ರಾಜನನ್ನು ಮುಂದುಮಾಡಿಕೊಂಡು,
ಅಶ್ವಯುಜ ಮತ್ತು ಚೈತ್ರಮಾಸಗಳಲ್ಲಿ ಅಲ್ಲಿ ಜಾತ್ರೆ ಸೇರಬೇಕು; ಎಲ್ಲ ಬಗೆಯ
ಪೂಜೆಗಳನ್ನೂ ಮಾಡಬೇಕು. ಹಾಗೆ ನೆರವೇರಿಸದಿದ್ದಲ್ಲಿ ಆ ದೇವತೆ ಅಷ್ಟು
ಮಂದಿಯನ್ನೂ ಒಮ್ಮೆಲೇ ಸಂಪೂರ್ಣ ಧ್ವಂಸಗೊಳಿಸಿಯಾಳು. ೩೬. ಒಮ್ಮೆ
ಚೈತ್ರಮಾಸವು ಬಂದಿತು. ಮೂಡಿ ಬಂದ ಬಾಲಚಂದ್ರನೇ ದೇವಿಯ ಅರ್ಚನೆಗಾಗಿ
ಬಳಸುವ ತಲೆಯ ಗಾಳದಂತಿರಲು, ಚಿಗುರಿದ ಅಶೋಕದ ಮರವು ಬೆಂಕಿಯ
ಉಯ್ಯಾಲೆಯಾಗಿರಲು ಕೋಗಿಲೆಗಳ ಕೂಗುವ ಧ್ವನಿಯೇ ಮೂದಲೆಯ
ಮಾತಾಗಿರಲು ವಸಂತ ಋತುವು ಬಂದಿತು.೧೫ ೩೭. ಆ ದೇವಿಗೆ



ಸಿಸಿರಮನೆ ಪಡೆದು ಪರಕೆಗೆ
ವಸತನಲರ್ವೊದ ಮಾವಿನಡಿಮಂಚಿಕೆಯೊಳ್
ಕುಸುರಿದರುವೆದಡಗಿನಗತವೊ
ಲೆಸೆದುವು ತದ್ವನದೊಳುದಿರ್ದ ಮುತ್ತದ ಮುಗುಳಲ್ ೩೭

ಮಾರಿ ಮಾಲಯಾನಿಳಂ ನವ
ನೀರಜವನವೆಂಬ ಕೆಂಡದೊಳ್ ದಂಡನಮ
ಸ್ಕಾರದೆ ಬಂದವನಿತ್ತವ-
ಧಾರಿಪುದೆಂಬಂತಿರುಲಿದುವರಗಿಳಿ ಬನದೊಳ್ ೩೮

ಅಂತು ದೊರೆವೆತ್ತು ಬಂದ ವ
ಸಂತದೊಳಾ ಮಾರಿದತ್ತನುಂ ಪುರಜನಮುಂ
ತಂತಮಗೆ ಚಂಡಮಾರಿಗೆ
ಸಂತಸಮಂ ಮಾಡಲೆಂದು ಜಾತ್ರಗೆ ನೆರೆದರ್ ೩೯



ಹರಕೆಯೊಪ್ಪಿಸುವುದಕ್ಕಾಗಿ ಶಿಶಿರವನ್ನೇ ಹಿಡಿದು ಹೂಬಿಟ್ಟ ಮಾವಿನಮರದ
ಅಡಿ ಮಂಚಿಕೆಯಲ್ಲಿ ಅವನನ್ನು ಕೊಚ್ಚಿ ಕೊಚ್ಚಿ ಕತ್ತರಿಸಿ ಹಾಕಿದ ಮಾಂಸದ
ರಾಶಿಯೆಂಬಂತೆ ಆ ವನದಲ್ಲಿ ಉದುರಿಬಿದ್ದ ಮುತ್ತುಗದ ಮೊಗ್ಗೆಗಳು ಕೆಂಪಾಗಿ
ತೋರುತ್ತಿದ್ದುವು.೧೬ ೩೮. ವನದಲ್ಲಿ ಅರಗಿಳಿಗಳು ಗಟ್ಟಿಯಾಗಿ ಉಲಿಯುತ್ತಿದ್ದವು
 : “ಎಲೆ ಮಾರಿದೇವತೆಯೇ, ಮಲಯಮಾರುತನು ಹೊಸ ತಾವರೆಗಳ
ಸಮೂಹವೆಂಬ ಕೆಂಡದಲ್ಲಿ ಧೀರ್ಘದಂಡ ನಮಸ್ಕಾರ ಮಾಡುತ್ತಾ ಬರುತಿದ್ದಾನೆ.
ಈ ಕಡೆ ಗಮನವಿಡು”.೧೭ ೩೯. ಆ ರೀತಿಯಲ್ಲಿ ಒದಗಿಬಂದ ವಸಂತಕಾಲದಲ್ಲಿ
ಮಾರಿದತ್ತ ರಾಜನೂ ನಗರದ ಜನರೂ ಎಲ್ಲರೂ ಒಂದಾಗಿ ಚಂಡಮಾರಿದೇವತೆಗೆ
ಸಂತೋಷವಾಗುವಂತೆ ಜಾತ್ರೆಯನ್ನು ನರೆವೇರಿಸಲು ಅಲ್ಲಿ ಸೇರಿದರು.

ಸುರಿಗಿರುದರ್ಚನೆಯಾಡುವ
ಪರಕೆಯನೊಪ್ಪಿಸುವ ಲಕ್ಕಲೆಕ್ಕದ ಲೆಂಕ
ರ್ವೆರಸು ಬಲವಂದು ದೇವಿಯ
ಚರಣಂಗಳ್ಗೆ ರಗಿ ರಂಗಮಂಟಪದೆಡೆಯೊಳ್ ೪೦

ನಿಂದು ನರಪತಿ ತಳಾರಂ
ಗೆಂದಂ ನೀನ್ ಬರಿಸು ಮನುಜಯುಗಮಂ ಮುನ್ನಂ
ಕೊಂದರ್ಚಿಸುವೆಂ ಪೂಜೆಯೊ-
ಳೆಂದಿನ ಪರಿ ತಪ್ಪೆ ದೇವಿ ತಪ್ಪದೆ ಮಾಣಳ್ ೪೧

ತಡವಾದಪ್ಪುದು ಪೌರರ್
ಕುಡುವೇಳ್ಪುದು ಹಲವು ಜೀವರಾಶಿಯ ಬಲಿಯಂ
ನಡೆಯನೆ ಹಸಾದಮಾಗಳೆ
ಪಿಡಿತಾರದೆ ಮಾಣರೆನ್ನ ಕಿಂಕರರೆನುತುಂ ೪೨


೪೦. ಖಡ್ಗದಿಂದ ಇರಿದುಕೊಂಡು ಅರ್ಚನೆಯನ್ನು ಸಲ್ಲಿಸುವ೧೮ ಹಾಗೂ
ಬೇರೆ ರೀತಿಯಲ್ಲಿ ಹರಕೆಯನ್ನೊಪ್ಪಿಸುವ ಲಕ್ಷೋಪಲಕ್ಷ ದೇವೀ ಭಜಕರು ಅಲ್ಲಿ
ಸಿದ್ಧರಾದರು. ಅವರನ್ನೆಲ್ಲ ಕೂಡಿಕೊಂಡು ಮಾರಿದತ್ತನು ದೇವಿಯ ಗುಡಿಗೆ
ಪ್ರದಕ್ಷಿಣೆ ಬಂದನು. ನಮಸ್ಕರಿಸಿದನು. ಅನಂತರ ದೇವಾಲಯದ
ರಂಗಮಂಟಪದಲ್ಲಿ ನಿಂತುಕೊಂಡನು. ೪೧. ತನ್ನ ತಳಾರನನ್ನು ಕರೆದು, “ನೀನು
ಈಗಲೇ ಮನುಷ್ಯಯುಗವನ್ನು ಬರಿಸು. ಎಂದಿನಂತೆ ಮೊದಲು ನಾನೇ ಅವರನ್ನು
ಬಲಿಕೊಟ್ಟು ಅರ್ಚಿಸಬೇಕಾಗಿದೆ. ಪದ್ಧತಿ ಪ್ರಕಾರ ನಡೆದುಕೊಳ್ಳದಿದ್ದರೆ ದೇವಿಗೆ
ಸಿಟ್ಟಾದೀತು. ಪರಿಣಾಮವಾಗಿ ಅವಳೂ ನಮ್ಮ ವಿಷಯದಲ್ಲಿ ತಪ್ಪಿ

ಕಿರುವರೆಯದ ಶುಭಲಕ್ಷಣ
ದರುಕೆಯ ಸತ್ಕುಲದ ಮರ್ತ್ಯಯುಗಲಕಮಂ ತಾ-
ನರಸಲ್ ಬಳರಿಯ ಬನದಿಂ
ಪೊರಮಟ್ಟಂ ಚಂಡಕರ್ಮನೆಂಬ ತಳಾರಂ ೪೩

ಇತ್ತಲ್ ಬಳುಕ್ಕ ಪಂಚಶ-
ತೋತ್ತಮ ಯತಿಸಮಿತಿವೆರಸು ಗಮನಪ್ರಾಯ
ಶ್ಚಿತ್ತನಿಮಿತ್ತಂ ಬಂದ ಸು
ದತ್ತಾಚಾರ್ಯರ್ ಪುರೋಪವನಮಂ ಸಾರ್ದ‌ರ್ ೪೪

ಅವರ ಗುಣಮವರ ಸಂಯಮ-
ಮವರ ತಪಶ್ಚರಣಮೆಂಬುದವರಿವರಳವ
ಲ್ಲವರ ಪೆಸರ್ಗೊಂಡ ನಾಲಗೆ
ಸವಿದರಿಯದು ಬಳಿಕ ತಾಯ ಮೊಲೆವಾಲ್ವನಿಯಂ೪೫



ನಡೆಯದಿರಲಾರಳು. ಆದುದರಿಂದ ತ್ವರೆಮಾಡು; ೪೨. ಉಳಿದ ನಾಗರಿಕರೆಲ್ಲರೂ
ಅನೇಕಾನೇಕ ಜೀವರಾಶಿಯ ಬಲಿಯನ್ನು ಕೊಡಲಿದ್ದಾರೆ, ತಡಮಾಡದಿರು”
ಎಂದು ಅಪ್ಪಣೆಯಿತ್ತನು. ತಳಾರ ಚಂಡಕರ್ಮನು ಅಪ್ಪಣೆ ಎಂದು ಉತ್ತರವನ್ನೇನೋ
ಕೊಟ್ಟನು. ಒಡನೆಯೇ ತನ್ನ ಕಿಂಕರರು ಈಗಾಗಲೇ ಪಶುಬಲಿಗಳನ್ನು
ತಂದಿರಲೇಬೇಕು ಎಂದು ಭಾವಿಸಿ, ೪೩. ಎಳೆಯ ವಯಸ್ಸಿನ, ಶುಭಲಕ್ಷಣವುಳ್ಳ
ಬುದ್ದಿಮತರಾದ, ಒಳ್ಳೆಯ ವಂಶದಲ್ಲಿ ಹುಟ್ಟಿದ ಮಾನವ ಜೋಡಿಯನ್ನ ಹುಡುಕುತ್ತಾ
ಆ ಮಾರಿಯ ಬನದಿಂದ ಹೊರಟನು. ೪೪. ಇತ್ತ ಸುದತ್ತಾಚಾರ್ಯರೆಂಬ
ಗುರುಗಳು ಐನೂರು ಮಂದಿ ಶಿಷ್ಯರನ್ನು ಕೂಡಿಕೊಂಡು ಆ ರಾಜಧಾನಿಯ
ಉಪವನಕ್ಕೆ ಬಂದು ಗಮನ ಪ್ರಾಯಶ್ಚಿತ್ತಕ್ಕಾಗಿ೧೯ ಅಲ್ಲಿಯೇ ತಂಗಿದ್ದರು.

ಮುನಿಸಮುದಾಯಸಮೇತಂ
ವಿನೇಯಜನ ವನಜವನದಿವಾಕರನಂತಾ
ಮುನಿಪನುಪವಾಸಮಂ ಪ-
ರ್ವ ನಿಮಿತ್ತಂ ಕಳೆದು ಬಳಿಕ ಬಾಲಕಯುಗಮಂ ೪೬

ಚರಿಗೆಗೆ ಬೀಳ್ಕೊಡೆ ಗುರುಗಳ
ಚರಣಕ್ಕಾ ಯುಗಳಮೆರಗಿ ಪೋರಮಟ್ಟಾಗಳ್
ತರುಣ ವನಹರಿಣಯುಗಮಂ
ತರಕ್ಷು ಪಿಡಿವಂತೆ ಚಂಡಕರ್ಮಂ ಪಿಡಿದಂ ೪೭

ಅಭಯರುಚಿಯಭಯಮತಿಯೆಂ-
ಬುಭಯಮನಾ ಪಾಪಕರ್ಮನುಯ್ವೆಡೆಯೊಳ್ ಮ
ತ್ತಭಯರುಚಿ ತಂಗೆಗೆಂದಪ
ನಭೀತೆಯಾಗೆಲಗೆ ತಾಯೆ ಮರಣದ ದೆಸೆಯೊಳ್ ೪೮


೪೫. ಅವರ ಗುಣ, ಅವರ ಮನೋನಿಗ್ರಹ, ಅವರ ತಪಶ್ಚರಣ ಎಂಬವುಗಳು
ಅಂತಿಂಥ ಸಾಮಾನ್ಯರಿಗೆ ಅಳವಡುವಂತಹವಲ್ಲ. ಅವರ ಹೆಸರನ್ನು ಹೇಳಿದರೆ
ಸಾಕು, ಆ ನಾಲಗೆಗೆ ತಾಯಿಯ ಮೊಲೆಹಾಲು ಕೂಡ ಸವಿಯಾಗಲಾರದು.೨೦.
೪೬. ತಾವರೆಗಳನ್ನರಸುವ ಸೂರ್ಯನಂತೆ ಸುದತ್ತಾಚಾರ್ಯರು ಶಿಷ್ಯವೃಂದದ
ವಿಕಾಸಕ್ಕೆ ಕಾರಣವಾಗಿದ್ದರು. ಅವರು ಈ ಮುನಿಗಳ ಸಮುದಾಯವನ್ನು
ಕೂಡಿಕೊಂಡು, ವ್ರತದ ಅಂಗವಾಗಿ ಉಪವಾಸವನ್ನು ಮಾಡಿದರು. ಆನಂತರ
ಇಬ್ಬರು ಮಕ್ಕಳನ್ನು ಕರೆದು ಭಿಕ್ಷೆಯೆತ್ತಿ ತರುವಂತೆ ಕಳುಹಿಸಿಕೊಟ್ಟರು. ೪೭. ಆ
ಬಾಲಕರು ಗುರುಗಳ ಪಾದಕ್ಕೆ ನಮಸ್ಕರಿಸಿ ಅಲ್ಲಿಂದ ಹೊರಟರು. ಅಷ್ಟರಲ್ಲೇ
ಎರಡು ಎಳೆಯ ಜಿಂಕೆ ಮರಿಗಳನ್ನು ಹುಲಿಯು ಹಿಡಿಯುವಂತೆ, ಅವರನ್ನು
ಚಂಡಕರ್ಮನು ಹಿಡಿದನು. ೪೮. ಅಭಯರುಚಿ ಮತ್ತು ಅಭಯಮತಿ ಎಂಬ

ನಿಯತಿಯನಾರ್ ಮೀರುವೆದಪರ್
ಭಯಮೇವುದೊ ಮುಟ್ಟಿದೆಡೆಗೆ ಸೈರಿಸುವುದೆ ಕೇಳ್
ನಯವಿದೆ ಪೆತ್ತ ಪರೀಷಹ
ಜಯಮೆ ತಪಂ ತಪಕೆ ಬೇರೆ ಕೋಡೆರಡೊಳವೇ ೪೯

ಅಣ್ಣನ ಮಾತಂ ಮನದೊಳ್
ತಿಣ್ಣಂ ತಳೆದೆಂದಳನುಜೆ ಮಾಡಿದುದಂ ನಾ-
ವುಣ್ಣದೆ ಪೋಕುಮೆ ಭಯಮೇ
ಕಣ್ಣ ಭವಪ್ರಕೃತಿ ವಿಕೃತಿ ನಾವರುದುದೇ ೫೦

ಎನಿತೊಳವಪಾಯಕೋಟಿಗ-
ಳನೀರ್ಕಂ ಗೇಹಮಲ್ತೆ ದೇಹಮಿದಂ ನೆ-
ಟ್ಟನೆ ಹೊತ್ತು ಸುಖಮರಸುವ
ಮನುಜಂ ಮೊರಡಿಯೊಳೆ ಮಾದುಪಳಮರಸದಿರಂ ೫೧


ಆ ಇಬ್ಬರು ಮಕ್ಕಳನ್ನು ಪಾಪಕಾರ್ಯ ಪ್ರವೃತ್ತನಾದ ಚಂಡಕರ್ಮನು
ಹಿಡಿದೊಯ್ಯತೊಡಗಿದನು. ಇಬ್ಬರಿಗೂ ಆತನ ಉದ್ದೇಶದ ಅರಿವಾಯಿತು.
ಅಭಯರುಚಿ ತಂಗಿಯೊಡನೆ “ಎಲೆ ತಂಗಿ, ನಮಗೆ ಮೃತ್ಯುವೇ
ಸನ್ನುಹಿತವಾಗಿದೆಯೆಂದು ಹೆದರಿಕೊಳ್ಳಬೇಡ” ಎಂದು ಮಾತಿಗಾರಂಭಿಸಿದನು.
೪೯. ವಿಧಿನಿಯಮವನ್ನು ಮೀರುವವರು ಯಾರಿದ್ದಾರೆ? ಅದಕ್ಕಾಗಿ ಅಂಜಿದರೆ
ಪ್ರಯೋಜನವಾದರೂ ಏನಿದೆ ? ಏನಾದರೂ ಸಂಘಟಿಸಿತೆಂದಾದರೆ ಅದನ್ನು
ಸಹಿಸಿಕೊಳ್ಳುವುದೇ ನ್ಯಾಯವಾದ ದಾರಿ. ಒದಗಿಬರುವ ಪರೀಷಹಗಳನ್ನು೨೧
ಜಯಿಸುವುದನ್ನೇ ತಪಸ್ಸು ಎಂಬ ಹೆಸರಿನಿಂದ ಕರೆಯುತ್ತಾರೆ. ತಪಸ್ಸಿಗೆ ಬೇರೆ
ಎರಡು ಕೋಡುಗಳಿವೆಯೆ?”೨೨ ೫೦. ಅಣ್ಣನ ಈ ಮಾತನ್ನು ಅಭಯಮತಿ
ಚೆನ್ನಾಗಿ ಗ್ರಹಿಸಿಕೊಂಡಳು. ಅವಳೂ ಮಾತಾಡತೊಡಗಿದಳು : “ಅಣ್ಣಾ
ಮಾಡಿದುದರ ಫಲವನ್ನು ನಾವು ಉಣ್ಣದೆ ಹೋದೇವೆಯೆ? ಅದಕ್ಕಾಗಿ ಭಯ
ಪಡುವುದೇಕೆ ? ಜನ್ಮವೆತ್ತಿದ ಮೇಲೆ ಸಹಜವಾಗಿ ಏನೆಲ್ಲ ವಿಕಾರಗಳು

ಬೇಡಿದ ಕಾಡೊಳ್ ಮಳೆವೆಯಾ
ಯ್ತೀಡಾಡುವಮಿದರ ಪೊರೆಯೆನೆನಗಂ ನಿನಗಂ
ಮೂಡುವ ಮುಳುಗುವ ದಂದುಗ-
ಮಾಡಿದ ಹೊಲನುಂಡ ಮರ್ದು ಕಂಡ ವಿಚಾರಂ ೫೨

ಇಂತಿಂತೊರ್ವರನೊರ್ವರ್
ಸಂತೈಸುತ್ತುಂ ನೃಪೇಂದ್ರತನುಜಾತ‌ರ್ ನಿ-
ಶ್ಚಿಂತಂ ಪೊಕ್ಕರ್ ಪಸಿದ ಕೃ-
ತಾಂತ ಬಾಣಸುವೊಲಿರ್ದ ಮಾರಿಯ ಮನೆಯಂ ೫೩

ತಳಮನುಡಿದಿಡುವ ಕಣ್ಣಂ
ಕಳೆದೇರುಪ ಕರುಳ ತೋರಣಂಗಟ್ಟುವ ಕಾ
ಲ್ಗ ಳನುರಿಪಿ ನತ್ತರಾ ಕೂ-
ಮೈ ಳನಡುತಿಹ ವೀರರೆತ್ತ ನೋಳ್ಪೊಡಮದರೊಳ್ ೫೪



ಬರುತ್ತವೆಯೆಂಬುದು ನಮಗೆ ಗೊತ್ತಿಲ್ಲವೆ? ೫೧. ಅಪಾಯ ಕೋಟಿಗಳು
ಎಷ್ಟೆಷ್ಟಿವೆಯೊ ಅಷ್ಟಕ್ಕೆಲ್ಲ ಈ ದೇಹವೇ ಮನೆಯಲ್ಲವೆ? ಈ ದೇಹವನ್ನು ಧರಿಸಿಕೊಂಡ
ಮೇಲೆ ಇದರಲ್ಲಿ ಸುಖವನ್ನು ಹುಡುಕುವುದೂ ಒಂದೇ ; ಕಲ್ಲು ಗುಡ್ಡದಲ್ಲಿ
ಪಕ್ವವಾದ ಮಾದಳದ ಹಣ್ಣನ್ನು ಹುಡುಕುವುದೂ ಒಂದೇ !
೫೨. ಯಾವ ಕಾಡಿಗೆ ಮಳೆ ಬೇಕಿತ್ತೋ, ಅಲ್ಲಿಗೇ ಮಳೆ ಬಂದಂತಾಯಿತು. ಈ
ದೇಹದ ಹೊರೆಯನ್ನೆಂತೋ ಕಳೆದುಬಿಡೋಣ. ನನಗೂ ನಿನಗೂ ಈ ಮೂಡುವ
ಮುಳುಗುವ ಕೋಟಲೆಯೆಂಬುದು ಆಡಿದ ಹೊಲ, ಉಂಡ ಮದ್ದು, ಕಂಡ
ವಿಚಾರ!”೨೩, ೫೩ ಅಣ್ಣ ತಂಗಿಯನ್ನೂ, ತಂಗಿ ಅಣ್ಣನನ್ನೂ ಈ ರೀತಿ ಪರಸ್ಪರ
ಸಂತೈಸಿಕೊಳ್ಳುತ್ತಿದ್ದರು. ರಾಜಕುಮಾರರಾದ ಇವರು ಹೀಗೆ ಸಾಂತ್ವನ
ವಚನಗಳನ್ನಾಡುತ್ತಾ ಮುಂಬರಿದು ನಿಶ್ಚಿಂತೆಯಿಂದ ಆ ಮಾರಿಯ ಮನೆಯನ್ನು
ಪ್ರವೇಶಿಸಿದರು. ೫೪. ಮಾರಿಗುಡಿ ಯಮನ ಅಡಿಗೆಯ ಮನೆಯಂತಿತ್ತು.



ತಾಳುಗೆಯನುರ್ಚಿ ನೆತ್ತಿಯ
ಗಾಳಂ ಗಗನದೊಳೆಳಲ್ಪ ವಾರಿಯ ಬೀರರ್
ಪಾಳಿಯೊಳೆಸೆದರ್ ಪಾಪದ
ಜೋಳದ ಬೆಳಸಿಂಗೆ ಬೆರ್ಚುಗಟ್ಟಿದ ತೆಱದಿಂ ೫೭

ಆಡು ಕುಱಿ ಕೋಳಿ ಕೋಣನ
ಕೂಡಿದ ಪಿಂಡೊಳರೆ ಪಳರೆ ಮಾರ್ದನಿಯಿಂದಂ
ಕೂಡೆ ಬನಮಲ್ತುದುರ್ವರೆ
ಬೀಡೆಯಿನೆರ್ದೆಯೊಡೆದುದವಂ ಕೋಟಲೆಗಾಗಳ್ ೫೬

ದೆಸೆದೆಸೆಗೆ ನರಶಿರಂ ತೆ-
ತ್ತಿಸಿ ಮೆರೆದುವು ಮದಿಲೊಳಬ್ಬೆ ಪೇರಡಪಿನಪೆ
ರ್ಬೆಸನದ ಪೊವಗಣ ಜೀವ
ಪ್ರಸರಮಂ ಪಲವು ಮುಖದಿನವಳ್ಕಿಪವೋಲ್ ೫೭


ಅಂಗೈಗಳನ್ನೂ ಅಂಗಾಲುಗಳನ್ನೂ ಕತ್ತರಿಸಿ ಇಡುವ ವೀರರು ಕೆಲವರು, ಕಣ್ಣನ್ನು
ಕಿತ್ತು ದೇವಿಗೆ ಏರಿಸುವ ವೀರರು ಕೆಲವರು, ಕರುಳನ್ನು ಹೊರಕ್ಕೆಳೆದು
ತೋರಣವಾಗಿ ಕಟ್ಟುವವರು, ಕಾಲುಗಳನ್ನು ಉರಿಸಿ ರಕ್ತದಿಂದ ಅನ್ನವನ್ನು
ಬೇಯಿಸುವ ಕೆಲವರು ಅಲ್ಲಿ ಸುತ್ತಮುತ್ತಲೂ ತುಂಬಿಕೊಂಡಿದ್ದರು.
೫೫. ಬಾಯಿಯನ್ನು ಬಗಿದು ಅಂಗುಳು ಕಾಣುವಂತೆ ಮಾಡಿ, ಅಲ್ಲಿಗೆ ಗಾಳವನ್ನು
ಚುಚ್ಚಿ ಆ ಗಾಳವನ್ನುನೆತ್ತಿಯಲ್ಲಿ ಹೊರಬರುವಂತೆಮಾಡಿ, ಎತ್ತರದಲ್ಲಿ ತೂಗಾಡಿಸುವ
ವೀರಪುರುಷರು ಸಾಲು ಸಾಲಾಗಿ ಕಾಣಿಸುತ್ತಿದ್ದರು. ಹೊಲಗಳಲ್ಲಿ ಪಕ್ಷಿಗಳನ್ನು
ಬೆಚ್ಚಿಸಿ ಓಡಿಸುವುದಕ್ಕಾಗಿ ಬೆರ್ಚುಗಳನ್ನು ಕಟ್ಟಿ ನಿಲ್ಲಿಸಿದಂತೆ ಇಲ್ಲಿ ಈ ವೀರರು
ಪಾಪದ ಬೆಳೆಯನ್ನು ರಕ್ಷಿಸುವುದಕ್ಕಾಗಿ ನಿಲ್ಲಿಸಲ್ಪಟ್ಟಿದ್ದರು. ೫೬. ಬಲಿಗಾಗಿ ತಂದಿದ್ದ
ಆಡು, ಕುರಿ, ಕೋಳಿ, ಕೋಣ ಮುಂತಾದ ಪ್ರಾಣಿಗಳ ಸಮುದಾಯವೆಲ್ಲ
ಭಯದಿಂದ ಕರ್ಕಶವಾಗಿ ಅರಚುತ್ತಿದ್ದುವು. ಈ ಅರಚಾಟದ ಪ್ರತಿಧ್ವನಿ ಆ ವನವನ್ನೆಲ್ಲ
ವ್ಯಾಪಿಸಿತ್ತು. ನೆಲ ಒಣಗಿ ಸ್ವಾಭಾವಿಕವಾಗಿ ಬಿರುಕು ಬಿಟ್ಟಿತು. ಆ ಮೂಕ
ಪ್ರಾಣಿಗಳ ಸಂಕಟಕ್ಕಾಗಿ ಇಡೀ ಕಾಡೇ ಅಳುವಂತೆ, ದುಃಖದಿಂದ ಭೂಮಿ

ಭೈರವನ ಜವನ ಮಾರಿಯ
ಮೂರಿಯವೋಲ್ ನಿಂದ ಮಾರಿದತ್ತಂ ಲಲಿತಾ-
ಕಾರರ ಧೀರರ ಬಂದ ಕು
ಮಾರರ ರೂಪಿಂಗೆ ಠಕ್ಕುಗೊಂಡಂತಿರ್ದಂ ೫೮

ಅರಸನ ಕೆಲಬಲದವರ್ಗಳ್
ಪರಸಿರೆ ಪರಸಿರೆ ನೃಪೇಂದ್ರನಂ ನೀವೆನೆ ಮಂ-
ದರಧೀರನಭಯರುಚಿ ನೃಪ
ವರ ನಿರ್ಮಲಧರ್ಮದಿಂದ ಪಾಲಿಸು ಧರೆಯಂ ೫೯

ಎಂದು ಪರಸಿದೊಡೆ ಪೊಯ್ಯದೆ
ನಿಂದು ನೃಪಂ ಮನದೊಳೆಂದನೀ ದೇಗುಲಮಂ
ಬಂದು ಪುಗಳೊಡನೆ ಜೀವಂ
ನಿಂದರಿಯದು ಮುನ್ನವಿನ್ನರಂ ಕಂಡರಿಯೆಂ ೬೦


ಎದೆಯೊಡೆದುಕೊಂಡಂತೆ ಭಾಸವಾಗುತ್ತಿತ್ತು. ೫೭. ಮಾರಿಗುಡಿಯ ಹೊರಗಣ
ಪ್ರಾಕಾರದ ಮೇಲೆ ಎಲ್ಲ ದಿಕ್ಕುಗಳಲ್ಲಿಯೂ ಬಲಿಯಾಗಿದ್ದ ಮನುಷ್ಯರ
ತಲೆಬುರುಡೆಗಳನ್ನು ಸಾಲಾಗಿ ಇರಿಸಲಾಗಿತ್ತು. ಮಾರಿದೇವಿ ಮಾಂಸವನ್ನು
ಬಹಳವಾಗಿ ಬಯಸಿ ಹೊರಗಣ ಜೀವಸಮುದಾಯವನ್ನು ಹಲವು ಮುಖಗಳಿಂದ
ನೋಡುತ್ತಾಳೋ ಎಂಬಂತೆ ಆ ನೋಟವು ಭಯಂಕರವಾಗಿತ್ತು. ೫೮. ಇವುಗಳ
ನಡುವೆ ಭೈರವನ, ಯಮನ, ಮಾರಿಯ ಮೂರಿಯಂತೆ೨೪ಮಾರಿದತ್ತನು
ನಿಂತಿದ್ದನು. ಲಲಿತಾಕಾರದ ಧೀರರಾದ ಆ ಇಬ್ಬರು ಮಕ್ಕಳು ಮಾರಿದತ್ತನ
ಸಮ್ಮುಖದಲ್ಲಿ ಬಂದು ನಿಂತರು. ಅವರ ಸ್ವರೂಪವನ್ನು ಕಂಡಾಗ ಅವನು
ದಿಗ್ಗಾಂತನಾಗಿಬಿಟ್ಟನು. ೫೯ ಅರಸನ ಅಕ್ಕಪಕ್ಕದವರು “ಹರಸಿರಿ, ಹರಸಿರಿ
ನಮ್ಮ ರಾಜೇಂದ್ರನನ್ನು !” ಎಂದು ಬೊಬ್ಬಿಟ್ಟರು. ಆಗ ಮಂದರಗಿರಿಯಂತೆ
ಧೀರನಾದ ಅಭಯರುಚಿಯು “ರಾಜಶೇಷ್ಠನೇ, ನಿರ್ಮಲಧರ್ಮದಿಂದ ಧರೆಯನ್ನು


ಕಿತ್ತ ಕರವಾಳ್ಗ ಮೆನಗಂ
ಮೃತ್ಯುವಿನಂತಿರ್ದ ಮಾರಿಗಂ ಬೆದರದೆ ನಿಂ-
ದರ್ತಿಯನೆ ನುಡಿದರಿವರ ನೆ
ಗುಳ್ತೆ ಕರಂ ಪಿರಿದು ಧೀರರಕಟ ಕುಮಾರರ್ ೬೧

ಜವಳಿವೆರೆ ಮನುಜರೂಪದಿ-
ನವನಿಯೊಳೊಗೆದಂತೆ ಕಾಂತಿ ಮೆರೆದಪುದಿಂದಿಂ-
ತಿವರ್ಗಳಚೆಲ್ವಿಕೆ ಕಣ್ಗಳ
ತವರಾಜಮನಿಂದು ಕಂಡೆನೀ ಬಾಲಕರಂ ೬೨

ಆವ ಕುಲಮಾರ ತನಯರಿ
ದಾವೆಡೆಯಿಂ ಬಂದಿರೇಕೆ ಬಾಲ್ಯದೊಳೀ ಭಿ-
ಕ್ಷಾವೃತ್ತಿಯೆಂದು ಬೆಸಗೊಳೆ
ಭೂವರ ಕೇಳೆಂದು ಕುವರನಂದಿಂತೆಂದಂ ೬೩


ಪಾಲಿಸು!” ಎಂದು ಹರಸಿದನು. ೬೦. ಈ ಆಶೀರ್ವಚನವನ್ನು ಕೇಳುವುದೇ
ತಡ, ರಾಜನು ಕಡಿದಿಕ್ಕದೆ “ಇದೇನು! ಈ ಮೊದಲೆಲ್ಲ ಈ ದೇವಾಲಯದ
ಒಳಗೆ ಹೊಕ್ಕ ಎಲ್ಲರಿಗೂ ಜೀವವೇ ಹೋದಂತಾಗುತ್ತಿತ್ತು. ಈ ರೀತಿ
ಅಂಜದಿರುವವರನ್ನು ನಾನಿದುವರೆಗೂ ಕಂಡಿಲ್ಲ! ೬೧. ಹಿರಿದ ಖಡ್ಗಕ್ಕೂ,
ನಿಂತ ನನಗೂ, ಮೃತ್ಯು ಸ್ವರೂಪಿಯಾದ ಮಾರಿಗೂ ಒಂದಿಷ್ಟೂ ಹೆದರದೆ,
ಧೈಯ್ಯದಿಂದ ನಿಂತುಕೊಂಡು ಪ್ರೀತಿಯಮಾತನ್ನೇ ಇವರು ಆಡಿದ್ದಾರೆ. ಇವರ
ನಡತೆ ಬಹಳ ಹಿರಿದು! ನಿಜವಾಗಿಯೂ ಈ ಕುಮಾರರು ಧೀರರೇ ಸರಿ! ೬೨.
ಜೋಡಿ ಚಂದ್ರರು ಮನುಷ್ಯ ರೂಪವನ್ನು ಧರಿಸಿ ಈ ಭೂಲೋಕದಲ್ಲಿ
ಹುಟ್ಟಿಬಂದಂತೆ ಇವರ ಕಾಂತಿ ಮೆರೆಯುತ್ತಾ ಇದೆ. ನಿಜವಾಗಿಯೂ ಇವರ
ಸೌಂದರ್ಯವು ಕಣ್ಣಿಗೆ ತವರಾಜದಂತೆ ಮಧುರವಾಗಿದೆ. ಈ ಬಾಲಕರನ್ನು
ಇಂದು ನಾನು ಕಂಡೆನು. ೬೩. ಮಕ್ಕಳೇ, ನಿಮ್ಮ ಕುಲವಾವುದು? ಯಾರ
ಮಕ್ಕಳು ನೀವು ? ಎಲ್ಲಿಂದ ಬಂದಿರಿ? ಈ ಎಳೆಯ ವಯಸ್ಸಿನಲ್ಲಿ ಈ ಭಿಕ್ಷಾ
ವೃತ್ತಿಯನ್ನು ಕೈಕೊಂಡುದೇಕೆ ?” ಎಂದು ಮಾರಿದತ್ತನು ಕೇಳಿದನು.



ಧರ್ಮಪರರ್ಗಲ್ಲದೆಮ್ಮಯ
ನಿರ್ಮಲ ಚಾರಿತ್ರಮಿಂಬುಕಯ್ಯದು ನಿನಗಾ
ಧರ್ಮದ ಪೋದ ಪೊಲಂಬದು
ನರ್ಮದೆಯಿಂ ಗಂಟಿದೇಕೆ ಕೇಳ್ದಪೆಯಮ್ಮಂ ೬೪

ಆ ಮಾತನ್ನೆ ಗಮರ್ಕೆಲೆ
ಭೂಮೀಶ್ವರ ನಿನಗೆ ಪಥ್ಯಮಾವುದದಂ ಮಾ
ಡಾಮೂಲಚೂಲಮೆಮಗೆ ತ
ಳಾಮಲಕಂ ಭವನಿಬದ್ಧಮವಿಳಿಸಿತೆಮ್ಮಂ ೬೫

ಗುಣಿಗಳ ಗುಣರತ್ನವಿಭೂ-
ಷಣಮೆಸೆವುದೆ ವಿಕಳಹೃದಯರಾದವರ್ಗೆ ನೃಪಾ
ಗ್ರಣಿ ಪೇಟ ತುಪ್ಪೇಳೆದ ದ
ರ್ಪಣದೊಳ್ ಪಜ್ಜಳಿಸಲಾರ್ಪುದೇ ಪ್ರತಿಬಿಂಬಂ ೬೬


೬೪. “ಅರಸನೇ ಕೇಳು” ಎಂದು ಉಪಕ್ರಮಿಸಿದನು ಅಭಯರುಚಿ. “ನಮ್ಮ
ಚಾರಿತ್ರ್ಯ ನಿರ್ಮಲವಾದುದು. ಅದು ಧರ್ಮಪರರಾದವರಿಗೆ ಮಾತ್ರ
ರುಚಿಸಬಹುದಲ್ಲದೆ ಇತರರಿಗೆ ಮೆಚ್ಚಲಾರದು. ನಿನ್ನ ಮಟ್ಟಿಗೆ ಹೇಳುವುದಾದರೆ,
ಆ ಧರ್ಮದ ದಾರಿಯು ನರ್ಮದೆಗಿಂತಲೂ ದೂರ೨೫ ನಮ್ಮನ್ನು ಕೇಳುವುದೇಕೆ?
೬೫. ಆ ಮಾತು ಹಾಗಿರಲಿ, ಎಲೆ ಭೂಪತಿ, ನಿನಗೆ ಯಾವುದು ಪಥ್ಯವೆನಿಸುವುದೋ
ಅದನ್ನು ನೀನು ನೆರವೇರಿಸಬಹುದು. ನಮಗಂತೂ ಬುಡದಿಂದ ತುದಿಯವರೆಗಿನ
ಎಲ್ಲ ವಿಷಯವೂ ಅಂಗೈನೆಲ್ಲಿಯಾಗಿದೆ. ಭವ ಬಂದನವೇ ನಮ್ಮನ್ನು ಬಗೆ
ಬಗೆಯ ದುಃಖಗಳಿಗೆ ಈಡುಮಾಡಿದೆ. ೬೬. ಮಹಾರಾಜ, ಗುಣವಂತರ ಗುಣ
ರತ್ನಾಭರಣಗಳು, ಕೆಟ್ಟ ಹೃದಯವುಳ್ಳವರಿಗೆ ಸೊಗಸಾಗಿ ಕಾಣಲಾರವು. ಕನ್ನಡಿಗೆ
ಜಿಡ್ಡುತಾಗಿದ್ದರೆ ಅದರಲ್ಲಿ ಪ್ರತಿಬಿಂಬವು ಉಜ್ವಲವಾಗಿ ಕಾಣುವುದೆ? ಎಂದು

ಇಂತೆಂಬುದುಮಾ ಕುವರನ
ದಂತಪ್ರಭೆಯೆಂಬ ಶೀತಕರನುದಯದಘ
ಧ್ವಾಂತೌಘಮಧುಪಮಾಲಿಕೆ
ಯಂ ತೊಲಗಿಸಿ ಮುಗಿದುದವನ ಕರಸರಸಿರುಹಂ೬೭

ಧನಮಂ ಕಂಡ ದರಿದ್ರನ
ಮನದವೊಲೆರಗಿದವು ಪರಿಜನಂಗಳ ನೊಸಲಾ
ವಿನಯನಿಧಿಗಾ ಕುಮಾರಕ
ನನುರಾಗದೆ ಮಾರಿದತ್ತ ವಿಭುಗಿಂತೆಂದಂ ೬೮

ಭಲರೆ ನೃಪೇಂದ್ರಾ ದಯೆಯೊಳ್
ನೆಲೆಗೊಳಿಸಿದೆ ಮನಮನಮಮ ನೀನ್ ಕೇಳ್ದುದು ಸ
ತ್ಫಲವಾಯ್ತು ಧರ್ಮಪಥದೊಳ್
ಸಲೆ ಸಂದಪೆ ಕಾಲಲಬ್ಧಿ ಪೊಲಗಡಿಸುವುದೇ ೬೯



ಹೇಳಿದನು ಅಭಯರುಚಿ ೬೭. ಒಡನೆಯೇ ಮಾರಿದತ್ತನ ಕರಕಮಲವು
ಮುಚ್ಚಿಕೊಂಡಿತು. ಅಭಯರುಚಿ ಕುಮಾರನು ಮಾತಾಡುತ್ತಿದ್ದಾಗ ಅವನ ಹಲ್ಲಿನ
ಕಾಂತಿ ಹಬ್ಬಿ ಚಂದ್ರೋದಯವಾಯಿತು. ಆಗ ಪಾಪದ ಕತ್ತಲೆಯ ಮೊತ್ತವಲ್ಲ
ಎತ್ತೆತ್ತಲೋ ಮಾಯವಾಯಿತು. ತಾವರೆ ಮುಚ್ಚಿಕೊಳ್ಳುವಾಗ ಭ್ರಮರಗಳು ಎದ್ದು
ಹೋಗುವಂತೆ ಮಾರಿದತ್ತನ ಪಾಪಗಳು ತೊಲಗಿದವು.೬೮. ಧನವನ್ನು
ಕಂಡಾಗ ದರಿದ್ರನ ಮನಸ್ಸು ಅದಕ್ಕೆರಗುತ್ತದೆ. ಹಾಗೆಯೇ ರಾಜನ ಸೇವಕ
ಜನರೆಲ್ಲರ ಲಲಾಟಗಳೂ ಆ ವಿನಯನಿಧಿಯಾದ ಅಭಯರುಚಿಗೆ ಮಣಿದವು.
ಆಗ ಆ ಕುಮಾರನು ಮಾರಿದತ್ತನಿಗೆ ಪ್ರೀತಿ ಪೂರ್ವಕವಾಗಿ ಹೀಗೆಂದನು. ೬೯.
“ಶಹಭಾಸ್ ರಾಜೇಂದ್ರ ನಿನ್ನ ಮನಸ್ಸನ್ನು ಈಗಲೀಗ ದಯೆಯಲ್ಲಿ ನೆಲೆಗೊಳಿಸಿದೆ.
ಅಹಹಾ! ನೀನು ಪ್ರಶ್ನೆ ಮಾಡಿದುದು ಒಳ್ಳೆಯದಕ್ಕೇ ಆಯಿತು. ಇನ್ನು ಮುಂದೆ
ನೀನು ಧರ್ಮಮಾರ್ಗದಲ್ಲಿ ಸರಿಯಾಗಿ ಸಾಗಲಿರುವೆ. ಕಾಲಲಬ್ದಿ

ಎಂತು ಬೆಸಗೊಂಡೆ ಬೆಸಗೊಂ
ಡಂತಿರೆ ದತ್ತಾವಧಾನನಾಗು ಜಯಶ್ರೀ
ಕಾಂತೆಯುಮಂ ಪರಮಶ್ರೀ
ಕಾಂತೆಯುಮಂ ನಿನಗೆ ಕಡುಗಮೀ ಸತ್ಕಥನಂ ೭೦

ಶ್ರೀಮತ್ತೀರ್ಥಾಧಿಪನ ವದನಾಂಭೋಜದಿಂ ಸರ್ವಭಾಷಾ
ಸಾಮಾನ್ಯಂ ಶ್ರೀವಚನಮೊಗೆದತ್ತಾ ವಚೋಮಾರ್ಗದಿಂ ಮ
ತ್ತಾಮುಂ ಕಂಡುಂಡುದರ ಕಥೆಯಂ ಪೇಳ್ದಪೆಂ ಕೇಳಿಮೆಂದಾ
ಭೂಮೀಶಂಗಂ ದಭಯರುಚಿಯಿಂತೆಂದು ಪೇಳಲ್ ತಗುಳ್ತಂ ೭೧

ಅಭಯರುಚಿಕುಮಾರಂ ಮಾರಿದತ್ತಂಗೆ ಹಿಂಸಾ
ರಭಸಮತಿಗೆ ಸಯ್ಪಂ ಪೇಳ್ದು ಧರ್ಮಕ್ಕೆ ತಂದೀ
ಶುಭಕಥನಮನತ್ಯಾನಂದದಿಂ ಕೇಳ್ವ ಭವ್ಯ
ಪ್ರಭುಸಭೆಗೆಸೆದಿರ್ಕುಂ ಮಂಗಳಂ ಶ್ರೀವಿಕಾಸಂ ೭೨



ದಾರಿತಪ್ಪಿಸುವುದೇ?೨೭ ೭೦. ಮಹಾರಾಜಾ, ನೀನು ಹೇಗೆ ಕೇಳಿದೆಯೋ
ಅದೇ ರೀತಿಯಲ್ಲಿಯೇ ಮನಸ್ಸುಕೊಟ್ಟು ಆಲಿಸು. ನಾನು ಹೇಳಲಿರುವ ಒಳ್ಳೆಯ
ಕಥೆ ನಿನಗೆ ಜಯಶ್ರೀಯನ್ನೂ ಮುಕ್ತಿಕಾಂತೆಯನ್ನೂ ಕೊಡುವುದರಲ್ಲಿ ಸಂದೇಹವಿಲ್ಲ.
೭೧. ಶ್ರೀಮತ್ತೀರ್ಥಂಕರನ ಮುಖಕಮಲದಿಂದ ಹೊರಟಿತು ಮಂಗಲ ವಚನ.
ಅದು ಎಲ್ಲ ಭಾಷೆಗಳಿಗೂ ಸಮಾನವಾದುದು. ಆ ವಚನ ಮಾರ್ಗವಾಗಿಯೇ,
ನಾವು ಕಂಡು ಉಂಡುದರ ಕಥೆಯನ್ನು ಹೇಳುತ್ತೇವೆ, ಕೇಳಿರಿ” ಎನ್ನುತ್ತಾ
ಅಭಯರುಚಿ ಕುಮಾರನು ಮಾರಿದತ್ತ ರಾಜನಿಗೆ ಕಥೆಯನ್ನು ಹೇಳಲಾರಂಭಿಸಿದನು.
೭೨. ಹಿಂಸೆಯಲ್ಲೇ ಮನಸ್ಸು ಮುಂದಾಗುತ್ತಿದ್ದ ಮಾರಿದತ್ತನಿಗೆ ಅಭಯರುಚಿ
ಕುಮಾರನು ಪುಣ್ಯದ ವಿಷಯವನ್ನು ಹೇಳಿ ಅವನನ್ನು ಧರ್ಮದ ದಾರಿಗೆ
ತಂದನು. ಇಂತಹ ಈ ಮಂಗಲಕರವಾದ ಕಥೆಯನ್ನು ಅತ್ಯಾನಂದದಿಂದ ಕೇಳುವ
ಭವ್ಯಮಯಸಭೆಗೆ ಮಂಗಲ ಸಂಪದ್ವಿಲಾಸವು ಶೋಭಿಸುತ್ತದೆ.೨೮

೩೮

ಯಶೋಧರ ಚರಿತೆ

ಎರಡನೆಯ ಅವತಾರ

ಆ ಕಥೆ ಮತ್ತೆಂತೆಂದೊಡಿ
ಳಾಕಾಂತೆಗವಂತಿ ವಿಷಯಮಾಸ್ಯದವೋಲ್ ಶೋ
ಭಾಕರಮಾಯ್ತದರೊಳ್ ನಾ
ಸಾಕುಟ್ಮಳದಂತೆ ಮೆರೆಪುದುಜ್ಜೇನಿಪುರಂ

ಆ ಪುರದರಸಂ ನತಭೂ
ಮೀಪಾಲರ ಮಕುಟಮಸ್ತಕದೆ ನಿಜತೇಜೋ
ರೂಪಕಮ ಪದ್ಯರಾಗದ
ದೀಪದವೊಲ್ ಮೆರೆವಿನಂ ಯಶೌಘಂ ಮೆರೆವಂ

ದೊರೆವಡೆದ ಯಶೌಘನ ಭೂ
ವರತಿಳಕನ ಕಣ್ಣಳಂಗರಕ್ಕರ್‌ ಮನಮಾ
ಭರಣಂ ರಾಜ್ಯಶ್ರೀ ಸಹ
ಚರಿಯನೆ ಸಂದತ್ತು ಚಂದ್ರಮತಿಗರಸಿತನಂ



೧. ಆ ಕಥೆಯು ಹೀಗಿದೆ : ಭೂದೇವಿಯ ಮುಖದಂತೆ ಅವಂತಿದೇಶವು ಶೋಭಿಸುತ್ತಿದೆ.
ಅದರಲ್ಲಿ ಮುಗುಳುಮೂಗಿನಂತೆ ಮೆರೆಯುತ್ತದೆ ಉಜ್ಜಯಿನಿಪುರ ೨. ನಗರಕ್ಕೆ ಅರಸನಾಗಿ
ಯಶ್‌ಘನು ಮೆರೆಯುತ್ತಿದ್ದನು. ಅನೇಕ ಭೂಪಾಲಕರು ಅವನಿಗೆ ನಮಸ್ಕರಿಸುವಾಗ ಅವರ
ಕಿರೀಟವುಳ್ಳ ತಲೆಗಳಲ್ಲಿ ಯಶೌಘನ ತೇಜಸ್ಸೇ ಪದರಾಗದ ದೀಪದಂತೆ ಬೆಳಗುತ್ತಿತ್ತು. ೩.
ಹೆಸರುಗೊಂಡ ರಾಜರಲ್ಲಿ ತಿಲಕಪ್ರಾಯನಾದ ಯಶೌಘನ ರಾಣಿ ಚಂದ್ರಮತಿ. ಆತನ ಕಣ್ಣುಗಳೇ
ಅಂಗರಕ್ಷಕರಂತೆ ಅವಳನ್ನು ಕಾಪಾಡುತ್ತವೆ. ಆತನ ಮನಸ್ಸು ಆಕೆಗೆ ಆಭರಣವಾಗಿದೆ.
ರಾಜ್ಯಲಕ್ಷ್ಮಿಯೇ ಅವಳ ಒಡನಾಡಿಯಾಗಿದ್ದಾಳೆ ಎಂದಮೇಲೆ ಅವಳಿಗೂ

ಭರದಿಂದವರ್ಗಳ ಬೇಂಟಮ
ನಿರುಳಿಂದು ಪಗಲ್ ವಸಂತನಿರುಳುಂ ಪಗಲುಂ
ಸುರಭಿಶರನಂಗಜಾತಂ
ಗರಟಿಗೆ ಮೆಯ್ಗಾಪು ಮೆರೆಯೆ ಬಿಡದೋಲಗಿಪರ್

ಅನಿತೆಸೆವ ಚಂದ್ರಮತಿಗಂ
ಜನಪತಿಗಂ ಪುಟ್ಟಿದಂ ಯಶೋಧರನೆಂಬಂ
ಜನಮೋಹನಬಾಣಂ ಕ
ರ್ಬಿನ ಬಿಲ್ಲಂ ನನೆಯ ನಾರಿಗಂ ಪುಟ್ಟಿದವೊಲ್

ನೋಡುವ ಕಣ್ಣಳ ಸಿರಿ ಮಾ
ತಾಡುವ ಬಾಯ್ಗಳ ರಸಾಯನಂ ಸಂತಸದಿಂ
ಕೊಡುವ ತೋಳ್ಗಳ ಪುಣ್ಯಂ
ನಾಡಾಡಿಯ ರೂಪೆ ಕುವರ ವಿದ್ಯಾಧರನಾ



ಅರಸಿತನವು ಸರಿಯಾಗಿ ನೆಲೆಗೊಂಡಿದೆ. ೪. ರಾತ್ರಿಯ ಹೊತ್ತು ಚಂದ್ರನೂ,
ಹಗಲಿನ ಹೊತ್ತು ವಸಂತನೂ ಸರದಿ ಪ್ರಕಾರ, ಅಂಗರಕ್ಷಕರಾಗಿದ್ದು ಅವರ
ಅನುರಾಗವನ್ನು ಕಾಪಾಡುತ್ತಿದ್ದಾರೆ. ಹಗಲೂ ರಾತ್ರಿಯೂ ಕಾಮನೇ ಅವರ
ಅನುರಾಗದ ಸೇವೆಯನ್ನು ಮಾಡುತ್ತಿದ್ದಾನೆ. ೫. ಅಷ್ಟೊಂದು ಪ್ರೇಮದಿಂದ
ಶೋಭಿಸುತ್ತಿದ್ದ ಚಂದ್ರಮತಿಗೂ ಯಶೌಘನಿಗೂ ಯಶೋಧರನೆಂಬವನು
ಮಗನಾಗಿ ಹುಟ್ಟಿದನು, ಕಬ್ಬಿನ ಬಿಲ್ಲಿಗೂ ನೆನೆಯ ಹಗ್ಗಕ್ಕೂ ಜನಮೋಹನ ಬಾಣವು
ಹುಟ್ಟುವಂತೆ೩೦ ೬. ಕುಮಾರ ಯಶೋಧರನು ಸೌಂದರ್ಯದಲ್ಲಿ ಅಸಾಮಾನ್ಯವಾಗಿ
ವಿದ್ಯಾಧರನತೆ ಅತ್ಯಾಕರ್ಷಕನಾಗಿದ್ದನು. ಅವನನ್ನು ಎತ್ತಿ ಮುದ್ದಾಡುವುದು ತೋಳುಗಳ

ಎಳವೆಳ್ದಿಂಗಳ್ ನನೆಗಣೆ
ಮಳಯಾನಿಳನಿಲ್ಲಿ ಮೂವರೊಳಗಾರೊ ಕುತೂ-
ಹಳಮಾದಪುದೆನ್ನದ ಕ
ಸ್ಕೊಳವೆ ಯಶೋಧರಕುಮಾರನಂ ಕಾಣಲೊಡಂ

ಪರನೃಪರ ರಾಜ್ಯಲಕ್ಷ್ಮಿಯ
ಕುರುಳಾಕರ್ಷಣದ ನೀಳ ತೋಳ್ ಮೆರವುದು ಪೇ
ರುರದೊಳ್ ನೆಲಸಿದ ಲಕ್ಷ್ಮಿ
ಕರಿಣಿಗೆ ಬಾಳಿಸಿದ ರನ್ನದಮಳಂಬದವೋಲ್

ಅಮೃತಮತಿ ಗಡ ಯಶೋಧರ
ನ ಮನಃಪ್ರಿಯೆಯಾಕೆ ದೀವಮಾಗೆ ಪುಳಿಂದಂ
ಸುಮನೋಬಾಣಂ ತದ್ಭೂ
ರಮಣನನೊಲಿದಂತೆ ಗೋರಿಗೊಳಿಸುತ್ತಿರ್ಕುಂ



ಪುಣ್ಯ. ೭. ಅವನನ್ನು ಕಾಣುವಾಗ ಇದೇನು ಬಾಲಚಂದ್ರನೋ ಮನ್ಮಥನ
ಬಾಣವೋ ಅಥವಾ ಮಲಯಮಾರುತನೋ ಎಂಬ ಕುತೂಹಲವುಂಟಾಗುತ್ತಿತ್ತು
ನೋಡಿದ ಎಲ್ಲರಿಗೂ. ೮. ಅವನ ತೋಳುಗಳೆರಡೂ ಧೀರ್ಘವಾಗಿ
ನೀಡಿಕೊಂಡಿದ್ದುವು, ಶತ್ರುರಾಜರ ರಾಜಲಕ್ಷ್ಮಿಯ ಮುಡಿ ಹಿಡಿದೆಳೆಯುವ
ಕಾರ್ಯದಲ್ಲಿ ಅವು ತೊಡಗಿದುದರಿಂದ ಅವನ ವಿಶಾಲವಾದ ಎದೆಯಲ್ಲಿ ನೆಲಸಿದ
ಲಕ್ಷ್ಮಿ ಕರಿಣಿ (ಲಕ್ಷ್ಮಿಯೆಂಬ ಹೆಣ್ಣಾನೆ)ಯನ್ನು ಬೇರೆಡೆಗೆ ಹೋಗದಂತೆ ತಡೆಯಲು
ಇಕ್ಕಡೆಗಳಲ್ಲೂ ಎರಡು ರತ್ನದ ಕಂಬಗಳನ್ನು ನೆಟ್ಟಂತೆ ಅವನ ಬಾಹುಗಳು
ಮೆರೆಯುತ್ತಿದ್ದವು. ೯. ಯಶೋಧರನ ಮನದನ್ನೆಯೆ ಅಮೃತಮತಿ, ಬೇಟೆಗಾರನಾದ
ಕಾಮನಿಗೆ ಆ ಭೂಪತಿಯನ್ನು ಆಕರ್ಷಿಸಿ ಸೆರೆಹಿಡಿಯುವ ಮನಸ್ಸಾಯಿತು.
ಅವನು ಅಮೃತಮತಿಯನ್ನೇ ದೀವವನ್ನಾಗಿ ಮಾಡಿ೩೧ ಮೋಹಗೊಳ್ಳುವಂತೆ
ಮಾಡಿದನು. ಯಶೋಧರನು ಅಮೃತಮತಿಯನ್ನು ಬಹುವಾಗಿ ಮೆಚ್ಚಿಕೊಂಡಿದ್ದನು.

ಕವಚಹರನಾದ ತನಯನೊ
ಭವನೀಭರಮೆಂಬ ಕನಕಮಣಿಮಂಡನ ಭಾ
ರವಳುಪಿ ನೀಡುವವೋಲಾ
ಡುವನಂಗಜರಾಗ ಶರಧಿಯೊಳಗೆ ಯಶೌಘಂ ೧0

ಅಗುಳ್ದಡಪುವ ಕಾಲದ ಗರ
ಟಗೆಯೊಳ್ ನೃಪಚಿತ್ತಚೋರನಂ ತೋರುವ ದೀ
ವಿಗೆಯೆನೆ ಸಂಮುಖಮಾಯ್ತೋ
ಲಗದೊಳ್ ನಿರ್ದಿಷ್ಟ ಪಳಿತಚಿಕುರಂ ಮುಕುರಂ ೧೧

ನರೆಯೆಂಬ ಹೊರಸು ಮೊಗಮೆಂ
ಬರಮನೆಯಂ ಪೊಕ್ಕೊಡಂಗನಾಲೋಕನಮೆಂ
ಬರಸೆಂತಿರ್ದಪನೆಂದಾ
ನರನಾಥಂ ಸತೊರೆದನಖಿಳವಿಷಯಾಮಿಷಮಂ ೧೨



೧೦. ಕವಚವನ್ನು ಧರಿಸಿಕೊಂಡು ಮುಂದಾಗುವ ವಯಸ್ಸು ಮಗನಿಗೆ ಬಂದುದನ್ನು
ಕಂಡ ಯಶೌಘನು ರಾಜ್ಯಭಾರತಿಯ ಬಂಗಾರದ ರತ್ನಾಭರಣವನ್ನು ಅವನ
ಮೇಲೆ ಹೊರಿಸಿ ತಾನು ಮನ್ಮಥಾನುರಾಗದ ಕಡಲಲ್ಲಿ ಓಲಾಡುವುದಕ್ಕೆ ಅವಕಾಶ
ಮಾಡಿಕೊಂಡನು. ೧೧. ಕಳ್ಳನು ಕನ್ನವನ್ನು ಕೊರೆದು ಸಿಕ್ಕಿಬೀಳುವ ಸಂಧರ್ಭವು
ಬಂದಿತು; ಆಗ ಅವನನ್ನು ಅನಿರೀಕ್ಷಿತವಾಗಿ ಕಾಣಿಸಿಕೊಡುವುದು ಒಂದು ಸಣ್ಣ
ದೀಪದ ಬೆಳಕು, ಶೃಂಗಾರ ರಸಮಗ್ನನಾಗಿ ತಪ್ಪು ದಾರಿ ಹಿಡಿದಿದ್ದ ಯಶೌಘನೂ
ಸರಿದಾರಿಗೆ ಬರುವ ಸುಸಂದರ್ಭವು ತನ್ನಿಂದ ತಾನೇ ಬಂದಂತೆ, ಒಂದು ದಿನ
ಅವನು ರಾಜಸಭೆಯಲ್ಲಿ ಕನ್ನಡಿಯಲ್ಲಿ ತನ್ನ ಮುಖವನ್ನು ನೋಡಿದಾಗ, ತನ್ನ
ಕೂದಲು ನರೆತುದು ಕಾಣಿಸಿತು. ೧೨. ವಿಚಾರದ ಬೆಳಕಿನಲ್ಲಿ ಅವನು
ಬೇರೊಂದನ್ನೇ ಕಂಡನು. “ಅರಮನೆಯಂತಿರುವ ತನ್ನ ಮುಖದೊಳಕ್ಕೆ ನರೆಯೆಂಬ
ಕಾಡು ಪಾರಿವಾಳವು ಹೊಕ್ಕು ಅಮಂಗಲವನ್ನುಂಟುಮಾಡಿದೆ. ಈ ಅರಮನೆಯಲ್ಲಿ
ಕಾಮಿನೀದರ್ಶನ ಎಂಬ ಅರಸನು ಉಳಿಯುವುದಾದರೂ ಹೇಗೆ?” ಈ ಯೋಚನೆ
ಬಂದ ಒಡನೆ ಯಶೌಘನು ಎಲ್ಲ ಇಂದ್ರಯಾಕರ್ಷಣೆಗಳನ್ನೂ ಪರಿತ್ಯಾಗ

ಧರಣೀ ಭಾರಕ್ಕೆ ಯಶೋ
ಧರನನೊಡಂಬಡಿಸಿ ನೂರ್ವರರಸುಗಳೊಡನಾ
ದರದಿಂ ಕಂಬಂದಪ್ಪಿದ
ಕರಿಯಂತೆ ತಪೋವನಕ್ಕೆ ನಡೆದಳೇಶಂ ೧೩

ಧರಣೀಗಣಿಕೆ ಯಶೌಘನ
ವಿರಹದ ಪರಿತಾಪಮಂ ಯಶೋಧರ ಯಶೋ
ಹರಿಚಂದನಚರ್ಚೆಯಿನು
ದ್ದುರ ದಾನಾಸಾರಸೇಕದಿಂ ಮಗ್ಗಿಸಿದಳ್ ೧೪

ಗುರುಬಿಟ್ಟ ರಾಜ್ಯಲಕ್ಷ್ಮಿಗೆ
ವರನಾದೈ ಕಷ್ಟಮೆಲೆ ಯಶೋಧರ ನಿನ್ನೊಳ್
ನೆರೆದಿರ್ಪುದಲ್ಲದೆಂಬಂ
ತಿರೆ ಪೋದಳ್ ಕೀರ್ತಿಕಾಂತೆ ದೆಸೆಯೆಂತುವರಂ ೧೫



ಮಾಡಿದನು. ೧೩. ಆದುದರಿಂದ ಭೂಮಿಯ ಭಾರವನ್ನು ವಹಿಸಿಕೊಳ್ಳುವಂತೆ
ಯಶೋಧರನನ್ನು ಒಪ್ಪಿಸಿದನು. ಈಗ ಯಶೌಘನಿಗೆ ಕಂಬಕ್ಕೆ ಕಟ್ಟಿಹಾಕಿದ
ಆನೆಗೆ ಬಿಡುಗಡೆ ದೊರೆತಂತೆ ಸಂತೋಷವಾಯಿತು. ಅವನು ತಪೋವನಕ್ಕೆ
ತೆರಳಿದನು. ಅವನನ್ನು ಹಿಂಬಾಲಿಸಿ ಬೇರೆ ನೂರ್ವರು ರಾಜರೂ ಹೊರಟು
ಹೋದರು. ೧೪. ಯಶೌಘನು ಹೊರಟು ಹೋದುದರಿಂದ ಭೂದೇವಿಗೆ
ವಿರಹದ ಸಂತಾಪ ಹೆಚ್ಚಿಕೊಂಡಿತು. ಈ ಉರಿಯನ್ನು ಉಪಶಮಿಸುವುದಕ್ಕಾಗಿ
ಅವಳು ಯಶೋಧರನ ಕೀರ್ತಿಯೆಂಬ ಹರಿಚಂದನದ ಲೇಪವನ್ನು
ಬಳಿದುಕೊಂಡಳು; ಮಾತ್ರವಲ್ಲ, ಯಶೋಧರನು ನಿರಂತರವೂ ದಾನ ಮಾಡುವಾಗ
ಹೊಯ್ಯುವ ನಿರಂತರವಾದ ನೀರ ಮಳೆಯಿಂದಲೂ ನೆರವು ಪಡೆದಳು. ೧೫.
“ಅಯ್ಯೋ, ಕಷ್ಟವೇ ! ತಂದೆ ತೊಲಗಿಸಿ ಬಿಟ್ಟ ರಾಜ್ಯಲಕ್ಷ್ಮಿಯನ್ನು ನೀನು
ಕೈಹಿಡಿದೆಯಲ್ಲಾ ! ನಿನ್ನಂಥವನ ಒಡನಾಟವು ನನಗೆ ಸಲ್ಲದು” ಎಂಬಂತೆ
ಯಶೋಧರನನ್ನು ಬಿಟ್ಟು ದಿಗಂತದವರೆಗೂ ಹೋದಳು ಅವನ ಕೀರ್ತಿಕಾಮಿನಿ೩೩

ಅಳುವ ನಿಜವಿಜಯ ತೇಜೋ
ಕಳೆದನೊ ನೃಪತಿ ವಸುಂಧರೆ
ಬಳದಿಂ ಪರನೃಪರ ಗಂಡಗಾಳಿಕೆಯ ನದೇಂ
ಪೊಳಪಂ ತಳೆದೆಯ್ದೆ ರಾಗಮಂ ಬೀರುವಿನಂ೧೬

ಅಳವಡೆ ಭುಜದೊಳ್ ಮೃಗಮದ
ತಿಳಕದವೊಲ್ ಸಕಲಧರಣಿ ಯೌವನ ಭೂಪಾ
ವಳಿಯನೆ ತಿರ್ದುವನಾ ನೃಪ
ಕುಳಶೇಖರನಮೃತಮತಿಯ ಮುಖದರ್ಪಣಗೊಳ್ ೧೭

ಅವನಿಪನೊರ್ಮೆ ಸಭಾಮಣಿ
ಭವನದಿನಂಬರ ತರಂಗಿಣೀ ಪುಳಿನಮನೇ
ರುವ ಹಂಸನಂತೆ ಶಯ್ಯಾ
ಧವಳ ಪ್ರಾಸಾದ ತಳಮನೇರಿದನರಸಾ೧೮


೧೬ಅವನ ವಿಜಯದ ತೇಜಸ್ಸು ಎಲ್ಲ ಕಡೆಗೂ ಪಸರಿಸಿತು. ಇದರ ಬಲದಿಂದ
ಅನ್ಯ ನರಪತಿಗಳ ಗಂಡಗಾಳಿಕೆಯೆಲ್ಲ ಕಳೆದು ವಸುಂಧರೆ ಉಜ್ವಲತೆಯನ್ನು
ತಾಳಿಕೊಂಡಳು; ಯಶೋಧರನಲ್ಲಿ ಬಹಳ ಅನುರಾಗವನ್ನು ಬೀರಿದಳು. ೧೭.
ಇಡೀ ಭೂಮಂಡಲವು ಅವನ ಹೆಗಲೇರಿತು. ಆದರೆ ಆ ರಾಜಕುಲಶೇಖರನಿಗೆ
ಅದು ಕಸ್ತೂರಿಯ ತಿಲಕದಂತೆ ಅಲಂಕಾರಪ್ರಾಯವಾಗಿತ್ತೇ ಹೊರತು,
ಹೊರೆಯಾಗಿರಲಿಲ್ಲ. ತಾರುಣ್ಯದ ಆಭರಣದಂತೆ ಒದಗಿದ ಭೂಮಿಯನ್ನು ಅವನು
ಅಮೃತಮತಿಯ ಮುಖದರ್ಪಣದಲ್ಲಿ ತಿದ್ದಿಕೊಳ್ಳುವನು. ೧೮. ಅರಸ, ಒಮ್ಮೆ
ಯಶೋಧರನು ರತ್ನಖಚಿತವಾದ ಸಭಾಮಂದಿರದಲ್ಲಿದ್ದವನು, ಅಲ್ಲಿಂದೆದ್ದು
ಆಕಾಶಗಂಗೆಯ ಪುಲಿನಸ್ಥಳಕ್ಕೆ ಏರಿ ಹೋಗುವ ಹಂಸದಂತೆ ಶುಭ್ರವಾದ
ಪ್ರಾಸಾದವನ್ನೇರಿ ತನ್ನ ಶಯ್ಯಾಗೃಹವನ್ನು ಪ್ರವೇಶಿಸಿದನು.

