ಹರಿಕಥಾಮೃತಸಾರ/ಕಕ್ಷ ತಾರತಮ್ಯ ಸಂಧಿ (ದೇವತಾ ತಾರತಮ್ಯ)

ಶ್ರೀರಮಣ ಸರ್ವೇಶ ಸರ್ವಗ ಸಾರಭೋಕ್ತ ಸ್ವತಂತ್ರ

ದೋಷ ವಿದೂರ ಜ್ಞಾನಾನಂದ ಬಲೈಶ್ವರ್ಯ ಸುಖ ಪೂರ್ಣ

ಮೂರುಗುಣ ವರ್ಜಿತ ಸಗುಣ ಸಾಕಾರ ವಿಶ್ವ ಸ್ಥಿತಿ ಲಯೋದಯ ಕಾರಣ

ಕೃಪಾಸಾಂದ್ರ ನರಹರೆ ಸಲಹೊ ಸಜ್ಜನರ//1//


ನಿತ್ಯ ಮುಕ್ತಳೆ ನಿರ್ವಿಕಾರಳೆ ನಿತ್ಯ ಸುಖ ಸಂಪೂರ್ಣೆ

ನಿತ್ಯಾನಿತ್ಯ ಜಗದಾಧಾರೆ ಮುಕ್ತಾಮುಕ್ತ ಗಣ ವಿನುತೆ

ಚಿತ್ತೈಸು ಬಿನ್ನಪವ ಶ್ರೀ ಪುರುಷೋತ್ತಮನ ವಕ್ಷೋ ನಿವಾಸಿನಿ

ಭೃತ್ಯ ವರ್ಗವ ಕಾಯೆ ತ್ರಿಜಗನ್ಮಾತೆ ವಿಖ್ಯಾತೆ//2//


ರೋಮ ಕೂಪಗಳಲ್ಲಿ ಪೃಥ್ ಪೃಥಕು ಆ ಮಹಾ ಪುರುಷನ

ಸ್ವಮೂರ್ತಿ ತಾಮರಸಜಾಂಡಗಳ ತದ್ಗತ ವಿಶ್ವ ರೂಪಗಳ

ಶ್ರೀ ಮಹಿಳೆ ರೂಪಗಳ ಗುಣಗಳ ಸೀಮೆಗಾಣದೆ ಯೋಚಿಸುತ

ಮಮ ಸ್ವಾಮಿ ಮಹಿಮೆಯದು ಎಂತೋ ಎಂದು ಅಡಿಗಡಿಗೆ ಬೆರಗಾದೆ//3//


ಒಂದು ಅಜಾಂಡದೊಳು ಒಂದು ರೂಪದೊಳು ಒಂದು ಅವಯವದೊಳು ಒಂದು ನಖದೊಳಗೆ

ಒಂದು ಗುಣಗಳ ಪಾರುಗಾಣದೆ ಕೃತ ಪುಟಾಂಜಲಿಯಿಂ

ಮಂದಜಾಸನ ಪುಳಕ ಪುಳಕಾನಂದ ಬಾಷ್ಪ ತೊದಲು ನುಡಿಗಳಿಂದ

ಇಂದಿರಾವಲ್ಲಭನ ಮಹಿಮೆ ಗಂಭೀರ ತೆರವೆಂದ//4//


ಏನು ಧನ್ಯರೋ ಬ್ರಹ್ಮ ಗುರು ಪವಮಾನ ರಾಯರು

ಈ ಪರಿಯಲಿ ರಮಾ ನಿವಾಸನ ವಿಮಲ ಲಾವಣ್ಯ ಅತಿಶಯಗಳನು

ಸಾನುರಾಗದಿ ನೋಡಿ ಸುಖಿಪ ಮಹಾನುಭಾವರ ಭಾಗ್ಯವೆಂತೋ

ಭವಾನಿಧವನಿಗೆ ಅಸಾಧ್ಯವೆನಿಸಲು ನರರ ಪಾಡೇನು//5//


ಆ ಪಿತಾಮಹ ನೂರು ಕಲ್ಪ ರಮಾಪತಿಯ ಗುಣ ಜಪಿಸಿ ಒಲಿಸಿ

ಮಹಾ ಪರಾಕ್ರಮ ಹನುಮ ಭೀಮ ಆನಂದ ಮುನಿಯೆನಿಸಿ

ಆ ಪರಬ್ರಹ್ಮನ ಸುನಾಭೀ ಕೂಪಸಂಭವ ನಾಮದಲಿ ಮೆರೆವ

ಆ ಪಯೋಜಾಸನ ಸಮೀರರಿಗೆ ಅಭಿನಮಿಪೆ ಸತತ//6//


ವಾಸುದೇವನ ಮೂರ್ತಿ ಹೃದಯ ಆಕಾಶ ಮಂಡಲ ಮಧ್ಯದಲಿ

ತಾರೇಶನಂದದಿ ಕಾಣುತ ಅತಿ ಸಂತೋಷದಲಿ ತುತಿಪ

ಆ ಸರಸ್ವತಿ ಭಾರತೀಯರಿಗೆ ನಾ ಸತತ ವಂದಿಸುವೆ

ಪರಮೋಲ್ಲಾಸದಲಿ ಸುಜ್ಞಾನ ಭಕುತಿಯ ಸಲಿಸಲಿ ಎಮಗೆಂದು//7//


