ಈ ಪುಟವನ್ನು ಪ್ರಕಟಿಸಲಾಗಿದೆ
ಹಾಸ್ಯ ಮತ್ತು ಔಚಿತ್ಯ

ಯಕ್ಷಗಾನದ ಎಲ್ಲ ರಂಗಗಳಲ್ಲೂ ಔಚಿತ್ಯಭಂಗವು ಸರ್ವಸಾಮಾನ್ಯವೆನ್ನ ಬಹುದಾದಷ್ಟು ವಿಪುಲವಾಗಿದೆ. ನಿಜ. ಆದರೆ ತುಲನಾತ್ಮಕವಾಗಿ ಯಕ್ಷಗಾನದ ಹಾಸ್ಯ ಔಚಿತ್ಯದ ಮೇರೆಯನ್ನು ಮೀರುವಷ್ಟು ಸಲೀಸಾಗಿ ಉಳಿದ ಅಂಶಗಳು ಮೀರಿಲ್ಲ ಎನ್ನಬೇಕು. ಯಕ್ಷಗಾನದ ಹಾಸ್ಯಗಾರ ಯಾವಾಗ ಬಂದರೂ, ಯಾವ ಪಾತ್ರದಲ್ಲಿದ್ದರೂ, ಏನು ಬೇಕಾದರೂ ಮಾತನಾಡಬಹುದು ಅನ್ನುವ ನಂಬಿಕೆ ಯಕ್ಷಗಾನದಲ್ಲಿ ರೂಢಮೂಲವಾದಂತೆ ಕಾಣಿಸುತ್ತದೆ. ಹಾಸ್ಯದ ಕಾರಣದಿಂದ ರಸಭಂಗವಾಗುವುದು, ಸನ್ನಿವೇಶದ ಗಾಂಭೀರ್ಯ ಕೆಟ್ಟು, ಕಥೆಗೆ ಅದರ ನಾಟಕ ಧರ್ಮಕ್ಕೆ ಅನ್ಯಾಯವಾಗುವುದು, ಯಕ್ಷಗಾನ-ಪ್ರೇಕ್ಷಕರ ಅನುಭವಕ್ಕೆ ಬಾರದಿರದು. ಇದು, 'ಹಾಸ್ಯ ಪಾತ್ರಗಳ' ಅಭಿನಯ, ವೇಷಭೂಷಣ, ಹಾಗೂ ಮಾತುಗಾರಿಕೆ ಈ ಮೂರಕ್ಕೂ ಅನ್ವಯಿಸುತ್ತದೆ.
ಸ್ವರ್ಗಲೋಕದ ದ್ವಾರದ 'ದೇವದೂತ' ದೇವೇಂದ್ರನೊಡನೆ ಅಸಂಬದ್ಧ ವಾಗಿ ಹರಟುವುದು; ಋಷಿಮುನಿಗಳು, ಬ್ರಾಹ್ಮಣರು, ಮಂತ್ರಿಗಳು ಬುದ್ಧಿ ಸ್ವಾಧೀನ ಇಲ್ಲದವರಂತೆ ಹಲುಬುವುದು - ಮುಂತಾದ ವಾಕರಿಕೆ ತರಿಸುವಂತಹ ಹಲವಾರು ದೃಶ್ಯಗಳನ್ನು ನಾವು 'ಆಟ'ಗಳಲ್ಲಿ 'ಹಾಸ್ಯ'ವೆಂಬ ಹೆಸರಲ್ಲಿ ನೋಡುತ್ತೇವೆ. ಇದು ಹಾಸ್ಯವೆ? ಹಾಸ್ಯಾಸ್ಪದವೇ? ಎಂಬುದನ್ನು ಪ್ರೇಕ್ಷಕರು ಹಾಗೂ ಕಲಾವಿದರು ಅವಶ್ಯ ಯೋಚಿಸಬೇಕಾಗಿದೆ. ಪ್ರಬುದ್ಧರೆನ್ನಬಹುದಾದ ಪ್ರೇಕ್ಷಕರೂ, ನಟರ 'ಹಾಸ್ಯದ ಮೆಚ್ಚಿಗೆ' ಎಂಬ ಕಾರಣದಿಂದ ಇಂತಹ ಅಸಂಬದ್ಧತೆಗಳನ್ನು 'ಕ್ಷಮಿಸು ವುದೂ ಕಂಡುಬರುತ್ತದೆ.
ಹಾಸ್ಯಕ್ಕೆ ಔಚಿತ್ಯದ ಸೀಮೆಯನ್ನು ಕಂಡುಕೊಳ್ಳುವುದು ಕಷ್ಟ. ಹಾಸ್ಯ ದಲ್ಲಿ ಶುದ್ಧತೆ ಹಾಗೂ ಉನ್ನತ ಮಟ್ಟವನ್ನು ಕಾಯ್ದುಕೊಂಡು, ಹಾಸ್ಯದ ಗುಣಿ ವನ್ನೂ ಉಳಿಸಿ, ಅಭಿವ್ಯಕ್ತಿಸಬೇಕಾದರೆ ವಿಶಿಷ್ಟ ರೀತಿಯ ಪ್ರತಿಭೆ ಮತ್ತು ಎಚ್ಚರಿಕೆ ಬೇಕಾಗುತ್ತದೆ.