ಈ ಪುಟವನ್ನು ಪರಿಶೀಲಿಸಲಾಗಿಲ್ಲ.
೧೦೨ ನೋವು ಶ್ರೀನಿವಾಸಯ್ಯ ಮಗನನ್ನು ಕೇಳಿದರು : "ಯಾಕಂತೆ ಶಾಮಣ್ಣ ಬರಹೇಳಿದ್ದು ?” ಗೋವಿಂದ ತಾತ್ಸಾರದಿಂದ ಅಂದ ; " ಅದೇ ಆ ಮುನಿಯನ ವಿಷಯ, ఆణయ్య..." " ಏನದು ?"
- ಕೊಲೆಗಡಕ ಬಂದಿದಾನೆ. ಅವನಿಗೆ ಪಟೇಲರು ರಕ್ಷಣೆ ಕೊಡಬೇಕೂಂತಿದಾರೆ.
-ಅದಕ್ಕೆ ನನ್ನ ಸಹಾಯಬೇಕಂತೆ."
ಶ್ರೀನಿವಾಸಯ್ಯನವರ ಹುಬ್ಬುಗಳು ಗಂಟಿಕ್ಕಿದುವು. ಅವರು ಧ್ವನಿ ಏರಿಸಿ ಅಂದರು :
" ಹಾಗಂದರೇನು ಗೋವಿಂದ ?" " ಅಬ್ದುಲ್ಲ ಅಣ್ಣಯ್ಯ. ಬಂದಿದಾನೆ. ಮುನಿಯನೆನ್ನೆ ಕತ್ತು ಹಿಸುಕಿ ಕೊಂದದ್ದು ಅವನೇ. ಈಗ ಕ್ಷಮೆ ಕೇಳ್ತಿದಾನೆ. ಹೊಲ ನಿಂಗಿಗೆ ಬಿಟ್ಕೊಡ್ತೀನಿ ಅಂತಾನೆ. ರಾಜೀಪತ್ರ ತಗೊಂಡು ನಗರಕ್ಕೆ ಹೋಗಿ ಕೋರ್ಟಿಂದ ಆ ಮೊಕದ್ದಮೇನೆ ನಾನು ತೆಗೆಸಿ ಹಾಕ್ಬೇಕಂತೆ."
ಮಗನ ಸ್ವರ ಏರಿದುದು ಕೇಳಿಸಿದೊಡನೆ ದೊಡ್ಡಮ್ಮ ಪಡಸಾಲೆಯ ಒಳಬಾಗಿಲಿಗೆ ಬಂದಿದ್ದರು. ಮೊಮ್ಮಗ ಹೇಳಿದುದೆಲ್ಲ ಅವರ ಕಿವಿಗೆ ಬಿತ್ತು. ಗೋವಿಂದನ ಮಾತಿಗೆ ಉತ್ತರ ನೀಡಲು ಶ್ರೀನಿವಾಸಯ್ಯನೂ ಏನೆನ್ನೋ ಹೇಳಲು ದೊಡ್ಡಮ್ಮನೊ ಏಕಕಾಲದಲ್ಲಿಯೇ ಬಾಯಿ ತೆರೆದರು. ತಾಯಿಯ ಧ್ವನಿ ಕೇಳಿಸಿದೊಡನೆ, ಆ ಕಡೆಗೊಮ್ಮೆ ತಿರುಗಿ ಶ್ರೀನಿವಾಸಯ್ಯ ಸುಮ್ಮನಾದರು. ದೊಡ್ಡಮ್ಮ ದೃಢವಾದ ಸ್ವರದಲ್ಲಿ ಪದಗಳನ್ನು ಬಿಡಿ ಬಿಡಿಯಾಗಿ ಆಡುತ್ತ ಅಂದರು : "ಸಾರಾಸಾರ ವಿವೇಚನೆ ಇಲ್ದೆ ಹೀಗೆಲ್ಲ ಮಾತಾಡಬಾರ್ದು, ಗೋವಿಂದ. ದೆವ್ವ ಬಡಿದು ಮುನಿಯ ಸತ್ತ ಅಂತ ಹಳ್ಳಿಯ ಜನ ತಿಳಕೊಂಡಿದಾರೆ. ಅದಕ್ಕೆ ವ್ಯತಿರಿಕ್ತವಾಗಿ ನೀನು ಏನೂ ಹೇಳ್ಬಾರ್ದು, ತಿಳೀತೇ?" ಗೋವಿಂದ ಅಧೀರನಾಗದೆ ವ್ಯಂಗ್ಯ ಬೆರೆತ ಸ್ವರದಲ್ಲಿ ಅಂದ : "ಆಗಲಿ ದೊಡ್ಡಮ್ಮ. ಹಳ್ಳಿಗೆ ಪಟೇಲರು ದೊಡ್ಡವರು. ಅವರ ಮಾತು ಮಿಾರೋ ಕಾಗುತ್ತಾ?" ಶ್ರೀನಿವಾಸಯ್ಯ ಸಿಟ್ಟಾಗಿ ಅಂದರು : "ಬುದ್ಧಿ ಇಲ್ವೇನೋ ನಿಂಗೆ?" ದೊಡ್ಡಮ್ಮನೆಂದರು: "ಶಾಮಣ್ಣನ ವಿಷಯದಲ್ಲಿ ನೀನು ಹೀಗೆಲ್ಲ ಹೇಳಬಾರ್ದು, ಗೋವಿಂದಾ. ಅಬ್ದುಲ್ಲಾ
ಪಾಪ ಕಾರ್ಯ ಮಾಡಿದ್ರೆ ದೇವರು ನೋಡ್ಕೋತಾನೆ. ಶಾಮಣ್ಣ ಹೇಳಿದ ಕೆಲಸ-ಆ ರಾಜೀಪತ್ರದ್ದು–ಮಾಡ್ಕೊಂಡ್ಬಾ. ಬೇಕಾದರೆ ಇವತ್ತೇ ಹೋಗು." ಗೋವಿಂದ ನಿಟ್ಟುಸಿರುಬಿಟ್ಟ. " ಮಾಡ್ಕೊಂಡ್ಬರೋಣ, ಅದಕ್ಕೇನು ? ಆದರೆ ಈಗಲೇ ಹೋಗ್ಬೇಕಾದ ಅಗತ್ಯವಿಲ್ಲ.
ನಾಳೆ ಬೆಳಗ್ಗೆ ಗಜಾನನ ಜತೆ ಹೊರಡ್ತೀನಿ."
" ಹಾಗೇ ಮಾಡು, ಹಾಗೇ ಮಾಡು," ಎಂದರು ದೊಡ್ಡಮ್ಮ.