ಜಗದುದರನ ಸುರೋತ್ತಮನ ನಿಜಪೆಗಳೊಂತಾತು ಕರಾಬ್ಜದೊಳು ಪದಯುಗ ಧರಿಸಿ

ನಖ ಪಂಕ್ತಿಯೊಳು ರಮಣೀಯ ತರವಾದ ನಗಧರನ ಪ್ರತಿಬಿಂಬ ಕಾಣುತ

ಮಿಗೆ ಹರುಷದಿಂ ಪೊಗಳಿ ಹಿಗ್ಗುವ ಖಗ ಕುಲಾಧಿಪ

ಕೊಡಲಿ ಮಂಗಳ ಸರ್ವ ಸುಜನರಿಗೆ//8//


ಯೋಗಿಗಳ ಹೃದಯಕೆ ನಿಲುಕ ನಿಗಮಾಗಮೈಕ ವಿನುತನ

ಪರಮಾನುರಾಗದಲಿ ದ್ವಿಸಹಸ್ರ ಜಿಹ್ವೆಗಳಿಂದ ವರ್ಣಿಸುವ

ಭೂಗಗನ ಪಾತಾಳ ವ್ಯಾಪ್ತನ ಯೋಗ ನಿದ್ರಾಸ್ಪದನು ಎನಿಪ

ಗುರು ನಾಗರಾಜನ ಪದಕೆ ನಮಿಸುವೆ ಮನದೊಳು ಅನವರತ//9//


ದಕ್ಷ ಯಜ್ಞ ವಿಭಂಜನನೆ ವಿರುಪಾಕ್ಷ ವೈರಾಗ್ಯಾಧಿಪತಿ

ಸಂರಕ್ಷಿಸೆಮ್ಮನು ಸರ್ವಕಾಲದಿ ಸನ್ಮುದವನಿತ್ತು

ಯಕ್ಷಪತಿ ಸಖ ಯಜಪರಿಗೆ ಸುರವೃಕ್ಷ ವೃಕ್ಷದಾನುಜಾರಿ

ಲೋಕಾಧ್ಯಕ್ಷ ಶುಕ ದೂರ್ವಾಸ ಜೈಗೀಷವ್ಯ ಸಂತೈಸು//10//


ನಂದಿವಾಹನ ನಳಿನಿಧರ ಮೌಳಿ ಇಂದು ಶೇಖರ ಶಿವ ತ್ರಿಯಂಬಕ

ಅಂಧಕಾಸುರ ಮಥನ ಗಜ ಶಾರ್ದೂಲ ಚರ್ಮಧರ

ಮಂದಜಾಸನ ತನಯ ತ್ರಿಜಗದ್ವಂದ್ಯ ಶುದ್ಧ ಸ್ಫಟಿಕ ಸನ್ನಿಭ

ವಂದಿಸುವೆನು ಅನವರತ ಕರುಣಿಸಿ ಕಾಯೋ ಮಹದೇವ//11//


ಹತ್ತು ಕಲ್ಪದಿ ಲವ ಜಲಧಿಯೊಳು ಉತ್ತಮ ಶ್ಲೋಕನ ಒಲಿಸಿ

ಕೃತಕ್ರುತ್ಯನಾಗಿ ಜಗತ್ಪತಿಯ ನೇಮದಿ ಕುಶಾಸ್ತ್ರಗಳ ಬಿತ್ತರಿಸಿ ಮೋಹಿಸಿ

ದುರಾತ್ಮರ ನಿತ್ಯ ನಿರಯ ನಿವಾಸರೆನಿಸಿದ

ಕೃತ್ತಿ ವಾಸನೆ ನಮಿಪೆ ಪಾಲಿಸೊ ಪಾರ್ವತೀ ರಮಣ//12//


ಫಣಿ ಫಣಾoಚಿತ ಮಕುಟ ರಂಜಿತ ಕ್ವಣಿತ ಡಮರು ತ್ರಿಶೂಲ

ಶಿಖಿ ದಿನ ಮಣಿ ನಿಶಾಕರ ನೇತ್ರ ಪರಮ ಪವಿತ್ರ ಸುಚರಿತ್ರ

ಪ್ರಣತ ಕಾಮದ ಪ್ರಮಥ ಸುರಮುನಿ ಗಣ ಸುಪೂಜಿತ ಚರಣಯುಗ

ರಾವಣ ಮದ ವಿಭಂಜನ ಶೇಷ ಪದ ಅರ್ಹನು ಅಹುದೆಂದು//13//


ಕಂಬುಪಾಣಿಯ ಪರಮ ಪ್ರೇಮ ನಿತಂಬಿನಿಯರು ಎಂದೆನಿಪ

ಲಕ್ಷಣೆ ಜಾಂಬವತಿ ಕಾಳಿಂದಿ ನೀಲಾ ಭದ್ರ ಸಖ ವಿಂದಾರೆಂಬ

ಷಣ್ಮಹಿಷಿಯರ ದಿವ್ಯ ಪದಾಂಬುಜಗಳಿಗೆ ನಮಿಪೆ

ಮಮ ಹೃದಯಾಂಬರದಿ ನೆಲೆಸಲಿ ಬಿಡದೆ ತಮ್ಮರಸನ ಒಡಗೂಡಿ//14//


