ಕಾಳಿಯ ಹೃದಯ


ನಮ್ಮ ಊರು ಪೇಟೆಯಲ್ಲಿ ಕಾಳಮ್ಮನೆಂಬ ಐವತ್ತು ವಯಸ್ಸಿನ ಹೆಂಗಸೊಬ್ಬಳಿದ್ದಳು. ಅವಳ ಬಣ್ಣವು ಹೆಸರಿಗೆ ತಕ್ಕಂತೆ ಕರಿಯಮೋಡದ ಬಣ್ಣವಾಗಿದ್ದಿತು. ಅವಳ ಸ್ವಭಾವವೂ ಕೂಡ ಬಹಳ ದುಡುಕಾದುದು ಮತ್ತು ಕಠಿಣವಾದುದು. ಅವಳ ಬಾಯಿನಿಂದ ಒಂದೇ ಒಂದು ಒಳ್ಳೆಯ ಮಾತನ್ನು ಕೇಳಿದವರು ನಮ್ಮ ಊರಿನಲ್ಲಿ ಯಾರೂ ಇಲ್ಲ. ಅವಳಿಗೆ ಮದುವೆಯಾಗಿದ್ದಿತೋ ಇಲ್ಲವೊ ನನಗೆ ತಿಳಿಯದು. ಅವಳು ಯಾವ ಜಾತಿಯೋ ನಾನು ಕಾಣೆ. ನಮ್ಮ ಊರಿನಲ್ಲಿ ಯಾರೂ ಅವಳ ಹತ್ತಿರ ಮಾತುಕಥೆಗಳನ್ನಾಡಿ ಅವಳಿಗೆ ಗೆಳತಿಯರಾಗಿದ್ದಂತೆ ನನಗೆ ತೋರಲಿಲ್ಲ. ಅವಳ ಮನೆಯ ಬಾಗಲಿನಲ್ಲಿ ನಿಂತುಕೊಳ್ಳಲು ಎಲ್ಲರಿಗೂ ಹೆದರಿಕೆ. ಕಾಳಮ್ಮ ಬಂದಳು ಎಂದರೆ ಮಕ್ಕಳು ಅಳುವುದನ್ನು ನಿಲ್ಲಿಸಿಬಿಡುತ್ತವೆ. ಅವಳ ಹೊಲಕ್ಕಾಗಲಿ ಹಿತ್ತಲಿಗಾಗಲಿ ದನಕರುಗಳನ್ನು ಯಾರಾದರೂ ಬಿಟ್ಟರೆ ದೇವರೇ ಗತಿ. ತನ್ನ ಕೂಗಿನಿಂದಲೇ ಅವರನ್ನು ಕೊಂದುಬಿಡುತ್ತಿದ್ದಳು. ಹುಡುಗರು ತನ್ನ ಹೊಲದಲ್ಲಿ ತಗರಿಕಾಯಿ ಮುಂತಾದುವನ್ನು ಕುಯ್ಯುತ್ತಿದ್ದರೆ ಅವರನ್ನು ಓಡಿಸಿಕೊಂಡು ಹೋಗಿ ಜುಟ್ಟು ಹಿಡಿದುಕೊಂಡು ಗುದ್ದಿ ಒದ್ದು ಅವರು ಪ್ರಾಣವಿರುವವರೆಗೆ ತನ್ನ ಹೊಲದ ಕಡೆ ತಿರುಗಿಕೂಡ ನೋಡದಂತೆ ಮಾಡಿಬಿಡುತ್ತಿದ್ದಳು. ಇದರಿಂದ ಅವಳ ಹತ್ತಿರಕ್ಕೆ ಯಾರೂ ಸುಳಿಯುತ್ತಿರಲಿಲ್ಲ. ಹೆಂಗಸಿನ ಕೋಮಲತೆಯಂತೂ ಅವಳಿಗೆ ಇರಲೇ ಇಲ್ಲ. ನಮ್ಮ ಊರಿನಲ್ಲಿ ಕೆಲವರು ಅವಳನ್ನು “ಶೂರ್ಪಣಖಿ" ಎಂದು ಕರೆಯುತ್ತಿದ್ದರು. ಮತ್ತೆ ಕೆಲವರು "ಲಂಕಿಣಿ, ಪೂತನಿ" ಎನ್ನುತ್ತಿದ್ದರು. ಆದರೆ ಇದೆಲ್ಲಾ ಅವಳ ಹಿಂದುಗಡೆ. ಅವಳ ಎದುರಿಗೆ ಮಾತನಾಡಲು ಯಾವ ಗಂಡಸಿಗೂ ಹೆಂಗಸಿಗೂ ಧೈರ್‍ಯವಿರಲಿಲ್ಲ.

