ಮಕ್ಕಳಾಡಿಸುವಾಗ ಮಡದಿಯೊಳು ಅಕ್ಕರದಿ ನಲಿವಾಗ

ಹಯ ಪಲ್ಲಕ್ಕಿ ಗಜ ಮೊದಲಾದ ವಾಹನಗಳು ಏರಿ ಮೆರೆವಾಗ

ಬಿಕ್ಕುವಾಗ ಆಕಳಿಸುತಲಿ ದೇವಕ್ಕಿ ತನಯನ ಸ್ಮರಿಸುತಿಹ ನರ

ಸಿಕ್ಕ ಯಮದೂತರಿಗೆ ಆವ ಆವಲ್ಲಿ ನೋಡಿದರು//1//


ಸರಿತು ಪ್ರವಹಗಳಲ್ಲಿ ದಿವ್ಯಾಂಬರದಿ ಪತ್ರಾದಿಯಲಿ

ಹರುಷಾ ಮರುಷ ವಿಸ್ಮ್ರುತಿಯಂದಲಿ ಆಗಲಿ ಒಮ್ಮೆ ಬಾಯಿ ತೆರೆದು

ಹರಿ ಹರೀ ಹರಿಯೆಂಬ ಎರಡಕ್ಷರ ನುಡಿದ ಮಾತ್ರದಲಿ

ದುರಿತಗಳು ಇರದೇ ಪೋಪವು ತೂಲ ರಾಶಿಯೊಳು ಅನಲ ಪೊಕ್ಕಂತೆ//2//


ಮಲಗುವಾಗಲಿ ಏಳುವಾಗಲಿ ಕುಳಿತು ಮಾತಾಡುತಲಿ

ಮನೆಯೊಳು ಕೆಲಸಗಳ ಮಾಡುತಲಿ ಮೈದೊಳೆವಾಗ ಮೆಲುವಾಗ

ಕಲುಷ ದೂರನ ಸಕಲ ಟಾವಿಲಿ ತಿಳಿಯೆ ತತ್ತನ್ನಾಮ ರೂಪವ ಬಳಿಯಲಿಪ್ಪನು

ಒಂದರೆಕ್ಷಣ ಬಿಟ್ಟಗಲನು ಅವರ//3//


ಆವ ಕುಲದವನು ಆದಡೆ ಏನು ಇನ್ನಾವ ದೇಶದೊಳು ಇದ್ದಡೇನು

ಇನ್ನಾವ ಕರ್ಮವ ಮಾಡಲೇನು ಇನ್ನಾವ ಕಾಲದಲಿ

ಶ್ರೀವರನ ಸರ್ವತ್ರದಲಿ ಸಂಭಾವಿಸುತ ಪೂಜಿಸುತ ಮೋದಿಪ

ಕೋವಿದರಿಗೆ ಉಂಟೇನೋ ಭಯ ದುಃಖಾದಿ ದೋಷಗಳು//4//


ವಾಸುದೇವನ ಗುಣ ಸಮುದ್ರದೊಳು ಈಸಬಲ್ಲವ ಭವ ಸಮುದ್ರ

ಆಯಾಸವಿಲ್ಲದೆ ದಾಟುವನು ಶೀಘ್ರದಲಿ ಜಗದೊಳಗೆ

ಬೇಸರದೆ ದುರ್ವಿಷಯಗಳ ಅಭಿಲಾಷೆಯಲಿ ಬಳಲುವವ

ನಾನಾ ಕ್ಲೇಷಗಳನು ಅನುಭವಿಪ ಭಕ್ತಿ ಸುಮಾರ್ಗ ಕಾಣದಲೇ//5//


ಸ್ನಾನ ಜಪ ದೇವಾರ್ಚನೆಯು ವ್ಯಾಖ್ಯಾನ ಭಾರತ ಮುಖ ಮಹೋಪಪುರಾಣ ಕಥೆಗಳ

ಪೇಳಿ ಕೇಳಿದರೇನು ದಿನದಿನದಿ