ಪರಿಮಳದ ತೂಬನೆತ್ತಿದ
ನರಲಂಬಂ ಜನಮನೋವನಕ್ಕೆನೆ ಕಾಳಾ
ಗರುಧೂಮಲತಿಕೆ ಜಾಲಾಂ
ದರದಿಂದೊಗೆದುದು ಕಪೋತ ಪಕ್ಷಚ್ಛುರಿತಂ೧೯

ಎಳದುಂಬಿ ಸುರಿದು ಸುಟ್ಟರೆ
ಗೊಳಿಸುವ ಕತ್ತುರಿಯ ಕಪ್ಪುರಂಗಳ ರಜಮು
ಚ್ಚಳಿಸಿದುವು ನೀಲಮುತ್ತಿನ
ಬೆಳಗಿನ ಕುಡಿ ರಾರಸದಿನಂಕುರಿಸುವವೋಲ್೨೦

ಅಮೃತಮತಿ ಸಹಿತಮಾ ಚಂ
ದ್ರಮತಿಯ ಸುತನಂತು ಮೆರೆವ ಧವಳಾರದೊಳ
ಭ್ರಮುವೆರಸಭ್ರ ಗಜಂ ವಿ
ಭ್ರಮದಿಂದಂ ಸೆಜ್ಜರಕ್ಕೆ ಬಂದವೊಲೆಸೆಗುಂ೨೧



೧೯. ಕಾಮನು ಜನ ಮನೋವನಕ್ಕೆ ಪರಿಮಳದ ತೂಬನ್ನು ತೆರೆದುಬಿಟ್ಟನೋ
ಎಂಬಂತೆ ಕಾಳಾಗರುವಿನ ಹೊಗೆಬಳ್ಳಿ ಕಿಟಕಿಯಿಂದ ಹೊರಹಬ್ಬುತ್ತಾ ಇತ್ತು ಆ
ಶಯ್ಯಾಗೃಹದಿಂದ, ಆ ಹೊಗೆಯು ಪಾರಿವಾಳದ ರೆಕ್ಕೆಯಂತೆ ಕರಿಯ ಬಣ್ಣದ್ದಾಗಿತ್ತು.
೨೦. ಅಲ್ಲೆಲ್ಲ ಕಸ್ತೂರಿಯ ಪುಡಿ, ಕರ್ಪೂರದ ದೂಳು ಹಬ್ಬಿಕೊಂಡಿತ್ತು. ಪರಿಮಳಕ್ಕೆ
ಎರಗುವ ಎಳೆಯ ತುಂಬಿಗಳು ಅಲ್ಲಿ ಸುತ್ತೂ ಸುಳಿಯುತ್ತಿದ್ದುವು. ಆಗ ಏಳುತ್ತಿದ್ದ
ಸುಳಿಗಾಳಿಯಲ್ಲಿ ಆ ಪುಡಿದೂಳೆಲ್ಲ ಮೇಲೆ ಹಾರುತ್ತಿತ್ತು. ಇದನ್ನು ಕಾಣುವಾಗ
ನೀಲ ಮುತ್ತಿನ ಬೆಳಕಿನ ಕುಡಿ ಪ್ರೇಮರಸದಿಂದ ಮೊಳಕೆಯೊಡೆಯುತ್ತಿರುವಂತೆ
ಭಾಸವಾಗುತ್ತಿತ್ತು. ೨೧. ಹೀಗೆ ಶೋಭಿಸುವ ಆ ಧವಳಾಗಾರದಲ್ಲಿ ಚಂದ್ರಮತಿಯ
ಮಗ ಯಶೋಧರನು ಅಮೃತಮತಿಯೊಂದಿಗೆ ಸೇರಿಕೊಂಡನು. ಅಭ್ರಮುವನ್ನು
ಕೂಡಿಕೊಂಡು ಐರಾವತವು ಬಹು ಸಂಭ್ರಮದಿಂದ ಶಯ್ಯಾಗಾರಕ್ಕೆ ಬಂದಂತೆ

ವರಮಂಚ ಮಣಿದ್ಯುತಿಧೃತ
ಮರಾಳಿಕಾತೂಳತಳ್ವದೊಳ್ ತಾಮೆಸೆದರ್‌
ಸುರಚಾಪಚ್ಛವಿ ಸುತ್ತಿದ
ಶರದಭ್ರದೊಳೆಸೆವ ಖಚರದಂಪತಿಗಳವೊಲ್ ೨೨

ನಡೆ ಸೋಂಕಿದ ಕಡೆಗಣ್ಗಳ
ಕುಡಿವೆಳಗಿಂ ಬಿಡುವ ಬೆಮರೊಳಂ ಪದದೊಳಮೇಂ
ತಡವಾದರೊ ಕೌಮುದಿ ಕ
ಣ್ಣಿಡೆ ಕರಗುವ ಚಂದ್ರಕಾಂತ ಮಣಿಪುತ್ರಿಕೆವೊಲ್ ೨೩

ತನುಸೋಂಕಾಲಿಂಗನ ಚುಂ
ಬನದೆ ಸುರತದಿಂ ಸವಿ ರತಪ್ರೌಢಿಯಿನಾ
ತನುವಂ ಮಱೆಯಿಸೆ ಅಱಿಯದೆ
ಮನೋಜನಾಡಿಸುವ ಜಂತ್ರದಂತಿರೆ ನೆರೆದರ್‌ ೨೪



ಈ ದಂಪತಿಗಳು ಕಾಣುತ್ತಿದ್ದರು. ೨೨. ರತ್ನ ಖಚಿತವಾದ ಚೆಲುವಿನ ಮಂಚದ
ಕಾಂತಿ ಹಂಸತೂಲಿಕಾತಲ್ಪವನ್ನು ಇನ್ನಷ್ಟು ಸೊಗಸುಗೊಳಿಸಿತ್ತು. ಅದರ ಮೇಲೆ
ಅವರಿಬ್ಬರೂ ಕುಳಿತಾಗ ಕಾಮನ ಬಿಲ್ಲಿನ ಕಾಂತಿ ಪಸರಿಸಿಕೊಂಡಿರುವ ಶರತ್ಕಾಲದ
ನಿರ್ಮಲ ಮೇಘಮಾಲೆಯ ಮೇಲೆ ಮೆರೆಯುವ ಗಂಧರ್ವದಂಪತಿಗಳಂತೆ
ಶೋಭಿಸುತ್ತಿದ್ದರು. ೨೩. ಒಬ್ಬರು ಇನ್ನೊಬ್ಬರನ್ನು ಒಲುಮೆಯಿಂದ ನೋಡುತ್ತಿದ್ದರು.
ಅವರಿಬ್ಬರ ಕಟಾಕ್ಷದ ಬೆಳಕಿನ ಕುಡಿ ಪರಸ್ಪರರಿಗೆ ಸೋಂಕಿ, ಅವರಿಬ್ಬರೂ
ಬೆವರತೊಡಗಿದರು, ತಿಂಗಳ ಬೆಳಕು ಚಂದ್ರಕಾಂತರ್ಮಣಿಯ ಬೊಂಬೆಗೆ ತಾಗಿದಾಗ
ಅದು ಕರಗಿ ನೀರು ಸುರಿಸುವಂತೆ, ೨೪, ಒಬ್ಬರ ದೇಹ ಇನ್ನೊಬ್ಬರ ದೇಹಕ್ಕೆ
ತಾಗಿತು ; ಪರಸ್ಪರ ಆಲಿಂಗಿಸಿಕೊಂಡರು ; ಚುಂಬಿಸಿದರು. ಕಂಠಧ್ವನಿ ಸವಿಯಾಗಿ
ಕೇಳತೊಡಗಿತು. ಇಂತಹ ಸಮಾಗಮ ಪ್ರೌಢಿಯಿಂದ ಅವರಿಬ್ಬರೂ ಮೆಯ್ಯರೆತರು.
ಅವರಿಗೆ ಯಾವುದರ ಅರಿವೂ ಇಲ್ಲವಾಯಿತು. ಕಾಮನು ಕುಣಿಸುವ ಯಂತ್ರದಂತೆ
ಅವರಿಬ್ಬರೂ ಒಂದುಗೂಡಿದರು. ೨೫. ಸಂಭೋಗಸುಖವು ಅವರಿಗೆ

ಸುರತ ಸುಖಪಾರವಶ್ಯಂ
ತರೆ ನಿದ್ರಾಭರಮನಿರ್ವರುಂ ಶಿಥಿಲತನೂ
ಪರಿರಂಭಣದಚ್ಚಳಿಯದೆ
ಪರಿವೇಷ್ಟಿತ ಬಾಹುವಳಯದೊಳ್ ಕಣ್ಗಯ್ದರ್ ೨೫

ಪುರ್ವಂಬ ಜವಳಿಗಟ್ಟಿನ
ಕರ್ವಿನ ಬಿಲ್ಲಿಂಗೆ ಬಿಗಿದ ಮಧುಕರಮಾಲಾ
ಮೌರ್ವಿಯೆನೆ ಮುಗಿದ ಕಣ್ಗಳ
ಪರ್ವುಗೆಯೊಳ್ ಮೆಱೆದುದವರ ತಳ್ತೆಮೆದುಱುಗಲ್ ೨೬

ಹೃದಯ ಪ್ರಿಯರಂತೊಱಗಿದ
ಪದದೊಳ್ ಗರಟಿಗೆಯ ಜಾವದುಕ್ಕಡದುಲಿ ಮ
ಗ್ಗಿದ ಮೊತ್ತು ಸೂಳ್ಗೆ ಕರುಮಾ
ಡದ ಪಕ್ಕದೊಳಿರ್ದ ಪಟ್ಟದಾನೆಯ ಬದಗಂ ೨೭


ಪರವಶತೆಯನ್ನುಂಟುಮಾಡಿತು. ಆಗ ಅವರು ಶರೀರಾಲಿಂಗನದ ಬಿಗಿ ತಪ್ಪಿದರೂ,
ಅಚ್ಚಳಿಯದೆ ಪರಸ್ಪರರ ತೋಳುಗಳು ಹೆಣೆದುಕೊಂಡು ನಿದ್ರಾ ಮುದ್ರಿತರಾದರು.
೨೬. ಗಾಢ ನಿದ್ರೆಯಲ್ಲಿ ಮುಳುಗಿದ ಅವರ ಕಣ್ಣುಗಳು ಮುಚ್ಚಿಕೊಂಡಿದ್ದಾಗ
ಅವರ ಹುಬ್ಬು ಎರಡು ಕಬ್ಬುಗಳನ್ನು ಕೂಡಿಸಿ ಕಟ್ಟಿದ ಬಿಲ್ಲಿನಂತೆ ಭಾಸವಾಗುತ್ತಿತ್ತು.
ಹೀಗೆ ಕಟ್ಟಿದ ಬಿಲ್ಲಿಗೆ ಹೆದೆಯನ್ನಾಗಿ ಭ್ರಮರ ಮಾಲೆಯನ್ನು ಬಿಗಿದಂತೆ ಅವರ
ರೆಪ್ಪೆಯ ರೋಮಗಳು ಮೆರೆಯುತ್ತಿದ್ದವು. ೨೭. ಪ್ರಣಯಿಗಳಿಬ್ಬರೂ ಮಲಗಿದ
ಹೊತ್ತು ಜಾವದ ಉಕ್ಕಡಗಳಲ್ಲಿ ಅತ್ತಿತ್ತ ಸುತ್ತುತ್ತಿರುವ ಯಾಮಿಕರ ದ್ದೆಲ್ಲಾ ಅಡಗಿತು.
ಆಗ ಆ ಅರಮನೆಯ ಪಕ್ಕದಲ್ಲಿದ್ದ ಪಟ್ಟದಾನೆಯ ಮಾವುತನು, ತನ್ನ ಸರದಿ
ಬಂದಂತೆ ತನ್ನ ಮನಸ್ಸಂತೋಷಕ್ಕಾಗಿ ಹಾಡತೊಡಗಿದನು. ೨೮. ಅವನ ಹಾಡಿನ

ಬಿನದಕ್ಕೆ ಪಾಡುತ್ತಿರೆ ನು
ಣ್ದನಿ ನಿದ್ರೆಗೆ ಕತಕಬೀಜಮಾಯ್ತನೆ ಮೃಗಲೋ
ಚನೆ ತಿಳಿದಾಲಿಸಿ ಮುಟ್ಟಿದ
ಮದಮನೆ ತೊಟ್ಟನೆ ಪಸಾಯದಾನಂಗೊಟ್ಟಳ್೨೮

ಗಹಗಹಿಕವಡೆದ ವಹಿಣಿಯ
ಸುಹಾಹೆ ಝಂಪೆಯದೊಳಮರೆ ಠಾಯದೊಳಂ ನಿ
ರ್ವಹಿಸಿ ನೆಲೆಗೊಳಿಸಿ ಬಯ್ಸಿಕೆ ಮಹ
ಚಾಳೆಯದಲ್ಲಿ ಮೂರ್ತಿವಡೆದುದು ರಾಗಂ೨೯

ಮಾಳಿಗೆಯೊಳಗಣ ಸೊಡರ್ಗುಡಿ
ಡಾಳಂಬಡೆದಂತೆ ರಂಗರಕ್ತಿ ಯೊಳಮರ್ದುಂ
ಪಾಳಿಕೆವಡೆದು ಬಜಾವಣೆ
ಮಾಳಸಿರಿಯೆಂಬ ರಾಗಮಂ ಚಾಳಿಸಿದಂ೩೦



ಇಂಪಾದ ಧ್ವನಿ ಅಮೃತಮತಿಯ ನಿದ್ದೆಗೆ ಕತಕಬೀಜ [ತಿಳಿಗೊಳಿಸುವ ಬೀಜ ;
ಚಲ್ಬೀಜ ಎಂದು ಹೇಳುತ್ತಾರೆ]ವಾದಂತಾಯಿತು. ಅವಳು ನಿದ್ದೆ ತಿಳಿದದ್ದಳು ;
ಹಾಡನ್ನು ಕಿವಿಗೊಟ್ಟು ಕೇಳಿದಳು. ಅದು ಅವಳ ಮನಸ್ಸನ್ನು ಮುಟ್ಟಿತು. ಕೂಡಲೇ
ಆ ಮನಸ್ಸನ್ನು ಮೆಚ್ಚಿನ ಉಡುಗೊರೆಯನ್ನಾಗಿ ತೆತ್ತೇಬಿಟ್ಟಳು. ೨೯.
ಅತ್ಯಾನಂದಗೊಂಡ ಬೆಡಗಿನ ಒಳ್ಳೆಯ ಧ್ವನಿ ಝಂಪೆಯ [ಇದು ಮಾತ್ರೆಗಳ
ನಡೆಯುಳ್ಳ ದೇಶೀತಾಳ ವಿಶೇಷ]ದಲ್ಲಿ ಸೇರಿಕೊಂಡಿತು. ಅಲ್ಲಿಂದ ಅದು ಪ್ರಬಂಧ
ವಿಶೇಷದಲ್ಲಿ ಮುಂದುವರಿಯಿತು. ಆಮೇಲೆ ವೈಶಿಷ್ಟ್ಯದ ನರ್ತನಗತಿಯಲ್ಲಿ ಹರಿದು,
ಒಂದು ಬಗೆಯ ಕೃತಕದ ನೆಗೆತದಲ್ಲಿ ಆ ರಾಗವು ರೂಪುವಡೆಯಿತು. ೩೦.
ಅದೇ ಮಾಳವಯೆಂಬ ದೇಶೀರಾಗ, ಮಾಳಿಗೆಯೊಳಗಿನ ದೀಪದ ಜ್ವಾಲೆ
ಹೆಚ್ಚು ಪ್ರಕಾಶಪಡೆದಂತೆ ಈ ರಾಗವು ರಂಗಶೃಂಗಾರವನ್ನು ಪಡೆಯಿತು. ಅದು
ಅಂತೆಯೇ ಸುರಕ್ಷಿತವಾಗಿ ಮುಂಬರಿದು ಸರಿಯಾದ ರೀತಿಯಲ್ಲಿ ನಡೆಯಿತು.

ತಾಳದ ಲಯಮಂ ನೆನೆಯದೆ
ಕೇಳಲೊಡಂ ಠಾಯೆ ಜಾತಿಯೊಳ್ ಗ್ರಾಹಯುತಂ
ಕೇಳಲೊಡಂ ಗೀತಮನೆಂ
ದಾಳತಿಯೊಳ್ ಮೆಱೆದು ಪಾಡಿದಂ ರೂಪಕಮಂ೩೧


ಅಂತೆಸೆಯೆ ಪಾಡುತಿರೆ ತ
ದ್ದಂತಿಪನತಿನೂತ್ನಗೀತ ಪಾತನ ವಿಕಲ
ಸ್ವಾಂತೆಗೆ ನೋಡುವ ಕೊಡುವ
ಚಿಂತೆ ಕಡಲ್ವರಿದುದಂದು ಬೆಳಗಪ್ಪಿನೆಗಂ೩೨


ಮನದನ್ನಳಪ್ಪ ಕೆಳದಿಗೆ
ಮನಮಂ ಮುಂದಿಟ್ಟು ಬಳಿಕ ಕುಳುಪಿದೊಡವಳಾ
ತನ ರೂಪುಗಂಡು ಕಣ್ಗಂ
ಮನಕ್ಕೆ ಮುದ್ಗಾರವೆತ್ತು ಭೋಂಕನೆ ಮಗುಳ್ದಳ್೩೩


೩೧. ತಾಳದ ಲಯವನ್ನೂ ಎಣಿಸಿಕೊಳ್ಳದೆ ಕೇಳುವಾಗಲೇ ಪ್ರಬಂಧವು ಆಯಾ
ಜಾತಿಯ ತಾಳಗತಿಗಳಲ್ಲಿ ತಾನಾಗಿ ಸೇರಿಕೊಂಡೇ ಕೇಳುತ್ತಿತ್ತು. ಈ ರೀತಿಯಲ್ಲಿ
ಅವನು ಆ ಹಾಡನ್ನು, ಅದಕ್ಕೆ ಸರಿಯಾದ ರೂಪವನ್ನು ಕೊಟ್ಟು, ಹಾಡುತ್ತಾ
ಇದ್ದನು.೩೫೩೨. ಆ ಮಾವುತನು ಆ ರೀತಿ ಅತಿಮಧುರವಾಗಿ ಹಾಡುತ್ತಿದ್ದಾಗ,
ಅವನ ಅತಿನೂತನವಾದ ಹಾಡು ಕಿವಿಗೆ ಬೀಳುತ್ತಲೇ ಇತ್ತು. ಅಮೃತಮತಿಯ
ಮನಸ್ಸು ಆಗ ಕದಡಿಹೋಯಿತು. ಅವಳಿಗೆ ಕಣ್ಣಲ್ಲೇ ಬೆಳಗಾಯಿತು.
ಬೆಳಗಾಗುವವರೆಗೂ ಅವನನ್ನು ಹೇಗೆ ನೋಡಲಿ, ಹೇಗೆ ಕೂಡಿಕೊಳ್ಳಲಿ ಎಂಬ
ಚಿಂತೆಯೇ ಕಡಲಂತೆ ಉಕ್ಕಿ ಹರಿಯಿತು. ೩೩. ಬೆಳಗಾದ ಕೂಡಲೇ ಅವಳು
ತನ್ನ ನಚ್ಚುಮೆಚ್ಚಿನ ಗೆಳತಿಯನ್ನು ಕರೆದಳು. ಅವಳೊಡನೆ ತನ್ನ ಅಂತರಂಗದ
ಬಯಕೆಯನ್ನೆಲ್ಲ ಬಯಲು ಮಾಡಿದಳು. ಮಾವುತನ ಬಳಿಗೆ ಆಕೆಯನ್ನು
ಕಳುಹಿಸಿಕೊಟ್ಟಳು. ಒಡತಿಯ ಅಪ್ಪಣೆಯ ಪ್ರಕಾರ ಅವಳು ಮಾವುತನ ಬಳಿಗೆ
ನಡೆದಳು. ಅವನನ್ನು ದೂರದಿಂದ ಕಂಡುದೇ ತಡ, ಅವಳ ಕಣ್ಣಿಗೂ ಮನಸ್ಸಿಗೂ
ಓಕರಿಕೆಯುಂಟಾಯಿತು. ಅವಳಿಗೆ ಅಲ್ಲಿ ನಿಲ್ಲುವುದಕ್ಕೇ ಸಾಧ್ಯವಾಗದೆ ಕೂಡಲೆ

ಅಮೃತಮತಿಯೆತ್ತ ರೂಪಾ
ಧಮನಷ್ಟಾವಂಕನೆತ್ತ ಚಿತ್ರಮಪಾತ್ರೇ
ರಮತೇ ನಾರೀ ಎಂಬುದು
ಸಮನಿಸಿದುದು ಬೆಂದ ಬಿದಿಗೆ ಕಣ್ಣಿಲ್ಲಕ್ಕುಂ೩೪


ಎನುತುಂ ಬಂದು ವಿಷಣ್ಣಾ
ನನೆಯಂ ಮಾರ್ಗಾವಲಗ್ನ ನೇತ್ರೆಯನುಚ್ಛ್ವಾ
ಸ ನಿತಪ್ತಾಧರರುಚಿಯಂ
ಮನುಜೇಂದ್ರಾಂಗನೆಯನೆಯ್ದಿ ಕಂಡಿಂತೆಂದಳ್೨೫


ಕಂತುವಿನ ಕಯ್ಯ ಕೂರಸಿ
ಯಂತಿರೆ ಗರಗರಿಕೆವಡೆದು ಪೊಳೆವಸಿಯಳೆ ನೀ
ನಿಂತಪ್ಪ ಕಾಮದೇವಂ
ಗಂತೆಂತಾಯ್ದರಸಿ ಕೂರ್ತೆಯೆಂದಾನರಿಯೆಂ೨೬


ಹಿಂತಿರುಗಿದಳು. ೩೪. “ಅಯ್ಯೋ ದೇವರೇ ! ಅಮೃತಮತಿಯೆಲ್ಲಿ,
ರೂಪಾಧಮನಾದ ಅಷ್ಟಾವಂಕನೆಲ್ಲಿ? 'ಚಿತ್ರಂ ! ಅಪಾತ್ರೇ ರಮತೇ ನಾರೀ'
[ಆಶ್ಚರ್ಯ ! ಹೆಂಗಸು ಅಯೋಗ್ಯನೊಡನೆ ರಮಿಸುತ್ತಾಳೆ!] ಎಂಬ ಮಾತು
ಸಂಭವಿಸಿತಲ್ಲ ! ಆ ಸುಟ್ಟ ವಿಧಿಗೆ ಕಣ್ಣೇ ಇಲ್ಲವೋ?” ೩೫. ಎಂದೆಲ್ಲ ಯೋಚನೆ
ಅವಳ ತಲೆಯಲ್ಲಿ ಸುಳಿಯಿತು. ಇದನ್ನೇ ಹೊತ್ತು ಅವಳು ಮರಳಿದಳು. ಇಲ್ಲಿ
ನೋಡುವುದೇನು? ಆ ರಾಜೇಂದ್ರನ ಪತ್ನಿ ಅಮೃತಮತಿ ಮುಖ ಬಾಡಿಸಿಕೊಂಡೇ
ಇದ್ದಾಳೆ. ತನ್ನ ಗೆಳತಿ ಯಾವಾಗ ಮರಳಿಯಾಳು ಎಂದು ಅವಳು ಬರುವ
ದಾರಿಯಲ್ಲೇ ಕಣ್ಣಿಟ್ಟುಕೊಂಡಿದ್ದಾಳೆ. ಬಿಡುವ ಬಿಸಿಯುಸಿರು ತಾಗಿ ತುಟಿಯ
ಸಹಜವಾದ ಕೆಂಬಣ್ಣವೆಲ್ಲ ಕಳೆದುಹೋಗಿದೆ. ಹೀಗೆ ಉತ್ಕಂಠಿತೆಯಾಗಿದ್ದ
ಒಡತಿಯನ್ನು ಸಮೀಪಿಸಿ ಅವಳು ಹೇಳಿದಳು : ೩೬. "ಕಾಮನ ಕೈಯ
ಖಡ್ಗದಂತೆ ಬಹಳ ಚೆಲುವನ್ನು ಪಡೆದು ಶೋಭಿಸುವ ತನುಗಾತ್ರಿ ನೀನು.
ಇಂತಹ ನೀನು, ಈ ಬಗೆಯ ಕಾಮದೇವನನ್ನು ಹೇಗೆ ಶೋಧನೆ ಮಾಡಿದೆ!

ಈ ದೊರೆಯನೆಂದು ತೋರಲ್
ಮೇದಿನಿಯೊಳಗಾತನಲ್ಲದಿಲ್ಲೆನೆ ಪೇಳ್ ಪೇಳ್
ಕಾದಲನಂತಿರೆ ಚೆಲ್ವನೆ
ದೂದವಿ ನೀನೆನ್ನ ಕೊಂದೆಯೆಂದೊಡೆ ಪೇಳ್ದಳ್೩೭


ಪಳುಪಲೆ ಕುಟೆ ನೊಸಲಳಿಗ
ಣ್ಣೊಱೆವಾಯ್ ಹಪ್ಪಳಿಕೆ ಮೂಗು ಮುರುಟಿದ ಕಿವಿ ಬಿ
ಬ್ಬಿಱುವಲ್ ಕುಸಿಗೊರಲಿಳಿದೆರ್ದೆ
ಪೊರಂಟ ಬೆನ್ ಬಾತ ಬಸಿರಡಂಗಿದ ಜಘನಂ೩೮


ಕಱೆದೊವಲ ಪಳಿಯ ಕಳಿಯಂ
ತೆಱೆದಂದದ ಮೆಯ್ಯ ನಾತಮಾತನ ಕಯ್ಗಳ್
ಕುಱುಗಣ್ಣು ಕೂನಬೆನ್ ಕಾಲ್
ಮಱೆಯಿಸುವುದು ಟೊಂಕಮುರಿದ ಕತ್ತೆಯ ಕಾಲಂ೩೯


ಹೇಗೆ ಒಲಿದೆ? ನನಗೆ ಇದಾವುದೂ ಗೊತ್ತಾಗುವುದಿಲ್ಲ! ೩೭. ಯಾವ
ರೀತಿಯಲ್ಲಿದ್ದಾನೆಂದು ಹೋಲಿಸಿ ತೋರಿಸೋಣವೆಂದರೆ ಜಗತ್ತಿನಲ್ಲಿ ಅವನಂತೆ
ಬೇರೆ ಯಾರೂ ಇರುವುದಕ್ಕೆ ಸಾಧ್ಯವಿಲ್ಲ!” ಗೆಳತಿಯ ಕೊಂಕುಮಾತಿನ ಅರ್ಥ
ಅಮೃತಮತಿಗಾಗಲಿಲ್ಲ. ಅವಳ ಕುತೂಹಲ ಮತ್ತಷ್ಟು ಕೆರಳಿತು ; “ಹೇಳು,
ಹೇಳು! ನನ್ನ ಕಾದಲನು ಅಷ್ಟೂ ಸುಂದರನೆ  ? ಎಲೆ ದೂತಿ, ಬೇಗನೇ ಹೇಳು.
ಹೇಳದೆ ನೀನು ನನ್ನನ್ನು ಕೊಲ್ಲುತ್ತೀಯಲ್ಲ!” ಎಂದು ತ್ವರೆಪಡಿಸಿದಳು. ೩೮.
“ಅವನ ತಲೆಗೂದಲು ಅಲ್ಲಲ್ಲಿ ಕಿತ್ತುಹೋಗಿದೆ. ಹಣೆ ಹೊಂಡ ಬಿದ್ದಿದೆ. ಕಣ್ಣು
ಕೊಳೆತು ಹೋಗಿದೆ. ಬಾಯಿ ಜೊಲ್ಲು ಸುರಿಸುತ್ತಲೇ ಇದೆ. ಚಪ್ಪಟೆಯಾದ
ಮೂಗು, ಮುರುಟಿದ ಕಿವಿ, ಬಿರಿದ ಹಲ್ಲು, ಕೊರಳು ಕುಗ್ಗಿ, ಎದೆ ಒಳ ನುಗ್ಗಿ,
ಬೆನ್ನು ಹೊರಚಾಚಿದೆ. ಹೊಟ್ಟೆ ಬಾತುಕೊಂಡಿದೆ; ಜಘನವು ಅಡಗಿಯೇ ಹೋಗಿದೆ.
೩೯. ಕರೆ ಮೆತ್ತಿದ ಚರ್ಮ, ಹಳೆಯ ಹೊಂಡವನ್ನು ಹೊರತೆಗೆದಂತಹ ವಾಸನೆ
ಅವನ ದೇಹದಿಂದ ಹುಬ್ಬುತ್ತಾ ಇದೆ. ಅವನ ಕೈಗಳೂ, ಚಿಕ್ಕ ಕಣ್ಣುಗಳೂ,
ಗೂನುಬೆನ್ನೂ ಕಾಲುಗಳೂ ಸೊಂಟ ಮುರಿದ ಕತ್ತೆಯ ಕಾಲನ್ನೂ ಮೀರಿಸುವಂತಿವೆ.

ಮುದುಗರಡಿಯ ಮದುದೊವಲಂ
ದದ ಕರಿಯಂ ತಾಳಕಾಯ ಮೋಳಿಗೆಯೊಂದಂ
ದದ ಮರುಡನಷ್ಟವಂಕಂ
ಮೊದಲೊಣಗಿದ ಕೂನಗೊರಡಿನಂದದ ಕೊಂಕಂ೪೦

ಎಂದೊಡೆ ದೂದವಿಗವಳಿಂ
ತೆಂದಳ್ ಗರಗರಿಕೆ ಕೊರಲೊಳೀಕ್ಷಣದೊಳ್ ವಾ
ರ್ಬಿಂದು ಮಿಡುಕೆರ್ದೆಯೊಳೊದವೆ ಪು
ಳಿಂದನ ಕಣೆ ನಟ್ಟು ನಿಂದ ವನಹರಿಣಿಯವೊಲ್೪೧

ಕರಿದಾದೊಡೆ ಕತ್ತುರಿಯಂ
ಮುರುಡಾದೊಡೆ ಮಲಯಜಂಗಳಂ ಕೊಂಕಿದೊಡೇಂ
ಸ್ಮರಚಾಪಮನಿಳಿಕಯ್ವೆರೆ
ಮರುಳೇ ಪೊಲ್ಲಮೆಯೆ ಲೇಸು ನಲ್ಲರ ಮೆಯ್ಯೊಳ್೪೨


೪೦. ಮುದಿ ಕರಡಿಯ ಹಳೆಯ ಚರ್ಮದಂತೆ ಕಪ್ಪು ಕರಿಯಾಗಿದೆ ಅವನ
ದೇಹದ ಬಣ್ಣ. ತಾಳೆಯ ಮರದಂತೆ ಒರಟೊರಟಾದ ಶರೀರ, ಕಟ್ಟಿಗೆಯ
ಕಟ್ಟಿನಂತೆ ಅಂಕು ಡೊಂಕಾಗಿ ಅಷ್ಟಾವಕ್ರವಾಗಿದೆ.೩೬ ಎಂದೋ ಒಣಗಿಹೋದ
ವಕ್ರವಾದ ಒಂದು ಮರದ ಕೊರಡಿನಂತಿದೆ.” ೪೧. ದೂತಿ ಹೇಳಿದ ಇಷ್ಟು
ವಿಸ್ತೃವಾದ ವಿವರಣೆಯನ್ನು ಕೇಳುತ್ತಾ ಇದ್ದಂತೆ ಅಮೃತಮತಿಯ ಗಂಟಲು
ಗರಗರ ಎಂದು ಸದ್ದು ಮಾಡಿತು, ಕಣ್ಣಲ್ಲಿ ನೀರು ತುಂಬಿಕೊಂಡಿತು. ಎದೆ
ನಡುಗಿತು. ಕಾಡಿನ ಜಿಂಕೆಗೆ ಬೇಡನ ಬಾಣ ನಾಟಿದಂತೆ ಅವಳೊಮ್ಮೆ
ಸ್ತಂಭೀಭೂತಳಾದಳು. ಬಳಿಕ ಮೆಲ್ಲನೆ ಮಾತಿಗಾರಂಭಿಸಿದಳು. ೪೨. “ಕಸ್ತೂರಿಯ
ಬಣ್ಣ ಕಪ್ಪು. ಅದನ್ನು ಆ ಬಣ್ಣದಿಂದಾಗಿ ಕಡೆಗಾಣಿಸುವವರಿದ್ದಾರೆಯೆ ?
ಗಂಟುಗಂಟಾಗಿ ಇದೆಯೆಂದು ಗಂಧದ ಕೊರಡನ್ನು ತಿರಸ್ಕರಿಸುತ್ತಾರೆಯೇ?
ಕಾಮನ ಬಿಲ್ಲು ಕೊಂಕಾಗಿದ್ದರೂ ಅದನ್ನು ಯಾರೂ ಹೀನಯಿಸುವುದಿಲ್ಲವಲ್ಲ!
ಹುಚ್ಚೀ, ನಮ್ಮ ಮೆಚ್ಚಿನವರ ಮೆಯ್ಯಲ್ಲಿ ದೋಷವಿದ್ದರೆ ಅದೇ ಅವರ

ಒಲವಾದೊಡೆ ರೂಪಿನ ಕೋ
ಟಲೆಯೇವುದೊ ಕಾರ್ಯಮಾಗೆ ಕಾರಣದಿಂದಂ
ಫಲಮೇನಿಂದೆನಗಾತನೆ
ಕುಲದೈವಂ ಕಾಮದೇವನಿಂದ್ರಂ ಚಂದ್ರಂ ೪೩


ಎಂದಾಕೆಗೆ ಲಂಚಮನಿ
ತ್ತೆಂದುದನೆಂದೆರವಿಗೊಂಡು ಕರಿಪುವುದುಮವಳ್‌
ಸಂದಿಸಿದೊಡಮೃತಮತಿ ರಾ
ತ್ರಿಂ ದಿವಮಾತನೊಳೆ ಸಲಿಸಿದಳ್ ತೆರಪುಗಳಂ೪೪


ಆ ವಿಕಟಾಂಗನೊಳಂತಾ
ದೇವಿಗೆ ರುಚಿಯಾಗೆ ರತಿಫಲಾಸ್ವಾದನದೊಳ್‌
ಬೇವಂ ಮೆಚ್ಚಿದ ಕಾಗೆಗೆ
ಮಾವಿಳಿದಪ್ಪಂತೆ ಪತಿಯೊಳಿಳಿದಾಯ್ತು ಮನಂ ೪೫


ಮೇಲ್ಮೆಯಿನ್ನಿಸುತ್ತದೆ. ೪೩. ಅದೂ ಅಲ್ಲದೆ, ಮನಸ್ಸು ಮೆಚ್ಚಿದೆಯೆಂದಾದರೆ
ಮತ್ತೆ ರೂಪದ ಪ್ರಶ್ನೆಯೇ ಏಳುವುದಿಲ್ಲ. ಕಾರ್ಯವಾದ ಮೇಲೆ ಕಾರಣದಿಂದೇನು
ಪ್ರಯೋಜನ? ಇಂದು ನನಗೆ ಅವನೇ ಕಾಮದೇವ, ಅವನೆ ಇಂದ್ರ, ಅವನೆ
ಚಂದ್ರ !” ೪೪. ಅಮೃತಮತಿ ಅವಳಿಗೆ ಲಂಚವನ್ನಿತ್ತಳು; ತನ್ನ
ವಶವರ್ತಿನಿಯಾಗುವಂತೆ ಮಾಡಿಕೊಂಡಳು. ಅವಳೊಡನೆ ಹೇಳಬೇಕಾದುದನ್ನೆಲ್ಲ
ಹೇಳಿದಳು. ಅವಳಿಂದ ಸಮ್ಮತಿಯ ಮಾತನ್ನೂ ಪಡೆದಳು. ಅವಳನ್ನು
ತನ್ನಿನಿಯನಲ್ಲಿಗೆ ಕಳುಹಿಸಿಕೊಟ್ಟಳು. ದೂತಿಯು ಕಾರ್ಯವನ್ನು ಕೈಗೂಡಿಸಿದಳು;
ಇಬ್ಬರನ್ನೂ ಒಂದುಗೂಡಿಸಿದಳು. ಅಂದಿನಿಂದ ಅಮೃತಮತಿ ಹಗಲೂ ಇರುಳೂ
ಬಿಡುವಿದಾಗಲೆಲ್ಲ ಆತನೊಡನಾಟದಲ್ಲಿಯೇ ಕಾಲ ಕಳೆಯತೊಡಗಿದಳು.
೪೫. ಸೌಂದರ್ಯದ ಅಧಿದೇವತೆಯಂತಿದ್ದ ಅಮೃತಮತಿಗೆ ಆ ವಿಕಟಾಂಗನ
ಒಡನಾಟದಲ್ಲಿಯೂ ಕೂಟದಲ್ಲಿಯೂ ಬಹಳ ಸವಿಯೇ ಕಂಡಿತು. ಬೇವನ್ನು
ಮೆಚ್ಚಿದ ಕಾಗೆಗೆ ಮಾವು ಮೆಚ್ಚಿಗೆಯಾದೀತೆ? ಅಮ್ಯತಮತಿಗೂ ಯಶೋಧರನಲ್ಲಿ

ನೋಡುವ ಮಾತಾಡುವ ಬಾ
ಯ್ಗೂಡುವ ಪದನಮೃತಮತಿಗೆ ಪೂರ್ವ ಸ್ಥಿತಿಯಂ
ಪಾಡಳಿಯುತ್ತಿರೆ ನೋಡಲ್‌
ವೇಡಿ ಯಶೋಧರನದೊರ್ಮೆ ಶಯ್ಯಾತಳದೊಳ್‌೪೬


ಮಱೆದೊರಗಿದನಂತೆವೊಲಿರೆ
ಪರಮೆ ಪಗಲ್‌ ಮುಗಿಯೆ ಸಿಲ್ಕಿ ಕೈರವದನಿರುಳ್‌
ಪೊರಮಡುವಂತರಸನ ತೋ
ಳ್ಸೆಱೆಯಿಂ ನುಸುಳ್ದರಸಿ ಜಾರನಲ್ಲಿಗೆ ಪೋದಳ್‌೪೭


ಬೆನ್ನೊಳೆ ಪೋದಂ ದೋಷದ
ಬೆನ್ನೊಳೆ ಸಂದಿಸುವ ದಂಡದಂತರಸಂ ಪ್ರ
ಚ್ಛನ್ನದಿನುರ್ಚಿದ ಬಾಳ್ವೆರ
ಸನ್ನೆಗಮಾ ಬದಗನರಸಿ ತಡೆದೊಡೆ ಮುಳಿದಂ೪೮


ಮನಸ್ಸು ಮುರುಟಿ ಹೋಯಿತು. ೪೬. ತನ್ನ ಪತಿಯನ್ನು ನೋಡುವ ಹೊತ್ತಿಗೆ
ಅವನೊಡನೆ ಮಾತಾಡುವ ಸಂದರ್ಭದಲ್ಲಿ ಮುದ್ದಿಸುವ ಸನ್ನಿವೇಶದಲ್ಲಿ ಅಮೃತಮತಿ
ಮೊದಲಿನಂತಿಲ್ಲವಾದಳು. ಇದನ್ನು ಗಮನಿಸಿದ ಯಶೋಧರ. ಚೆನ್ನಾಗಿ
ಪರಾಂಬರಿಸಬೇಕೆಂಬೆಣಿಕೆ ಅವನ ಮುನಸ್ಸಿನಲ್ಲಿ ಮೊಳೆಯಿತು.
೪೭. ಅವನು ಒಮ್ಮೆ ಹಾಸಿಗೆಯಲ್ಲಿ ಮೆಯ್ಮರೆದು ನಿದ್ರಿಸಿದಂತೆ ನಟಿಸಿದನು. ಆಗ
ಅಮೃತಮತಿಯು ನೈದಿಲೆಯೊಳಗೆ ಸಿಕ್ಕಿಬಿದ್ದ ಹೆಣ್ಣುತು೦ಬಿ, ಹಗಲು ಕಳೆದಾಗ
ಅದರೊಳಗಿಂದ ಹೊರಹೊರಡುವಂತೆ ಪತಿಯ ಬಾಹುಬಂಧನದಿಂದ
ಬಿಡಿಸಿಕೊಂಡು ತನ್ನ ಜಾರನಲ್ಲಿಗೆ ಹೋದಳು. ೪೮. ಯಶೋಧರನೂ ಎದ್ದನು.
ದೋಷವನ್ನು ಹಿಂಬಾಲಿಸಿಕೊಂಡು ಹೋಗುವ ದಂಡನೆಯಂತೆ ಕೈಯಲ್ಲಿ ಹಿರಿದ
ಖಡ್ಗವನ್ನು ಹಿಡಿದುಕೊಂಡು, ಅವನು ಯಾರ ಕಣ್ಣಿಗೂ ಬೀಳದಂತೆ ಅವಳ
ಹಿಂದೆಯೇ ಹೋದನು. ಅತ್ತ ಆ ಅಲ್ಪ ಮನುಷ್ಯನು ರಾಣಿ ಸಕಾಲಕ್ಕೆ ಅವನ
ಬಳಿ ಬಾರದುದಕ್ಕೆ ಸಿಟ್ಟಿನಿಂದ ಉರಿಯುತ್ತಿದ್ದನು. ೪೯. ಆಕೆ ತಂದ ಹೂ ಗಂಧ

ಮುಳಿದಾಕೆ ತಂದ ಮಾಲಾ
ಮಳಯಜ ತಾಂಬೂಲಜಾಮಂ ಕೆದರಿ ಕುರು
ಳ್ಗಳನೆರೆದು ಬೆನ್ನ ಮಿಳಿಯಿಂ
ಕಳಹಂಸೆಗೆ ಗಿಡಗನೆರಗಿದಂತಿರೆ ಬಡಿದಂ೪೯


ತೋರಮುಡಿವಿಡಿದು ಕುಡಿಯಂ
ನಾರಂ ತದೆವಂತೆ ತದೆದು ಬೀಟೆಯ ಕಾಲಿಂ
ಬಾರೇಱೆ ಬದಗನೊದೆದೊಡೆ
ಕೇರೆ ಪೊರಳ್ವಂತೆ ಕಾಲಮೇಲೆ ಪೊರಳ್ದಳ್೫೦


ತಡವಾದುದುಂಟು ನಲ್ಲನೆ
ಬಡಿ ಮುಳಿಯದಿರರಸನೆಂಬ ಪಾತಕನೆನ್ನಂ
ತೊಡೆಯೇರಿಸಿ ಕೇಳಿಕೆಯಾ
ದೊಡೆ ನೋಡುತ್ತಿರ್ದೆನುಂತೆ ನಲಲಣ್ಮುವೆನೇ೫೧


ತಾಂಬೂಲ ಮುಂತಾದವುಗಳನ್ನೆಲ್ಲ ಚೆಲ್ಲಿ ಕೆದರಿದನು. ಅವಳ ಕೂದಲನ್ನು
ಹಿಡಿದೆಳೆದು, ಗಿಡುಗನು ರಾಜಹಂಸದ ಮೇಲೆರಗುವಂತೆ, ಅವಳ ಬೆನ್ನಿಗೆ ಚರ್ಮದ
ಬಾರಿನಿಂದ ಬಲವಾಗಿ ಬಾರಿಸಿದನು. ೫೦. ಅವಳ ತುಂಬುಗೂದಲ ತುರುಬು
ಹಿಡಿದು, ಕುಡಿಯನು ನಾರನ್ನು ಜಜ್ಚುವಂತೆ ಅವಳನ್ನು ಜಜ್ಜಿದನು. ಇಷ್ಟೂ
ಸಾಲದೆಂಬಂತೆ ಅವಳ ಚರ್ಮವು ಏಳುವಂತೆ ಬಿರಿದಕಾಲಿನಿಂದ ಒದ್ದನು.
ಆದರೂ ಅವಳು ಅವನ ಕಾಲ ಮೇಲೆ ಬಿದ್ದು ಕೇರೆ ಹೊರಳುವಂತೆ ಹೊರಳಿದಳು.
೫೧. “ನಲ್ಲನೆ, ತಡವಾದುದು ನಿಜ. ಇಷ್ಟಬಂದಂತೆ ಬಡಿ. ಆದರೆ ನನ್ನ ಮೇಲೆ
ಕೋಪಿಸುವುದು ಮಾತ್ರ ಬೇಡ. ನಾನು ನಿಷ್ಕಾರಣವಾಗಿ ತಡೆದು ನಿಂತೆನೆ?
ಅರಸನೆಂಬ ಆ ಪಾಪಿ ನನ್ನನ್ನು ತೊಡೆಯೇರಿಸಿಕೊಂಡು ಶೃಂಗಾರ ಚೇಷ್ಟೆಗೆ
ತೊಡಗಿದ. ನಾನು ನೋಡುತ್ತ ಸುಮ್ಮನಿರಬೇಕಾಯಿತು. ೫೨. ಗಜವೆಡಂಗ,

ಕಿವಿಸವಿ ದನಿ ಕಣ್ಸವಿ ರೂ
ಪವಧರಿಸಲೆ ಗಜವೆಡಂಗ ನೀನುಳಿದೊಡೆ ಸಾ
ವವಳೆನಗೆ ಮಿಕ್ಕ ಗಂಡರ್‌
ಸವಸೋದರರೆಂದು ತಿಳಿಪಿದಳ್‌ ನಂಬುಗೆಯಂ೫೨


ಆಗಳ್‌ ಬಾಳ್‌ ನಿಮಿರ್ದುದು ತೋಳ್‌
ತೂಗಿದುದು ಮನಂ ಕನಲ್ದು ದಿರ್ವರುಮನೆರ
ಳ್ಬಾಗಂ ಮಾಡಲ್‌ ಧೃತಿ ಬಂ
ದಾಗಳ್‌ ಮಾಣೆಂಬ ತೆರದೆ ಪೇಸಿದನರಸಂ೫೩


ಪರನೃಪರನಲ್ಲದೀ ಪುಮಿ
ಕರನರಿವುದೆ ಮದ್ಭುಜಾಸಿಯಿದು ಕೈಯಿಕ್ಕಲ್‌
ಕರಿ ಕರಿಗಲ್ಲದಿರುಂಪೆಗೆ
ಪರಿವುದೆ ಹರಿ ಕರಿಯನಲ್ಲದಿರಿವುದೆ ನರಿಯಂ೫೪




ನನಗೆ ನಿನ್ನ ದನಿ ಕಿವಿಗೆ ಸವಿ, ನಿನ್ನ ರೂಪ ನನ್ನ ಕಣ್ಣಿಗೆ ಸವಿ, ನೀನೂ ನನ್ನ
ಕೈಬಿಟ್ಟರೆ ನನಗೆ ಮರಣವೇ ಶರಣು ! ಬೇರೆ ಗಂಡಸರೆಲ್ಲ, ನನಗೆ ಸಹೋದರ
ಸಮಾನರೇ ಸರಿ, ನಂಬು” ಎಂದು ಹಲವು ರೀತಿಯಲ್ಲಿ ಅವನಿಗೆ
ವಿಶ್ವಾಸವುಂಟಾಗುವಂತೆ ಸಮಾಧಾನ ಹೇಳಿದಳು. ೫೩. ಒಡನೆಯೆ ಅರಸನ
ಕೈಯ ಖಡ್ಗವು ಮೇಲೆದ್ದಿತು ; ತೋಳು ತೂಗಿತು. ಮನಸ್ಸು ಕಿಡಿಕಾರಿತು.
ಒಂದೇ ಪೆಟ್ಟಿಗೆ ಇಬ್ಬರನ್ನೂ ಇಬ್ಭಾಗ ಮಾಡುವ ಎಣಿಕೆ ಮಸಗಿತು. ಅಷ್ಟರಲ್ಲಿ
ಫಕ್ಕನೆ ಸಂಯಮ ತಲೆದೋರಿ, “ಚಿ! ಬೇಡ!” ಎಂದು ಅರಸನ ಮನಸ್ಸು
ಹೇಸಿಕೊಂಡಿತು. ೫೪. “ನನ್ನ ತೋಳಿನ ಈ ಕರವಾಲವು ವೈರಿ ನರೇಂದ್ರರನ್ನು
ಇರಿಯಬೇಕೇ ಹೊರತು, ಈ ಕ್ಷುದ್ರರನ್ನು ಇರಿಯಲಾಗದು. ಆನೆ
ಆನೆಯನ್ನೆದುರಿಸಬೇಕಲ್ಲದೆ ಇರುವೆಯನ್ನೆದುರಿಸಬಹುದೆ? ಕೇಸರಿ ಇರಿಯುವುದು

ಅಸಿಲತೆ ರಣಧೌತಮದೀ
ಮಸಿಮುಸಡನ ಜೀವಕಪ್ಪಿನಂ ಕಂದಿದೊಡೆ
ಣ್ದೆಸೆಯನಡರ್ದೆನ್ನ ಕೀರ್ತಿ
ಪ್ರಸರದ ಕುಡಿ ಕಯ್ಪೆ ಸೂರೆಯ ಕುಡಿಯವೊಲಕ್ಕುಂ೫೫


ಅಳಿಪುಳ್ಳೊಡೆ ನೊಡಿರಿದೊಡ
ನಳಿವುದೆ ಪೆಣ್‌ ತಪ್ಪಿ ನಡೆಯ ಚಿಃ ಕಿಸುಗುಳಮೆಂ
ದುಳಿವುದೆ ಗೆಲ್ಲಂ ಗೊಂಡಾ
ಪುಳು ಪುಟ್ಟುವ ನರಕದೊಳಗೆ ಬೀಳ್ವನೆ ಚದುರಂ೫೬


ಎಂದು ನೆನೆದಿರಿಯಲೊಲ್ಲದೆ
ಬಂದರಸಂ ಮುನ್ನಿನಂತೆ ಪವಡಿರೆ ತಾನುಂ
ಬಂದು ಮರೆದರಸನೊರಗಿದ
ನೆಂದೊಯ್ಯನೆ ಸಾರ್ದು ಪೆರಗೆ ಪಟ್ಟಿರ್ಪಾಗಳ್‌೫೭


ನರಿಯನ್ನಲ್ಲ ; ಕರಿಯನ್ನು ; ೫೫. “ರಣರಂಗದಲ್ಲಿ ವೀರ ಪುಂಗವರ ರಕ್ತದಲ್ಲಿ
ಮಿಂದು ಮಡಿಯಾದ ಈ ಅಸಿಲತೆ ಈ ಕರಿಮುಸುಡನ ಕೊಳಕನ ಜೀವದ
ಕೆಸರಿನಿಂದ ಕಾಂತಿ ಕಳೆದುಕೊಳ್ಳಬೇಕೆ? ಹಾಗೆ ಆದರೆ ಎಂಟು ದಿಕ್ಕುಗಳ
ತುದಿವರೆಗೂ ಹಬ್ಬಿದ ನನ್ನ ಕೀರ್ತಿಯ ಕುಡಿಯು ಕಹಿ ಸೋರೆಯ
ಕುಡಿಯಂತಾಗದೆ? ೫೬. ಅವಳಿಗೆ ಅನ್ಯನಲ್ಲಿ ಆಸೆಯುಂಟಾಗಿದೆಯೆಂಬುದನ್ನು
ನಾನು ಈಗ ಕಂಡಿದ್ದೇನೆ. ಆದ ಕಾರಣ ಅವಳನ್ನು ಕತ್ತರಿಸಿ ಬಿಸಾಡಿದರೆ ಅವಳ
ಆಸೆ ಕೊನೆಗೊಳ್ಳುವುದೇ? ಹೆಣ್ಣು ತಪ್ಪಿ ನಡೆದಾಗ ಅವಳನ್ನು “ಚಿಃ ! ಹೊಲಸು!
ಎಂದು ಹಾಗೆಯೇ ಬಿಟ್ಟುಬಿಡುವುದೆ? ಹಾಗೆ ಗೆಲುವು ಪಡೆದು ಹುಳು ಹುಟ್ಟುವ
ನರಕದಲ್ಲಿ ಬೀಳಬೇಕಾದೀತು. ಇದು ಚಾತುರ್ಯವಲ್ಲ!” ೫೭. ಹೀಗೆ ಆಲೋಚಿಸಿ
ಖಡ್ಗಪ್ರಹಾರದ ಯೋಚನೆ ಸಲ್ಲದೆಂದೇ ನಿರ್ಧರಿಸಿ ಅವನು ಅಲ್ಲಿ ನಿಲ್ಲದೆ
ಅರಮನೆಗೆ ಮರಳಿ ಮೊದಲಿನಂತೆ ಹಾಸಿಗೆಯಲ್ಲಿ ಬಿದ್ದುಕೊಂಡನು. ಸ್ವಲ್ಪ
ಹೊತ್ತಿನಲ್ಲಿ ಅಮೃತಮತಿಯೂ ಹಿಂತಿರುಗಿದಳು. ರಾಜನು
ಗಾಢನಿದ್ರೆಯಲ್ಲಿದ್ದಾನೆಂದು ಭಾವಿಸಿ, ಮೆಲ್ಲನೆ ಸಮಿಾಪಿಸಿ ಮಲಗಿದಳು.

ಮುಟ್ಟಿದೊಡೆ ಸುಖದ ಸೋಂಕಂ
ಪುಟ್ಟಿಸುವಾ ವಾಮೆಯಾದೊಡೆ ಮುನ್ನಂ
ಬಟ್ಟಿದುವೆನಿಸುವ ಮೊಲೆ ನಿ
ರ್ವೆಟ್ಟಿದುವಾದುವು ನೃಪಂಗೆ ಬೆನ್ಸೋಂಕಲೊಡಂ೫೮


ಬದಗುಳಿಗನ ತೋಳ್ಮುಟ್ಟಿದ
ಸುದತಿಯೊಳಿಂಬಾಗದಂತೆ ಕೆಟ್ಟುದು ಪುಳಿ ಮು
ಟ್ಟಿದ ದುಗ್ಧದಂತೆ ನೀರ್ಮು
ಟ್ಟಿದ ಜೇನೆಯ್ಯಂತೆ ಪತಿಗೆ ಶಯ್ಯಾತಳದೊಳ್‌೫೯


ಆ ಗಂಡನನಪ್ಪಿದ ತೋಳ್‌
ಪೋಗಂಡನನಪ್ಪುವಂತೆ ಮಾಡಿದ ಬಿದಿಯಂ
ಮೂಗಂ ಕೊಯ್ದಿಟ್ಟಿಗೆಯೊಳ್‌
ಪೋಗೊರಸದೆ ಕಂಡೆನಾದೊಡೇಂ ಬಿಟ್ಟಪೆನೇ೬೦


೫೮. ಅವನ ಬೆನ್ನಿಗೆ ಅವಳ ಸ್ಪರ್ಶವುಂಟಾಯಿತು. ಮೊದಲು ಅವಳ
ಸ್ಪರ್ಶಮಾತ್ರದಿಂದಲೇ ಅವನು ಸುಖವನ್ನನುಭವಿಸುತ್ತಿದ್ದನು. ಈಗ ವಾಮೆಯು
ಪ್ರತಿಕೂಲೆಯಾಗಲು ಮೊದಲು ವೃತ್ತಪೀನವಾಗಿದ್ದ ಸ್ತನಗಳು ಈಗ ಅವನಿಗೆ
ಜೋಲುವ ಮೊಲೆಗಳೆನ್ನಿಸಿದುವು. ೫೯. ಹಾಲಿಗೆ ಹುಳಿ ತಾಗಿದರೆ, ಜೇನಿಗೆ
ನೀರು ಬೆರೆತರೆ ಸವಿಯುಳಿಯುತ್ತದೆಯೆ? ಯಶೋಧರನಿಗೂ ಹಾಸಿಗೆಯಲ್ಲಿದ್ದಾಗ,
ಅತ್ಯಂತ ಕುತ್ಸಿತನೊಬ್ಬನ ತೋಳು ತಗುಲಿದ ತನ್ನ ಪತ್ನಿಯಲ್ಲಿ ಒಂದಿಷ್ಟೂ
ಸವಿಯುಳಿಯದೆ ಹೋಯಿತು. ೬೦. ಇಷ್ಟು ಹೇಳುತ್ತಿದ್ದಂತೆಯೇ ತನ್ಮಯತೆಯಿಂದ
ಕೇಳುತ್ತಿದ್ದ ಮಾರಿದತ್ತನು ಉದ್ರಿಕ್ತನಾದನು. “ಅಂತಹ ಗಂಡನನ್ನು ಅಪ್ಪಿಕೊಂಡಿದ್ದ
ತೋಳು ಪೋಗಂಡ [ವಿಕೃತ ಮನುಷ್ಯ] ನನ್ನು ಅಪ್ಪುವಂತೆ ಮಾಡಿದುದು ಆ
ವಿಧಿ. ಅದರ ಮೂಗನ್ನು ಕೊಯ್ದು ಇಟ್ಟಿಗೆಯಲ್ಲಿ ಹಾಕಿ ತಿಕ್ಕದೆ ಬಿಟ್ಟೇನೇ”
ಎಂದು ಉದ್ಗರಿಸಿದನು.

