ಸಂಚಿಕೆ-೬/ನೀಂ ಸತ್ಯವ್ರತನೆ ದಿಟಂ

<<       ಅಯೋಧ್ಯಾ ಸಂಪುಟಂ     >>       ಕಿಷ್ಕಿಂದಾ ಸಂಪುಟಂ       <<      ಲಂಕಾ ಸಂಪುಟಂ        >>     ಶ್ರೀ ಸಂಪುಟಂ        <<


ಸಂಚಿಕೆ-6 – ನೀಂ ಸತ್ಯವ್ರತನೆ ದಿಟಂ


ಮುಗಿದುದಾ ಮಂತ್ರಣದಿರುಳ್ ; ಇಂದ್ರ ದಿಙ್ನಯನಕ್ಕೆ

ನೀರುರ್ಕ್ಕಲೆಮೆದೆರೆದುದೊಯ್ಯನೆ ಉಷಃಕಾನ್ತಿ.

ಋಶ್ಯಮೂಕದ ಶಿಖರ ವೇದಿಕೆಯೊಳಿರ್ದರಿಗೆ

ತೋರ್ಪುದು ನಭಃಪಾರವಿಶ್ರಾಂತಮಾ ಗಿರಿಪಂಕ್ತಿ,

ತೆರೆಮೇಲೆ ತೆರೆಯೇರ್ದು ಪರ್ವಿದ ಸಮುದ್ರಮಂ

ಪ್ರತಿಕೃತಿಸುವಂತೆ. ತಣ್ಮಲೆಯೆಲರೊಳಲೆದುದಯ್

ಸಿಪಿಲೆವಕ್ಕಿಯ ಸಿಳ್ಳಿನಿಂಚರಂ !

“ಪೊಳ್ತೇರ್ವ

ಮುನ್ನಮಲ್ಲಿರ್ಪಮೆಂಬಾತನೇಕಿನ್ನೆಗಂ

ಬಾರನೈ, ಸೌಮಿತ್ರಿ ? ಮರ್ಕಟಧ್ವಜರಿವರ್

ವಾನರರ್ ! ಕಪಿಬುದ್ಧಿ ತಾನತಿಚಂಚಲಂ ! ಮತ್ತೆ ೧೦

ಬೇರೊಂದನೇನಾನುಮಂ ನೆನೆದನೇಂ ರುಮಾ

ವಲ್ಲಭಂ ?”

ಕಿಷ್ಕಿಂಧೆಯತ್ತಣ್ಗೆ ಕಣ್ಣಾಗಿ,

ಬೇರೆ ತಾಂ ಮಣೆಯಾಗಿ ಮರದಡಿ ಕುಳಿತ ರಾಮಂಗೆ,

ಬಳಿ ನಿಂದು ನೋಡುತಿರ್ದವರಜಂ : “ಹೇ ಆರ್ಯ,

ಅನಾರ್ಯರಿವರಂ ನಂಬಿ ಆರ್ಯಕುಲದೇವಿಯಂ

ನಾಮೆಂದು ತಂದಪೆವೊ ನಾನರಿಯೆ ! ಇನ್ನೆಗಂ

ಹೆರರ ಕಯ್ ಹಾರೈಸದೆಮ್ಮಾರ್ಪನಾಂ ನೆಮ್ಮಿ

ಮುಂಬರಿದ ನಮಗೀಗಳೇಕೀ ಕಪಿಧ್ವಜರ

ಕಾಡದಟಿನೊಂದು ಹಂಗು ? ಇವರ ಮನೆಯಂ ತಿದ್ದಿ

ನಮ್ಮ ಕೊನೆಯಂ ಸಾಧಿಪನಿತರೊಳೆ ದೇವಿಗೇಂ ೨೦

ಗತಿಯಹುದೊ ? ದೀರ್ಘಸೂತ್ರಿಗಳಿವರ ಸಂಗದಿಂ

ಕಿಡುವುದೆ ದಿಟಂ ನಮ್ಮ ಕಜ್ಜಂ !”

ಸಹೋದರನ

ಕಿಸುಗಣ್ಚಿದಾನನವನೀಕ್ಷಿಸುತೆ ರಾಘವಂ

ಸಂತೈಸಿದನು ಇಂತು : “ಊರ್ಮಿಳೇಶನೆ, ತಾಳ್ಮೆ ! ವಾನರರ್

ನೀನಾಡುವನಿತು ಕೀಳುಗಳಲ್ತು ;

ನಮ್ಮದಟು ನೀನೂಹಿಪನಿತು ಬಲ್ಲಿತುಮಲ್ತು.

ಕಿರಿದಲ್ತು ನಮ್ಮ ಮುಂದಿಹ ಕಜ್ಜದುಜ್ಜುಗಂ ;

ಮೇಣಲ್ಪಮೆಂದರಿಯದಿರ್ ದೈತ್ಯವಿಕ್ರಮಂ.

ನಿನಗಿನೇನಸಿಯಲ್ತು ನನ್ನ ಬಗೆಯುಬ್ಬೆಗಂ

ದೇವಿಯನ್ವೇಷಣೆಗೆ, ರಕ್ಷಣೆಗೆ, ರಾಕ್ಷಸರ ಮೇಣ್ ೩೦

ವಧೆಗೆ. ಲಕ್ಷ್ಮಣ, ನೀನು ಕಲಿಯಾದೊಡಂ ನಮಗೆ

ಬೇಳ್ಕುಮೀ ಮಲೆಯರ ನೆರಂ. ಕೆಳೆಯರೊಲ್ಮೆಯಂ

ಬಿಟ್ಟು ಕಳೆವುದು ಬರಿಯ ಬೆಳ್ತನಂ. ಮಹಿಮರಯ್

ಕಪಿಗಳೋರೊರ್ವರುಂ. ನಿನಗರಿವಹುದು ಮುಂದೆ.

ಕೈಕೊಳೆ ಮಹತ್ಕಾರ್ಯಮಂ, ಮಾನವನ ಮಹಿಮೆ

ಮೈದೋರ್ಪುದೈ …. ಪೂಣ್ದೆವಾ ರವಿತನೂಜನುಂ

ನಾನುಮಗ್ನಿಯೆ ಸಾಕ್ಷಿಯಾಗಿ ಮಿತ್ರತ್ವಮಂ.

ತಗದು ಮಿತ್ರದ್ರೋಹಮಿನಕುಲಕೆ.”

ಅಗ್ರಜಗೆ

ಮೌನದೊಪ್ಪಿಗೆಯಿತ್ತು ಸೌಮಿತ್ರಿ ರವಿಯುದಯ

ದೃಶ್ಯಮಂ ನಿಟ್ಟಿಸುತ್ತಿರೆ, ಕೇಳ್ದುದೊಂದದ್ಭುತಂ ೪೦

ರಣಕಹಳೆ, ಬೆಳಗಿನ ಗಾಳಿ ತಲ್ಲಣಿಸಿ ಕಂಪಿಸಿರೆ,

ಸುಗ್ರೀವನೈತಂದನಾಂಜನೇಯಾದಿಗಳ

ಮುಂದೆ, ವಾನರಕುಲದ ಯುದ್ಧಪದ್ಧತಿಯಂತೆ

ಭೈರವಾಭೀಳವೇಷಿ ! ರಘುತನೂಜರ ಕಣ್ಗೆ

ಬೆಕ್ಕಸಮೆರಗಿದತ್ತು, ಹಿತಭಯಾನ್ವಿತಮಾಗಿ,

ಕಂಡಾ ವಿಚಿತ್ರ ಸಖನಂ : ರಕ್ತವರ್ಣಂಗಳಂ

ಪೊದೆದ ಸಂಧ್ಯಾ ಮೇಘವೋ, ಕೇಸುರಿಗಳಿಂ

ಪುದಿದ ಧೂಮದೇಹಾಗ್ನಿಯೋ, ವಿಪಿನ ಸುಂದರ

ಚೈತ್ರಮಾಸದ ಫುಲ್ಲ ಪುಷ್ಪಮಯ ಕಿಂಶುಕವೊ,

ಚಂದ್ರಾಂಬರಾ ನಿಶೀಥಿನಿಯೊ ಪೇಳೆಂಬಿನಂ ೫೦

ರಕ್ತವಸ್ತ್ರಂಗಳಿಂ ರಕ್ತವರ್ಣಂಗಳಿಂ

ಕೆಂಬಣ್ಣವೂಗಳಿಂ ಕೆಂಬಕ್ಕಿಗರಿಗಳಿಂ

ವ್ಯೋಮಾಭ ರೋಮಮಯ ದೇಹಮನಲಂಕರಿಸಿ

ಭೀಕರಾಯುಧಿಯಾಗಿ ಕಪಿಕೇತನವ ತೂಗಿ

ಸುಗ್ರೀವನೈತಂದನೈ. ಸಮರ ಸಜ್ಜಿತಂ,

ದ್ವಂದ್ವ ಯುದ್ದ ವಿಶಾರದಂ ! ಕಂಡೊಡನೆ ಆ

ಕಪೀಂದ್ರನಂ, ಅಪ್ರತಿಮ ರಣಧೈರ್ಯ ಸಾಂದ್ರನಂ,

ತಲೆತಗ್ಗಿದುದು ಶಂಕೆ, ಸಪ್ರಾಣಿಸಿತ್ತಾಶೆ,

ಹೆಡೆಯೆತ್ತಿದುದು ನೆಚ್ಚು ಕೆಚ್ಚಿನೊಡನೆಣೆಯಾಡಿ

ರಘುಜರಾತ್ಮದಲಿ.

