ಶಿವನು ಅಂಧಕಾಸುರನನ್ನು ಕೊಂದು ಅವನ ಎದೆಯ ಮೇಲೆ ತಾಂಡವ ನಾಟ್ಯ ಆಡಿದನೆಂದು 'ಸಭಾಲಕ್ಷಣ'ದಲ್ಲಿ ಬರುವ ಕೋಡಂಗಿಗಳ ಮಾತು ಇಲ್ಲಿ ಧ್ವನಿತವಾಗಿದೆ. 'ಮೂಡಣ ರಂಗಸ್ಥಳ' ಎಂಬ ಪದಪ್ರಯೋಗದಲ್ಲಿ 'ಪೂರ್ವರಂಗ' ಎಂಬ ಅರ್ಥವೂ ಧ್ವನಿತವಾಗುವುದೆಂದೆಣಿಸಬಹುದು.
ಭರತಮುನಿಯ ನಾಟ್ಯಶಾಸ್ತ್ರದ ಮೊದಲನೆ ಅಧ್ಯಾಯ (ಅದಕ್ಕೆ ನಾಟ್ಯತ್ಪತ್ತಿ
ಕಥಾ ಎಂದೇ ಕರೆಯಲಾಗಿದೆ.)-ದಲ್ಲಿ ಹೇಳುವ ಪ್ರಕಾರ ನಮ್ಮ ಭರತಖಂಡ ಅಥವಾ
ಭಾರತ ವರ್ಷದಲ್ಲಿ ನಾಟ್ಯ ಪ್ರಯೋಗವೆಂಬುದು (ಕ್ರೀಡನೀಯಕ), ದೇವತೆಗಳು ದಾನವ
ರೊಡನೆ ಯುದ್ಧ ಮಾಡಿ ಅವರನ್ನು ಜಯಿಸಿದ ವೇದೋಕ್ತ ಇತಿಹಾಸಗಳನ್ನು, ವೇದಾಧಿ
ಕಾರವಿಲ್ಲದ ಹಾಗೂ ಆ ವೇದಾರ್ಥಗಳನ್ನು ತಿಳಿಯಲು ಆಸಕ್ತರಾದ, ಅನಕ್ಷರಸ್ಥರಾದ ಆ
ಕಾಲದ ಶೂದ್ರಾದಿ ಜನಸಾಮಾನ್ಯರಿಗೆ ಪ್ರತ್ಯಕ್ಷ ಆಡಿ ತೋರಿಸಿ ತಿಳಿಸುವುದೇ ಆಗಿದ್ದಿತು.
ಇಂದ್ರ, ವಿಷ್ಣು, ರುದ್ರ, ವರುಣ, ಕಾರ್ತಿಕೇಯ ಮುಂತಾದ ವೇದೋಕ್ತ ದೇವರುಗಳು
ಶೌರ್ಯ, ಸಾಹಸ, ಪರಾಕ್ರಮಗಳನ್ನು ಪ್ರತ್ಯಕ್ಷ ತೋರ್ಪಡಿಸಿ, ಆ ದೇವತೆಗಳಲ್ಲಿ ಭಯ,
ಭಕ್ತಿ, ಶ್ರದ್ಧೆಗಳನ್ನು ಹುಟ್ಟಿಸಿ, ಅವರ ಅನುಗ್ರಹದಿಂದ ಲೋಕಕಂಟಕರಾಗಿದ್ದ, ವೇದ
ದ್ರೋಹಿಗಳಾದ ದುಷ್ಟ ದೈತ್ಯದಾನವದಸ್ಸುಗಳನ್ನು ಎದುರಿಸಿ, ವಿಗ್ರಹದಲ್ಲಿ ಸಂಹರಿಸಿ
ವೈದಿಕ ಧರ್ಮವನ್ನು ಪ್ರಸಾರಪಡಿಸುವುದೇ ನಾಟ್ಯತ್ಪತ್ತಿಯ ಮೂಲಧೈಯ
ವಾಗಿತ್ತೆಂಬುದು ನಾಟ್ಯಶಾಸ್ತ್ರ ಅ. ೧ರಲ್ಲಿ ಸ್ಪಷ್ಟ ಹೇಳಲಾಗಿದೆ. ಭರತಮುನಿಯು
