ಈ ಪುಟವನ್ನು ಪ್ರಕಟಿಸಲಾಗಿದೆ

ಯಕ್ಷಗಾನ -ಬಯಲಾಟ

ಬಯಲಾಟ ಹಾಗೂ ದಶಾವತಾರವೆಂದು ಕರೆಯಲ್ಪಡುವ ಯಕ್ಷಗಾನ ಪ್ರಯೋಗವು ನಮ್ಮ ದಕ್ಷಿಣ ದೇಶದ ಆಂಧ್ರ, ಕರ್ನಾಟಕ, ತಮಿಳುನಾಡು ಈ ಮೂರು ರಾಜ್ಯಗಳ ವಿಸ್ತಾರದಲ್ಲಿ ಬಹುಕಾಲದಿಂದ ತಾಂಡವವಾಡುತ್ತಿದ್ದರೂ ಇದರ ಪೂರ್ವೋತ್ತರದ ಕುರಿತು ವಿದ್ವಾಂಸರು ಸಂಶೋಧನೆಗೆ ಕೈಹಚ್ಚಿರುವುದು ಕಳೆದ ಐವತ್ತು ವರ್ಷಗಳಿಂದೀಚೆ, ಅಂದಿನಿಂದ, ಯಕ್ಷಗಾನವೆಂಬ ಹೆಸರು ಯಾವುದರಿಂದ ಬಂತು? ಇದು ಶಾಸ್ತ್ರೀಯ ಸಂಪ್ರದಾಯವೋ ಅಥವಾ ಜಾನಪದವೋ? ಮೂಲವೆಲ್ಲಿ? ಹುಟ್ಟಿದ್ದೆಂದು? ಎಂಬ ಜಿಜ್ಞಾಸೆಗಳು ಉಂಟಾಗಿವೆ. ಬಯಲಾಟಕ್ಕೆ ಸದೃಶವಾದುದೇ ದಕ್ಷಿಣದ ನಾಲ್ಕನೇ ರಾಜ್ಯವಾದ ಕೇರಳದ ಕಥಕಳಿ ಎಂಬುದು. ಅದು ಮೂಕಾಭಿನಯ ಮತ್ತು ವಿಶೇಷವಾದ ಹಸ್ತಮುದ್ರೆಗಳ 'ಚಿತ್ರಾಭಿನಯ'ವುಳ್ಳುದು ಎಂಬುದಷ್ಟೆ ಬಯಲಾಟಕ್ಕೂ ಅದಕ್ಕೂ ಹೇಳುವಂತಹ ವ್ಯತ್ಯಾಸವಿರುವುದು. ಆದರೆ, ಹಿಂದಕ್ಕೆ ಈ ವಿಶೇಷತೆಗಳು ಅದರಲ್ಲಿದ್ದಿಲ್ಲ ವೆಂದೂ, ಬಯಲಾಟಗಳಲ್ಲಿ ಈಗಲೂ ಕೆಲವೆಡೆ ರೂಢಿ ಇರುವಂತೆ ಭಾಗವತರೊಂದಿಗೆ ಪಾತ್ರಗಳೂ ಹಾಡುವ ಸಂಪ್ರದಾಯವಿದ್ದಿತ್ತೆಂದೂ ಆಗ ಹಸ್ತಮುದ್ರೆಗಳ ಅಭಿನಯವು ಇದ್ದಿರಲಿಲ್ಲವೆಂದೂ ತಜ್ಞರ ಸಂಶೋಧನೆಗಳಿಂದ ತಿಳಿದುಬಂದಿದೆ. ಆದರೆ ಅದರ ಹಾಡುಗಾರಿಕೆಯೂ ನಾಟ್ಯವೂ ಮೊದಲಿಂದಲೂ ಹೆಚ್ಚಿನ ಮಟ್ಟಿಗೆ ಶಾಸ್ತ್ರೀಯವಾದು ದೆನ್ನುತ್ತಾರೆ.