ಸಿಸುನೇಸರೆಳಗದಿರ್ಚವರಿ, ೬೦

ಪೊನ್ನೀರೊಳಳ್ದ ಕುಂಚದ ತೆರದಿ, ಕಾಂಚನದ

ಕಾನ್ತಿಯಂ ಸಿಂಚಿಸುತ್ತಿರೆ ಕಾನನದ ಮೆಯ್ಗೆ,

ತರತರ ಸರದ ಕೊರಲ ಬನವಕ್ಕಿಯಿಂಚರಂ

ಕರೆಯುತಿರಲಿಂಪುವೊನಲಂ ಕಿವಿಗೆ, ರಮಣೀಯಮಾ

ಕಾನನಗಿರಿಶ್ರೇಣಿ ಸುಗ್ರೀವ ರಾಮರಂ,

ಕಾನನಪ್ರಿಯರಿರ್ವರಂ, ಮುಗುಳ್ನಗೆವೆರಸಿ

ಪರಸುತಿರೆ, ಇಳಿದರವರಾ ಋಶ್ಯಶೃಂಗದಿಂ

ಕರುತ್ತು ಕಿಷ್ಕಿಂಧೆಯಂ. ಇಳಿದರೇರಿದರಂತೆ

ಸೇರಿದರ್ ವಾಲಿ ಪಾಲಿತ ದುರ್ಗ ನಗರಮಂ

ಸುತ್ತಿ ಮುತ್ತುತೆ ದಟ್ಟಮಿಡಿದೇರ್ದು ಪರ್ವಿದಾ ೭೦

ಗಹನ ವನಮಂ. ಪಳುಮರೆಯೊಳಡಗಿ, ಪಣ್ಮರಕೆ

ಮರಸು ಕೂತವರಂತೆ, ಮೋನದಿಂದೆಳ್ಚರಿಂ

ರಾಮಾದಿಗಳ್ ನಿಟ್ಟಿಸಿರೆ ಕಾದು ಕಾತರಿಸಿ ;

ಸುಗ್ರೀವನೊರ್ವನೆಯೆ ಮುಂಬರಿಯುತೊಂದರೆಯ

ಬಂಡೆಯನಡರಿ, ನಿಮಿರ್ ನಿಂತು, ಕಾಡೆಲ್ಲಮಂ

ದಿಟ್ಟಿಸಿದನಾಲಿಯಿಂದಾಲಿಂಗಿಪಂದದೊಳ್

ತನ್ನೊಲಿದ ಬೀಡೆಲ್ಲಮಂ. ಆ ವನಪ್ರೇಮಿ

ವಿರಹ ರೋಷದಿ ಸುಯ್ದನೌಡುಗಚ್ಚಿದನೊಡನೆ

ಗರ್ಜಿಸಿದನಚಲವೃಷಭಗೆ ಮಲೆತು ಮೂದಲಿಸಿ

ಗುಟುರಿಕ್ಕುವಂತೆ. ಮಲೆ ಮಾರ್ಗುಡುಗಿತರೆಬಂಡೆಗಳ್ ೮೦

ನಡುಗಿದುವೆಡಕೆ ಬಲಕೆ ; ತೊನೆದುವು ಮರದ ಹಂತಿ ;

ಚೀರಿದುವಡವಿವಕ್ಕಿ ; ಚಕಿತವಾದುವು ಜಿಂಕೆ

ಕಾಳ್ಕೋಣ ಪಂದೆ ಪೆರ್ಬುಲಿ ಸಿಂಹಗಳ್ ದಂತಿ.

ತೆರೆತೆರೆಯುರುಳಿ ಪರಿದು ಆ ಗರ್ಜನೆಯ ಸಿಡಿಲ್

ಶಾಂತವಾಗಲ್, ಮರಳಿ ಹೆಪ್ಪಾದವೋಲಾದುದೈ

ದಟ್ಟಡವಿಮೋನದ ಕಡಲ್.

ಮೊನೆಯಾದುದುಬ್ಬೆಗಂ

ನೋಳ್ಪರ್ಗೆ. ಮುಟ್ಟಿ ಹಿಡಿವೋಲಾದುದಾರಣ್ಯ

ನೀರವತೆ : ಮರಗಳೊಳು ಗಾಳಿ ಸುಯ್ಯುವ ಸದ್ದು ;

ತರಗೆಲೆಗಳುದುರಿ ಬೀಳುವ ಸದ್ದು ; ಪೂವಕ್ಕಿಗಳ್

ಬಂಡುಂಡುಲಿವ ಸದ್ದು ; ಬಣಗು ಕಡ್ಡಿಗಳಲುಗಿ ೯೦

ಮರಗೋಡಿನಿಂದುರುಳಿ ನೆಲಕೆ ಕೆಡೆಯುವ ಸದ್ದು ;

ಸಸ್ಯಂಗಳುಚ್ಛ್ವಾಸಿಸುವ ಸದ್ದು ; ಬೆಳೆವ ಪುಲ್ ;

ನಿದ್ದೆಗಲ್ : ಮುಟ್ಟಿ ಹಿಡಿವೋಲಾದುದಾರಣ್ಯ

ನೀರವತೆ ! ಮರಪಸುರ ಕಂಡಿಕಂಡಿಗಳಿಂದೆ

ಬಿಸಿಲಿಣುಕಿ ಶಿಶುವಿನೋಲಾಡಿದುದು ನೆಲದಲ್ಲಿ,

ಕಣ್ಣು ಕಣ್ಣಿನ ರಂಗವಲ್ಲಿಯ ವಿಲಾಸಮಂ

ಚೆಲ್ಲಿ !

ನೋಡುತ್ತಾಲಿಸಿರಲಿಂತು, ಕೇಳ್ದತ್ತು,

ಬೆಟ್ಟ ಬಂಡೆಗಳದಿರೆ, ಮರದ ಕೋಡುಗಳುದುರೆ,

ಸಿಡಿಲ ಪರೆಯೋಲ್ ಕೊಡಂಕೆಯನಿರಿದಲೆವ ಚಂಡೆ !

ಕೂಡೆ ಕೇಳ್ಪುದು ವಾಲಿಯಾರ್ಭಟಂ, ಚಂಡೆಯಂ ೧೦೦

ಮೀರ್ದು, ಧಿಗಿಲೆಂದತ್ತು ರಾಮನೆರ್ದೆ ; ಹನುಮನಂ

ನೋಡಿದನು ಸೌಮಿತ್ರಿ ; ಮರದ ಮರೆವೊಕ್ಕಂತೆವೋಲ್

ಹದುಗಿ ನಿಂದುದು ನೀಲ ನಳ ಜಾಂಬವಪ್ರತತಿ !

ಬೆಟ್ಟ ಗುಡುಗಿತ್ತಲ್ಲಿ ! ಪಳು ನಡುಗಿತ್ತಲದೊ !

ಕಾಕು ಕೇಳಿಸಿತಲ್ತೆ ಆ ಪೆರ್ಬ್ಬಲಸಿನೆಡೆ ? ಇತ್ತ

ನೋಡಿತ್ತಲಾಲಿಸಾ ತರಗೆಲೆಯ ಸಪ್ಪುಳಂ !

ಕಾಣಲ್ಲಿ ಮುರಿಗೊಳ್ಳುತಿದೆ ಮರದ ತಲೆಸೊಪ್ಪು !

ಮತ್ತಮದೊ ಚಂಡೆದನಿ ! ವೀರಾಟ್ಟಹಾಸಮದೊ

ಮಾರುತ್ತರಂ ! ಮತ್ತೆ ಗರ್ಜಿಸಿದನದೊ ನಮ್ಮ

ಸುಗ್ರೀವ ! ಮತ್ತೆ ಅದೊ ಪ್ರತಿಗರ್ಜನಂ ! ದಿಟಂ, ೧೧೦

ವಾಲಿಯೆ ದಿಟಂ ! ಎಲ್ಲಿ ? ನೋಡಲ್ಲಿ ; ಓ ಅಲ್ಲಿ !

ಅದೆ ವಾಲಿ !

ಸಿಂಹದೋಲಾರ್ಭಟಿಸಿ, ಪುಲಿಯವೋಲ್

ಚಿಮ್ಮಿದನ್ ಪಳುಗಬ್ಬದಿಂ ! ಚಿಮ್ಮಿ, ತಮ್ಮನಂ,

ರಣಾವೇಶಿ ರಣವೇಷಿಯಂ, ನೋಡಿದನ್ ವಾಲಿ !