ಎನೆ ಕೇಳ್ದು ಮಾರಿದತ್ತಾ
ವನಿಪನವಂಗಭಯರುಚಿ ಬಳಿಕ್ಕಿಂತೆಂದಂ
ಮನಸಿಜನ ಮಾಯೆ ವಿಧಿವಿಳ
ಸನದ ನೆರಂಬಡೆಯೆ ಕೊಂದು ಕೂಗದೆ ನರರಂ೬೧


ಪದವಿಯ ರೂಪಿನ ಸೊಬಗಿನ
ಮದಮಂ ಮಾಡುವರ ಮೂಗಿನೊಳ್‌ ಪಾತ್ರಮನಾ
ಡದೆ ಮಾಣದನಂಗನ ಕೃತಿ
ಸುದತಿಯರ ವಿಕಾರಮೆಂಬ ವಿದ್ಯಾಬಲದಿಂ೬೨


ಆ ರಾಜಕುಮಾರಂ ಬಳಿ
ಕಾ ರೂಪಿನ ಪೆಂಡಿರಿಂತು ಕಳಿಬಾದೊಡೆ ಚಿಃ
ಕೂರಿಸುವ ಕೂರ್ಪ ಮಾತಂ
ಮಾರಿಗೆ ಕುಡು ಸಿರಿಯನೊಟ್ಟಿ ಸುಡು ಹೋಗೆಂದಂ೬೩



೬೧. ಇದನ್ನು ಕೇಳಿ ಅಭಯರುಚಿ ಕುಮಾರನು ಅವನಿಗೆ ವಿಧಿಯ ಸ್ವಭಾವವನ್ನು
ವಿವರಿಸಿದನು. “ವಿಧಿವಿಲಾಸದ ನೆರವು ದೊರೆತಾಗ ಮನಸಿಜನ ಮಾಯೆ
ಮನುಷ್ಯರನ್ನು ಸರ್ವನಾಶಗೊಳಿಸಿ ಜಯಘೋಷವನ್ನು ಮಾಡುತ್ತದೆ. ೬೨. ಈ
ಆಟಕ್ಕೆ ದೊರೆಯುವ ಸ್ಥಳವೆಂದರೆ ಅಧಿಕಾರ ಮದ, ರೂಪ ಮದ ಮತ್ತು
ಸೌಭಾಗ್ಯ ಮದವುಳ್ಳವರ ಮೂಗು. ಈ ರೀತಿ ದುರಭಿಮಾನಪಡುವವರ ಕಣ್ಣ
ಎದುರಿನಲ್ಲಿಯೇ ಕಾಮನು ಕಾಮಿನಿಯರ ಮುಖಾಂತರ ಬಗೆಬಗೆಯ
ನಾಟಕಗಳನ್ನು ಆಡಿಸುತ್ತಾನೆ”.೩೭ ೬೩. ಮಾರಿದತ್ತನಿಗೆ ಮನಸ್ಸು ತಡೆಯಲಿಲ್ಲ.
“ಅ೦ತಹ ರೂಪವತಿಯಾದ ಪತ್ನಿಯೂ ಹಾಗೆ ತ್ಯಾಜ್ಯಳಾದಳೆಂದರೆ, ಪತ್ನಿಯನ್ನು
ಪೀತಿಸುವ, ಅಥವಾ ಅವರಿಂದ ಪ್ರೀತಿಯನ್ನು ಪಡೆಯುವ ಮಾತು ಮಾರಿಗೇ
ತೃಪ್ತಿ! ಅಂತಹವರ ಐಶ್ವರ್ಯವನ್ನೆಲ್ಲ ರಾಶಿ ಮಾಡಿ ಬೆಂಕಿಗೆ ಹಾಕಬೇಕು! ಚಿಃ!೩೮

ಒಲಿಸಿದ ಪೆಣ್‌ ಪೆರರೊಳ್‌ ಸಂ
ಚಲಿಸಿದೊಡಿದು ಸುಖಮೆ ಪರಮಸುಖಸಂಪದಮಾ
ಸಲಿಸಿ ಸಲೆ ನೆರೆವ ಮುಕ್ತಿಯ
ನೊಲಿಸುವೆನಿನ್ನೊಲ್ಲೆನುಟಳಿದ ಪೆಂಡಿರ ನಣ್ಪಂ೬೪


ಎಂದಿತು ಬಹುವಿಕಲ್ಪದ
ದಂದುಗದೊಳೆ ಬೆಳಗುಮಾಡಿ ಮೆಯ್ಮುರಿದೆರ್ದಂ
ಬಂದು ತೊಡೆವೊಯ್ದು ಭೋಧಿಸಿ
ದಂದದಿನೆಸಗಿತ್ತು ಸುಪ್ರಭಾತಾತೋದ್ಯಂ೬೫


ಕೃತಕೃತ್ಯದಾನನಾವೀ-
ಕ್ಷಿತಿಘೃತನಾಸ್ಪೃಷ್ಟಕಪಿಳನೊಯ್ಯನೆ ಸಾರ್ದಂ
ಕತಿಪಯ ಪರಿಚಿಪರಿಜನ
ಚತುರವಚಃ ಪ್ರಚಯರು ಚಿಯನರಸಿಯನರಸಂ೬೬




೬೪. ನಾನು ಒಲಿಸಿಕೊಂಡ ಹೆಂಡತಿ ಚಂಚಲೆಯಾಗಿ ಅನ್ಯಾಸಕ್ತಳಾದಳೆಂದಮೇಲೆ,
ಏನು ಸುಖ? ಇದರ ಬದಲಾಗಿ ಮುಕ್ತಿಯನ್ನೇ ಒಲಿಸಿಕೊಂಡರೆ ನನಗೆ
ಪರಮಸುಖದ ಸಂಪತ್ತು ದೊರೆಯುತ್ತದೆ; ಆ ಮುಕ್ತಿಯ ಒಲವೂ ನನ್ನ ಮೇಲೆ
ಸ್ಥಿರವಾಗುತ್ತದೆ. ಹೀಗೆಂದಾದಮೇಲೆ ಉಳಿದ ಸ್ತ್ರೀಯರ ಯಾವ ಬಗೆಯ ನಂಟೂ
ನನಗೆ ಬೇಕಾಗಿಲ್ಲ”. ೬೫. ಎಂದೆಲ್ಲ ಹಲವು ಬಗೆಯಾಗಿ ವಿಚಾರ ಮಾಡಿದ
ಯಶೋಧರನು ಅದರಲ್ಲೆ ತೊಳಲಾಡಿ ಕಣ್ಣಲ್ಲೆ ಬೆಳಗುಮಾಡಿದನು. ಸುಪ್ರಭಾತದ
ಮಂಗಳವಾದ್ಯಗಳು ಮೊಳಗಿದವು. ಆ ಧ್ವನಿ ಅವನನ್ನು ತೊಡೆ ತಟ್ಟಿ ಎಬ್ಬಿಸುವಂತಿತ್ತು.
೬೬. ಅವನು ಮೆಯ್‌ಮುರಿದು ಎದ್ದನು. ನಿತ್ಯದಂತೆ ದಾನವನ್ನಿತ್ತನು. ತುಪ್ಪದಲ್ಲಿ
ತನ್ನ ಮುಖವನ್ನು ನೋಡಿಕೊಂಡನು. ಕಪಿಲೆ ಹಸುವನ್ನು ಮೆಯ್ಮುಟ್ಟಿ ಮಂಬರಿದನು;
ರಾಣಿಯ ಸಮೀಪವನ್ನು ಸೇರಿದನು. ಅವಳು ಕೆಲವು ಮಂದಿ ಪರಿಚಿತ ಸೇವಕ
ಜನರ ಚತುರವಚನಗಳನ್ನು ಕೇಳುತ್ತಾ ಮೆಚ್ಚುಗೆಯನ್ನು ಪ್ರಕಟಿಸುತ್ತಿದ್ದಳು.

ಲಂಪಣನವೊಲೇನಾನುಮ
ಲಂಪಿನ ನಗೆನುಡಿಯ ನೆವದೆ ನೆಯ್ದಿಲ ಪೂವಿಂ
ದಂ ಪೊಯ್ಯೆ ಮೂರ್ಛೆವೋದಳ್‌
ಸಂಪಗೆಯಲರ್ಗ೦ಪು ಪೊಯ್ದ ತುಂಬಿಯ ತೆರದಿಂದ೬೭


ಅಕಟಕಟ ನೊಂದಳೆತ್ತಿರೆ
ಸುಕುಮಾರಿಯನೆನಿತುಮಿನಿತು ಕೊಂಕಿಂ ನುಡಿದಂ
ಪ್ರಕುಪಿತಚಿತ್ತಂ ಭೂ ನಾ
ಯಕನೇನಣಕಕ್ಕೆ ಸವಣನುಂ ಸೈರಿಪನೇ೬೮


ದೈವದಿನೆಂತಕ್ಕಿಂದಿನ
ಸಾವೋಸರಿಸಿದುದು ಕರ್ಣಭೂಷಾವಳಿ ಭೂ
ಷಾವಳಿಯಾಗದೆ ಸೆಳೆದೊಡೆ
ಸಾವಲ್ಲಿಗೆ ಕಯ್ದುವಾಯ್ತು ನೆಯ್ದಿಲ ಕುಸುಮಂ೬೯




೬೭. ಯಶೋಧರನೂ ಕಾಮಾಸಕ್ತನೆನ್ನುವಂತೆ ಬಳಿಸಾರಿ ಏನೇನೋ ಶೃಂಗಾರದ
ಚಾಟುವಚನಗಳನ್ನಾಡಿ, ಅದೇ ನೆವದಿಂದ ಅವಳನ್ನು ನೆಯ್ದಿಲ ಹೂವಿನಿಂದ
ಹೊಡೆದನು. ಒಡನೆಯೇ ಅಮೃತಮತಿ ಮೂರ್ಚ್ಛಾಕ್ರಾಂತೆಯಾದಳು. ಸಂಪಗೆಯ
ಹೂವಿನ ಕಂಪು ತಾಗಿದೊಡನೆಯೆ ತುಂಬಿ ಮೆಯ್ಮರೆಯುತ್ತದಷ್ಟೆ.೩೯ಅವಳ
ನಟನೆಯಿ೦ದ ಯಶೋಧರನು ರೋಷಾವಿಷ್ಟನಾದನು. ೬೮. ಅದನ್ನು ವಕ್ರವಾದ
ಮಾತಿನ ರೂಪದಲ್ಲಿ ಕಾಣಿಸಿದನು: “ಅಯ್ಯಯ್ಯೋ! ಬಹಳ ನೋವಾಯಿತು!
ಈಕೆ ಅತ್ಯಂತ ಸುಕುಮಾರಿ, ಎತ್ತಿ ಉಪಚರಿಸಿರಿ!” ಎಂದು ಕೊಂಕಾಗಿ ನುಡಿದನು.
ಅಣಕಾಟವನ್ನು ಸವಣನಾದರೂ ಸಹಿಸಿಕೊಂಡಾನೇ!೬೯. ದೈವಾನುಗ್ರಹದಿಂದ
ಇಂದು ಬರಬಹುದಾಗಿದ್ದ ಮರಣವು ತೊಲಗಿಹೋಯಿತು! ಕಿವಿಯ ಆಭರಣವಾದ
ನೆಯ್ದಿಲ ಹೂ ಇಂದು ಕರ್ಣಾಭರಣವಾಗದೆ, ಸಾಯುವ ಸಂದರ್ಭವು
ಸನ್ನಿಹಿತವಾದ ಕಾರಣ, ಸೆಳೆದ ಒಂದು ಆಯುಧದಂತಾಯಿತಲ್ಲ! ೭೦. ಹಿಂದಣ
ರಾತ್ರಿ ಸಂಭವಿಸಿದ ಹೊಲಸಿನ ಕೆಲಸವನ್ನು ಯಶೋಧರನು ಈ ರೀತಿಯ

ಪೋದಿರುಳಿನ ಕಿತ್ತಡಮಾ
ಮೂದಲೆಯಾಗಿಂತು ನುಡಿದೊರಿಟೆದುದನರಿದಾ
ಪಾದರಿ ಬೇಸತ್ತವೊಲಿರೆ
ಪೋದಂ ಬಗೆ ಕದಡಿ ತಾಯ ಪೊರೆಗೆ ನೃಪೇಂದ್ರಂ೭೦


ಮಗನ ಮೊಗಮಂ ನೀಡುಂ ನೋಡುತ್ತು ಮಳ್ಕರುಳುರ್ಕೆಯಿಂ
ದುಗುವ ಮೊಲೆವಾಲ್‌ ಪುಣ್ಯಸ್ನಾನಾಂಬುವಾಗೆ ಪದಾಬ್ಜದಿಂ
ನೆಗಪಿ ಪಲವಪ್ಪಾ ಶೀರ್ವಾದಂಗಳಿಂದಮರ್ದಪ್ಪಿ ಜೋ
ಲ್ದುಗುವ ಕುರುಳಂ ತಿರ್ದುತ್ತು ಮಿಂತೆದಳಂದಿನ ಭಂಗಿಯಂ೭೧


ಅಭಯರುಚಿಕುಮಾರಂ ಮಾರಿದತ್ತಂಗೆ ಹಿಂಸಾ
ರಭಸಮತಿಗೆ ಸಯ್ಪಂ ಪೇಳ್ದು ಧರ್ಮಕ್ಕೆ ತಂದೀ
ಶುಭಕಥನಮನತ್ಯಾನಂದದಿಂ ಕೇಳ್ವ ಭವ್ಯ
ಪ್ಸರಭು ಸಭೆಗೆಸೆದಿರ್ಕುಂ ಮಂಗಳಂ ಶ್ರೀವಿಲಾಸಂ೭೨


ಮೂದಲೆಯ ಮಾತಾಗಿ ತಿಳಿಸಿದನು. ಜಾರೆಯಾದ ಅಮೃತಮತಿಗೆ ಇದು
ಗೊತ್ತಾಗದಿರಲಿಲ್ಲ. ಆಗ ಅವಳು ಒಮ್ಮೆ ಬೇಸತ್ತಳು. ಚೇತರಿಸಿಕೊಳ್ಳುವಾಗ
ಯಶೋಧರನು ಅಲ್ಲಿರಲಿಲ್ಲ. ಅವನು ಮನಸ್ಸು ಕದಡಿದುದರಿಂದ ಅಲ್ಲಿ ನಿಲ್ಲಲಾರದೆ
ತಾಯಿಯ ಬಳಿಗೆ ತೆರಳಿದ್ದನು. ೭೧.ಮಗನು ಬಂದಾಗ ಚಂದ್ರಮತಿ ಅವನ
ಮುಖವನ್ನೇ ಗಮನವಿಟ್ಟು ನೋಡಿದಳು. ಪುತ್ರವಾತ್ಸಲ್ಯದ ಆಧಿಕ್ಯದಿ೦ದ ಅವಳ
ಮೊಲೆ ಹಾಲು ಉಕ್ಕಿ ಹರಿಯಿತು. ಅದುವೆ ಯಶೋಧರನಿಗೆ ಪವಿತ್ರ ಸ್ನಾನ
ಜಲವಾಯಿತು. ತಾಯಿಯ ಪಾದಗಳಿಗೆರಗಿದ ಮಗನನ್ನು ಮೇಲಕ್ಕೆತ್ತಿ ತಾಯಿ
ಚಂದ್ರಮತಿ ಹಲವು ರೀತಿಯಲ್ಲಿ ಅವನನ್ನು ಹರಸಿದಳು; ಪ್ರೀತಿಯಿಂದ
ಅಪ್ಪಿಕೊಂಡಳು. ಅತ್ತಿತ್ತ ಕೆದರಿಹೋದ ಮುಂಗುರುಳನ್ನು ಹಿಂದಕ್ಕೆ ನೇವರಿಸುತ್ತ
ಅವಳು ಮಗನ ಅಂದಿನ ರೀತಿಯನ್ನು ಆಡಿ ತೋರಿಸಿದಳು. ೭೨. ಹಿಂಸೆಯಲ್ಲೇ
ಮನಸ್ಸು ಮುಂದಾಗುತ್ತಿದ್ದ ಮಾರಿದತ್ತನಿಗೆ ಅಭಯರುಚಿ ಕುಮಾರನು ಸರಿಯಾದ
(ಪುಣ್ಯದ) ವಿಷಯವನ್ನು ಹೇಳಿ, ಅವನನ್ನು ಧರ್ಮದ ದಾರಿಗೆ ತಂದನು.
ಇಂತಹ ಮಂಗಲಕರವಾದ ಕಥೆಯನ್ನು ಅತ್ಯಾನಂದದಿಂದ ಕೇಳುವ ಭವ್ಯಪ್ರಭುಸಭೆಗೆ
ಮಂಗಲ ಸುಪದ್ವಿಲಾಸವು ಶೋಭಿಸುತ್ತದೆ.

ಮೂರನೆಯ ಅವತಾರ

ಶ್ರೀ ರಮಣಿ ತೋರಮುತ್ತಿನ
ಹಾರದೊಳೊಲೆದುಯ್ಯಲಾಡೆ ನಿತ್ಯವಸಂತಂ
ಪೇರುರಮಾಗಿರೆ ತಾಳ್ದಿದ
ರಾರೊ ಯಶೋಧರನೃಪೇ೦ದ್ರ ನೀನಲ್ಲದವರ್‌


ನಿನಗೆ ಶುಭವೆಂದ ವಂದಿಯ
ಮನೆಯಂಗಣದೊಳಗೆ ಪಣ್ತು ಪರ್ವಿದ ಮಂದಾ
ರ ನಮೇರು ಪಾರಿಜಾತದ
ಬನದೊಳ್‌ ಸಿರಿ ಮೆರೆವುದಲ್ತೆ ವನಕೇಳಿಗಳಂ


ಮನಸಿಜ ಕಲ್ಪಲ ತಾನಂ
ದನಮೆನೆ ಬಿಂಕಕ್ಕೆ ಕೊಂಕಿದಬಲಾಜನಮಂ
ನನೆಕೊನೆವೋಗಿಸುತಿರ್ಪುದು
ಮನುಜ ಮನೋಭವ ಣವದ್ವಿಳಾಸವಸಂತಂ

_____________

೧. “ಯಶೋಧರ, ವಿಸ್ತಾರವಾದ ಎದೆಯಲ್ಲಿ ನಿತ್ಯವಸಂತವನ್ನು ನೆಲೆಗೊಳಿಸಿ,
ಅಲ್ಲಿ ಶ್ರೀ ವನಿತೆಗೆ ಅಣಿಮುತ್ತಿನ ಹಾರವನ್ನು ಉಯ್ಯಾಲೆಯಾಗಿ ಮಾಡಿ, ಅದರಲ್ಲಿ
ಅತ್ತಿತ್ತ ತೊನೆದಾಡುವಂತೆ ಮಾಡುವ ಭೂಪತಿಗಳು ನೀನಲ್ಲದೆ ಇನ್ನಾರಿದ್ದಾರೆ.೪೦
೨. ನಿನಗೆ ಮಂಗಲಾಶಂಸನ ಮಾಡುತ್ತಿದ್ದಾರೆ ವಂದಿಗಳು. ಅವರ ಮನೆಯಂಗಳದಲ್ಲಿ
ಲಕ್ಷ್ಮೀದೇವಿ ವನಕ್ರೀಡೆಯನ್ನಾಡುತ್ತಾ ಇದ್ದಾಳೆ. ಇದಕ್ಕೆ ಅಲ್ಲಿ ಫಲವತ್ತಾಗಿ ಹಬ್ಬಿ
ಬೆಳೆದ ಮಂದಾರ, ನಮೇರು(ಸುರಗಿ), ಪಾರಿಜಾತ ಮುಂತಾದ ಮರಗಳೇ
ಒಂದು ತೋಪಾಗಿ ಪರಿಣಮಿಸಿದೆ.೪೧ ೩. ಮನುಷ್ಯರಲ್ಲಿ ನೀನೇ
ಮನೋಭವನಾಗಿದ್ದೀಯೆ ಕಾಮನ ಕಲ್ಪವಲ್ಲಿವಿತಾನದ ನಂದನದಂತಿರುವ
ಅಬಲಾಜನರು, ನಿನ್ನ ವಿಲಾಸವಸಂತದಲ್ಲಿ; ಬೆಡಗಿನ ಬಿಂಕದಿಂದ ಬಾಗಿಕೊಂಡಿದ್ದು.

ಬಳೆಗೋದುದು ಕೀರ್ತಿದಿಶಾ
ಕಳಭಂಗಳ ನಿಗ್ದವಂಗಳೊಳ್ ರಿಪುಕಾಂತಾ
ವಳಿಯೊಳ್ ಭವತ್ಪ್ರತಾಪಂ
ಬಳೆಗಳೆಯಿಸೆ ತಾನದಕ್ಕೆ ಮಚ್ಚರಿಸುವವೊಲ್


ಉದಧಿ ಪರಿಯಂತಮಿಳೆಯೊಳ
ಗೊದವಿದ ನಿನ್ನಾಜ್ಞೆ ಮಣಿಕರೀಟಂಗಳನೀ
ಳೊದೆದುರುಳೆ ನೂಂಕಿ ಕುಳ್ಳಿ
ರ್ದುದು ನೆತ್ತಿಯ ಮೇಲೆ ಸಕಲಭೂಪಾಲಕರಾ


ಕೊರತೆ ನಿನಗಿಲ್ಲದೇಕೆಂ
ದರಿಯೆಂ ನೀರೋಡಿ ನಿನ್ನ ತನುವಿನ ಬಣ್ಣಂ
ಬರುಗೋಳದವೊಲಾಯ್ತೀಕ್ಷಿಸಿ
ಮರುಗಿದುದನೀರ ಮೀನ್ಬೊಲಿಂದೆನ್ನ ಮನಂ



ನನೆಕೊನೆವೋಗುತ್ತಿದ್ದಾರೆ.೪೨ ೪. ನಿನ್ನ ಪ್ರತಾಪ ಶತ್ರು ಪತ್ನಿಯರ ಕೈಗಳಲ್ಲಿರುವ
ಬಳೆಗಳನ್ನು ಕಂಡು ಅಸೂಯೆಯಿಂದ ಅವುಗಳನ್ನು ಕಳಚಿ, ಕೀರ್ತಿದಿಶಾಕಳಭಗಳ
ದಾಡೆಗಳಿಗೆ ಆ ಬಳೆಗಳನ್ನು ತೊಡಿಸುತ್ತಾ ಇದೆ.೪೩ ೫. ನಿನ್ನ ಆಜ್ಞೆ
ಕಡಲತಡಿಯವರೆಗೂ ವ್ಯಾಪಿಸಿದೆ. ಅಷ್ಟೇ ಅಲ್ಲ. ಎಲ್ಲ ಭೂಪಾಲಕರ
ರತ್ನಕಿರೀಟಗಳನ್ನೆಲ್ಲ ಸೆಳೆದು, ತುಳಿದು ಉರುಳಿಸಿ, ತಳ್ಳಿ ಅವರ ನೆತ್ತಿಯ ಮೇಲೆಯೇ
ಕುಳಿತುಕೊಂಡಿದೆ.೪೪ ೬. ನಿನಗೆ ಯಾವ ಬಗೆಯ ಕೊರತೆಯೂ ಈವರೆಗಿಲ್ಲ.
ಆದರೆ ನಿನ್ನ ದೇಹಕಾಂತಿ ನೀರು ಕಳೆದಕೊಂಡು ಒಣ ಕೆರೆಯಂತಾಗಿದೆ.೪೫
ಇದೇಕೆಂದು ನನಗೆ ತಿಳಿಯುವುದಿಲ್ಲ. ನಿನ್ನನ್ನು ನೋಡುವಾಗ, ಇಂದು ನನ್ನ

ಮಂದಸ್ಮಿತ ವರ ಕೌಮುದಿ
ನಿಂದುದು ಮೃಗನಾಭಿ ತಿಲಕಲಕ್ಷ್ಮದ ಪೊಳಪಿ
ಲ್ಲಿ೦ದೇಕೆ ಕಂದ ಪಗಲೊಗೆ
ದಿಂದುವಿನಂತಾಯ್ತು ನಿನ್ನ ಮಂಗಲ ವದನಂ


ಎಂದು ಬೆಸಗೊಂಡ ತಾಯ್ಗೆ ಮ
ನಂದೋರದೆ ನೆವದಿನರಸನಿಂತುಸಿರ್ದಂ ಸುಯ್‌
ಕ೦ದಿಸಿದಧರಕ್ಕೆ ಸುಧಾ
ಬಿಂದುಗಳಂ ತಳೆಯೆ ದಂತಕಾಂತಿ ಪ್ರಸರಂ


ದೇವಿಯರ ಪರಕೆಯಿಂದೆನ
ಗಾವುದರೊಳ್‌ ಕೊರತೆಯಿಲ್ಲ ಪೋದಿರುಳೊಳ್‌ ಪೊಂ
ದಾವರೆಗೊಳದಂಚೆ ಕಳಿ
ಲ್ದಾವರೆಗೊಳದೊಳಗೆ ನಲಿವಕನಸಂ ಕಂಡೆಂ


ಮನಸ್ಸು ನೀರಾರಿದ ಕೊಳದ ಮೀನಿನಂತೆ ಮರುಕಕ್ಕೊಳಗಾಗಿದೆ. ೭. ಕಂದ,
ತಿಂಗಳ ಬೆಳಕಿನಂತಹ ನಿನ್ನ ಮುಗುಳುನಗೆ ಇಂದು ಇಲ್ಲವಾಗಿದೆ. ಕಸ್ತೂರಿತಿಲಕದ
ಗುರುತೇ ಶೋಭಿಸುವುದಿಲ್ಲವೇಕೆ? ನಿನ್ನ ಮಂಗಲ ಮುಖವು ಹಗಲು ಮೂಡಿದ
ಚಂದ್ರನಂತಾಗಿದೆಯಲ್ಲ! ಇದೇಕೆ, ಮಗು?” ೮. ಹೀಗೆ ಕೇಳಿದ ತಾಯಿಗೆ ತನ್ನ
ಮನಸ್ಸಿನಲ್ಲಿರುವುದನ್ನು ತೋರಿಸದೆ ಬೇರೊಂದು ನೆಪವನ್ನು ಹೀಗೆ ಹೇಳಿದನು.
ನಿಟ್ಟುಸಿರಿನಿ೦ದ ಕಂದಿದ ತುಟಿಗಳಿಗೆ ಹಲ್ಲಿನ ಕಾಂತಿಯು ಅಮೃತದ ಬಿಂದುಗಳನ್ನು
ತಳೆಯಿತು. ೯. “ಅಮ್ಮಾ, ದೇವಿಯರಾದ ನಿಮ್ಮ ಆಶೀರ್ವಾದ ಬಲದಿಂದ
ನನಗೇನೂ ಕೊರತೆಯಿಲ್ಲ ತಾಯಿ! ಆದರೆ ನಿನ್ನೆ ರಾತ್ರಿ ಒಂದು ವಿಚಿತ್ರವಾದ
ಕನಸನ್ನು ಕಂಡೆನಮ್ಮ! ಅದರಲ್ಲಿ ಸ್ವರ್ಣವರ್ಣದ ತಾವರೆಗಳ ಕೊಳದಲ್ಲಿ
ವಿಹರಿಸುತ್ತಿದ್ದ ಒಂದು ಹಂಸೆ ಕೊಳಕು ಕೋವಳೆಯ ಕೊಳದಲ್ಲಿ ಸಂತೋಷದಿಂದ

ಗೋದಾಮೆಗಂಡ ನವಿಲಂ
ತಾದುದು ಕಾರ್ಗಂಡ ಹಂಸನವೊಲಾದುದಲರ್‌
ವೋದ ಲತೆಗಂಡ ವಿರಹಿವೊ
ಲಾದುದು ದುರ್ನಯದ ಕಾಣ್ಕೆಗೆನ್ನಯ ಚಿತ್ತಂ೧೦


ವನಿತೆಯ ಕೇಡಂ ಜನಪತಿ
ಕನಸಿನ ನೆವದಿಂದೆ ಮರಸೆ ತಲ್ಲಣದಿಂ ತಾಯ್‌
ನೆನೆದಳ್‌ ಪೊಲ್ಲಮೆಯಂ ವಂ
ಚನೆಯೆಲ್ಲಿಯುಮೊಳ್ಪು ಮಾಡಲಾರದು ಕಡೆಯೊಳ್‌೧೧


ಅಡಸಿದ ನಲ್ಲಳ ತಪ್ಪಂ
ತಡವಿಕ್ಕಿದೊಡೇಳು ಭವದ ಕೇಡಡಸುವ ಕಿಳ್
ನುಡಿಯಂ ನುಡಿದಳ್‌ ತಾಯೊಂ
ದಡಸಿದೊಡೇಳಡಸಿತೆಂಬ ನುಡಿ ತಪ್ಪುಗುಮೇ೧೨


ವಿಹರಿಸುವುದನ್ನು ಕಂಡೆ. ೧೦. ಇಂತಹ ಹೊಲಸಿನ ಘಟನೆಯನ್ನು ಕಂಡ
ಬಳಿಕ ನನ್ನ ಮನಸ್ಸು ಗೋದಾಮೆಯನ್ನು ಕಂಡ ನವಿಲಿನಂತೆ ಆಯಿತು,೪೬
ಮಳೆಗಾಲವನ್ನು ಕಂಡ ಹಂಸದಂತೆ ತಳಮಳಿಸಿತು. ಮಾತ್ರವಲ್ಲ, ಹೂಬಿಟ್ಟ
ಲತೆಗಳನ್ನು ಕಂಡ ವಿರಹಿಯಂತೆ ಸಂತಾಪಗೊಮಡಿತು.೪೭ ೧೧. ಕೈಹಿಡಿದವಳ
ದುರ್ವರ್ತನೆಯನ್ನು ನೇರಾಗಿ ಹೇಳದೆ ಯಶೋಧರನು ಅದಕ್ಕೆ ಕನಸಿನ ರೂಪವನ್ನು
ಕೊಟ್ಟು ಹೇಳಿದನು. ಅದನ್ನು ಕೇಳಿದಾಗ ಚಂದ್ರಮತಿಗೆ ತಲ್ಲಣವಾಯಿತು. ಅವಳು
ಅದರಿಂದ ಕೆಟ್ಟದ್ದನ್ನೇ ನಿರೀಕ್ಷಿಸುವ೦ತಾಯಿತು. ವಂಚನೆಯಿಂದ ಎಲ್ಲಿಯಾದರೂ
ಯಾವಾಗಲಾದರೂ ಕಡೆಗಾದರೂ ಒಳ್ಳೆಯದಾದೀತೆ? ೧೨. ತನ್ನ
ನಲ್ಲೆಯೆನ್ನಿಸಿದವಳ ತಪ್ಪನ್ನು ಅವನು ಮರೆಮಾಡಿ ತಡೆದಿಟ್ಟನು. ಇದರ
ಪರಿಣಾಮವಾಗಿ ಅವನ ತಾಯಿ ಮುಂದೆ ಏಳೇಳು ಜನ್ಮಗಳ ಪರಿಯಂತವೂ
ಕೆಡಕಾಗುವ ಕೆಟ್ಟ ಮಾತನ್ನೇ ಹೇಳಿದಳು. ಒಂದು ಸೇರಿದರೆ ಏಳು ಸೇರಿಕೊಳ್ಳುತ್ತದೆ

ದೇವ ಕನಸಿದು ಕರಂ ದೋ
ಷಾವಹಮಿಳಿಕಯ್ಯಲಾಗ ನಿನ್ನಸಿಮುಖದಿಂ
ದಾವಣಿಗುರಿಯಂ ತರಿದೊಡೆ
ದೇವಿ ಶುಭೇತರವಿನಾಶಮಂ ದಯೆಗೆಯ್ಗುಂ೧೩


ಮುಂತರಿಪೆ ತಾಯ ವಚನದೊ
ಳ೦ತು ಶುಭೇತರ ವಿನಾಶ ಶಬ್ದಮಿಳೇಶಂ
ಶಾಂತಂ ಪಾಪಮೆನುತ್ತುಂ
ಶಾಂತಮನು ಪೇಸಿ ಮುಚ್ಚಿಕೊಂಡಂ ಕಿವಿಯಂ೧೪


ಮೇಗಂ ಬಗೆವೊಡೆ ವಧೆ ಹಿತ
ಮಾಗದು ಮರ್ತ್ಯಂಗೆ ನಿತ್ಯಮೇ ಮಾನಸವಾಳ್
ಈಗಳೊ ಮೇಣ್‌ ಆಗಳೊ ಮೇಣ್‌
ಸಾಗುದುರೆಗೆ ಪುಲ್ಲನಡಕಿ ಕೆಡುವನೆ ಚದುರಂ೧೫


ಎ೦ಬ ಮಾತು ತಪ್ಪದಷ್ಟೆ! ೧೩. 'ಅಪ್ಪಾ ಈ ಕನಸು ಬಹಳ ಕೆಡುಕುಂಟಾಗುವುದನ್ನೇ
ಸೂಚಿಸುತ್ತದೆ. ಆದುದರಿಂದ ಇದನ್ನು ಕಡೆಗಣಿಸಬಾರದು. ನಿನ್ನ ಖಡ್ಗಧಾರೆಯಿಂದ,
ಕಟ್ಟಿದ ಕುರಿಯನ್ನು ಕತ್ತರಿಸಿ ಅರ್ಪಿಸಿದೆಯೆಂದಾದರೆ ಚಂಡಿಕಾದೇವಿ
ಅಮಂಗಲವನ್ನೆಲ್ಲ ದ್ವಂಸ ಮಾಡಿ ದಯೆಯನ್ನು ತೋರಿಸಿಯಾಳು' ಎಂದು
ಸಲಹೆಯಿತ್ತಳು. ೧೪. ತಾಯಿಯ ಮಾತಿನಲ್ಲಿ ಅಮಂಗಲ ವಿನಾಶದ ನುಡಿ
ಬಂದುದು ಅವನಿಗೆ ಮುಂದೆ ಬರುವ ಅಮಂಗಲವನ್ನೇ ಸೂಚಿಸಿದಂತೆ
ಭಾಸವಾಯಿತು.೪೮ ಅವನು “ಶಾಂತಂ ಪಾಪಂ! ಶಾಂತಂ ಪಾಪಂ!" ಎನ್ನುತ್ತ
ಕಿವಿ ಮುಚ್ಚಿಕೊಂಡನು. ೧೫. “ಅಮ್ಮಾ! ಮೇಲ್ಮೆಯನ್ನು ಬಯಸುವುದಾದರೆ,
ಕೊಲೆ ಮನುಷ್ಯನಿಗೆ ಹಿತವನ್ನುಂಟು ಮಾಡಲಾರದು, ಮನುಷ್ಯನ ಬಾಳುವೆ
ಶಾಶ್ವತವಾಗಿರುತ್ತದೆಯೆ? ಬುದ್ಧಿವಂತನಾದವನು ಈಗಲೋ ಇನ್ನಷ್ಟು ಹೊತ್ತಿನಲ್ಲೋ
ಸಾಯುವ ಕುದುರೆಗೆ ಹುಲ್ಲು ಹಾಕಿ ಹಾಳಾಗುತ್ತಾನೆಯೇ” ಎಂದು ತಾಯಿಗೆ

ಎಂದೊಡೆ ಮುನಿದಂಬಿಕೆಯಿಂ
ತೆ೦ದಳ್‌ ನಿಜಮಪ್ಪ ಮೋಹದಿಂ ಸಲುಗೆಯಿನೆ
ಯ್ತಂದಳ್‌ ನಾಡೆ ನೃಪೇಂದ್ರನ
ಮುಂದಣ ಗತಿಗಪ್ಪ ಬಟ್ಟೆಯ೦ ಕಟ್ಟುವವೊಲ್‌೧೬

ಪರಿಹರಿಪೆಯೆಮ್ಮ ನುಡಿಯಂ
ಗುರುವಚನಮಲಂಘನೀಯವಮೆನ್ನದೆ ನೀನಾ
ದರದಿಂ ಕೈಕೊಳ್‌ ಧರ್ಮದೊ
ಳರಸುಗಳೇ ಶಾಂತಿಯೆಂದೊಡನುಸಿಸರಿಸರೆ ಪೇಳ್೧೭

ಇವು ಧರ್ಮಮೆಂದು ಬಗೆವೊಡ
ಮವಿವೇಕದೆ ಶಾಂತಿಮಾಡೆ ಭೇತಾಳಂ ಮೂ
ಡುವ ತೆರದೆ ಹಿಂಸೆಯಿ೦ ಮೂ
ಡುವ ಮುಂತಣ ಕೇಡನೆಂತು ಕಳಿವೆಂ ಬಳಿಯಂ೧೮


ಸಮಾಧಾನ ಹೇಳಿದನು ಯಶೋಧರ. ೧೬. ಈ ಮಾತನ್ನು ಕೇಳಿದೊಡನೆಯೇ
ತಾಯಿಯ ಮುನಿಸು ಮಸಗಿತು. ಆದರೂ ಅವಳು ಮೋಹದಿಂದಲೂ
ಸಲುಗೆಯಿಂದಲೂ ಯಶೋಧರನ ಬಳಿಗೆ ಬ೦ದು ಹೀಗೆ ನುಡಿದಳು, ಅವನ
ಮುಂದಿನ ಸದ್ಗಶಿಯ ದಾರಿಗೆ ಪ್ರತಿಬ೦ಧಕ ಹಾಕುವಂತೆ. ೧೭. “ನಮ್ಮ ಮಾತನ್ನು
ನಿರಾಕರಿಸುವೆಯಾ? ಗುರು ವಚನವು ಅಲಂಘನೀಯವೆನ್ನುವುದೂ ಗೊತ್ತಿಲ್ಲವೆ
ನಿನಗೆ? ನನ್ನ ಮಾತನ್ನು ಆದರದಿಂದ ಅಂಗೀಕರಿಸು. ಧರ್ಮದಿಂದಲೇ ಶಾಂತಿ
ಎಂಬುದನ್ನು ಅರಸರು ಅನುಸರಿಸುವುದಿಲ್ಲವೆ? ಹೇಳು.” ಯಶೋಧರನು
ನುಡಿದನು. ೧೮. “ಇವು ಧರ್ಮ ಎಂದು ಬಗೆದರೂ ಅವಿವೇಕದಿಂದ ಇಂತಹ
ಶಾಂತಿಯನ್ನು ಮಾಡಿದರೆ ಸರಿಯಾದೀತೆ? ಹಿಂಸೆಯನ್ನು ಮಾಡಿದರೆ ಮುಂದೆ
ಬೇತಾಳಾಕಾರದಿಂದ ಕೇಡೇ ಮೂಡಿಬಂದೀತು! ಅದನ್ನು ಆಮೇಲೆ

ಜೀವದಯೆ ಜೈನಧರ್ಮಂ
ಜೀವಹಿತಂ ನಂಬುವವರ್ಗೆ ಹಿಂಸೆಯ ಮೋಹಂ
ಭಾವಿತಮೆ ತಪ್ಪಿನುಡಿದಿರ್‌
ಕಾವರೆ ಕಣೆಗೊಳ್ವೊಡಬ್ಬೆ ಬಾರಿಪರೊಳರೇ೧೯


ಆದೊಡೆ ಸಿಟ್ಟಿನ ಕೋಳಿಯ
ನಾದೊಡಮಿಂದೊಂದನಿಕ್ಕವೇಳ್ಪಿದು ಮಿಕ್ಕಂ
ದಾದೇವಿಗೆನ್ನನಿಕ್ಕಿಯು
ಮೀ ದುರಿತಮನಿಂದು ಮಗನೆ ಪರಿಹರಿಸದಿರೆಂ೨೦


ಎನೆ ತಾಯ ಮೋಹದಿಂದಂ
ಜನಪನೊಂಡಂಬಟ್ಟು ಮನದೊಳಿಂತೆಂದಂ ಭಾ
ವನೆಯಿಂದಮಪ್ಪು ದಾಸ್ರವ
ಮೆನಗಿನ್ನೆಂತಪ್ಪ ಪಾಪಮಿದಿರ್ವಂದಪುದೋ೨೧


ತೊಲಗಿಸುವುದಾದರೂ ಹೇಗೆ? ೧೯. ಜೀವದಯೆಯೇ ಜೈನಧರ್ಮ.
ಪ್ರತಿಯೊಂದು ಜೀವಿಗೂ ಹಿತವಾಗಬೇಕೆಂದು ನಂಬುವವರಿಗೆ ಹಿಂಸೆಯ
ಮೋಹವಾದರೂ ಎಣಿಕೆಗೆ ಬಂದೀತೆ? ನಿಮ್ಮ ಮಾತು ಸರಿಯೆನ್ನಿಸಲಾರದಮ್ಮ!
ಕಾಯುವವರೇ ಕಣೆ ಹಿಡಿಯುವುದಾದರೆ ತಡೆಯುವವರಾರಿದ್ದಾರೆ?” ತಾಯಿ
ಮತ್ತೆ ಹೇಳಿದಳು ; ೨೦. ಆದರೆ “ಹಿಟ್ಟಿನ ಕೋಳಿಯನ್ನಾದರೂ ಇಂದು
ಬಲಿಕೊಡಲೇಬೇಕು, ಕಂದ! ಇದನ್ನೂ ನೀನು ಮೀರಿದೆಯೆಂದಾದರೆ, ಆ ದೇವಿಗೆ
ನನ್ನನ್ನೇ ಆಹುತಿಯನ್ನಾಗಿ ಕೊಡುತ್ತೇನೆ. ಇದರಿಂದಲಾದರೂ ಇಂದು ಬಂದ
ಈ ದುರಿತವನ್ನು ಪರಿಹರಿಸದೆ ಇರಲಾರೆ, ಮಗನೆ!” ೨೧. ಇಷ್ಟು ಹೇಳಿದಾಗ
ಯಶೋಧರನಿಗೆ ತಾಯಿಯ ಮಾತನ್ನು ನಿರಾಕರಿಸುವುದಾಗಲಿಲ್ಲ. ಅವನು ಮಾತೆಯ
ಮೇಲಿನ ಮೋಹದಿಂದಾಗಿ ಅವಳ ಮಾತಿಗೆ ಒಪ್ಪಿಗೆಯನ್ನಿತ್ತನು. ಮನಸ್ಸು ಮಾತ್ರ
ವಿಚಾರಪರವಾಯಿತು. ಆಸ್ರವವುಂಟಾಗುವುದು ಮನಸ್ಸಿನ ಎಣಿಕೆಯಿಂದಲೇ.೪೯
ಇನ್ನು ನನಗೆ ಎಂತಹ ಪಾಪ ಎದುರಾಗುವುದೋ! ೨೨. ತಾಯಿ ಹೇಳಿದಂತೆ

ಮಾಡದೊಡೆ ತಾಯ್ಗೆ ಮರಣಂ
ಮಾಡಿದೊಡೆನ್ನೊಂದು ಗತಿಗೆ ಕೇಡಿಂದೇನಂ
ಮಾಡುವೆನೆಂದಾಂದೋಳಮ
ನಾಡೆ ಮನಂ ತಮಮನಪ್ಪು ಕಯ್ದ ನಿಳೇಂ೨೨

ಆ ನೃಪತಿ ಬಳಿಕ ತಾಯುಂ
ತಾನುಂ ಚಂಡಿಕೆಯ ಪೂಜೆಗೆಂದೆಳ್ತಿಂದಂ
ನಾನಾ ವಿಧದರ್ಚನೆಯಿ೦ಂ
ಮಾನೋಮಿಯ ಮುಂದೆ ಬಂದ ಭೌಮಾಷ್ಟಮಿಯೊಳ್‌೨೩

ಕರಮೆಸೆಯೆ ಸಮೆದು ಬಂದುದು
ಚರಣಾಯುಧಮದರ ಚಿತ್ರಪರಿಶೋಭೆಗೆ ಜೆಂ
ತರನೊಂದಾಶ್ರಯಿಸಿರ್ದುದು
ಪರಸಿದಳುಗ್ಗಡಿಸಿ ಜನನಿ ಪುತ್ರಂ ಪೊಯ್ದಂ೨೪



ಮಾಡದಿದ್ದರೆ ಮಾತೆಯ ಮರಣವನ್ನು ಕಾಣಬೇಕಾಗುತ್ತದೆ.; ಮಾಡಿದರೆ ನನಗೆ
ಸದ್ಗತಿಗೆ ಕೇಡುಂಟಾಗುತ್ತದೆ. ಏನು ಮಾಡಲಿ! ಎಂದು ಯಶೋಧರನ ಮನಸ್ಸು
ಹಿಂದೆ ಮುಂದೆ ಉಯ್ಯಾಲೆಯಾಡಿತು. ಕಟ್ಟಕಡೆಗೆ ಅರಸನು ಆಜ್ಞಾನದ
ದಾರಿಯನ್ನೇ ಅವಲಂಬಿಸಿದನು. ೨೩. ಅವನೂ ಚಂದ್ರಮತಿಯೂ ಮಹಾನವಮಿ
ಹಿಂದಣ ಭೌಮಾಷ್ಟಮಿ೫೦ ದಿನ ಹಲವು ವಿಧದ ಅರ್ಚನೆಯಿಂದ ಚಂಡಿಕಾದೇವಿಯ
ಪೂಜೆಯನ್ನು ನೆರವೇರಿಸುವುದಕ್ಕಾಗಿ ಬಂದರು. ೨೪. ಬಲಿ ಕೊಡುವುದಕ್ಕಾಗಿ
ಹಿಟ್ಟಿನ ಒಂದು ಕೋಳಿಯನ್ನು ಬಹಳ ಸೊಗಸಾಗಿ ನಿರ್ಮಾಣ ಮಾಡಲಾಯಿತು.
ಅದರ ವಿಶೇಷವಾದ ಚೆಲುವು ಒಂದು ಪಿಶಾಚಿಯನ್ನು ಆಕರ್ಷಿಸಿತು. ಅದು ಆ
ಕೋಳಿಯೊಳಗೆ ಸೇರಿಕೊಂಡಿತು. ಸಕಾಲಕ್ಕೆ, ಚಂದ್ರಮತಿ ಗಟ್ಟಿಯಾಗಿ ಮಗನನ್ನು
ಆಶೀರ್ವದಿಸುತ್ತಿದ್ದ೦ಂತೆ ರಾಜನು ಆ ಕೋಳಿಯನ್ನು ಕಡಿದಿಕ್ಕಿದನು.

ತಲೆಯಿಂ ಕುಕ್ಕೂಕೂ ಎಂ
ಬುಲಿ ನೆಗೆದುದು ಕೂಗಿ ಕರೆವ ದುರಿತಂಗಳ ಬ
ಲ್ಲುಲಿಯೆನೆ ಪಿಟ್ಟಿನ ಕೋಳಿಯ
ತಲೆಯಂ ಪಿಡಿವಂತಿರಟ್ಟೆ ಪಾರಿದುದಿನಿಸಂ೨೫


ಪೊಡೆಯೆ ಕೃಕವಾಕು ನಿನದಂ
ಬಿಡದುಣ್ಮುತಿರಲ್ಕೆ ಕಯ್ಯ ಬಾಳ್‌ ಬೀಳ್ತಿರೆ ಪೊಯ್‌
ವಡೆದಂತೆ ಪಂದೆಯಂ ಪಾ-
ವಡರ್ದಂತಾಗಿರೆ ಯಶೋಧರಂ ಬೆರಗಾದಂ೨೬


ಏಕೆ ಕನಸೆಂದು ನುಡಿದೆನಿ-
ದೇಕಂಬಿಕೆ ಬಲಿಯನೊಡ್ಡಿದಳ್‌ ಕೂಗಿದುದೇ-
ಕೀ ಕೃತಕತಾಮ್ರಚೂಡನಿ-
ದೇಕೆಂದಾರಿವರಯ್ಯ ವಿಧಿವಿಳಸನಮಂ೨೭


೨೫. ತಕ್ಷಣದಲ್ಲಿಯೇ ಆ ಹಿಟ್ಟಿನ ಕೋಳಿಯೂ ಕೊಕ್ಕೋಕೊ ಎಂದು ಕೂಗಿತು.
ಮುಂದೆ ಬರಲಿರುವ ಕಷ್ಟಗಳನ್ನೇ ಹೀಗೆ ಕೂಗಿ ಕರೆಯುವುದೋ ಎಂಬಂತಿತ್ತು
ಆ ಆಕ್ರಂದನ. ತುಂಡಾದ ತಲೆಯನ್ನು ಬಿಡಲಾರೆನೆನ್ನುವಂತೆ ಆ ಕೋಳಿಯ
ಶರೀರವು ಸ್ವಲ್ಪ ದೂರಕ್ಕೆ ಹಾರಿತು. ೨೬. ಖಡ್ಗ ಪ್ರಹಾರವಾದ ಕೂಡಲೇ
ಕೋಳಿಯ ಕೂಗು ಕೇಳಿಸಿದುದೇ ತಡ, ರಾಜನ ಕೈಯ ಕತ್ತಿ ಕೆಳಕ್ಕುರುಳಿತು.
ತನ್ನನ್ನ ಯಾರೋ ಕಡಿದಂತೆಯೂ, ಹೇಡಿಯ ಮೇಲೆ ಹಾವು ಹರಿದಂತೆಯೂ
ಅವನು ಬೆರಗಾದನು. ೨೭. “ಅಯ್ಯೋ! ಕನಸೆಂದು ನಾನೇಕೆ ಹೇಳಿದೆ? ನನ್ನ
ತಾಯಿಯಾದರೂ ಆ ರೀತಿ ಬಲಿಕೊಡಿಸಿದುದೇಕೆ? ಈ ಕೃತಕವಾದ ಕೋಳಿ
ಹೀಗೇಕೆ ಕೂಗಿಕೊಂಡಿತು? ಹೀಗಾದುದೇಕೆ೦ಬ ವಿಧಿ ವಿಲಾಸವನ್ನು ಯಾರು

ಅಮೃತಮತಿಯೆಂಬ ಪಾತಕಿ
ಯ ಮಾಯೆ ಬನಮಾಯ್ತು ಚಂದ್ರಮತಿಮಾತೆಯ ಮಾ-
ತೆಮಗೆ ಬಲೆಯಾಯ್ತು ಹಿ೦ಸನ
ಮಮೋಘಶರಮಾಯ್ತು ಕಡೆದುದಾತ್ಮಕುರಂಗಂ೨೮


ಎಂದು ಮನಂ ಮರುಗುವಿನಂ
ನೊಂದಲ್ಲಿಂ ತಳರ್ದು ಮನೆಗೆ ಉಬ್ಬೆಗಮೆರೆದೊ-
ಯ್ವಂದದೆ ಬಂದೀ ರಾಜ್ಯದ
ದಂದುಗಮೇಕೆಂದು ತೊಳೆಯಲುದ್ಯತನಾದಂ೨೯


ಪರಿವಾರಮಂ ಪ್ರಧಾನರ-
ನಿರಿಸಿ ಯಶೋಮತಿಗೆ ರಾಜ್ಯಮಂ ಕೊಟ್ಟು ಯಶೋ-
ಧರನಿಂತು ತಪಕೆ ನಡೆಯ-
ಲ್ಕಿರೆ ಮೃತ್ಯುವಿನಂತೆ ಅರಸಿ ಬ೦ದಿಂತೆಂದಳ್‌೩೦


ಅರಿಯುವರು.? ೨೮. “ಅಮೃತಮತಿಯೆಂಬ ಪಾತಕಿಯ-ಮಾಯೆಯೇ
ವನವಾಯಿತು. ತಾಯಿಯಾದ ಚಂದ್ರಮತಿಯ ಮಾತೇ ನನಗೊಂದು ಬಲೆಯಾಗಿ
ಪರಿಣಮಿಸಿತು. ಹಿಂಸೆಯೇ ಅಮೋಘವಾದ ಬಾಣವಾಯಿತು. ಆತ್ಮವೆಂಬ
ಜಿಂಕೆಯು ಇದಕ್ಕೆ ಬಲಿಬಿದ್ದಿತು.”೫೧ ೨೯. ರಾಜನ ಮನಸ್ಸು ಮರುಕಕ್ಕೆ ಒಳಗಾಗಿ
ಸಂಕಟಗೊಂಡಿತು. ಅಲ್ಲಿಂದ ಹೊರಟು ಅವನು ಮನೆ ಸೇರಿದನು. ಅಲ್ಲಿಯೂ
ಉದ್ವೇಗವು ತಗ್ಗಲಿಲ್ಲ. ಅವನು ತನಗೆ ಈ ರಾಜ್ಯಭಾರದ ಹೊರಯೇಕೆ ಎಂದು
ಎಣಿಸಿಕೊಳ್ಳುತ್ತಾ ಅದನ್ನು ಬಿಟ್ಟುಬಿಡುವ ನಿರ್ಧಾರವನ್ನು ಕೈಗೊಂಡನು. ೩೦.
ಪರಿವಾರವನ್ನೂ ಪ್ರಧಾನರನ್ನೂ ಇರಿಸಿಕೊಂಡು, ತನ್ನ ಮಗನಾದ ಯಶೋಮತಿಗೆ
ರಾಜ್ಯವನ್ನೊಪ್ಪಿಸಿ ತಪಸ್ಸಿಗೆ ಹೊರಡಬೇಕೆಂದು ಸಂಕಲ್ಪಿಸಿದನು. ಅಷ್ಟರಲ್ಲಿ ಮೃತ್ಯುವೇ
ಎದುರು ಬಂದಂತೆ ಅಮೃತಮತಿ ಅಲ್ಲಿಗೆ ಬಂದಳು. ೩೧. “ದೇವಾ, ನಾನೂ

ದೇವರ ಬಳಿಯೊಳೆ ಬರ್ಪೆಂ
ಪೂವಿನ ಸೌರಭದ ಮಾಳ್ಕೆಯಿ೦ ಗಮನಪ್ರ-
ಸಾವನೆಯೊಳಿಂದು ನೀಮುಂ
ದೇವಿಯುಮಾರೊಗಿಸಲ್ಕೆ ಎನ್ನರಮನೆಯೊಳ್‌೩೧


ಎನೆ ಜನಪತಿ ಮನಮಲ್ಲದ
ಮನದೊಳೊಡಂಬಟ್ಟು ಬಂದು ತಾಯೊಡನುಣಿ ನಂ-
ಜಿನ ಲಡ್ಡುಗೆಯಂ ಮಾಡಿದು-
ದನುಣ್‌ ಮಹಾರಾಜ ಎಂಬಿನಂ ಸವಿದುಂಡಂ೩೨


ಅರಸನ ಮೂದಲೆ ಮನದೊಳ-
ಗಿರೆ ಮೇಳಿಸಿಕೊಂಡು ಬ೦ದು ಪಾತಕಿ ಕೊಂದಳ್‌
ಬೆರಗಿ೦ ಗಂಡನ ನಾ ಸ್ತ್ರೀ
ಚರಿತಮದೇ೦ ಕಳೆಯಲರಿದು ಪೆಂಡಿರ ಕೃತಕಂ೩೩



ನಿಮ್ಮೊಂದಿಗೆ ತಪೋವನಕ್ಕೆ ಬರುತ್ತೇನೆ. ಹೂವನ್ನು ಬಿಟ್ಟು ಪರಿಮಳವಿರುವುದೆ?
ಆದರೆ ಹೋಗುವ ಮುನ್ನ ಈ ದಿನ ನೀವೂ; ದೇವಿಯರಾದ ಅತ್ತೆಯೂ ನನ್ನ
ಅರಮನೆಗೆ ದಯಮಾಡಿಸಿ ಊಟಮಾಡಿ ತೆರಳಬೇಕು.” ಎಂದು ಒತ್ತಾಯಿಸಿದಳು.
೩೨. ಯಶೋಧರನಿಗೆ ಮನಸ್ಸಿಲ್ಲವಾದರೂ ಹೇಗೋ ಒಪ್ಪಿಕೊಂಡನು.
ತಾಯಿಯನ್ನು ಕೂಡಿಕೊಂಡು ಅಮೃತಮತಿಯ ಅರಮನೆಗೆ ಬಂದನು. ಅಲ್ಲಿ
ಅವನೂ ಅವನ ತಾಯಿಯೂ ಆಕೆ ಉಣಬಡಿಸಿದ ವಿಷದ ಲಡ್ಡುಗೆಯನ್ನು
ಸವಿದುಂಡರು. ೩೩. ಅರಸನ ಅಣಕದ ಮಾತು ಅಮೃತಮತಿಯ ಚಿತ್ತದಲ್ಲಿ
ಕೀಲಿಸಿ ನಿಂತಿತು. ಆದರೂ ಬಾಹ್ಯದಲ್ಲಿ ಬೆಡಗನ್ನು ತೋರಿಸುತ್ತಾ ಬಂದು ಆ
ಪಾಪಿ ಮರ್ಯಾದೆ ಮೀರಿ ತನ್ನ ಗಂಡನನ್ನೇ ಕೊಂದಳು. ಹೆಂಗಸಿನ ವರ್ತನೆ
ಎಷ್ಟು ಆಶ್ಚರ್ಯಕರ! ಸ್ತ್ರೀಯರ ಕಪಟ ವೃತ್ತಿಯನ್ನು ಕಳೆಯುವುದಕ್ಕೇ ಸಾಧ್ಯವಿಲ್ಲವಲ್ಲ!

ಆ ಪಕ್ವಾನ್ನಮೆ ಮೃತಿಗು-
ದ್ವೀಪನಪಿಂಡದವೊಲಾಗೆ ಅಘದಿಂ ಬೀಜಾ-
ವಾಪಮೆನೆ ಜನ್ಮಲತೆಗೆ ಕ-
ಲಾಪಿಸ್ತ್ರೀಯುದರದಲ್ಲಿ ವಿಂಧ್ಯದೊಳೊಗೆದಂ೩೪


ಅಂತೊಗೆದು ಮೊಟ್ಟೆಯೊಡೆದ-
ಲ್ಲಿಂ ತೊಲಗದು ತುಪ್ಪುಳಿಡದು ಕಾಲ್ಬಲಿಯದು ಕ-
ಣ್ಣಂ ತೆರೆಯದೆಂಬ ಪದಕೆ ಕೃ-
ತಾಂತನ ಹರಿಯಂತೆ ಕವಿದು ಬೇಂಟೆಯೊಳೊರ್ವಂ೩೫


ಬೇಡಂ ಹಿಳುಕೊತ್ತಿನ ತಾಯ್‌
ಓಡಲ್‌ ಬಿಟ್ಟಲ್ಲಿ ಪಿಡಿದು ತಂದಾ ಪಿಳುಕಂ
ಬೇಡಿತಿಗೆ ಸಲಹಲಿತ್ತೊಡೆ
ಗೊಡೊಳದು ಬಳೆದು ತಳೆದುದಂಗಚ್ಛವಿಯಂ೩೬


೩೪. ಯಶೋಧರನಿಗೆ ಅಲ್ಲಿ ಉಂಡ ಊಟವೇ ಮುರಣಕ್ಕೆ
ಉದ್ದೀಪನಪಿಂಡದಂತಾಯಿತು; ಮಾತ್ರವಲ್ಲ ಜನ್ಮಲತೆಗೆ ಅವನೆಸಗಿದ ಪಾಪವೇ
ಬೀಜವಾಗಿ ಪರಿಣಮಿಸಿತು. ಅವನು ಅಲ್ಲಿ ಸತ್ತು ವಿಂಧ್ಯದಲ್ಲಿ ಒಂದು ಹೆಣ್ಣು
ನವಿಲಿನ ಹೊಟ್ಟೆಯಲ್ಲಿ ಹುಟ್ಟಿಬಂದನು. ೩೫. ಹೀಗೆ ಹುಟ್ಟಿ ಮೊಟ್ಟೆಯೊಡೆದು
ಮರಿಯಾಯಿತು ಆ ಜೀವ. ಅಲ್ಲಿಂದ ಮುಂದೆ ಹರಿಯುವಷ್ಟೂ ಅದಕ್ಕೆ ಶಕ್ತಿ
ಯುಂಟಾಗಿರಲಿಲ್ಲ; ಎಳೆಯ ಗರಿಗಳೂ ಮೂಡಿರಲಿಲ್ಲ; ಕಾಲುಗಳಿಗೆ ಬಲವೂ
ಬಂದಿರಲಿಲ್ಲ; ಮರಿ ಸರಿಯಾಗಿ ಕಣ್ಣು ತೆರೆಯಲೂ ಇಲ್ಲ. ಈ ಅವಸ್ಥೆಯಲ್ಲಿದ್ದಾಗ
ಯಮನ ದೂತನಂತೆ ಬೇಡನೊಬ್ಬನು ಬೇಟೆಯಾಡುತ್ತ ಆ ಕಾಡನ್ನು ಮುತ್ತಿದನು.
೩೬. ಬಂದವನೇ ಆ ಬೇಟೆಗಾರನು ಮರಿಯೊಡನಿದ್ದ ತಾಯಿಯನ್ನು ಓಡಿಸಿಬಿಟ್ಟನು;
ಮರಿಯನ್ನು ಮಾತ್ರ ಬಿಡಲಿಲ್ಲ. ಅದನ್ನು ಹಿಡಿದು ತಂದು ತನ್ನ ಹೆಂಡತಿಯ
ಕೈಗಿತ್ತು ಸಾಕುವ೦ತೆ ಹೇಳಿದನು. ಅವಳು ಅದನ್ನು ಗೂಡಿನೊಳಗಿಟ್ಟು
ಪೋಷಿಸತೊಡಗಿದಳು. ಕ್ರಮೇಣ ಬೆಳೆದು ಅದಕ್ಕೆ ಸಹಜವಾದ ದೇಹಶೋಭೆ

ನವರತ್ನದ ಪಂಜರದೊಳ್‌
ದಿವಿಜ ಶರಾಸನದ ಮರಿಯನಿರಿಸಿದವೋಲೆ-
ತ್ತುವ ಸೋಗೆಯ ಸುತ್ತಿನೊಳಾ-
ಡುವ ಕೇಕಿಯ ಭಂಗಿ ಲೋಕಮಂ ಸೋಲಿಸುಗಂ೩೭


ಕರಹಟದೊಳ್‌ ಬೇಂಟೆಯ ಕು-
ಕ್ಕುರಿಯಾದಳ್‌ ಸತ್ತು ಚಂದ್ರಮತಿಯುಂ ಬಳಿಕಾ-
ಯೆರಡುಮುಪಾಯನ ಘಟನೆಯಿ-
ನರಮನೆಯಂ ಸಾರ್ದುವಾ ಯಶೋಧರಸುತನಾ೩೮


ತವಗಂಜುವವರ್ಗೆ ತಾವಂ
ಜುವರೆಂಜಲನಾಯ್ದು ತಿಂಬರೆ೦ಜಲ ತಾವ್‌ ಶಿಂ
ಬವನಿಪರಾದಲ್ಲಿಯೆ ನಾಯ್‌
ನವಿಲಪ್ಪನಿತಾಯ್ತು ನೋಡ ಪಾಪದ ಫಲದಿಂ೩೯


ಕಾಣಿಸಿಕೊಂಡಿತು. ೩೭. ಕಾಲಾಂತರದಲ್ಲಿ ಆ ನವಿಲು ಬೆಳೆದು ನವರತ್ನದ
ಪಂಜರದೊಳಗೆ ಇರಿಸಿದ ಕಾಮನ ಬಿಲ್ಲಿನ ಮರಿಯಂತೆ ತನ್ನ ಸೋಗೆಯನ್ನೆತ್ತುತ್ತ
ಸುತ್ತಲೂ ಕುಣಿದಾಡತೊಡಗಿತು. ಅದರ ಚೆಲುವು ಲೋಕವನ್ನೆಲ್ಲ ಸೋಲಿಸಿತು.
೩೮. ಸತ್ತ ಚಂದ್ರಮತಿಯು ಕರಹಟದಲ್ಲಿ ಒಂದು ಬೇಟೆಯ ನಾಯಿಯಾಗಿ
ಹುಟ್ಟಿಕೊಂಡಳು. ಈ ನಾಯಿಯನ್ನೂ ಆ ನವಿಲನ್ನೂ ಅವರವರು ಬೇರೆ
ಬೇರೆಯಾಗಿ ತಂದು ರಾಜನಿಗೆ ಕಾಣಿಕೆಯಾಗಿ ಒಪ್ಪಿಸಿದರು. ಹೀಗೆ ತಾಯಿ
ಮಕ್ಕಳು ಅರಮನೆಯನ್ನೇ ಸೇರಿಕೊಂಡರು. ೩೯. ತಮಗೆ ಅಂಜುತ್ತಿದ್ದವರಿಗೇ
ತಾವು ಅಂಜುವ ಪರಿಸ್ಥಿತಿ ಅವರಿಬ್ಬರಿಗೂ ಈಗ ಬಂದೊದಗಿತು. ತಮ್ಮ ಎಂಜಲನ್ನು
ತಿನ್ನುತ್ತಿದ್ದವರ ಎ೦ಜಲನ್ನು ತಾವು ತಿನ್ನಬೇಕಾಯಿತು. ಎಲ್ಲಿ ಅರಸುತನವನ್ನು
ಮೆರೆದರೊ ಅಲ್ಲಿಯೇ ಅವರಿಬ್ಬರೂ ನಾಯಿ ನವಿಲುಗಳಾಗಿ ಇರಬೇಕಾಯಿತು.