ಯಕ್ಷಗಾನವಾದರೆ, ಕೆಲವು ಕಡೆ ಶಾಸ್ತ್ರೀಯವಾದ ಸಂಗೀತ ನಾಟ್ಯಗಳಿಂದ ಪ್ರಯೋಗಿಸಲ್ಪಡುವುದು, ಕೆಲವು ಕಡೆ ಸಂಗೀತ ನಾಟ್ಯಗಳಲ್ಲಿ ಶಾಸ್ತ್ರೀಯ ಅಭ್ಯಾಸ ವಿಲ್ಲದವರಿಂದ ಜಾನಪದವೆಂಬ ಹಾಗೆ ಆಡಲ್ಪಡುವುದು, ಹೀಗೆ ಎರಡು ವಿಧದಲ್ಲಿ ನಡೆದು ಬಂದಿದೆ. ಅಶಾಸ್ತ್ರೀಯ ಪ್ರಯೋಗದಲ್ಲಾದರೂ, ಸಾಂಪ್ರದಾಯಿಕವಾದ ಕೆಲವೊಂದು ಶಾಸ್ತ್ರೀಯ ಆನುವಂಶಿಕವನ್ನು ಲಕ್ಷಿಸಬಹುದು. ಮುಖ್ಯವಾಗಿ, ಪಾತ್ರಗಳು ತೆರೆ ಹಿಡಿದು ರಂಗಸ್ಥಳ ಪ್ರವೇಶ ಮಾಡುವುದು, ಇದು ಯಾವ ಜಾನಪದ ಸಂಪ್ರದಾಯ ದಲ್ಲೂ ಇರುವಂತಹದಲ್ಲ. ಕಥಾರಂಭಕ್ಕೆ ಮೊದಲು ನಡೆಯುವ ಸಭಾಲಕ್ಷಣವೆಂಬ ನಾಂದೀ ವಿಧಿ; ಅಲ್ಲಿ ಶಾಸ್ರೋಕ್ತ ಲಕ್ಷಣ ಶ್ಲೋಕಗಳ ಸಮೇತ ವಿಸ್ತರಿಸಲ್ಪಡುವ ನಾಟ್ಯಲಕ್ಷಣ, ಗಾಯಕ ಲಕ್ಷಣ, ವಾದ್ಯವಾದಕ ನಟ ವಿದೂಷಕ ತಾಳಮೇಳ ಇತ್ಯಾದಿ ಲಕ್ಷಣಗಳು, ಮುಖಕ್ಕೆ ಬಣ್ಣ ಹಾಕುವ ಕ್ರಮ, ವೇಷ ರಚನೆ, ಕಿರೀಟ, ಕಡಗ, ಕಂಕಣ, ಎದೆಹಾರ, ಭುಜಕೀರ್ತಿ ಇತ್ಯಾದಿ ಆಭರಣ ವಿಶೇಷಗಳೂ ಜಾನಪದ ಸಂಪ್ರದಾಯ ದಲ್ಲಿಯೂ ಇದ್ದಂತೆ ತಿಳಿಯುವುದಿಲ್ಲ. ಅಲ್ಲದೆ ಕುಣಿತದಲ್ಲಿಯೂ, ದೊಡ್ಡಲಾಗ, ಅಂತರಲಾಗ, ಅಡಂತರ ಲಾಗ, ಒರ್ಮೈಲಾಗ , ಮಂಡಿ, ಬೀಸು, ತಿರುಸು ಎಂದು ಕರೆಯಲಾಗುವ ಹಾರಾಟ ಸುತ್ತಾಟಗಳು, ಶಾಸ್ತ್ರಗ್ರಂಥಗಳಲ್ಲಿ ಕಾಣುವ ' ಉತ್ಪ್ಲು ತೀಕರಣ ' ಮತ್ತು 'ಭ್ರಮರೀ' ಎಂಬ ದೇಶೀ ನೃತ್ಯಭೇದಗಳಾಗಿರುತ್ತವೆ. ಈ 'ಲಾಗ ವೃತ್ತ'ಗಳನ್ನು ಕೇರಳದ ಕಥಕಳಿಯಲ್ಲೂ ಕಾಣಬಹುದು.

ಬಯಲಾಟದ ಶಾಸ್ತ್ರೀಯತೆಯನ್ನು ಲಕ್ಷಿಸಿದ ಮದ್ರಾಸಿನ ವಿ.ರಾಘುವನ ಅವರಂತಹ ಶಾಸ್ತ್ರಪರಿಣತರು, ಕಥಕಳಿಯಂತೆ ಇದೂ ಸಂಸ್ಕೃತ ರೂಪಕ ಉಪರೂಪಕಗ