ಕೆಂಪಾದುವಾಲಿ ; ರೌದ್ರತೆವೆತ್ತುದಾನನಂ ;

ಕೊಂಕುದುಟಿ ಮೇಲೆ ಕುಣಿದುವು ಮೀಸೆ. ಮತ್ತೊಮ್ಮೆ

ಮೇಲೆ ನಡುಗುವೋಲಬ್ಬರಿಸಿ ನುಗ್ಗಿದನ್ ಚಿಮ್ಮಿ

ಸುಗ್ರೀವನೆಡೆಗೆ ! ತನುಕಾಂತಿಯಿಂ, ವಸ್ತ್ರದಿಂ,

ವರ್ಣದಿಂ, ಮೇಣಲಂಕಾರದಿಂ ಸಮತೆವೆತ್ತಾ

ಸಮರ ಕಲಿಗಳೊಳ್, ಸುಗ್ರೀವನಾರ್ ವಾಲಿಯಾರ್ ೧೨೦

ತಿಳಿಯಲರಿಯದ ಬೆಮೆಯ ಬೆಳ್ಪಿಂದೆ, ಬಿಲ್ವೊತ್ತ

ದಾಶರಥಿ ಪಲ್ಗಚ್ಚಿದನ್ ; ಭೀಷ್ಮಪ್ರತಿಜ್ಞೆಯಂ

ನೆನೆನೆದು, ಸಿಗ್ಗಿಂದೆ ಬದ್ಧಭ್ರುಕುಟಿಯಿಂದೆ

ನೋಡುತಿರ್ದನ್ ಬಿಲ್ಲುಬೆರಗಾಗಿ, ಹೋರಾಡುತಿರೆ

ಹೋರಿಗಳೆರಡು, ಹೊಂಚುಹುಲಿ ದಿಟ್ಟಿಪೋಲಂತೆ !

ನುರ್ಗ್ಗಿ ಬರ್ಪತುಲ ಬಲಶಾಲಿಯಂ, ವಾಲಿಯಂ,

ಕಂಡು ತೆಕ್ಕನೆ ಕೆಲಕೆ ಸಿಡಿಯುತೆ ರುಮಾಪ್ರಿಯಂ

ಗುದ್ದಿದನ್ ನೆತ್ತಿಯಂ. ಕರ್ಗಲ್ಲು ನುರ್ಗುನುರಿ

ವೋಗುವಾ ಘಾತಕ್ಕೆ ಮೆದುಳ್ ಕದಡಿದೋಲಂತೆ

ತತ್ತರಿಸಿದಿಂದ್ರಜಂ, ಮತ್ತೆ ಚೇತರಿಸಿದನ್.

ಹತ್ತಿರಿರ್ದೊಂದರೆಯನೆತ್ತಿ ಸಿಡಿರೋಷದಿಂ

ಬಿಟ್ಟನ್ ಶತಘ್ನಿ ಗುಂಡಿಡುವಂತೆ. ಸತ್ತನೇ

ಸುಗ್ರೀವನೆಂಬನಿತರೊಳೆ, ಲಂಘಿಸಿ ಕೆಲಕ್ಕೆ,

ಗುರಿತಪ್ಪಿದಾ ಬಂಡೆ ಬಡಿದುದೊಂದವನಿಜದ

ಗೂನ್ಗಂಟೊರಟು ಬುಡಕೆ. ಬೇರುಗಳುಡಿಯೆ, ಕೊಂಬೆ

ಬರಲಾಗಲೆಲೆಯುದುರಿ, ಮರಮೊರಗಿದುದು ಲರಿಲ್

ಲರಿಲ್ಲರಿಲ್ಲೆಂದು, ಆ ವೃಕ್ಷಮನೆ ಗದೆಗೈದು

ಸುಗ್ರೀವನಪ್ಪಳಿಸುತಿರೆ ವಾಲಿಯಂ, ಅದಂ

ಕಪಿಮುಷ್ಟಿಯಿಂ ಪಿಡಿದು ಜಗ್ಗಿಸೆಳೆಯುತೆ ವಾಲಿ :

“ಕೇಳೆಲವೊ ಸುಗ್ರೀವ, ನೀಂ ತಮ್ಮನೆಂಬೊಲವರಕೆ, ೧೪೦

ನಿನ್ನಾ ಪತಿವ್ರತಾ ಸತಿಯೈದೆತನಕಾಗಿ,

ದೇವಿ ತಾರೆಯ ವಚನಕಾಗಿ, ಪುಸಿಗಾಳೆಗಂ

ಗೊಟ್ಟೊಡತಿಮಲೆತು ಕೊಬ್ಬಿದೆಯೆಲಾ ? ಹಗೆತನಂ

ಬಾಡಿದೆನ್ನೆರ್ದೆಗೆ ನೇಹಂ ಮೂಡುತಿರ್ದಂದೆ,

ಕೂಡಿಕೊಂಡಾವನೋ ಬಣಗು ಬಡಗರಸನಂ,

ಕೆಣಕಿದಪೆ ಮತ್ತೆಯೆನ್ನಂ. ಮರುಳೆ, ಸಾಹಸದಿ

ವಾಲಿಯಂ ಗೆಲ್ದವರದಾರುಂಟೊ ? ರಾವಣನೆ

ಹೆದರಿ, ಮೈತ್ರಿಯನಾಶ್ರಯಿಸಿ ಬರ್ದುಕುತಿರ್ಪನೆನೆ

ಕಾವರಾರೈ ನಿನ್ನನೆನ್ನ ಕೋಪಪ್ರಳಯ

ಫಣಿಗರಳದಿಂ ?” ಎನುತೆ ತಮ್ಮನ ಕಯ್ಯ ಗದಾ ೧೫೦

ವೃಕ್ಷಮಂ ಕಸಿದು ಬಿಸುಟನ್ ; ನೆಗೆದು ಮೇಲ್ವಾಯ್ದು,

ಬಿಗಿದಪ್ಪಿದನ್ ಭುಜದ ವಾಸುಕಿಯಿನವರಜನ

ಮೆಯ್ಯ ಮಂದರವನುರ್ವರೆಗಿರ್ವರುರುಳ್ವಂತೆ !

ತಿರೆಗುರುಳಿ ಹೊದೆಯ ಮರೆಯಲಿ ಹೋರುತಿರ್ದರಂ

ಕಾಣಲಾರದೆ ಕಾತರಿಸುತಿರೆ ವಿಯದ್ವರ್ಣಿ,

ಕೇಳಿಸಿತು ದಿಡ್ಡುದಿಡ್ಡೆಂಬ ಕೈಗುದ್ದುಗಳ

ಸದ್ದುಗಳ ಮೀರುತೇರ್ದಾರ್ತನಾದನಂ. ಒಡನೆ ಹಾ

ಓಡುತಿರ್ದಾ ರಾಮಮಿತ್ರನಂ ಬೆಂಬತ್ತಿ

ಕಾಣಿಸಿದನಟ್ಟುತಿರ್ದಾ ವಾಲಿ. ಮಿತ್ರನಾರ್

ಶತ್ರುವಾರೆಂಬನಿತರೊಳೆ ದಟ್ಟ ಪಳುವದೊಳ್ ೧೬೦

ಮರೆವೋದರಿರ್ವರುಂ.

ರಾಮನಂಬಿನ ನೆರಂ

ಬಿಸಿಲ್ಗುದುರೆಯಾದುದಂ ಕಂಡು ಸುಗ್ರೀವಂಗೆ

ನೆಚ್ಚುಗೆಡೆ, ವಾಲಿಮುಷ್ಟಿಯ ವಜ್ರಘಾತಕ್ಕೆ

ಮೈಮುರಿಯೆ, ಕೆನ್ನೀರುಮೊಕ್ಕಲೊಳಸೋರುತ್ತೆ

ಹಿಮ್ಮೆಟ್ಟಿದನ್ ಮತಂಗಾರಣ್ಯ ರಕ್ಷಣೆಗೆ.

ಋಷಿಶಾಪಮಂ ನೆನೆದು, ಬದುಕು ನಡೆ ಹೋಗೆಂದು

ಮುಳಿಸಂ ನುಡಿದು, ವಾಲಿ ಪಿಂತಿರುಗಿದನ್ ತನ್ನ

ಕಿಷ್ಕಿಂಧೆಗೆ.

ಇತ್ತ ರಾಮಾದಿಗಳುಮರಸುತ್ತ

ಬಂದು ಕಂಡರು ವೈರಿಮುಷ್ಟಿ ಪ್ರಹಾರದಿಂ

ಜರ್ಜರೀಕೃತದೇಹನಂ, ರುಧಿರ ಸಿಕ್ತಾಂಗನಂ, ೧೭೦

ಕ್ಲಾಂತ ಸುಗ್ರೀವನಂ. ಕಣ್ಬನಿವೆರಸಿ, ನಾಣ್ಚಿ,

ಬಾಗಿ, ನೆಲನಂ ನೋಡುತಾ ದೀನವಾನರಂ,

ಕೆಳೆಯನಿರ್ಕೆಯ ಕರುಣ ದುಃಸ್ಥಿತಿಗೆ ಮರುಗಿರ್ದ

ದಿನನಾಥಕುಲಸಂಭವಂಗೆ : “ನೀನಿಂತೇಕೆ

ನಂಬಿಸೆನ್ನಂ ಕೊಂದೆ, ಓ ಕರುಣಿ ! ವಾಲಿಗೇಂ

ಬೇಹುಗಾರನೊ ? ಕೊಲ್ಲಿಸಲ್ಕೆನ್ನನೆಂದಿಂತು

ಪುಸಿವೇಳುತಾರ್ಯನೀತಿಯ ಮೆರೆದೆಯಲ್ತೆ ? ನಾಂ

ಮುನ್ನಮೊರೆಯೆನೆ ವಾಲಿ ದುಸ್ಸಾಧ್ಯನೆಂಬುದಂ

ನಿನಗೆ ?” “ಮನ್ನಿಸು, ವಾನರೇಂದ್ರ, ಮನ್ನಿಸೆನ್ನನ್.