ನವಿಲಮೃತಮತಿಯ ಸೆಜ್ಜೆಯ
ದವಳಾರದೊಳಾಡುತ್ತಿರ್ದು ಬದಗನುಮಂ ತ-
ನ್ನವಳೊಡಗೂಡಿರೆ ನಿಟ್ಟಿಸಿ
ಭವರೋಪಷದಿನಿಳಿದುದಷ್ಟವಂಕನ ಕಣ್ಣಂ೪೦


ಆನ್‌ ಬೆಂದೆನೆಂದು ನವಿಲಂ
ಪಾಣ್ಬೆ ಕನಲ್ದಡಸಿ ಪೊಯ್ಯೆ ಮೇಗಣ ನೆಲೆಯಿಂ
ದಂ ಬಿರ್ದುದು ಪಚ್ಚೆಯ ಪದ-
ಕಂ ಬೀಳ್ವಂತಿರೆ ಸುಧಾಂಶುಬಿಂಬದ ಕೊರಲಿಂ೪೧


ಅರಸನುಮಾಗಳೆ ನೆತ್ತದ
ಭರದಿಂ ಕೊಳ್ಳೆನುತುಮಿಕ್ಕೆ ನವಿಲಂ ಕೊಳ್ಳೆಂ-
ದರೆ ಗೆತ್ತು ಪಿಡಿದುದೆಂಬಾ-
ಚರಿ ಕುಕ್ಕರಿ ನೊಂದು ಬೀಳ್ವ ನಂದನಚರನಂ೪೨


ಅರಸ, ಪಾಪದ ಫಲವನ್ನು ನೋಡು! ೪೦. ಒಮ್ಮೆ ಅಮೃತಮತಿಯು
ಧವಳಶಯ್ಯಾಗಾರದಲ್ಲಿ ನವಿಲು ಆಡುತ್ತಾ ಇತ್ತು. ಅಲ್ಲಿಗೆ ಮಾವುತ ಅಷ್ಟವಂಕನು
ಬಂದನು. ಅಮೃತಮತಿ ಎಂದಿನಂತೆ ಅವನ ಸಮಾಗಮಕ್ಕೆ ಬಂದಳು. ಇದನ್ನು
ಕಂಡ ಕೂಡಲೆ ನವಿಲು ಪೂರ್ವಜನ್ಮದ ರೋಷದಿಂದ ಅಷ್ಟವಂಕನ ಕಣ್ಣನ್ನು
ಕುಕ್ಕಿಬಿಟ್ಟಿತು. ೪೧. “ಅಯ್ಯೊ, ಸತ್ತೆ ನಾನು!” ಎನ್ನುತ್ತಾ ಆ ಕುಲಟೆಯು ನವಿಲ
ಕಡೆಗೆ ನುಗ್ಗಿ ಅದನ್ನು ಹೊಡೆಯಲು ಚಂದ್ರಬಿಂಬದ ಕುತ್ತಿಗೆಯಿಂದ ಪಚ್ಚೆಯ
ಪದಕವೊಂದು ಕೆಳಗುರುಳುವಂತೆ ಉಪ್ಪರಿಗೆಯಿಂದ ಕೆಳಕ್ಕೆ ಬಿದ್ದ ಸತ್ತಿತು. ೪೨.
ಅದೇ ಸಮಯಕ್ಕೆ ನೆತ್ತನಾಡುವ ಆವೇಶದಲ್ಲಿದ್ದ ಯಶೋಮತಿ “ತೆಕ್ಕೊ!” ಎಂದು
ದಾಳವನ್ನು ಇಕ್ಕಿದನು. ಬೀಳುವ ನವಿಲನ್ನು ತೆಗೆದುಕೊಳ್ಳುವಂತೆ ರಾಜನು
ಹೇಳುವನೆಂದು ಗ್ರಹಿಸಿ ನಾಯಿಯು ಬೀಳುತ್ತಿದ್ದ ನವಿಲನ್ನು ಹಿಡಿದುಕೊಂಡಿತು.

ಮತ್ತೆ ನೃಪಂ ನಾಯ್‌ ತಿಂದ ದು
ನೃತ್ಯಚಮತ್ಕಾರನಂ ಮಯೂರನನೆಂದಾ
ನೆತ್ತದ ಮಣೆಯಿಂದಿರಿದೊಡೆ
ನೆತ್ತಿ ಪಿಸುಳ್ದತ್ತು ಸತ್ತುವಂತಾ ಎರಡುಂ೪೩


ಮರುಗಿದನಿಳೇಶನಾ ಎರ-
ಡರ ಸಾವಿಂ ತಂದೆ ತಾಯ್ವಿರಳಿದಂತಿರೆ ಕ
ಣ್ಣರಿಯದೊಡಂ ಕರುಳರಿಯದೆ
ಮರುಗಿಸದಿರ್ಪುದೆ ಭವಾಂತರವ್ಯಾಮೋಹಂ೪೪


ಆ ವಿಂಧ್ಯನಗರದೊಳಾ ನಾಯ್‌
ಪಾವಾಯ್ತಾ ನವಿಲುಮೆಯ್ಯಮೃಗಮಾಯ್ತಾ ಎಯ್‌
ಪಾವಂ ಪಗೆಮಿಗೆ ತಿಂದುದು ಬಲ್‌
ಮೇವಂತಿರೆ ಪುಲ್ಲಸರವಿಯಂ ಪುಲಿ ಗೋಣಂ೪೫



೪೩. ಚಮತ್ಕಾರದ ನರ್ತನವನ್ನು ಮಾಡುವ ಮಯೂರವನ್ನು ಈ ನಾಯಿ
ತಿಂದಿತು ಎಂದು ತಡೆಯಲಾರದ ಸಿಟ್ಟು ಬಂತು ರಾಜನಿಗೆ. ಅವನು ಆ ನೆತ್ತದ
ಮಣೆಯಿಂದಲೇ ನಾಯಿಯ ತಲೆಯನ್ನು ಬಡಿದನು. ಅದರ ನೆತ್ತಿ ಒಡೆದು
ಹಿಸಿಯಿತು. ಅದೂ ಸತ್ತಿತು. ೪೪. ನವಿಲೂ ನಾಯಿಯೂ ಸತ್ತುದನ್ನು ಕಂಡಾಗ
ರಾಜನಿಗೆ ತಂದೆ ತಾಯಿಗಳು ತೀರಿಕೊಂಡರೆ ಆಗುವಷ್ಟು ದುಃಖವುಂಟಾಯಿತು.
ಕಣ್ಣು ಅರಿಯದಿದ್ದರೂ ಕರುಳು ಅರಿಯುವುದಿಲ್ಲವೆ? ಜನ್ಮಾಂತರದ ವ್ಯಾಮೋಹವು
ಈ ರೀತಿ ಮರುಗಿಸದೆ ಇರುವುದಿಲ್ಲ. ೪೫. ಸತ್ತ ನಾಯಿ ವಿಂಧ್ಯ ಪರ್ವತದಲ್ಲಿ
ಹಾವಾಗಿ ಹುಟ್ಟಿಕೊಂಡಿತು. ನವಿಲು ಕೂಡ ಅಲ್ಲಿಯೇ ಮುಳ್ಳು ಹಂದಿಯಾಗಿ
ಜನ್ಮಪಡೆಯಿತು. ಈ ಮುಳ್ಳು ಹಂದಿ ಹೆಚ್ಚಿದ ಹಗೆಯಿಂದ ಹಾವನ್ನು ಕೊಂದು
ತಿಂದಿತು. ಎತ್ತು ಹುಲ್ಲ ಹಗ್ಗವನ್ನು ಮೇಯುವುದು ಇದೇ ರೀತಿ.

ಉರಗಿಯನೆಯ್‌ ಪಡಿದೊಡದಂ
ಕುರಂಗರಿಪು ಬೆಕ್ಕು ಕೊಕ್ಕನಂ ತವೆ ಪಿಡಿವಂ
ತಿರೆ ಪಿಡಿದುದು ಪರಚಿಂತಾ
ಕರ ಏಹಿ ಎನಿಪ್ಪ ಸೂಕ್ತಿ ತಪ್ಪದಮೋಘಂ೪೬


ಮೀನಾದುದೆಯ್ಯಮೃಗಮು-
ಜ್ಜೇನಿಯ ದೇಶದೊಳುಮೆಸೆವ ಸಿಂಪಾನದಿಯೊಳ್‌
ತಾನಲ್ಲಿ ಮೊಸಳೆಯಾದ
ತ್ತಾ ನಾಗುನುಮಾಗಿ ಬೆಳೆಯೆ ಮತ್ತೊಂದು ದಿನಂ೪೭


ನದಿ ಕಣ್ದೆರೆದಂತೆ ಪೊಳಂ
ಕಿದ ಮೀನ೦ ಮೊಸಳೆ ಪಾಯೆ ನರಪತಿಯ ವಿನೋ-
ದದ ಗುಜ್ಜ ಸಿಕ್ಕೆ ಪಿಡಿದ-
ತ್ತದನಧಿಪತಿ ಜಾಲಗಾರರಿಂ ತೆಗೆಯಿಸಿದಂ೪೮



೪೬. ಹಾವನ್ನೆನೋ ಮುಳ್ಳು ಹಂದಿ ನುಂಗಿತು. ಅದನ್ನು ಮಾತ್ರ ಹುಲಿ ಹಿಡಿಯಿತು.
ಬೆಕ್ಕು ಕೊಕ್ಕರೆಯನ್ನು ಹಿಡಿಯುವುದೂ ಹೀಗೆಯೆ. ಪರರಿಗೆ
ದುಃಖವುಂಟುಮಾಡುವವನನ್ನ ವಿಧಿ ತನ್ನ ಬಳಿಗೆ ಕರೆಯುವುದು ಸಹಜವೇ
ಆಗಿದೆ. ೪೭. ಮುಳ್ಳು ಹಂದಿ ಉಜ್ಜಯಿನಿಯಲ್ಲಿ ಶೋಭಿಸುತ್ತಿದ್ದ ಸಿಂಪಾನದಿಯಲ್ಲಿ
ಮೀನಾಗಿ ಹುಟ್ಟಿತು. ಹಾವಾಗಿದ್ದುದು ಅದೇ ಹೊಳೆಯಲ್ಲಿ ಮೊಸಳೆಯ ಜನ್ಮವನ್ನು
ಪಡೆದು ಬೆಳೆಯುತ್ತ ಇತ್ತು. ೪೮. ಒಂದಾನೊಂದು ದಿನ ನದಿ ಕಣ್ಣು
ಮಿಟುಕಿಸಿತೆಂಬಂತೆ ಆ ಮೀನು ಪಳಕ್ಕನೆ ಮೇಲೆ ಚಿಮ್ಮಿತು. ಅದನ್ನು ಕಂಡು
ಮೊಸಳೆ ಅದರ ಕಡೆಗೆ ನುಗ್ಗಿತು. ಆಗ ಅಲ್ಲಿದ್ದ ಯಶೋಮತಿಯ ವಿದೂಷಕನಾದ
ಕುಳ್ಳನು ಅದಕ್ಕೆ ಸಿಕ್ಕಿಕೊ೦ಡನು. ರಾಜನು ಬಲೆಗಾರರಿಂದ ಆ ಮೊಸಳೆಯನ್ನು

ಪಲವಂದದ ನಿಗ್ರಹದಿಂ
ಕೊಲಿಸಿದೊಡಾ ಮೊಸಳೆ ಸತ್ತುಮದುವೆ ಬಳಿಕ್ಕಾ
ಪೊಲಗೇರಿಯಾಡಿನೊಡಲೊಳ್‌
ನೆಲಸಿ ಬಳಿಕ್ಕೊಯ್ಯನೊಗೆದುದಾಡಿನ ರೂಪಿಂ೪೯


ಮತ್ತೊರ್ಮೆ ಜಾಲದೊಳ್‌ ಸಿ-
ಕ್ಕಿತ್ತೆಯ್ಯಾಗಿರ್ದ ಮೀನದಂ ಶ್ರಾದ್ದಕ್ಕ-
ತ್ಯುತ್ತಮ ಲೋಹಿತ ಮತ್ಸ್ಯಮ-
ನುತ್ತಮಮೆಂದೊಂದು ಕಡೆಯಿನಡಿಸಿದನರಸಂ೫೦


ಉಳಿದ ಜೀವಮೇರು-
ತ್ತಿಳಿಯುತ್ತಿರೆ ನೀರೊಳಿರಿಸಿ ಜೀವಶ್ರಾದ್ಧಂ-
ಕ್ಕುಳಿದಿರ್ದ ಮಾಜನಂಗಳ್‌
ಕಳಿಯುಂಡಾಪೋಶಿಪಲ್ಲಿ ನೆನೆದುದು ತನ್ನಂ೫೧


ಹೊರಕ್ಕೆಳೆಯಿಸಿದನು. ೪೯. ಹಲವು ಬಗೆಯ ಚಿತ್ರಹಿಂಸೆಗಳಿಂದ ಆ ಮೊಸಳೆಯನ್ನು
ಕೊಲ್ಲಲಾಯಿತು. ಹೀಗೆ ಸತ್ತ ಮೊಸಳೆ ಅದೇ ಊರಿನ ಹೊಲಗೇರಿಯಲ್ಲಿ
ಒಂದು ಆಡಿನ ಬಸಿರನ್ನು ಸೇರಿಕೊಂಡು, ಅಲ್ಲಿಯೇ ಬೆಳೆದು ಆಡಿನ ರೂಪದಿಂದ
ಇಳೆಗಿಳಿಯಿತು. ೫೦. ಮತ್ತೊಂದು ದಿನ, ಮುಳ್ಳುಹಂದಿಯಾಗಿದ್ದುದು ಮೀನಾಗಿ
ಹುಟ್ಟಿದ್ದು, ಬಲೆ ಬೀಸಿದಾಗ ಅದಕ್ಕೆ ಸಿಕ್ಕಿಕೊಂಡಿತು. ಅದನ್ನು ಕಂಡ ರಾಜನು
ಅದುವೇ ಶ್ರಾದ್ಧಕ್ಕೆ ಶ್ರೇಷ್ಠವಾದ ಕೆಂಪು ಮೀನೆಂದು ಗ್ರಹಿಸಿಕೊಂಡು ಅದನ್ನು
ಒಂದು ಕಡೆಯಿಂದ ಅಡುಗೆ ಮಾಡಿಸಿದನು.೫೨ ೫೧. ಜೀವಶ್ರಾದ್ಧಕ್ಕಾಗಿ ಅದನ್ನು
ನೀರಲ್ಲಿರಿಸಿ ಬೇಯಿಸುತ್ತಾ ಇದ್ದಾಗ ಅದರ ಜೀವ ಏರುತ್ತಲೂ ಇಳಿಯುತ್ತಲೂ
ಇತ್ತು. ಶ್ರಾದ್ಧಕ್ಕೆ ಬಂದ ಮಹಾಜನಗಳು ಹೊಟ್ಟೆತುಂಬ ಊಟ ಮಾಡಿ
ಉತ್ತರಾಪೋಷಣವನ್ನು ತೆಗೆದುಕೊಳ್ಳುತ್ತಿದ್ದರು. ಆಗ ಆ ಮೀನು ತನ್ನ ವಿಷಯ
ವನ್ನು ನೆನೆದುಕೊಂಡಿತು:

ಮೀನಾಗಿ ಸಾಯುತಿರ್ದಪೆ-
ನಾನೀ ಪಾರ್ವರ್‌ ಯಶೋಧರಂ ಸುಖದಿಂದಿ
ರ್ಕಾ ನಾಕದೊಳೆಂದೂಳ್ದಪ-
ರೀ ನೃಪನುಂ ನಂಬಿದಪ್ಪನಕ್ಕಟ ಬಿದಿಯೇ೫೨


ಎನುತು೦ ಜಾತಿಸ್ಮರನ-
ಪ್ಪನಿಮೇಷಂ ಜೀವಿಂತಾಂತ್ಯದೊಳ್‌ ಮುನ್ನೊಗೆದಾ-
ಖನ ಬಸಿರೊಳ್‌ ಬಂದುದು ಪೋಂ-
ಘನ ರೂಪಿಂ ಬೆಳೆದು ಬಳಿಕ ಮದನೋನ್ಮತ್ತಂ೫೩


ಬೆದೆಯಾದ ತಾಯನೇರಿ-
ತ್ತದು ಸೊರ್ಕಿದ ಗೂಳಿ ತಾಯನೇರಿತ್ತೆಂಬಂ-
ದದೆ ಮತ್ತದೊಮದು ಬಸ್ತಕ-
ಮದನಿರಿಯಲ್ಲ ಸತ್ತು ಪೊಕ್ಕುದಜೆಯೊಳ್‌ ಜೀವಂ೫೪



೫೨. ನಾನಿಲ್ಲಿ ಮತ್ಸ್ಯ ಜನ್ಮವನ್ನು ಪಡೆದು ಸಾಯುತ್ತಾ ಇದ್ದೇನೆ ; ಈ ಬ್ರಾಹ್ಮಣರು
ಯಶೋಧರನು ಸ್ವರ್ಗದಲ್ಲಿ ಸುಖವಾಗಿರಲಿ!” ಎಂದು ಒದರುತ್ತಾ ಇದ್ದಾರೆ!
ಅವರ ಮಾತನ್ನು ಈ ಭೂಪತಿಯೂ ನಂಬಿಕೊಂಡಿದ್ದಾನೆ. ಅಯ್ಯೋ ವಿಧಿಯೇ!”
೫೩. ಪೂರ್ವಜನ್ಮದ ಸ್ಮರಣೆಯಿಂದ ಮೀನು ಈ ರೀತಿ ತನ್ನಲ್ಲೇ ಹೇಳಿಕೊಳ್ಳುತ್ತಾ
ಜೀವವನ್ನು ಕಳೆದು ಕೊಂಡಿತು. ಚಂದ್ರಮತಿ ಈ ಮೊದಲೇ ಆಡಾಗಿ ಜನಿಸಿದ್ದಳಷ್ಟೆ
ಈ ಮೀನು ಆ ಆಡಿನ ಗರ್ಭದಲ್ಲಿ ಹೋತವಾಗಿ ಹುಟ್ಟಿತು, ಬೆಳೆಯಿತು.
ಸಾಕಷ್ಟು ಪ್ರಾಯವಾದಾಗ ಈ ಹೋತವಾಗಿ ಹುಟ್ಟಿತು, ಬೆಳೆಯಿತು. ಸಾಕಷ್ಟು
ಪ್ರಾಯವಾದಾಗ ಈ ಹೋತವು ಕಾಮದಿಂದ ಸೊಕ್ಕಿತು. ೫೪. ತಾಯಿಗೂ
ಬೆದೆಯ ಕಾಲವಾಗಿತ್ತು. ಸೊಕ್ಕಿದ ಹೋತವು ಅದಕ್ಕೇ ಹತ್ತಿತು. “ಸೊಕ್ಕಿದ ಗೂಳಿ
ತಾಯನ್ನು ಹತ್ತಿತು” ಎಂಬಂತಾಯಿತು ನಡೆದ ಘಟನೆ! ಆಗ ಇನ್ನೊಂದು
ಹೋತವು ಬಂದು ಈ ಹೋತಕ್ಕೆ ಹಾದು ಇದರ ಜೀವವನ್ನೇ ತೆಗೆಯಿತು. ಸತ್ತ

ಅಲ್ಲಿಯೆ ಪೋಂತಪ್ಪುದುಮದು
ಮೆಲ್ಲನೆ ತೆನೆ ತೀವಿ ಸುಳಿಯೆ ಕಂಡೊರ್ಮೆ ಮಹೀ
ವಲ್ಲಭನುಂ ಬೇಂಟೆಯೊಳಡ-
ಗಿಲ್ಲದೆ ಬರುತೆಚ್ಚನಿದಿರೊಳಜಗರ್ಭಿಣಿಯಂ


ಇಸೆ ಪಸುಮಲೆ ಯೋನಿಮುಖ
ಪ್ರಸವಕ್ಕಲಸಿದವೊಲೇರ ಬಾಯಿಂ ತಾಯೊಂ-
ದಸುವೆರಸು ಬಿರ್ದುದಂ ರ
ಕ್ಷಿಸಲಿತ್ತಂ ಮಾದರಂಗೆ ಕರುಣದಿನರಸಂ೫೬


ಒರ್ಮೆ ಯಶೋಮತಿ ಮೃಗಯಾ
ನರ್ಮಮನಂ ಪರಸಿ ನಡೆದು ಮೃಗಮಂ ಪಡೆದೊಂ-
ದೆರ್ಮೆಯ ಪೋರಿಯನಿಕ್ಕಿದ-
ನೂರ್ಮಾರಿಗೆ ಮತ್ತಮದನೆ ಮಹಳಕ್ಕಿತ್ತಂ೫೭


ಈ ಆಡು ತಾಯಿಯ ಬಸಿರನ್ನೇ ಸೇರಿಕೊಂಡಿತು. ೫೫. ಅಲ್ಲಿ ಹೋತವಾಗಿ
ಬೆಳೆಯುತ್ತಾ ಇತ್ತು. ಬಸಿರು ಮೆಲ್ಲಮೆಲ್ಲನೆ ತುಂಬಿ ಬೆಳೆಯಿತು. ತಾಯಿ ಆಡು
ಮೆಲ್ಲನೆ ಸಂಚರಿಸುತ್ತಾ ಇತ್ತು. ಯಶೋಮತಿ ಬೇಟೆಗೆ ಹೋಗಿದ್ದನು. ಅವನಿಗೆ
ಅಲ್ಲಿ ಒಂದು ಪ್ರಾಣಿಯೂ ಸಿಕ್ಕಲಿಲ್ಲ. ಮಾಂಸಬೇಕಾಗಿದ್ದುದರಿಂದ ಎದುರು
ಕಾಣಸಿಕ್ಕಿದ ಗರ್ಭಿಣಿಯಾದ ಆಡನ್ನೆ ಬಾಣಬಿಟ್ಟು ಕೊಂದಿಕ್ಕಿದನು. ೫೬. ಯೋನಿಯ
ಮುಖಾಂತರ ಜನ್ಮ ತಾಳುವುದು ಉಚಿತವಲ್ಲವೆಂಬಂತೆ ಆ ಎಳೆಯ ಹೋತವು
ಬಾಣ ತಾಗಿದ ತಾಯಿಯ ಗಾಯದ ಮುಖಾಂತರ ಕೆಳಕ್ಕೆ ಜಗುಳಿತು. ಅದರ
ತಾಯಿಯ ಜೀವವೂ ತೊಲಗಿತು. ರಾಜನಿಗೆ ಆಡಿನ ಮರಿಯ ಮೇಲೆ
ಕರುಣೆಯುಂಟಾಯಿತು. ಅವನು ಅದನ್ನು ರಕ್ಷಿಸುವಂತೆ ಮಾದರನೊಬ್ಬನಿಗೆ
ಒಪ್ಪಿಸಿದನು. ೫೭. ಯಶೋಮತಿಗೆ ಮತ್ತೊಮ್ಮೆ ಬೇಟೆಯಾಡುವ ಅಭಿಲಾಷೆ
ತೀವ್ರವಾಯಿತು. ಅವನು ಮಾರಿಗೆ ಹರಕೆ ಹೇಳಿ ಮುಂಬರಿದನು. ಅಲ್ಲಿ ಅವನಿಗೆ
ಜಿಂಕೆಯೊಂದು ಸಿಕ್ಕಿತು. ಅನಂತರ ಅವನು ಕೋಣವನ್ನು ಕೊಂದು ಊರ

ಅದರಡಗು ಮುಗ್ಗಿ ಪುಳಿ ಪ-
ತ್ರಿದೊಡಾರಲ್‌ ಪರಪೆ ಕಾಗೆಯುಂ ನಾಯುಂ ಮು-
ಟ್ವಿದೊಡದನೆ ಶುದ್ಧಮಂ ಮಾ-
ಳ್ಪುದನಿಂತೆಂದೋದಿದರ್‌ ಪುರೋಹಿತರೆಲ್ಲಂ೫೮


ಶುಚಿರಜರಜಸಿ ಭವೇನ್ಮಾಸ್‌
ಪಚನೇ ಶ್ವಸ್ಪೃಷ್ಟದೋಷಮೆಂಬುದು ವೇದ
ಪ್ರಚುರಮನೆ ಕೇಳ್ದು ನೃಪನಾ
ವಚನಮುಮಂ ನಂಬಿ ನೆರೆದ ಪೊಲೆಯರ ಪೋಂತಂ೫೯


ತರಿಸಿ ಪರಿಶುದ್ದಿ ಗೆಯ್ದದ-
ನಿರಿಸಿದೊಡಾ ಪಾರ್ವರುಂಡು ತಣಿದೆರ್ದುಯಶೋ-
ಧರ ಚಂದ್ರಮತಿಗಳೊಸೆದು-
ಣ್ಬರೆ ಸಗ್ಗದ ಸುಖಮನೆಂದೊಡೋಹೋ ಎಂದರ್‌ ೬೦



ಮಾರಿಗೆ ಬಲಿಕೊಟ್ಟನು. ಅದನ್ನೆ ಮಹಾಲಯಕ್ಕಾಗಿ ಕೊಟ್ಟನು. ೫೮. ಆದರೆ
ಅದರ ಮಾಂಸವು ಮುಗ್ಗಿ ಅದರಲ್ಲಿ ಹುಳು ಹುಟ್ಟಿಕೊಂಡಿತು. ಆದುದರಿಂದ
ಅದನ್ನು ಒಣಗಿಸುವುದಕ್ಕಾಗಿ ಬಿಸಿಲಲ್ಲಿ ಹರಡಲಾಯಿತು. ನಾಯಿ ಕಾಗೆಗಳು
ಬಂದು ಆ ಮಾಂಸವನ್ನು ಮುಟ್ಟಿ ಶುದ್ಧಿ ಕೆಡಿಸಿದುವು. ಶುದ್ಧೀಕರಣ ವಿಧಾನವನ್ನು
ಪುರೋಹಿತರು ತಿಳಿಸಿದರು : ೫೯. “ನಾಯಿ ಮುಟ್ಟಿದ ದೋಷವುಂಟಾದಲ್ಲಿ
ಮಾಂಸ ಪಚನ ಮಾಡುವಾಗ ಆಡಿನ ರಜಸ್ಸನ್ನು ಹಾಕಿದರೆ ಅದು ಶುದ್ಧವಾಗುತ್ತದೆ,
ಎಂದು ವೇದದಲ್ಲಿ ಸ್ಪಷ್ಟವಾಗಿ ಇದೆ.” ಈ ಮಾತನ್ನು ಕೇಳಿದ ರಾಜನು ಇದನ್ನು
ನಂಬಿದನು. ಆದುದರಿಂದ ಚೆನ್ನಾಗಿ ಬೆಳೆದ ಹೊಲೆಯರ ಹೋತವನ್ನೇ ತರಿಸಿದನು.
೬೦. ಅದರಿಂದ ಮಾಂಸವನ್ನು ಶುದ್ಧೀಕರಿಸಿದರು.(ಅದನ್ನು ಕೊಂದರು).
ಶುದ್ಧೀಕರಿಸಿದ ಮಾಂಸವನ್ನುಂಡು ಬ್ರಾಹ್ಮಣರು ತೃಪ್ತರಾದರು. ಅವರು ಎದ್ದು
ಹೊರಟು ಹೋಗುವಾಗ, “ಯಶೋಧರನೂ ಚಂದ್ರಮತಿಯೂ ಸ್ಪರ್ಗ
ಸುಖವನ್ನು ಸಂತೋಷದಿಂದ ಸವಿಯುತ್ತಿರುವರೇ?” ಎಂದು ಯಶೋಮತಿ
ಪ್ರಶ್ನಿಸಿದನು. ಅವರು “ಓಹೋ! ಓಹೋ | ಎಂದು ಉದ್ಘೋಷಿಸಿದರು.

ಆ ವಿಪ್ರಘೋಷಣಂ ಸ್ಮೃತಿ-
ಗಾವಹನ ನಿದಾನಮಾದವೋಲಜ ಪೋತಂ
ಭಾವಿಸಿದುದಾನ್ ಯಶೋಧರ
ದೇವನೆ ಎನ್ಮಾತ್ಮಜಂ ಯಶೋಮತಿಯೀತಂ೬೧


ಪೋಂತಾದೆನಿಲ್ಲಿ ಸಗ್ಗದೊ-
ಳೆಂತುಂಡಪೆನುಂಡ ಪಾರ್ವರೊಲಿದುದು ಗೆಡೆವರ್
ಪೋಂತಂ ಕೊಂದು ದಿವಕ್ಕದು-
ಮುಂತಾಗಿಯೆ ಸಲ್ವುದೆಂಬರಿದನ್ನೇನೆನ್ನರ್೬೨


ಈ ನಗರಿಯಪ್ಪುದೆಮ್ಮು-
ಜ್ಜೇನಿ ಇದಾನಿರ್ಪ ನೆಲೆಯ ದವಳಾರಮಿದುಂ
ತಾನಮೃತಮತಿಯ ಮಾಡಂ
ಮಾನಿನಿ ನಂಜಿಟ್ಟಳೆನಗೆ ಮುಡಿಪಿದನಿದರೊಳ್೬೩



೬೧. ವಿಪ್ರ ಆ ಘೋಷ ಯೋಶೋಧರನ ನೆನಪಿಗೆ ಆವಾಹನ ಮಾಡಿದಂತಾಯಿತು.
ಆ ಆಡಿನ ಮರಿ “ಅಯ್ಯೋ! ನಾನೇ ಯಶೋಧರ ದೇವ. ನನ್ನ ಮಗನೇ ಈ
ಯಶೋಮತಿ. ೬೨. ನಾನಿಲ್ಲಿ ಹೋತವಾಗಿ ಹುಟ್ಟಿಕೊಂಡಿದ್ದೇನೆ. ಹೀಗಿರುತ್ತಾ
ನಾನು ಸ್ವರ್ಗದಲ್ಲಿ ಉಣ್ಣುವುದೆಂದರೆ ಹೇಗೆ? ಹೊಟ್ಟೆ ತುಂಬಿಸಿಕೊಂಡ ಬ್ರಾಹ್ಮಣರು
ಮನಸ್ಸಿಗೆ ಬಂದಂತೆ ಹರಟುತ್ತಾರೆ. ಹೋತವಮ್ಮ ಕೊಂದು ಆ ಹೋತ ಸ್ವರ್ಗಕ್ಕೆ
ಸೇರಿಕೊಂಡಿದೆ ಎಂದು ಹೇಳುವವರು ಇನ್ನೇನು ಹೇಳಲಾರರು? ೬೩. ಈ
ನಗರ ನನ್ನ ಉಜ್ಜಯಿನಿ. ಇದು ನಾನಿದ್ದ ಮಾಳಿಗೆಯ ಧವಳಾಗಾರ. ಮತ್ತು
ಇದು ಅಮೃತಮತಿಯ ವಾಸಭವನ. ಅವಳು ನನಗೆ ವಿಷವಿಕ್ಕಿದಳು ; ನಾನು

ಇರ್ದಳೊ ಮೇಣ್‌ ಬರ್ದಳೊ ಮೇಣ್‌
ಅರ್ದಳೊ ಮೇಣ್‌ ಅಷ್ಟವಂಕನೊಳ್‌ ಕಷ್ಟೆಯದೆಂ-
ತಿರ್ದಳೊ ಕಾಣೆನದೇಕೆನು-
ತಿರ್ದುದು ಕೋಟಲೆಗೆ ಕೋಡು ಮೂಡಿದ ತೆರದಿ೦೬೪


ಇತ್ತಲ್‌ ನೃಪನಂದೆಚ್ಚೊಡೆ
ಸತ್ತಾಡು ಕಳಿಂಗದಲ್ಲಿ ಕೋಣನ ಮೆಯ್ಯಂ
ಪೆತ್ತಿರೆ ಬೆನ್‌ ಮುರಿವಂತಿರೆ
ಪಿತ್ತಳೆಯಂ ಪೇರಿ ತಂದು ಬಿಟ್ಟಂ ಪರದಂ೬೫


ನೀರಡಸಿ ಕುಡಿದು ಸಿಂಪೆಯ
ನೀರೊಳಗರೆಮುಳುಗಿ ಮಗ್ಗುಲಿಕ್ಕಿರ್ದುದು ಮು-
ನ್ನೀರಂ ನೀಲಾಚಲದಿಂ
ಸಾರಂಗಟ್ಟಿದವೊಲಿರೆ ಬಳಲ್ದು ಲುಲಾಯಂ೬೬



ಇಲ್ಲಿಯೇ ಸತ್ತುಹೋದೆ. ೬೪. ಅವಳು ಈಗಲೂ ಬದುಕಿಯೇ ಇದ್ದಾಳೋ,
ಸತ್ತಿದ್ದಾಳೋ? ಅಲ್ಲ, ಅಷ್ಟವಂಕನಲ್ಲಿ ಇನ್ನೂ ತಲ್ಲೀನಳಾಗಿಯೇ ಇದ್ದಾಳೋ
ಹೇಗಿದ್ದಾಳೊ, ಗೊತ್ತಾಗುವುದಿಲ್ಲವಲ್ಲ!” ಎಂದು ಎಣಿಸುತ್ತಾ ಇದ್ದನು. ಅವನ
ಕಷ್ಟಗಳಿಗೆ ಕೋಡು ಮೂಡಿದಂತೆ೫೩ ಈ ಯೋಚನೆಯೂ ಅವನಿಗೆ ತಲೆದೋರಿತು;
ಸಂಕಟ ಹೆಚ್ಚಿತು. ೬೫. ಇತ್ತ ಯಶೋಮತಿಯ ಬಾಣದ ಪೆಟ್ಟಿನಿಂದ ಸತ್ತ ಆಡು
ಕಳಿಂಗದಲ್ಲಿ ಕೋಣನ ದೇಹವನ್ನು ಪಡೆಯಿತು. ಅದು ಒಬ್ಬ ವ್ಯಾಪಾರಿಯ
ವಶವಾಯಿತು. ಒಂದು ದಿನ ಅವನು ಅದರ ಬೆನ್ನ ಮೇಲೆ ಹೊರಲಾರದಷ್ಟು
ಹಿತ್ತಾಳೆಯ ಹೊರೆಯನ್ನು ಹೇರಿ ತಂದು ಬಳಿಕ ಹೊರೆಯಿಳಿಸಿ ದಡದಲ್ಲಿ
ಅದನ್ನು ಬಿಟ್ಟನು. ೬೬. ಅದಕ್ಕೆ ಬಾಯಾರಿಕೆ ತೀವ್ರವಾಯಿತು. ಹತ್ತಿರದಲ್ಲೇ ಇದ್ದ
ಸಿ೦ಪಾನದಿಯ ನೀರನ್ನು ಕುಡಿದು ಅದು ಅಲ್ಲೇ ನೀರಲ್ಲಿ ಅರ್ಧ ಮುಳುಗಿ
ಮಲಗಿಕೊಂಡಿತು. ಆಯಾಸಗೊಂಡ ಕೋಣವು ಕಡಲಿಗೆ ನೀಲಾಚಲದ

ಆಯೆಡೆಗೆ ನೀರುಣಲ್ಬರೆ
ಜಾಯಿಲಮರಸನ ಪಸಾಯಿತಂ ಕೋಡೆರಡುಂ
ಕೋಯೆ ಸೆಳೆದಶ್ವಮಹಿಷ
ನ್ಯಾಯಂ ನಿಲೆ ಕೊಂದುದಂತದಂ ಕೇಳ್ದರಸಂ೬೭


ಕಡೆಯೊಳ್ ಕೋಣನ ಪೋರ್ಕುಳಿ
ಗಿಡುವಿಗೆ ಮಿತ್ತೆಂಬ ತೆರದೆ ಪರದನ ಬೀಡಂ
ಬಿಡೆ ಸೂರೆಗೊಂಡು ತನ್ನಂ
ಪಿಡಿತರಿಸಿ ವಿಚತ್ರಮಪ್ಪ ಕೊಲೆಯಂ ಕೊಂದಂ೬೮


ಸೊಡರಿಂ ಮುಡುಪಿಂದಂ ಪಿಂ-
ತಣ ಮುಂತಣ ಕಾಲ್ಗಳಲ್ಲಿ ಬೆಟ್ಟಿಸಿ ದಸಿಯಂ
ನೆಣಮುರ್ಚೆ ಬೆಂಕಿಯಿಂ ಕೆಳ
ಗಣ ಮೆಯ್ಯಿಂದುರುಪಿ ಬರಿಯ ಬಾಡಂ ತೆಗೆದು೬೯



ಕಟ್ಟೆಕಟಿದಂತೆ ಕಾಣುತ್ತಿತ್ತು. ೬೭. ಅರಸನ ಅಚ್ಚುಮೆಚ್ಚಿನ ನಾಯಿಯೂ ಅಲ್ಲಿಗೆ
ನೀರು ಕುಡಿಯಲು ಬಂತು.೫೪ ಈ ಕೋಣವು ಅದನ್ನು ತನ್ನೆರಡೂ ಕೊಡುಗಳಿಂದ
ತಿವಿದು ಕೊಂದೇಬಿಟ್ಟಿತು. ಇದು ಅಶ್ವ ಮಹಿಷನ್ಯಾಯದಂತೆ ಪರಿಣಮಿಸಿತು.
ರಾಜನಿಗೆ ಈ ಸುದ್ದಿ ತಿಳಿಯಿತು. ೬೮. ಕೋಣನ ಕದನ ಕುತೂಹಲವು ಗಿಡಕ್ಕೆ
ಮೃತ್ಯು ಎಂಬಂತೆ ರಾಜನು ಆ ವ್ಯಾಪಾರಿಯ ಬೀಡನ್ನೆಲ್ಲ ಸೂರೆ ಮಾಡಿದನು.
ಆ ಕೋಣವನ್ನು ಹಿಡಿತರಿಸಿದನು ; ವಿಚಿತ್ರವಾದ ರೀತಿಯಲ್ಲಿ ಅದನ್ನು ಕೊಂದನು.
೬೯. ಅದರ ಹಿಂದಣ ಮತ್ತು ಮುಂದಣ ಕಾಲುಗಳಿಗೆ ದಸಿಯನ್ನು
ನಾಟಿಸಲಾಯಿತು. ಅದರ ನೆರವಿನಿಂದ ಅಡಿಮೇಲಾಗಿ ತೂಗಾಡಿಸಿ ಕೆಳಬದಿಯಿಂದ
ದೀಪದಜ್ವಾಲೆಯನ್ನು ಕೋಣನ ಹೆಗಲಿನ ಭಾಗಕ್ಕೆ ಹಿಡಿದು ಅಷ್ಟುಭಾಗವನ್ನು
ಮಾತ್ರ ಉರಿಸಿಲಾಯಿತು. ಅಲ್ಲಿಂದ ಕೊಬ್ಬು ಹೊರಗೆ ಸ್ರವಿಸತೊಡಗಿತ್ತು. ಅಂತಹ
ಕೊಬ್ಬು ತುಂಬಿದ ಮಾಂಸವನ್ನು ಮಾತ್ರ ಅಲ್ಲಿಂದ ತೆಗೆಯಲಾಯಿತು.

ಆಸನದಿಂ ಬಾಯಿಂ ಪೊಯ್
ಸಾಸವೆ ಮೆಣಸುಪ್ಪು ಗೂಡಿ ನಿಲವಿನ ಸೂಡಿಂ
ಲೇಸಾಗಿ ಬೆಂದ ಬಾಡಂ
ಬಾಸಣಿಸಿಟ್ಟದನೆ ಅಮೃತಮತಿಗಟ್ಟಿಸಿಡಂ೭೦


ಅದುಸತ್ತು ಸವೆದೊಡಾ ಮಾಂ
ಸದ ಸವಿಗಂಡರಸಿ ಬಾಣಸಿನ ಮನೆಯೊಳ್
ಟ್ಟದ ಪೋಂತಂ ತಿಂಗುರ ಮಾ-
ಡಿದಳದನರಿವಲ್ಲಿ ತೊತ್ತಿರೆಂಗುಂ ತಮ್ಮೊಳ್೭೧


ಬಸಿದಪುದು ಮೆಯ್ಯ ಕೀವುಂ
ರಸಿಗೆಯುಮೊಡಲಳಿದುದಾದೊಡಂ ಮಾಣಳೆ ನಾಯ್
ಬಸನಿಗತನಮಂ ಮಾಣ್ದೇ
ಕಿಸುಗುಳಿಯಂ ಜವನುಮುಯ್ಯಲೇಂ ಪೇಸಿದನೋ೭೨



೭. ಅದರ ಹಿಂಬದಿಯಿಂದಲೂ ಮುಂದಣ ಬಾಯಿಯಿಂದಲೂ ಸಾಸಿವೆ
ಮೆಣಸು ಉಪ್ಪು ಬೆರೆಸಿ ಒಳಗೆ ತಳ್ಳಲಾಯಿತು. ಅನಂತರ ಅದನ್ನು ಒಂದೇ
ರೀತಿಯ ಉರಿಯಿಂದ ಬೇಯಿಸಲಾಯಿಸತು. ಈ ಬೆಂದ ಮಾಂಸವನ್ನು ಮುಚ್ಚಿಟ್ಟು
ಅಮೃತಮತಿಗೆ ಹಳುಹಿಸಿದನು, ಯಶೋಮತಿ. ೭೧. ಅಂತೂ ಅದು ಸತ್ತು
ಹೋಯಿತು. ಅದರ ಮಾಂಸವನ್ನು ಉಂಡು ಸವಿಗಂಡ ಅಮೃತಮತಿ ಅಡಿಗೆಯ
ಮನೆಯ ಬಳಿ ಕಟ್ಟಿದ್ದ ಹೋತವನ್ನು ತಿನ್ನುವುದಕ್ಕೇ ಉಪಯೋಗಿಸಿದಳು.
ಅದನ್ನು ಕೊಚ್ಚಿ ಕೊಲೆ ಮಾಡುತ್ತಿದ್ದಾಗ ಅವಳ ದಾಸಿಯರು ತಂತಮ್ಮೊಳಗೆ
ಆಕೆಯ ಕುರಿತು ಮಾತಾಡತೊಡಗಿದರು. ೭೨. ಇವಳ ಮೆಯ್ಯಿಂದ
ಕೀವೂ ರಸಿಕೆಯೂ ಸುರಿಯುತ್ತ ಇದೆ. ದೇಹವು ಪೂರ್ಣಹಾಳಾಗಿ ಹೋಗಿದೆ.
ಆದರೂ ಈ ನಾಯಿಬುದ್ದಿಯನ್ನು ನಿಲ್ಲಿಸಲಿಲ್ಲ. ಈ ಹೊಲಸು
ನಾರುವವಳನ್ನು ಕೊಂಡೊಯ್ಯುವುದಕ್ಕೆ ಯಮನೂ ಹೇಸಿದನೊ ಏನೊ.

ಮದನನ ಮಾರಂಕದ ಚೆಂ-
ದದ ಗಂಡನಮೃತದನ್ನಳತ್ತೆಯನಿವಳೋ
ವದೆ ಕೊಂದಳ್ ಪಾಪಂ ಲೆ-
ಇದು ಪಾತಕಿ ಪುಳಿತೊಡಲ್ಲದೇಂ ಸತ್ತವಳೇ೭೩


ತೊನ್ನ ಕೂಟದಿನಾದುದು
ತೊನ್ನೀ ರೋಗಕ್ಕೆ ಬಾಡು ಕಳ್ ವಿಷಮೆನೆಯುಂ
ಮನ್ನಿಸಳೆ ಮಗನ ಮಾತನಿ-
ದೇಂ ನಾಯಕನರಕಮೀಕೆಗೊಚ್ಚತಮಾಯ್ತೋ೭೪


ಎಂಬ ನುಡಿಗೇಳ್ದು ಮೋಪಲ್
ಪಾಣ್ಬನ ಕೂಡಿರ್ದ ನಣ್ಪುಗಂಡುಂ ತಮದಿಂ
ದಂ ಬೆಂದು ಸತ್ತುದರೆಗೊ-
ಯ್ದುಣ್ಬುದರಿಂ ನೊಂದು ಸತ್ತುದಿಲ್ಲಜಪೋತಂ೭೫



೭೩. ಮದನನ ಪ್ರತಿರೂಪದಂತೆ ಸುಂದರನಾಗಿದ್ದನು, ಈಕೆಯ ಗಂಡ ;ಇವಳ
ಅತ್ತೆ ಅಮೃತದಂತಿದ್ದಳು. ಇವಳಿಗೆ ಅವರಿಬ್ಬರೂ ಮೆಚ್ಚಲಿಲ್ಲ ; ಇಬ್ಬರನ್ನೂ
ಕೊಂದುಹಾಕಿದಳು. ಇವಳನ್ನು ಈಕೆಯ ಪಾಪವೂ ನುಂಗುವುದಿಲ್ಲವಲ್ಲ! ಈ
ಪಾತಕಿ ಹುಳುತುಂಬಿಯೇ ಸಾಯಬೇಕಲ್ಲದೆ ಅನ್ಯಥಾ ಇವಳಿಗೆ ಮರಣ ಬಾರದು.
೭೪. “ಕುಷ್ಠರೋಗಿಯ ಸಂಪರ್ಕಮಾಡಿದ ಇವಳಿಗೆ ಅದೇ ಕುಷ್ಠವು
ಅಂಟಿಕೊಂಡಿದೆ. ಈ ರೋಗಕ್ಕೆ ಮಾಂಸವೂ ಮದ್ಯವೂ ವಿಷವೆಂದು ಮಗ
ಹಲವುಬಾರಿ ಹೇಳಿನೋಡಿದನು. ಆದರೂ ಇವಳು ಅವುಗಳನ್ನು ಬಿಡಲೊಲ್ಲಳು.
ಇವಳಿಗೆ ಅತ್ಯಂತ ದುರ್ಘಟವಾದ ನರಕದ ಮೇಲೆಯೇ ಮೆಚ್ಚಿಗೆ ಆಗಿರಬೇಕು.”
೭೫. ಈ ಮಾತನ್ನೆಲ್ಲ ಆ ಎಳೆಯ ಹೋತ ಕೇಳಿತು. ಅದು, ತನ್ನ
ಹೆಂಡತಿಯೆನ್ನಿಸಿದ್ದವಳು ಜಾರನನ್ನು ಕೂಡಿಕೊಂಡಿದ್ದ ರೀತಿಯನ್ನು ಕಂಡಿತು.
ಈ ಎರಡು ಬಗೆಯ ಕತ್ತಲು ಕವಿದು, ಸಂತಾಪದಿಂದ ಬೆಂದು, ಆ ಹೋತ ತನ್ನ
ಪ್ರಾಣವನ್ನು ಕಳೆದುಕೊಂಡಿತಲ್ಲದೆ, ತನ್ನನ್ನು ಅರ್ಧ ಕಡಿದು ಮಾಂಸ ತೆಗೆದು

ಆ ರೌದ್ರಹತಿಗೆ ತವೆ ಸಂ
ಸಾರಂ ತತ್ಪುರದ ಪೋಳಗೆ ಪುಟ್ಟಿದುವಂತಾ
ಸೈರಿಭಮುಂ ಪೋಂತುಂ ಪೊಲ-
ಗೇರಿಯ ಮಾದಿಗರ ಮನೆಯ ಕೋಳಿಯ ಬಸಿರೊಳ್೭೬


ಕರಮೇಳ್ಗೆಯುಳ್ಳ ಪಿಳ್ಳೆಗ-
ಳೆರಡುಮನೋಲಗಿಸಿದಂ ನೃಪಂಗಲ್ಲಿಯ ಮಾ-
ದರನಿತ್ತು ಚಂಡಕರ್ಮಂ-
ಗರಸನವಂ ನೋಡಿ ಸಲಹು ನೀನೆಂದಿತ್ತಂ೭೭


ವಿಸರುಹದಂತೆ ಕೇಸರಮನಾಂತುದು ಮೆಯ್ಗಲಿಯಂತಿರಾರೆ ಕೂ-
ರ್ಪೆಸಿದುದು ಚಾಗಿಯಂತ ನೆರೆ ಕೊಟ್ಟೆಸೆದೊಪ್ಪಿತು ರಾಧೆಯಂತೆ ಸಂ.
ದಿಸಿ ಮುಡಿ ಮೇಲೆ ಕೊಂಕಿದುದು ಚಂದ್ರಮನಂತೆ ಸುಪಕ್ಷದಿಂದ ರಂ-
ಜಿಡಿದುದು ಪುಂಜನಗ್ಗದ ಸುವಸ್ತುವಿನಂತಿರೆ ತಳ್ತು ಹೇಂಟೆಯೊಳ್೭೮



ಉಣ್ಣುವುದರಿಂದಾಗಿ ನೊಂದು ಸತ್ತುದೇ ಅಲ್ಲ. ೭೬. ಭಯಂಕರವಾದ ಹತ್ಯೆಗೆ
ಒಳಗಾಗಿ ಆ ಕೋಣವೂ ಹೋತವೂ ತಮ್ಮ ಜನ್ಮವನ್ನು ನೀಗಿಕೊಂಡವು.
ಅವೆರಡೂ ಆ ನಗರದ ಹೊರವಳಯದ ಹೊಲಗೇರಿಯ ಮಾದರ ಮನೆಯ
ಕೋಳಿಯ ಗರ್ಭದಲ್ಲಿ ಜನ್ಮತಾಳಿದವು. ಮಾದರವನಿಗೆ ಈ ಎರಡೂ ಕೋಳಿಗಳ
ಬೆಳವಣಿಗೆಯನ್ನು ಕಂಡು, ಇವುಗಳನ್ನು ಅರಸನಿಗೆ ಒಪ್ಪಿಸುವುದು ವಿಹಿತವೆಂದು
ತೋರಿತು. ೭೭. ಅವನು ಬಲಿತ ಆ ಎರಡನ್ನೂ ಯಶೋಮತಿಗೆ ಸಲ್ಲಿಸಿದನು.
ಅರಸನು ಅವುಗಳನ್ನು ನೋಡಿ, ಚಂಡಕರ್ಮಮಿಗೆ ಅವುಗಳನ್ನು ಕೊಟ್ಟು
ಸಾಕುವಂತೆ ಹೇಳಿದನು. ೭೮. ಹುಂಜವು ತಾವರೆಯಂತೆ ಕೇಸರವನ್ನು
ಪಡೆದುಕೊಂಡಿತು. ವೀರನಂತೆ ಅದರ ಕೂಗಿಗೆ ಕೂರ್ಪುಂಟಾಯಿತು. ತ್ಯಾಗಿಯಂತೆ
ಅದರ ಕೊಟ್ಟು ಶೋಭಿಸಿತು. ರಾಧೆಯಂತೆ ತಲೆ ಮುಡಿ ಎತ್ತರದಲ್ಲಿ
ಕೊಂಕುಗೊಂಡಿತು. ಚಂದ್ರನಂತೆ ಅದು ಒಳ್ಳೆಯ ಪಕ್ಷಗಳಿಂದ ಸೊಗಯಿಸಿತು.
ಹೇಂಟೆಯನ್ನು ಸೇರಿ ಸುವಸ್ತುವಿನಂತೆ ಮನೋಹರವಾಯಿತು.೫೫

ಅಭಯರುಚಿಕುಮಾರಂ ಮಾರಿದತ್ತಂಗೆ ಹಿಂಸಾ
ರಭಸಮತಿಗೆ ಸಯ್ಪಂ ಪೇಳ್ದು ಧರ್ಮಕ್ಕೆ ತಂದೀ
ಶುಭಕಥನಮನತ್ಯಾನಂದದಿಂ ಕೇಳ್ವ ಭವ್ಯ-
ಪ್ರಭುಸಭೆಗೆಸೆದಿರ್ಕುಂ ಮಂಗಳಂ ಶ್ರೀವಿಲಾಸಂ೭೯















೭೯. ಹಿಂಸೆಯಲ್ಲೇ ಮನಸ್ಸು ಮುಂದಾಗುತ್ತಿದ್ದ ಮಾರಿದತ್ತನಿಗೆ ಅಭಯರುಚಿ
ಕುಮಾರನು ಸರಿಯಾದ (ಪುಣ್ಯದ) ವಿಷಯವನ್ನು ಹೇಳಿ ಅವನನ್ನು ಧರ್ಮದ
ದಾರಿಗೆ ತಂದನು. ಇಂತಹ ಈ ಮಂಗಲಕರವಾದ ಕಥೆಯನ್ನು ಅತ್ಯಾನಂದದಿಂದ
ಕೇಳುವ ಭವ್ಯ ಪ್ರಭು ಸಭೆಗೆ ಮಂಗಲ ಸಂಪದ್ವಿಲಾಸವು ಶೋಭಿಸುತ್ತದೆ.

ನಾಲ್ಕನೆಯ ಅವತಾರ

ರತಿವೆರಸು ಮನಸಿಜಂ ಬನ-
ದತಿಶಯಮಂ ನೋಡಲೆಂದು ಬರ್ಪಂತೆ ಯಶೋ-
ಮತಿ ಕುಸುಮಾವಳಿವೆರಸು-
ನೃತಪೀತಚ್ಛತ್ರನಂದನಂ ನಡೆತಂದಂ


ಬಾಳಲರ್ಗುಡಿ ಪಿಕರುತಿ ಬಾ-
ಯ್ಕೇಳಿಕೆ ಮಾಂದಳಿರ ಕೆಂಪು ದೀವಿಗೆಯೆನೆ ಭೂ
ಪಾಳಂ ಬರೆ ಶೋಧಿಪ ವನ-
ಪಾಳನವೊಲ್ ಮುಂದೆ ಬಂದುದಂದು ವಸಂತಂ


ತಳಿರ್ಗಳ ಚಾಳೆಯಮೆಳಲತೆ-
ಗಳ ಲುಳಿ ತಿಳಿಗೊಲದ ತೆರೆಯ ತಾಳಂ ಪೊಸವೂ-
ಗಳ ನೋಟಮಾಗೆ ನೃಪನಂ
ಮಳಯಾನಿಲನೆಂಬ ನುಟ್ಟವಂ ಕೇಳಿಸಿದಂ



೧. ಕಾಮನೂ ರತಿಯೂ ಜತೆಗೂಡಿ ವನದ ಅತಿಶಯವೇನೆಂದು ನೋಡಲು
ಬರುವಂತೆ, ಒಮ್ಮೆ ಯಶೋಮತಿ ತನ್ನ ಪತ್ನಿಯಾದ ಕುಸುಮಾವಳಿಯನ್ನೂ
ಕೂಡಿಕೊಂಡು ಉದ್ಯಾನವನಕ್ಕೆ ಬಂದನು. ತಲೆಯ ಮೇಲೆ ಉನ್ನತವಾಗಿ
ಮೆರೆಯುತ್ತಿದ್ದ ಬಂಗಾರದ ಛತ್ರದಡಿಯಲ್ಲಿ ಸಂತೋಷದಿಂದ ಅವನು ಬಂದನು.
೨. ವಸಂತಕಾಲವೂ ಆಗ ಆಗಮಿಸಿತು. ಹೂವಿನ ಕುಡಿಗಳೇ ಕೈಯಕತ್ತಿಯಾಗಿ,
ಕೋಗಿಲೆಯ ಕೂಗೇ ವಾಗ್ವಿನೋದವಾಗಿ, ಮಾವಿನ ಚಿಗುರ ಕೆಂಪೇ ದೀಪವಾಗಿ;
ಅರಸನು ಬರುವಾಗ ವನವನ್ನೆಲ್ಲ ಸರಿಪಡಿಸುವ ವನಪಾಲಕನಂತೆ ವಸಂತವು
ಬಂದಿತು. ೩. ಬೆನ್ನಲ್ಲೇ ಮಲಯಮಾರುತನು ನಟ್ಟುವನಾಗಿ ಕಾಣಿಸಿಕೊಂಡನು.
ಚಿಗುರುಗಳ ನೆಗೆತ, ಎಳಲತೆಗಳ ಅಲುಗಾಟ, ನಿರ್ಮಲ ಸರೋವರದ ತೆರೆಗಳ

ಅಗೆವೊಯ್ದ ಚಂದ್ರಮಂಡಲ-
ದಗೆಗಳವೊಲ್ ಕಾರಮುಗಿಲ ಕಿಳ್ಸರಿಗಳವೊಲ್
ಸೊಗಯಿಸಿದುವು ಬೆಳ್ಗೊಡೆ ಕಂ
ಬಗಂಬದೊಳ್ ಕೊಂಬುಗೊಂಬಿನೊಳ್ ಪರ್ಮಿಡಿಗಳ್


ಎಲೆ ಸುಲಿದಡೆಗಳ್ ಕ-
ಣ್ಗೆಲೆಯೆಡೆ ಗಂಟೊಡೆದು ಮೊನಸಿ ನನೆಕೊನೆದು ಮುಗು-
ಳಲರ್ದು ಮಣಿದುಂಬಿಗಂ ತೆಂ-
ಬೆಲರ್ಗ೦ ಮುದ್ದಾದುವಲ್ಲಿ ಪೊಸಮಲ್ಲಿಗೆಗಳ್


ಪೊಂಬಾಳೆ ಚಾಮರಂ ಚಂ
ದ್ರಂ ಬೆಳ್ಗೊಡೆ ಕೇಳಿಶಿಖರಿ ಸಿಂಹಾಸನಮಾ-
ಯ್ತೆಂಬಿನೆಗಮಂಗಜಂ ಮಾ-
ವೆಂಬ ಕುಮಾರಂಗೆ ಪಟ್ಟಮಂ ಕಟ್ಟಿಸಿದಂ



ತಾಳ, ಹೊಸ ಹೂಗಳ ಸುಂದರ ದೃಶ್ಯ ಇವುಗಳಿಂದ ಅವನು ರಾಜನ ಮನಸ್ಸನ್ನು
ವಿನೋದಗೊಳಿಸಿದನು. ೪. ಉದ್ಯಾನದ ಪ್ರತಿಯೊಂದು ಕಂಬದಲ್ಲಿಯೂ
ಬೆಳ್ಗೊಡೆ ಸೊಗಸಾಗಿ ತೋರುತ್ತಿತ್ತು. ಅದನ್ನು ಕಾಣುವಾಗ ಚಂದ್ರಮಂಡಲದ
ಅಗೆಗಳನ್ನು ಅಲ್ಲಲ್ಲಿ ನೆಟ್ಟಿಟ್ಟಂತೆ ಹೃದಯಂಗಮವಾಗಿತ್ತು. ಹಾಗೆಯೇ ಮಳೆಗಾಲದ
ಮೋಡಗಳಿಂದ ಮಳೆಹನಿಗಳು ಉದುರಿದಂತೆ ಪ್ರತಿಯೊಂದು ಮರದ
ಕೊಂಬೆಯಲ್ಲೂ ದೊಡ್ಡ ದೊಡ್ಡ ಮಿಡಿಗಳು ಶೋಭಿಸುತ್ತಿದ್ದುವು. ೫. ಎಲೆಯುದುರಿದ
ಸ್ಥಳಗಳಲ್ಲಿ ಕಣ್ಣು ಕಣ್ಣುಗಳಲ್ಲಿ, ಎಲೆಯ ಎಡೆಯಲ್ಲಿ ಮಲ್ಲಿಗೆಯ ಬಳ್ಳಿ
ಗಂಟೊಡೆಯಿತು. ಅದೇ ಗಂಟು ಮೊನಚಾಗಿ ನನೆಕೊನೆವೋಯಿತು. ಆ ಬಳಿಕ
ಮುಗುಳು ಕಾಣಿಸಿಕೊಂಡು ಅದೇ ಅರಳತೊಡಗಿತು. ಈ ಹೊಸಹೂಗಳು
ಮರಿದುಂಬಿಗಳಿಗೂ ದಕ್ಷಿಣಾನಿಲಕ್ಕೂ ಮುದ್ದಾದುವು. ೬. ಮಾವೆಂಬ
ರಾಜಕುಮಾರನಿಗೆ ಕಾಮನು ಪಟ್ಟಕಟ್ಟಿಸಿದನು. ಆಗ ಹೊಂಬಾಳೆ ಚಾಮರವಾಗಿ
ಬೀಸಿತು. ಎತ್ತಿದ ಬೆಳ್ಗೊಡೆಯಾಗಿ ಚಂದ್ರನು ಶೋಭಿಸಿದನು. ನರ್ತಿಸುವ ನವಿಲೇ
ಸಿಂಹಾಸನವಾಗಿ ಪರಿಣಮಿಸಿತು.

ಕಡೆಗಣ್ಗಳ್ ಕೇದಗೆಯಂ
ಪಡೆದುವು ಮಲ್ಲಿಗೆಗೆ ಸೆಳ್ಳುಗುರ್ ಸಂಪಗೆಯಂ
ಪಡೆದುವು ಪಾದರಿಗೆನೆ ಸಂ-
ಗಡರಿಂದಲರ್ಗೊಯ್ವ ವಾರವನಿತೆಯರೆಸೆದರ್


ಮಳಯಜದ ಮೊಲೆಯ ಕುಂಕುಮ-
ದಳಕದ ಕತ್ತುರಿಯ ಬಣ್ಣವಣ್ಣಿಗೆ ಕೊಳದೊಳ್
ತಳರ್ದಿರೆ ಜಲರುಹಮುಖಿಯರ್
ಜಳಕೇಳಿಯ ನೆವದಿ ದೂಳಿಚಿತ್ರಂ ಬರೆದರ್


ತೆರೆಮುಗಿಲನಡರ್ವ ವಿದ್ಯಾ-
ಧರಿಯೆಂಬಿನಮೊರ್ವಳೇರೆ ಕೃತಕಾದ್ರಿಯನೇಂ
ದೊರೆಯಾದಳೊ ರತಿನಾಥನ
ಕರುಮಾಡದ ಮದನಮೋಹಿನೀ ಪುತ್ರಿಕೆವೊಲ್



೭. ಅಲ್ಲಿ ವಾರವನಿತೆಯರು ಹೂ ಕೊಯ್ಯುವ ಸೊಗಸೇ ಸೊಗಸು. ಅವರ
ಕಡೆಗಣ್ಣುಗಳು ಮಲ್ಲಿಗೆಗೆ ಕೇದಗೆಯನ್ನು ಜತೆಗೊಳಿಸಿದುವು. ಪಾದರಿಗೆ ಅವರ
ಸೆಳ್ಳುಗುರು ಸಂಪಗೆಯನ್ನು ಒಂದುಗೂಡಿಸಿತು. ೮. ಕೆಲವರು ಕಮಲ ಮುಖಿಯರು
ಅಲ್ಲಿ ನೆವಕ್ಕೆ ನೀರಾಟವಾಡುತ್ತಾ ಇದ್ದರು. ನಿಜವಾಗಿ ನೋಡಿದರೆ ಅವರು
ಕುಚಗಳಿಗೆ ಲೇಪಿಸಿಕೊಂಡ ಗಂಧ, ಮುಂಗುರುಳಿಗೆ (ಬೈತಲೆಗೆ) ಹಚ್ಚಿದ ಕುಂಕುಮ,
ಕೆನ್ನೆಗೆ ಹಾಕಿದ ಕಸ್ತೂರಿಯ ಚಿತ್ರಾಲಂಕಾರ-ಇವುಗಳ ಬಗೆಬಗೆಯ ಬಣ್ಣಗಳಿಂದ
ನೀರಮೇಲೆ ರಂಗವಲ್ಲಿಯನ್ನು ಬಿಡಿಸುವಂತೆ ಭಾಸವಾಗುತ್ತಿತ್ತು. ೯. ತೆರೆದ
ಮುಗಿಲನ್ನೇರಿ ಹೋಗುವ ವಿದ್ಯಾಧರಿಯಂತೆ ಒಬ್ಬಳು ಅಲ್ಲಿದ್ದ
ಕೃತಕಗಿರಿಯನ್ನೇರಿದಳು. ಆಗ ಆವಳು ಕಾಮೇಶ್ವರನ ಅರಮನೆಯ ಮದನಕೈ
ಬೊಂಬೆಯಂತೆ ಬಹಳ ಚೆಲುವಾಗಿ ತೋರುತ್ತಿದ್ದಳು.