ಕಾಳಿಯ ನೆರೆಮನೆಯೇ ಚಿಕ್ಕನದು. ಚಿಕ್ಕನ ಹೆಂಡತಿ ಕುರೂಪಿ. ಚಿಕ್ಕನಿಗೆ, ಈ ಕತೆಯಲ್ಲಿ ನಡೆದ ವಿಷಯವನ್ನು ಹೇಳುವ ಕಾಲಕ್ಕೆ ಎರಡು ಮಕ್ಕಳಿದ್ದುವು. ಚಿಕ್ಕನಿಗೂ ಕಾಳಮ್ಮನಿಗೂ ನಿತ್ಯ ವಾಗ್ವಾದ ನಡೆಯು ತ್ತಲೇ ಇದ್ದಿತು. ಒಂದು ದಿವಸ ಚಿಕ್ಕನ ಹೆಂಡತಿಯು ಮನೆಯ ಕಸವನ್ನು, ಕಾಳಮ್ಮನ ಮನೆಯ ಮುಂದೆ ಹಾಕಿಬಿಟ್ಟಳು. ಕಾಳಮ್ಮನು ಪದ್ಧತಿಯಂತೆ ಅವಳನ್ನು ಚೆನ್ನಾಗಿ ಬೈದಳು. ಚಿಕ್ಕನ ಹೆಂಡತಿಯೂ ಬೈದಳು. ಕಾಳಮ್ಮನು ಕೋಪದಿಂದ ಅವಳನ್ನು ಹಿಡಿದುಕೊಂಡು ಬೆನ್ನಿನಮೇಲೆ ನಾಲ್ಕು ಗುದ್ದು ಗುದ್ದಿದಳು. ಚಿಕ್ಕನು ಸಮೀಪದಲ್ಲಿದ್ದಿದ್ದರೆ ಬಂದು ಸಹಾಯಮಾಡುತ್ತಿದ್ದನೇನೊ? ಆದರೆ ಅವನು ಹೊಲದ ಕಡೆಗೆ ಹೋಗಿದ್ದುದರಿಂದ ಚಿಕ್ಕನ ಹೆಂಡತಿಯು ನಿರುಪಾಯಳಾಗಿ ತಾನು ಮಾಡಿದ ತಪ್ಪನ್ನು ಒಪ್ಪಿಕೊಂಡು "ದಮ್ಮಯ್ಯ ಹೊಡೀಬೇಡ, ಇನ್ಮೇಲೆ ನಿನ್ನ ಬಾಗಲ್ಗೆ ಕಸಾ ಹಾಕೋದಿಲ್ಲ" ಎಂಬುದಾಗಿ ಬೇಡಿಕೊಂಡಳು.

ಇದು ನಡೆದ ಮೂರು ತಿಂಗಳ ನಂತರ ಚಿಕ್ಕನ ಹೆಂಡತಿಯು ಒಂದು ಹೆಣ್ಣು ಮಗುವನ್ನು ಪ್ರಸವಿಸಿದಳು. ಅದು ಕಪಿಯ ಮರಿಯಂತೆ ಕುರೂಪಿಯಾಗಿದ್ದಿತಲ್ಲದೆ ಅದರ ಒಂದು ಕಣ್ಣೂ ಸ್ವಲ್ಪ ಕುರುಡಾಗಿದ್ದಿತು. ಹೆಣ್ಣನ್ನು ನೋಡುವುದಕ್ಕೆ ಬಂದವರಲ್ಲಿ ಕೆಲವರು “ಹೆಗ್ಗಣದ ಮರಿಯಂತಿದೆ ಕೂಸು" ಎಂದರು. ಇನ್ನು ಕೆಲವರು ಇದು ಹುಟ್ಟದೆ ಹೋಗಿದ್ದರೆ ಏನು ಉಳಿದು, ಹೋಗುತ್ತಿತ್ತೋ" ಎಂದರು.

ಹರೆಯದ ಹುಡುಗಿಯರು ಕೆಲವರು "ಇಂತಹ ಮಗುವಿನ ತಾಯಿ.ಯಾಗುವುದಕ್ಕಿಂತ ಬಂಜೆಯಾಗಿರುವುದೇ ಲೇಸು” ಎಂದರು. ಮತ್ತೊಬ್ಬಳು "ಈಗಲೆ ಇದು ಸತ್ತಾದರೂ ಹೋಗಬಾರದೆ?” ಎಂದಳು.

