ಈ ಪುಟವನ್ನು ಪರಿಶೀಲಿಸಲಾಗಿಲ್ಲ.
೧೪೨ ನೋವು
"ಸರಿ, ಮತ್ತೆ." "ನೀವು ಯಾವಾಗ ಬರ್ತೀರಿ ?" "ಬರ್ತೀನಿ, ಒಂದು ವಾರವೋ ಹತ್ತು ದಿವಸವೋ ಬಿಟ್ಕೊಂಡು, ಬೇಕಾದರೆ ವಿಷ್ಣು ಮೂರ್ತಿಗಳನ್ನ ಕರಕೊಂಡು ಮೋಹನರಾಯರಲ್ಲಿಗೆ ನೀನೊಮ್ಮೆ ಹೋಗಿ ಬಾ. ಬೇಡ. ನಾನು ಅಲ್ಲಿಗೆ ಬಂದ್ಮೇಲೆ ನನ್ನ ಜತೇಲೇ ನೋಡುವಿಯಂತೆ." "ಆಗಲಿ, ಅಣ್ಣಯ್ಯ." "ಸరి, ಟ್ರಂಕಿಗೆ ತುಂಬಿಸು." ಶ್ರೀಪಾದ ಅಂಬೆಗಾಲಿಡುತ್ತ, "ಅಮ್ಮಮ್ಮಮ್ಮ-ತಾತಾತಾ,"–ಎನ್ನುತ್ತ ಅಲ್ಲಿಗೆ ಬಂದ. "ಒಳಗ್ಹೋಗ್ಬೇಡ,ಮರಿ, ಪುಸ್ತಕ ಹರೀಬಾರ್ದು. ದೊಡ್ಡೋನಾದ್ಮೇಲೆ ನೀನೂ ಓದೀ," ಎನ್ನುತ್ತ ಶ್ರೀನಿವಾಸಯ್ಯ ಮೊಮ್ಮಗನನ್ನು ಎತ್ತಿಕೊಂಡರು. ಪದ್ಮ ಮಾತಿಲ್ಲದೆ ಮತ್ತೆ ಟ್ರಂಕಿನೆದುರು ಕುಳಿತ. ...ಬಿಸಿಲು ಬಾಡುತ್ತಲೆ ಪದ್ಮನಾಭ ಮುಖ ತೊಳೆದುಕೊಂಡು, ಶುಭ್ರವಾದ ಉಡುಪು ತೊಟ್ಟು, ಕ್ರಾಪು ಬಾಚಿ, ಅಜ್ಜಿಯ ಬಳಿಗೆ ಹೋಗಿ, "ಗುಡಿಗೆ ಹೋಗ್ಬರ್ತೀನಿ,ದೊಡ್ಡಮ್ಮ," ಎಂದ. "ಹೂಂ. ಕತ್ತಲಾಗೋದರೊಳಗೆ ಮನೆಗ್ಬಂದ್ಬಿಡು. ದಿಬದ ಹೊಂಡದ ಕಡೆಗೆ ಹೋಗ್ಬೇಡ," ಎಂದರು ಆಕೆ. "ಹ್ಞ, ಹ್ಞ," ಎಂದ ಪದ್ಮನಾಭ. ...ಪದ್ಮ ದಿಬ್ಬವನ್ನೇರತೊಡಗಿದ ಸಲ್ಪ ಹೊತ್ತಿನಲ್ಲೆ ಗೋವಿಂದ ನಗರದಿಂದ ವಾಪಸಾದ. ಮಗನನ್ನು ನೋಡಿ ಶ್ರೀನಿವಾಸಯ್ಯ ಕೇಳಿದರು : "ಆಗ್ಹೋಯ್ತೆ ಶಾಮಣ್ಣನ ಕೆಲಸ ?” ಗೋವಿಂದನೆಂದ: "ಹ್ಞು. ನಗರದ ವ್ಯವಹಾರಗಳೇ ಹೀಗೆ. ಆದ್ರೆ ಒಂದು ನಿಮಿಷದಲ್ಲಿ ಕೆಲಸವಾಗುತ್ತೆ. ಕೆಟ್ಟ ಘಳಿಗೇಲಿ ಶುರು ಮಾಡಿತೋ ಒಂದು ತಿಂಗಳಾದರೂ ಆಗೋದಿಲ್ಲ. ಗಣೇಶ ಭವನದಿಂದ ಮುನಿಯನ ವಕೀಲರಿಗೆ ಫೋನ್ ಮಾಡ್ದೆ. ಅವರಿದ್ರು. ಬಾ ಅಂದ್ರು. ಕೋರ್ಟಿಗೆ ಹೋದ್ವಿ. ರಾಜೀಪತ್ರಾನ ಮ್ಯಾಜಿಸ್ಟ್ರೇಟರ ಮುಂದೆ ದಾಖಲ್ಮಾಡಿದ್ವಿ. ಆಗ್ಹೋಯ್ತು ಕೆಲಸ." "ಅಬ್ದುಲ್ಲನ ಮೇಲೆ ಇನ್ನೇನೂ ಇರೋದಿಲ್ಲ ತಾನೆ ?” "ಸೆಟ್ಲಾಗ್ಹೋಯ್ತಲ್ಲ, ಅಣ್ಣಯ್ಯ. ಪಟೇಲ್ ಶಾಮೇಗೌಡ್ರು ಗೆದ್ರು." "ಹಾಗಂದ್ರೇನೋ ಗೋವಿಂದ ? ಹಳ್ಳಿಯಲ್ಲಿ ಶಾಂತಿ ಒಗ್ಗಟ್ಟು ಶಾಮಣ್ಣನಿಗೂ ಬೇಕು, ನಮಗೂ ಬೇಕು- ಅಲ್ವೇನೋ ?" "ಬೇಡ ಅಂದ್ನೆ ನಾನು ?” ಗೋವಿಂದನ ಧ್ವನಿ ಕೇಳಿ ದೊಡ್ಡಮ್ಮ ಪಡಸಾಲೆಗೆ ಬಂದರು.ಶ್ರೀಪಾದನನ್ನೆತ್ತಿಕೊಂಡು ಭಾಗೀರಥಿಯೂ ಅತ್ತ ಬಂದಳು, ತನ್ನ ಕೋಣೆಗೆ ಹೊರಟವಳಂತೆ ನಟಿಸುತ್ತ. "ಅದೇನು ಕಟ್ಟು?” ಎಂದು ಕೇಳಿದರು ದೊಡ್ಡಮ್ಮ,ಗೋವಿಂದ ತಂದಿದ್ದ ಪೊಟ್ಟಣದತ್ತ ಬೊಟ್ಟುಮಾಡಿ.