ಕೋಳುವೋದೆನ್ ರೂಪಸಾದೃಶ್ಯದಿಂ, ಗೆತ್ತು ೧೮೦

ನಿನ್ನಣ್ಣನಂ ನಿನಗೆ. ಮೋಸವೋಗೆನೊ ಮರಳಿ.

ಏಳು, ನಡೆವಂ ಮತ್ತೆ ಕಿಷ್ಕಿಂಧೆಯತ್ತಣ್ಗೆ.

ಬೇಂಟೆಯೊಳ್ ಸೋವಿನವರೆಂತು ಪಳುವಂ ನುರ್ಗ್ಗಿ

ಬಿಲ್ಲಿರ್ಪೆಡೆಗೆ ತರುಬುತೆಳ್ಬುವರೊ ಹಕ್ಕೆಯ

ಮಿಗಂಗಳಂ, ನೀನಂತೆವೋಲ್ ಕರೆದು, ವಾಲಿಯಂ

ಪೊರಮಡಿಸವನ ಕೋಂಟೆಯಿಂ. ಕಾಂಬೆ ನೀನೊಡನೆ

ಬಾಣದೇರಿಗೆ ನೆತ್ತರಂ ಕಾರ್ದು ಕೆಡೆದಳಿವ

ಗೃಹವೈರಿಯಂ ! ಕುರುಪಿರ್ಕೆ ಈ ಪೂವಿಡಿದ ಬಳ್ಳಿ

ನಿನ್ನ ಕಂಠಕ್ಕೆ : ಜಯಮಾಲೆಯೆಂದೆಯೆ ತಿಳಿಯ

ನೀನಿದನ್ !” ತುಡಿಸಲ್ಕೆ ದಾಶರಥಿ ಹೂವಿಡಿದ ೧೯೦

ಕಾಡುಬಳ್ಳಿಯನವನ ಕೊರಳಿನಲಿ, ಹಾಲ್ಗರಿಯ

ಬೆಳ್ವಕ್ಕಿ ಸಾಲ್ಗೊಂಡು ಮಾಲೆಗಟ್ಟಿದ ಬಯ್ಗು

ಮುಗಿಲಂತೆವೋಲೆಸೆದನಾ ವಾನರಂ !

ಮೇಲೆ, ಕೇಳ್,

ತೆರಳ್ದರವರಿನ್ನೊರ್ಮೆ ಕಿಷ್ಕಿಂಧೆಯತ್ತಣ್ಗೆ

ಸುಗ್ರೀವನಂ ಕೂಡಿದುನ್ಮೀಲಿತೋತ್ಸಾಹದಿಂ

ಪೆರ್ಚಿ.

ಅನ್ನೆಗಮತ್ತಲಾ ವಾಲಿ ತಮ್ಮನಂ

ದ್ವಂದ್ವಯುದ್ಧದಿ ಗೆಲ್ದು ಎಳ್ಬಟ್ಟಿದುರ್ಕಿನಿಂ

ಸೊರ್ಕಿ ಪೊಕ್ಕನ್ ತನ್ನ ಕಿಷ್ಕಿಂಧೆಯಂ. ತಾರೆ,

ಕೊಡಗಿನುಡುಗೆಯ ಸೀರೆ ಸಿಂಗರಿಸಿದಾ ನೀರೆ,

ಮರ್ದ್ದಿಕ್ಕುತೇರ್ಗಳ್ಗೆ, ಬಿಜ್ಜಣಿಕೆವೀಸುತ್ತೆ, ೨೦೦

ಕೈಸೋಂಕಿನಮೃತದಿಂ ಬಳಲಿಕೆಯನಾರಿಸುತೆ

ಬೆಸಗೊಂಡಳೇರ್ವೆಸನದಾಗುವೋಗಂ. ಗೆಲ್ದು

ಬಂದಿರ್ದೊಡಂ ವಾಲಿ, ಖಿನ್ನಮುಖದಿಂ ಪ್ರಿಯೆಗೆ

ಸತಿಗೊರೆದನಿಂತು ಹದಿಬದೆಗೆ : “ನೀನೆಂದವೊಲೆ

ರುಮೆಯೈದೆತನಕೆ ಕೇಡಡಸದೋಲಾತನಂ

ಬಡಿದಟ್ಟಿ ಬಂದೆ …. ಮನಮೇಕೊ ಸಂತಪಿಸುತಿದೆ.

ಕಾರಣವನರಿಯೆ …. ಮೇಣರಿತ ಕತದಿಂದಿಂತದೇಂ

ತಪಿಸುತಿರ್ಪುದೊ ? …. ಗುಹೆಯೊಳೆನ್ನಂ ಮುಚ್ಚಿ, ತೊರೆದು

ಬಂದನೆಂಬಾಕ್ರೋಶದುಲ್ಬಣದೊಳಂದು ನಾಂ

ತಮ್ಮನ ವಿನಯಮಂ ಕಿವುಳ್ಗೇಳ್ದು, ಆತನಂ ೨೧೦

ಪೆತ್ತಮ್ಮನೂರಿಂದೆ ಪೊರನೂಂಕಿದೆನ್, ತನ್ನುರುವ

ಕೆಳೆಯರ್ವೆರಸಿ ; ಬೇಯಿಸಿದೆನಾ ರುಮಾದೇವಿಯಂ

ಸಿರಿಮನೆ ಸೆರೆಯೊಳಿಟ್ಟು ; ಕಡೆಗಣ್ಣಿದೆನ್ ನನ್ನ

ಪೆಸರ ಪಳಿಯಂ, ನಿನ್ನ ಹಿತವಾಕ್ಯಮಂ …. ಮನಂ,

ಓರೊರ್ಮೆ, ಗೆಯ್ದನ್ನೆಯದ ಕಜ್ಜಮಂ ತಿರ್ದ್ದಿ,

ತಮ್ಮನಂ ತಾಯ್ನೆಲಕೆ ತರಲೆಳಸಿತಾದೊಡಂ,

ತಡೆಯಾಯ್ತು ಪುಸಿಬೀರದೊಂದು ಪುಸಿಲಜ್ಜೆ. ಮೇಣ್

ಆತನುಂ ಮರುಕಮಂ ಕರುಣೆಯಂ ಮೂಡಿಸುವ

ಮಾರ್ಗಮನುಳಿದು ಮುಯ್ಗೆಮುಯ್ಯಾಗಿ ಕೋಪಮನೆ

ಕೆಣಕಿದನ್ ; ಕದಡಿದನೆದೆಯ ರೋಷ ಸಾಗರದಿ ೨೨೦

ಬಡಬಾಗ್ನಿಯಂ ….. ಈಗಳುಂ ರಾಮನೆಂಬೊನಂ

ಮರೆ ನೆರಂಬಡೆದು …. ನಾನಾತನೆರ್ದೆಯಂ ಪತ್ತಿ

ಗುರ್ದ್ದಿಕ್ಕುವಾಗಳವನಂ ಕರೆದನಾದೊಡಂ

ತೋರ್ದನಿಲ್ಲಾ ಬೀರನಾವೆಡೆಯೊಳಂ ……”

ಮಾತು

ಮುಗಿವನ್ನೆಗಂ, ಕೇಳ್ದುದೊಂದಾರ್ಭಟಂ, ನಡುಗೆ

ಕಿಷ್ಕಿಂಧೆ ! “ಸುಗ್ರೀವನದೊ ಮತ್ತೆ !” ಎಂದೌಡು

ಕಚ್ಚಿ, ಕರಿಘೀಂಕೃತಿಯನಾಲಿಸುವ ಸುಪ್ತೋತ್ಥ

ಹರ್ಯಕ್ಷನೋಲಾದನಾ ವಾಲಿ ತಾನಾಭೀಳ

ರಕ್ತೇಕ್ಷಣಂ. ಹುಬ್ಬುಗಂಟಿಕ್ಕಿ ನೆಗೆದೆದ್ದು,

ತಡೆವ ತಾರೆಯ ಕೈಯನೋಸರಿಸುತಿರೆ ಕೆಲಕೆ, ೨೩೦

ದಿಂಡುರುಳಿದಳ್ ನೆಲಕೆ ; ಕಾಲ್ವಿಡಿದಳಾಣ್ಮನಂ

ಬೇಡಿದಳ್ ಕಣ್ಬನಿಯ ಜೇನಿಳಿವ ತಾವರೆಯ

ಚೆಲುವೆ ! “ಮಾಣ್, ಮನದನ್ನ, ಮಾಣ್ ; ಮಾರದಿರ್ ಚಲಕೆ

ಜೀವನಶ್ರೇಯಮಂ. ನೀನೀಗಳೆನ್ನೊಡನೆ

ನುಡಿಯುತಿರ್ದುದನೆ ಪಿಡಿ : ವೀರರೌದಾರ್ಯಮಂ !