ಬೆಳತಿಗೆ ವಸದನಮೆಸೆದಿರೆ
ತಳಿರ್ಜೊಂಪದೊಳುಯ್ಯಲಾಡಿ ಮೆಱೆದಳದೊರ್ವಳ್
ಜವಳದ ಮಣಿಮಂಡಪದೊಳ-
ಗೆಳವೆಱೆಯಂ ತೂಗಿ ತೊಟ್ಟಿಲೊಳ್ ಸಾರ್ಚಿದವೊಲ್೧೦


ಕೊಳದೊಳಗೋಲಾಡಿ ತಳಿ-
ರ್ತೆಳಮಾವಿನೊಳುಯ್ಯಲಾಡಿ ನರಪತಿ ಕುಸುಮಾ-
ವಳಿಯೊಳ್ ರತಿರಾಗದಿನೋ-
ಕುಳಿಯಾಡಿ ವಿಲಾಸಗೋಷ್ಠಿಯೊಳ್ ಕುಳ್ಳಿರ್ದಂ೧೧


ಗಂಟಿಗೆತ್ತಲ್ ತದ್ವನ
ಪರಿಸರದೊಳ್ ಬರುತಮಿರ್ದಕಂಪನರೆಂಬರ್
ತರುಮೂಲದೊಳಿರೆ ನಿಧಿಯಂ
ಕರುಡಂ ಕಾಣ್ಬಂತೆ ಚಂಡಕರ್ಮಂ ಕಂಡಂ೧೨



೧೦. ಇನ್ನೊಬ್ಬಳು ಬಿಳಿಯ ಬಟ್ಟೆಯನ್ನುಟ್ಟುಕೊಂಡು ಚಿಗುರ ಚಪ್ಪರದಲ್ಲಿ
ಉಯ್ಯಾಲೆಯಾಡುತ್ತಾ ಮೆರೆಯುತ್ತಿದ್ದಳು. ಆಗ ತಾವರೆಯ ರತ್ನ ಮಂಟಪದಲ್ಲಿ
ಬಾಲಚಂದ್ರನನ್ನು ತೊಟ್ಟಿಲಲ್ಲಿಟ್ಟು ತೂಗುವಂತೆ ಚೆಲುವು ಚೆಲ್ಲುತ್ತಿತ್ತು. ೧೧.
ಯಶೋಮತಿಯೂ ಕುಸುಮಾವಳಿಯೊಂದಿಗೆ ಸರೋವರದಲ್ಲಿ ಓಲಾಡಿದನು;
ಚಿಗುರಿದ ಎಳೆಯ ಮಾವಿನ ಮರದಲ್ಲಿ ಉಯ್ಯಾಲೆಯಾಡಿದನು.
ಪ್ರೇಮಾನುರಾಗದಿಂದ ಓಕುಳಿಯಾಡಿದನು. ಅನಂತರ ಒಂದು ಕಡೆ
ವಿಲಾಸಗೋಷ್ಠಿಯಲ್ಲಿ ಕುಳಿತುಕೊಂಡನು. ೧೨. ಚಂಡಕರ್ಮನು ಎಂದಿನಂತೆ
ತಿರುಗಾಡುತ್ತಾ ಆ ಉದ್ಯಾನದ ಕಡೆಗೆ ಬಂದನು. ಅವನಿಗೆ ಅಲ್ಲಿ, ಮರವೊಂದರ
ಬುಡದಲ್ಲಿ ಅಕಂಪನರೆಂಬವರು ಕುಳಿರುಕೊಂಡಿದ್ದುದು ಕಾಣಿಸಿತು. ಅವನಿಗೆ
ಆಗ ಕುರುಡನು ಕೊಪ್ಪರಿಗೆಯನ್ನು ಕಂಡಂತಾಯಿತು.೧೩. ಅವರು ಮನಸ್ಸನ್ನು

ಮನಮಿರೆ ಪುರ್ವಿನ ಮೊದಲೊಳ್
ಮನದೊಳಗಿರೆ ವಾಯು ಕರಣತತಿ ವಾಯುವಿನೊಳ್
ಕುನಿದಿರೆ ಪದ್ಮಾಸನದೊಳ್
ತನುವಿರೆ ಯೋಗೀಂದ್ರ ನಾತ್ಮ ಚಿಂತೆಯೊಳಿರ್ದಂ೧೩


ಎರಗಿದನಾತಂ ಗೌರವ
ಮರೆಮದೆಯು ದೀಪವರ್ತಿ ನಿಧಿಗಾಣ್ಬುದುಮೊ-
ಲ್ದೆರಗುವ ತೆರದಿಂ ಮುನಿ ಕ-
ಣ್ದೆಱೆದೊಯ್ಯನೆ ನೋಡಿ ಪರಸೆ ಬರೆಕಿಂತೆಂದಂ೧೪


ಎಲೆ ದೇವರೆ ಪುತ್ತುಂ ಬ-
ತ್ತಲೆಯುಂ ಬರೆದಿಲ್ಲದೆಂಬರದು ಕಾರಣದಿಂ
ನೆಲೆಯಾಂದೆಗನಚ್ಚಿಯವೋ-
ಲೆಲೆಮಿಡುಕದೆ ನೆನೆಯುತಿರ್ದಿರೇನಂ ಮನದೊಳ್೧೫



ಕೇಂದ್ರೀಕರಿಸಿ ಹುಬ್ಬುಗಳ ನಡುವೆ ನಿಲ್ಲಸಿದ್ದರು. ಆ ಮನಸ್ಸಿನಲ್ಲಿ ವಾಯುಗಳನ್ನು
ನಿಲ್ಲಿಸಿದ್ದರು. ಆ ವಾಯುವಿನಲ್ಲಿ ಇಂದ್ರಿಯಗಳನ್ನೆಲ್ಲ ನಿಲ್ಲಿಸಿದ್ದರು. ಅವರು ಪದ್ಮಾಸನ
ಹಾಕಿ ಆತ್ಮಾನುಸಂಧಾನದಲ್ಲಿ ಮಗ್ನರಾಗಿದ್ದ ಯೋಗಿವರ್ಯರಾಗಿದ್ದರು.೧೪.
ಗೌರವವೆಂದರೇನೆಂದರಿಯದಿದ್ದರೂ ಚಂಡಕರ್ಮನು ತನ್ನಿಂದ ತಾನೇ ಅವರೆದುರು
ತಲೆಬಾಗಿಸಿದನು. ನಿಧಿಯನ್ನು ಕಂಡ ಕೂಡಲೆ ದೀಪದ ಕುಡಿ ಆಕಡೆ
ಬಾಗಿಕೊಳ್ಳುವುದಷ್ಟೆ! ಚಂಡಕರ್ಮನು ನಮಸ್ಕರಿಸಿದ ಹೊತ್ತಿಗೆ ಆ ಮುನಿಗಳು
ಕಣ್ಣುತೆರೆದರು! ಮಣಿದವನನ್ನು ನೋಡಿ ಹರಸಿದರು. ಚಂಡಕರ್ಮನು
ಮಾತಿಗುಪಕ್ರಮಿಸಿದನು. ೧೫. "ದೇವರೇ, ಹುತ್ತವೂ ಬತ್ತಲೆಯೂ ಬರಿದಲ್ಲ೫೬
ಎನ್ನುತ್ತಾರೆ. ಆದ ಕಾರಣ ನೀವು ಒಂದು ಕಡೆ ಕುಳಿತ ಗೂಗೆಯ ನಿಶ್ಚಲವಾದ
ಕಣ್ಣುಗಳಂತೆ ಒಂದಿಷ್ಟೂ ಅಲುಗಾಡದೆ ಕುಳಿತುಕೊಂಡು ಮನಸ್ಸಿನಲ್ಲಿ ಏನೇನೋ

ಅವಧಾರಿಸಿ ಕೇಲ್ವುದುಮದ
ರವಧಿಯಿನಾಸನ್ನಭವ್ಯನೆಂಬುದನರಿದಿಂ-
ತವರಿಂತು ನುಡಿದರಾತ್ಮನ-
ನವಿಕಲ್ಪಂ ನೆನೆಯುತಿರ್ದೆವೆನೆ ಮತ್ತಾತಂ೧೬

ಆವೆಡೆಯೊಳಿರ್ದನಾತ್ಮಂ-
ಗಾವುದು ಕುರುಪೆಂದೊಡಂಗಿಯಂಗದೊಳೆಲ್ಲಂ
ತೀವಿರ್ಪಂ ಭೂತಚತು-
ಷ್ಟಾವಯವದಿನನ್ಯ ನಾತ್ಮನತಿಚೈತನ್ಯಂ೧೭

ಎಂದೊಡೆ ತಳಾರನಾಯಕ-
ನೆಂದಂ ನೀಮೆಂದ ಮಾತು ಪೊಲ್ಲದು ನೋಡ
ಲ್ಕೆಂದು ಪಲರಂ ವಿಚಾರಿಸಿ
ಕೊಂದೆಂ ತನುವಲ್ಲದಾತ್ಮನಂ ಕಂಡರಿಯೆಂ೧೮


ನೆನೆಯುತ್ತಿದ್ದಿರಲ್ಲ! ಏನನ್ನು?" ೧೬. "ಅಕಂಪನರಿಗೆ ಅವನು ಆಸನ್ನಭವ್ಯನೆಂಬುದು
ತಮ್ಮ ಅವಧಿಜ್ಞಾನದಿಂದ೫೭ಗೊತ್ತಾಯಿತು. ಆದುದರಿಂದ ಅವರು ಯಾವ
ವಿಕಲ್ಪವೂ ಇಲ್ಲದೆ ಆತ್ಮನನ್ನು ನೆನೆಯುತ್ತಾ ಇದ್ದೆ" ಎಂದರು. ಚಂಡಕರ್ಮ ಮತ್ತೆ
ಪ್ರಶ್ನೆ ಹಾಕಿದನು. ೧೭. "ಆತ್ಮನೆಲ್ಲಿದ್ದಾನೆ? ಆತ್ಮನಿಗೆ ಗುರುತೇನು?"
ದೇಹಧಾರಿಯಾಗಿರುವವರೆಲ್ಲರ ಅವಯವಗಳಲ್ಲಿಯೂ ಆತ್ಮನು ವ್ಯಾಪಿಸಿ
ಕೊಂಡಿದ್ದಾನೆ ಮಣ್ಣು, ನೀರು, ಗಾಳಿ, ಮತ್ತು ಬೆಂಕಿಯೆಂಬ ನಾಲ್ಕು ಬಗೆಯ
ಭೂತಗಳಿಂದಾದ ದೇಹಕ್ಕಿಂತ ಬೇರೆಯಾಗಿರುವವನು ಆತ್ಮ. ಅವನ ಚೈತನ್ಯವು
ಅಪರಿಮಿತ." ೧೮. "ನಿಮ್ಮ ಮಾತು ಒಪ್ಪತಕ್ಕದ್ದಲ್ಲ. ಆತ್ಮನನ್ನು ಕಾಣಬೇಕೆಂದು
ಹಲವರನ್ನು ವಿಚಾರಿಸಿದೆ; ಹಲವು ಪ್ರಾಣಿಗಳನ್ನು ಕೊಂದು ನೋಡಿದೆ. ಎಲ್ಲ
ಸಂದರ್ಭದಲ್ಲಿಯೂ ದೇಹವನ್ನು ಕಂಡೆನಲ್ಲದೆ ಆತ್ಮನನ್ನು ಕಾಣಲೇ ಇಲ್ಲ.

ಕಡಿದು ಕಿರಿಕಿರಿದನಲುವಂ
ಪುಡಿಗುಟ್ಟಿಸಿ ತೊವಲನುಗಿದು ಕರುಳ ತೊಡಂಕಂ
ಬಿಡಿಸಿ ನಡೆ ನೋಳ್ಪಿನೊಳಗೆ-
ಲ್ಲಡಗಿರ್ಪುದು ಜೀವನಿರ್ಪೊಡೆಲ್ಲಿಗೆ ಪೋದಂ೧೯


ಕುದಿರೊಳ್ ಕಳ್ಳನನಿಕ್ಕಿಸಿ-
ಸೊದೆಯಿಟ್ಟರೆ ಬಳಿದು ಬಳಿಕ ತೆರೆದೊಳಗಂ ನೋ-
ಡಿದೆನಾರ್ಮನಿಲ್ಲ ತನುವಿ-
ರ್ಪುದು ಬೇರೆಂಬಾತ್ಮನಂ ನೆಲಂ ನುಂಗಿದುದೋ೨೦


ತೂಗಿಸಿ ತೊಲೆಯೊಳ್ ಬಾಯಂ
ಮೂಗುಮನೊಡೆಯೊತ್ತಿ ಕೊಂದ ಕಳ್ಳನ ದೇಹಂ
ತೂಗಿದೊಡೆ ಕುಂದದಾತ್ಮವಿ-
ಭಾಗಂ ಬೇರೆಲ್ಲ ಜೀವನೆಂತುಂ ದೇಹಂ೨೧



೧೯. ಆತ್ಮನೆಲ್ಲಿ ಅಡಗಿದ್ದಾನೆಂದು ನೋಡಬೇಕೆಂದು ಒಂದು ಜೀವಿಯ ದೇಹವನ್ನು
ಸಣ್ಣ ಸಣ್ಣ ತುಂಡುಗಳನ್ನಾಗಿ ಕತ್ತರಿಸಿ, ಎಲುಬನ್ನು ಹುಡಿಮಾಡಿ, ಚರ್ಮವನ್ನು
ಸುಲಿದು, ಕರುಳ ಸಿಕ್ಕನ್ನೆಲ್ಲ ಬಿಡಿಸಿ ಒಳಗೆಲ್ಲ ಪರೀಕ್ಷೆ ಮಾಡಿ ನೋಡಿದೆ. ಎಲ್ಲಿಯೂ ದೊರೆಯಲಿಲ್ಲ. ಆತ್ಮನಿದ್ದಾನೆಂದಾದರೆ ಅವನೆಲ್ಲಿಗೆ ಹೋದನು? ೨೦. ಒಬ್ಬ
ಕಳ್ಳನನ್ನು ಹಗೇವಿನಲ್ಲಿ ತಳ್ಳಿ ಮೇಲೆಲ್ಲ ಸುಣ್ಣವನ್ನು ಸುರಿದು ಬಳಿದು ಆಮೇಲೆ
ತೆರೆದು ನೋಡಿದೆ. ಒಳಗೆ ಎಲ್ಲಿಯೂ ಆತ್ಮನಿಲ್ಲ; ದೇಹ ಮಾತ್ರ ಎಲ್ಲಿಗೂ
ಹೋಗಲಿಲ್ಲ. ದೇಹಕ್ಕಿಂತ ಭಿನ್ನವೆನಿಸಿದ ಆ ಆತ್ಮನನ್ನು ನೆಲವು ನುಂಗಿತೇ?
೨೧. ಇನ್ನೊಬ್ಬ ಕಳ್ಳನನ್ನು ತಕ್ಕಡಿಯಲ್ಲಿಟ್ಟು ತೂಗಿದೆ. ಅನಂತರ ಅವನ ಮೂಗು
ಬಾಯಿಗಳನ್ನು ಬಲವಾಗಿ ಒತ್ತಿಟ್ಟು ಕೊಲೆ ಮಾಡಲಾಯಿತು. ಅನಂತರ ಅವನ
ದೇಹವನ್ನು ತೂಗಿ ನೋಡಿದಾಗ ತೂಕವೇನೂ ಕಡಿಮೆಯಾಗಲಿಲ್ಲ. ಎಂದ
ಮೇಲೆ ಆತ್ಮವೆಂಬ ಪ್ರತ್ಯೇಕ ವಿಭಾಗವೇ ಇಲ್ಲ. ದೇಹ ಮಾತ್ರ ಇರುತ್ತದೆ."

ಎಂದೊಡೆ ದಂಢಧರಂಗಿಂ
ತೆಂದರ್ ಗುರುಗಳ್ ವಿಮೋಹಮೃಗಮಂ ಮಿಥ್ಯಾ
ಕಂದರದೊಳ್ ಬೆದರಟ್ಟುವ
ದುಂದುಭಿರವದಂತಿರೊಗೆಯೆ ಗಂಭೀರರವಂ ೨೨


ತಱೆದೊಡೆ ಕಡೆದೊಡೆ ಸೀಳ್ದೊಡೆ
ಪೊರಮಡುವುದೇ ಕಿಚ್ಚು ಕಾಷ್ಠದಿಂ ಪೊಸೆಯಲೊಡಂ
ಪೊರಮಡುವುದಂತೆ ಜೀವಂ
ಪೆರತೊಡಲಿಂ ತೋರುಗುಂ ವಿವೇಕಕ್ರಿಯೆಯಿಂ೨೩


ಕುದಿರೊಳರ್ದೂಗಿದಿದ ಶಂ
ಖದ ದನಿ ನಿಶ್ಛಿದ್ರಮಾದೊಡಂ ಪೊಣ್ಮದೆ ಶಂ
ಖದಿನನ್ಯಮಲ್ಲದೇಂ ಪೊ-
ಣ್ಮಿದ ನಾದಂ ಕಾಯದಿಂದೆ ಜೀವನುಮನ್ಯಂ ೨೪



೨೨. ತಳಾರನಾದ ಚಂಡಕರ್ಮನ ಮಾತನ್ನೆಲ್ಲ ಕೇಳಿದ ಮೇಲೆ ಗುರುಗಳು
ಮಾತಿಗಾರಂಭಿಸಿದರು. ಅವರ ಗಂಭೀರಧ್ವನಿ ಮಿಥ್ಯೆಯೆಂಬ ಕಂದರದಲ್ಲಿದ್ದ
ವಿಮೋಹ(ಅಜ್ಞಾನ) ವೆಂಬ ಮೃಗವನ್ನು ಹೆದರಿಸಿ ಓಡಿಸುವ ದುಂದುಭಿಯ
ಧ್ವನಿಯಂತೆ ಮೊಳಗಿತು. ೨೩. "ಕಟ್ಟಿಗೆಯೊಂದನ್ನು ತೆಗೆದುಕೊಂಡು ಕೊಚ್ಚು;
ಕಡಿ; ಸೀಳು. ಹೇಗೆ ಮಾಡಿದರೂ ಅದರಿಂದ ಬೆಂಕಿ ಹೊರಡುವುದಿಲ್ಲ. ಅದನ್ನು
ತಿಕ್ಕಿದಾಗ ಮಾತ್ರ ಅದರಿಂದ ಅಗ್ನಿ ಉದ್ಭವಿಸುತ್ತದೆ. ಹಾಗೆಯೇ ಜೀವವೇ
ಬೇರೆ. ಅದು ವಿವೇಕ ಕ್ರಿಯೆಯಿಂದ ದೇಹಕ್ಕಿಂತ ಭಿನ್ನವೆಂದು ಕಂಡುಬರುತ್ತದೆ.
೨೪. ಹಗೇವಿನೊಳಗೆ ಇದ್ದುಕೊಂಡು ಶಂಖವನ್ನು ಊದಿದರೆ, ಆ ಶಂಖದ
ಧ್ವನಿ ಹಗೇವಿನಲ್ಲಿ ಯಾವ ಬಿರುಕಿಲ್ಲದಿದ್ದರೂ ಹೊರಗೆ ಹೊಮ್ಮುವುದಿಲ್ಲವೇ?
ಆ ಧ್ವನಿ ಶಂಖದಿಂದ ಬೇರೆಯೇ ಅಲ್ಲವೆ? ಹಾಗೆಯೇ ಆತ್ಮನು ದೇಹಕ್ಕಿಂತ
ಪ್ರತ್ಯೇಕನಾಗಿಯೇ ಇದ್ದಾನೆ.

ತೀವಿದ ತಿದಿಯಂ ತೂಗಿಯು-
ಮಾ ವಾಯುವನಿರೆಪಿ ತೂಗಿಯುಂ ಸರಿ ತಿದಿಯಿಂ-
ದಾ ವಾಯು ಬೇರೆ ತನುವಿಂ
ಜೀವಂ ಬೇರೆಂದು ಮಗನೆ ಭಾವಿಸಿ ನೋಡಾ೨೫


ಏದೊರೆಯನಾತ್ಮನೆಂದೊಡ-
ನಾದಿಯನಂತಂ ನಿರತ್ಯಯಂ ಚಿನ್ಮಯ ನಿಃ
ಪ್ರಾದೇಶಿಕನೆಂದಾತನು-
ಪಾದೇಯಂ ಮುಕ್ತಿಮುಕ್ತನುಂ ಪರಮಾತ್ಮಂ೨೬


ಕಲ್ಲೊಳ್ ಪೊನ್ ಪಾಲೊಳ್ ಘೃತ-
ಮಿಲ್ಲೆನವೇಡುಂಟು ದೇಹದೊರಗಾತ್ಮನದೇ-
ಕಿಲ್ಲ ಕುರುಡಂಗೆ ತೋರದೊ-
ಡಿಲ್ಲಪ್ಪುದೆ ವಸ್ತು ಭೇದಿಪಂಗಾತ್ಮನೊಳಂ೨೭



೨೫. ತಿದಿಯೊಳಗೆ ಗಾಳಿ ತುಂಬಿಸಿ ತೂಗಿ ನೋಡಿದರೂ, ಅದರೊಳಗಿನ
ಗಾಳಿ ತೆಗೆದು ತೂಕ ಮಾಡಿದರೂ ತೂಕದಲ್ಲಿ ಏನೂ ವ್ಯತ್ಯಾಸವಿರುವುದಿಲ್ಲ.
ಗಾಳಿ ಬೇರೆ, ತಿದಿ ಬೇರೆ ಎಂಬುದು ಖಂಡಿತವಷ್ಟೆ. ಹಾಗೆಯೇ ದೇಹವೇ
ಬೇರೆ ಎಂಬುದನ್ನು ಚೆನ್ನಾಗಿ ಯೋಚಿಸಿ ನೋಡು, ಮಗನೆ!
೨೬. ಇನ್ನು ಆತ್ಮನ ಸ್ವರೂಪವೇನು ಬಲ್ಲೆಯಾ? ಅವನಿಗೆ ಆದಿಯಿಲ್ಲ ಅಂತ್ಯವಿಲ್ಲ.
ನಾಶವಿಲ್ಲದ ಚಿನ್ಮಯನಾಗಿದ್ದಾನೆ ಅವನು. ಯಾವ ಒಂದು ಪ್ರದೇಶಕ್ಕೂ
ಸೇರಿದವನಲ್ಲ; ಸರ್ವತ್ರ ಉಪಾದೇಯನಾಗಿದ್ದಾನೆ. ಮುಕ್ತಿಯಿಂದ ಮುಕ್ತನಾದಾಗ
ಅವನು ಪರಮಾತ್ಮನಾಗುತ್ತಾನೆ.೨೭. ಕಲ್ಲಿನಲ್ಲಿ ಹೊನ್ನಿಲ್ಲ, ಹಾಲಿನಲ್ಲಿ ತುಪ್ಪವಿಲ್ಲ
ಎನ್ನುವುದು ಸಲ್ಲ; ಅವು ಇವೆ. ಹಾಗೆಯೇ ದೇಹದಲ್ಲಿ ಆತ್ಮನಿಲ್ಲ ಎಂದು
ಹೇಳುವುದೇಕೆ? ಕುರುಡನಿಗೆ ಯಾವ ವಸ್ತುವೂ ಕಾಣದಿದ್ದಲ್ಲಿ ಆ ವಸ್ತುವೇ
ಇಲ್ಲವೆಂದು ಹೇಳಲಾದೀತೆ ? ಈ ವ್ಯತ್ಯಾಸವನ್ನು ಭೇದಿಸಿಕೊಳ್ಳಬಲ್ಲವನಿಗೆ

ಮಾಡುವನಾತ್ಮಂ ನೆಟ್ಟನೆ
ಮಾಡಿತನುಣ್ಬಾತನಾತ್ಮನಘ ಜಲಧಿಯೊಳೋ-
ಲಾಡುವೊಡಂ ಗುಣಗಣದೊಳ್
ಕೂಡುವೊಡಂ ಜನ್ಮಜಲಧಿಯಂ ದಾಂಟುವೊಡಂ೨೮


ಪರಮಾತ್ಮ ನೆನ್ನನೆಂದೊಡೆ
ಚರಮಾಂಗಪ್ರಮಿತನಖಿಲಲೋಕ ಸಮಾನಂ
ನಿರವಯವಂ ನಿತ್ಯಂ ನಿ-
ರ್ದುರಿತನನಂತ ಪ್ರಬೋಧದರ್ಶನ ಸೌಖ್ಯಂ೨೯


ಕೇವಲ ವಿಬೋಧನೇತ್ರನೆ
ದೇವನೆ ಪರಮಾತ್ಮನಾಗಂ ತದ್ವಚನಂ
ಜೀವದಯೆ ಧರ್ಮಮೆಂ‍ಬೀ
ಭಾವನೆಯಂ ನೆರೆಯೆ ನಂಬುವುದು ಸಮ್ಯಕ್ತ್ವಂ೩೦


ಆತ್ಮನು ಇದ್ದಾನೆ ಎಂಬುದು ಗೊತ್ತಾಗುತ್ತದೆ. ೨೮. ಎಲ್ಲವನ್ನೂ ಮಾಡುವವನು
ಆತ್ಮನು. ಮಾಡಿದುದುರ ಫಲವನ್ನುಣ್ಣುವವನೂ ಅವನೇ. ಪಾಪದ ಕಡಲಲ್ಲಿ
ಓಲಾಡುವುದಿದ್ದರೂ, ಗುಣ (ಪುಣ್ಯ) ಸಾಗರದಲ್ಲಿ ಸೇರಿಕೊಳ್ಳುವುದಿದ್ದರೂ,
ಜನ್ಮ ಸಮುದ್ರವನ್ನು ದಾಟುವುದಿದ್ದರೂ ಆತ್ಮನಿಂದ ಮಾತ್ರ ಸಾಧ್ಯ. ೨೯. ಹಾಗಾದರೆ
ಪರಮಾತ್ಮನು ಹೇಗಿರುತ್ತಾನೆ ಎನ್ನುವುದಾದರೆ ಅವನು ಕಟ್ಟಕಡೆಗಡ(ಚರಮ)
ದೇಹವನ್ನು ಧರಿಸಿ ಅನಂತರ ಪುನಃ ದೇಹವನ್ನು ಧರಿಸದವನು. ಎಲ್ಲ ಲೋಕಗಳಿಗೆ
ಸಮಾನನಾಗಿರುತ್ತಾನೆ. ಅವನು ಅವಯವಗಳೇ ಇಲ್ಲದವನಾಗಿ ನಿತ್ಯನಾಗಿ ಯಾವ
ಪಾಪಕ್ಕೂ ಪಕ್ಕಾಗದವನಾಗಿ ಅನಂತಜ್ಞಾನ, ಅನಂತದರ್ಶನ, ಅನಂತ
ಸೌಖ್ಯವುಳ್ಳವನಾಗಿರುತ್ತಾನೆ. ೨೦. ಕೇವಲ ಜ್ಞಾನವೇ ಕಣ್ಣಾಗಿರುವ ಆ ದೇವನೆ
ಪರಮಾತ್ಮನು. ಅವನ ಮಾತೇ ಆಗಮ. ಜೀವದಯೆಯೇ ಧರ್ಮ ಎನ್ನುವ
ಭಾವನೆಯನ್ನು ಚೆನ್ನಾಗಿ ನಂಬುವುದನ್ನು ಸಮ್ಯಕ್ತ್ವಯ ಎನ್ನುತ್ತಾರೆ. ೩೧. ಮೇಲು

ಕೊಲೆಯಾಗುದು ಪುಸಿಯಾಗದು
ಕಳಲಾಗದು ಪೆರರಪೆಂಡಿರೊಳ್ ತನ್ನ ಮನಂ
ಸಲಲಾಗದು ತೀರದುದ-
ಕ್ಕಲವರಲಾಗದು ಪರತ್ರೆಯಂ ಬಯಸುವವಂ೩೧


ಇವು ಮೊತ್ತಮೊದಲಣುವ್ರತ
ಮಿವು ಮಸುಳದೆ ನಡೆದೊಡೈಹಿಕಾಮುತ್ರಿಕಮೆಂ-
ಬಿವರೊಳ್ ಸಮಸುಖಿಯಪ್ಪಂ
ಭವಭವದೊಳ್ ದುಃಖಿಯಪ್ಪನಿವು ಮಸುಳ್ದಾತಂ ೩೨


ಮಾಡಿದ ಕೋಳಿಯನಳಿದ-
ರ್ಕಾಡಿ ಯಶೋಧರನುಂ ಚಂದ್ರಮತಿಯಿಂತಿರ್ಬರ್
ಗೂಡಿನ ಕೋಳಿಗಳಾದರ್
ನೋಡಯ್ ಮತ್ತೊರ್ಮೆ ಬಳಲಿ ತಿರ್ಯಗ್ಗತಿಯೊಳ್೩೩


ಲೋಕವನ್ನು ಬಯಸುವವನು ಕೊಲೆ ಮಾಡಬಾರದು, ಸುಳ್ಳು ಹೇಳಬಾರದು,
ಪರಸ್ತ್ರೀಯರ ಮೇಲೆ ಮನಸ್ಸು ಮಾಡಬಾರದು. ಎಂದೂ ಕಳವು ಮಾಡಬಾರದು,
ಆಗದುದಕ್ಕೆ ಆಸೆಪಡಬಾರದು. ೩೨. ಇವೇ ಮೊತ್ತಮೊದಲಿನ ಅಣುವ್ರತಗಳೆನ್ನಿಸಿವೆ.
ಇವುಗಳಿಗೆ ಮಾಲಿನ್ಯವುಂಟಾಗದಂತೆ ಆಚರಿಸಿದವನು ಇಹಪರ ಲೋಕಗಳ
ಸುಖಗಳನ್ನು ಯಾವ ಏರಿಳಿತವೂ ಇಲ್ಲದೆ ಅನುಭವಿಸುತ್ತಾನೆ. ಇವುಗಳಿಗೆ
ಮಲಿನತೆಯುಂಟಾದಲ್ಲಿ, ಅಂಥವನು ಜನ್ಮಜನ್ಮಾಂತರಗಳಲ್ಲಿಯೂ
ದುಃಖಭಾಜನನಾಗುತ್ತಾನೆ. ೩೩. ಕೃತಕವಾಗಿ ಒಂದು ಕೋಳಿಯನ್ನು ತಯಾರಿಸಿ
ಅದನ್ನು ಕೊಂದ ಯಶೋಧರ ಮತ್ತು ಚಂದ್ರಮತಿ ಎಂಬಿಬ್ಬರೂ ಸತ್ತಮೇಲೆ
ಜನ್ಮಾಂತರಗಳನ್ನೆತ್ತಿ ಈಗ ಮತ್ತೊಮ್ಮೆ ಗೂಡಿನ ಕೋಳಿಗಳಾಗಿ ಹುಟ್ಟಿದ್ದಾರೆ. ಈ
ಮೊದಲು ಅನೇಕ ಪ್ರಾಣಿ ಜನ್ಮವನ್ನು ಪಡೆದು ಬೇಕಾದಷ್ಟು ಬಳಲಿದ್ದಾರೆ.

ವ್ರತಹಾನಿ ಹಿಂಸೆಯೊಂದೀ
ಗತಿಗಿಕ್ಕಿದುದುಳಿದ ನಾಲ್ಕು ಮಾದೊಡೆ ಬಳಿಕೇಂ
ಚತುರಂಗಬಲ ಸಮೇತಂ
ಪ್ರತಿಪಕ್ಷಂ ಶೂರನಾದೊಡೇನಂ ಮಾಡಂ೩೪


ಅದರೆಂ ತನ್ನಂತಿರೆ ಬಗೆ-
ವುದು ಪೆರರಂ ಪ್ರಾಣಹಿಂಸೆಯಂ ಮಾಡಲ್ವೇ-
ಡ ದಯಾಮೂಲಂ ಧರ್ಮಂ
ಪದುಳಿಸಿ ಕೇಳ್ ಮಗನೆ ಹಿತಮಿದುಭಯಭವಕ್ಕಂ೩೫


ಗುರುವಿಂತು ಬೆಸಸೆ ಜಾತಿ
ಸ್ಮರಂಗಳಾಗಿರ್ದು ಪಕ್ಕಿಗಳ್ ಕೇಳ್ದೆರ್ದೆಯೊಳ್
ಪರಮೋತ್ಸವದಿಂ ವ್ರತಮಂ
ಧರಿಯಿಸುತಿರೆ ಚಂಡಕರ್ಮನುಂ ದರಿಯಿಸಿದಂ೩೬


೩೪. ಅಹಿಂಸೆ ಎಂಬ ಒಂದು ವ್ರತಕ್ಕೆ ಈ ಬಗೆಯ ಅಪಚಾರ ಸಂಭವಿಸಿದುದರಿಂದ
ಅವರಿಗೆ ಈ ಗತಿಯೊದಗಿತು. ಉಳಿದ ನಾಲ್ಕು ವ್ರತಗಳಿಗೂ ಭಂಗವುಂಟಾದರೆ
ಇನ್ನೇನಾಗದು? ಶೂರನೊಬ್ಬನು ಚತುರಂಗಬಲ ಸಮೇತನಾಗಿ ಬಂದರೆ ಏನು
ಮಾಡಲಾರ? ೩೫. ಆದುದರಿಂದ ಪರರನ್ನು ತನ್ನಂತೆ ಬಗೆಯಬೇಕು.
ಪ್ರಾಣಿಹಿಂಸೆಯನ್ನು ಮಾಡಬಾರದು, ಧರ್ಮವು ದಯಾಮೂಲವಾದುದು.
ಮಗು! ನೆಮ್ಮದಿಯಿಂದ ಕೇಳು: ಇದು ಇಹಪರಲೋಕಗಳ ಭವಕ್ಕೂ
ಹಿತವನ್ನುಂಟುಮಾಡುತ್ತದೆ." ೩೬. ಗುರುಗಳು ಕೊಟ್ಟ ಉಪದೇಶವನ್ನು ಕೇಳುತ್ತಿದ್ದಂತೆ
ಪೂರ್ವಜನ್ಮದ ಸ್ಮರಣೆಯುಂಟಾದ ಆ ಕೋಳಿಗಳೆರಡೂ ಅಂತರಂಗದಲ್ಲಿ
ಆನಂದಗೊಂಡು ಈ ವ್ರತವನ್ನು ಕೈಗೊಂಡವು. ಚಂಡಕರ್ಮನೂ ವ್ರತವನ್ನು
ಅಂಗೀಕರಿಸಿದನು.

ಕಳಲೆ ನಿಜಹರ್ಷಬಾಷ್ಪದ
ಮರೆವನಿ ಧರ್ಮಾನುರಾಗ ಮೇಘಧ್ವನಿವೊಲ್
ಮೊಳಗುವಿನುರಂಕೆಯ ಪೊಯಿಲ್
ಫಳಿಲನೆ‌ ಕೂಗಿದುವು ಕೇಳ್ದನಿತ್ತ ನೃಪಾಲಂ೩೭


ಸ್ವರವೇದವಿದ್ಯೆಯಂ ತ-
ನ್ನರಸಿಗೆ ಮೆರೆಯಲ್ಕೆ ದೇವಿ ನೋಡೆನುತೆಚ್ಚಂ
ಸರಲೆಯ್ದಿಸೆ ಕಡೆದುವವಂ-
ತೆರಡರ್ಕಾಯುಃ ಪ್ರಮಾಣಮೊಂದಾದುದೆನಲ್೩೮


ದೊರೆಕೊಳೆ ಸಮಾಧಿಮರಣಂ
ಚರಣಾಯುಧಯುಗಳಮಳಿದು ಕುಸುಮಾವಳಿಯೆಂ
ಬರಸಿಯ ಬಸಿರೊಳ್ ಬಂದವು
ನರಯುಗಳಕಮಾಗಿ ನಚ್ಚನಚ್ಚೊತ್ತಿದವೊಲ್೩೯


೩೭. ತಮಗುಂಟಾದ ಆನಂದಬಾಷ್ಪವು ಮಳೆಹನಿಯಾಗಿ ಕೆಳಕ್ಕುದುರಿತು. ಆಗ
ಧರ್ಮಾನುರಾಗವೆಂಬ ಮೋಡಗಳು ಗುಡುಗಿದುವೋ ಎಂಬಂತೆ ಆ
ಕೋಳಿಗಳೆರಡರ ರೆಕ್ಕೆಗಳು ಶಬ್ದ ಮಾಡಿದುವು ಮತ್ತು ಸಂತೋಷಾಧಿಕ್ಯದಿಂದ
ಕಲೆದುವು. ಈ ಕೂಗು ರಾಜನ ಕಿವಿಗೆ ಬಿದ್ದಿತು. ೩೮. ಅವನು ತನ್ನ ಸ್ವರವೇದ
(ಶಬ್ದವೇದಿ) ವಿದ್ಯೆಯನ್ನು ತನ್ನ ರಾಣಿಗೆ ತೋರಿಸಿ ಮೆರೆಯಲು ಮನಸ್ಸು
ಮಾಡಿದನು. 'ದೇವಿ ನೋಡು!' ಎಂದು ಹೋಳುತ್ತಾ ಅವನು ಒಂದು ಬಾಣವನ್ನು
ಪ್ರಯೋಗಿಸಿದನು. ಆ ಬಾಣವು ಎರಡೂ ಕೋಳಿಗಳನ್ನು ಒಮ್ಮೆಲೆ ಕೊಂದಿಕ್ಕಿತು,
ಎರಡಕ್ಕೂ ಆಯಸ್ಸು ಒಂದೇ ಆಗಿತ್ತೆಂಬಂತೆ. ೩೯. ಕೋಳಿಗಳೆರಡಕ್ಕೂ ದೊರೆತುದು
ಸಮಾಧಿ ಮರಣ.೫೮ ಹೀಗೆ ಸತ್ತು ಅವೆರಡೂ ಕುಸುಮಾವಳಿಯ ಗರ್ಭದಲ್ಲಿ ಆ
ದಂಪತಿಗಳ ಪ್ರೇಮವನ್ನೇ ಅಚ್ಚೊತ್ತಿದ್ದಂತೆ ಅವಳಿಮಕ್ಕಳಾಗಿ ಜನಿಸಿದವು.

ಅಭಯರಚಿಯಭಯಮತಿಯೆಂ
ಬಭಿಧಾನದೆ ಚಂದ್ರಮತಿ ಯಶೋಧರರಮಳ್ಗಳ್
ಶುಭಲಕ್ಷಣಮಪ್ಪುತ್ತಿರೆ
ಸ್ವಭಾವಸಿದ್ಧಂಗಳಾಗಿ ಬಳೆಯುತ್ತಿರ್ಕುಂ೪೦


ನುಣ್ಗುರುಳ ಪೊಳೆವ ಕಪ್ಪುಂ
ಕಣ್ಗಗ್ಗಳಮಾದ ಮೆಯ್ಯ ಬೆಳಗೆಸೆವಿನಮಾ
ಪೆಣ್ಗಂಡು ರಾಜ್ಯಲಕ್ಷ್ಮಿಯ
ಕಣ್ಗಳ ದೊರೆಯಾಗಿ ಸುಮನೆ ಬಳೆವಿನಮಿತ್ತಲ್೪೧


ಬೇಂಟೆಗೆ ನಡೆಯೆ ಯಶೋಮತಿ
ಗೆಂಟರೊಳಾರಣ್ಯವಾಸಿಗಳ್ ನಿಲೆ ಕಂಡಾ-
ಬೇಂಟೆ ಪರಿಯದೊಡೆ ಬಿನದದ
ಕಂಟಕನೀ ಸವಣನೆನುತೆ ಬರುತಂ ಮುನಿದಂ೪೨




೪೦. ಅಭಯರುಚಿ ಅಭಯಮತಿ ಎಂಬ ಹೆಸರಿನಿಂದ ಹೀಗೆ ಯಶೋಧರ
ಚಂದ್ರಮತಿಯರು ಹುಟ್ಟಿದರು. ಈ ಮಕ್ಕಳು ಒಳ್ಳೆಯ ಲಕ್ಷಣವುಳ್ಳವರಾಗಿ ಸ್ವಾಭಾವಿಕ
ರೀತಿಯಲ್ಲಿ ಬೆಳೆಯತೊಡಗಿದರು. ೪೧. ಚೆಲುವಾದ ಕೂದಲ ಕಪ್ಪು ಕಾಂತಿಯೂ
ಕಣ್ಣಿಗೆ ಮೆಚ್ಚಿನ ದೇಹದ ಬಿಳುಪೂ ಆ ಹೆಣ್ಣು ಗಂಡು ಮಕ್ಕಳಲ್ಲಿ
ಶೋಭಾವಹವಾಗಿದ್ದು, ರಾಜ್ಯಲಕ್ಷ್ಮಿಯ ಕಣ್ಣುಗಳಂತೆ ಅವರು ಬೆಳೆಯುತ್ತಿದ್ದರು.
೪೨. ಒಂದು ದಿನ ಯಶೋಮತಿ ಮೃಗಯಾ ವಿಹಾರಕ್ಕೆ ತೆರಳಿದನು. ದೂರದಲ್ಲಿ
ಕಾಡಿನಲ್ಲಿ ವಾಸಿಸುವ ತಪಸ್ವಿಗಳೊಬ್ಬರಿದ್ದರು. ಅವರನ್ನು ನೋಡಿದ ಬಳಿಕ
ಒಂದೇ ಒಂದು ಪ್ರಾಣಿಯೂ ಬೇಟೆಗೆ ದೊರೆಯಲಿಲ್ಲ. ಈ ಬೇಟೆಯ ವಿನೋದಕ್ಕೆ
ಕಂಟಕಪ್ರಾಯರಾದವರೇ ಈ ಸವಣರು ಎಂದು ಅರಸನಿಗೆ ಬಹಳ ಸಿಟ್ಟು

ಮುನಿದಯ್ನೂರುಂ ಕುನ್ನಿಗ
ಳನಿತುಮನೊರ್ಮೊದಲೆ ತೋರಿ ಕೊಳ್ಕೊಳಿಸೆ ಮಹಾ
ಮುನಿ ತಳರದೆ ಮೇರುವೊಲಿರೆ
ವನಮೃಗದವೊಲುರ್ಕನರಿದು ಸುಳಿದುವು ನಾಯ್ಗಳ್‌೪೩


ಆ ಯತಿಗಾಯತಿಗಿಡೆ ಕೌ-
ಳೇಯಕತಿ ನೃಪತಿ ಕೆಳರ್ದು ಮುಳಿದುರ್ಚಿದ ಕೌ-
ಕ್ಷೇಯಕದೆ ಪೊಯ್ಯಲೆಯ್ದೆ ವಿ
ನೇಯಂ ಕಲ್ಯಾಣಮಿತ್ರನೆಂಬ ಪರದಂ೪೪


ಕೆಮ್ಮನೆ ಬಾಳಂ ಕಿಳ್ತಯ್‌
ಕಿಂ ಮಿತ್ರಂ ಯನ್ನಿವರ್ತಯತಿ ಪಾಪಾತ್ತೆಂ-
ದಾನ್‌ ಮಾಣಿಸದೊಡೆ ಕೋಟಲೆ-
ಯಂ ಮಾಡವೆ ದೇವ ನಿನಗೆ ದುರಿತಶತಂಗಳ್‌೪೫



ಬಂತು. ೪೩. ಕ್ರೋಧದಿಂದ ರಾಜನು ತನ್ನ ಐನೂರು ನಾಯಿಗಳನ್ನೂ ಒಮ್ಮೆಲೆ
ಛೂ ಬಿಟ್ಟನು. ಅವರು ಮಾತ್ರ ಕದಲಲೇ ಇಲ್ಲ. ಮೇರುವಿನಂತೆ ನಿಶ್ಚಲರಾಗಿ
ಅವರಿದ್ದಾಗ ನಾಯಿಗಳು ತಮ್ಮ ಕೆಚ್ಚನ್ನೆಲ್ಲ ಕಳೆದುಕೊಂಡು ಕಾಡಿನ ಜಿಂಕೆಗಳಂತಾಗಿ
ಅಲ್ಲೆ ಸುತ್ತ ಸುಳಿದವು. ೪೪. ಮುನಿಯ ಮುಂದೆ ನಾಯಿಗಳೂ ತಮ್ಮ ಬಿರುಸನ್ನು
ಕಳೆದುಕೊಂಡಾಗ ಅರಸನು ಮತ್ತಷ್ಟು ಕೆರಳಿದನು. ರೋಷದಿಂದ ಖಡ್ಗವನ್ನು
ಜಳಪಿಸಿ ಕಡಿದೊಗೆಯಲು ಮುಂದಾದನು. ಅಷ್ಟರಲ್ಲಿ ಅವನೊಂದಿಗಿದ್ದ ಕಲ್ಯಾಣ
ಮಿತ್ರನೆಂಬ ನಯವಂತನಾದ ವ್ಯಾಪಾರಿಯು, ೪೫. “ಸುಮ್ಮನೆ ಕತ್ತಿಯನ್ನು
ಹೀರಿದಿರಲಿಲ್ಲ! ಪಾಪ ಮಾಡುವವರನ್ನು ಆ ಕೃತ್ಯದಿಂದ ತೊಲಗಿಸದಿದ್ದರೆ,
ಅಂತಹ ಮಿತ್ರನು ಮಿತ್ರನೇ ಅಲ್ಲ! ಆದುದರಿಂದ ನಾನೀಗ ನಿಮ್ಮನ್ನು ತಡೆಯಲೇ
ಬೇಕಾಗಿದೆ. ಇಲ್ಲವಾದರೆ ಮುಂದೆ ನೂರಾರು ಕೇಡುಗಳು ನಿಮ್ಮನ್ನು ಬಾಧಿಸದೆ

ಪೊಡನಡಲೆತ್ತುವ ಕೈಗಳ್
ಪೊಡೆಯಲ್ಕೆತ್ತುಗುಮೆ ಮೂರುಲೋಕದ ಕೈಗ-
ನ್ನಡಿ ಸಾಮರ್ಥ್ಯದ ಸದ್ಗುಣ-
ದೊಡೆಯರೊಳದು ತಕ್ಕುದಲ್ಲದತ್ತಿಡು ಬಾಳಂ೪೬


ಆ ರುಷಿಯ ಚರಣಕಮಲಮ-
ನಾರಾಧಿಸಲೆಂದು ಬಂದು ಕಂಡಡೆವೊಕ್ಕು-
ರ್ವೀರಮಣ ದುರ್ಬಲಸ್ಯ ಬ-
ಲೋ ರಾಜಾ ಎನ್ನದಿವರ್ಗೆ ಮುಳಿವುದೆ ಮರುಳೇ೪೭


ಇವರಾರೆಂದಿರ್ದಪ ನೀನ್
ಭುವನತ್ರಯ ತಿಳಿಕರಮಳಸದ್ಭೋಧ ಸುಧಾ-
ರ್ಣವ ಪೂರ್ಣಚಂದ್ರರವನತ
ದಿವಿಜನರೋಗರನನ್ಯ ಸಾಮಾನ್ಯಗುಣ‌ರ್೪೮



ಇರಲಾರವು ಎಂದು ಹೇಳಿದನು. ೪೬. “ರಾಜಾ, ನಮಸ್ಕಾರ ಮಾಡುವುದಕ್ಕಾಗಿ
ಎತ್ತಬೇಕಾದ ಕೈಗಳನ್ನು ಕಡಿದಿಕ್ಕುವುದಕ್ಕಾಗಿ ಎತ್ತುತ್ತಾರೆಯೆ? ಅವರು ಮೂರು
ಲೋಕದ ಕೈಗನ್ನಡಿ, ಸಾಮರ್ಥ್ಯದ ಒಡೆಯರು, ಸದ್ಗುಣಗಳ ಬೀಡು. ಅವರಲ್ಲಿ
ಈ ಅಕೃತ್ಯವು ತಕ್ಕುದಲ್ಲ. ನಿಮ್ಮ ಕತ್ತಿಯನ್ನು ಅತ್ತ ಇಡಿರಿ. ೪೭. ಆ ಋಷಿಗಳ
ಚರಣಕಮಲವನ್ನು ಆರಾಧಿಸುವ ಸಲುವಾಗಿ ಬರುವುದೂ, ಬಂದು ಅವರನ್ನು
ಕಂಡು, ಸಮಿಾಪಿಸಿ, 'ದುರ್ಬಲರಿಗೆ ಬೆಂಬಲವಾಗಿ ರಾಜನೇ ಇದ್ದಾನೆ' ಎಂದು
ಅವರೊಡನೆ ಬಿನ್ನವಿಸುವುದೂ ಕರ್ತವ್ಯವಾಗಿರುವಾಗ ಅವರ ಮೇಲೆ
ಸಿಟ್ಟುಗೊಳ್ಳುವುದೆ? ನಿಮಗೇನು ಹುಚ್ಚೆ? ೪೮. ಇವರು ಯಾರೆಂದು ಗೊತ್ತಿದೆಯೆ
ನಿಮಗೆ? ಮೂರು ಲೋಕಕ್ಕೆ ತಿಲಕ ಪ್ರಾಯರಾದ ಇವರು, ನಿರ್ಮಲವಾದ
ಸಮ್ಯಜ್ಞಾನವೆಂಬ ಅಮೃತ ಸಾಗರಕ್ಕೆ ಪೂರ್ಣಚಂದ್ರರಾಗಿದ್ದಾರೆ. ದೇವತೆಗಳೂ
ಮನುಷ್ಯರೂ ಉರಗರೂ ಇವರಿಗೆ ಮಣಿಯುತ್ತಾರೆ. ಇತರರಲ್ಲಿ ಇರಲಾರದಷ್ಟು

ಅರಿಯದೆ ಗೆಯ್ದೆಂ ಕ್ಷಮೆಯೆಂ
ದೆರಗೆನೆ ನೃಪನಂದನಾವ ಜಾತಿಯದಾರೆ-
ದರಿಯದೆ ಮಿಂದುಂ ಮುರಿಕಿಯು-
ಮರಿಯದ ಮಣಕಿನ ಬನಂಬೆಗಾನೆರಗುವೆನೇ೪೯


ಒಂದು ಮೃಗಂ ಬೀಳದು ನೋ-
ಡಿಂದಿನ ಬೇಟೆಯೊಳೆ ಸಿಂಟನಂ ಕಂಡುದರಿ-
ದೆಂದೊಡೆ ಪರದಂ ಪಾಪಂ
ಸಂದಿಸುವುದೆ ಪುಣ್ಯಮೂರ್ತಿಯಂ ಕಾಣಲೊಡಂ೫೦


ತನುವಾರ್ಗಮಶುಚಿ ಶುದ್ಧಾ-
ತ್ಮನೆ ಶುಚಿ ಕಾಗೆಯವೊಲೇನೊ ಮಿಂದವನೇಂ ಶು-
ದ್ಧನೆ ಸಂಸ್ಕಾರಶತೇನಾ-
ಪಿ ನ ಗೂಥಃ ಕುಂಕುಮಾಯತೇ ಎಂದರಿಯೆಯಾ೫೧



ಸದ್ಗುಣಗಳನ್ನು ಇವರು ಪಡೆದಿದ್ದಾರೆ. ೪೯. 'ನಾನು ತಿಳಿಯದೆ ಮಾಡಿದ
ತಪ್ಪನ್ನು ಕ್ಷಮಿಸಬೇಕು' ಎಂದು ಹೇಳಿ ಅವರ ಪಾದಗಳಿಗೆ ವಂದಿಸಬೇಕು
ನೀವು” ಎಂದು ವರ್ತಕನು ತಿಳಿಸಿದನು. ಆಗ ಅಸರನು ಅವನು ಯಾವ
ಜಾತಿಯವನು ಯಾರವನು ಎಂದು ಮುಂತಾಗಿ ತಿಳಿದುಕೊಳ್ಳದೆ,
ಸ್ನಾನಮಾಡಿಯಾಗಲಿ ನೀರಲ್ಲಿ ಮುಳುಗಿಯಾಗಲಿ ಗೊತ್ತೇ ಇಲ್ಲದೆ ದುರ್ವಾಸನೆಯ
ಮುದ್ದೆಗೆ ನಾನು ಮಣಿಯಬೇಕೆ? ಎಂದು ಪ್ರಶ್ನಿಸಿದನು. ೫೦. ಇದೂ ಅಲ್ಲದೆ
“ಕೆಟ್ಟನಾತವನ್ನು ಕಂಡ ಕಾರಣ ಇಂದಿನ ಬೇಟೆಯಲ್ಲಿ ಒಂದೇ ಒಂದು ಮೃಗ
ಕೂಡ ಬೀಳಲಿಲ್ಲ!” ಎಂದು ಧಿಕ್ಕರಿಸಿದನು. “ಸ್ವಾಮಿ ಪುಣ್ಯಮೂರ್ತಿಯನ್ನು
ಕಂಡರೆ ಪಾಪ ಬಂದು ಸೇರಲಾರದಲ್ಲ! ಹಾಗಾಗಿಯೆ ನಿಮಗೆ ಬೇಟೆ ದೊರೆಯಲಿಲ್ಲ
ಎಂದು ಕಲ್ಯಾಣಮಿತ್ರನು ಸಮಾಧಾನ ಹೇಳತೊಡಗಿದನು. ೫೧. “ದೇಹವೆಂಬುದು
ಎಲ್ಲರಿಗೂ ಸದಾ ಕೊಳಕಾಗಿಯೇ ಇರುತ್ತದೆ. ಆತ್ಮನು ಮಾತ್ರ
ನಿರ್ಮಲನಾಗಿರುತ್ತಾನೆ? ಕಾಗೆ ಸ್ನಾನಮಾಡಿತೆಂದು ನಿರ್ಮಲವೆನ್ನಿಸುತ್ತದೆಯೆ?
ಸ್ನಾನಮಾಡಿದವರೆಲ್ಲ ಪರಿಶುದ್ಧರಾಗುವರೆ? ನೂರಾರು ಸಂಸ್ಕಾರಗಳನ್ನು

ಗಂಗಕುಲಚಕ್ರವರ್ತಿ ಕ-
ಳಿಂಗಧರಾಧೀಶರಿವರಸಾರಂ ಸಂಸಾ-
ರಂ ಗಡಮೆಂದರತರಿದರಿದು ತ-
ಪಂಗೆಯ್ದರ್ ನಾಮದಿಂ ಸುದತ್ತಾಚಾರ್ಯರ್‌೫೨


ಎಂಬುದುಮರಸಂ ಮುನಿವರ-
ರಂ ಬಲಗೊಂಡೆರಗಿ ನೆಗಳ್ದಿ ಪೊಲ್ಲಮೆಗೆ ತದೀ-
ಯಾಂಬುಜಪದಮಾ ತನ್ನ ತಿ-
ರೋಂಬುಜದಿಂದರ್ಚಿಸಲ್ ಪರಿಚ್ಛೇದಿಸಿದಂ೫೩


ಅದನವರವಧಿಯಿನರಿದಾ-
ಗದು ಬೇಡನೆ ನೃಪತಿ ಮತ್ತೆ ವಿಸ್ಮಯದಿಂ ಕೇ-
ಳ್ವುದುಮುಸಿರ್ದ‌ರ್ ಭವದೊಳ್ ಬ
ರ್ದಿದ ಮಾತರಪಿತರರಂ ಪಿತಾಮಹರಿರವಂ೫೪



ಮಾಡಿದರೂ ಅಮೇಧ್ಯವು ಕುಂಕುಮವಾದಿತೆ? ಯೋಚಿಸಿರಿ! ೫೨. ಇವರು
ಗಂಗಕುಲದ ಚರ್ಕವರ್ತಿಗಳಾಗಿದ್ದವರು. ಕಳಿಂಗ ದೇಶದ ಅಧಿಪತಿಗಳಾಗಿದ್ದರು.
ಈ ಸಂಸಾರವೆಂಬುದು ಸಾರವಿಲ್ಲದ್ದು ಎಂಬುದು ಖಚಿತವಾದಾಗ ಇವರು
ತಪಸ್ಸಿಗೆ ತೆರಳಿದರು. ಇವರ ಹೆಸರು ಸುದತ್ತಾಚಾರ್ಯರು”. ೫೩. ಇಷ್ಟು
ಹೇಳಿದಾಗ ಯಶೋಮತಿಯ ಮನಸ್ಸು ಬದಲಾಯಿತು. ಅವನು ಆ ತಪಸ್ವಿಗಳಿಗೆ
ಪ್ರದಕ್ಷಿಣೆ ನಮಸ್ಕಾರಗಳನ್ನು ಸಲ್ಲಿಸಿ ತಾನು ಮಾಡಿದ ಅಕೃತ್ಯಕ್ಕಾಗಿ ಅವರ
ಪಾದಕಮಲವನ್ನು ತನ್ನ ಶಿರಃ ಕಮಲದಿಂದ ಪೂಜಿಸಲು ನಿರ್ಧಾರಮಾಡಿದನು.
೫೪. ರಾಜನ ವಿಷಯವನ್ನೆಲ್ಲ ಸುದತ್ತಾಚಾರ್ಯರು ಅವಧಿಜ್ಞಾನದಿಂದ
ಅರಿತುಕೊಂಡರು. “ಆಗದು, ಬೇಡ” ಎಂದು ಅವರು ತಡೆದಾಗ ರಾಜನಿಗೆ
ಆಶ್ಚರ್ಯವಾಯಿತು. “ಅದೇಕೆ ಹಾಗೆ?” ಎಂದು ಪ್ರಶ್ನಸಿದನು. ಅವರು ಆತನ
ತೀರಿಹೋದ ತಂದೆತಾಯಿಗಳ ಮತ್ತು ಅಜ್ಜ ಅಜ್ಜಿಯರ ಸ್ಥಿತಿಗತಿಗಳನ್ನು

ಯಶೋಧರ ಚರಿತೆ

೧೦೭

ವೀರತಪಸ್ವಿ ಯಶೌಘಮ-
ಹಾರಾಜಂ ನೋನ್ತು ಕಳಿದು ಸುರವರವನಿತಾ
ಸ್ಮೇರಕಟಾಕ್ಷ ನಿರೀಕ್ಷಣ
ಕೈರವಶೀತಾಂಶುದೇವನಾದಂ ದಿವದೊಳ್೫೫


ಅಮೃತಮತಿ ಅಷ್ಟವಂಕಂ-
ಗೆ ಮರುಳ್ಗೊಂಡತ್ತೆ ಗಂಡನಂ ವಿಷದಿಂ ಕೊಂ
ದು ಮುದಿರ್ತು ಕುಷ್ಠಿಕೊಳೆ ಪಂ-
ಚಮ ನರಕದೊಳಳ್ದಳರಸ ಧೂಮಪ್ರಭೆಯೊಳ್೫೬


ಜನಕಂ ಯಶೋಧರಂ ಪಿ-
ಟ್ಟಿನ ಕೋಳಿಯನಳಿದು ಕಳಿದು ನಿಲೆಯ್ಮೀನಾ-
ಡಿನ ಪೋರಿ ಪೋಂತು ಕುಕ್ಕುಟ-
ಮನೆ ಮುಟ್ಟಿದನೀಗಳಭಯರುಚಿಯಾಗಿರ್ದಂ೫೭



ವಿವರಿಸತೊಡಗಿದರು. ೫೫. “ನಿನ್ನ ಅಜ್ಜ ಯಶೌಘ ಮಹಾರಾಜನು
ವೀರತಪಸ್ವಿಯಾಗಿ ವ್ರತಗಳನ್ನು ಆಚರಿಸಿದನು ತೀರಿಕೊಂಡ ಮೇಲೆ ಅವನು
ಸ್ವರ್ಗದಲ್ಲಿ ಉತ್ತಮ ದೇವತಾಸ್ತ್ರೀಯರ ಮಂದಹಾಸದ ಕಟಾಕ್ಷ ವೀಕ್ಷಣದ
ಕನ್ನೈದಿಲೆಗಳಿಗೆ ಚಂದ್ರನಾಗಿದ್ದುಕೊಂಡು ದೇವನಾಗಿದ್ದಾನೆ. ೫೬. ಅಮೃತಮತಿ
ಅಷ್ಟವಮಕನಿಗೆ ಹುಚ್ಚಾಗಿ ತನ್ನ ಅತ್ತೆ ಚಂದ್ರಮತಿಯನ್ನೂ ಗಂಡ ಯಶೋಧರನನ್ನೂ
ವಿಷವಿಕ್ಕಿ ಕೊಂದಳು. ಅವಳು ಆಮೇಲೆ ಕ್ರಮ ಕ್ರಮವಾಗಿ ಕ್ಷೀಣಿಸುತ್ತಾ ಒಂದು
ಕುಷ್ಠರೋಗಕ್ಕೆ ಗುರಿಯಾದಳು. ಸತ್ತಮೇಲೆ ಅವಳು ಧೂಮಪ್ರಭೆಯೆಂಬ
ಪಂಚಮನರಕದಲ್ಲಿ ಮುಳುಗಿ ನವೆಯುತ್ತಾ ಇದ್ದಾಳೆ. ೫೭. ನಿನ್ನ ತಂದೆಯಾದ
ಯಶೋಧರನು ಹಿಟ್ಟಿನ ಕೋಳಿಯನ್ನು ಕೊಂದು, ಸತ್ತ ಮೇಲೆ ನವಿಲು,
ಮುಳ್ಳುಹಂದಿ, ಮೀನು, ಆಡು, ಹೋತ, ಕೋಳಿ ಎಂದು ಜನ್ಮಾಂತರಗಳನ್ನು

೧೦೮

ಯಶೋಧರ ಚರಿತೆ

ನಿರವಿಸಿದ ಚಂದ್ರಮತಿಯೆಂ-
ಬರಸಿಯೆ ನಾಯುರಗಿ ಮೊಸಳೆ ಆಡು ಲುಲಾಯಂ
ಚರಣಾಯುಧವಧುವಾದಳ್
ಗುರುವಚನದಿನೀಗಳಭಯಮತಿಯಾಗಿರ್ದಳ್೫೮


ನಿನಗಂ ಕುಸುಮಾಳಿಗಂ
ಜಯಿಸಿದವಳೆಂಬುವಭಯರುಚಿಮತಿಗಳ್ ಮು-
ನ್ನಿನ ಜನ್ಮಮನಿತುಮಂ ನೆ-
ಟ್ಟನೆ ಬಲ್ಲರ್ ಕೇಳ್ದುನಂಬು ನೀನ್ ಧರಣಿಪತೀ೫೯


ನೀನರಿವೆ ಕೊಂದ ಘೋರಮ-
ನಾನಿಗ್ರಹವಧೆಯಿನಂದು ಸತ್ತವರಿವರ್
ಮೀನುಂ ಮೊಸಳೆಯುಮಾಡಂ-
ತಾ ನೆಗಳ್ದ ಜಪೋತಮಹಿಷಮಾದಂದರಸಾ೬೦
______________

ಪಡೆದು ಅಭಯರುಚಿಯಾಗಿದ್ದಾನೆ ೫೮. ಚಂದ್ರಮತಿಯೆಂಬ ಆರಸಿ ಕ್ರಮವಾಗಿ
ನಾಯಿ, ಹಾವು, ಮೊಸಳೆ, ಆಡು, ಕೋಣ, ಹೇಂಟೆಯಾಗಿ ಹುಟ್ಟಿದ್ದಳು. ಈಗ
ಗುರುವಿನ ವಚನವನ್ನು ಕೇಳಿದುದರಿಂದಾಗಿ ಅಭಯಮತಿಯಾಗಿ ಜನಿಸಿದ್ದಾಳೆ.
೫೯. ನಿನಗೂ ಕುಸುಮಾವಳಿಗೂ ಹುಟ್ಟಿದ ಅಭಯರುಚಿ ಅಭಯಮತಿಗಳೆಂಬ
ಅವಳಿ ಮಕ್ಕಳು ಹಿಂದಿನ ಇಷ್ಟೂ ಜನ್ಮಗಳನ್ನು ಚೆನ್ನಾಗಿ ಬಲ್ಲರು. ಅವರನ್ನೇ
ಕೇಳು ನಿನಗೆ ವಿಶ್ವಾಸವಾದೀತು. ೬೦. ನೀನು ಕೊಂದ ಆ ಘೋರಕಾರ್ಯದ
ವಿಷಯ ನಿನಗೇ ಗೊತ್ತಿದೆ. ನಿನ್ನ ಭೀಕರ ಹಿಂಸಾಘಾತದಿಂದ ಮೀನು, ಮೊಸಳೆ,
ಆಡು, ಹೋತ, ಕೋಣ ಎಂಬ ಜನ್ಮಗಳಲ್ಲಿದ್ದು ಸತ್ತವರೂ ತಿಳಿದಿದ್ದಾರೆ.