ಜ್ಞಾನ ಕರ್ಮ ಇಂದ್ರಿಯಗಳಿಂದ ಏನೇನು ಮಾಡುವ ಕರ್ಮಗಳು

ಲಕ್ಷ್ಮೀ ನಿವಾಸನ ಪೂಜೆಯೆಂದು ಅರ್ಪಿಸದ ಮಾನವನು//6//


ದೇವ ಗಂಗೆಯೊಳು ಉಳ್ಳವಗೆ ದುರಿತ ಅವಳಿಗಳು ಉಂಟೇ ವಿಚಾರಿಸೆ

ಪಾವುಗಳ ಭಯವುಂಟೆ ವಿಹಗಾಧಿಪನ ಮಂದಿರದಿ

ಜೀವ ಕರ್ತೃತ್ವವನು ಮರೆದು ಪರಾವರೇಶನೆ ಕರ್ತೃ ಎಂದರಿದು

ಆವ ಕರ್ಮವ ಮಾಡಿದರು ಲೆಪಿಸವು ಕರ್ಮಗಳು//7//


ಏನು ಮಾಡುವ ಪುಣ್ಯ ಪಾಪಗಳು ಆಣೆ ಮಾಡುವೆನೆಂಬ ಅಧಮ

ಹೀನ ಕರ್ಮಕೆ ಪಾತ್ರ ನಾ ಪುಣ್ಯಕ್ಕೆ ಹರಿಯೆಂಬ ಮಾನವನು ಮಧ್ಯಮನು

ದ್ವಂದ್ವಕೆ ಶ್ರೀನಿವಾಸನೆ ಕರ್ತೃವೆಂದು

ಸದಾನುರಾಗದಿ ನೆನೆದು ಸುಖಿಸುವರೇ ನರೋತ್ತಮರು//8//


ಈ ಉಪಾಸನೆಗೈವರು ಇಳೆಯೊಳು ದೇವತೆಗಳು ಅಲ್ಲದಲೇ ನರರಲ್ಲ

ಆವ ಬಗೆಯಿಂದಾದರು ಅವರ ಅರ್ಚನೆಯು ಹರಿಪೂಜೆ

ಕೇವಲ ಪ್ರತಿಮೆಗಳು ಎನಿಪರು ರಮಾ ವಿನೋದಗೆ

ಇವರ ಅನುಗ್ರಹವೇ ವರಾನುಗ್ರಹವೆನಿಸುವುದು ಮುಕ್ತಿ ಯೋಗ್ಯರಿಗೆ//9//


ತನುವೆ ನಾನೆಂಬುವೆನು ಸತಿ ಸುತ ಮನೆ ಧನಾದಿಗಳು ಎನ್ನದೆಂಬುವ

ದ್ಯುನದಿ ಮೊದಲಾದ ಉದಕಗಳೆ ಸತ್ ತೀರ್ಥವು ಎಂಬುವನು

ಅನಲ ಲೋಹಾದಿ ಪ್ರತೀಕ ಅರ್ಚನವೆ ದೇವರ ಪೂಜೆ

ಸುಜನರ ಮನುಜರು ಅಹುದು ಎಂಬುವನು ಗೋಖರನೆನಿಪ ಬುಧರಿಂದ//10//


ಅನಲ ಸೋಮಾರ್ಕ ಇಂದು ತಾರ ಅವನಿ ಸುರಾಪಗ ಮುಖ್ಯ ತೀರ್ಥಗಳು

ಅನಿಲ ಗಗನ ಮನಾಡಿ ಇಂದ್ರಿಯಗಳಿಗಭಿಮಾನಿ ಎನಿಪ ಸುರರು

ವಿಪಶ್ಚಿತರ ಸನ್ಮನದಿ ಭಜಿಸದೆಯಿಪ್ಪರನ

ಪಾವನವ ಮಾಡರು ತಮ್ಮ ಪೂಜೆಯ ಮಾಡಿದರು ಸರಿಯೇ//11//