ಪತಿವ್ರತಾ ರಮಣಿಯಂ ಆ ರುಮಾದೇವಿಯಂ

ನೆನೆ. ಪಡೆದ ತಾಯನಂತೆಯೆ ತಂದೆಯಂ ನೆನೆ ;

ಅಂತೆವೋಲ್ ನಿಮ್ಮಿವರೆಳೆತನದ ಲೀಲೆಯಂ,

ತಾರುಣ್ಯದೋಲದುಯ್ಯಾಲೆಯಂ ನೆನೆ. ಪಿಂತೆ

ನಿಮ್ಮೊಳಿರ್ದಳ್ಕರೆಯ ಸಗ್ಗಮಂ ನೆನೆ.” ತಾರೆ ತಾಂ ೨೪೦

ನುಡಿದೋರೆ, ಮುಗ್ಧನಾದನೆ ವಚನ ಮಂತ್ರದಿಂ -

ದೆಂಬಂತೆ, ವಾಲಿಗೊದಗಿತು ಶಾನ್ತಿ ; ತಮ್ಮನಂ,

ಅಣ್ಣ ಬಾ ಬಾರೆಂದು ಜೊಲ್ಲ ತೊದಳಿಂ ಚೀರ್ವ

ಸಣ್ಣ ಸುಗ್ರೀವನಂ, ನೋಳ್ಪರಾ ಕಣ್ಮಣಿಯ

ಚಿಣ್ಣನಂ, ಕಂದ ಸುಗ್ರೀವನಂ, ತನ್ನೊಲಿದ

ಮುದ್ದು ಸುಗ್ರೀವನಂ ಬೆನ್ನಿನೊಳ್ ಪೊತ್ತು, ತಾಯ್

ಕಂದ ಬಾರೆನ್ನುತಿರೆ, “ಉಪ್ಪು ಬೇಕೇ ಉಪ್ಪು ?”

ಎನುತೆ ತಾಂ ಪರಿದಾಡುತನಿಬರಂ ನಗಿಸಿದಾ

ಚಿಕ್ಕಂದಿನೊಂದು ಚಿತ್ರಂ ಸ್ಮೃತಿಗೆ ಮೈದೋರೆ,

ರೋಷಚ್ಯುತಂ ವಾಲಿ ಶಾಂತನಾದನ್. ಮೈತ್ರಿ ೨೫೦

ಸಂಚರಿಸಿದುದು ಮನದಿ, ವೈರಮಂ ಕೆಲಕ್ಕೊತ್ತಿ.

“ನೆರಪುವೆನ್, ತಾರೆ, ಸುಗ್ರೀವನಂ ತಂದಿಂದು

ರುಮೆಗೊಸಗೆಯಂ. ಸಿಂಗರಿಸು ನಡೆ ನಿನ್ನ ತಂಗಿಯಂ.

ಚಿಕ್ಕಂದು ನಾವಾಡಿದುಪ್ಪಾಟಮಂ ಮತ್ತಿಂದು

ತೋರಿದಪೆನೆನ್ನ ತಮ್ಮಂಗೆ. ನೀನನ್ಯಮಂ

ಚಿಂತಿಸದಿರಾಂ ಪೋಗಿ, ಕಾಳೆಗದ ನೆವದಿಂದೆ,

ಪೊತ್ತು ತಹೆ ರವಿಸೂನುವಂ !”

ನಿಲ್ಲದಲ್ಲಿಂದೆ

ಪ್ರೋಲ್ಲಾಸದಿಂ ಪರಿದನಾ ಬೃಹದ್ಬಲಶಾಲಿ

ವಾಲಿ. ಕಿಷ್ಕಿಂಧೆಯ ದಿವಾಕರಂ ನಡುವಗಲ

ಹೊಸ್ತಿಲಂ ದಾಂಟೆ, ಪೂರ್ವಾಚಲಕೆ ಯಾತ್ರೆಯಂ ೨೬೦

ತೊಡಗಿರ್ದುದಾಗಳೆ ತರುಚ್ಛಾಯೆ. ಪಿಂದಿಕ್ಕಿ

ಕೋಂಟೆ ಪೆರ್ಬಾಗಿಲಂ ಹೊರವಳಯದಡವಿಗೈ -

ತರುತಿಂದ್ರಜಂ ಕಂಡನಾ ವಿಪಿನ ಪುಷ್ಪಲತೆ

ಗ್ರೈವೇಯಮಾಗಿರ್ದ ಸುಗ್ರೀವನಂ, ವೈರಂ

ವೈರಾಗ್ಯಮೊಂದಿರ್ದೆರ್ದೆಗೆ ಕರುಣೆಯುಕ್ಕುತಿರೆ

ಮುನ್ನುಗ್ಗಿದನೊ ಅಣ್ಣನಪ್ಪಲೆಂದಾ ತಮ್ಮನಂ.

ಅಗ್ರಜನ ಹೃದಯ ಪರಿವರ್ತನೆಯನರಿಯದಾ

ಸುಗ್ರೀವನಿಕ್ಕಿದರೆಬಂಡೆಗಳನಂಗೈಯ

ದಾಂಡಿನಿಂ ಪೊಡೆಸೆಂಡನಾಡುತೆ ಕೆಲಕ್ಕಣೆದು,

ಮಿಂಚುಜವದಿಂ ಬಳಿಗೆ ಪರಿದು, ಕಪಿಮುಷ್ಟಿಯಿಂ ೨೭೦

ತುಡುಕಿ, ಶಾರ್ದೂಲಮಂ ಭೇರುಂಡನೆತ್ತುವೋಲ್

ತಮ್ಮನಂ ಪೊತ್ತು, ತಾಯೂರ್ಗೆ ಧಾವಿಸಿದನೈ

ದೇವಾಸುರರ ಮೀರ್ದ ದೈತ್ಯಬಲಶಾಲಿ, ಆ

ವಾಲಿ !

ನಿರ್ಲಕ್ಷಿಸುತೆ ದೈವಮಂ, ಪ್ರತಿಭಟಿಸಿ

ದೈವೀಪರಂಗಳಂ ಶಕ್ತಿಯಂ, ನೆಮ್ಮುತ್ತೆ

ತನ್ನಹಂಕಾರಮಂ ಸ್ವಬಲಮಂ ಸ್ವಾರ್ಥಮಂ,

ಚಲದಿಂ ವಿರೋಧಿಸಲ್ ವೈರಭಾವವನಾಂತ

ಆಸುರೀ ಸಾಧನೆಯ ದೈವೀವಿಮುಖಮಪ್ಪ

ಲೌಕಿಕ ಪರಾಕ್ರಮದ ಶಿಕ್ಷಾರಕ್ಷೆಗಿನ್ನಿಹುದೆ,

ಪೇಳ್, ಕೃಪಾಬಾಣಕ್ಕೆ ಬೆನ್ನಲ್ಲದನ್ಯಲಕ್ಷ್ಯಂ ೨೮೦

ತುದಿಗೆ ?

ಸನ್ಮಿತ್ರನಂ ಪೊತ್ತೋಡುವಾತನಂ

ಕಂಡು ‘ಹಾ ಕೈಮೀರ್ದುದಾ’ ಎನುತೆ ಮುಂಗೆಟ್ಟು,

ಬೇರೆ ಬಟ್ಟೆಯ ಕಾಣದಯ್ಯಯ್ಯೊ ರಘುಕುಲದ

ಶುಭ್ರ ಕೀರ್ತಿಯ ದಾಶರಥಿ, ಕಣೆಯ ಬಟ್ಟೆಯನೆ

ಕೈಕೊಂಡನೆಚ್ಚನ್ ಕಠೋರ ಶರಮೃತ್ಯುವಂ

ವಾನರನ ಬೆನ್ಗೆ ! ಬಿದ್ದನ್ ವಾಲಿ, ಬಿದ್ದುದೆನೆ

ಕಲ್ಪದ್ರುಮಂ ವೆರಸಿ ಸಗ್ಗದೈರಾವತಂ

ನೆಲಕೆ : – ದೀವದ ಹೋರಿಯಂ ಕಟ್ಟಿ ಬೇಂಟೆಗಂ

ಮರಸು ಕುಳಿತಿರೆ ಮರದ ತುದಿ ಮಂಚಿಗೆಯ ಮೇಲೆ,

ಸೋವತವನರಸಿ ಬರ್ಪುದು ಪಸಿದ ಪುಲಿ. ಮುಂದೆ ೨೯೦

ಕೊರ್ವಿದೆರೆಯಂ ಕಂಡದಂ ಕೊಳ್ವಲಂಪಿಂದೆ

ಹೊಂಚಿ ಮುಂಬರಿಯುತಿರಲೀಡೇಳುವುದು ಕೋವಿ.

