ಈ ಪುಟವನ್ನು ಪರಿಶೀಲಿಸಲಾಗಿದೆ

ನನಗೇನು ಕೊಟ್ಟರು

ಕೈಲಾಸದಲ್ಲಿ ಶಿವಪಾರ್ವತಿಯರು ಸಂತೋಷದಿಂದ ಕುಳಿತು ಸರಸವಾಡುತ್ತಿರುವಾಗ, ಪಾರ್ವತಿ ಕೇಳಿದಳು - "ಶ್ರಾವಣತಿಂಗಳು ಮುಗಿದುಹೋಗಿ ಭಾದ್ರಪದ ಆರಂಭವಾಯಿತು. ನಾಳೆ ನನ್ನ ತವರೂರಿಗೆ ಹೋಗಿ ಬರುವೆ."

"ಅಲ್ಲಿ ನಿನ್ನ ಸರಿಯರು ಯಾರಿದ್ದಾರೆ? ಹೊತ್ತು ಹೇಗೆ ಕಳೆಯುವಿ? ಸರಿಯರು ಯಾರು?" ಎಂದನು ಶಿವ.

"ಸರಿಯರೇತಕೆ ಬೇಕು? ಮೂರುದಿನ ಮಾತ್ರ ಅಲ್ಲಿದ್ದು ನಿಮ್ಮ ಸೇವೆಗೆ ಮರಳುವೆ."

ಮೂರುದಿನವೇಕೆ, ಐದು ದಿನ ಇರು, ಏಳುದಿನಗಳವರೆಗೆ ದಾರಿ ಕಾಯುವೆ, ಮತ್ತೇನು? ಆಗ ಸಹ ನೀನು ಬರದಿದ್ದರೆ ಮೀರಿದವಳೆಂದು ಬಗೆದು, ಗಣಪತಿಯೊಡನೆ ಕರೆಯಲು ಬರುವೆನು," ಎನ್ನುವ ಮಾತಿನಲ್ಲಿ ಶಿವನು ಪಾರ್ವತಿಗೆ ಅಪ್ಪಣೆಯಿತ್ತನು, ತವರು ಮನೆಗೆ ಹೋಗಲಿಕ್ಕೆ.

ತಿರಿದುಣ್ಣುವ ಶಿವನಿಗೆ ಮೂರು ಲೋಕಗಳೆಲ್ಲವೂ ಸ್ವಗೃಹಗಳೇ. ಭಸ್ಮಾಂಗಕೆ ಹೊದಿಕೆಯೆಂದರೆ ಆನೆಯ ತೊಗಲು, ಇನ್ನೇನು ಬೇಕು ಉಪಚಾರ ಶಿವನಿಗೆ?

ಪಾರ್ವತಿಯು ತವರಿನಲ್ಲಿ ನಾಲ್ಗೊಪ್ಪತ್ತು ನಿಂತುಕೊಂಡು ಕೈಲಾಸಕ್ಕೆ ಮರಳಿದಳು. ದುಂಡುಮಲ್ಲಿಗೆ ಹೂವಿನ ದಂಡೆ ತಲೆಯಲ್ಲಿ ಬಿತ್ತಿದ ಮುತ್ತು ಬೈತಲೆಯಲ್ಲಿ, ಕುಡಿ ಹುಬ್ಬಿನ ಕಳೆಗೆ ಕಂಗಳಲ್ಲಿ ರಂಭೆಯೇ ಹೊಳೆಯುತ್ತಿರಲು, ನಿಂಬೆಯ ಹಣ್ಣಿನಂಥ ಕಾಂತಿಯನ್ನು ಸೂಸುತ್ತ ಬಂದ ಪಾರ್ವತಿಯನ್ನು ಕಂಡು ಶಿವನು ಕೇಳಿದನು-

"ನಿನ್ನ ತವರಿಗೆ ಹೋಗಿ ಬಂದೆಯೊ? ತವರಿನವರು ಈಗೇನು ಕೊಟ್ಟರು, ಇನ್ನೇನು ಕೊಡುವರು? ಬೇಗ ಹೇಳು."

"ತಂದೆ ಗಿರಿರಾಯ ಕಡುಬಡವ, ಮುದುಕ ಬೇರೆ. ಏನು ಕೊಟ್ಟಾನು? ಬರಿಗೈಯಲ್ಲಿ ಕಳಿಸಬಾರದೆಂದು ಕೊಪ್ಪರಿಗೆ ಹಣ, ಎಪ್ಪತ್ತು ಆನೆ ಕುದುರೆ ಕೊಟ್ಟನು. ಜತನವಾಗಿರಿಸಿಕೋ ಎಂದು ಬಂಗಾರದ ಕೊಡ ಕೊಟ್ಟನು. ನಮ್ಮವರು ಬಡವರು ಇನ್ನೇನು ಕೊಡುವರು? ಆರು ಹೇರು ಸಣ್ಣಕ್ಕಿ, ಆರು ಹೇರು