ಆ ಪರಂತಪನ ಒಲುಮೆಯಿಂದ ಸದಾ ಅಪರೋಕ್ಷಿಗಳೆನಿಸಿ

ಭಗವದ್ರೂಪ ಗುಣಗಳ ಮಹಿಮೆ ಸ್ವಪತಿಗಳ ಆನನದಿ ತಿಳಿವ

ಸೌಪರ್ಣಿ ವಾರುಣಿ ನಗಾತ್ಮಜರ ಆಪನಿತು ಬಣ್ಣಿಸುವೆ

ಎನ್ನ ಮಹಾಪರಾಧಗಳ ಎಣಿಸದೆ ಈಯಲಿ ಪರಮ ಮಂಗಳವ//15//


ತ್ರಿದಿವತರು ಮಣಿ ಧೇನುಗಳಿಗೆ ಆಸ್ಪದನೆನಿಪ ತ್ರಿದಶಾಲಯಾಬ್ಧಿಗೆ

ಬದರನಂದದಲಿ ಒಪ್ಪುತಿಪ್ಪ ಉಪೇಂದ್ರ ಚಂದ್ರಮನ

ಮೃಧು ಮಧುರ ಸುಸ್ತವನದಿಂದಲಿ ಮಧು ಸಮಯ ಪಿಕನಂತೆ ಪಾಡುವ

ಮುದಿರ ವಾಹನನಂಘ್ರಿ ಯುಗ್ಮಂಗಳಿಗೆ ನಮಿಸುವೆನು//16//


ಕೃತಿ ರಮಣ ಪ್ರದ್ಯುಮ್ನ ದೇವನ ಅತುಳ ಬಲ ಲಾವಣ್ಯ ಗುಣ ಸಂತತ ಉಪಾಸನ

ಕೇತು ಮಾಲಾ ಖಂಡದೊಳು ರಚಿಪ

ರತಿ ಮನೋಹರನಂಘ್ರಿ ಕಮಲಕೆ ನತಿಸುವೆನು ಭಕುತಿಯಲಿ

ಮಮ ದುರ್ಮತಿ ಕಳೆದು ಸನ್ಮತಿಯನು ಈಯಲಿ ನಿರುತ ಎಮಗೊಲಿದು//17//


ಚಾರುತರ ನವವಿಧ ಭಕುತಿ ಗಂಭೀರ ವಾರಾಶಿಯೊಳು

ಪರಮೋದಾರ ಮಹಿಮನ ಹೃದಯ ಫಣಿಪತಿ ಪೀಠದಲಿ ಭಜಿಪ

ಭೂರಿ ಕರ್ಮಾಕರನು ಎನಿಸುವ ಶರೀರಮಾನಿ ಪ್ರಾಣಪತಿ ಪದ ವಾರಿರುಹಕೆ ಅನಮಿಪೆ

ಮದ್ಗುರುರಾಯನು ಅಹುದೆಂದು//18//


ವಿತತ ಮಹಿಮನ ವಿಶ್ವತೋ ಮುಖನ ಅತುಳ ಭುಜ ಬಲ ಕಲ್ಪತರುವು

ಆಶ್ರಿತರೆನಿಸಿ ಸಕಲ ಇಷ್ಟ ಪಡೆದು ಅನುದಿನದಿ ಮೋದಿಸುವ

ರತಿ ಸ್ವಯಂಭುವ ದಕ್ಷ ವಾಚಸ್ಪತಿ ಬಿಡೌಜನ ಮಡದಿ ಶಚಿ

ಮನ್ಮಥ ಕುಮಾರ ಅನಿರುದ್ಧರು ಎಮಗೀಯಲಿ ಸುಮಂಗಲವ//19//


ಭವ ವನದಿ ನವ ಪೋತ ಪುಣ್ಯ ಶ್ರವಣ ಕೀರ್ತನ ಪಾದವನರುಹ

ಭವನ ನಾವಿಕನಾಗಿ ಭಕುತರ ತಾರಿಸುವ ಬಿಡದೆ

ಪ್ರವಹ ಮಾರುತದೇವ ಪರಮೋತ್ಸವ ವಿಶೇಷ ನಿರಂತರ

ಮಹಾ ಪ್ರವಹದಂದದಿ ಕೊಡಲಿ ಭಗವದ್ಭಕ್ತ ಸಂತತಿಗೆ//20//


ಜನರನು ಉದ್ಧರಿಸುವೆನೆನುತ ನಿಜ ಜನಕನ ಅನುಮತದಲಿ

ಸ್ವಯಂಭುವ ಮನುವಿನಿಂದಲಿ ಪಡೆದೆ ಸುಕುಮಾರಕರನು ಒಲುಮೆಯಲಿ

ಜನನಿ ಶತ ರೂಪಾ ನಿತಂಬಿನಿ ಮನವಚನಕಾಯದಲಿ ತಿಳಿದು

ಅನುದಿನದಿ ನಮಿಸುವೆ ಕೊಡು ಎಮಗೆ ಸನ್ಮಂಗಳವನೊಲಿದು//21//