ನೆರಕೆ ತಗುಲಿದ ಗುಂಡಿನೇರಿಂಗೊಡನೆ ಜೀವಿ

ಮೈಮರೆದುರುಳೆ, ಮರಸಿನಿಂದಿಳಿದುಬಂದು, ಆ

ಬೇಂಟೆಗಾರಂ ತನ್ನ ಬೇಂಟೆಯನೊಸೆದು ನೋಡಿ

ಮೆಚ್ಚುವನ್, ತನ್ನ ಬೀರದ ಬೆನ್ಗೆ ತಾನೆ ಕೈ

ಚಪ್ಪರಿಸಿ ! – ಓಡಿದರೊ ಬಿಳ್ದಿಂದ್ರಜನ ಬಳಿಗೆ

ರಾಮಾದಿಗಳುಮಂತೆ. ಸುಗ್ರೀವನಂ ತೆಗೆದು

ತಳ್ಕೈಸಿದರ್ ಉಘೇ ಎಂದು. ಸಂಭ್ರಮವಾರೆ

ನೋಡಿದರ್ ಪುರುಹೂತ ಜಾತನಂ, ಬಸವಳಿದು ೩೦೦

ನೆತ್ತರ್ಗೆಸರೊಳಾಳ್ದು ತನ್ನಾಳ್ದಿಳೆಗುರುಳ್ದು

ಬಿಳ್ದಾತನಂ. ನೋಡೆ ನೋಡೆ, ಖಿನ್ನತೆ ಮೂಡಿ -

ತನಿಬರಿಗೆ. ಹಿರಿದಾದುದಳಿಯೆ, ಹಗೆಯಾದರೇಂ,

ಹಿರಿತನಕೆ ನೋವಾಗದುಂಟೆ ? ತಾನಾವನಂ

ದೂರದಿಂ ಕೇಳ್ದಿರ್ದನಾ ಪೊಳ್ತಿನನ್ನೆಗಂ ಮೇಣ್

ದೂರದಿಂದಲ್ಲದೆಯೆ ಕಂಡಿರ್ದನಿಲ್ಲ, ಆ

ವೀರನ ಶರೀರದೆಡೆ ನಿಂದು ಸೀತಾಸ್ವಾಮಿ

ಸುಯ್ದು, ತನ್ನೊಳಗೆ ತಾಂ ಬಯ್ದುಕೊಂಡನ್ ತನ್ನ

ಬಿಲ್ಜಾಣ್ಮೆಯಂ.

ತಣ್ಪುವೀಸುತ್ತಲೆವ ಮಲೆಯ

ಗಾಳಿಗೊಯ್ಯನೆ ವಾಲಿ, ಚೇತನ ಗವಾಕ್ಷಮಂ ೩೧೦

ತೆರೆವಂತೆ ಕಣ್ದೆರೆದು, ಬಳಸಿರ್ದರೆಲ್ಲರಂ

ಗುರುತಿಸುವವೋಲ್ ನೋಡಿ : “ಏಂ ಗೈದೆ, ಸುಗ್ರೀವ !

ಮುದ್ದಾಡಲೆಂದು ಬಂದಳ್ಕರೆಯ ತೋಳ್ಗಳಂ

ಛಿದ್ರಿಸಿದೆಯಲ್ತೆ ! …. ಆಃ, ತೋರೆನಗೆ ಆ ವೀರನಂ,

ಬೆನ್ಗೆ ಬಾಣವನೆಚ್ಚ ಆ ನಿನ್ನ ಕಲಿ ರಾಮನಂ….

ನೀನಾರೆಲವೊ ವೀರವೇಷಿ ? ಬಿಲ್ವಿಡಿದಿರ್ಪೆ ;

ನೀನೆ ರಾಮನೆ ವಲಂ ! ವೀರ ಪಾರ್ಥಿವನಾಗಿಯುಂ

ಕೀಳ್ಮೆಗೇಕಯ್ ಕಯ್ಯನಿಟ್ಟೆ ? ಪೆತ್ತೂರೆಡೆಗೆ

ತಮ್ಮನಂ ಪೊತ್ತುಕೊಂಡುಯ್ವಣ್ಣನಂ ಬೆನ್ಗೆ

ಹಂದೆತನದಿಂದೆಚ್ಚು ಕೊಂದಯ್ ! ತಾರೆಯ ಬಾಳ್ಗೆ, ೩೨೦

ನಿನ್ನನೆರ್ದೆಮುಟ್ಟಿ ಪೊಗಳುತ್ತಿರ್ದವಳ ಬಾಳ್ಗೆ, ಹಾ,

ಕಿಚ್ಚಿಟ್ಟೆಯೈ ! ಧಿಕ್ ನಿನ್ನ ಕಲಿತನಂ ! ಧಿಕ್ ನಿನ್ನ

ವೀರಪಾರ್ಥಿವ ಕೀರ್ತಿ ! ಹೇಡಿಯಂದದೊಳಡಗಿ

ದೂರದಿಂದುಗ್ರಬಾಣವನೆಚ್ಚು ಬರ್ದುಕಿದಯ್

ನೀಂ. ಕೆಣಕಿ ವಾಲಿಯಂ ಬರ್ದುಕಿದವರಾರುಂಟೊ

ಮೂಲೋಕದೊಳ್ ? ತನ್ನವಸರದ ಮೋಹಕುರುವರನ

ಬೇಳ್ವ ಕಣ್ಗೇಡಿ, ಹೆಂಬೇಡಿ ನೀಂ ! ಚಿಃ ಸುಡಲಿ

ನಿನ್ನ ಈ ಪೊಲೆಮಾಳ್ಕೆಯಾ ಕೊಲೆಯ ಬಾಳ್ಕೆಯಂ !”

ಬೆನ್ನ ಮರುಮೊನೆಗೊಂಡ ಸರಳ್, ಸುರಿವ ಕೆನ್ನೀರ್,

ಮಿಳ್ತುಮೊಗವಾದುಸಿರ ನಡುಕುದನಿ ಸರ್ವಮುಂ ೩೩೦

ವಾಲಿಯ ಕಡೆಗೆ ನಿಂತು ವಾದಿಸುತೆ, ರಾಮನಂ

ನಿಂದಿಸುತ್ತಿರಲಾತನಿನಿತು ಗದ್ಗದದೊಡನೆ :

“ವಿಧಿಯ ವಿನ್ಯಾಸಮಂ ನಿಂದಿಸಿದೊಡೇಂ ಫಳಂ,

ಸುಗ್ರೀವನಗ್ರಜಾ ?”

ಕೊಂಕುನಗೆಯಿಂ ವಾಲಿ :

“ನಿನ್ನ ಮಡದಿಯನಸುರನುಯ್ದುದುಂ ವಿಧಿಲೀಲೆ !

ನೀನೇಕೆ ಪರಿತಪಿಸುತಿಹೆ ಮತ್ತೆ ?”

“ನಿನ್ನ ವಿಧಿ

ನಿನಗೆ. ರಾಕ್ಷಸನ ವಿಧಿ ರಾಕ್ಷಸಗೆ. ನಿನ್ನಂತೆ ಕೇಳ್,

ಹದಿಬದೆಗಳುಪಿದಸುರನುಂ ಕಡೆಯನೆಯ್ದುವಂ.”

“ಪುಸಿ, ಪುಸಿ, ಪುಸಿ !” ಎನುತ್ತೆ ಕಿವಿಮುಚ್ಚಿದನ್ ಮಹಾ

ವಾನರಂ “ಮಗಳೆನಗೆ ರುಮೆ ! ತಾರೆ ತಾಂ ಸಾಕ್ಷಿ ! ೩೪೦

ಹಂದೆತನಕಾ ಪುಸಿಪಳಿಯ ಬೆಸುಗೆಯೊಂದೇಕೊ ?”

“ವಿನಯದಿಂ ಬೇಡಿದೊಮೊಡವುಟ್ಟಿದಾತನಂ,

ನಿರ್ದೋಷಿಯಂ, ತನ್ನ ತಾಯಿನಾಡಿಂದಟ್ಟಿ,

ಕೆಳೆಯರ್ವೆರಸಿ ಕಳೆದೆಯಲ್ತೆ ? ಆ ಕೇಡಿಗಯ್

ಈ ಶಿಕ್ಷೆ !” “ತಳುವಿ ಬಂದಯ್ ದುಷ್ಟಶಿಕ್ಷಣೆಗೆ !

ನಾನೀಗಳಾ ಕೋಪಿಯಲ್ತಾ ಪಾಪಿಯಲ್ತು : ಮೇಣ್

ಪ್ರೀತಿ ಪಶ್ಚಾತ್ತಾಪದಿಂ ಭ್ರಾತೃ ಮೈತ್ರಿಯಿಂ

ಶುದ್ಧನೆಂ, ನಿರ್ವೈರನೆಂ…. ಹಂದೆತನದಿಂದಡಗಿ

ಕೊಂದೆಯೆಂದಾಡಿದೆನ್ ; ಬೇರೆ ಹಗೆತನಮಿಲ್ಲ

ನನಗೆ.”

ವಾಲಿಯ ಮುಖದ ಸತ್ವದಿಂದಾ ನುಡಿಯ ೩೫೦

ತಥ್ಯಮಂ ಶಂಕಿಸದೆ, ತಿರುಗಿದನ್ ದಾಶರಥಿ

ಸುಗ್ರೀವ ಮುಖಕೆ. ಅಶ್ರುಮಲಿನಾಸ್ಯನಾತನುಂ

ನೆಲದಿಟ್ಟಿಯಾಗಿ “ನಾನರಿಯೆನೀತನ ಮನದ

ನೂತನತೆಯಂ.” ಎನಲ್, ಜಾಂಬವಂ : “ಬಲ್ಲೆನಾಂ ;

ಇಂದ್ರಜನ ಜಿಹ್ವೆ ಮಿಥ್ಯೆಯನರಿಯದೇಗಳುಂ….”