ಕೆಂಡ ಕಾಣದೆ ಮುಟ್ಟಿದರು ಸರಿಕಂಡು ಮುಟ್ಟಲು ದಹಿಸದೆ ಇಪ್ಪುದೆ

ಪುಂಡರೀಕ ದಳಾಯತಾಕ್ಷನ ವಿಮಲ ಪದ ಪದ್ಮ

ಬಂಡುಣಿಗಳು ಎಂದೆನಿಪ ಭಕ್ತರ ಹಿಂಡು ನೋಡಿದ ಮಾತ್ರದಲಿ

ತನುದಿಂಡುಗೆಡಹಿದ ನರನ ಪಾವನ ಮಾಳ್ಪರು ಆ ಕ್ಷಣದಿ//12//


ಈ ನಿಮಿತ್ತ ಪುನಃ ಪುನಃ ಸುಜ್ಞಾನಿಗಳ ಸಹವಾಸ ಮಾಡು

ಕುಮಾನವರ ಕೂಡಿ ಆಡದಿರು ಲೌಕಿಕಕೆ ಮರುಳಾಗಿ

ವೈನತೇಯ ಅಂಸಗನ ಸರ್ವ ಸ್ಥಾನದಲಿ ತನ್ನಾಮ ರೂಪವ ಧೇನಿಸುತ ಸಂಚರಿಸು

ಇತರ ಆಲೋಚನೆಯ ಬಿಟ್ಟು//13//


ಈ ನಳಿನಜಾಂಡದೊಳು ಸರ್ವ ಪ್ರಾಣಿಗಳೊಳಗಿದ್ದು ಅನವರತ

ವಿಜ್ಞಾನಮಯ ವ್ಯಾಪಾರಗಳ ಮಾಡುವನು ತಿಳಿಸದಲೆ

ಏನು ಕಾಣದೆ ಸಕಲ ಕರ್ಮಗಳು ಆನೆ ಮಾಡುವೆನೆಂಬ ನರನು

ಕುಯೋನಿ ಐದುವ ಕರ್ತೃ ಹರಿ ಎಂದವನೇ ಮುಕ್ತನಹ//14//


ಕಲಿಮಲಾಪಹಳು ಎನಿಸುತಿಹ ಬಾಂಬೊಳೆಯೊಳಗೆ ಸಂಚರಿಸಿ ಬದುಕುವ

ಜಲಚರ ಪ್ರಾಣಿಗಳು ಬಲ್ಲವೆ ತೀರ್ಥ ಮಹಿಮೆಯನು

ಹಲವು ಬಗೆಯಲಿ ಹರಿಯ ಕರುಣಾ ಬಲದಿ ಬಲ್ಲಿದರು ಆದ

ಬ್ರಹ್ಮಾನಿಲ ವಿಪ ಈಶಾದಿ ಅಮರರು ಅರಿಯರು ಅನಂತನ ಅಮಲ ಗುಣ//15//


ಶ್ರೀಲಕುಮಿ ವಲ್ಲಭನು ಹೃತ್ಕೀಲಾಲಜದೊಳಿದ್ದು ಅಖಿಳ ಚೇತನ ಜಾಲವನು ಮೋಹಿಸುವ

ತ್ರಿಗುಣದಿ ಬದ್ಧರನು ಮಾಡಿ

ಸ್ಥೂಲ ಕರ್ಮದಿ ರತರ ಮಾಡಿ ಸ್ವಲೀಲೆಗಳ ತಿಳಿಸದಲೆ

ಭವಾದಿ ಕುಲಾಲ ಚಕ್ರದ ತೆರದಿ ತಿರುಗಿಸುತಿಹನು ಮಾನವರ//16//


ವೇದ ಶಾಸ್ತ್ರ ವಿಚಾರಗೈದು ನಿಷೇಧ ಕರ್ಮವ ತೊರೆದು ನಿತ್ಯದಿ

ಸಾಧು ಕರ್ಮವ ಮಾಳ್ಪರಿಗೆ ಸ್ವರ್ಗಾದಿ ಸುಖವ ಈವ