ನರನ ನಾರಾಯಣನ ಹರಿಕೃಷ್ಣರ ಪಡೆದೆ ಪುರುಷಾರ್ಥ ತೆರದಲಿ

ತರಣಿ ಶಶಿ ಶತರೂಪರಿಗೆ ಸಮನೆನಿಸಿ

ಪಾಪಿಗಳ ನಿರಯದೊಳು ನೆಲೆಗೊಳಿಸಿ ಸಜ್ಜನ ನೆರವಿಯನು ಪಾಲಿಸುವ

ಔದುಂಬರ ಸಲಹು ಸಲಹೆಮ್ಮ ಬಿಡದಲೆ ಪರಮ ಕರುಣದಲಿ//22//


ಮಧು ವಿರೋಧಿ ಮನುಜ ಕ್ಷೀರೋದಧಿ ಮಥನ ಸಮಯದಲಿ ಉದಯಿಸಿ

ನೆರೆ ಕುಧರಜಾ ವಲ್ಲಭನ ಮಸ್ತಕ ಮಂದಿರದಿ ಮೆರೆವ ವಿಧು

ತವಾಂಘ್ರಿ ಸರೋಜಾ ಯುಗಳಕೆ ಮಧುಪನಂದದಲಿ ಎರಗಲು ಎನ್ಮನದ ಅಧಿಪ

ವಂದಿಪೆನು ಅನುದಿನ ಅಂತಸ್ತಾಪ ಪರಿಹರಿಸು//23//


ಶ್ರೀ ವನರುಹಾಂಬಕನ ನೇತ್ರಗಳೇ ಮನೆಯೆನಿಸಿ

ಸಜ್ಜನರಿಗೆ ಕರಾವಲಂಬನವೀವ ತೆರದಿ ಮಯೂಖ ವಿಸ್ತರಿಪ

ಆ ವಿವಸ್ವಾನ್ ನೆನಿಸಿ ಕೊಂಬ ವಿಭಾವಸು

ಅಹರ್ನಿಶಿಗಳಲಿ ಕೊಡಲೀ ವಸುಂಧರೆಯೊಳು ವಿಪಶ್ಚಿತರೊಡನೆ ಸುಜ್ಞಾನ//24//


ಲೋಕ ಮಾತೆಯ ಪಡೆದು ನೀ ಜಗದೇಕಪಾತ್ರನಿಗಿತ್ತ ಕಾರಣ

ಶ್ರೀ ಕುಮಾರಿ ಸಮೇತ ನೆಲಸಿದ ನಿನ್ನ ಮಂದಿರದಿ

ಆ ಕಮಲಭವ ಮುಖರು ಬಿಡದೆ ಪರಾಕೆನುತ ನಿಂದಿಹರೋ

ಗುಣ ರತ್ನಾಕರನೆ ಬಣ್ಣಿಸಲಳವೆ ಕೊಡು ಎಮಗೆ ಸನ್ಮನವ//25//


ಪಣೆಯೊಳೊಪ್ಪುವ ತಿಲಕ ತುಳಸೀ ಮಣಿಗಣಾನ್ವಿತ ಕಂಠ

ಕರದಲಿ ಕ್ವಣಿತ ವೀಣಾ ಸುಸ್ವರದಿ ಬಹು ತಾಳ ಗತಿಗಳಲಿ

ಪ್ರಣವ ಪ್ರತಿಪಾದ್ಯನ ಗುಣಂಗಳ ಕುಣಿದು ಪಾಡುತ

ಪರಮ ಸುಖ ಸಂದಣಿಯೊಳು ಆಡುವ ದೇವರ್ಷಿ ನಾರದರಿಗೆ ಅಭಿನಮಿಪೆ//26//


ಆ ಸರಸ್ವತಿ ತೀರದಲಿ ಬಿನ್ನೈಸಲು ಆ ಮುನಿಗಳ ನುಡಿಗೆ

ಜಡಜಾಸನ ಮಹೇಶ ಅಚ್ಯುತರ ಲೋಕಂಗಳಿಗೆ ಪೋಗಿ

ತಾ ಸಕಲ ಗುಣಗಳ ವಿಚಾರಿಸಿ ಕೇಶವನೆ ಪರದೈವವು ಎಂದು ಉಪದೇಶಿಸುವ

ಭೃಗು ಮುನಿಪ ಕೊಡಲಿ ಎಮಗೆ ಅಖಿಳ ಪುರುಷಾರ್ಥ//27//


ಬಿಸರುಹಾಂಬಕನ ಆಜ್ಞೆಯಲಿ ಸುಮನಸ ಮುಖನು ತಾನೆನಿಸಿ

ನಾನಾ ರಸಗಳುಳ್ಳ ಹರಿಸ್ಸುಗಳನು ಅವರವರಿಗೊಯ್ದು ಈವ

ವಸುಕುಲಾಧಿಪ ಯಜ್ಞಪುರುಷನ ಅಸಮ ಬಲ ರೂಪಂಗಳಿಗೆ ವಂದಿಸುವೆ