“ವಕ್ರವಿಧಿಗಾದನಾಹುತಿ ಶಕ್ರಸಂಭವಂ !”

ಎನುತೆ ಮಾರುತಿ ಮಣಿದನೆತ್ತಿದನ್ ವಾಲಿಯಂ

ಸಮನೆಲದ ತೃಣಶಯ್ಯಗೆ. ಬಿಳ್ದಂಗೆ ತೋಳ್ಗಳಂ

ತಲೆಗಿಂಬುಗೈಯುತಿರೆ ಸೌಮಿತ್ರಿ, ಕಣ್ಬನಿಯ

ಗದ್ಗದದ ರಾಮಚಂದ್ರಂ, ಧನುರ್ಬಾಣಮಂ ೩೬೦

ತೂಣೀರಮಂ ಕೆಲಕ್ಕೆಸೆದು, ವಾಲಿಯ ಮೆಯ್ಗೆ

ಸೋಂಕಿ ಕುಸಿದನ್ ನೆಲಕೆ :

“ಮನ್ನಿಸೆನ್ನಂ, ಮಹಾ

ವೀರ ! ತಪ್ಪಿದೆನಯ್ಯೊ, ಬ್ರಹ್ಮವರದಾ ಬಲೆಗೆ

ಸಿಲ್ಕಿ. ನಿನಗಾ ವರವೆ ಶಾಪಮಾದುದೊ ! ಕೀರ್ತಿ

ಮಸುಳಿಸುವವೋಲೆನ್ನನಡಗಿಸಿತೊ ! ಮರೆವೊಕ್ಕೆನಾ

ಮರಕೆ ! ಮಾಡಿದ ತಪ್ಪನೊಪ್ಪಿಕೊಳ್ವುದೆ ಲೌಕಿಕದ

ಬೀರಕ್ಕೆ ಸಲ್ಲಕ್ಷಣಂ : ಅಯ್ಯೊ ಸೀತೆಯನಗಲ್ದು

ಪಗಲಿರುಳ್ ಪೊಗೆಯುತಿರ್ಪೀ ಬಗೆಯ ಕನ್ನಡಿಗೆ

ಮರ್ಬುಕರೆ ಮಂಕಡಸಿತಯ್. ಶೀಘ್ರಸೂತ್ರಕ್ಕೆ

ಬೇಳ್ದೆನಯ್ ಐಹಿಕದ ಕೀರ್ತಿಯನಂತೆ ಧರ್ಮಮಂ ೩೭೦

ಮೇಣ್, ಕಪಿಕುಲ ಲಲಾಮ, ನಿನ್ನುಮಂ !”

ಬಳಿ ಕುಳ್ತು

ರೋದಿಸುವ ರಾಮನಂ ನೋಡಿದನ್, ಕಣ್‌ನಟ್ಟು,

ವಾನರೇಂದ್ರಂ, ಮೃತ್ಯುಮುಖಮಾದ ಜೀವಕ್ಕೆ

ಹತ್ತೆ ಸಾರುವುದೇನೊ ಸತ್ಯಮೆಂಬಂತೆವೋಲ್

ನೋವಿನ ನಡುವೆ ನಗೆಯನಲರಿಸಿ ನುಡಿದನಿಂತು :

“ಕೇಳ್ದಿರ್ದೆ ನಿನ್ನಾ ಮಹಾತ್ಯಾಗಮಂ, ಮತ್ತೆ

ಧೈರ್ಯಮಂ. ಕಣ್ಣಾರೆ ಕಾಣ್ಬ ಸಯ್ಪೆನಗೊದಗಿತಯ್

ಇಂದು. ನೀಂ ಸತ್ಯವ್ರತನೆ ದಿಟಂ. ಇಲ್ಲದಿರೆ

ಸೋಲ್ದುರುಳ್ದರಿಗೆ ತಪ್ಪೊಪ್ಪಿಕೊಳ್ಳುವರಿಹರೆ ?

ನನ್ನೆರ್ದೆಯೊಳಾದ ಪರಿವರ್ತನೆಯನರಿಯದೆಯೆ ೩೮೦

ಇಂತಾದುದಯ್. ತಪ್ಪು ನಿನತೊರ್ವನದೆ ಅಲ್ತು….

ನೀನೆಂದವೊಲೆ ವಿಧಿಯ ವಿನ್ಯಾಸಮೇಂ ಬೇರೆ

ಪಾಂಗಿಹುದೊ ?…. ನಿನಗೆ ಮೇಣ್ ಸುಗ್ರೀವರಿರ್ವರ್ಗೆ

ಕಯ್ಗೂಡುತಿರ್ದತ್ತು ಬಯಕೆಯೊರ್ಮೆಯೆ ನನ್ನ

ಕೆಳೆಯಿಂದೆ…. ನೀವನಿಬರುಂ ಬಳಲಿ ಸಾಧಿಸುವ

ಕಜ್ಜಮಂ, ಲೀಲೆಯಿಂ ಸಾಧಿಸುತ್ತಿರ್ದೆನಾಂ….

ಆದರೇಂ ಬಿದಿಯ ಬಗೆ ಬೇರೆ ! ಕಳೆದುದಕೇಕೆ

ಕೊರಗು ?” ಎನುತೆನುತೆ ಉಬ್ಬಸವಾಯ್ತು ಮೇಲುಸಿರ್

ಕಪಿಕುಲೇಶಂಗೆ. ಸುಗ್ರೀವನಳತೊಡಗಿದನ್

ತನ್ನಣ್ಣನಡಿಗೆ ಹಣೆ ಚಾಚಿ. ವನ ನಿರ್ಝರದ

ನೀರಂ ಬೊಗಸೆತಂದು ನೀಲನೆರೆದನ್ ಬಾಯ್ಗೆ

ವಾಲಿಯಾ. ಬೀಸಿದನೆಲೆಯ ಗಾಳಿಯಂ ನಳಂ.

ಬೆಮರಿಳಿದ ಬಿಸಿಪಣೆಯ ತೊಯ್ದಂಟುಗೂದಲಂ

ಮೆಲ್ಲನೋಸರಿಸಿ ಸಂತೈಸಿದನ್ ಮರುಗೆರ್ದೆಯ

ರಾಘವೇಂದ್ರಂ. ಮತ್ತಮೊಯ್ಯನೆಯೆ ಶೂನ್ಯಮಂ

ನೋಳ್ಪಂತೆ ಕಣ್ದೆರೆದನಾ ಕೀಶವೀರಂ : “ತಾರೆ ಮೇಣ್

ಅಂಗದರಿಗೀ ವಾರ್ತೆ ಮುಟ್ಟಿದುದೆ ? ಕಣ್ ಬೆಳಕು

ಕಿಡುವ ಮೊದಲಾ ನನ್ನ ಬಾಳ್‌ಬೆಳಕನೀಕ್ಷಿಸಲ್

ಬಯಕೆ !” ಬೆಸಗೊಂಡ ವಾಲಿಗೆ ಮಾರುತಾತ್ಮಜಂ :

“ಪೋದುವಾಗಳೆ ಸುದ್ದಿ.” ಹನುಮನಕ್ಷಿಗೆ ತನ್ನ ೪೦೦

ನೋಟಂ ಪೆಣೆಯೆ ನೋಡಿ “ನೀನಾಂಜನೇಯನಯ್ ?”

ಎಂದಿಂದ್ರಜನ ಕಣ್ಣ ಸಂದೇಹಮಂ ಕಂಡು :

“ಅಹುದು. ಬೆಸೆನೇನಿಹುದೊ ಪೇಳಿಮ್” ಎನೆ ವಾಲಿ “ಮಗು

ಅಂಗದನ…. ಸುಗ್ರೀವನೆಲ್ಲಿ ?” “ಇಲ್ಲಿಹೆನಾರ್ಯ.”

ಎಂದಳುತ್ತಳುತೆ ಕಣ್ಗಿದಿರಾದನಂ ತಮ್ಮನಂ

ನಿರ್ವೈರದೃಷ್ಟಿಯಿಂದಳ್ಕರೊಳ್ಕುವ ತೆರದಿ

ನೋಡಿ : “ಮಾಣ್ ಅಳ್ಕೆಯಂ, ತಮ್ಮ. ವಾನರಕುಲದ

ಜಸದ ಹಬ್ಬುಗೆ ತಿರೆಯ ತಬ್ಬುವೋಲೀತಂಗೆ ನೀಂ

ನೆರವಾಗು, ನಮ್ಮತಿಥಿಯಾರ್ಯಂಗೆ…. ಏನಿದುಲಿ ?

ಸಗ್ಗದಿಂಚರಮಿಳೆಗೆ ದುಮ್ಮಿಕ್ಕುತಿದೆ ?” “ಅಯ್ಯೊ, ೪೧೦

ಬಳಿಸಾರುತಿಹುದಣ್ಣ ಆ ರೋದಿಸುವ ಕಿಷ್ಕಿಂಧೆ !