ಯಶೋಧರ ಚರಿತೆ

೧೦೯


ಕೋಯ ಕೂಗೆತ್ತಲ್ ನೀನ್
ಸೂಟೆದವನೆಸೆವುದೆತ್ತಲಾ ಖಗಯುಗಳಂ
ಬೀಳ್ಕೊಡನಾದ ಮಾನಸ
ವಾಖೆತ್ತಲ್ ನೋಡ ಧರ್ಮಮೋದವಿದ ಪದನಂ೬೧


ಎನೆ ಮುನಿವಚನದೊಳಂ ನಂ-
ದನರೂಳಮಾಗಳೆ ಯಶೋಮತಿಕ್ಷಿತಿಪಂ ತೆ
ಆನೆ ತಿಳಿದು ಛಾಪು ಸಂಕ-
ಲನ ವಧೆಗಿನಿತಾಯ್ತು ದಿಟದಿನೇನೇನಾಗರ್‌೬೨


ಎನಿತೊಳವು ಜೀವರಾಶಿಗ-
ಇನಿತುಮನೋರಂತೆ ಕೊಂದು ತಿಂದುಂ ತಣಿವಿ-
ಲ್ಲೆನೆ ಬರ್ದೆನಿಂದುವರಮಿ-
ನೈನಗಿನ್ನೆಂತಪ್ಪ ನರಕಮಿದಿರ್ವಂದಪದೋ೬೩

_____________

೬೧. ಕೋಳಿಗಳ ಕೂಗೆಲ್ಲಿ? ಆ ಸ್ವರವನ್ನಾಲಿಸಿ ಮಾಡಿದ ಬಾಣ ಪ್ರಯೋಗವೆಲ್ಲಿ?
ಆ ಕೋಳಿಗಳು ಸತ್ತಮೇಲೆ ಅವುಗಳಿಗೆ ದೊರೆತುದು ಮಾನವಜನ್ಯ. ಇದರಿಂದ
ಧರ್ಮವು ಎಂತಹ ಸ್ಥಿತಿಯನ್ನೊದಗಿಸುವುದೆಂಬುದು ಪ್ರತ್ಯಕ್ಷವಾಗುವುದಿಲ್ಲವೆ?”
೬೨. ಮುನಿಗಳ ಈ ಮಾತನ್ನು ಕೇಳಿ, ಮಕ್ಕಳಿಂದಲೂ ಈ ವಿಷಯವನ್ನು
ವಿಚಾರಿಸಿ ಸರಿಯಾಗಿ ತಿಳಿದುಕೊಂಡ ಯಶೋಮತಿ, “ಸಂಕಲ್ಪ ವಧೆಯಿಂದಲೇ
ಇಷ್ಟು ಕಷ್ಟಗಳನ್ನು ಅನುಭವಿಸುವಂತಾಯಿತು. ಇನ್ನು ಕೈಯಾರೆ ಕೊಲೆ ಮಾಡಿದರೆ
ಇನ್ನೇನಾಗಲಿಕ್ಕಿಲ್ಲ?” ಎಂದುಕೊಂಡನು. ೬೩. ನಾನು ಇದುವರೆಗೆ ಎಷ್ಟೆಷ್ಟು
ಪ್ರಾಣಿಗಳಿವೆಯೋ ಅಷ್ಟಷ್ಟನ್ನು ಒಂದೇ ಸಮನೆ ಕೊಲ್ಲುತ್ತಾ ಬಂದು ಅವುಗಳನ್ನು
ತಿಂದಿದ್ದೇನೆ. ಆದರೂ ತೃಪ್ತಿಯುಂಟಾಗದೆ ಇದುವರೆಗೂ ಬಾಳಿದೆ. ನನಗೆ ಇನ್ನೆಂತಹ

೧೧೦

ಯಶೋಧರ ಚರಿತೆ

ಎಂದು ಸುದತ್ತಾಚಾರ್ಯರ
ಮುಂದಣಿನರಮನೆಗೆ ಪೋಗದುರ್ವೀಭರಮಂ
ನಂದನನೊಳಭಯರುಚಿಯೊಳ್
ಸಂದಿಸಿ ತಾನ್ ಜೈನದೀಕ್ಷೆಯಂ ಕೈಕೊಂಡಂ೬೪

ಶ್ರೀಜಿನದೀಕ್ಷೆಗೆ ತನುವಂ
ಯೋಜಿಸೆ ಕಲ್ಯಾಣಮಿತ್ರನೆಂಬರಸು ಯಥಾ
ರಾಜಾ ತಥಾ ಪ್ರಜಾ ಎಂ
ಬೋಜೆಯಿನಂದರಸುಗಳ್ ಪಲರ್‌ ತರಿಸಂದರ್೬೫

ಆಗಳ್ ತಂದೆಯ ತಪದು-
ದ್ಯೋಗಂ ತಡವಾಗದಂತೊಡಂಬಟ್ಟು ಮಹೀ
ಭೋಗಕ್ಕನುಜ ಯಶೋಧರ
ನಾಗಿರೆ ಬಳಿಕಭಯರುಚಿಯುಮನುಜೆಯ ಸಹಿತಂ೬೬


ನರಕವು ಕಾದಿದೆಯೋ? ವಿಧಿಯೆ!” ೬೪. ಈ ಯೋಚನೆ ಬಂದಮೇಲೆ ಯಶೋಮತಿ ಅರಮನೆಗೂ ಹೋಗಲಿಲ್ಲ. ರಾಜ್ಯಭಾರವನ್ನೆಲ್ಲ ಮಗನಾದ ಅಭಯರುಚಿಗೆ ಒಪ್ಪಿಸಿ ತಾನು ಜೈನ ದೀಕ್ಷೆಯನ್ನು ವಹಿಸಿಕೊಂಡನು. ೬೫. ಕಲ್ಯಾಣ ಮಿತ್ರನೂ ದೀಕ್ಷೆಯನ್ನು ಕೈಗೊಂಡನು. ಆಗ “ರಾಜನಂತೆ ಪ್ರಜೆ” ಎಂಬ ಮಾತನ್ನು ಸಾರ್ಥಕಪಡಿಸುವಂತೆ ಅನೇಕ ನರಪತಿಗಳೂ ದೀಕ್ಷಾಬದ್ಧರಾಗಲು ನಿರ್ಧರಿಸಿದರು ೬೬. ತಂದೆಯ ತಪಸ್ಸಿನ ಉದ್ಯೋಗಕ್ಕೆ ತಡೆಯಾಗಬಾರದು ಎಂದು ಅಭಯರುಚಿ ರಾಜ್ಯಭಾರವನ್ನು ವಹಿಸಲು ಸಮ್ಮತಿಯಿತ್ತನು ಆಮೇಲೆ ಅವನು ತನ್ನ ತಮ್ಮ ಯಶೋಧರನಿಗೆ ರಾಜ್ಯ ಭೋಗವನ್ನೊಪ್ಪಿಸಿ ತಂಗಿಯೊಂದಿಗೆ


ಯಶೋಧರ ಚರಿತೆ

೧೧೧

ತಮದಿಂದಂ ಪೋರಮಟ್ಟು-
ತ್ತಮಚಾರಿತ್ರದೊಳೆ ನೆರೆದು ಮೆಯ್ಯಿಕ್ಕಿದ ಸಂ-
ಯಮದೆ ಸುದತ್ತಾಚಾರ್ಯರ
ಸಮುದಾಯದೊಳಿರ್ದು ತತ್ವಪರಿಣತನಾದಂ೬೭

ಆನಭಯರುಚಿಕುಮಾರನೆ
ಈ ನೆಗಳ್ದುರ್ದಭಯಯತಿಯುವೀ ಅಕ್ಕನೆ ದಲ್
ನಾನಾ ವಿಧ ಕರ್ಮದಿನಿ
ನ್ನೇನಂ ನೀನ್ ಕೇಳ್ವೆ ಮಾರಿದತ್ತನೃಪೇಂದ್ರಾ೬೮

ಗುರುವಿಂದು ಬೆಸಸೆ ಭಿಕ್ಷೆಗೆ
ಬರುತಿರೆ ಪಿಡಿತಂದರೆಮ್ಮನಾ ದೆಸೆಗೆ ಭಯಂ
ಪುರುಳಿಲ್ಲ ನಿನ್ನಕೇಡಂ
ಪರಿವೀಕ್ಷಿಸಿ ಕರುಣದಿಂದ ತಲ್ಲಣಿಸಿದಪೆಂ೬೯



ತಪಸ್ಸಿಗೆ ಹೊರಟನು. ೬೭. ಅಜ್ಞಾನಾಂಧಕಾರದಿಂದ ಹೊರಬಂದು ಉತ್ತಮ
ಚಾರಿತ್ರದಲ್ಲಿ ಸೇರಿಕೊಂಡು ಸಂಯಮವಶನಾಗಿ ಸುದತ್ತಾಚಾರ್ಯರ ಶಿಷ್ಯವೃಂದದಲ್ಲಿ
ಸೇರಿದನು ; ತತ್ವದಲ್ಲಿ ಪರಿಣತಿಯನ್ನು ಪಡೆದನು. ೬೮. ಆ ಅಭಯರುಚಿ
ಕುಮಾರನೇ ನಾನು; ಹೆಸರುಗೊಂಡ ಅಭಯಮತಿಯೇ ಈಕೆ. ನಾನಾ ವಿಧ
ಕರ್ಮಗಳಿಂದ ನಾವು ಹೀಗಾಗಿದ್ದೇವೆ. ಮಾರಿದತ್ತ ನಿನಗಿನ್ನು ಏನು ಕೇಳಲಿಕ್ಕಿದೆ?
೬೯. ಇಂದು ಗುರುಗಳ ಅಪ್ಪಣೆಯಂತೆ ಭಿಕ್ಷೆಗೆ ಬರುತ್ತಾ ಇದ್ದೆವು. ಆಗ ನಮ್ಮನ್ನು
ಹಿಡಿದು ತಂದಿದ್ದಾರೆ. ಇದಕ್ಕಾಗಿ ಹೆದರುವುದರಲ್ಲಿ ಅರ್ಥವಿಲ್ಲ. ಆದರೆ ನಿನ್ನ
ಕೇಡನ್ನು ಎಣಿಸಿಕೊಳ್ಳುವಾಗ ನಿನ್ನ ವಿಷಯದಲ್ಲಿ ಕರುಣೆಯುಂಟಾಗುತ್ತದೆ ;
ಭಯವೂ ಹುಟ್ಟುತ್ತದೆ.


೧೧೨

ಯಶೋಧರ ಚರಿತೆ

ಸಂಕಲ್ಪಹಿಂಸೆಯೊಂದರೊ-
ಳಾಂ ಕಂಡೆಂ ಭವದ ದುಃಖಮುಂಡೆಂ ನೀನ್ ನಿಃ
ಶಂಕತೆಯಿನಿನಿತು ದೇಹಿಗ-
ಳಂ ಕೊಂದಪೆ ನರಕದೊಳ್ ನಿವಾರಣೆವಡೆವಯ್ ೭೦

ಎಂದನುಡಿ ನೆರೆದ ಜೀವಕ-
ದಂಬಂಗಳ್ಗಭಯವೆಂಬ ಡಂಗುರದವೊಲೊ-
ಪ್ಪಂಬಡೆಯೆ ಮಾರಿದತ್ತನೃ-
ಪಂ ಬಿಲ್ಲುಂ ಬೆರಗುಮಾದನುದ್ವೇಗಪರಂ೭೧

ಆ ಚಂಡಮಾರಿ ಲೋಚನ
ಗೋ ಚರತನುವಾಗಿ ಕುವರನಂ ಬಂದಿಸಿ ನೀ-
ನಾಚಾರ್ಯನೆಯೆಂದಿಂತಿರೆ
ಸೂಚಿಸಿದಳ್ ನೆರೆದ ಜಾತ್ರೆ ನೆರೆ ಕೇಳ್ವಿನೆಗಂ೭೨




೭೦. ಸಂಕಲ್ಪ ಹಿಂಸೆಯೊಂದರಿಂದಲೇ ನಾನು ಜನ್ಮ ಜನ್ಮಾಂತರಗಳ ಈ
ದುಃಖಗಳನ್ನೆಲ್ಲ ಅನುಭವಿಸಿದೆ. ನೀನು ನಿಶ್ಚಿಂತೆಯಿಂದ ಇಷ್ಟು ಜೀವಿಗಳನ್ನು
ಕೊಲ್ಲುತ್ತಾ ಇದ್ದೀಯಲ್ಲ! ನಿನಗೆ ನರಕದಿಂದ ವಿಮೋಚನೆಯುಂಟೆ?” ೭೧.
ಅಭಯರುಚಿ ಆಡಿದ ಈ ಮಾತು ಅಲ್ಲಿ ಸೇರಿದ ಜೀವಸಮುದಾಯಕ್ಕೆಲ್ಲ
ಅಭಯವೀಯುವ ಡಂಗುರದಂತೆ ಗಂಭೀರವಾಗಿ ಕೇಳಿತು. ಮಾರಿದತ್ತ
ರಾಜನಂತೂ ಉದ್ವೇಗಕ್ಕೆ ಗುರಿಯಾಗಿ ಬಹಳ ಬೆರಗಿನಿಂದಿದ್ದನು. ೭೨. ಅದೇ
ಸಮಯಕ್ಕೆ ಚಂಡಮಾರಿ ದೇವತೆಯೂ ಪ್ರತ್ಯಕ್ಷಳಾದಳು. ಅವಳು ಅಭಯರುಚಿಗೆ
ವಂದಿಸಿ ಅವನೇ ಆಚಾರ್ಯನೆಂದು ತೋರಿಸಿಕೊಟ್ಟಳು. ಜಾತ್ರೆ ಸೇರಿದ ಜನರೆಲ್ಲ

ಯಶೋಧರ ಚರಿತೆ

೧೧೩

ಪ್ರಜೆಯೆಲ್ಲಂ ಜಲಗಂಧ
ಸ್ರಜ ತಂಡುಲ ಧೂಪ ದೀಪ ಚರು ತಾಂಬೂಲ
ವಜ್ರದಿಂ ಪೂಜಿಸುವುದು ಜೀ-
ವಜಾತದಿಂದೆನಗೆ ಬಲಿಯನಿತ್ತೊಡೆ ಮುನಿವೆಂ೭೩

ಎಂದು ತಿರೋಹಿತೆಯಾದೊಡೆ
ತಂದಿರಿಸಿದ ಜೀವರಾಶಿಯಂ ಬಿಡಿಸಿ ಜನಾ-
ನಂದನರಂ ತನ್ನನುಜೆಯ
ನಂದನರಂ ಮಾರಿದತ್ತವಿಭು ಲಾಲಿಸಿದಂ೭೪

ಗುಡುಗುಡನೆ ಸುರಿವ ಕಣ್ಬನಿ-
ಯೊಡವಂದಶುಭಕ್ಕೆ ಮಂಗಳಸ್ನಾನಮಂ-
ದೊಡರಿಸೆ ಸೋದರ ಶಿಶುಗಳ-

ನೊಡಲೊಳ್ ಮಡಗುವಿನಮಪ್ಪಿ ಬೆಚ್ಚನೆ ಸುಯ್ದಂ
೭೫



ಕೇಳುವಂತೆ ಅವಳು ಸೂಚನೆಯಿತ್ತಳು : ೭೩ "ಪ್ರಜೆಗಳೇ ಕೇಳಿರಿ. ನೀವು
ಇನ್ನು ಮುಂದೆ ನೀರು, ಗಂಧ, ಮಾಲೆ, ಅಕ್ಕಿ, ಧೂಪ, ದೀಪ, ಚರು, ತಾಂಬೂಲ
ಎಂಬವುಗಳಿಂದಲೇ ನನ್ನ ಪೂಜೆಯನ್ನು ಮಾಡಬೇಕು. ಎಲ್ಲಿಯಾದರೂ
ಪ್ರಾಣಿಗಳನ್ನು ಬಳಿಕೊಟ್ಟಿರೆಂದಾದರೆ ನಿಮ್ಮ ಮೇಲೆ ಕೋಪಿಸಿಕೊಂಡೇನು."
೭೪. ಇಷ್ಟನ್ನು ಉದ್ಘೋಷಿಸಿ ಚಂಡಮಾರಿ ಮಾಯವಾದಳು. ಆಗ
ಮಾರಿದತ್ತರಾಜನು ಎಲ್ಲ ಪ್ರಾಣಿಗಳ ಬಂದನವನ್ನೂ ಬಿಡಿಸಿದನು. ತನ್ನ ತಂಗಿಯ
ಮಕ್ಕಳಾದ ಹಾಗೂ ಎಲ್ಲ ಜನರಿಗೆ ಆನಂದವುಂಟುಮಾಡುವ ಅಭಯರುಚಿ
ಅಭಯಮತಿಯನ್ನು ಅವನು ಮುದ್ದಾಡಿದನು. ೭೫. ಅರಸನ ಕಣ್ಣುಗಳಿಂದ
ಎಡೆಬಿಡದೆ ಕಂಬನಿ ಸುರಿಯುತ್ತಿತ್ತು. ಬಂದೊದಗಿದ ಅಶುಭವನ್ನು
ಪರಿಹರಿಸುವುದಕ್ಕಾಗಿ ಮಂಗಳಸ್ನಾನ ಮಾಡುವಂತೆ ಅಶ್ರುಸ್ನಾನವಾಯಿತು. ತನ್ನ
ಸೋದರಳಿಯ ಮತ್ತು ಸೋದರ ಸೊಸೆಯನ್ನು ತನ್ನ ಒಡಲಲ್ಲಿ ಅಡಗಿಸುವನೋ
ಎಂಬಂತೆ ಅವರನ್ನು ಗಾಢವಾಗಿ ಆಲಿಂಗಿಸಿದನು. ಉಸಿರು ಬಿಸಿಯಾಗಿ
ಹೊಮ್ಮುತ್ತಿತ್ತು.

೧೧೪

ಯಶೋಧರ ಚರಿತೆ

ತಾನಂದುವರೆಗಮೊದವಿಸಿ
ದೇನಂಗಳ್ಗಳ್ಕಿ ಕುಸುಮದತ್ತಂಗೆ ಧರಿ-
ತ್ರೀನಾಥಪದವಿಯಂ ಕೊ-
ಟ್ಟಾ ನರಪತಿ ಬಳಿಕ ದೀಕ್ಷೆಯಂ ಕೈಕೊಂಡಂ೭೬

ಕೆಲಕಾಲಮುಗ್ರತಪಮಂ
ಸಲಿಸಿ ಸಮಾಧಿಯೊಳೆ ಮುಡಿಪಿ ಮೂರನೆಯ ದಿವಂ
ನೆಲೆಯಾಗೆ ಮಾರಿದತ್ತಂ
ಕಲಿಯಂ ಮೂದಲಿಸಿದಂತೆ ದೇವನೆ ಆದಂ೭೭

ಅಮಳ್ಗಳ್ ಬಳಿಕ ಸುದತ್ತರ
ಸಮುದಾಯದೊಳಾಗಮೋಕ್ತಿಯಿಂ ನಡೆದು ತವಂ
ತಮಗಮರೆ ನೋನ್ತು ಮುಡಿಪಿದ
ಸಮಯದೊಳೀಶಾನಕಲ್ಪದೊಳ್ ಜನಿಯಿಸಿದರ್೭೮



೭೬. ಅದುವರೆಗೂ ಮಾಡಿದ ಪಾಪಕೃತ್ಯಗಳಿಂದಾಗಿ ಅವನು ಅಳುಕಿಹೋದನು.
ಆದುದರಿಮದ ಅವನು ಮಗ ಕುಸುಮದತ್ತನಿಗೆ ಅರಸು ಪಟ್ಟವನ್ನು ಕಟ್ಟಿ ದೀಕ್ಷೆಯನ್ನು
ಕೈಕೊಂಡನು. ೭೭. ಕೆಲವು ಕಾಲದವರೆಗೂ ಅವನು ಉಗ್ರವಾದ ತಪಸ್ಸಿನಲ್ಲಿ
ಮಗ್ನನಾದನು. ಅನಂತರ ಸಮಾಧಿ ಮರಣವನ್ನು ಪಡೆದು ಮೂರನೆಯ ಸ್ವರ್ಗದಲ್ಲಿ
ಕಲಿಯನ್ನು ಮೂದಲಿಸಿದಂತೆ ದೇವನೆ ಆದನು. ೭೮. ಅನಂತರ ಅಭಯರುಚಿ
ಅಭಯಮತಿಗಳು ಸುದತ್ತರ ಶಿಷ್ಯ ಸಮುದಾಯದಲ್ಲಿದ್ದರು. ಅಲ್ಲಿ ಶಾಸ್ತ್ರ ವಚನದಂತೆ
ನಡೆದರು. ಇಬ್ಬರೂ ತಪೋಮಗ್ನರಾಗಿ ವ್ರತಗಳನ್ನಾಚರಿಸಿ ದೇಹಾವಸಾನವಾದಾಗ
ಈಶಾನಕಲ್ಪದಲ್ಲಿ ಹುಟ್ಟಿದರು.


ಯಶೋಧರ ಚರಿತೆ

೧೧೫

ಮತ್ತಂ ಧರ್ಮವಿಹಾರ ನಿ-
ಮಿತ್ತಂ ಬಂದಿರೆ ಯಶೋಧರಂ ತಮ್ಮವರ್ಗಾ
ದುತ್ತಮಗತಿಯಂ ಕೇಳ್ದು ಸು-
ದತ್ತಾಚಾರ್ಯರ ಪದಾಬ್ಜಮಂ ಪೂಜಿಸಿದಂ೭೯

ಜೀವದಯೆ ಎಂಬುದೆಮ್ಮಯ
ಮಾವನ ಹೆಸರಿರ್ದ ನಾಡೊಳಿರದಾತಂಗಂ
ದೇವಗತಿಯಾಯ್ತು ಸೋದರ-
ರ್ಗಾ ವೈಭವವಾಯ್ತು ಧರ್ಮದಿಂದಾಗದುದೇಂ೮೦

ಎಂದು ಮನಸಂದು ಜಿನಮತ
ನಂದನದೊಳ್ ದಾನಲತೆ ದಯಾರಸದೆ ಜಗಂ
ಪಂದರೆನೆ ಪರ್ವಿ ಪೊಸಜಸ-
ದಿಂದಂ ಮರಲ್ದಿರೆ ಯಶೋಧರಂ ಬೆಳೆಯಸಿದಂ೮೧



೭೯. ಮತ್ತೊಮ್ಮೆ ಸುದತ್ತಾಚಾರ್ಯರು ಧರ್ಮವಿಹಾರಕ್ಕಾಗಿ ಅಲ್ಲಿಗೆ ಬಂದಿದ್ದರು.
ಆಗ ಯಶೋಧರನು ತಮ್ಮವರಿಗೊದಗಿದ ಉತ್ತಮ ಗತಿಯನ್ನು ಕೇಳಿ ತಿಳಿದನು;
ಗುರುಗಳ ಪಾದಕಮಲವನ್ನು ಪೂಜಿಸಿದನು. ೮೦. “ನಮ್ಮ ಮಾವನಿದ್ದ ಊರಿನಲ್ಲಿ
ಜೀವದಯೆ ಎಂಬುದರ ಹೆಸರೇ ಇರಲಿಲ್ಲ. ಅಂಥವರಿಗೂ ದೇವಗತಿಯಾಯಿತು.
ನನ್ನ ಅಣ್ಣ ಅಕ್ಕಂದಿರಿಗೂ ಅಂತಹ ವೈಭವವು ಸಂಭವಿಸಿತು ಎಂದಮೇಲೆ
ಧರ್ಮದಿಂದ ಆಗದುದೇನಿದೆ?” ಎಂದು ಎಣಿಸಿ ಧರ್ಮಕ್ಕೆ ಮನಸ್ಸೊಪ್ಪಿಸಿದನು.
೮೧. ಜಿನಮತ ನಂದನದಲ್ಲಿ ಅವನು ದಾನಲತೆಯನ್ನು ಬೆಳೆಯಿಸಿ ಅದಕ್ಕೆ
ದಯಾರಸವನ್ನೆರೆದು ಅದನ್ನು ಜಗತ್ತಿನ ಚಪ್ಪರದಲ್ಲಿ ಹಬ್ಬಿಸಿದನು.೫೯. ಅದರಲ್ಲಿ
ಹೊಸಕೀರ್ತಿ ಹೂವಾಗಿ ಅರಳಿತು.

೧೧೬

ಯಶೋಧರ ಚರಿತೆ

ಸಜ್ಜನ ಚೂಡಾಮಣಿ ತ-
ಮ್ಮಜ್ಜಂಗಂ ಪುಣ್ಯದಿಂದೆ ಸಾಸಿರ್ಮಡಿಯಾ-
ಗುಜ್ಜಳಿಕೆವಡೆದ ಪೆರ್ಮೆಯೊ
ಳ್ಳುಜ್ಜೇನಿಯೊಳರಸುಗೆಯ್ಯುತಿರ್ದಂ ಸುಖದಿಂ೮೨

ತಾರಾತಾರಾ ಧರಾಧರ
ತಾರಾ ದರತಾಹಾರ ನೀಹಾರ ಪಯಃ
ಪೂರ ಹರಹಸನ ಶಾರದ
ನೀರದ ನಿರ್ಮಲ ಯಶೋಧರಂ ಕವಿತಿಲಕಂ೮೩

ಕ್ಷಯಮಂ ಪಿಟ್ಟಿನ ಕೋಳಿಗಿತ್ತು ನವಿಲುಂ ನಾಯಾದರೆಯ್ಯುಂ ವಿಷಾ-
ಹಿಯುಮಾದರ್ ಪಗೆ ಸುತ್ತೆ ಮೀನ್ ಮೊಸಳೆಯಾದರ್ ಪೋಂತುಮಾಡಾದರ-
ಲ್ಲಿಯೆ ಪೋಂತುಂ ಪುಲಿಗೋಣರಾದರೆರಡುಂ ಬಲ್ಗೋಳಿಯಾದರ್‌ ತಪ-
ಸ್ವಿಯ ಮಾತಿಂದಮಳಾದರಳ್ತೆ ಮಗನುಂ ತಾಯುಂ ಯಶೌಘಪ್ರಿಯರ್೮೪



೮೨. ಯಶೋಧರನು ಸಜ್ಜನ ಚೂಡಾಮಣಿಯೆನ್ನಿಸಿ ತನ್ನ ಪುಣ್ಯದಿಂದ ತನ್ನ
ಅಜ್ಜ ಯಶೌಘನಿಗಿಂತಲೂ ಸಾವಿರಪಾಲು ಉಜ್ವಲತೆಯನ್ನು ಪಡೆದು
ಉಜ್ಜಯಿನಿಯಲ್ಲಿಕ್ಕಿ ಸುಖವಾಗಿ ರಾಜ್ಯಭಾರ ಮಾಡುತ್ತಿದ್ದನು, ೮೩. ಬೆಳ್ಳಿ ಬೆಳ್ಳಿಯ
ಬೆಟ್ಟ(ಕೈಲಾಸ) ನಕ್ಷತ್ರ (ಚಂದ್ರ) ಶಂಖ, ಮುತ್ತಿನಹಾರ, ಮಂಜು, ಹಾಲಹೊಳೆ,
ಹರನ ನಗು, ಶರತ್ಕಾಲದ ಮೋಡ ಇವುಗಳಂತೆ ನಿರ್ಮಲ ಯಶೋಧರನೂ
ಕವಿತಿಲಕನು.೬೦ ೮೪. ಯಶೌಘನಿಗೆ ಮೆಚ್ಚಿನವರಾದ ಯಶೋಧರನೂ
ಚಂದ್ರಮತಿಯೂ ಹಿಟ್ಟಿನ ಕೋಳಿಯನ್ನು ಕೊಂದು ನವಿಲೂ ನಾಯಿಯೂ
ಆದರು. ಅನಂತರ ಮುಳ್ಳುಹಂದಿಯೂ ಸರ್ಪವೂ ಆದರು. ಹಗೆ ಸುತ್ತಿ ಸತ್ತು
ಮಿಾನು ಮೊಸಳೆಗಳಾಗಿ, ಬಳಿಕ ಹೋತ ಆಡುಗಳಾಗಿ, ಆಮೇಲೆ ಹೋತ
ಕೋಣಗಳಾಗಿ ಜನ್ಮ ಪಡೆದರು. ಮುಂದೆ ಎರಡು ಕೋಳಿಗಳಾಗಿ ಹುಟ್ಟಿದರು.
ತಪಸ್ವಿಗಳಾದ ಸುದತ್ತಾಚಾರ್ಯರ ಮಾತನ್ನು ಕೇಳಿದುದರಿಂದ ಈ ಮಗನೂ
ತಾಯಿಯೂ ಅವಳಿ ಮಕ್ಕಳಾಗಿ ಜನ್ಮವೆತ್ತಿದರು.


ಯಶೋಧರ ಚರಿತೆ

೧೧೭

ಅಭಯರುಚಿಕುಮಾರಂ ಮಾರಿದತ್ತಂಗೆ ಹಿಂಸಾ-
ರಭಸಮತಿಗೆ ಸಯ್ಪಂ ಪೇಳ್ದು ಧರ್ಮಕ್ಕೆ ತಂದೀ
ಶುಭಕಥನಮನತ್ಯಾನಂದದಿಂ ಕೇಳ್ವ ಭವ್ಯ
ಪ್ರಭು ಸಭೆಗೆಸೆದಿರ್ಕುಂ ಮಂಗಳಂ ಶ್ರೀ ವಿಲಾಸಂ೮೫

ಶ್ರೀಗಿರಿದುರ್ಗಮಲ್ಲನೃಪರಾಜ್ಯದ ವತ್ಸರಮುತ್ತರೋತ್ತರ-
ಕ್ಕಾಗಿರೆ ಶುಕ್ಲದಾಶ್ವಯುಜಕೃಷ್ಣದ ಪಂಚಮಿ ಪುಷ್ಯತಾರೆ ಪೂ-
ರ್ಣಾ ಗುರುವಾಗೆ ಭೂಸತಳದೊಳೀ ಕೃತಿ ಪೆತ್ತುದು ಸುಪ್ರತಿಷ್ಠಯಂ
ಚಾಗದ ಭೋಗದಗ್ಗಳಿಕೆಯಂ ಮೆರೆದಂ ಕವಿಭಾಳಲೋಚನಂ೮೬

ಪರಮಜಿನೇಂದ್ರ ಶಾಸನವಸಂತದೊಳೀ ಕೃತಿ ಕೋಕಿಲಸ್ವನಂ
ಪರೆಗಸಹಾಯಶೂರನ ಭುಜಕ್ಕೆ ಜಯಂ ಸಮಸಲ್ಗೆ ಸಂತತಂ
ಪರಿಮಳದಂತೆ ವಾಣಿ ನೆಲಸಿರ್ಕೆ ವಿಕಾಸವಿಲಾಸದಂತೆವೊಲ್
ಸಿರಿ ನೆರೆದಿರ್ಕೆ ನಾಳ್ಪ್ರಭು ಜನಾರ್ಧನದೇವನ ವಕ್ತ್ರಪದ್ಮದೊಳ್೮೭



೮೫. ಹಿಂಸೆಯಲ್ಲೇ ಮನಸ್ಸು ಮುಂದಾಗುತ್ತಿದ್ದ ಮಾರಿದತ್ತನಿಗೆ ಅಭಯರುಚಿ
ಕುಮಾರನು ಪುಣ್ಯದ ವಿಷಯವನ್ನು ಹೇಳಿ ಅವನನ್ನು ಧರ್ಮದ ದಾರಿಗೆ
ತಂದನು. ಇಂತಹ ಈ ಮಂಗಲಕರವಾದ ಕಥೆಯನ್ನು ಅತ್ಯಾನಂದದಿಂದ ಕೇಳುವ
ಭವ್ಯಪ್ರಭು ಸಭೆಗೆ ಮಂಗಲಕರವಾದ ಸಂಪದ್ವಿಲಾಸವು ಶೋಭಿಸುತ್ತದೆ. ೮೬.
ಶ್ರೀ ಗಿರಿದುರ್ಗ ಮಲ್ಲರಾಜನ ರಾಜ್ಯದ ವತ್ಸರವು ಉತ್ತರೋತ್ತರ ಉತ್ಕರ್ಷಕ್ಕಾಗಿ
ಇರುವಾಗ ಶುಕ್ಲ ಸಂವತ್ಸರದ ಆಶ್ವೀಜ ಕೃಷ್ಣಪಂಚಮಿ ಪುಷ್ಯ ನಕ್ಷತ್ರದ ಗುರುವಾರ
ಈ ಕೃತಿ ಒಳ್ಳೆಯ ಪ್ರತಿಷ್ಠೆಯನ್ನು ಪಡೆಯಿತು. ಈ ಲೋಕದಲ್ಲಿ ತ್ಯಾಗದ ಭೋಗದ
ಅಗ್ಗಳಿಕೆಯನ್ನು ಕವಿಭಾಳಲೋಚನನು ಮೆರೆದನು. ೮೭. ಶ್ರೇಷ್ಠನಾದ ಜಿನೇಂದ್ರನ
ಶಾಸನ (ಧರ್ಮ)ವೆಂಬ ವಸಂತದಲ್ಲಿ ಈ ಕಾವ್ಯವೆಂಬ ಕೋಗಿಲೆಯ ಧ್ವನಿ
ಪಸರಿಸಲಿ! ಅಸಹಾಯ ಶೂರನ(ಬಲ್ಲಾಳನ) ಬಾಹುವಿಗೆ ಜಯವೊದಗಲಿ!
ನಾಡೊಡೆಯನಾದ ಜನಾರ್ದನ ದೇವ (ಜನ್ನ)ನ ಮುಖ ಕಮಲದಲ್ಲಿ
ಯಾವಾಗಲೂ ಸರಸ್ವತಿಯು ಪರಿಮಳದಂತೆ ನೆಲಸಿರಲಿ! ವಿಕಾಸದ ಚೆಲುವಿನಂತೆ
ಲಕ್ಷ್ಮಿ ಸೇರಿಕೊಂಡಿರಲಿ!



೧೧೮

ಯಶೋಧರ ಚರಿತೆ

ಇದು ಪರಮ ಜಿನಸಮಯ ಕುಮುದಿನೀ ಶರಚ್ಚಂದ್ರ
ಸದಮಲ ರಾಮಚಂದ್ರ ಮುನೀಂದ್ರಪದ ಭಕ್ತಂ
ಜನ್ನಕವಿ ಜನಕ್ಕೆ ಮಾಡಿದ
ಯಶೋಧರ ಚರಿತಾವತಾರಂ
ಸಂಪೂರ್ಣಂ

ಟಿಪ್ಪಣಿಗಳು

೧. ಮಹಾಕವಿಗಳ ಮಾತಿನ ಸುಂದರರೀತಿಗೆ ಇದೊಂದು ಉದಾಹರಣೆ.
ಆದಿ ತೀರ್ಥಂಕರನಿಂದ ತೊಡಗಿ ಮಲ್ಲತೀರ್ಥಂಕರನವರೆಗಿನ ಹತ್ತೊಂಬತ್ತು
ಮಂದಿಯೂ ಒಲಿಸಿಕೊಂಡುದು ಒಬ್ಬಳನ್ನೇ-ಮುಕ್ತಿ ಎಂಬ ವಧುವನ್ನೇ. ಒಬ್ಬರಾದ
ಮೇಲೆ ಒಬ್ಬರಂತೆ ಅವಳನ್ನು ಒಲಿಸಿದವರು ಬೇರೆಬೇರೆಯಾಗಿದ್ದು ಅವಳು
ಯಾವಾಗಲೂ ಇತರರಿಗೆ ಪರವನಿತೆಯೆನಿಸಿಕೊಂಡೇ ಇದ್ದಳು. ಆಗಿದ್ದರೂ
ಸುವ್ರತನೆಂಬ ಇಪ್ಪತ್ತನೆಯ ತೀರ್ಥಂಕರನೂ ಅವಳನ್ನೇ ಒಲಿಸಿಕೊಂಡನು. ಅವನಿಗೆ
ಇದರಿಂದ ಕೆಟ್ಟ ಹೆಸರು ಬಾರದೆ ಪರವನಿತೆಯಲ್ಲಿ ಒಂದಿಷ್ಟೂ
ಅಪೇಕ್ಷೆಯಿರಿಸಿಕೊಳ್ಳದವನು ಎಂಬ ಪ್ರಶಂಸೆಯೆ ದೊರೆಯಿತಂತೆ! ಅವನು ದೇವರ
ದೇವನು ಆಗಿದ್ದನಂತೆ. ಆ ರೀತಿ ಮಹಿಮಾವಂತನಾದ, ಸಾರ್ಥಕನಾಮನಾದ
ಸುವ್ರತನನ್ನು, ಒಳ್ಳೆಯ ವ್ರತವನ್ನೇ ನಮಗೆ ದಯಪಾಲಿಸಲಿ ಎಂದು ಕವಿ
ಚಮತ್ಕಾರವಾಗಿ ಪ್ರಾರ್ಥಿಸುತ್ತಾನೆ.
ಹಲವರೊಲಿಸಿದ ಹೆಣ್ಣನ್ನು ಸುವ್ರತನೂ ಒಲಿಸಿಕೊಂಡರೂ ಪರರ ಹೆಣ್ಣನ್ನು
ಬಯಸದವನೆಂಬ ಪ್ರಸಿದ್ದಿಗೆ ಪಾತ್ರನಾದನೆಂದು ಹೇಳುವಲ್ಲಿ ವಿರೋಧವು
ತೋರಿಬರುತ್ತದೆ. ಆದರೆ ಆ ಹೆಣ್ಣು ಮತ್ತರೂ ಅಲ್ಲ. ಮುಕ್ತಿ ಎನ್ನುವಾಗ ಈ
ವಿರೋಧವು ಪರಿಹಾರಗೊಳ್ಳುತ್ತದೆ. ಆ ಉಕ್ತಿ ಚಮತ್ಕಾರದಲ್ಲಿ, ಎಲ್ಲ
ತೀರ್ಥಂಕರರೂ ಮೋಕ್ಷವನ್ನು ಪಡೆದವರೆಂದೂ, ಅವರು ದೇವತೆಗಳಿಗೆಲ್ಲ
ದೇವರಾಗಿದ್ದರೆಂದೂ, ಇದಕ್ಕೆಲ್ಲ ಅವರ ಪರವನಿತಾನಿರಪೇಕ್ಷಗುಣವೇ ಕಾರಣವೆಂದು
ಸೂಚಿತವಾಗಿದೆ. ಪರಸ್ತ್ರೀಕಾಮುಕತೆಯನ್ನು ಪರಿಹರಿಸಿಕೊಂಡವರು
ಪರಮಪದವನ್ನು ಪಡೆಯಬಹುದೆಂದು ಇದರಿಂದ ಧ್ವನಿತವಾಗುತ್ತದೆ.
ಈ ಕತೆಯಲ್ಲಿ ಒಲ್ಮೆಯ ವಿಷಯವಿರುವುದರಿಂದ ಕವಿ 'ಒಲಿಸು' ಎಂಬ
ಶಬ್ದವನ್ನು ಆರಂಭದಲ್ಲಿಯೇ ಪ್ರಯೋಗಿಸಿದ್ದಾನೆನ್ನಬಹುದು.

'ಯಶೋಧರ ಚರಿತೆ' ಎಂಬುದು 'ಜೀವದಯಾಷ್ಟಮಿ' ಎಂಬ ವ್ರತದ
ಸಂದರ್ಭಕ್ಕೊಪ್ಪುವ ಕತೆಯಾದುದರಿಂದ ಜನ್ನಕವಿ ಆರಂಭದಲ್ಲಿ ಸುವ್ರತಜಿನನನ್ನ
ಪ್ರಾರ್ಥಿಸಿ, ಅವನು ಎಲ್ಲರಿಗೆ ಆ ವ್ರತವನ್ನು ಅನುಗ್ರಹಿಸುವಂತೆ ಕೇಳಿಕೊಳ್ಳುತ್ತಾನೆ.


೧೨೦

ಯಶೋಧರ ಚರಿತೆ

ಹೀಗೆ ಇದೊಂದು ಸುಂದರ 'ಕಂದ'
೨. ಅರ್ಹಂತ, ಸಿದ್ಧ, ಆಚಾರ್ಯ, ಉಪಾಧ್ಯಾಯ, ಸಾಧು ಎಂಬ
ಪಂಚಪರಮೇಷ್ಠಿಗಳನ್ನು ಕಾರಾ (ವ್ಯಾ) ರಂಭದಲ್ಲಿ ನಮಸ್ಕರಿಸುವುದು ಜೈನ
ಪದ್ಧತಿ.
೩. ಇಲ್ಲಿ ಜನ್ನನು ತನಗಿರುವ ಕವಿವೃಂದಾರಕವಾಸವ, ಕವಿಕಲ್ಪಲತಾ
ಮಂದಾರ ಎಂಬ ಬಿರುದುಗಳನ್ನು ಸೂಚಿಸುತ್ತಾನೆ. ತನ್ನ ಪೋಷಕನಾದ
ಬಲ್ಲಾಳದೇವನ ಮೇಲಿರುವ ಭಕ್ತಿಗೌರವಗಳನ್ನು ಇಲ್ಲಿ ಕವಿ ಸೂಚ್ಯವಾಗಿ ತಿಳಿಸುತ್ತಾನೆ.
ಕಥಾರಂಭಕ್ಕಿಂತಲೂ ಬಲ್ಲಾಳದೇವನ ವಂಶವರ್ಣನವೇ ಮೊದಲ ಕರ್ತವ್ಯ
ಎಂಬ ಮಾತಿನಲ್ಲಿ.
೪. ಬಲ್ಲಾಳದೇವನ ವಂಶಾನುಕ್ರಮವನ್ನು ಹೇಳುವ ಮೊದಲು ಉತ್ತಮ
ಕಾವ್ಯವು ಯಾರಿಗೆ ಮೆಚ್ಚುಗೆಯಾಗುತ್ತದೆ, ಯಾರಿಗೆ ಮೆಚ್ಚಿಗೆಯಾಗುವುದಿಲ್ಲ
ಎಂಬುದನ್ನು ಕವಿ ತಿಳಿಸುತ್ತಾನೆ. ಕಾವ್ಯದ ಸವಿಯನ್ನುಣ್ಣ ಬೇಕಾದರೆ ಅವನಲ್ಲಿ
ಕಲ್ಪನಾಶಕ್ತಿ ರಸಿಕತೆ, ಸಂಭಾವಿತತೆ, ಹಾಗೂ ಶಾಸ್ತ್ರ ಜ್ಞಾನ ಮುಂತಾದುವೆಲ್ಲ
ಕೂಡಿರಬೇಕೆಂದು ಹೇಳುತ್ತಾನೆ. ಅಂಥವನು ದೇವನೆನ್ನಿಸುತ್ತಾನೆ ಎಂಬುದು
ಒಂದರ್ಥವಾದರೆ, ಬಲ್ಲಾಳದೇವನೇ ಆ ಯೋಗ್ಯತೆಯುಳ್ಳವನು ಎಂಬುದು
ಇನ್ನೊಂದರ್ಥ.
'ದೇವನಾಂ ಪ್ರಿಯ' ಎಂಬುದೊಂದು ವಿಶಿಷ್ಟ ಪ್ರಯೋಗ, ಅಶೋಕ
ಚಕ್ರವರ್ತಿ ತನ್ನನ್ನು ದೇವನಾಂ ಪ್ರಿಯ ಎಂದು ದೇವತೆಗಳಿಗೆ ಪ್ರೀತಿಪಾತ್ರನಾದವನು
ಎಂಬ ಒಳ್ಳೆಯ ಅರ್ಥದಲ್ಲಿ ಪ್ರಯೋಗಿಸಿದ್ಧನಾದರೂ, ಅದಕ್ಕೆ ಅನಂತರ ಕ್ರಮೇಣ
ಅರ್ಥ ವ್ಯತ್ಯಾಸವುಂಟಾಗಿ ಮೂಢ ಎಂಬಂರ್ಥ ಬಂದಿದೆ. 'ದೇವರಿಗೆ ಪ್ರೀತಿ'
ಎಂದು ಬಳಕೆಯಲ್ಲಿರುವ ಮಾತಿಗೆ ಮನುಷ್ಯನೊಬ್ಬನಿಗೂ ಪ್ರೀತಿಪಾತ್ರನಲ್ಲದವನು
ಎಂಬರ್ಥವೇ ಹೊಳೆಯುತ್ತದೆ.
೫. ಡಾ|| ಎಚ್. ತಿಪ್ಪೇರುದ್ರಸ್ವಾಮಿ ಇವರ 'ಕರ್ಣಾಟಕ ಸಂಸ್ಕೃತಿಯ
ಪೂರ್ವ ಪೀಠಿಕೆ' ಎಂಬುದರಲ್ಲಿ ಹೀಗಿದೆ :

ಗಂಗವಾಡಿಯ ಉತ್ತರಭಾಗದ ಒಂದು ಮೂಲೆಯಲ್ಲಿ ಒಬ್ಬ ನಾಯಕ
ತಲೆಯೆತ್ತಿದ. ಅವನನ್ನೇ 'ಸಳ' ಎಂದು ಕರೆಯಲಾಗಿದೆ. 'ಸಸವೂರು' ಅಥವಾ
'ಶಶಕಪುರ' ಎಂಬುದು ಅವನ ಕಾರ್ಯಕ್ಷೇತ್ರದ ಕೇಂದ್ರವಾಗಿದ್ದಂತೆ ತೋರುತ್ತದೆ.
ಇದು ಈಗಿನ ಕಡೂರಿನ ಸುತ್ತಮುತ್ತಲಿನ ಭಾಗವಾಗಿದ್ದಿರಬಹುದು.


ಟಿಪ್ಪಣಿಗಳು

೧೨೧

ಶಶಕಪುರದ ಹತ್ತಿರ ವಾಸಂತಿಕಾ ದೇವಾಲಯವಿತ್ತು. ಅಲ್ಲಿಗೆ ಒಮ್ಮೆ ಸಳ
ಹೋದಾಗ ಅಲ್ಲಿ ಒಬ್ಬ ಜೈನಗುರು ಧ್ಯಾನಾಸಕ್ತರಾಗಿದ್ದರು. ಅವರ ದರ್ಶನವನ್ನು
ಪಡೆಯುತ್ತಿರಲು ಅಷ್ಟರಲ್ಲಿ ಹುಲಿಯೊಂದು ಅಲ್ಲಿಗೆ ಬಂದು ಮೇಲೆ ಬೀಳಲು
ಉದ್ಯುಕ್ತವಾಯಿತು. ಅದನ್ನು ಕಂಡ ಯತಿ 'ಹೊಯ್ ಸಳ' ಅಂದರೆ 'ಎಲೈ
ಸಳನೇ ಹೊಡೆ' ಎಂದನು. ಆ ಕೂಡಲೇ ಸಳನು ಕೈಲಿದ್ದ ಆಯುಧದಿಂದ
ಹುಲಿಯನ್ನು ಹೊಡೆದು ಕೊಂದುಹಾಕಿದನು. ಅವನ ಧೈರ್ಯಕ್ಕೆ ಮೆಚ್ಚಿ ಜೈನಯತಿ
ವಾಸಂತಿಕಾದೇವಿಯ ಅನುಗ್ರಹವು ಆತನಿಗೆ ಲಭಿಸುವಂತೆ ಮಾಡಿದನು; ಸುತ್ತಮುತ್ತಲ
ಪ್ರದೇಶಕ್ಕೆಲ್ಲ ರಾಜನಾಗುವಂತೆ ಆಶೀರ್ವದಿಸಿದನು. ಸಳನಿಗೆ ಅಲ್ಲಿಂದ ಮುಂದೆ
ಪೊಯ್ಸಳ ಅಥವಾ ಹೊಯ್ಸಳನೆಂದೂ ಆತನ ವಂಶಕ್ಕೆ ಹೊಯ್ಸಳ ವಂಶವೆಂದೂ
ಹೆಸರಾಯಿತು. (ಪು. ೧೨೬-೧೨೭)
ಇಲ್ಲಿ ಜನ್ನ ಸಳನು ಯತಿಯ ಕುಂಚದ ಸೆಳೆಯಿಂದ ಹೊಯ್ದನು ಎಂದಿದ್ದಾನೆ.
೬. ಎರೆಯಂಗನಿಗೂ ಏಚಲದೇವಿಗೂ ಮಗನಾದ ಕಾರಣವೇ ವಿಷ್ಣು
ನೃಪಾಲನು ಉದಾರನೂ, ವೀರನೂ, ರಕ್ಷಕನೂ ಆಗಿದ್ದನೆಂದು ತಾತ್ಪರ್ಯ,
ಒಳ್ಳೆಯ ತಾಯಿ ತಂದೆಗಳಿಂದ ಮಕ್ಕಳಿಗೂ ಒಳ್ಳೆಯ ಗುಣಗಳು ಬರುತ್ತವೆ
ಎಂದು ಸೂಚಿತವಾಗಿದೆ.
೭. ಪ್ರತಾಪ ಎಂದರೆ ಬಹಳ ಉರಿ, ಪ್ರತಾಪಚಕ್ರೇಶ್ವರ ಸೂರ್ಯ.
೮. ಮೂಳುವರೆ ರಾಯರು-ನಾಲ್ಕೂ ದಿಕ್ಕುಗಳಲ್ಲಿ ಇರುವ ಪ್ರಮುಖ
ರಾಜರು ನಾಲ್ವರು. ಒಂದು ದಿಕ್ಕಿನಲ್ಲಿ ಬಲ್ಲಾಳನೇ ಇದ್ದಾನೆ. ಉಳಿದ ಮೂರು
ದಿಕ್ಕುಗಳಲ್ಲಿ ಮೂವರು ರಾಜರಿದ್ದಾರೆ. ಇವರಲ್ಲದೆ ಅರೆ ಎಂದರೆ ಕೆಲವು (ಅರೆ
ಎಡೆ ಹಸ್ತಿ ಶಿಕ್ಷಣ ವಿಚಕ್ಷಣ‌ರ್ ಎಂಬಲ್ಲಿ ಬರುವ ಅರೆ ಎಂಬುದಕ್ಕೆ ಕೆಲವು
ಎಂಬುದೇ ಅರ್ಥ) ರಾಜರು ಬೇರೆ ಇದ್ದಾರೆ. ಇವರು ಹೆಸರಿಗೆ ಮಾತ್ರ ರಾಜರು.
೯. ಶ್ರೇಷ್ಠ ಕವಿಗಳಲ್ಲಿ ಪರಮೇಶ್ವರನಂತಿದ್ದಾನೆ. ಎಷ್ಟು ಮಂದಿ ಕಲಾನಿಪುಣರು
ತಮ್ಮ ನೈಪುಣ್ಯವನ್ನು ತೋರಿಸಿದರೂ, ಜನ್ನನು ಬೆರಳೆತ್ತಿ ನಿಂತು ಅವರನ್ನು
ಮೀರಿಸಬಲ್ಲವನಾಗಿದ್ದನೆಂದು ಭಾವ.
೧೦. ಯಾದವ ರಾಜಚ್ಛತ್ರ-ಯಾದವರಾಜರ ಛತ್ರದ ಕೆಳಗೆ ಇರುವವನು;
ಅವನ ಆಶ್ರಿತನು.

೧೧. ಸುಮನೋಬಾಣನೆಂದರೆ ಕಾಮ; ಭಾಳಲೋಚನನೆಂದರೆ ಶಿವ.
ಶಿವನು ಕಾಮನನ್ನು ಸುಟ್ಟನೆಂದು ಪೌರಾಣಿಕ ಕಥೆ. ಆದರೆ ಇಲ್ಲಿ
ಸುಮನೋಬಾಣನಿಗೆ ಭಾಳಲೋಚನನು ಮಗನಾಗಿರುವುದು ವಾಣೀ


೧೨೨

ಯಶೋಧರ ಚರಿತೆ

ಪಾರ್ವತಿಯರ ಪ್ರೀತಿಯ ಪ್ರಭಾವದಿಂದ ಎಂದು ತಾತ್ಪರ್ಯ.
೧೨. ಬುಧ ಎಂಬುದಕ್ಕೆ ವಿದ್ವಾಂಸನೆಂದೂ ದೇವನೆಂದೂ ಅರ್ಥವಿದೆ.
ಅಮೃತದ ಕಡಲನ್ನು ಕಡೆದಾಗ ಅದರಿಂದ ಕಲ್ಪವೃಕ್ಷವೇ ಮುಂತಾದ ಸುವಸ್ತುಗಳು
ಮೇಲಕ್ಕೊಗೆದವು. ದೇವತೆಗಳು ಅವುಗಳನ್ನು ಪಡೆದು ನಿರಂತರ ಸುಖವನ್ನು
ಪಡೆಯುತ್ತಾರೆ. ಹಾಗೆಯೇ ಈ ಕಥೆ ಇತಿಹಾಸವೆಂಬ ಕಡಲಲ್ಲಿ ಹುಟ್ಟಿದೆ;
ಕಲ್ಪವೃಕ್ಷದಂತಿದೆ; ರಸವತ್ತಾಗಿದೆ. ಇದರಿಂದ ಬಲ್ಲವರು ಸುಖವನ್ನು ಪಡೆಯುತ್ತಾರೆ.
೧೩. ಚಾಂದ್ರಾಯಣ-ಇದು ಒಂದು ವ್ರತದ ಹೆಸರು. ಚಂದ್ರನ ವೃದ್ಧಿ
ಕ್ಷಯಗಳ ಪ್ರಕಾರ ಆಹಾರಸೇವನೆಯನ್ನು ಹೆಚ್ಚು ಕಡಮೆ ಮಾಡಿಕೊಳ್ಳುವುದು
ಇದರಲ್ಲಿರುವ ಕ್ರಮ.
೧೪. ಅರುಣೋದಯವಾಗುವಾಗ ಹಬ್ಬುವ ಹೊಂಬಣ್ಣದಂತೆ
ಜಿನಾಲಯದ ಮಾಣಿಕ್ಯದ ಕಲಶಗಳು ರಾತ್ರಿಯಲ್ಲೂ ಹೊಂಬಣ್ಣವನ್ನು ಹಬ್ಬಿಸಿ
ರಾತ್ರಿಯನ್ನು ಹಗಲಿಗಿಂತಲೂ ಮಿಗಿಲಾಗಿ ಬೆಳಗಿಸುತ್ತವೆ. ಹಾಗೆಯೇ ಅಲ್ಲಿನ
ಉನ್ನತವಾದ ಧ್ವಜ ಕೇತುಗಳು ಬಹಳ ಮೇಲಕ್ಕೇರಿ(ಕೇತು)ಗ್ರಹದ ಒಡನಾಟವನ್ನು
ಪಡೆದು ಸೂರ್ಯಮಂಡಲವನ್ನು ಅಪಹಾಸ್ಯ ಮಾಡುತ್ತವೆ. ಸೂರ್ಯನನ್ನು
ಕೇತು ನುಂಗುವುದೆಂದು ಕಲ್ಪನೆ. ಅಂತಹ ಕೇತುವಿನೊಡನೆ ಈ ಕೇತುಗಳು
ಮೈತ್ರಿಯನ್ನು ಪಡೆದಿವೆ ಎಂದರೆ ಇಲ್ಲಿನ ಧ್ವಜಗಳು ಬಹಳ ಎತ್ತರದಲ್ಲಿ ಶೋಭಿಸುತ್ತವೆ
ಎಂದು ತಾತ್ಪರ್ಯ.
೧೫. ವಸಂತದ ಚೈತ್ರಮಾಸವು ಬಂದಾಗ ಶುಕ್ಲಪಕ್ಷದಲ್ಲಿ ಚಂದ್ರನು
ಮೂಡಿಕೊಂಡು ಬರುತ್ತಾನೆ; ಅಶೋಕದ ಮರವು ಚಿಗುರಿ ಕೆಂಬಣ್ಣವನ್ನು
ಹಬ್ಬಿಸುತ್ತದೆ ; ಕೋಗಿಲೆಗಳು ಕೂಗತೊಡುಗುತ್ತವೆ. ಪ್ರಕೃತಿಯ ಈ ಸ್ಥಿತಿಯನ್ನೇ
ಕವಿ ಅಲಂಕಾರಿಕವಾಗಿ ಬಣ್ಣಿಸುತ್ತಾನೆ. ದೇವತೆಯ ತೃಪ್ತಿಗಾಗಿ ಪ್ರಾಣಿಗಳನ್ನು
ಬಲಿಕೊಡುವಾಗ ಕೆಲವನ್ನು ತಲೆಗೆ ಗಾಳಹಾಕಿ ತೂಗಾಡಿಸುವುದು, ಕೆಲವನ್ನು
ಬೆಂಕಿಯಲ್ಲಿ ಹಾಕಿ ಸುಡುವುದು(ಇದಕ್ಕಾಗಿ ಬೆಂಕಿಯನ್ನು ಸಿದ್ಧಪಡಿಸುವುದು)
ಗಟ್ಟಿಯಾಗಿ ಆರ್ಭಟಿಸುವುದು ನಡೆಯುತ್ತವೆ. ಇವುಗಳನ್ನು ಅನುಕ್ರಮವಾಗಿ ಇಲ್ಲಿ
ಸೂಚಿಸಲಾಗಿದೆ.

೧೬. ವಸಂತದಲ್ಲಿ ಮುತ್ತುಗಗಳು ಹೂಬಿಡುತ್ತವೆ. ಮಾವಿನ ಮರಗಳೂ
ಹೂ ಬಿಡುತ್ತವೆ. ಮಾವಿನ ಮರಗಳ ಬಳಿಯಲ್ಲೇ ಮುತ್ತುಗದ ಹೂಗಳು
ಉದುರಿಬಿದ್ದುದನ್ನು ಕಾಣುವಾಗ ವಸಂತನು ತನ್ನ ಹಿಂದೆ ಅರಸುತನ ಮಾಡುತ್ತಿದ್ದ
ಶಿಶಿರ (ಚಳಿಗಾಲ) ವನ್ನೆ ಹಿಡಿದು, ಆ ಶಿಶಿರನ ಅಂಗಾಂಗಗಳನ್ನು ಕೊಚ್ಚಿ ಆ

ಟಿಪ್ಪಣಿಗಳು

೧೨೩

ಮಾಂಸವನ್ನು ಈ ರೀತಿ ಹರಕೆಯೊಪ್ಪಿಸಿದನೋ ಎಂಬಂತೆ ಭಾಸವಾಗುತ್ತದೆ
ಎಂದು ಕವಿ ಇಲ್ಲಿ ಉತ್ಪ್ರೇಕ್ಷಿಸುತ್ತಾನೆ.
೧೮. ಚೈತ್ರದಲ್ಲಿ ಗಿಳಿಗಳು ಕೂಗುವುದೂ, ತೆಂಕಣಗಾಳಿ ಬೀಸುವುದೂ
ತಾವರೆಗಳು ಅರಳುವುದೂ ಸಹಜ. ಈ ತಾವರೆಗಳು ಕೆಂಪು ಬಣ್ಣದವುಗಳಾಗಿದ್ದು
ಉರಿಯುವ ಕೆಂಡಗಳಂತೆ ತೋರುತ್ತವೆ. ದೇವಿಯ ಸೇವೆಯನ್ನು ಮಾಡುವಲ್ಲಿ
ಕೆಂಡದ ಮೇಲೆ ನಡೆಯುವುದೇ ಮುಂತಾದ 'ಕೆಂಡಸೇವೆ'ಗಳು ರೂಢಿಯಲ್ಲಿವೆ.
ಈ ದಕ್ಷಿಣಾನಿಲನು ತಾವರೆಗಳ ಕೊಳಗಳನ್ನು ಹಾದು ಬರುವುದನ್ನು ಕವಿ ಈ
ರೀತಿ ವರ್ಣಿಸಿದ್ದಾನೆ.
೧೮. ಕತ್ತಿಯಿಂದ ಕಡಿದುಕೊಳ್ಳುವುದು, ಬೆಂಕಿಯಲ್ಲಿ ನಲಿದಾಡುವುದು
ಮುಂತಾದವು ಕರಾವಳಿಯ ದೈವಾರಾಧನೆಗಳಲ್ಲಿವೆ.
೧೯. ಗಮನ ಪ್ರಾಯಶ್ಚಿತ್ತ-ನಡೆದುಕೊಂಡು ಹೋಗುವಾಗ ಕಣ್ಣಿಗೆ ಕಾಣದ
ಪ್ರಾಣಿಗಳು ತಮ್ಮ ಕಾಲಡಿಗೆ ಬಿದ್ದು ಸತ್ತಿರಬಹುದೆಂದೂ ಈ ಹಿಂಸೆಯ ಪಾಪ
ತಮ್ಮಿಂದ ತಿಳಿಯದೆ ನಡೆದಿರನಹುದಾದರೂ ಇದಕ್ಕೆ ಪ್ರಾಯಶ್ಚಿತ್ತವಾಗಿ
ಉಪವಾಸವನ್ನು ಕೈಗೊಳ್ಳಬೇಕೆಂದೂ ಇದೆ. ಇದಕ್ಕೆ ಗಮನ ಪ್ರಾಯಶ್ಚಿತ್ತ ಎಂದು
ಹೆಸರು.
೨೦. ಸುದತ್ತಾಚಾರ್ಯರ ನಾಮೋಚ್ಚಾರಮಾಡಿದರೆ ಆ ವ್ಯಕ್ತಿಗೆ ಮುಂದೆ
ಜನ್ಮವನ್ನು ಪಡೆದು ತಾಯಿಯ ಮೊಲೆಹಾಲನ್ನು ಕುಡಿಯುವ ಪ್ರಸಂಗವೇ ಇಲ್ಲದೆ
ಮೋಕ್ಷ ಪ್ರಾಪ್ತಿಯಾಗುವುದು ಎಂದು ಒಂದರ್ಥವಾದರೆ, ಎಳೆಯಮಗು ಸಹ
ಸುದತ್ತಾಚಾರ್ಯರ ಹೆಸರು ಹೇಳಿದರೆ ಆ ನಾಮೋಚ್ಚಾರದ ಸವಿಯಿಂದಾಗಿ
ತಾಯಿಯ ಮೊಲೆಹಾಲನ್ನೂ ಬಯಸಲಾರದು ಎಂಬುದು ಇನ್ನೊಂದರ್ಥ.
೨೧. ಪರೀಷಹ-ತಾನಾಗಿಯೇ ಬರುವ ಇಪ್ಪತ್ತೆರಡು ಬಗೆಯ ಕ್ಲೇಶಗಳು.
ಅವುಗಳು ಈ ಕೆಳಗೆ ಕೊಟ್ಟವುಗಳು: ಶೀತ, ಉಷ್ಣ, ಕ್ಷುತ್, ಪಿಸಾಸೆ, ಅರತಿ,
ಕ್ರಿಮಿಬಾಧೆ, ನಗ್ನತ್ವ ಚರ್ಯೆ, ನಿಷಧ್ಯಾ, ಸ್ತ್ರೀ, ಶಯ್ಯಾರೋಗ, ಅಲಾಭ, ಯಾಚ್ನಾ,
ಆಕ್ರೋಶ, ವಧೆ, ತೃಣ, ಸ್ಪರ್ಶ, ಮಲ, ಪ್ರಜ್ಞೆ, ತಿರಸ್ಕಾರ, ಪುರಸ್ಕಾರ, ಅಜ್ಞಾನ.