ಜ್ಞಾನ ಯಶಸ್ಸು ವಿದ್ಯ ಸುಬುದ್ಧಿ ಕೊಡಲೆಮಗೆ//28//


ತಾತನ ಅಪ್ಪಣೆಯಿಂದ ನೀ ಪ್ರಖ್ಯಾತಿಯುಳ್ಳ ಅರವತ್ತು ಮಕ್ಕಳ

ಪ್ರೀತಿಯಿಂದಲಿ ಪಡೆದು ಅವರವರಿಗಿತ್ತು ಮನ್ನಿಸಿದೆ

ವೀತಿ ಹೋತ್ರನ ಸಮಳೆನಿಸುವ ಪ್ರಸೂತಿ ಜನನಿ

ತ್ವದಂಘ್ರಿ ಕಮಲಕೆ ನಾ ತುತಿಸಿ ತಲೆಬಾಗುವೆ ಎಮ್ಮ ಕುಟುಂಬ ಸಲಹುವುದು//29//


ಶತ ಧೃತಿಯ ಸುತರೀರ್ವರ ಉಳಿದ ಅಪ್ರತಿಮ ಸುತಪೋ ನಿಧಿಗಳ

ಪರಾಜಿತನ ಸುಸಮಾಧಿಯೊಳು ಇರಿಸಿ ಮೂರ್ಲೋಕದೊಳು ಮೆರೆವ

ವ್ರತಿವರ ಮರೀಚಿ ಅತ್ರಿ ಪುಲಹಾ ಕ್ರತು ವಸಿಷ್ಠ ಪುಲಸ್ತ್ಯ

ವೈವಸ್ವತನು ವಿಶ್ವಾಮಿತ್ರ ಅಂಗಿರರ ಅಂಘ್ರಿಗೆರಗುವೆನು//30//


ದ್ವಾದಶ ಆದಿತ್ಯರೊಳು ಮೊದಲಿಗನಾದ ಮಿತ್ರ

ಪ್ರವಹ ಮಾನಿನಿಯಾದ ಪ್ರಾವಹಿ ನಿರ್ಋತಿ ನಿರ್ಜರ ಗುರು ಮಹಿಳೆ ತಾರಾ

ಈ ದಿವೌಕಸರು ಅನುದಿನ ಆಧಿವ್ಯಾಧಿ ಉಪಟಳವ ಅಳಿದು

ವಿಬುಧರಿಗೆ ಆದರದಿ ಕೊಡಲಿ ಅಖಿಳ ಮಂಗಳವ ಆವ ಕಾಲದಲಿ//31//


ಮಾನನಿಧಿಗಳು ಎನಿಸುವ ವಿಷ್ವಕ್ಸೇನ ಧನಪ ಗಜಾನನರಿಗೆ

ಸಮಾನರು ಎಂಭತ್ತೈದು ಶೇಷ ಶತಸ್ಥ ದೇವಗಣಕೆ ಆ ನಮಿಸುವೆನು

ಬಿಡದೆ ಮಿಥ್ಯಾ ಜ್ಞಾನ ಕಳೆದು ಸುಬುದ್ಧಿನಿತ್ತು

ಸದಾನುರಾಗದಲಿ ಎಮ್ಮ ಪರಿಪಾಲಿಸಲೆಂದೆನುತ//32//


ಭೂತ ಮರುತನು ಅವಾಂತರ ಅಭಿಮಾನಿ ತಪಸ್ವಿ ಮರೀಚಿ ಮುನಿ

ಪುರುಹೂತ ನಂದನ ಪಾದಮಾನಿ ಜಯಂತರು ಎಮಗೊಲಿದು

ಕಾತರವ ಪುಟ್ಟಿಸದೆ ವಿಷಯದಿ ವೀತಭಯನ ಪದಾಬ್ಜದಲಿ

ವಿಪರೀತ ಬುದ್ಧಿಯನು ಈಯದೆ ಸದಾ ಪಾಲಿಸಲೆಮ್ಮ//33//


ಓದಿಸುವ ಗುರುಗಳನು ಜರಿದು ಸಹ ಓದುಗರಿಗೆ ಉಪದೇಶಿಸಿದ

ಮಹದಾದಿ ಕಾರಣ ಸರ್ವಗುಣ ಸಂಪೂರ್ಣ ಹರಿಯೆಂದು ವಾದಿಸುವ

ತತ್ಪತಿಯ ತೋರೆಂದು ಆ ದನುಜ ಬೆಸಗೊಳಲು

ಸ್ತಂಭದಿ ಶ್ರೀದನ ಆಕ್ಷಣ ತೋರಿಸಿದ ಪ್ರಹ್ಲಾದ ಸಲಹೆಮ್ಮ//34//


ಬಲಿ ಮೊದಲು ಸಪ್ತ ಇಂದ್ರರು ಇವರಿಗೆ ಕಲಿತ ಕರ್ಮಜ ದಿವಿಜರು ಎಂಬರು

ಉಳಿದ ಏಕಾದಶ ಮನುಗಳು ಉಚಿಥ್ಥ್ಯ ಚವನ ಮುಖ

ಕುಲರ್ಷಿಗಳು ಎಂಭತ್ತು ಹೈಹಯ ಇಳಿಯ ಕಂಪನಗೈದ ಪೃಥು