ಐದಿಸುವ ಪಾಪಿಅಗಲ ನಿರಯವ ಖೇದ ಮೋದ ಮನುಷ್ಯರಿಗೆ

ದುರ್ವಾದಿಗಳಿಗೆ ಅಂಧಂತಮದಿ ಮಹಾ ದುಃಖಗಳನು ಉಣಿಪ//17//


ನಿರ್ಗುಣ ಉಪಾಸಕಗೆ ಗುಣ ಸಂಸರ್ಗ ದೋಷಗಳು ಈಯದಲೆ

ಅಪವರ್ಗದಲಿ ಸುಖವಿತ್ತು ಪಾಲಿಸುವನು ಕೃಪಾಸಾಂದ್ರ

ದುರ್ಗಮನು ಎಂದೆನಿಪ ತ್ರೈವಿಧ್ಯರ್ಗೆ ತ್ರಿಗುಣಾತೀತ

ಸಂತತ ಸ್ವರ್ಗ ಭೂ ನರಕದಲಿ ಸಂಚಾರವನೆ ಮಾಡಿಸುವ//18//


ಮೂವರೊಳಗಿದ್ದರು ಸರಿಯೆ ಸುಖ ನೋವುಗಳು ಸಂಬಂಧವಾಗವು

ಪಾವನಕೆ ಪಾವನ ಪರಾತ್ಪರ ಪೂರ್ಣ ಸುಖವನದಿ

ಈ ವನರುಹ ಭವಾಂಡದೊಳು ಸ್ವ ಕಳೇವರ ತದಾಕಾರ ಮಾಡಿ ಪರಾವರೇಶ

ಚರಾಚರಾತ್ಮಕ ಲೋಕಗಳ ಪೊರೆವ//19//


ಈ ನಿಮಿತ್ತ ನಿರಂತರ ಸ್ವಾಧೀನ ಕರ್ತೃತ್ವವನು ಮರೆದು

ಏನೇನು ಮಾಡುವುದು ಎಲ್ಲ ಹರಿ ಒಳಹೊರಗೆ ನೆಲೆಸಿದ್ದು ತಾನೇ ಮಾಡುವೆನೆಂದು

ಮದ್ದಾನೆಯಂದದಿ ಸಂಚರಿಸು

ಪವಮಾನ ವಂದಿತ ಒಂದರೆಕ್ಷಣ ಬಿಟ್ಟಗಲ ನಿನ್ನ//20//


ಹಲವು ಕರ್ಮವ ಮಾಡಿ ದೇಹವ ಬಳಲಿಸದೆ ದಿನದಿನದಿ ಹೃದಯ ಕಮಲ ಸದನದಿ

ವಿರಾಜಿಸುವ ಹರಿ ಮೂರ್ತಿಯನೆ ಭಜಿಸು

ತಿಳಿಯದೆ ಈ ಪೂಜಾ ಪ್ರಕರಣವ ಫಲ ಸುಪುಷ್ಪ ಅಗ್ರೋದಕ

ಶ್ರೀ ತುಳಸಿಗಳನು ಅರ್ಪಿಸಲು ಒಪ್ಪನು ವಾಸುದೇವ ಸದಾ//21//


ಧರಣಿ ನಾರಾಯಣನು ಉದಕದಿ ತುರ್ಯ ನಾಮಕ ಅಗ್ನಿಯೊಳು ಸಂಕರುಷಣ ಆಹ್ವಯ

ವಾಯುಗನು ಪ್ರದ್ಯುಮ್ನ ಅನಿರುದ್ಧ ಇರುತಿಹನು ಆಕಾಶದೊಳು

ಮೂರೆರೆಡು ರೂಪವ ಧರಿಸಿ ಭೂತಗ ಕರೆಸುವನು

ತನ್ನಾಮ ರೂಪದಿ ಪ್ರಜರ ಸಂತೈಪ//22//


ಘನಗತನು ತಾನಾಗಿ ನಾರಾಯಣನು ತನ್ನಾಮದಲಿ ಕರೆಸುತ