“ಏನೆಂದೆ ? ಅಹುದಹುದು, ಬಳಿಸಾರುತಿದೆ ಸಂಧ್ಯೆ !

ಹಬ್ಬುತಿದೆ ಮಲೆಯ ಮೇಲೆನಿತು ಸುಂದರ ಸಂಧ್ಯೆ !

ಆಃ ನನ್ನ ಕಿಷ್ಕಿಂಧೆ !…. ತಾಯ್ತಂದೆಯರ ನಾಡೆ !

ತಾಯ್‌ನುಡಿಯ ಮಲೆಗುಡಿಯ ಬೆಟ್ಟದಡವಿಯ ಬೀಡೆ !

ತಾಯ್‌ವಸಿರ್ ನೀನಾದೆ ಪುಟ್ಟುವಾಗಳ್. ಮತ್ತೆ

ನಲ್ದೊಟ್ಟಿಲಾದೆ, ಜೋಗುಳವಾದೆಯೆಳೆಯಂಗೆ.

ತಾರುಣ್ಯಕುಯ್ಯಾಲೆಯಾದೆ. ಜೌವನಕಾದೆ

ಪೆಣ್ಣೊಲ್ಮೆ. ಮುಪ್ಪಿಂಗೆ ಧರ್ಮದಾಶ್ರಯಮಾಗಿ,

ತೀರುವೆಡೆ ಶಾಂತಿಯಾಗರಮಾಗುತಿರ್ದಳಂ ೪೨೦

ನಿನ್ನನಾಂ ತೊರೆಯುತಿಹೆನೌ, ಮನ್ನಿಸಾ, ತಾಯಿ !

ಸೊಬಗು ನೆಲೆಗಳ್ ನಿನ್ನ ಮಲೆತುರ್ಕ್ಕಿ ತಲೆಯೆತ್ತಿ

ಮುಗಿಲಲೆವ ಸಾಲ್ಮಲೆಯ ಸಗ್ಗದೊಳಗೀ ವಾಲಿ

ಕಾಲಾಡನಿನ್. ಚೆಲ್ವುಚಿಪ್ಪೊಡೆಯೆ ಮುತ್ತುನೀರ್

ಬೆಳ್ಳಂಗೆಡೆಯುವರ್ಬ್ಬಿಯೊಳ್ ದುಮುಕಿ ಮೀಯದಯ್

ಈ ವಾಲಿ ಮೆಯ್ ಇನ್. ಈ ತೋಳ್ಗಳಾಟಕ್ಕೆ

ಪಣ್‌ಪೆತ್ತ ನಿನ್ನಡವಿ ಪೆರ್ಮರಗಳಿನ್ ಬಾಗಿ

ತೂಗವಯ್, ತೊನೆಯವಯ್, ಮುರಿಯವಯ್, ನಿನ್ನಗಲ

ಬಾಂದಳದ ಮೋಡಮಾಲೆಯ ಚಂದದಂದಮಮ್

ನೋಡದಿನ್ ವಾಲಿಯೀ ಕಣ್ಣಾಲಿ !…. ಸುಗ್ರೀವ, ೪೩೦

ನಿನಗೀಜು ಕಲಿಪಂದು ನೀಂ ಪಂಪೆಯೊಳ್ ಮುಳುಗೆ,

ನಾಂ ಮುಳುಗಿ ಮೇಲೆತ್ತಿದಾ ಸೈಪಿನಾ ಸೊಗಂ

ನನಗೀಗಳರಿವಾಗುತಿದೆ ! ಆಂಜನೇಯ, ಆ

ಮರಕೋತಿಯಾಟಮಂ ಚಿಣ್ಣಿಕೋಲಾಟಮಂ

ಮರೆತೆಯೇನ್ ? ಮರೆಯದಿರ್ : ಬಾಳಂಚಿನೊಳ್ ನಿಂತು

ಪೇಳ್ವೆನೀ ನನ್ನಿಯಂ : ಆ ಜಳ್ಳೆ ಗಟ್ಟಿ ; ನಾಮ್

ಗಟ್ಟಿಯೆಂದರಿತುದೆಲ್ಲಂ ಜಳ್ಳು, ಬರಿ ಜಳ್ಳು !….

ಸಾವ್‌ಗಾಳಿ ತೂರಲರಿವಪ್ಪುದಯ್ !”

ಸುಯ್ದು ಕಣ್ಣಂ

ಮುಚ್ಚುತಿರೆ ವಾಲಿ, ಬಳಿಸಾರ್ದಳಾ ತಾರೆ

ಅಂಗದ ಕುಮಾರನೊಡಗೂಡಿ. ಆ ಗೋಳನೇಂ

ಬಣ್ಣಿಪಮ್ ? ಸಾವರಿತ ಲೋಕಕ್ಕೆ ಪೊಸತಹುದೆ ಪೇಳ್ ೪೪೦

ಪತಿಯಳಿದ ಸತಿರೋದನಂ ? ತಂದೆಯಳಿದಿರ್ಪ

ಸುತನ ಶೋಕಂ ? ಸ್ವಾಮಿಯಳಿದಿರ್ಪ ಪರಿಜನದ

ಹೃದಯ ವಿದ್ರಾವಕಂ ? ಪ್ರಾಣಮಿತ್ರಂ ತೀರ್ದ

ಸ್ನೇಹದತಿದಾರುಣದ ಸಂಕಟಂ ? ಜಸವೆತ್ತ

ಪಿರಿದಾದುದಾವುದಾಡೊಡಮಳಿಯೆ ದುಃಖಿಸುವ

ದೇಶ ಸಾಮಾನ್ಯ ಜನ ಮನ್ಯು ? ಆ ಗೋಳನೇಂ

ಬಣ್ಣಿಪೆಮ್ ? ಬಣಗು ಬಣ್ಣನೆ ಬೇಕೆ, ತಿಳಿಯಲ್ಕೆ

ಸಾಮಾನ್ಯಮಂ ? ರಸಮೊಳದೆ ಮಿಗಿಲ್, ಸಾಮಾನ್ಯಕಿಂ ?

ಅಂಗದಕುಮಾರನಂ ರುಮೆಗೆ ಕಯ್ಯೆಡೆ ಮಾಡಿ ; ೪೫೦

ಕರುಣೆಯಂ ಬೇಡಿ, ಕನಿಕರಗೂಡಿ, ಮೈದುನನ

ಮೊಗನೋಡಿ ; ಮುಂದೊಳ್ಮೆ ಬರ್ಪುದೆಂದೊಳ್ವರಕೆಯಂ

ಪೇಳ್ದು, ಮೇಣಿಂದಾದುದಂ ಬಿದಿಯ ಹದನೆಂದು

ರಾಮನ ಮನಕೆ ಶಾಂತಿಯಪ್ಪಂತೆ ಸಂತಯ್ಸಿ,

ರಾಮನ ಮನದ ಮಹಿಮೆಯಂ ಕೊನೆದು ಕೊಂಡಾಡಿ ;

ದೈತ್ಯನೊಯ್ದಾ ರಾಮದಯಿತೆಯಂ ನೆನೆದು, ಮರುಗಿ,

ಬೇಗಮಾಕೆಗೆ ನೆರಂ ಪೋಗವೇಳ್ಕೆಂದಲ್ಲಿ

ನೆರೆದೆಲ್ಲರಿಗೆ ನೆರಂ ಪೋಗವೇಳ್ಕೆಂದಲ್ಲಿ

ನೆರೆದೆಲ್ಲರಿಗೆ ನುಡಿದು ; ಮತ್ತೆ ಮತ್ತಂಗದನ

ಮೈಯಪ್ಪುತಾತನಂ ರಾಮಸೇವೆಗೆ ಸಲಿಸಿ,

ತಂದೆಯ ಜಸಕ್ಕೆ ಕುಂದಾಗದೋಲೆಸಪಂತೆ ೪೬೦

ಹರಕೆಯಂ ಬೆಸಸಿ ; ಬೀಳ್ಕೊಳುತ್ತನಿಬರಂ, ಸತಿ,

ತಾರೆ, ಚಿತೆಯೇರಿದಳ್ ಪತಿಯಾತ್ಮಮಂ ಸೇರೆ,

ಸದ್ಗತಿಗೆ ಸೈಪು ಜತೆವೋಪವೋಲ್. ಬಾಳ್‌ಕಯ್ಪೆ

ನೋವು ಸಾವುಗಳುರಿಗೆ ಕರ್ಪುಗಿಡೆ, ನೆನಹುಬೆಳ್

ಪಿಂತುಳಿವವೋಲೆಸೆದುದಾ ದಂಪತಿ ಚಿತಾ ಭೂತಿ !

<<  ಮುಂದಿನ  ಸಂಚಿಕೆ-೭/ಸಂಸ್ಕೃತಿ ಲಂಕಾ  >>
<<       ಅಯೋಧ್ಯಾ ಸಂಪುಟಂ     >>       ಕಿಷ್ಕಿಂದಾ ಸಂಪುಟಂ       <<      ಲಂಕಾ ಸಂಪುಟಂ        >>     ಶ್ರೀ ಸಂಪುಟಂ        <<