ಮಂಗಳ ಪರೀಕ್ಷಿತ ನಹುಷ ನಾಭಿ ಯಯಾತಿ ಶಶಿಬಿಂದು//35//


ಶತಕ ಸಂಕೇತ ಉಳ್ಳ ಪ್ರಿಯವ್ರತ ಭರತ ಮಾಂಧಾತ ಪುಣ್ಯಾಶ್ರಿತರು

ಜಯವಿಜಯಾದಿಗಳು ಗಂಧರ್ವರೆಂಟು ಜನ

ಹುತವಹಜ ಪಾವಕ ಸನಾತನ ಪಿತೃಗಳು ಎಳ್ವರು ಚಿತ್ರಗುಪ್ತರು

ಪ್ರತಿದಿನದಿ ಪಾಲಿಸಲಿ ತಮ್ಮವನೆಂದು ಎಮಗೊಲಿದು//36//


ವಾಸವಾಲಯ ಶಿಲ್ಪ ವಿಮಲ ಜಲಾಶಯಗಳೊಳು ರಮಿಪ ಊರ್ವಶಿ

ಭೇಶ ರವಿಗಳ ರಿಪುಗಳೆನಿಸುವ ರಾಹುಕೇತುಗಳು

ಶ್ರೀಶ ಪದ ಪಂಥಾನ ಧೂಮಾರ್ಚೀರ ದಿವಿಜರು

ಕರ್ಮಜರಿಗೆ ಸದಾ ಸಮಾನ ದಿವೌಕಸರು ಕೊಡಲಿ ಎಮಗೆ ಮಂಗಳವ//37//


ದ್ಯುನದಿ ಶ್ಯಾಮಲ ಸಂಜ್ಞ ರೋಹಿಣಿ ಘನಪ ಪರ್ಜನ್ಯ ಅನಿರುದ್ಧನ ವನಿತೆ

ಬ್ರಹ್ಮಾಂಡಾಭಿಮಾನಿ ವಿರಾಟ ದೇವಿಯರ ನೆನೆವೆನು

ಆ ನಲವಿಂದೆ ದೇವಾನನ ಮಹಿಳೆ ಸ್ವಾಹಾಖ್ಯರು

ಆಲೋಚನೆ ಕೊಡಲಿ ನಿರ್ವಿಘ್ನದಿಂ ಭಗವದ್ಗುಣoಗಳಲಿ//38//


ವಿಧಿಪಿತನ ಪಾದಾಂಬುಜಗಳಿಗೆ ಮಧುಪನಾಂತೆ ವಿರಾಜಿಪಾಮಲ

ಉದಕಗಳಿಗೆ ಸದಾಭಿಮಾನಿಯು ಎಂದೆನಿಸಿಕೊಂಬ ಬುಧಗೆ ನಾ ವಂದಿಸುವೆ ಸಮ್ಮೋದದಿ

ನಿರಂತರವು ಒಲಿದೆಮಗೆ

ಅಭ್ಯುದಯ ಪಾಲಿಸಲೆಂದು ಪರಮೋತ್ಸವದೊಳು ಅನುದಿನದಿ//39//


ಶ್ರೀ ವಿರಿಂಚಾದ್ಯರ ಮನಕೆ ನಿಲುಕಾವ ಕಾಲಕೆ

ಜನನ ರಹಿತನ ತಾವೊಲಿಸಿ ಮಗನೆಂದು ಮುದ್ದಿಸಿ ಲೀಲೆಗಳ ನೋಳ್ಪ

ದೇವಕಿಗೆ ವಂದಿಪೆ ಯಶೋದಾ ದೇವಿಗೆ ಆನಮಿಸುವೆನು

ಪರಮ ಕೃಪಾವಲೋಕನದಿಂದ ಸಲಹುವುದು ಎಮ್ಮ ಸಂತತಿಯ//40//


ಪಾಮರರನ ಪವಿತ್ರಗೈಸುವ ಶ್ರೀ ಮುಕುಂದನ ವಿಮಲ ಮಂಗಳ

ನಾಮಗಳಿಗೆ ಅಭಿಮಾನಿಯಾದ ಉಷಾಖ್ಯ ದೇವಿಯರು

ಭೂಮಿಯೊಳಗುಳ್ಳ ಅಖಿಳ ಸಜ್ಜನರ ಆಮಯಾದಿಗಳ ಅಳಿದು ಸಲಹಲಿ

ಆ ಮರುತ್ವಾನ್ ಮನೆಯ ವೈದ್ಯರ ರಮಣಿ ಪ್ರತಿದಿನದಿ//41//


ಪುರುಟ ಲೋಚನ ನಿನ್ನ ಕದ್ದೊಯ್ದಿರಲು ಪ್ರಾರ್ಥಿಸೆ

ದೇವತೆಗಳ ಉತ್ತರವ ಲಾಲಿಸಿ ತಂದ ವರಾಹ ರೂಪ ತಾನಾಗಿ

ಧರಣಿ ಜನನಿ ನಿನ್ನ ಪಾದಕ್ಕೆರಗಿ ಬಿನ್ನೈಸುವನು

