• ಶ್ರೀರಾಮಾಶ್ವಮೇಧಂ ಗದ್ಯಕಾವ್ಯ ಪದ್ಮಪುರಾಣದಲ್ಲಿ ಬರುವ ರಾಮಾಯಣಕ್ಕೆ ಸಂಬಂಧಿಸಿದ ಕಥೆ ಇದರ ಆಕರ. ಆರಂಭದಲ್ಲಿ ಬರುವ ಮಳೆಗಾಲದ ವರ್ಣನೆ, ಮುದ್ದಣ ಮನೋರಮೆಯರ ಸಂವಾದ ವಿನೂತನವಾಗಿದೆ. ನಿರೂಪಣೆಯಲ್ಲಿ ನವೀನತೆ ಕಂಡುಬರುತ್ತದೆ. ಓದುಗನಲ್ಲಿ ಹೊಸ ಸಂವೇದನೆಯನ್ನೂ ಕುತೂಹಲವನ್ನೂ ಕೆರಳಿಸುವಂತೆ ಇಡೀ ಕಾವ್ಯ ಮುದ್ದಣ ಮನೋರಮೆಯರ ಸಂವಾದದ ಮೇಲೆ ನಿಂತಿದೆ ಎನ್ನಬಹುದು. ರಾಮನ ಕಥೆ ಮುಖ್ಯವಾದರೂ ಶ್ರೀರಾಮಾಶ್ವಮೇಧಂ ಕಾವ್ಯ ಪ್ರಸಿದ್ಧವಾಗಿರುವುದು ಈ ಸಂಭಾಷಣೆಗಳಿಂದ ಮತ್ತು ಮಾತಿನ ಮೋಡಿಯಲ್ಲಿಯ ಹೊಸತನದಿಂದ. (ಮೈ.ವಿ.ವಿಶ್ವಕೋಶದಿಂದ- ಮುದ್ದಣ)