೨೨. ಕೋಡು ಬರುವುದು ಪ್ರಾಣಿಗಳು ಬೆಳೆದಾಗ. ಹಾಗೆಯೇ ಕೋಡು
ಬರು ಎಂಬುದಕ್ಕೆ ಮಹತ್ವವುಂಟಾಗು, ಎಂಬುದು ಭಾವಾರ್ಥ.
೨೩. ಹೊಲದಲ್ಲಿ ಆಡಿದಂತೆ ಒಮ್ಮೆ ಸಂತೋಷವು ಕಾಣುವುದು, ಒಮ್ಮೊಮ್ಮೆ
ಮದ್ದು ಸೇವಿಸಿದಂತೆ ಕಹಿಯಾಗುವುದೂ ಪ್ರತ್ಯಕ್ಷವಾಗಿದೆಯೆಂದು ಅಭಿಪ್ರಾಯ.
೨೪. ಮೂರಿ ಎಂಬುದಕ್ಕೆ ಗೂಳಿ, ಕೋಣ, ಬಾಯಿ ಎಂದೂ, ಕತ್ತಿಯೆಂದೂ

೧೨೪

ಯಶೋಧರ ಚರಿತೆ

ಅರ್ಥಮಾಡುತ್ತಾರೆ. ಅದಕ್ಕೆ ಉತ್ಪಾತ ಎಂಬರ್ಥವೂ ಆಗಬಹುದೆಂದು
ಹೇಳುವವರೂ ಇದ್ದಾರೆ.
೨೫. ಭರತಖಂಡದ ಮಧ್ಯರೇಖೆ ನರ್ಮದಾನದಿ. ಈ ನದಿಯ ಉತ್ತರಕ್ಕೆ
ಆರ್ಯಾವರ್ತವಿದ್ದರೆ, ದಕ್ಷಿಣಕ್ಕೆ ದಕ್ಷಿಣಾಪಥವಿದೆ. ಧರ್ಮವು
ಆರ್ಯಾವರ್ತದಲ್ಲಿದ್ದಂತೆ ದಕ್ಷಿಣಾಪಥದಲ್ಲಿಲ್ಲವೆಂಬ ಅಭಿಪ್ರಾಯವು ಹಿಂದೆ
ಆರ್ಯಾವರ್ತದವರಲ್ಲಿದ್ದಿರಬಹುದು. ಅಯೋಧ್ಯೆಯಲ್ಲಿ ಈ ಘಟನೆ ನಡೆಯುವ
ಸಂಧರ್ಭದಲ್ಲಿ ಈ ಮಾತು ಬರುವುದರಿಂದ ಧರ್ಮಾಸಕ್ತಿ ಮಾರಿದತ್ತನಿಂದ
ದೂರವಾಗಿದೆಯೆಂದು ತಾತ್ಪರ್ಯ. ಅಯೋಧ್ಯೆಯಿಂದ ನರ್ಮದೆ ಬಹಳ
ದೂರದಲ್ಲಿರುವುದರಿಂದ ಅರಸನು ಈ ರೀತಿ ಧರ್ಮದೂರನಾಗಿದ್ದಾನೆಂದು
ಹೇಳುವುದೂ ಇರಬಹುದು.
೨೬. ಚಂದ್ರೋದಯವಾಗುವಾಗ ಕತ್ತಲೆಯೂ ತೊಲಗುತ್ತದೆ; ತಾವರೆಗಳಿಂದ
ಭ್ರಮರಗಳೂ ತೊಲಗುತ್ತವೆ. ಏಕೆಂದರೆ ಅವು ಆಗ ಮುಚ್ಚಿಕೊಳ್ಳುತ್ತವೆ. ಇಲ್ಲಿ,
ರಾಜನಿಗೆ ಅಭಯರುಚಿಯ ಮಾತು ಕೇಳುತ್ತಿದ್ದಂತೆ ಪಾಪ ಪರಿಹಾರವಾಗಿ,
ಅವನ ಕೈಗಳು ತಾವಾಗಿಯೇ ಮುಗಿದುಕೊಂಡವು. ಅವನು ಅಭಯರುಚಿಗೆ
ಕೈಮುಗಿದನು ಎಂದು ಭಾವ.
೨೭. ಕಾಲಲಭ್ಧಿ-ಪಕ್ಷತೆಯನ್ನು ಪಡೆಯುವ ಕಾಲ; ಒಳ್ಳೆಯ ಕಾಲ
ಬಂದೊದಗುವುದು. ಆಗ ಸ್ವಾಭಾವಿಕವಾಗಿ ಕೆಡಕುಂಟಾಗದು.
೨೮. ಭವ್ಯರು ಎಂದರೆ ರತ್ನತ್ರಯ (ಸಮ್ಯಗ್ಜ್ಞಾನ, ಸಮ್ಯಗ್ಧರ್ಶನ ಮತ್ತು
ಸಮ್ಯಕ್ಚಾರಿತ್ರ್ಯ)ದಿಂದ ಪರಿಣತನಾಗುವ ಜೀವಿ. ಇಲ್ಲಿ ಮಾರಿದತ್ತನು ಭವ್ಯ, ಅವನೇ
ಪ್ರಭು ಎಂದರೆ ಅರಸನು. ಅವನು ಕೂಡಿಸಿದ ಸಭೆಯಾದುದರಿಂದ ಅದು ಭವ್ಯ
ಪ್ರಭು ಸಭೆ. ಇಲ್ಲಿ ಇನ್ನೊಂದು ರೀತಿಯಲ್ಲೂ ಅರ್ಥ ಹೇಳುತ್ತಾರೆ: ಭವ್ಯರಿಗೆಲ್ಲ
ಅರಸನಂತೆ ಶ್ರೇಷ್ಠನಾದವನು ಮಾರಿದತ್ತ. ಅವನ ಸಭೆಯೇ ಭವ್ಯಪ್ರಭುಸಭೆ.
೨೯. ಯಶೌಘನು ಚಂದ್ರಮತಿಯನ್ನು ಅಂಗರಕ್ಷಕರಂತೆ ನೋಡಿ
ಕೊಳ್ಳುತ್ತಿದ್ದನೆಂದೂ, ಅವನ ಸಂತುಷ್ಟ ಚಿತ್ರವೇ ಆಭರಣವೆಂಬಂತೆ ಅವಳು
ಗ್ರಹಿಸುತ್ತಿದ್ದಳೆಂದೂ ಆಕೆಗೆ ರಾಜಲಕ್ಷ್ಮಿಯೇ ಒಡನಾಡಿಯಾಗಿದ್ದಳೆಂದೂ ಇದರ
ಭಾವ. ಇಲ್ಲಿ ಅರಸಿತವನ್ನು ಮೆರೆಯಿಸುವಾಗ ರಾಣಿಗೆ ಬೇಕಾದ ಅಂಗರಕ್ಷಕರ,
ಆಭರಣಗಳ, ಜತೆಗಾರರ ಪ್ರಸ್ತಾಪವಿರುವುದನ್ನು ಅಲಂಕಾರಿಕವಾಗಿ ಹೇಳಲಾಗಿದೆ.
೩೦. ಕಾಮನಿಗೆ ಕಬ್ಬೇ ಬಿಲ್ಲೆಂದೂ ಆ ಬಿಲ್ಲೆಗೆ ಎಳೆಯ ಮೊಗ್ಗೆಗಳೇ

ಟಿಪ್ಪಣಿಗಳು

೧೨೫

ಕಟ್ಟಿದ ಹಗ್ಗವೆಂದೂ ಅದರಿಂದ ಹೊರಹೊಮ್ಮುವ ಬಾಣವು ಎಲ್ಲ ಜನರ
ಮನಸ್ಸನ್ನೂ ಮೋಹಗೊಳಿಸುವುದೆಂದೂ ಪ್ರಸಿದ್ಧಿಯಿದೆ. ಯಶೋಧರನು
ಜನರಿಗೆಲ್ಲ ಅತ್ಯಂತ ಮೋಹಕನಾಗಿದ್ದನೆಂದು ಅಭಿಪ್ರಾಯ.
೩೧. ದೀವ ಎಂದರೆ ಒಂದು ಬಗೆಯಲ್ಲಿ ದೀಪ ಎಂಬುದರ ತದ್ಭವವೆನ್ನ
ಬಹುದು. ದೀಪವು ಪತಂಗಗಳನ್ನು ಆಕರ್ಷಿಸುತ್ತದೆ; ಅನಂತರ ಕೊಲ್ಲುತ್ತದೆ.
ಹಾಗೆಯೇ ಕಾಡಿನ ಪ್ರಾಣಿಗಳನ್ನು ಆಕರ್ಷಿಸಲು ಬೇರೆ ಪ್ರಾಣಿಗಳನ್ನು ಬಳಸುತ್ತಾರೆ.
ಇದಕ್ಕೆ ದೀವಗಳೆಂದು ಹೆಸರು. ಇಲ್ಲಿ ಯಶೋಧರನು ಅಮೃತಮತಿಯಿಂದ
ಆಕರ್ಷಿತನಾಗಿದ್ದಾನೆ; ಮುಂದೆ ಕೊಲೆಯಾಗುತ್ತಾನೆ ಎಂಬ ಸೂಚನೆಯಿದೆ.
೩೨. ಮನೆಗೆ ಉಡು ಅಥವಾ ಕಾಡು ಪಾರಿವಾಳ ಪ್ರವೇಶಿಸಿದರೆ ಆ
ಮನೆಯಲ್ಲಿ ವಾಸಮಾಡುವವರಿಗೆ ಅನಿಷ್ಟವು ಸಂಭವಿಸುತ್ತದೆ ಎಂದು ಹಿಂದಿನಿಂದ
ಜನ ನಂಬಿದ್ದಾರೆ. ಅದರಂತೆ ಆ ಮನೆಯನ್ನು ಬಿಟ್ಟು ತೊಲಗುತ್ತಾರೆ. ಇಲ್ಲಿ
ಯಶೌಘನ ಮುಖವೆಂಬ ಅರಮನೆಗೆ ನರೆಯೆಂಬ ಪಾರಿವಾಳವು ಹೊಕ್ಕಿದೆ
ಎಂದರೆ ಅವನ ಮುಖದಲ್ಲಿ ನರೆಗೂದಲು ಕಾಣಿಸಿದೆ. ಆದುದರಿಂದ ಆ ಮುಖದಲ್ಲಿ
ಹೆಂಗಸರ ಕಡೆಗೆ ದೃಷ್ಟಿ ಹಾಯಿಸುವಿಕೆ ಎಂಬ ಅರಸನು ಉಳಿಯಲು ಸಾಧ್ಯವಿಲ್ಲ.
ಎಂದರೆ ವಯಸ್ಸು ಮೀರಿದಾಗ ಇಂದ್ರಿಯಾಕರ್ಷಣೆಗೆ ಒಳಗಾಗುವುದು ಸರಿಯಲ್ಲ.
ಹೀಗೆಣಿಸಿ ಯಶೌಘನು ಇಂದ್ರಿಯಾಕರ್ಷಣೆಗಳನ್ನು ತ್ಯಜಿಸಿದನು.
೩೩. ತಂದೆಯ ನಲ್ಲೆಯನ್ನು ಮಗನು ಕೂಡಿಕೊಂಡನೆಂದರೆ ಅವನು
'ತಾಯಿ ಗಂಡ'ನೆನಿಸುತ್ತಾನೆ. ಅಂತಹ ಕೆಟ್ಟ ನಡತೆಯವನ ಒಡನಾಟದಲ್ಲಿರುವುದೂ
ಕೆಟ್ಟದೇ. ಈ ಎಣಿಕೆಯಿಂದ ಯಶೋಧರನ ಕೀರ್ತಿ ದಿಗಂತಗಳವರೆಗೂ-
ಬಹುದೂರ-ಹೋಯಿತಂತೆ.
೩೪. ಯಶೋಧರನು ತನ್ನ ತೇಜಃಪ್ರಭಾವದಿಂದ ಬೇರೆ ರಾಜರನ್ನು
ಸೋಲಿಸಿದನು. ಆ ಅರಸರು ಭೂಮಿಗೆ ಪತಿಗಳೆನ್ನಿಸಿ (ಗಂಡಗಾಳಿಕೆಯಿಂದ)
ಇದ್ದರು. ಹೀಗೆ ಹಲವರು ಪತಿಗಳಾಗಿದ್ದುದರಿಂದ ವಸುಂಧರೆ (ಭೂಮಿ)
ನಿಸ್ತೇಜಳಾಗಿದ್ದಳು. ಅವಳಿಗೀಗ ಯಶೋಧರನ ತೇಜಸ್ಸಿನಿಂದ ತೇಜಸ್ಸು ತುಂಬಿತು.
ಅವಳು ಅವನಲ್ಲಿ ಅನುರಾಗವನ್ನು ತೋರಿಸಿದಳು. ಯಶೋಧರನು ವಸುಂಧರೆಗೆ
ಒಬ್ಬನೇ ಪತಿಯೆನ್ನಿಸಿದನು.

೩೫ ಇಲ್ಲೆಲ್ಲ ಸಂಗೀತ ಶಾಸ್ತ್ರಕ್ಕೆ ಸಂಬಂಧಪಟ್ಟ ಪರಿಭಾಷೆಗಳಿವೆ. ಝಂಪೆ
ಎಂಬುದು (ನೃತ್ಯ ಪ್ರಬಂಧದಲ್ಲಿ) ಕುಣಿತಕ್ಕೆ ಹೆಚ್ಚಾಗಿ ಉಪಯೋಗಿಸುವ ತಾಳ;
ಐದು ಮಾತ್ರೆಗಳುಳ್ಳುದು. (೨+೩x೨=೧೦; ೨+೨+೩+೩=೧೦;

೧೨೬

ಯಶೋಧರ ಚರಿತೆ

೨+೩+೩+೨=೧೦; ೩+೨x೨=೧೦ ಮಾತ್ರೆಗಳು) ಠಾಯ ಎಂದರೆ ಪ್ರಬಂಧ
ವಿಶೇಷ. ಚಾಳೆಯ ಎಂದರೆ ಒಂದ ಬಗೆಯ ಕುಣಿತದ ಗತಿ.
ಮಾಳವ (ಶ್ರೀ)ಸಿರಿ ಎಂಬುದು ದೇಶೀರಾಗ; ಖರಹರಪ್ರಿಯ ಜನ್ಯವೆಂದು
ಮಾರ್ಗಸಂಗೀತದಲ್ಲಿ ನಿರ್ದೇಶಿತವಾಗಿದೆ. ಲಾಲಿತ್ಯ ಪೂರ್ಣವಾದ ಹಾಸ್ಯ ಶೃಂಗಾರ
ಮುಂತಾದ ಭಾವಗಳನ್ನು ಪ್ರಕಟಿಸುವುದರಿಂದ ಇದಕ್ಕೆ 'ರಕ್ತಿರಾಗ” ಎಂದು
ಹೆಸರು.
ಗ್ರಹ (ಗ್ರಾಹ) ಎಂದರೆ ತಾಳದಲ್ಲಿ ಗೀತ (ಪ್ರಬಂಧ) ಆರಂಭವಾಗುವ
ವಿವಿಧ ರೀತಿಗಳು.
೩೬. ತಾಳಕಾಯ ಎಂಬುದಕ್ಕೆ 'ತಾಳೆಯ ಮರದ ಕಾಯಿಯ' ಎಂದು
ಅರ್ಥ ಮಾಡಿದರೆ ಮೋಳಿಗೆ ಎಂಬುದಕ್ಕೆ 'ಖಾಯಿಗಳುಳ್ಳ ಗೊನೆ' ಎಂದು
ಅರ್ಥ ಹೇಳಬಹುದು. ಆಗ ತಾಳೆಯ ಕಾಯಿಯ ಗೊನೆಯಂತೆ ಅವನು
ಮುರುಡನಾಗಿದ್ದಾನೆ, ಎಂದು ಹೇಳಬೇಕು.
೩೭. ಕಣ್ಣಿಗೆ ಎದುರಾಗಿ ಮೊದಲಾಗಿ ಕಾಣಿಸಬಹುದಾದುದು ಮೂಗಿನ
ತುದಿ. ಅಲ್ಲಿಯೇ ಕಾಮಿನಿಯರು ಪರಪುರುಷರೊಡನೆ ಕಾಮಕೇಳಿಕೆಯನ್ನು
ಆಡುತ್ತಾರೆ. ಅಧಿಕಾರದ ಹಿರಿಮೆ, ರೂಪದ ಮೇಲ್ಮೆ, ಹಾಗೂ ಸೌಭಾಗ್ಯದ
ಮಹತ್ವಗಳು ಕಾಮಿನಿಯರನ್ನು ತಮ್ಮ ವಶದಲ್ಲಿಟ್ಟುಕೊಳ್ಳುವ ಸಾಧನಗಳೆಂದು
ದುರಹಂಕಾರ ಪಡುವವರೂ ಅವರಿಂದ ವಂಚಿತರಾಗುತ್ತಾರೆ ಎಂದು ತಾತ್ಪರ್ಯ.
೩೮. ಇಲ್ಲಿ ಬರುವ ಮಾತುಗಳನ್ನು ಯಶೋಧರನು ಆಡಿದನು ಎಂದು
ಹೇಳುವವರು ಇದ್ದಾರೆ. ಆದರೆ 'ಮಾರಿಗೇ ತೃಪ್ತಿ' ಎಂಬಂತಹ ಮಾತು ಅವನಿಂದ
ಬರುವುದಕ್ಕಿಂತ ಮಾರಿದೇವತೆಯ ಆರಾಧಕನಾದ ಮಾರಿದತ್ತನ ಬಾಯಿಂದ
ಬರುವುದು ಒಳ್ಳೆಯದೆಂದು ತೋರುತ್ತದೆ.
೩೯. ತುಂಬಿ ಎಂಬುದು ಕಾಮುಕತೆಗೆ ಸಂಕೇತವಾಗಿದೆ. ಅಮೃತಮತಿ
ಮಧುಕರಿಯಂತೆ ಕಾಮವೃತ್ತಿಯಲ್ಲಿದ್ದಾಗ, ಅವಳಿಗೆ ವಿರುದ್ಧವಾಗಿ ಕಾಣಿಸಿದವನು
ಯಶೋಧರ. ಅವನು ಸಂಪಗೆಯಂತೆ ಸುಂದರನಾಗಿದ್ದರೂ ಅವಳಿಗೆ
ವಿಷಪ್ರಾಯನಾದನು ಎಂಬುದು ಭಾವ.

೪೦. ಯಶೋಧರನು ಧರಿಸಿಕೊಂಡಿರುವ ಮುತ್ತಿನ ಹಾರ ಅವನ
ವಿಶಾಲವಾದ ತೆಗಲೆಯಲ್ಲಿ ಶೋಭಿಸುವುದೆಂದೂ, ಆ ಹಾರದಲ್ಲೇ ಲಕ್ಷ್ಮೀದೇವಿ
ಉಯ್ಯಾಲೆಯಾಡುವಳೆಂದೂ ಹಾಗೆ ಉಯ್ಯಾಲೆಯಾಡಲು ಅನುಕೂಲವಾದ
ವಸಂತವೇ ಆತನ ಉರಸ್ಥಳವೆಂದೂ ಇಲ್ಲಿ ಹೇಳಲಾಗಿದೆ. ಎಂದರೆ ಯಶೋಧರನ


ಟಿಪ್ಪಣಿಗಳು

೧೨೭

ಎದೆಯ ಮೇಲೆ ಸದಾ ಲಕ್ಷ್ಮೀಕಾಂತಿ, (ರಾಜ್ಯಲಕ್ಷ್ಮಿ ಅಥವಾ ಐಶ್ವರ್ಯಲಕ್ಷ್ಮಿ)
ಶೋಭಿಸುವಳೆಂದು ಭಾವ.
ಯಶೋಧರನ ಸ್ತುತಿಪಾಠಕರ ಮನೆಯಂಗಳದಲ್ಲಿಯೂ ಲಕ್ಷ್ಮಿ
ವಿಹರಿಸುತ್ತಾಳೆಂದರೆ ಯಶೋಧರನ ಔದಾರ್ಯದಿಂದ ಸ್ತುತಿಪಾಠಕರೂ
ಐಶ್ವರ್ಯವಂತರಾಗಿದ್ದಾರೆಂದು ತಾತ್ಪರ್ಯ.
೪೨. ಯಶೋಧರನು ಕಾಮನಂತೆ ಸುಂದರ. ಅಬಲಾ ಜನರು ಕಾಮನ
ಉದ್ಯಾನದಲ್ಲಿ ಬೆಳೆಯಿಸಿದ ಕಲ್ಪಲತೆಗಳು. ಯಶೋಧರನ ವಿಲಾಸ ಸಂಧರ್ಭದಲ್ಲಿ
ಸ್ವಭಾವತಃ ಚೆಲುವಿನ ಬಿಂಕದಿಂದ ಬಾಗಿರುವ ಹೆಂಗಸರು ಬಹಳ
ಸಂತೋಷಗೊಳ್ಳುತ್ತಾರೆ. ಕಾಮನಂತೆ ಯಶೋಧರನಿದ್ದರೆ ಸ್ತ್ರೀಯರು ಅವನ
ಪೋಷಣೆಯಲ್ಲಿ ವಿಲಾಸವತಿಯರಾಗಿ ಅವನ ವಿಲಾಸ ಸಂದರ್ಭದಲ್ಲಿ
ಅತ್ಯಾನಂದದಿಂದ ಅವನೊಡನೆ ಕೂಡಿಕೊಳ್ಳುತ್ತಾರೆಂದು ಅಭಿಪ್ರಾಯ.
೪೩. ವೈರಿಗಳನ್ನು ಕೊಂದು ಅವರ ಹೆಂಡಿರು ಬಳೆ ತೊಡದಂತೆ
ಮಾಡುವನೆಂದು ಇಲ್ಲಿ ಹೇಳಲಾಗಿದೆ. ಅವರು ಕಳಚಿದ ಬಳೆಗಳನ್ನು ಕೀರ್ತಿಯೆಂಬ
ತಿಗ್ಗಜದ ಮರಿಯ ದಾಡೆಗೆ ತೊಡಿಸಲಾಗಿದೆ ಎಂದರೆ ಅವನ ಕೀರ್ತಿ ದಿಗಂತದವರೆಗೆ
ಹಬ್ಬಿದೆ. ಆನೆಗಳ ದಾಡೆಗಳಿಗೆ ಬಳೆಗಳನ್ನು ಅಲಂಕಾರಕ್ಕಾಗಿ ತೊಡಿಸುವ ಪದ್ಧತಿ
ಇಂದಿಗೂ ಇದೆ.
೪೪. ರಾಜರನ್ನೆಲ್ಲ ಸೋಲಿಸಿ ಅವರು ಯಶೋಧರನ ಆಜ್ಞೆಯನ್ನು
ಶಿರಸಾವಹಿಸುವಂತೆ ಮಾಡಿದ್ದಾನೆಂದು ತಾತ್ಪರ್ಯ.
೪೫. ನೀರು ಎಂಬುದಕ್ಕೆ ಕಾಂತಿ ಎಂದೂ ಜಲವೆಂದೂ
ಎರಡರ್ಥವಿರುವುದನ್ನು ಇಲ್ಲಿ ಸಮರ್ಪಕವಾಗಿ ಬಳಸಲಾಗಿದೆ. ಯಶೋಧರನ
ದೇಹದ ನೀರು (=ಕಾಂತಿ) ಓಡಿದೆ; ಅದು ನೀರು (=ಜಲ) ಓಡಿದ (=ಒಣಗಿದ)
ಕೊಳದಂತಾಗಿದೆ, ಎಂದು ಇಲ್ಲಿ ಅರ್ಥ.
೪೬. ಗೋಧಾಮೆಯೆಂದರೆ ಏನೆಂದು ಸರಿಯಾಗಿ ಗೊತ್ತಿಲ್ಲ. ನವಿಲಿಗೆ
ಆಗದ ಯಾವುದೋ ಪ್ರಾಣಿ. ಗೋಧಿಯ ಬಣ್ಣದ ಹಾವೇನಾದರೂ ಇರಬಹುದೋ
ಏನೋ !

೪೭. ಹಂಸಗಳು ಮಳೆಯ ಬಿರುಸನ್ನು ತಡೆಯದೆ ಮಾನಸ ಸರೋವರಕ್ಕೆ
ಹೋಗುತ್ತವೆಯಂತೆ. ಹಾಗೆಯೇ ವಿರಹಿಗಳಿಗೆ ಹೂಬಿಟ್ಟ ಬಳ್ಳಿಯನ್ನು ಕಂಡರೆ
ಸಂತಾಪ ಹೆಚ್ಚಾಗುವುದಂತೆ.


೧೨೮

ಯಶೋಧರ ಚರಿತೆ

೪೮. ಅಮಂಗಲ ವಿನಾಶ ಎಂಬುದಕ್ಕೆ ಅಮಂಗಲದ ಪರಿಹಾರವೆಂಬ
ಒಂದು ಅರ್ಥವಾದರೆ ಅಮಂಗಲದಿಂದ ಬಂದೊದಗುವ ವಿನಾಶ ಎಂಬುದು
ಇನ್ನೊಂದು ಅರ್ಥ. ಯಶೋಧರನಿಗೆ ಈ ಎರಡನೆಯ ಅರ್ಥವಾಯಿತು.
೪೯. ಆಸ್ರವ ಎಂದರೆ ಶುಭಾಶುಭ ಕರ್ಮಗಳ ಆಗಮನ
ಎಂಬರ್ಥವಾಗಬಹುದು.
೫೧. ಕಾಡಿನ ಜಿಂಕೆಗೆ ಬಲೆಬೀಸಿ ಬಾಣವನ್ನು ಬಿಟ್ಟು ಅದನ್ನು
ಕೆಡಹಾಕುವಂತಾಯಿತೆಂದು ಇಲ್ಲಿ ಹೇಳಲಾಗಿದೆ. ಪಾಪಿಗಳ ವಂಚನೆಯೇ ಕಣ್ಣು
ಕಾಣದ ಕಾಡು; ಆತ್ಮವೇ ಸಾಧುವಾದ ಜಿಂಕೆ. ಯಶೋಧರನ ಆತ್ಮ ತಾಯಿಯ
ಮಾತಿನ ಬಲೆಗೆ ಬೀಳಬೇಕಾಯಿತು. ಅವನು ಕೈಗೊಂಡ ಹಿಂಸೆ ಬಾಣವಾಯಿತು
ಎಂದು ರೂಪಿಸಲಾಗಿದೆ.
೫೨. ಜೀವಶ್ರಾದ್ಧವೆಂದರೆ ಜೀವಂತವಾದ ಪ್ರಾಣಿಯನ್ನೇ ಅಡುಗೆ ಮಾಡಿ
ಅದನ್ನು ಬಡಿಸಿ ಶ್ರಾದ್ಧಮಾಡುವುದು ಎಂಬರ್ಥವಿರಬಹುದು.
ಇದೇ ಪ್ರಕರಣದಲ್ಲಿ ಮೂಲದಲ್ಲಿ 'ಉಳಿದ ಕಡೆ ಜೀವಮೇರುತ್ತಿರಿಯುತ್ತಿರೆ'
ಎಂದಿರುವುದಕ್ಕೆ 'ಯಶೋಧರನ ಜೀವವು ಬೇರೊಂದು ಕಡೆ ಏರುತ್ತಾ ಇಳಿಯುತ್ತಾ
ಇರಲು...' ಎಂದು ಅರ್ಥ ಹೇಳುತ್ತಾರೆ. ಆದರೆ ಯಶೋಧರನ ಜೀವವೇ ಇಲ್ಲಿ
ಮೀನಿನ ರೂಪದಲ್ಲಿ ಒದ್ದಾಡುವುದರಿಂದ ಹಾಗೆ ಹೇಳುವುದು ಉಚಿತವೆನಿಸದೆಂದು
ತೋರುತ್ತದೆ.
೫೩. ಕಷ್ಟಗಳಿಗೆ ಕೋಡು ಮೂಡುವುದೆಂದರೆ ಕಷ್ಟಗಳು ಬೆಳೆದು
ದೊಡ್ಡಗಾಗುವುದು ಎಂದರ್ಥ.
೫೪. ನೀರು ಕುಡಿಯಲು ಬಂದುದು 'ಜಾಯಿಲಮರಸನ ಪಸಾಯಿತಂ'
ಎಂದು ಮೂಲದಲ್ಲಿದೆ. ಇದಕ್ಕೆ ರಾಜನ ಜಾತ್ಯಶ್ವವು ನೀರು ಕುಡಿಯಲು ಬಂದುದು
ಎಂದ ಅರ್ಥ ಹೇಳುತ್ತಾರೆ. ಆದರೆ ಜಾಯಿಲ ಎಂಬುದಕ್ಕೆ ಜಾತ್ಯತ್ವ
ಎಂಬರ್ಥವಿರುವುದೆ?

ಮುಂದೆ 'ಅಶ್ವಮಹಿಷನ್ಯಾಯಂ ನಿಲೆ' ಎಂಬ ಮಾತು ಬರುತ್ತದೆ. ಇದಕ್ಕೆ
'ಕುದುರೆಗೂ ಕೋಣಕ್ಕೂ ಹುಟ್ಟುಹಗೆ ಎಂಬ ನ್ಯಾಯವುಳಿಯುವಂತೆ' ಎಂದು
ಅರ್ಥ ಹೇಳಬೇಕಾಗಿದೆ. ಇಲ್ಲಿ ಒಂದು ಪ್ರಾಣಿ ಕೋಣವೇ ಆದುದರಿಂದ
ಇನ್ನೊಂದು ಅಶ್ವವೇ ಆಗಿರಬೇಕೆಂಬ ಅನುಮಾನದಿಂದ ಹಾಗೆ
ಅರ್ಥಮಾಡಿದುದಿರಬಹುದು. ಆದರೆ ಯಶೋಮತಿ ಬೇಟೆಗಾಗಿ ಐನೂರು
ನಾಯಿಗಳನ್ನು ಸಾಕಿಟ್ಟುಕೊಂಡಿದ್ದನೆಂದು ಮುಂದೆ ಬರುವುದರಿಂದ ಇಲ್ಲಿ ಅರಸನ

ಟಿಪ್ಪಣಿಗಳು

೧೨೯

ಮೆಚ್ಚಿನ ನಾಯಿ ನೀರು ಕುಡಿಯಲು ಹೋಯಿತೆಂದೂ ಆಗ ಅಶ್ವಮಹಿಷ
ನ್ಯಾಯದಂತೆ ಕೋಣವು ಅದನ್ನು ಕೊಂದಿತೆಂದೂ ಹೇಳಿದರೆ ದೋಷವೇನು?
೫೫. ಕೇಸರವೆಂದರೆ ಪುಷ್ಪರಾಗ, ಹೂವಿನ ಮಧ್ಯದ ತಂತು, ಹೊಂಬಣ್ಣ
ಎಂಬರ್ಥವಾಗುತ್ತದೆ. ಇಲ್ಲಿ ಕೋಳಿ ಹೊಂಬಣ್ಣದಿಂದ ಶೋಭಿಸಿತು ಎನ್ನುವುದು
ವಿಹಿತವೆ? ಸಣ್ಣ ಗರಿಗಳು ಹೂವಿನ ತಂತುಗಳಂತಿದ್ದುವು ಎಂದರೂ ತಪ್ಪಲ್ಲ.
ಕೂರ್ಪು ಎಂದರೆ ಪರಾಕ್ರಮ, ತೀಕ್ಷ್ಣತೆ ಎಂಬರ್ಥಗಳಿವೆ. ತ್ಯಾಗಿ (ದಾನವನ್ನು)
ಕೊಟ್ಟು ಶೋಭಿಸುತ್ತಾನೆ; ಹುಂಜಕ್ಕೆ ತೊಟ್ಟು (ತಲೆಯ ಜುಟ್ಟು) ಶೋಭಿಸುತ್ತದೆ.
ರಾಧೆ ಒಂದು ಪಕ್ಕಕ್ಕೆ ಬಾಗಿದ ಮುಡಿ ಕಟ್ಟಿದಂತೆ ಕೋಳಿಯ ಜುಟ್ಟು ಒಂದು
ಪಕ್ಕಕ್ಕೆ ಬಾಗಿದೆ. ಚಂದ್ರನು ಶುಕ್ಲ ಪಕ್ಷ ಮತ್ತು ಕೃಷ್ಣ ಪಕ್ಷಗಳಲ್ಲಿ ರಂಜಿಸಿದಂತೆ
ಕೋಳಿ ಎರಡು ಪಕ್ಷ ಎಂದರೆ ರೆಕ್ಕೆಗಳಿಂದ ರಂಜಿಸುತ್ತದೆ. ಸುವಸ್ತುಗಳು ಹೇಂಟೆ
(ಪೇಂಟೆ - ಪೇಟೆ)ಯಲ್ಲಿ ಸುವಸ್ತುಗಳು ಸೇರಿಸುತ್ತದೆ. ಹಾಗೆಯೇ ಹುಂಜ
ಹೇಂಟೆಯಲ್ಲಿ ಸೇರಿದೆ.
ಈ ರೀತಿ ಶ್ಲೇಷೆಯಿಂದ ಹುಂಜವನ್ನು ವರ್ಣಿಸಿದ್ದಾನೆ ಕವಿ.
೫೬. ಹುತ್ತದೊಳಗೆ ಯಾವುದಾದರೂ ಇರುವುದೆಂದು ಹೇಳಿಕೆ. ಹಾಗೆಯೇ
ಸನ್ಯಾಸಿಗಳಲ್ಲಿ ಏನಾದರೂ ಮಹತ್ವವಿರುತ್ತದೆ ಎಂದು ಭಾವ.
೫೭. ಅಸನ್ನಭವ್ಯ ಎಂದರೆ ಭವ್ಯವಾಗುವ ಸ್ಥಿತಿಗೆ ಸವಿಾಪಿಸಿದವನು.
ಭವ್ಯ ಎಂಬುದಕ್ಕೆ ಟಿಪ್ಪಣಿಯ ೨೮ನೆಯ ಸಂಖ್ಯೆ ಮುಂದೆ ನೋಡಿಕೊಳ್ಳಬಹುದು.
ಅವಧಿಜ್ಞಾನ ಎಂದರೆ ದ್ರವ್ಯ, ಕ್ಷೇತ್ರ ಕಾಲ ಮತ್ತು ಭಾವ ಇವುಗಳಿಂದ
ಮರ್ಯಾದಿತವಾದ ಪದಾರ್ಥಗಳನ್ನು ಮತ್ತು ಕರ್ಮಬದ್ಧ ಜೀವಿಗಳ ಅನೇಕ
ಭವಗಳನ್ನು ತಿಳಿದುಕೊಳ್ಳುವ ಜ್ಞಾನ.
೫೮. 'ರತ್ನತ್ರಯಗಳಲ್ಲಿ ಸ್ಥಿರವಾಗಿ ಪ್ರಾಣತ್ಯಾಗ ಮಡುವ ಕ್ರಮ' ಎಂದರೆ
ಧ್ಯಾನ ಮಾಡುತ್ತಿರುವಂತೆ ಪ್ರಾಣ ಕಳೆದುಕೊಳ್ಳುವಿಕೆ.
೫೯. ಹೂದೋಟದಲ್ಲಿ ಬಳ್ಳಿಯನ್ನು ನೆಟ್ಟು ನೀರೆರೆದು ಚಪ್ಪರಕ್ಕೆ ಹಬ್ಬಿಸುವಂತೆ
ಇಲ್ಲಿ ಯಶೋಧರನು ದಾನ ಮಾಡುತ್ತ ದಯಾಪರನಾಗಿ ಜಿನಮತದಲ್ಲಿ
ಸಂತೋಷದಿಂದಿದ್ದು ಕೀರ್ತಿ ಕುಸುಮವನ್ನು ಅರಳಿಸಿದನು ಎಂದು ತಾತ್ಪರ್ಯ.

೬೦. ಯಶಸ್ಸು ಬೆಳ್ಳಗಿದೆಯೆಂದು ಕವಿಸಮಯ. ಈ ಯಶಸ್ಸಿಗೆ
ಉಪಮಾನವಾಗಿ ಅನೇಕ ಶುಭವಸ್ತುಗಳ ಹೆಸರನ್ನು ಹೇಳಲಾಗಿದೆ. ತಾರಾ-
ಬೆಳ್ಳಿ ; ಅಥವಾ ನಕ್ಷತ್ರ ಧರಾಧರ-ಪರ್ವತ)-ಬೆಳ್ಳಿಯ ಬೆಟ್ಟ. ತಾರಾ ಎಂದು
ಮಾತ್ರ ಇಟ್ಟುಕೊಂಡರೆ ಇಲ್ಲಿಯೂ ನಕ್ಷತ್ರ ಅಥವಾ ಬೆಳ್ಳಿ ಎನ್ನಬಹುದು. ತಾರಾಧರ

ಎಂದಿದ್ದರೆ ಚಂದ್ರ ಎನ್ನಬಹುದು . ದರತಾರಹಾರ ಎಂದಾದರೆ ಸಣ್ಣ ಮುತ್ತಿನ
ಮಾಲೆ ಎನ್ನಬಹುದು . ಈ ಭಾಗದಲ್ಲಿ ಬೇಕಾದಂತೆ ಅರ್ಥ ಹೇಳುವ ಸಾಧ್ಯತೆಯಿದೆ .

ಕವಿಗೆ ಯಶೋಧರ ಎಂಬ ಹೆಸರೂ ಕವಿತಿಲಕ ಎಂಬ ಹೆಸರೂ ಇಲ್ಲಿ
ಬರಬೇಕಾಗಿದೆ. ಆದುದರಿಂದ ಇಂತಹ ಪ್ರಯೋಗ ಇಲ್ಲಿದೆ.ಕವಿಶ್ರೇಷ್ಠನು ನಿರ್ಮಲ
ಕೀರ್ತಿಯನ್ನು ಪಡೆದಿದ್ದಾನೆ' ಎಂದು ಹೇಳಬಹುದು.

ಶಬ್ದಕೋಶ


[ಮೊದಲನೆಯ ಸಂಖ್ಯೆ ಅವತಾರವನ್ನೂ ಎರಡನೆಯದು ಪದ್ಯವನ್ನೂ ಸೂಚಿಸುತ್ತವೆ.]

ಅಗುಂದಲೆ 1 ೧೬ ಬಹಳ ಹೆಚ್ಚು
ದೇಹ ಅಗುತ್ 2 ೧೧ ಅಗೆ ತೋಡು
ಅಗೆವೊಯ್ 4 ೪ ಚಿಗುರು
ಅಗ್ಗ , 3 ೬೮ ಶ್ರೇಷ್ಠ
ಅಡಗು 1 ೩೭ ಮಾಂಸ ಅಗ್ಗಳ 4 ೪೨ ಶ್ರೇಷ್ಠ
ಅಡರ್‌ 2 ೫೫ ತಾಗು, ಅಗ್ಗಳಿಕೆ 4 ೮೭ ಶ್ರೇಷ್ಠ
ಮೇಲೇರು

ಅಘ 1 ೬೭ ಪಾಪ
ಅಡಸು 3 ೧೨ ಸೇರು, ಮುತ್ತಿ ಅಂಕುರಿಸು 2 ೨೦ ಮೊಳಕೆಬರು
ಅಂಗಚ್ಛವಿ 3 ೩೬ ದೇಹಕಾಂತಿ
ಅಡಿವಂತಿಕೆ 1 ೩.೭ ಕೆಳಮಂಚ ಅಂಗಜಾತ 2 ೪ ಕಾಮ
ಅಡಿಸು ; ೫೦ ಅಡಿಗೆ ಮಾಡಿಸು" ಅಂಗಿ 4 ೧೭ . ಅಂಗಗಳು
ವನು, ದೇಹಿ
ಅಡು | ೫೪ ಬೇಯಿಸು ಅಡೆಯೊತ್ತು 4 ೨೨ ಬಲವಾಗಿ ಅಚ್ಚರಿ 1 $೫ ಆಶ್ಚರ್ಯ
ಭದ್ರಪಡಿಸು ಅಚ್ಚಿ 4 ೧೫ ಕಣ್ಣು, ಅಕ್ಷೆ] ಅಣಂ 4 ೩೨ ಸ್ವಲ್ಪವೂ ಅಜಗರ್ಭಿಣಿ 3 ೫೫ ಬಸಿರಾದ ಆಡು
ಅಣಕ ೨ ೬೮ ಸೋಗು ಅಜ ಪೋತ 3 ೬೧ ಆಡಿನ ಮರಿ
ಅಣುವ್ರತ 4 ೩೨ ಕಳವು, ಕೊಲೆ ಅಜರಜಸಿ 3 ೫೯ ಆಡಿನ ರಜಸ್ಸಿ
ನಲ್ಲಿ
ಮುಂತಾದುವನ್ನು ಮಾಡದ ವ್ರತ ಅಜೆ3 ೫೪ ಹೆಣ್ಣಾಡು
ಅಣು 1 ೨೦ ಸಾಹಸ, ಅಂಚೆ 3 ೯ ಹಂಸೆ
ಹೆಣ್ಣು ಹಂಸ
ಪ್ರಯತ್ನ ಮಾಡು | ಅದಟ 1 ೧೫ ವೀರಪರಾಕ್ರಮಿ ಅಟ್ಟಿಸು: 3 ೭೦ ಕಳುಹಿಸು
ಆಧರ 3 ೮ ತುಟಿ

ಅಡಕು 3 ೧೫ ರಾಶಿ ಹಾಕು,ಬಿಸಾಡು

೧೩೨

ಯಶೋಧರ ಚರಿತೆ

ಅನಂಗ

2 ೬೨

ಕಾಮ

ಅನಿತು

1 ೧೪

ಅಷ್ಟು

ಅನಿಮೇಷ

3 ೫೩

ಮೀನು

ಅನುಜ

4 ೬೭

ತಮ್ಮ

ಅನುಜೆ

4 ೬೭

ತಂಗಿ

ಅನ್ನೆಗಂ

1 ೬೫

ಅಷ್ಟರಲ್ಲಿ

ಅನ್ವಯ

1 ೬

ವಂಶ

ಅಂತವರಂ

2 ೧೫

ಆವರೆಗೆ

ಅಪ್ಪುಕಮ್ 3 ೨೨ ಅಂಗೀಕರಿಸು ಅಬ್ಬ 2 ೭೧ ತಾವರೆ ಅಬ್ಬೆ ೧ ೫೭ ತಾಯಿ, ಅಮ್ಮ (ಇಲ್ಲಿ ನಾರಿ) ಅಭಿದಾನ 4 ೪೧ ಹೆಸರು ಆಭಗಜ 2 ೨೧ ಆಕಾಶದ ಆನೆ, ಐರಾವತ ಅಭ್ರವು 2 ೨೧ ಐರಾವತದೊಡ ನಿರುವ ಹೆಣ್ಣಾನೆ ಅಮರ್ 2 ೨೯ ಸೇರಿಕೊಳ್ಳು ಅನುರ್ದಪ್ಪು 2 ೭೨ ಆಲಂಗಿಸುಗಟ್ಟಿಯಾಗಿ ಅವಳದೃಷ್ಟಿ ! ೨೬ ಸಮ್ಯಕ್ಷರ್ಶನ ಅವಳ ೪೯ 4 ೪೦ ಜತೆ, ಎರಡು ಅವಳಂಬ ೨ ೮ ಜತೆ ಕಂಬ, ಎರಡು ಕಂಬ ಅಮೋಘ 3 ೪೬ ಹಾಳಾಗದ ಅಂಬರ 2 ಆ ಆಕಾಶದ ಹೊಳೆ, ತರಂಗಿಣಿ ದೇವಗಂಗೆ

ಅಂಬಾಚರಿ 3 ೪೨ಹಿಂದಣಜನ್ಮದಲ್ಲಿತಾಯಾಗಿದ್ದವಳು ಅಂಬಿಕೆ 3 ೧೬ ತಾಯಿ ಅಂಬು 3 ೬.೧ ನೀರು ಅಂಬುಜ 4 + ತಾವರೆ ಅಂಭೋಜ ೬೧ ತಾವರೆ ಅವಲಂಬ 2 ೧೯ ಹೂವೆ ಬಾಣ ವಾಗಿರುವವನು, ಕಾಮ ಅರಿ 3 ೬೧ ಕತ್ತರಿಸು ಆರಿದು 3 ೩೩ ಅಸಾಧ್ಯ ಅರುಣವಣಿ | ೩೨ ಕೆಂಪು ರಮ್ಮ ಅರೆಬಳಿ 4 7 ಅರೆದು ಬಳಿ, ಚೆನ್ನಾಗಿ ಲೇಪಿಸು ಅಜಸು 1 ಇ ಹುಡುಕು ಅಜಿ 2 ೩೬ ತಿಳಿ ಆಕೆ ! ೪೩ ತಿಳುವಳಿಕೆ, ಅಜುನೀರ್ 3 ೬ ಆರಿದ ನೀರ ಅರ್ಕಾಡು 4 ೨೪ ನಾಶವಾಗು ಆರ್ತಿ | ೬೧ ಪ್ರೀತಿ ಅರ್ದಳೊ 3 ೬೪ ಮುಳುಗಿದಳೊ . ಆಲಂ 3 ೧೭ ದಾಟಬಾರದು ನೀಯ. ಅಲಂಪು 2 ೬೭ ಪ್ರೀತಿ, ಅಲರ್ ೪ - ೫ ಅರಳು ________________

ಶಬ್ದಕೋಶ ೧೩೩

ಅಲರ್ಗ೦ಪು 2 ೬೭ ಹೂವಿನ | ಅಳವಡು 2 ೧೭ ಸೇರಿಕೊಳ್ಳು, ಪರಿಮಳ | ಅಳವು 1 ೧೮ ಸಾಮರ್ಥ್ಯ; ಅಲರ್ಗುಡಿ 4 ೨ ಹೂವಿನ ತುದಿ ಅಲರ್ವೊಗು | ೩೭ ಹೂ ಬಿಡ | ಅಳಿವು 2 ಈ೬ ಆಸೆ, ಪ್ರೀತಿ ಆಲವರು 4 ೩೨ ಆಸೆಪಡು | ಬುರ್ 2 ೧೬ ವ್ಯಾಪಿಸು, ಅಲಸು 3 ೫೬ ಆಯಾಸಗೊಳ್ಳು ಅಸಹ್ಯಪಡು | ಅಳುಕ್ಕೆ 2 ೭೧ ಹುಬ್ಬುಗೆ ಅಲೆ 1 ೧೬ ಸಂಚರಿಸು, | ಎಳ್ಳು. 4 ೭೬ ಹೆದರು - ಪೀಡಿಸು | ಅಲಿಸು ! ೬೫ ದುಃಖಗೊಳಿಸು ಅವಧರಿಸು 2 ೫೬ ಲಕ್ರಕೊಡು, | ಆಚೆ 3 ೪೪ ಸಾಯು 04 4 ೩೩ ಕೊಲ್ಲು ಅವಧಾರಿಸು ! &೮ ಗಮನ ಕೊಡು | ಅಗಣೆ 2 ೩೮ ಹಾಳಾದ ಹಣ ಅವಧಿ 4 ೧೬ ೩೧ನಭಿಜ್ಞಾನ, | ಆ೨೦ಬ 1 ೧೫ ಹೆಚ್ಚು ಒಂದು ಬಗೆಯ | ಅಟ್ಕರ್‌ 2 ೭೧ ಪ್ರೀತಿ, ಅಕ್ಕರೆ ದಿವ್ಯ ಜ್ಞಾನ | ಅಲ್ಲ 4 $೬ ಮುಳುಗಿದಳು ಆವನಿ | ೬೨ ಅವಲಗ್ನ 2 ೩೫ ಸೇರಿದ | ಆಖ್ಯಾನ 1 ೪ ಕಥೆ: ಹೇಳಿಕೆ ಅವಳೊಕಿಸು1 ೫೬ ನೋಡು| ಆಗ 3 ೧೩ ಆಗದು ಆವಿಕು4 ೧೬ ಖಚಿತವಾಗಿ | | ಆಗಮ 4 ೩೦ ಶಾಸ್ತ್ರ ಅಸಿಮುಖ 3 ರು ಖಡ್ಡದ ಬಾಯಿ | | ಆಗರ ! ೨೦ ಆಶ್ರಯ, ನೆಲೆ ಅಸಿಯಳ್' ? 8೩ ತೆಳುದೇಶ | ಆತೋದ್ಯ 2 ೬೨ ವಾದ್ಯ ವುಳ್ಳವಳು| ಆತ್ಮಜ 3 ೬೧ ಅಸಿಲತೆ ? ೫೫ ಲತೆಯಂತಹ | ಅಂದೆಗೆ 4 ೧೫ ಗೂಗೆ. ಖಡ್ಗ ಅಂದೋಳ 3 ೨೨ ಉಯ್ಯಾಲೆ ಆಸು 1 ೫೬ ಜೀವ, ಪ್ರಾಣ | ಅಪೊತ್ತುಂ 1 ೩೪ ಯಾವಾಗಲೂ ಅಸುಕ 1 ೩೬ ಅಶೋಕ | ಆಪೋಶಿಸು ; ೫೧ ಊಟಕ್ಕಿಂತ ಅಳಕ 4 ೮ ಮುಂಗುರುಳು ಮೊದಲು ಕಾಗೂ ________________

ಯಶೋಧರ ಚರಿತೆ ಊಟದ ಅನಂತರ | ಆಸ್ವಾದನ ೨ ೪೫ ಸವಿಯುವಿಕೆ ಮಂತ್ರಪೂರ್ವಕ | ಆಳತಿ ೨ ೩೧ ಹಾಡುವಿಕೆ ವಾಗಿ ಅಂಗೈಯಲ್ಲಿ | ಆಹಾ 1 ೧೪ ಮೊಂಡುತನ ನೀರುಹಾಕಿ ಕುಡಿ | ಆಮಿಷ 2 3 ಆಸೆ, ಭೋಗ | ಇಕ್ಕು 3 ೨೦ ಕೆಡಹು, ಕೊಲ್ಲು ಆವುತಿ ಕ 4 ೩.೩ ಪರಲೋಕ | ಇನಿತು 4 ೭೦ ಇಷ್ಟು, ಮುಕ್ತಿ | ಇಂದು 2 ೪ ಚಂದ್ರ ಆಮೂಲ | ೬೫ ಬುಡದಿಂದ | ಇನ್ನರ್‌ | ೬೧ ಇಂಥವರು. ಚೂಲ ತುದಿಯವರೆಗೆ | ಅಂಬಿಡು 1 ೨೮ ತುಂಬಿಸಿಡು, ಆಯ | ೨೦ ಸಾಮರ್ಥ್ಯ, ಶೇಖರಿಸಿಡು ಯೋಗ್ಯತೆ, | ಇಂಬುಕಯ | ೬೪ ಮೆಚ್ಚು ರುಚಿಸು ಆದಾಯ | ಇಜ 1 ೧೨ ಕುತ್ತು, ತಿವಿ ಆಯತಿ 4 ೪೫ ದರ್ಪ, ಶಕ್ತಿ] ಇಜುಂದೆ 2 ೫೪ ಇರುವೆ ಆರ್ 3 ೭೮ ಕೂಗು | ಇಷ 1 ೩೫ ಆಶ್ವಿಜಮಾಸ ಆರ್ಭಟಿಸು| ಇಸು 3 ೫೬. ಬಾಣವೆಸೆ ಆಯೋಗಿಸು 3 ೩೧ ಊಟ ಪಾಡು | ಇಳಾಕಾಂತ 2 ೧ ಭೂಮಿಯೆಂಬ ಆವಹನ 3 ೬ ಬರಿಸುವಿಕೆ ಅಪೇಕ್ಷಿತ ಮೃತ 2 ೬೬ ತುಪ್ಪನೋಡಿ| ಇಳಿಕ 2 ೪೨ ಹೀನಯಿಸು ಆಸನ 3 ೭೦ ಸೃಷ್ಣದ್ವಾರ, | ಇಳಿದಾಗು 2 ೪೫ ಕಡಮೆಯಾಗು ಆ ಕುಂಡೆ | ಇಳೇಶ 3 ೪೫ ಭೂಪತಿ,ರಾಜ ಆಸನ್ನಭವ್ಯ 4 ೧೬ ಜೈನಧರ್ಮ ಇಟಿ 2 ೪೫ ಕುಗ್ಗು ಸ್ವೀಕಾರಕ್ಕೆ ಇವು 2 ೧೦ ಇಳಿಸು ಹೊರಿಸು ಸಮೀಪಿಸಿದವನು]

  • ಆಸ್ಪೃಷ್ಟಕ 2 ೬೬ ಹಸು ಮುಟ್ಟಿ ಈಕ್ಷಣ 2 ೪೧ ಕಣ್ಣು

ಈಡಾಡು 1 ೫೨ ಕಳೆದೊಗೆ ಆಸ್ಯ 2 ೧ ಮುಖ| ಈ ದೊರೆ 1 ೩೭ ಹೀಗಿರುವವನು ಆಗ್ರವ 3 ೨೧ ಕರ್ಮಸೇರುವಿಕೆ ಯನ್ ________________

ಶಬ್ದಕೋಶ ೧೩೫ ಈಶಾನಕಲ್ಪ 4 ೭೯ ಎರಡನೆಯಸ್ವರ್ಗ | ಉಭಯ 1 ೪೨ ಎರಡು ಈ 3 ೫ ಎಳೆ | ಉರಗಿ 3 ೪೬ ಹೆಣ್ಣ, ಹಾವು ಉರುಪು 3 ೬೯ ಉರಿಸು ಉಕ್ಕಡ 2 ೨೭ ಗಡಿಯ ಠಾಣೆ | ಉಕ್ಕು 4 ೪೪ ಪರಾಕ್ರಮ,ಕೆಚ್ಚು ಉಗಿ 4 ೨೦ ಹೊರಕ್ಕೆ ತೆಗೆ | ಉರ್ಚು 1 ೫೫ ಹೊರಗೆಳೆ, ಕೀಳು ಉಗು 2 ೭೧ ಉಕ್ಕಿ ಬರು| ಉರ್ವತೆ 1 ೫೬ ಭೂಮಿ ಉಗ್ಗಡಿಸು 3 ೨೪ ಗಟ್ಟಿಯಾಗಿ ಹೇಳು| ಉರ್ವೀ 4 ೪೮ ಭೂಪತಿ ಉಚ್ಚಳಿಸು 2 ೨೦ ಮೇಲಕ್ಕೆ ನೆಗೆ| ರಮಣ ಉಜ್ಜಳಿಕೆ 4 ೮೩ ಸುಪ್ರಕಾಶ | ಉಲಿ 2 ! ಉಡಿ 4 ೫ಳ ತುಂಡುಮಾಡು ಉಣು 3 ೨೬ `ಉಂಟಾಗು| ೧೪೯ 3 ೫೨ ಕೂಗು,ಬೊಗಳು ಉತ್ಕರ್ಷ 1 ೨೭ ಮೇಲುಮುಟ್ಟದ ಎ ಉತ್ತರೋ 4 ೮೬ ಹೆಚ್ಚಿನ ಮೇಲೆ| ಎಚ್ಚನೆ 3 ೫೫ ಜಾಣಾಸೆದನು

೩೧ ಲೆದಾಡು ಉದಧಿ : ೫. ಸಮುದ್ರ | ಎಡೆವಗಲ್ | ೨೯ ಮಧ್ಯಾಹ್ನದ ಉದರ 3 ೩೪ ಹೊಟ್ಟೆ, ಬಸಿರು

ಹಿಂದುಮುಂದು ಉದ್ದಾರ ? ೩೩ ಓಕರಿಕೆ ಹೇಸಿಕೆ | ಎಡೆವೊಗು 4 ೪೮ ನಡುವೆ ಬರು ಉದ್ದೀಪನ } ೩೪ ಉರಿಸುವ ಸವಿಾಪಿಸು ಉದ್ದುರ 2 ೧೪ ತಡೆಯಿಲ್ಲದ ಎಣೆ 1 ೧೩ ಸಮಾನ ಉದ್ಯತ 3 ೨೯ ಎಂಟು ದಿಕ್ಕು ಉದ್ವೇಗ 4 ೬೨ ಮನಸ್ಸಿನ ತಳಮಳ | ಎನಿತು 1 ೧೪ ಎಷ್ಟು ಉಸ್ಮಿಲನ | ೧೦ ಅರಳುವಿಕೆ | ಎನ್ನಂ 4 ೩೦ ಎಂಥವನು ಉಂತೆ 2 ೫ ಸುಮ್ಮನೆ| ಎವೆ 2 ೨೬ ಕಣ್ಣರೆಪ್ಪೆಯ ಉಪಾ 4 ೨೭ ಸ್ವೀಕಾರಯೋಗ್ಯ

  • ರೋಮ ದೇಯ

ಎಯ್ಯ ಮೃಗತಿ ೪೫ , ಮುಳ್ಳು ಹಂದಿ ಉಪಾಯನ : ೩೮ ಕಾಣಿಕೆ | ಎಯರ್ } ೧೬ ಬರು ಸಮೀಪಿಸು ಉಟ್ಟೆಗೆ 3 ೩೯ ಉದ್ವೇಗ, ತಳಮಳ | ಎರವಿಗೆ 2 ೪೪ ಬೇಡಿಕೆಯನ್ನು ಪಡೆ ________________

೧೩೬ ಯಶೋಧರ ಚರಿತೆ ಎಲ್ಲಕ 1 ೨ ನಮಸ್ಕಾರ | ಒಟ್ಟು , 2 ೬೩ ರಾಶಿಹಾಕು ಎಜಗು 1 ೪ ನಮಸ್ಕರಿಸು| ಒಡರಿಸು 4 ೭೬ ಉಂಟುಮಾಡು ಎರ್ಮಾಯ

  • | ಒಡರ್ಚು 1 ೧ ಉಂಟುಮಾಡು - ಪೋರಿ 3 ೫೬ ಕೋಣ | ಒಪ್ಪಂ 4 ೭೨ ಎಲುವು 4 ೧೯ ಎಲುಬು, ಮಳೆ | ಬಡೆ ಸೊಗಸಾಗು ಎಸಕ 1 ೧೬ ಕಾರ್ಯಶೋಭೆ | ಒಯ್ಯನೆ 2 ೫೭ ಮೆಲ್ಲನೆ ಎಸಗು 2 ೬೫ ತೊಡಗುತ ರಡು | ಒರೆಗೆ 1 (೨ ಸರಿಸಮಾನತೆಗೆ ಎಸೆ | ೨೮ ಶೋಭಿಸು | ದೊರೆಗೆ ಎಸೆ 4 ೬೨ ಬಾಣ ಬಿಡು | ಒಟ 2 ೩೮ ಜೊಲ್ಲೊ ಸರುವ ಎಳವೆಜಿ 1 ೩೬ ಎಳೆಯ ಚಂದ್ರ | ವಾಯ್

ಬಾಯಿ ಎಬಿಲ್ 1 ೫೫ ತೂಗಾಡು | ಒರ್ಮೊದಲೆ 1 ೩೫ ಒಮ್ಮೆಲೆ ಎರ" 3 ೨೩ ಬರು | ಒಲವು 2 ೪೩ ಪ್ರೀತಿ, ಮೆಚ್ಚಿಕೆ ಒಲೆ 3 ತೂಗಾಡು ಏದೊರೆ ಒಸೆ 1 1 ಮೆಚ್ಚು ಯನ್ 4 ೨೭ ಯಾವ | ಓಳರ್ 3 ೧೯ ಇದ್ದಾರೆ ಈ ಬಗೆಯವನು | ಒಳಲು 1 ೫೬ ಅರಚು, ಕೂಗು ಏನ 4 ೬೭ ಪಾಸ| ಒಳವೆ 1. ೪೯ ಇದೆಯೆ ? ವಯ್ 3 ೫೬ ಗಾಯ, ಹೊಡೆತ | ಒಟ್ಟು 3 ಐ ಒಳ್ಳೆಯದು ಏವುದು 1 ೪೯ ಏನು ಪ್ರಯೋ ಜನ ? ವ್ಯರ್ಥ | ಓಘ 1 ೬೬ ಪ್ರವಾಹ, ರಾಶಿ ಏಹಿ 3 ೪೬ ಬಾ | ಓಜೆ 4 ೬೬ ರೀತಿ, ಕ್ರಮ ಓಪಳ ; ೬೫ ಪ್ರಿಯೆ, ನಲ್ಲೆ ಐಹಿಕ 4 ೩೩ ಈ ಲೋಕಕ್ಕೆ | | ಓರಗೆ 1 ೧೩ ಸಮಾನತೆ ಸಂಬಂಧಿಸಿದುದು | ಓರಂತೆ 4 ೬೪ ಒಂದೇ ಸಮನೆ

ಓಲಾಡು 4 ೨೯ ಈಜಾಡು, ತೊನೆ ಒಚ್ಚತ 3 ೭೪ ಮೆಚ್ಚಿಕೆ, ಸುಖಕರ |

ದಾಡು ________________

ಶಬ್ದಕೋಶ ೧೩೭ 1 ಓಂ ಖಡ್ಗ ಗಿ ಓವು 3 ೭೩ ಪ್ರೀತಿಸು | ಕರವಾಳ್ 1 ೬೧ ಓಸರಿಸು 2 ೬೯ ಹಿಂಜರಿ | ಕರಹಟ 3 ೩೮ ಒಂದು ಊರ ಹೆಸರು ಕಟಾಕ್ಷ 4 ೫೬ ಕಡೆಗಣ್ಣನೋಟ | ಕರಿ 2 ೧೩ ಆನೆ ಕಣ್ 4 ೫ ಕುಡಿಯೊಡೆಯುವ| ಕರುನಾಡ 2 ೨೭ ಉಪ್ಪರಿಗೆ ಮನೆ - ಸ್ಥಳ; (ಬಳ್ಳಿಗಿಡಗಳಲ್ಲಿ) | ಕಣದೊವಲ್ 2 ೩೯ ಕಪ್ಪು ಚರ್ಮ ಕಣೆ 2 ೪೧ ಬಾಣ | ಕಲಾಸಿಪಿ - 3 ೩೪ ಹೆಣ್ಣು ನವಿಲು ಕಣೆಗೊ೪ 3 ೧೯ - ಬಾಣಹಿಡಿ, | ಕಲ್ಪಕುಜ 1 - 5೫ - ಕಲ್ಪವೃಕ್ಷ - ಕೊಲ್ಲು ಕೇಳಿದುದನ್ನು ಹಣ್ಣಮ್ 2 ೨೫ ನಿದ್ರಿಸು ಕೊಡುವ ಮರ ಕಂಟಕ 4 ೪೩ ಮುಳ್ಳು,ಅಡ್ಡಿ | ಕವಚಹರ 2 ೧೦ ಕವಚ ಕೊಡುವ ಕತಕಬೀಜ 2 ೨೮ ನೀರನ್ನು ವಯಸ್ಸಿಗೆ ಬಂದ ಶುದ್ಧಿ ವನು, ಪ್ರಾಯಕ್ಕೆ ಕರೀಸುವ ಬೀಜ | ಬಂದವನು ಕತಿಸಯ 2 ೬೬ ಕೆಲವು | ಕವಿ 3 ೩೫ ಮುತ್ತು, ಕದಂಬ 4 ೭೨ ಸಮೂಹ | ಆಕ್ರಮಿಸು ಕನಲ್ 2 ೫೩ ಉರಿ, | ಕಳ್ಳ 3 ೭೪ ಹೆಂಡ

  • ಕೊಪಿಸು | ಕಳಭ 3 ೪ ಆನೆಯಮರಿ ಕಂತು 2 ೩೬ ಕಾಮ | ಕಳಹಂಸ 1 ೩೧ ಉತ್ತಮ ಕಂಡು 2 ೫೫ ಕಾಂತಿಕುಗ್ಗು.