ಪಾದಸ್ಪರ್ಶ ಮೊದಲಾದ ಅಖಿಳ ದೋಷಗಳು ಎಣಿಸದಿರೆಂದು//42//


ವನಧಿವಸನೆ ವರಾದ್ರಿ ನಿಚಯ ಸ್ತನವಿರಾಜಿತೆ

ಚೇತನಾಚೇತನ ವಿಧಾರಕೆ ಗಂಧ ರಸ ರೂಪಾದಿ ಗುಣ ವಪುಷೆ

ಮುನಿಕುಲೋತ್ತಮ ಕಶ್ಯಪನ ನಿಜತನುಜೆ ನಿನಗೆ ಅನಮಿಪೆ

ಎನ್ನವಗುಣಗಳು ಎಣಿಸದೆ ಪಾಲಿಪುದು ಪರಮಾತ್ಮನರ್ಧಾಂಗಿ//43//


ಹರಿ ಗುರುಗಳ ಅರ್ಚಿಸದ ಪಾಪಾತ್ಮರನ ಶಿಕ್ಷಿಸಲೋಸುಗ

ಶನೈಶ್ಚರನೆನಿಸಿ ದುಷ್ಫಲಗಳೀವೆ ನಿರಂತರದಿ ಬಿಡದೆ

ತರಣಿ ನಂದನ ನಿನ್ನ ಪಾದಾಂಬುರುಹಗಳಿಗೆ ಆ ನಮಿಪೆ

ಬಹು ದುಸ್ತರ ಭವಾರ್ಣದಿ ಮಗ್ನನಾದೆನ್ನ ಉದ್ಧರಿಸಬೇಕು//44//


ನಿರತಿಶಯ ಸುಜ್ಞಾನ ಪೂರ್ವಕ ವಿರಚಿಸುವ ನಿಷ್ಕಾಮ ಕರ್ಮಗಳರಿತು

ತತ್ತತ್ಕಾಲದಲಿ ತಜ್ಜನ್ಯ ಫಲರಸವ ಹರಿಯ ನೇಮದಲಿ ಉಣಿಸಿ

ಬಹುಜೀವರಿಗೆ ಕರ್ಮಪನೆನಿಪ

ಗುರುಪುಷ್ಕರನು ಸತ್ಕ್ರಿಯಂಗಳಲಿ ನಿರ್ವಿಘ್ನತೆಯ ಕೊಡಲಿ//45//


ಶ್ರೀನಿವಾಸನ ಪರಮ ಕಾರುಣ್ಯಾನಿ ವಾಸಸ್ಥಾನರು ಎನಿಪ ಕೃಶಾನುಜರು

ಸಹಸ್ರ ಷೋಡಶ ಶತರು ಶ್ರೀ ಕೃಷ್ಣ ಮಾನಿನಿಯರು ಎಪ್ಪತ್ತು

ಯಕ್ಷರು ದಾನವರು ಮೂವತ್ತು

ಚಾರಣ ಅಜಾನಜ ಅಮರರು ಅಪ್ಸರರು ಗಂಧರ್ವರಿಗೆ ನಮಿಪೆ//46//


ಕಿನ್ನರರು ಗುಹ್ಯಕರು ರಾಕ್ಷಸ ಪನ್ನಗರು ಪಿತೃಗಳು ಸಿದ್ಧರು

ಸನ್ನುತ ಅಜಾನಜರು ಸಮರು ಇವರು ಅಮರ ಯೋನಿಜರು

ಇನ್ನಿವರ ಗಣವೆಂತು ಬಣ್ಣಿಸಲು ಎನ್ನೊಳವೆ

ಕರುಣದಲಿ ಪರಮಾಪನ್ನ ಜನರಿಗೆ ಕೊಡಲಿ ಸನ್ಮುದ ಪರಮ ಸ್ನೇಹದಲಿ//47//


ಆ ಯಮುನೆಯೊಳು ಸಾದರದಿ ಕಾತ್ಯಾಯನೀ ವ್ರತಧರಿಸಿ

ಕೆಲರು ದಯಾಯುಧನೆ ಪತಿಯೆಂದು ಕೆಲವರು ಜಾರತನದಲ್ಲಿ

ವಾಯುಪಿತನೊಲಿಸಿದರು ಈರ್ವಗೆ ತೋಯ ಸರಸರ

ಪಾದಕಮಲಕೆ ನಾ ಎರಗುವೆ ಮನೋರಥಂಗಳ ಸಲಿಸಲಿ ಅನುದಿನದಿ//48//


ನೂರುಮುನಿಗಳ ಉಳಿದು ಮೇಲಣ ನೂರು ಕೋಟಿ ತಪೋಧರನ

ಪಾದಾರವಿಂದಕೆ ಮುಗಿವೆ ಕರಗಳನು ಉದ್ಧರಿಸಲೆಂದು

ಮೂರು ಸಪ್ತ ಶತಾಹ್ವಯರ ತೊರೆದು ಈ ಋಷಿಗಳ ಅನಂತರಲಿಹ