ವನದ ಗರ್ಭ ಉದಕದಿ ನೆಲೆಸಿಹ ವಾಸುದೇವಾಖ್ಯ

ಧ್ವನಿ ಸಿಡಿಲು ಸಂಕರುಷಣನು ಮಿಂಚಿನೊಳು ಶ್ರೀ ಪ್ರದ್ಯುಮ್ನ

ವೃಷ್ಟಿಯ ಹನಿಗಳೊಳಗೆ ಅನಿರುದ್ಧನಿಪ್ಪನು ವರುಷನೆಂದೆನಿಸಿ//23//


ಗೃಹ ಕುಟುಂಬ ಧನಾದಿಗಳ ಸನ್ನಹಗಳನು ಉಳ್ಳವರಾಗಿ

ವಿಹಿತಾವಿಹಿತ ಧರ್ಮ ಸುಕರ್ಮಗಳ ತಿಳಿಯದಲೆ ನಿತ್ಯದಲಿ

ಅಹರ ಮೈಥುನ ನಿದ್ರೆಗೊಳಗಾಗಿ ಇಹರು ಸರ್ವ ಪ್ರಾಣಿಗಳು

ಹೃದ್ಗುಹ ನಿವಾಸಿಯನು ಅರಿಯದಲೆ ಭವದೊಳಗೆ ಬಳಲುವರು//24//


ಜಡಜ ಸಂಭವ ಖಗ ಫಣಿಪ ಕೆಂಜೆಡೆಯರಿಂದ ಒಡಗೂಡಿ

ರಾಜಿಸುತ ಅಡವಿಯೊಳಗಿಪ್ಪನು ಸದಾ ಗೋಜಾದ್ರಿಜನೆನಿಸಿ

ಉಡುಪನಿಂದ ಅಭಿವೃದ್ಧಿಗಳ ತಾ ಕೊಡುತ ಪಕ್ಷಿ ಮೃಗಾಹಿಗಳ

ಕಾರೊಡಲ ಕಾವನು ತತ್ತದಾಹ್ವಯನು ಆಗಿ ಜೇವರನ//25//


ಅಪರಿಮಿತ ಸನ್ಮಹಿಮ ನರಹರಿ ವಿಪಿನದೊಳು ಸಂತೈಸುವನು

ಕಾಶ್ಯಪಿಯನು ಅಳಿದವ ಸ್ಥಳಗಳಲಿ ಸರ್ವತ್ರ ಕೇಶವನು

ಖಪತಿ ಗಗನದಿ ಜಲಗಳಲಿ ಮಹ ಶಫರನಾಮಕ

ಭಕ್ತರನು ನಿಷ್ಕಪಟದಿಂದಲಿ ಸಲಹುವನು ಕರುಣಾಳು ದಿನದಿನದಿ//26//


ಕಾರಣಾಂತರ್ಯಾಮಿ ಸ್ಥೂಲ ಅವತಾರ ವ್ಯಾಪ್ತಾಂಶ ಆದಿ ರೂಪಕೆ

ಸಾರ ಶುಭ ಪ್ರವಿವಿಕ್ತ ಆನಂದ ಸ್ಥೂಲ ನಿಸ್ಸಾರ

ಆರು ರಸಗಳನು ಅರ್ಪಿಸಲ್ಪರಿಗೆ ಈ ರಹಸ್ಯವ ಪೇಳದೆ

ಸದಾಪಾರ ಮಹಿಮನ ರೂಪ ಗುಣಗಳ ನೆನೆದು ಸುಖಿಸುತಿರು//27//


ಜಲಗತ ಉಡುಪನ ಅಮಲ ಬಿಂಬವ ಮೆಲುವೆವು ಎಂಬ ಅತಿ ಹರುಷದಿಂದಲಿ

ಜಲಚರ ಪ್ರಾಣಿಗಳು ನಿತ್ಯದಿ ಯತ್ನಗೈವಂತೆ