ಮೊತ್ತಮೊದಲು ಪ್ರಯೋಗಕ್ಕೆ ತಂದಿರುವುದಾಗಿ ನಾಟ್ಯಶಾಸ್ತ್ರದಲ್ಲಿ ವರ್ಣಿಸಲ್ಪಟ್ಟಿರುವ
ಪ್ರಯೋಗಗಳಿಂದಲೇ ಈ ಅಂಶ ವ್ಯಕ್ತವಾಗುವುದು ಕೂಡ ಮೊತ್ತಮೊದಲಿನ
'ಕ್ರೀಡನೀಯಕ' (ಆಟ)ವು 'ಧ್ವಜಮಹ' ಎಂಬ ಇಂದ್ರ ವಿಜಯೋತ್ಸವದ ಜಾತ್ರೆಯಲ್ಲಿ
ಪ್ರದರ್ಶಿಸಲ್ಪಟ್ಟಿತ್ತು. ಇಂದ್ರಾದಿ ದೇವತೆಗಳಿಗೂ, ಅಸುರರಿಗೂ ನಡೆದ ಯುದ್ಧದ
ಪ್ರಸಂಗವೇ ಅದರ ಕಥಾವಸ್ತು. ಆ ಲಕ್ಷಣ ಶ್ಲೋಕಗಳು ಹೀಗೆ ಇವೆ :
ಪ್ರಹೃಷ್ಟಾಮರಸಂಕೀರ್ಣೇ ಮಹೇಂದ್ರವಿಜಯೋತ್ಸವೇ |
ಪೂರ್ವ೦ ಕೃತಾ ಮಯಾ ನಾಂದೀ ಆಶೀರ್ವಚನ ಸಂಯುತಾ ||
ಅಷ್ಟಾಂಗಪದಸಂಯುಕ್ತಾ ವಿಚಿತ್ರಾ ವೇದಸಮ್ಮತಾ |
ತದಂತೇನುಕೃತಿರ್ಬದ್ದಾ ಯಥಾ ದೈತ್ಯಾ ಸುರೈ ರ್ಜಿತಾಃ |
ಸಂಘಟ ವಿದ್ರವಕೃತಾ ಛೇದ್ಯಭೇದ್ಯಾಹವಾತ್ಮಿಕಾ ||
ಎರಡನೆಯದಾಗಿ ನಡೆದ ಪ್ರಯೋಗವು ಅಮೃತಮಂಥನವೆಂಬ ಸಮವಕಾರ, ಇದು ಆರಂಭದಲ್ಲಿ ದೈತ್ಯದಾನವರೂ, ದೇವತೆಗಳೂ ಒಂದಾಗಿ ಮಾಡಿದ ಸಾಹಸವಾಗಿದ್ದರೂ, ಕೊನೆಯಲ್ಲಿ ಮಹಾವಿರೋಧದಿಂದ ಮಹೇಂದ್ರಜಾಲ ಬಹುಳವಾಗಿ ಯುದ್ಧ ನಿಯುದ್ಧ ನಿಗ್ರಹದಲ್ಲಿ ಪರವಸಾನಗೊಂಡದ್ದಲ್ಲದೆ ದೈತ್ಯದಾನವರುಗಳಿಗೆ ವಿಷ್ಣು ಮತ್ತು ಇಂದ್ರಾದಿ ದೇವತೆಗಳೊಡನೆ ಬದ್ಧ ವೈರಕ್ಕೆ ಕಾರಣವಾಗಿ ನಿಂತದ್ದೆಂಬುದು ಪುರಾಣ ಇತಿಹಾಸಗಳನ್ನು ಬಲ್ಲವರಿಗೆ ಗೊತ್ತೇ ಇದೆ.
ಮೂರನೇ ಪ್ರಯೋಗವು 'ತ್ರಿಪುರದಹನ' ಪ್ರಸಂಗ ಇದೂ ಕೂಡ ಅತ್ಯಂತ ಘೋರವಾದ ಯುದ್ಧ, ಮಹೋತ್ಪಾತ, ಭಯಂಕರ ವಿದ್ರವಗಳಿಂದ ಕೂಡಿದ್ದೆಂಬುದನ್ನು ಬೇರೆ ಹೇಳಬೇಕಾಗಿಲ್ಲ. ನಾಟ್ಯಶಾಸ್ತ್ರದಲ್ಲಿ ಆ ಶ್ಲೋಕಗಳು ಹೀಗಿವೆ :