ಭೂರಿ ಪಿತೃಗಳು ಕೊಡಲಿ ಎಮಗೆ ಸಂತತ ಸುಮಂಗಳವ//49//


ಪಾವನಕೆ ಪಾವನನು ಎನಿಸುವ ರಮಾ ವಿನೋದಿಯ ಗುಣಗಣoಗಳ

ಸಾವಧಾನದಲಿ ಏಕ ಮಾನಸರಾಗಿ ಸುಸ್ವರದಿ

ಆ ವಿಬುಧಪತಿ ಸಭೆಯೊಳಗೆ ನಾನಾ ವಿಲಾಸದಿ ಪಾಡಿ ಸುಖಿಸುವ

ದೇವ ಗಂಧರ್ವರು ಕೊಡಲಿ ಎಮಗೆ ಅಖಿಳ ಪುರುಷಾರ್ಥ//50//


ಭುವನ ಪಾವನ ಮಾಳ್ಪ ಲಕ್ಷ್ಮೀ ಧವನ

ಮಂಗಳ ದಿವ್ಯ ನಾಮ ಸ್ತವನಗೈವ ಮನುಷ್ಯ ಗಂಧರ್ವರಿಗೆ ವಂದಿಸುವೆ

ಪ್ರವರ ಭೂಭುಜರ ಉಳಿದು ಮಧ್ಯಮ ಕುವಲಯಪರು ಎಂದು ಎನಿಸಿಕೊಂಬರ

ದಿವಸ ದಿವಸಂಗಳಲಿ ನೆನೆವನು ಕರಣ ಶುದ್ಧಿಯಲಿ//51//


ಶ್ರೀ ಮುಕುಂದನ ಮೂರ್ತಿಸಲೆ ಸೌದಾಮಿನಿಯೋಳ್ ಹೃದಯ ವಾರಿಜ

ವ್ಯೋಮ ಮಂಡಲ ಮಧ್ಯದಲಿ ಕಾಣುತಲಿ ಮೋದಿಸುವ

ಆ ಮನುಷ್ಯೋತ್ತಮರ ಪದಯುಗ ತಾಮರಸಗಳಿಗೆ ಎರಗುವೆ

ಸದಾ ಕಾಮಿತಾರ್ಥಗಳಿತ್ತು ಸಲಹಲಿ ಪ್ರಣತ ಜನತತಿಯ//52//


ಈ ಮಹೀ ಮಂಡಲದೊಳಿಹ ಗುರು ಶ್ರೀಮದಾಚಾರ್ಯರ ಮತಾನುಗರು

ಆ ಮಹಾವೈಷ್ಣವರ ವಿಷ್ಣು ಪದಾಬ್ಜ ಮಧುಕರರ ಸ್ತೋಮಕೆ ಅನಮಿಸುವೆನು

ಅವರವರ ನಾಮಗಳನು ಏಂ ಪೇಳ್ವೆ ಬಹುವಿಧ

ಯಾಮ ಯಾಮಂಗಳಲಿ ಬೋಧಿಸಲಿ ಎಮಗೆ ಸನ್ಮತಿಯ//53//


ಮಾರನಯ್ಯನ ಕರುಣ ಪಾರಾವಾರ ಮುಖ್ಯ ಸುಪಾತ್ರರು ಎನಿಪ

ಸರೋರುಹಾಸನ ವಾಣಿ ರುದ್ರ ಇಂದ್ರಾದಿ ಸುರನಿಕರ

ತಾರತಮ್ಯಾತ್ಮಕ ಸುಪದ್ಯಗಳ ಆರು ಪಠಿಸುವರು ಆ ಜನರಿಗೆ

ರಮಾರಮಣ ಪೂರೈಸಲಿ ಈಪ್ಸಿತ ಸರ್ವಕಾಲದಲಿ//54//


ಮೂರು ಕಾಲಗಳಲ್ಲಿ ತುತಿಸೆ ಶರೀರ ವಾನ್ಗ್ಮನಃ ಶುದ್ಧಿ ಮಾಳ್ಪುದು

ದೂರಗೈಸುವದು ಅಖಿಳ ಪಾಪ ಸಮೂಹ ಪ್ರತಿದಿನದಿ

ಚೋರಭಯ ರಾಜಭಯ ನಕ್ರ ಚಮೂರ ಶಸ್ತ್ರ ಜಲಾಗ್ನಿ ಭೂತ

ಮಹೋರಗ ಜ್ವರ ನರಕ ಭಯ ಸಂಭವಿಸದು ಎಂದೆಂದು//55//


ಜಯಜಯತು ತ್ರಿಜಗದ್ವಿಲಕ್ಷಣ ಜಯಜಯತು ಜಗದೇಕ ಕಾರಣ

ಜಯಜಯತು ಜಾನಕೀ ರಮಣ ನಿರ್ಗತ ಜರಾಮರಣ

ಜಯಜಯತು ಜಾಹ್ನವೀ ಜನಕ ಜಯಜಯತು ದೈತ್ಯ ಕುಲಾಂತಕ

ಭವಾಮಯ ಹರ ಜಗನ್ನಾಥ್ ವಿಠಲ ಪಾಹಿಮಾಂ ಸತತ//56//