ಹಲಧರಾನುಜ ಭೋಗ್ಯ ರಸಗಳ ನೆಲೆಯನರಿಯದೆ ಪೂಜಿಸುತ

ಹಂಬಲಿಸುವರು ಪುರುಷಾರ್ಥಗಳ ಸತ್ಕುಲಜರು ಆವೆಂದು//28//


ದೇವ ಋಷಿ ಗಂಧರ್ವ ಪಿತೃ ನರ ದೇವ ಮಾನವ ದನುಜ ಗೋ ಅಜ

ಖರಾವಿ ಮೊದಲಾದ ಅಖಿಳ ಚೇತನ ಭೋಗ್ಯ ರಸಗಳನು

ಯಾವದವಯವಗಳೊಳಗಿದ್ದು ರಮಾವರನು ಸ್ವೀಕರಿಪ

ಯಾವಜ್ಜೀವ ಗಣಕೆ ಸ್ವಯೋಗ್ಯ ರಸಗಳನು ಈವನು ಎಂದೆಂದು//29//


ಒರಟು ಬುದ್ಧಿಯ ಬಿಟ್ಟು ಲೌಕಿಕ ಹರಟೆಗಳ ನೀಡಾಡಿ

ಕಾಂಚನ ಪರಟಿ ಲೋಷ್ಟ ಆದಿಗಳು ಸಮವೆಂದರಿದು ನಿತ್ಯದಲಿ

ಪುರುಟ ಗರ್ಭಾಂಡ ಉದರನು ಸತ್ಪುರುಷನು ಎಂದೆನಿಸಿ

ಎಲ್ಲರೊಳಗಿದ್ದು ಉರುಟ ಕರ್ಮವ ಮಾಳ್ಪನು ಎಂದು ಅಡಿಗಡಿಗೆ ನೆನೆವುತಿರು//30//


ಭೂತಳದಿ ಜನರುಗಳು ಮರ್ಮಕ ಮಾತುಗಳನಾಡಿದರೆ ಸಹಿಸದೆ

ಘಾತಿಸುವರು ಅತಿ ಕೋಪದಿಂದಲಿ ಹೆಚ್ಚರಿಪ ತೆರದಿ

ಮಾತುಳಾಂತಕ ಜಾರ ಹೇ ನವನೀತ ಚೋರನೆನಲು

ತನ್ನ ನಿಕೇತನದೊಳಿಟ್ಟು ಅವರ ಸಂತೈಸುವನು ಕರುಣಾಳು//31//


ಹರಿಕಥಾಮೃತ ಸಾರವಿದು ಸಂತರು ಸದಾ ಚಿತ್ತೈಸುವುದು

ನಿಷ್ಠುರಿಗಳಿಗೆ ಪಿಶುನರಿಗೆ ಅಯೋಗ್ಯರಿಗೆ ಇದನು ಪೇಳದಲೇ

ನಿರುತ ಸದ್ಭಕ್ತಿಯಲಿ ಭಗವತ್ ಚರಿತೆಗಳ ಕೊಂಡಾಡಿ ಹಿಗ್ಗುವ

ಪರಮ ಭಗವತ್ ದಾಸರಿಗೆ ತಿಳಿಸುವುದು ಈ ರಹಸ್ಯ//32//


ಸತ್ಯ ಸಂಕಲ್ಪನು ಸದಾ ಏನು ಇತ್ತದೆ ಪುರುಷಾರ್ಥವೆoದರಿದು

ಅತ್ಯಧಿಕ ಸಂತೋಷದಿಂ ನೆನೆವುತ್ತ ಭುಂಜಿಪುದು

ನಿತ್ಯ ಸುಖ ಸಂಪೂರ್ಣ ಪರಮ ಸುಹೃತ್ತಮ ಜಗನ್ನಾಥ ವಿಠಲ

ಬತ್ತಿಸಿ ಭವಾಂಬುಧಿಯ ಚಿತ್ಸುಖ ವ್ಯಕ್ತಿ ಕೊಡುತಿಪ್ಪ//33//