ಜಾತಿಯ ಹಂಸ ಕಂಪೋತ ಪಕ್ಷ 2 ೧೯ ಪಾರಿವಾಳದ | ಕಲ್ 4 ೩೮ ಕಳಚು,ಬೀಳು ಚುರಿತ ರೆಕ್ಕೆಯ ಬಣ್ಣದಂತೆ | ಕಜಿಲ್ಲಾವರೆ 3 ೯ ಹೀನವಾದ * ಕಂದುಬಣ್ಣ ಸೇರಿದ | ತಾವರೆ ಕಯು 2 ೬೯ ಆಯುಧ | ಕಟಿ _3 ೧೮ ತೊಲಗಿಸು ಕರಂ 1 ೬೧ ಬಹಳ, ಹೆಚ್ಚು | ಕಟಿ 4 ೫೬ ಸಾಯು ಕರಣತತಿ 4 ೧೩ ಇಂದ್ರಿಯ | ಕೆಂಪು 2 ೬೩ ತ್ಯಾಜ್ಯ - ಸಮೂಹ | ಕಟಿಯಣ್ 3 ೫ ಮಿತಿಮೀರಿ ________________

Qass ಯಶೋಧರ ಚರಿತೆ ಊಟ | ಕುನ್ನಿ 4 ೪೪ ನಾಯಿ. ಮಾಡು | ಕುರಂಗ 3 $೮ ಕಾಣೈ 3 ೧೦ ನೋಟ | ಕುರಂಗರೆಪು : ೪೬ .ಕಂಡುದು | ಕುಜಗಣ್ 2 &೯ ಸಣ್ಣ ಕಣ್ಣು ಕಾದಲ 2 ೩೬ ಫಿಯ, ನಲ್ಲ ಹೀನವಾದ ಕಣ್ಣು ಕಾಯ 4 ೨೫ ದೇಹ | ಕುಚುಪು 4 ೧೬ ಗುರುತು ಕಾರ್ 3 ೧೦ ಮಳೆ ಇಲ್ಲ | ಕುವಳಯ 1 ೨೬ ನೈದಿಲೆ . ಕಾವಲ್ 3 ೧೯ ಕಾಪಾಡುವವರು | ಕುಸಿಗೊರಲ್ 3 ೩೮ ಕುಗ್ಗಿದ ಕುತ್ತಿಗೆ ಕಾಷ್ಠ 4 ೨೪ ಕಟ್ಟಿಗೆ | ಕುಸುರಿದ } ೩೭ ಚಿಕ್ಕ ತುಂಡಾಗಿ ಕಾಳಾಗರು 2 ೧೯ ಕಪ್ಪುಗಂಧ |

  • ಕತ್ತರಿಸು ಕಿಂಕರ 1 ೪೦ ಸೇವಕ | ಕುಸುರಿವಸ 1 ೩೦ ಸೂಕ್ಷ್ಮವಾದ ಕಿಚ್ಚು 4 ೨೪ ಬೆಂಕಿ ಕಿತ್ತಡ 2 ೭೦ ಹೊಲಗೆಲಸ | ಕುಣಿ 2 ೩೯ ಹೊಂಡ, ಗುಂಡಿ

ಅಸಹ್ಯ ಕಾರ್ಯ | ಕುಣಿನೊಸಲ್ 2 ೩೮ ಒಳನುಗ್ಗಿ ದಹಣೆ ಕಿಸುಗುಳ 2 ೫೬ ಹೊಲಸು ವಸ್ತು | ಕೂನ್ 2 ೪೦ ವಕ್ರ, ಕಿಸುಗುಳಿ 3 ಹೀನ | . ಬಾಗಿದರು ಕಿಮ್ 4 ೪೬ ಜೊರಸೆಳೆದೆ | ಕೂರಸಿ, 2 ೩೬ ಹರಿತವಾದ ಕತ್ತಿ ಕಿಟ್ಟು ಡಿ 3 ೧೨ ಕೆಟ್ಟ ಮಾತು | ಕೂರಿಸು 2 ೬೩ ಪ್ರೀತಿಮಾಡಿಸು ಕಿಟ್ಟಿರಿ 4 ೪ ಕೆಳಮಳೆ | ಕೂರ್ತು 1 ೩ ಪ್ರೀತಿಸಿ ಕುಕ್ಕುಟ 4 ೫೩ ಕೋಳಿ | ಕೂರ್ತೆ 2 ೩೬ ಪ್ರೀತಿಸಿದೆ ಕುಕ್ಕುರಿ 3 ೩೮ ಹೆಣ್ಣು ನಾಯಿ | ಕೂರ್ಪ 2 ೬೩ ಪ್ರೀತಿಸುವ ಕುಂಚ 1೯ ಜೈನಸನ್ಯಾಸಿಯ | ಕೂರ್ಪು - 3 ೭೮ ತೀಕ್ಷ್ಯತೆ ಕೈಯಲ್ಲಿರುವ ನವಿಲು | ಕೂರ್ಮ 1 ೨೩ ಪ್ರೀತಿ ಗರಿಯ ಗುಚ್ಛ | ಕೂಟ 1 ೫೪ ಅನ್ನ, ಆಹಾರ ಕುಡಿಯ 2 ೫೦ ಒಕ್ಕಲಿಗ | ಕೃಕವಾಕು 3 ೨೬ ಕೋಳಿ ಕುದಿರ್ 4 ೨೧ ಹಗೇವು, ಕಣಜ | ಕೃತಾಂತ 1 ೫೩ , ಯಮ ಕುನಿ 4 ೧೩ ಕುಗ್ಗು, ಬಾಗು | ಕೆಡೆ 4 ೩೯ ಬೀಳು, ಬೀಳಿಸು ________________

ಶಬ್ದಕೋಶ ೧೩೯ ಕೆಮ್ಮನೆ 4 ೪೬ ಸುಮ್ಮನೆ ಕೋಪ ] ೨೯ ರಂಧ್ರ ಕೊರೆದ ಕೆಲಬ 1 ೫೯ ಅಕ್ಕಪಕ್ರ ಚುಚ್ಚಿದ 2 & ಗೆಳತಿ | ಕೌಕ್ಷೇಯಕ 4 ೪೫ ಕತ್ತಿ ಕಳರ್ 4 ೪:ಕೆರಳು, ಕೊಪಿಸು “ಕೌತುಕ 1 $ ಕುತೂಹಲ ವಿಸ್ಮಯ ಕಕಿ 3 ೩೭ ನವಿಲು | ಕೌಮುದಿ 2 ೨೩ ತಿಂಗಳ ಬೆಳಕು ಕೇತು 1 .೨೩ ಧ್ವಜ ಕೇತುಗ್ರಹ ಕೌಳೇಯಕ 4 ೪೫ - ನಾಯಿ ಕೇವಲಬೇಧ | ೩೧ "ಕೇವಲಜ್ಞಾನ | ಕೃತಿ _1 ೫ ಭೂಮಿ, ನೆಲ ಕೇಸರ 3 ೬೮ ಹೂವಿನ ಎಳೆ | ಕ್ಷಸ 4 ೪೫ ರಾಜ

  • ಸಣ್ಣಗರಿ, ಹೊಂಬಣ್ಣ | ಕೋಣಿ - 1 ೨೩ ಭೂಮಿ ಕೇಳಿ ' ; ೨ ಆಟ ಕೇಳಿಕೆ 2 8೧ (ಕಾಮ ಕ್ರೀಡೆ | ೩ಗ 4 ೬೨ ಕೇಶಿಖರ 4 ೬ ಕೃತಕತೈಲ, ಆಟ | ಖಜರ 2 ೨೨ ಗಂಧರ್ವ

ಕಾಗಿ ನಿರ್ಮಿಸಿದ | ಖುರಹತಿ 1 ೧೪ ಗೊರಸಿನ ಪೆಟ್ಟು ಕೇಳಿಸು 4 ... ಎನೊದಗೊಳಿಸು | ಗಗನ 1 ೧೩ ಆಕಾಶ ಕೈಗುಡು 1 # ಸಹಾಯಮಾಡು ಗಜವೆಡಂಗ 2 ೫೨ ಮಾವುತ ಕೈಯಿಕ್ಕಲ್ 2 ೫೪ ಕೈ ಹಾಕಬಾರದು | ಗಣಿಕೆ 2 ೧೪ ಸೂಳೆ ಹೊಡೆಯಲಾಗದು | ಗಂಡಗಾಳಿಕೆ ? ೧೬ ಪತತ್ಯ, ಒಡೆತನ ಕೈರವ 2 ೪೭ ನೈದಿಲೆ | ಗರಗರಿಕೆ 2 ೩೬ ಚೆಲುವು ಕೈವೋದ 1 ೩೬ ಚಿಗುರಿದ | ಗರಗರಿಕ 2 4{ ಗರಗರ ಸದ್ದು ಕೊಕ್ಕ 3 ) ಒಂದು ಹಕ್ಕಿ | ಗರಟಗೆ , 2 ೨೭ ಕಾವಲು ತಿರುಗು ಕೊಟ್ಟು, 2 ೭೮ ಜುಟ್ಟು ; ದಾನ | ಗಹಗಹಿಕೆ 2 ೨೯ ಅತಿ ಸಂತೋಷ

  • ವಿತ್ತು | ಗಳರದ 2 ೨೪ ಗಂಟಲಧ್ವನಿ ಕೊಳೊಳಿಸು 4 ೪೪ ಕೊಳ್ಳೆಂದು | ಗುಜ್ಞ 3 ೪೮ ಕುಳ್ಳ, ಕುಂಟ

- ಭೂ ಬಿಡು |ಗಮನ 3 ೩೧ ಹೋಗುವಿಕೆ ಕೊಟಲೆ 1 ೫೬ 'ತೊಂದರೆ ಕಾಟ | ಗುರುವಚನ 3 ೧೭ ಹಿರಿಯರ ಮಾತು ________________

೧೪೦ ಯಶೋಧರ ಚರಿತೆ ಯಂತ್ರ ೬ 4 ೫೨ ಅಮೇಧ್ಯ, ಮಲ | ಗೂಳಿ 3 ೫೪ ಎತ್ತು, ಬಸವ | ಜಘನ 2 ೩೮ ಸೊಂಟದ ಗೆಡೆ 3 ೬೨ ಒದರು ಹರಟು ಹಿಂಬದಿ ಗಂಟು 1 ೬೪ ದೂರ | ಜನಸ} } ೧೦ ರಾಜ ಗೆತ್ತು 3 ೪೨ ಭ್ರಮಿಸಿ, ತಿಳಿದು | ಜಂತ್ರ 2 ೨೩ ಗೇಪ | ೫೧ ಮನೆ | ಜನ 1 8 ಯವು ಗೋದಾನ 3 ೧೦ ನವಿಲಿಹಿತ | ಜವಳಿವೆಜಿತ ! ೬೨ಇಟ್ಟಿರುಚಂದ್ರರು ವಾದ ಒಂದು ಪ್ರಾಣಿ(?) | ಜ ಸ 4 ೮೨ ಗೋರಿಗೊಳಿಸು? ೯ ಆಕರ್ಷಿಸು ಕೊಲ್ಲು | ಜಜ 4 ತಾವರೆ ಗ್ರಾಹು 2, ೩೧ ಗ್ರಹ, ಹಾಡಿಗೂ | ಜಾತಿ ? & ೨ಯಗಾನ ತಾಳಕ್ಕೂ ಇರುವ | ಪದ್ದತಿ ವಿಶಿಷ್ಟ ಸಂಬಂಧ | ಜಾತಿಸ್ಮರ 3 ೫೩ ಪೂರ್ವಜನ್ಮದ ಸ್ಮರಣೆಯುಳ್ಳ ಮೃತ 4 ೨೮ ತುಪ್ಪ ] ಜಾಲ 3 ೬೭ ನಾಯಿ 2 ೪೬ ಹಾದರದವನು ಚದುರ್ 3 ೨೦ ಚಾತುರ್ಯ | ಜಾಲಗಾಜ ! ೪, ಬಲೆಗಾರ, ಬೆಸ್ಟ್ ಚರಣಾಯುಧ3 ೨೪ ಕೋಳಿ | ಜಾ ೬೦ದರ | ೯ ಚರಮಾಂಗ ಕೊನೆಯ ದೇಹ | ಜನ 1 ೨ ೭ರ್ಹತ, ಪ್ರಮಿತ 4 ೩೦ ವಳ್ಳವನು ತೀರ್ಥಂಕರ `ಚರಿಗೆ 1 ೪೬ ಭಿಕ್ಷಾಟನೆ | ಜೀವಜಾತ 4 ೬೪ ಪ್ರಾಣಿಗಳ ಚರು 4 ೭೪ ಕಏಸ್ಸಿನ ಅನ್ನ hುಂಪು ಚರ್ಚೆ ? ೧೪ ಲೇಪನ ಚಾಗ 1 ೨೦ ತ್ಯಾಗ | ರುಂಜಿ 2 ೨೯ ಐದುಮಾತ್ರೆ ಚಾಳಿಸು 2 ೩೧ ನಡೆಯಿಸು, ಗಳುಳ್ಳ ತಾಳ ಸೋಲಿಸು ಚಾಳೆಯ 2 ೨೬ ಕೃತಕದ ನೆಗೆತ

ಟೊಂಕ 2 ೩೯ ಸೊಂಟ ________________

ಶಬ್ದಕೋಶ ಅಂಗಾಲು

ತ 3 ೧೩ ಕತ್ತರಿಸು, ಕಾಯ (ಯೆ) 2 ೨೯ ಪ್ರಬಂಧ |

ಕೊಲ್ಲು ವಿಷೇಷ | ತಸಲ್ 6 ೭೬ ನಿರ್ಧರಿಸು (ಸಂಗೀತದಲ್ಲಿ) | ತಲ್ಲಣ 3 ೧೧ ಭಯ, ಹೆದರಿಕೆ ಡಾಳ: 2 ೩೦ ಪ್ರಕಾಶ, | ತವರಾಜ 1 ೬೨. ಒಂದು ಕಾಂತಿ ಜಾತಿಯ ಸಕ್ಕರೆ { ೭೧ ತೊಡಗು | ತವೆ 3 ೬೬ ನಾಶ ತಡವಾಗು 2 ಅನುರೂಪ ನಾಗಲು, ವಾಗು ಸಾಯಲು ತಡವಿಕ್ಕು 3 ೧೨ ತಡೆದಿಡು 1 ೫೪ ಅಂಗೈ, ತಣಿ 3 ೬೦ ತೃಪ್ತಿ ಗೊಳ್ಳು | ತಳರ್ 3 ೨೯ ಚಲಿಸು, ತಂಡುಲ 4 ೬೪ ಅಕ್ಕಿ ಹೊರಡು 4.೪೫ ಸಮೂಹ | ತಳಾಮುಲಕ 1 ೬೫ ಅ೦ಗೈಯ 2 ೫೦ ಜಜ್ಜ, ಬಡಿ ತದ್ದಂತಿಪ 2 ೩೨ ಆ ಮಾವುತ ಸ್ಪಷ್ಟವೆಂಬ ತನಯ ಮಗ ತಾತ್ಪರ್ಯ) 3 ೬ ದೇಹ 3 ೮ ಚುಮುಕಿಸು ತನೆ 3 ೫೫ ಗರ್ಭ ಇಳಿರ್ಜೊಂಪ 4 n೦ ಚಿಗುರಿನ ಬಸಿರು ತಪಶ್ಚರಣ 1 ೪೫ ತಪಸ್ಸು | ತಳಿರ್ತ 4 1 ಚಿಗುರಿದ ಮಾಡುವಿಕೆ | 2 ೨೬ ಸೇರಿದ ಶಮ 3 ೨೨ ಅಜ್ಞಾನ, ತಾಮ್ರಚೂಡ 3 ೨೭ ಕೋಳಿ ಪಾಪ, ಕತ್ತಲು| ತಾರ 4 ೮೪ ಬೆಳ್ಳಿ ತಮಿಸ್ರ 1 ೨೬ ಕತ್ತಲೆ | ತಾರಹಾರ 4 ೮೪ ಮುತ್ತಿನ ಸರ ತರಕು 1 ೪೭ ಹುಲಿ | ತಾರ' * 4 ೮೪ ನಕ್ಷತ್ರ ಇನ್ನು ________________

೧೪೨ ಯಶೋಧರ ಚರಿತೆ ಮುತ್ತು ತಾಳುಗೆ 1 319 ಬಾಯೊಳಗಿನ| ತೊಟ್ಟನೆ 2 ೨೮ ಕೂಡಲೆ, ಮೇಲುಬದಿ, | €ಂಗಳು| ತೋಡಂಕು 4 ೨೦ ಸಿಕ್ಕು, ತಾಳು 3 ೧ ಧರಿಸಿಕೊಳ್ಳು ತೊಡಕು ಅಂಗುಳು 3 ೭೧ ತಿನ್ನುವುದಕ್ಕೆ | ತೊಡವು 1 ೨೦ ಆಭರಣ ಗುರಿ, ತಿನ್ನುವು | ತೊರ್ 3 ೭೧ ದಾಸಿಯರು ದಕ್ಕೆ, ಯೋಗ್ಯ: ತೊನ್ನ | 3 ೬೪ ಕುಷ್ಠರೋಗಿ ತಿನ್ನುವ ಕುರಿ | ತೊಲೆ 4 ೨೨ ತಕ್ಕಡಿ 1 ೫೦ ಬಹಳವಾಗಿ, | ತೊವಲ್ 2 ೪೦ ಚರ್ಮ, ಚೆನಾಗಿ ತೊಗಲು ತಿದಿ 4 ೨೬ ಗಾಳಿ | ತೊರಮುತ್ತು 3 ೧ ದೊಡ್ಡ ಹಾಕುವ ಚರ್ಮದ ಚೀಲ | ದಂಡಧರ 4, ೨೩ ತಳಾರ ತಿರೋಹಿತೆ 4 ೭೫ ಅಡಗಿದವಳು | | ದತ್ತಾವಧಾನ | ೭೦ ಗಮನ ತಿರ್ದು 2 ೧೬ ಸರಿಪಡಿಸು, * ಕೊಟ್ಟವನು ತಿದ್ದು | ದಂತಪ್ರಭೆ 1 ೬೬ ಹಲ್ಲು ತಿರ್ಯಗ್ಧತಿ 4 ೨೪ ಪ್ರಾಣಿ ಜನ್ಮ ಹೊಳಪು ತೀವು 3 ೫೫ ತುಂಬು | ದಂತಿಸ 2 ೩೨ ಆನೆಸಾಕುವವ ತುಪ್ಪುರ್ 3 ೩೫ ಸಣ್ಣಗರಿ | ದಂದುಗ | ೫೨ ಕಷ್ಟ, ಬಾಧೆ ತುಜುಗಲ್ ? ೨೬ ಸಮೂಹ ದರ್ಪಣ 1 ೬೬ ಕನ್ನಡಿ ತೆಂಕವಂಕ 1 ೩೪ ದಕ್ಷಿಣದಿಕ್ಕು | ದವಳಾರ 3 ೬ ಬಿಳಿಯವನೆ ತೆ. ಸು . ೫೬ ನಾ ಓಸಿರಿಸು | ದಸಿ 3 ೬೯, ಮೊನಚಾದ ತೆಂಚಲರ್ 4 ೫ ತೆಂಕನಗಾಳಿ ಗೂಟ ತೆರವುಗಿಲ್ 4 ೯ ಸುಗೆಯಂತಹ ]ದಾನಾಸಾ ? ೧೪ ದಾನದ ಮೊಡ (ನೀರಿನ ಮಳೆ ಮೋಡದ ಪರದೆ | ದಾವಣಿ 1 ೧೪ ಹಗ್ಗ 2 ೪೪ ಬಿಡುಹೊತ್ತು ದಾವಣಿಗು 3 ೧೩ ಹಗ್ಗ ಬಿಗಿದ 4 ೬೩ ಸ್ವಚ್ಛವಾಗಿ ಕುರಿ و ع عن يلي ________________

ಶಬ್ದಕೋಶ ೧೪೩ ನಂಜು 3 ೩೨ ನರ್ತಕ ದು ದಿನ 3 ೬೨ ಸ್ವರ್ಗ ಧರಿತ್ರಿ 1 ೧೨ ಭೂಮಿ ದಿವಾಕರ 1 ೩೬ ಸೂರ್ಯ { ೨೬ ಭೂಮಿ ದಿವಿಜ ಶರಾಸನ 3 ೩೭ ಕಾಮನ | ಧವಳ 2 13 ಬಿಲ್ಲು | ಧನಳಾರ _ 2 ೨೧ ಬಿಳಿಯಮನೆ ದೀಪವರ್ತಿ 4 ೧೪ ದೀಪದಬತ್ತಿ, 2 29.ಧೈರ್ಯ, ದೃಢತೆ ದೀಪದ ಕುಡಿ | ಧ೦ತ ದೀವ 2 ೯ ಬೇಟೆಯ ಪ್ರಾಣಿಯನ್ನು | 3 ೪H ಪರ್ವತ ಆಕರ್ಷಿಸಲು | 4 ೪೧ ಬಳಸುವ ಪ್ರಾಣಿ | ದೀವಿಗೆ 4 ೨ ದೀಪ ನಟ್ಟುವ 2 ೫೯ ಹಾಲು ದುರಿತ 1 ೨೬ ಪಾಪ ಕಷ್ಟ | ನ ದುರ್ನಯ 3 ೧೦ ಕಟ್ಟ ನಡತೆ ದೂದವಿ 2 ೬ ದೂಃ | ನತ ನತ : ... ಬಾಗಿದ ದೂಳಿಚಿತ್ರ 4 ೮ “crವಲ್ಲಿ ನರ ದೇಗುಲ i ೬೦ ದೇವಾಲಯ 2 # ಎಳೆಯ ದೇಶಿಕ 1 3 ಉಷಾ ಮೊಗ್ಗು ( ನನೆಗಣ್ಣೆ ದೊರೆ 2 ೩೬ ಸಮಾನ ಬಾಣ ಮೊರೆವಡೆ ( ನನೆಕೊನೆ 3 * ಮೊಗ್ಗು, ಬೆಳೆ ವೋಗು ಮಾ೦ತಗೊಳ್ಳು ದೊರೆತಿತ್ತು 1 ರ್೩ ಪ್ರಾಪ್ತವಾಗಿ, | ( ನಂದನ 3 : ಮಗ ಓವಗಿ ನಂದನವರ 3 ೪: ಪೂರ್ವಜ ದಲ್ಲಿ ದತಿ 1 ೨೨ ಕಾಂತಿ ಮಗನಾಗಿದ್ದವನು ದೋಷಾವಹ 3 ೧೩, ಕೆಡಕು:ು ನವರು 3 5 ಸ್ವರ್ಗದ ಮಾಡುವ ಒಂದು ಮರ ನರ್ಮನನ 3 ೪೭ ವಿನೋದಕ್ಕೆ ಧರಾಧರ 4 ೮೪ ಪರ್ವತ | ಮನಸ್ಸು ಮಾಡಿದವನು 2 ೩ ________________

ಯಶೋಧರ ಚರಿತೆ ನಾಳ ನಾಡೆ ಇಬ್ಬನಿ, 3 3೨ ಸ್ವರ್ಗ | ನೀರೊಡು 3 ೬ ನಗೆ 3 ೪೭ ಹಾವು | ಒಣಗು ನಾಡಾಡಿ - ೨ & ಸಾಮಾನ್ಯ| ನೀಲಾಚಲ 3 ೬೬ ನೀಲಗಿರಿ 3 ೧. ಚೆನ್ನಾಗಿ ನಿಹಾರ 4 ಆಳಿ ನಾದ ಮಂಜು ನಾರಿ 2 ೫ ಬಿಲ್ಲಿನ ಹಗ್ಗ | ನೆಗಪು , 2 ೬೧ ಮೇಲೆತ್ತು ನಾಸಕುಟ್ಕಳ 2 9 ಮೊಗ್ಗೆಯ| ನೆಗಟಿ 1 ೬೧ ನಡ ತಹ ಮೂಗು | ನೆಗ 4 ೫೪ ನಡೆದ, ನಾಭು 4 ೮೮ ನಾಡ | ಆಚರಿಸಿದ ಒಡೆಯ, ರಾಜ | ನೆಟ್ಟನೆ 1 ೩ ನೇರಾಗಿ, ನಿಗ್ಗನ 3 ೪ ಆನೆಯ ದಂತ | ಸರಿಯಾಗಿ ನಿಗ್ರಹ 3 ರ್೪ ಪೀಡೆ, ಹಿಂಸೆ | ನೆಣ 3 ೬೯ ಕೊಬ್ಬು, ಚರ್ಬಿ ನಿತವ್ಯಾಧರ ? ೩೫ ಒಣಗಿವ | ನೆಂಬಡೆ 2 ೬೦ ಸಹಾಯಷಣಿ ತುಟ | ನೆರೆ 4 ೬೮ ಕೂಡು, ಸೇರು ನಿನದ 3 ೨೬ ಧ್ವನಿ, ಸದ್ದು ] ನೆರೆಯಿಸು 1 ೩೫ ಕೂಡಿಸು ನಿಮಿರ್ 2 ೫೩ ಚಾಚು, ] ನೆಟ: 3 ೫೯ ಪೂರ್ಣ ಚೆನ್ನಾಗಿ ನೆಟ್ಟಗಾಗು | ನೆಲೆಮಾಡೆ 1 ೩೦ ಉಪ್ಪರಿಗೆ ನಿಯತಿ 3 ೪೯ ವಿಧಿನಿಯಮ ನಿರತ್ಯಯ 4 ೨೭ ನಾಶವಿಲ್ಲದೆ ] ನೇರಾಣಿ 1 ೩೦ ಒಪ್ಪುವ ನಿರಪೇಕ್ಷಕ 1 ೧ ಬಯಸದವನು ಮನೆಯಮೂಲೆ ನಿರವಿಸು 4 ೫೯ ಹೇಳು | ನೊಸಲ್ 1 ೬೮ ಹಣೆ ನಿರ್ವಟ್ಟಿದುವು 2 ೫೭ ಗಟ್ಟಿಯಿಲ್ಲ (ನೋ೦ತ 1 ೨೨ ದುವು ಮಾಡಿದ ನಿಲವಿನ ಸೂಡು 3 ೬೦ ಒಂದೇ ಈ ರೀತಿಯ ಕಾವು ಪಜ್ಜಳಿಸು 1 ೬೬ ಚೆನ್ನಾಗಿ ನಿಶ್ಚಿದ್ರ 4 ೨೫ ಬಿರುಕಿಲ್ಲದ್ದು ನೀಡುಂ 2 ೧೦ ಬಹಳ ಪಂಚಶತ 1 ೪೪ ಐನೂರು ನೀರಜ 1 ೩೮ ತಾವರೆ ]ಪಂಜರ 3 ೩೬ ಗೂಡು ನೀರಡಸು 3 ೬೬ ಬಾಯಾರು |ಪಟ್ಟರು 2 ೫೭ ಮಲಗಿರು ಮನೆ ________________

ಶಬ್ದಕೋಶ ಪಟ್ಟು 3 ೨ ಫಲ ಬಿಟ್ಟು | ಸರೆಗೆ 4 ೮೮ ಹಬ್ಬಲಿ 1 ೬೫ ಹಿತಕರ | ಸಂಮೆ 2 ೪೭ ತುಂಬಿ ವಾದುದು ಭ್ರಮರ ಪದ 1 ೪೬ ಸಂದರ್ಭ | ಪಟ್ದಲೆ - 2 ೩೮ ಕಿತ್ತು ಹೋದ ಸದನ್ 1 ೨೯ ಹದ ಕೂದಲ ತಲೆ ಪದಾಬ 4 ೮೦ ಪಾದಕಮಲ | ಪರ್ವ 1 ೪೬ ಹಬ್ಬ ಪದುಳಿಸು 4 ೩೬ ಸಮಾಧಾನ | ಸವು 3 ೨ ಹಬ್ಬು ವಿರು | ಪವಡಿಸು 2 ೫೭ ಮಲಗು ಪದ್ಮರಾಗ 2 ೨ ಕೆಂಪು ರತ್ನ | ಪಸಾಯದಾನ 2 ೨೮ ಮುಚ್ಚಿ ಪಂದರ್‌ 4 ೮೨ . ಚಪ್ಪರ | ಕೊಟ್ಟುದ್ದು ಪಂದೆ 3 ೬ ಹೇಡಿ | ಪಸಾಯಿತ 3 ೬೭ ಮೆಚ್ಚು ಪಯುಃ ಪೂರ 4 ಆಳ ಹಾಲ ಪಡೆದ ಪ್ರವಾಹ | ಹಸುವಣ 3 ೫೬ ಎಳೆಯನರಿ ಪರತೆ 4 ೩೨ ಪರಲೋಕ | ಪಳಿತ ಚಿಕುರ 2 ೧೧ ನರೆತ ಪರದ 3 ೬೫ - ವ್ಯಾಪಾರಿ ಮುಂಗುರುಳು ಪರಪು 3 ೫೮ ಹರಡು | ಪಾಡೇಲಿ 2 ೪೬ ಅಂದಕೆಡು ಪರಮ 1 ೧ ಮೋಕ್ಷಲಕ್ಷ್ಮಿ ಪಾಟ್ಟ 3 ೭೫ ಹಾದರ ಪರವನಿತೆ } ೧ ಪರಸ್ತ್ರೀ | ದವನು ಅನ್ಯರ ಹೆಂಡತಿ | ವಾಣೈ ಜಾರೆ, ಪರಸಿರೆ 1 ೫೯ ಹರಿಸಿರಿ ಏ ಹಾದರದಾಕೆ ಪರಿಣಿ 1 ೨೮ ಕಂದಕ | ಪಾತನ 2 ೩೨ ಬೀಳಿಸುವಿಕೆ ಪರಿಚ್ಛೇದಿಸು 4 $೪ ನಿರ್ಧರಿಸು | ಪಾದರಿ 2 ೭೦ ಜಾಗೆ ಸರಿಜನ 1 ೬೮ ಸೇವಕಜನ | ಪಾಯ್ 1 ೯ ಹಾಯ, ಹರಿರಂಭಣ 2 S ಆಲಿಂಗನ ನುಗ್ಗು ಪರಿವೇಷ್ಟಿತ 2 ೨೫ ಸುತ್ತುಗಟ್ಟಿ | ಪಾರಣೆ 1 ೨೪ ಉಪವಾಸದ ಅನಂತರ ತೆಗೆದು ಪರೀಷಹ | ೪೯ ಇಪ್ಪತ್ತೆರಡು | - ಕೊಳ್ಳುವ ಆಹಾರ " ಬಗೆಯ ಕೋಶಗಳು | ಪಾರ್ವ 3 ೫೨ ಬ್ರಾಹ್ಮಣ ಪರೆ | ೨೬ ತೋಲಗು | ಪಾಳಿ 1 ೫೫ ಸಾಲು ಕ್ರಮ 3 ಆಗಿ ________________

೧೪೬ ಯಶೋಧರ ಚರಿತೆ ಪಾಳಿಕೆ 2 ೩೦ ರಕ್ಷಣೆ, ಕೀತಿ | ಪುಲಕ‌ 2 ೫೪ ಹೀನರು ಪಿಕರು 1 ೨ ಕೋಗಿಲೆಯ | ಪೂರ || ೩೧ ಪ್ರವಾಹ ಕೂಗು | ಸೆತ, 1 ೪೬ - ಪಡೆದ ಪಿತಾಮಹಾ 1 ೧೩ ತಂದೆಯ | ಪೆರು 3 ೬೫ ಪಡೆದಿರು ತಂದೆ | ಕೆಂಪು 1 SC ಹಿರಿಮೆ ಕಿತ್ತಳೆ 3 ೬೫ ಹಿತ್ತಾಳೆ | ಪ್ರಜಗೆ 2 ೫೭ ಹಿಂದೆ ಪಿಸುಳಿ, 3 ೪೨ ಹಿಸಿದುಹೋಗು | ಪರ್ಬೆಸನ 1 ೫೭ ಅತ್ಯಾಕೆ ಪಿಳುಕು 3 ೩೬ ನರಿ | ಪೆರ್ಸಿಡಿ 4 ೪ ದೊಡ್ಡ ಮಿಡಿ ಪಿಳುಕೊತ್ತು 3 ೩೬ : ಮರಿಯ ಬಳಿ | ಪಂಜು 1 ೫.೬ ಹೆದರು ಪಿಳ್ಳೆ 3 ೭೭ ಮರ | ಪೇರಡಗು ೫೭ ಹೆಚ್ಚು ಮಾಂಸ ಪೀತಚ್ಛತ್ರ 4 ೧ ಬಂಗಾರದಕೊಡೆ | ಪೇರುರ 2 ೮ ಅಗಲವಾದ ಎದೆ ಸೀತಚ್ಛತ್ರ 4 ೧ ಹೊಂಗೊಡೆಯ | ಪೇಯಿ 3 ೬; ಹೊರೆಹೊರಿಸು ನಂದನ ಕೆಳಗೆ ಸಂತೋಷ | ಪೊಡವಡು, 4 ೪೬ ವಂದಿಸು ದಿಂದಿರುವವನು | ಪೊನ್ 4 ೨೮ ಹೊನ್ನುಲೋಹ ಪುಂಜ 3 ೩೮ ಹುಂಜ, ಗಂಡು | ಪೊಂಪುಟ 4 ೩೮ ಹಿಗ್ಗು,ಹೆಚ್ಚಳ ಕೊಳಿ | ಪೊಂಬಾಟಿ 4 ೬ ಬಂಗಾರದ ಪುಂಡರೀಕಿಸಿ 1 ೧೦ ತಾವರೆಕೊಳ (ಬಣ್ಣದ ಬಾಳೆ ಪುತ್ರಿಕೆ 2 ೨೩ ಬೊಂಬೆ | ( ಪೊಯಮ್ | ೬೦ * ಹೊಡೆ ಪುರುದೇವ ? ೧ ಮೊದಲ | ಪೊರೆ 2 ೬೦ ಸಮೀಪ, ಹತ್ತಿರ ತೀರ್ಥಂಕರ | ಪೊರೆಯೇಜು | ೨೬ ಹೆಚ್ಚುಗೊಳ್ಳು ಪುರುಭ್ಯ 4 ೬೦ ಸಾರ, ಆರ್ಥ | ( ಪೊಲಂಬು ! ೬೪ ಹೊಲಬು, ದಾರಿ ಪುರೋಪವನ ! ೪೪ ನಗರದಉದ್ಯಾನ (ಪೊಲ್ಲದು 4 ೧೮ ಹೀನವಾದುದು ಪುರ್ವು 4 ೧೩ ಹುಬ್ಬು | ಪೊಲ್ಲಮೆ 2 ೪೨ ಕೆಡಕು,ಹೊಲಸು ಪುಲಿಗೋಣ 3 ೪೫ ದೊಡ್ಡ ಕೊಣ | ಪೊಸೆ 4 ೨೪ ತಿಕ್ಕು, ಹೊಸ ಪುಳಿನ 2 ಗಿಗೆ ಮರಳರಾಶಿ | ಪೊಳಂಕು 3 ೪೮ ಮೇಲೆ ನೆಗೆ ಪುಳಿಂದ 2 ೯ ಬೇಟೆಗಾರ | ಪೋಗಂಡ 2 ೬೦ ವಿಕಾರದ ಪುಟತೊಡೆ ) ಮನುಷ್ಯ 4. ಅಲ್ಲದೆ 3 ೬೩ ಹುಳವಾಗದೆ | ಪೋಂತು 3 ೫೩ ಗಂಡಾಡು ಪೊಕುಳಿ 3 ೬೮ ಹೋರಾಟ ________________

ಶಬ್ದಕೋಶ ೧೪೭ ಹೆಂಗೆ ಪೌತ್ರ 1:೧೩ ಮಗನ ಮಗ ಬಸ್ತಕ 3 ೫೪ ಗಂಡಾಡು ಪ್ರಚಯ 2 ೬೬ ಸಮೂಹ ಬಳರಿ 1 ೪೩ ಮಾರಿಯ ಹೆಸರು ಪ್ರಚ್ಛನ್ನ 2 ೪೮ . ಮರೆ| | ಬಳೆಗೊ 3 ೪ ಬಳೆ ಸಿಕ್ಕಿಸು ಪ್ರಸರ 1 8೭ ಸಮೂಹ ಬಲಿಯಂ 3 ೧೮ ಬಳಿಕ ಪ್ರಸವ 1 ೫೬ ಬಾಡು 3 ೭.೦ ಮಾಂಸ ಪ್ರಾಕಾರ 1 ೨೮ ಆವರಣದ ಬಾಣಸು 1 ೫೩ ಅಡಿಗೆ ಮನೆ ಗೋಡೆ | ಬಾಯಡು 2 ೪೬ ಮುತ್ತಿಡು ಪ್ರಾಸಾದೆ | ೨೮ ಮಾಳಿಗೆ ಮನೆ ಬಾಳಿಕೆ 4 ೨ ಆಜ್ಞೆ ಕೊಡುವಿಕೆ ಪ್ರೌಢಿ 2 ೨೪ ಹಿರಿಮೆ| ಬಾರಿಸರ್‌ 3 ೧೯ ತಡೆಯುವವರು ಬಾರೇಟ್ 2 3೦ ಚರ್ಮ ಬಗೆ 2 ೭೦ ಮನಸ್ಸು ಕಿತ್ತುಬರು ಬಜಾವಣೆ 2 ೩೦ ಬಾರಿಸುವಿಕೆನಾದನ| ಬಾಷ್ಪ 4 ೩೮ ಕಣ್ಣೀರು ಬಟ್ಟಿದುವು 2 ೫೮ ಉರುಟಾದುವು | | ಬಾಸಣಿಸು 3 ೬೦ ಮುಚ್ಚು ಬಟ್ಟೆ 3 ೧೭ ಜಾರಿ | ಬಾಹುವಳಿಯ 2 ೨೫ ಸುತ್ತು ಹಾಕಿದ ಬಣ೦ಬೆ 4 ೫೦ ಮೆದೆ, ರಾಶಿ ಬಣ್ಣವಣ್ಣಿಗೆ 4 ೮ (ಮುಖದ) ಬಾಳಿ 2 ೮ ಜೀವಂತವಾಗಿಡು ಚಿತ್ರಲೇಖನ | ( ?,ಸು ಬದಗ 2 ೨೭ ಕ್ಷುದ್ರ ಸೇವಕ | ಬಾದಲ್‌೧ ೩೩ ಹುಟ್ಟು ಬದಗುಳಿಗ 2 ೫೯ - ಹೀನಸೇವಕ | ಬಿಂಕ 3 ೩ ದರ್ಪ, ಶ್ರೀನಿ ಬಂದಿಸು 4 ೬೩ ನಮಸ್ಕರಿಸು | ಬಿದಿ 2 ೩೪ ವಿಧಿ ಬಕೆ 2 ೨೯ ಕುಣಿತದ ಒಂದು | ಬಿನದ 2 ೨೮ ವಿನೋದ ಬಿಬ್ಬಿಜಿನಲ್ ೩೮ ಬಿರುಕುಬಿಟ್ಟ ಬರ್ದಳೊ 3 ೬೪ ಬದುಕಿದಳೊ ಹಲ್ಲು(?) ಬರ್ದು 4 ೫೫ ಬದುಕು | ಬಿಲ್ಲcಬೆಲಗು 4 ೭೨ ಅತ್ಯಾಶ್ಚರ್ಯ ಬಲಗೊಳ್ 1 ೪೦ ಪ್ರದಕ್ಷಿಣೆ ಬು | ಬೀಜಾವಾಪ 3 ೩೪ ಬಿತ್ತನೆ ಬಲ್ಲುಲಿ 3 ೨೫ ದೊಡ್ಡ ಶಬ್ದ | ಬೀಟೆ, 2 ೫೦ ಬಿರುಕು ಬಸನಿಗತನ 3 ೭೨ ದುರಭ್ಯಾಸ | ಬೀಡೆ 1 988 ಬಿರುಕು - ಏರುವಿಕೆ | ಬೀರ | ೧ ವಿರ ಬಸಿ 3 ೭.೨ ಸುರಿ, ಶ್ರವಿಸು | ಬುಧ ! ೨೫ ವಿದ್ವಾಂಸ ಭಂಗಿ | ________________

ಯಶೋಧರ ಚರಿತೆ ಬೆಂಕೆ ದೇವತೆ | ಭಾವಕ 1 ೭ ವಿದ್ವಾಂಸ, 3 ೬೯ ಬೆಂಕಿ ರಸಿಕ ಬೆಟ್ಟಸು 3 ೬೯ ನಾಟಿಸು | ಭಾವಿತ : ೧೯ ಎಣಿಕೆ ಬೆದಟ್ಟು 4 ೨೩ ಹೆದರಿಸಿ ಓಡಿಸು | ಭೂವರ 1 ೬೩ ರಾಜ ಬೆದೆಯಾಗು 3 ಇಳಿ ಸಂಭೋಗ ಕಾಲ | ಭೂಷಾವಳಿ 2 ೬೯ ಆಭರಣ ಬರು ಸಮೂಹ ಬೆಂತರ 3 ೨೪ ಪಿಶಾಚಿ | ಭೇದಿಪಂ 4 ೨೮ ಪ್ರತ್ಯೇಕಿಸ ಬೆರಗು 3 ೩೩ ಒರಟುತನ ಬಲ್ಲವನು ಬೆರ್ಚು 1 ೫೫ ಬೆದರುಬೊಂಬೆ | ಭೋಂಕನೆ 2 ೩೩ ಬೆಸಗೊಳ್ ೬೩ ಕೇಳು | ಭೌಮಾಷ್ಟಮಿ 3 ೨೩ ಮಂಗಳವಾರ ಬೆಸಸು 4 ೩೭ ಅಪ್ಪಣೆಕೊಡು, ವಾದ ಅಷ್ಟಮಿ ಹೇಳು ಬೆಳತಿಗೆ ಮಕುಟ 2 ೨ ಕಿರೀಟ ವಸದನ 4 ೧೦ ಬಿಳಿಯ ಉಡುಗೆ | ಮುಗುಳ್ಯ 2 ೩೩ ಹಿಂತಿರುಗು ಬೆಳ್ಳಾರ್ 1 ೧೫ ಧವಳ ಪ್ರವಾಹ | ಮಗ್ಗಿ ಸು 2 ೧೪ ತಗ್ಗಿಸು, ಬೇ೦ಟ 2 ೪ ಅನುರಾಗ, ' ಅಡಗಿಸು ಪ್ರೇಮ ಮತ್ತು 2 ೨೭ ತಗ್ಗು ಇಲ್ಲವಾಗು ಬೋಟ್ಟು | ೧೮ ತೋರುಬೆರಳು ಮತ್ತು ಲಿಕ 3 ೬೬ ಮಲಗು ಮಚ್ಚರಿಸು 3 ೪ ಅಸೂಯೆಪಡು ಭಂಗಿ 2 ೭೧ ರೀತಿ | ಮಡಗು 4 ೭೬ ಇಡು ಭವದ್ವಿಳಾಸ 3 ೩ ನಿನ್ನ ಬೆಡಗು | ಮಣಕು 4 ೫೦ ದುರ್ವಾಸನೆ ಭವನಿಬದ್ದ 1 ೬೨ ಜನ್ಮದ ಬಂಧನ | ಮಂಡನ 1 ೮ ಅಲಂಕಾರ ಭವರೋಷ 3 ೪೦ ಪೂರ್ವಜನ್ಮದ | ಮತ್ತಮರಾಳ | ೮ ಸೊಕ್ಕಿದ ಹಂಸ ಕೋಪ ] ಮದನ 3 ೬೩ ಕಾವು ನಾ ತರ 3 ೪೪ ಬೇರೆ ಜನ್ಮ | ಮದೋನ್ಮತ3 ಶಿಷಿ ಕಾಮದಿಂದ ಭವೇನ್ಮಾಸ್ 3 ೫೯ ಮಾಂಸ ಬೇಯಿ | ಸೊಕ್ಕಿದ ಸಚನೇ ಸುವಲ್ಲಿ ಆದೀತು | ಮುದಿಲ್ | ೫೩ ಆವರಣದ ಗೋಡೆ ಭವ್ಯ | ೭೨ ಜೈನಧರ್ಮದಿಂದ | ಮದ್ದು ಜಾಸಿ 2 ೫೪ ನನ್ನ ತೋಳಿನ ಪರಿಣತನಾಗುವನು

ಖಡ್ಡ ________________

ಶಬ್ದಕೋಶ ୦୫୧ ಎಣಿಕೆ ಪ್ರತ್ಯೇಕಿಸ ದೇವತೆ |ಭಾವಕ 1 ೭ ವಿದ್ವಾಂಸ, ಬೆಂಕೆ 3 ೬೯ ಬೆಂಕಿ ರಸಿಕ ಬೆಟ್ಟಸು 3 ೬೯ ನಾಟಿಸು |ಭಾವಿತ 3 ೧೯ ಭದಟ್ಟು 4 S... ಹೆದರಿಸಿ, ಓಡಿಸು ಭೂ ವರ 1 ೬೩ ರಾಜ ಬೆದೆಯಾಗು 3 ಸಂಭೋಕಾಲ (ಭೂಷಾವಳಿ 2 ೬೯ ಆಭರಣ ಬರು ಸಮೂಹ ಜಿ೦ತರ 3 ೨೪ ಪಿಶಾಚಿ | ಭೇದಿಸಂ 4 ೨೮ ಬೆರಗು 3 ೩೩ ಒರಟುತನ ಬಲ್ಲವನು ಬೆರ್ಚ 1 ೫೫ ಬೆದರುಬೊಂಬೆ | ಭೋಂಕನೆ 2 ೩೩ ಫಕ್ಕನೆ ಬೆಸ೪೯ | ೬೩ ಕೇಳು |ಭೌಮಾಷ್ಟಮಿ 3 ೨೩ ಮಂಗಳವಾರ ಬೆಸಸು 4 ೩೭ ಅಪ್ಪಣೆಕೊಡು, ವಾದ ಅಷ್ಟಮಿ ಹೇಳು ನು ಬೆಳತಿಗೆ

ಮಕುಟ 2 ೨ ಕಿರೀಟ ವಸದನ 4 ೧೦ ಬಿಳಿಯ ಉಡುಗೆ (ಮಗು 2 ೩೩ ಹಿಂತಿರುಗು ಬೆಳ್ಳಾರ್ I ೧೫ ಧವಳ ಪ್ರವಾಹ ಮಗ್ಗಿಸು 2 ೧೪ ತಗ್ಗಿಸು, ಅನುರಾಗ,

ಅಡಗಿಸು - ಪ್ರೇಮ ಮಗು 2 ೨೭ ತಗ್ಗು ಇಲ್ಲವಾಗು ಬೊಟ್ಟು ೧೮ ತೋರುಬೆರಳು ಮತ್ತು ಲಿಕ 3 ೬೬ ಮಲಗು ಮಚ್ಚರಿಸು 3 ೪ ಅಸೂಯೆಪಡು ಭಂಗಿ 2 ೬೧ (ಮಡಗು 4 ೭೬ ಇಡು ಭವದ್ವಿಳಾಸ 3 ೩ ನಿನ್ನ ಬೆಡಗು |ವಣಕು 4 ೫೦ ದುರ್ವಾಸನೆ ಭವಸಿದ್ಧ | ೬೫ ಜನ್ಮದ ಬಂಧನ ಮಂಡನ 1 ೮ ಅಲಂಕಾರ ಭವ: 3 ೪೦ ಪೂರ್ವಜನ್ಮದ ಮತ್ವಮರಾಳ | ೮ ಸೊಕ್ಕಿದ ಹಂಸ ಮದನ 3 ೭೩ ಕಾಮ ನಾ ತರ 3 ೪೩ ಮದೋನ್ಮತ; 83೩ ಕಾಮದಿಂದ ಭಸ್ನ್ಯಾಸ್ ; ೨೯ ಮಾಂಸ ಬೇಯಿಸಿ ಸೊಕ್ಕಿದ ಪಚನೇ ಸುವಲ್ಲಿ ಆದೀತು | ಮದಿಲ್ | ೫೩ ಆವರಣದ ಗೋಡೆ ಭವ್ಯ | ೬೨ ಜೈನಧರ್ಮದಿಂದ | ಮದ್ದು ಜಾಸಿ 2 ೫೪ ನನ್ನ ತೋಳಿನ ಪರಿಣತನಾಗುವನು

ಖಡ್ಡ ________________

೧೫೦ ಯಶೋಧರ ಚರಿತೆ ಮೃಗಮದ 2 ೧೭ ಕಸೂರಿ ಪತಿರಾಗ, 4೧೧ ಕಾಮಾಸಕ್ತಿ ಮೃಗಯಾ 3 ೫೩ ಬೇಟಿ ]ರವ 4 ೨೩ ಧ್ವನಿ ಮಗ ರಾತ್ರಿ ದಿವಂ 2 ೪೪ ಇರುಳೂ ಲೋಚನೆ 2 ೨೮ ಜಿ೦ಕೆಯ ಹಗಲೂ * ಕಣ್ಣಿನಂತೆ ]ಪು 3 ೪ ವೈರಿ, ಹಗೆ ಕಣ್ಣುಳ್ಳವನು | ರುಚಿ 1 ೩೨ ಕಾಂತಿ ಮೆಯಲ್ಲಿ 3 ೭೮ ವೀರ ಮೆಯಾಪು 2 4 ಅಂಗರಕ್ಷಣೆ | ಅಕ್ಕ 1 ೪೦ | 1 ಲಕ್ಷ 3 ೬ ಗುರುತು, ಚಿಹ್ನೆ ಮಗು 3 ೧೫ ಒಳ್ಳೆಯದು | ಲಕ್ಷ್ಮೀಕರಿಣಿ 2 ೮ ಲಕ್ಷ್ಮಿಯೆಂಬ ಮೇದಿನಿ 2 ೩೭ ಭೂಮಿ ಮೇಳಿಸು 3 ೩೩ ಜತೆಸೇರು | ಲಂಪಣ ? ೬೭ ಕಾಮುಕ ಮೊನಸು 4 ೫ ಮೊನೆ ಕಾಣಿಸು | ಲಾಲಿಸು 4 ೬೫ ಮುದ್ದು ಮಾಡು ಮೊರಡಿ 1 ೫೦ ಕಲ್ಲುಗುಡ್ | ಲಲಾಯ 3 ೬೬ ಕೋಣ ಮೊಳೆವೋಗು { ೩೬ ಹುಟ್ಟಿಬರು | ಬುಳಿ 4 ೩ ಚುರುಕಿನ ಚಲನೆ ಮೋಳಿಗೆ 2 ೪೦ (ಸೌದೆಯ ಕಟ್ಟು | ಲೆಂಕ 1 ೪ ಸೆವಕ, ಭಜನೆ (ತಾಳೆಯ ಗೊನೆ| ಲೋವೆ 1 ೨೯ ಇಳಿಮಾಡು ಮೌರ್ನಿ 2 ೨೯ ಬಿಲ್ಲಿನ ಹಗ್ಗ ಲೋಹಿತಮತೃ, 3 ೫೦ ಕೆಂಪುಮೀನು ಯು ಯುಗಳಕ 1 ೪೩ ಜತೆ, ಎರಡು ವಕ್ಕೆ 4 ೮೮ ಮುಖ ಯೋನಿ 3 ೫೬ ಸ್ತ್ರೀಯ ವಯೋಮಾರ್ಗ | ೭೧ ಮಾತಿನಜಾಡು ಜನನೇಂದ್ರಿಯ ವತ್ಸರ 4 ೮೩ ವರ್ಷ ವದನ 1 ೬೧ మేము ರಂಗರಕ್ತಿ 2 ೩೦ ರಂಗದಲ್ಲಿ ವನಜ 1 ೪೬ ತಾವರೆ ಸಂತೋಷದಾಯಕ ವಂದಿ } ೨ ಸ್ತುತಿಪಾಠಕ ವಾದುದು| ವಲ್ಲಭ ! ೧೨ ಸತಿ, ಒಡೆಯ ರಜ 2 ೨೦ ರಜಸ್ಸು; ಧೂಳು| ವಸುಂಧರೆ 2 ೧೬ ಭೂಮಿ ರಣಗೌಡ 2 ೫೫ ಯುದ್ದದಲ್ಲಿ ವಹಿಣಿ 2 ೨೯ ಬೆಡಗು ತೊಳೆಯಲ್ಪಟ್ಟುದು ಪ್ರದರ್ಶನ ________________

ಶಬ್ದಕೋಶ ಮೋಡ ನಾಮೆ 2 ೫೮ ಚೆಲುವೆ |ಶರದಭ್ರ 2 ೨೨ ಶರತ್ಕಾಲದ ನಾಮೆ 2 ೫೮ ಪ್ರತಿಕೂಲೆ | ಮೋಡ ವಾರವನಿತೆ 64 ೬ ವೇಶ್ಯಾಸೀ | ಶರಧಿ 2 ೧೦ ಸಮುದ್ರ ವಾರಿ 1 ೫೫ * ಖಡ್ಗ (?) |ಶಾಂತಂ ಪಾಪಂ 3 ೧೪ ಪಾಪಶಾಂತ ಮಾರಿ (?) ವಾಗಲಿ ವಾರಿಧಿ 1 ೨೮ ಸಮುದ್ರ | ಶಾರದನಿರದ 4 ೮೪ ಶರತ್ಕಾಲದ ವಾರ್ಧಿ 1 ೨೫ ಕಡಲು ವಾರ್ಬಿಂದು 2 ೪೧ ನೀರಹನಿ | ಶಾಸನ 4 ೮೮ ಧರ್ಮ ವಾಸನ 1 ೬ ಇಂದ್ರ | ಶೀತಕರ 1 ೬೭ ಚಂದ್ರ ವಿಕಲಸ್ಕಾಂತೆ 2.೩.೨ ತಳಮಳದ ಮನ | ಶೀತಾಂಶು 4 ೫೬ : ಚಂದ್ರ ಶೀರ್ಷ 1 ೨೭ ವಿಕಳ ಹೃದಯರ್ 1 ೬೬ ಹಾಳು | ಶೋಧಿಸ 4 ೨ ಸರಿಪಡಿಸುವ ಬುದ್ದಿಯವರು | ಶ್ರಾವಕಜನ 1 58 ಜೈನಗೃಹಸ್ಯ ವಿನೇಯ 1 ೪೬ ಹೇಳಿದಂತೆ ನಡೆವ ಸ್ಪಷ್ಟ 3 ೫೯ ನಾಯಿಮುಚ್ಚಿದ ವಿಪ್ರ 3 ೬೧ ಬ್ರಾಹ್ಮಣ | ಸಂಯಮ 1 ೪೫ ಮನೋನಿಗ್ರಹ ವಿಭೂಷಣ 1 ೬೬ ಆಭರಣ | ಸಂವರಣೆ 1 ೧೧ ರಾಜ್ಯಭಾರ ವಿನೋಕಮ್ಮಗ 4 ೨೩ ಮೋಹಗೊಳಿ | | ಸಂಸಾರ

  • ಸುವ ಮೃಗ | ಸಗ್ಯ 3 ೬೦ ಸ್ವರ್ಗ ವಿಷಣ್ಣನನೆ 2 ೩೫ ವಿಷಾದಗೊಂಡ | ಸಂತಸ 2 ೬ ಸಂತೋಷ

ಈ ಮುಖವುಳ್ಳವಳು | ಸಂದ 1 ೩ ಪ್ರಸಿದ್ದ ವಿಷಯ 1 ೨೭ ದೇಶ | ಸಮನಿಸು 2 ೩೪ ಉಂಟಾಗು ವಿಷಯಾಮಿಷ 2 ೧೨ ಇಂದ್ರಿಯ | ಸಮೆ 3 ೨೪ ಮಾಡು ಸುಖದ ಆಕೆ | ಸಯು 1 ೭೨ ಸರಿಯಾದ್ದು, ವಿಷಾಹಿ 4 ೮೫ ವಿಷದ ಹಾವು ವಿಹರಿಸು 3 ೭೮ ತಾವರೆ ಸರವಿ 3 ೪೫ ಹಗ್ಗ ವೃಂದಾರಕ 1 ೬ ದೇವತೆ | ಸರಸಿಜ 1 ೨ ತಾವರೆ ಸಮೂಹ | ಸರಸೀರುಹ 1 ೬೭ ಸವಣ 2 ೬೮ ಜೈನಸನ್ಯಾಸಿ ಶಯ್ಯಾ 1 ೧೮ ಹಾಸಿಗೆ | ಸಾಗುದುರೆ 3 ೧೫ ಸಾಯುವಕುದುರೆ

೭೬

4 ೭೪ ತಾವರೆ ________________

೧೫೨ ಯಶೋಧರ ಚರಿತೆ ಸಾರ 3 ೬೬ ಕಟ್ಟಿ, ಅಣೆಕಟ್ಟು | ಸೆಳೆ 1 ೯ ಬೆತ್ತ ಸಾರ್ಚು 4 ೧೦ ಇರಿಸು | ಸೆಳುಗುರ್‌ 4 ೬ ಚೂಪಾದ ಸಿಂಟ 4 ೨೧ ಕೆಟ್ಟನಾದವನು ಗುರು ಸಿರ 1 ೩೬ ತಲೆ | ಸೇಕ 2 ೧೪ ಸುರಿಯುವಿಕೆ ಸಿಸಿ 1 ೩೦ ಶಿಶಿರ, ಚಳಿಗಾಲ | ಸೈರಿಭ 3 ೭೬ ಕೋಣ ಸುದ್ದಿ ! ೩.೪ ಸುಖ ಹೆಚ್ಚಿಸು | ಸೊಡರ್ 3 ೬೯ ದೀಪ, ಬೆಳಕು ಸನ ವುದು | ಸೊದೆ 4 ೨೧ ಸುಣ್ಣ ಸುಟ್ಟು - 2 ೨೦ ಸುಂಟರಗಾಳಿ | ಸೋದೆ 3 ೩.೭ ನವಿಲಗರಿ ಸುದತಿ 2 ೫೯ ಹೆಂಡತಿ, ಸ್ತ್ರೀ | ಸೋಂಕು 2 ೨೪ ಸ್ಪರ್ಶ, ಮುಟ್ಟ ಸುಧಾ 3 ೮ ಅಮೃತ, ಹಾಲು ಸುಧಾಂಶು 3 ೪೧೭ ಚಂದ್ರ | ಸೌರಭ 3 ೩೧ ಪರಿಮಳ ಸುಧಾರ್ಣವ 4 ರ್೪ ಹಾಲುಕಡಲು | ಸ್ಮರಚಾಪ 2 ೪೨ ಕಾಮನಬಿಲ್ಲು ಸುಪಕ್ಷ 3 ೭೮ ಒಳ್ಳೆಯ ಪಕ್ಷ | ಸ್ಮರ 4 ೫೬ ಮುಗುಳನಗೆ ಒಳ್ಳೆಯ ರೆಕ್ಕೆ | ಪ್ರಜ 4 ೬೪ ಮಾಲೆ ಸುಮನೋ ! ೨೩ ಕಾಮ | ಸ್ವನ 4 ೮೮ ಶಬ್ಬ, ಧ್ವನಿ ಬಾಣ ಸ್ವರವೇದವಿದ್ಯೆ 4 ೩ಣ ಧ್ವನಿಕೇಳಿ ಗುರಿಗೆ ಸುರಚಾಪಚ್ಛವಿ 2 ೨೨ ಕಾಮನಬಿಲ್ಲಿನ ಬಾಣಬಿಡುವ ವಿದ್ಯೆ ಕಾಂತಿ ಸುರಭಿಕರ 2 ೪ ಹೂವಿನ ಬಾಣ | ಹಪ್ಪಳಿಕೆನಗು 2 ೨೮ ಚಪ್ಪಟೆ ನಗು ಸುರಿಗಿಆ { ೪೦ ಖಡ್ಗದಿಂದ ಕಡಿ | | ಹರಹಸನ 4 ೮೪ ಶಿವನ ನಗೆ ಸುವ್ರತ 1 ೧ ಇಪ್ಪತ್ತನೆಯ | ಸಿಂಹ ತೀರ್ಥಂಕರ ; | ಹರಿಚಂದನ 2 ಗಂಧ ಒಳ್ಳೆಯ ವ್ರತ ಹಣ 1 ೪೭. ಸೂಡು 3 ೭೦ ದಾಹ, ಕಾವು ಹಸಾದ 1 ೪೨ ಅನುಗ್ರಹ ಸೂರಿ | ೨ ಆಚಾರ್ಯ (ಅಪ್ಪಣೆ) ಸೂಮ್ 2 ೨೬ ಸರದಿ | ಹೇಂಟೆ 3 ೭೮ ಹೆಣ್ಣು ಕೋಳಿ ಸಜ್ಞರ 2 ೨೧ ಮಲಗುವ ಮನೆ | ಹೊಲಸು 2 ೧೨ ಒಂದು ಜಾತಿಯ ಸಜ್ಜೆ 3 ೪೦ ಹಾಸಿಗೆ ಪಾರಿವಾಳ ವುಳ್ಳವನು