ಅಷ್ಟುಹೊತ್ತಿಗೆ ಕಾಳಮ್ಮನು ಅಲ್ಲಿಗೆ ಬಂದಳು. ಅವಳ ಕೈಯಲ್ಲಿ ಒಂದು ಚಿಕ್ಕ ಗಂಟಿದ್ದಿತು. ಕಾಳಮ್ಮನು ಬಂದುದನ್ನು ಕಂಡು ಉಳಿದವರು ಗಾಬರಿಯಿಂದ ತಮ್ಮ ಮಾತುಗಳನ್ನು ನಿಲ್ಲಿಸಿದರು. ಕಾಳಮ್ಮನು ತಾನು ತಂದಿದ್ದ ಗಂಟನ್ನು ಬಿಚ್ಚಿದಳು. ಅದರಲ್ಲಿ ಒಂದು ತಿಂಗಳು ಮಗುವಿನ ಅಳತೆಯ ಎರಡು ಜರತಾರಿ ಅಂಗಿಗಳಿದ್ದವು. ಅದೇ ಅಳತೆಯ ಎರಡು ಚಿನ್ನದ ಕೈಬಳೆಗಳಿದ್ದುವು. ಎರಡು ಕಿವಿಯ ಕಡಕು, ಕಾಲುಬಳೆ, ಸರಪಣಿ ಇದ್ದುವು. ಕಾಳಮ್ಮನು ಅವುಗಳನ್ನೆಲ್ಲಾ ತೆಗೆದು ಚಿಕ್ಕನ ಹೆಂಡತಿಯ ಕೈಗೆ ಕೊಟ್ಟು ಮಗುವನ್ನು ಎತ್ತಿ ಮುದ್ದಾಡಿದಳು. ಅವಳ ಕಣ್ಣುಗಳಲ್ಲಿ ಅವಳು ತಡಿಯಬೇಕೆಂದು ಪ್ರಯತ್ನಿಸಿದರೂ ಎರಡು ತೊಟ್ಟು ನೀರು ಬಿದ್ದಿತು. ಅಲ್ಲಿದ್ದವರಿಗೆಲ್ಲಾ ಅದನ್ನು ಕಂಡು ಆಶ್ಚರವಾಯಿತು. "ಕಾಳಿಯು ಮಗುವನ್ನು ಮುದ್ದಾಡುವುದೆಂದರೇನು? ಅದನ್ನು ಕಂಡು ಕಣ್ಣೀರು ಸುರಿಸುವುದೆಂದರೇನು? ಈ ಶೂರ್ಪಣಖಿಗೆ ಈ ಕೋಮಲ ಹೃದಯವೆಲ್ಲಿಂದ ಬಂತು?" ಎಂದುಕೊಂಡರವರು. ಇದು ನಡೆದ ನಾಲ್ಕು ತಿಂಗಳಿಗೆ ಕಾಳಮ್ಮನು ಸ್ವರ್ಗಸ್ಠಳಾದಳು. ಅವಳಿಗೆ ಮಕ್ಕಳಿಲ್ಲದುದರಿಂದ ಯಾರೋ ದೂರದ ನೆಂಟನೊಬ್ಬನು ಹೊಸೂರಿಂದ ಬಂದು ಅವಳ ಆಸ್ತಿಯನ್ನೆಲ್ಲ ವಶಪಡಿಸಿಕೊಂಡನು. ಆಗ ಕಾಳಮ್ಮನ ಮನೆಯಲ್ಲಿ ಅವಳು ಚಿಕ್ಕನ ಹುಡುಗಿಗೆ ಕೊಟ್ಟ ಅಳತೆಯ ೩-೪ ಅಂಗಿಗಳು ದೊರೆತವು. ಕ್ರಮೇಣ ಗೊತ್ತಾಯಿತು. ಕಾಳಿಗೆ ಅನೇಕ ವರ್ಷಗಳ ಕೆಳಗೆ ಕುರೂಪಿಯಾದ ಒಂದು ಹೆಣ್ಣು ಮಗುವು ಹುಟ್ಟಿ ಒಂದು ತಿಂಗಳೊಳಗಾಗಿಯೇ ಸತ್ತುಹೋಯಿತಂತೆ ಎಂದು ಯಾರೋ ಹೇಳಿದರು. ಕಾಳಿಯು ಚಿಕ್ಕನ ಹುಡುಗಿಯ ವಿಷಯದಲ್ಲಿ ತೋರಿಸಿದ ಕರುಣೆಯು, ಒಗಟೆಯಾಗಿದ್ದವರೆಲ್ಲಾ, ಇದನ್ನು ಕೇಳಿ "ಓಹೊ” ಎಂದರು.