ಈ ಪುಟವನ್ನು ಪರಿಶೀಲಿಸಲಾಗಿಲ್ಲ.
೫೧ ನೋವು
ನೇರವಾಗಿ ಹೆಜ್ಜೆ ಇಟ್ಟು ಪದ್ಮನಾಭನೆ ಕುರ್ಚಿ ಮೇಜುಗಳಿದ್ದಲ್ಲಿಗೆ ಅವರು ಬಂದರು. ಅವರು ನಿರೀಕ್ಷಿಸಿದ್ದಂತೆಯೇ ಪದ್ಮ ಒರಗಿ ಕುಳಿತಿದ್ದ. ಅಂಗೈಗೆ ಆನಿಸಿದ ತಲೆ. ಮೊಮ್ಮಗನ ಕ್ರಾಪನ್ನು ನೇವರಿಸಿ ದೊಡ್ಡಮ್ಮ ಅಂದರು: "ಪದ್ಮ, ಊಟಕ್ಕೇಳು ಮಗೂ." ಆ ಬೆಳಗ್ಗೆ ಪದ್ಮನಾಭ ಕಾಫಿ ತಿಂಡಿ ಮುಟ್ಟಿರಲಿಲ್ಲ. ಊಟ ಮಾಡಿರಲಿಲ್ಲ. ಅಜ್ಜಿ ಒಂದು ಲೋಟ ಹಾಲನ್ನು ಇಟ್ಟು ಹೋಗಿದ್ದರು. ಅದನ್ನಷ್ಟು ಕುಡಿದಿದ್ದ. ಶ್ರಿನಿವಾಸಯ್ಯ ಹೊಲಗಳತ್ತ ಹೋದಮೇಲೆ, ಪದ್ಮ ಮಾವಿನ ತೋಪಿನಲ್ಲಿ ಸ್ವಲ್ಪ ಹೊತ್ತು ಕಳೆದಿದ್ದ. ಮರಳಿ ಬಂದು ತನ್ನ ಕೊಠಡಿಯನ್ನು ಸೇರಿಕೊಂಡಿದ್ದ. ಯಾರೊಡನೆಯೂ ಮಾತಿಲ್ಲ, ಕತೆಯಲ್ಲ. ಮಾಧುರ್ಯ ಕಳೆದುಕೊಂಡಿದ್ದ ಗಂಟಲಲ್ಲಿ ಪದ್ಮನಾಭನೆಂದ: "ನನಗೇನೂ ಬೇಡ, ದೊಡ್ಡಮ್ಮ." "ಹುಚ್ಚ ! ಬರೀ ಹೊಟ್ಟೇಲಿ ಮಲಕೋತಾರೇನೋ ಯಾರಾದರೂ?" " ಇವತ್ತು ನನಗೇನೂ ಬೇಡ." " ಮಧ್ಯಾಹ್ನ ನಾನೂ ಏನೂ ತಗೊಂಡಿಲ್ಲ." " ಯಾಕೆ ದೊಡ್ಡಮ್ಮ ?” " ನೀನು ಉಪವಾಸವಿದ್ದೆಯಲ್ಲ ?" " ಈಗ ಊಟ ಮಾಡು." " ನಾನು ಒಪ್ಪೊತ್ತಿನವಳು, ಮರೆತೆಯಾ ?" “ಈಗೇನ್ಮಾಡಂತೀಯಾ ?" " ಏಳು. ಭಾಗೀರಥಿ ಉಪ್ಪಿಟು ಮಾಡಿದಾಳೆ. ಇಬ್ಬರೂ ತಗೊಳೋಣ. ನಿನಗೊಂದು ತುತ್ತು ಮಜ್ಜಿಗೆ ಅನ್ನಾನೂ ಬಡಿಸ್ತೀನಿ." "ಅಣ್ಣಯ್ಯನ ಊಟ ಆಗಲಿ." " ಅವನು ಸಂಧ್ಯಾವಂದನೇಲಿದಾನೆ. ಅವರೆಲ್ಲಾ ಆ ಮೇಲೆ ಊಟ ಮಾಡ್ತಾರೆ. ಏಳು." ಪದ್ಮನಾಭ ಎದ್ದ. ಕಾರಣ ಅಜ್ಜಿಯ ಮೇಲಣ ಮಮತೆಯೊ? ತಾಳ ಹಾಕುತ್ತಿದ್ದ ಹೊಟ್ಟೆಯೊ? ಉತ್ತರಿಸಲು ಅವನು ಸಿದ್ಧನಿರಲಿಲ್ಲ. ಆತ ಮೌನವಾಗಿ ಅಜ್ಜಿಯನ್ನು ಹಿಂಬಾಲಿಸಿ, ಕೈಕಾಲು ತೊಳೆದುಕೊಂಡು, ಅತ್ತಿಗೆ ಇಟ್ಟಿದ್ದ ಮಣೆಯ ಮೇಲೆ ಅಜ್ಜಿಯ ಮಗ್ಗುಲಲ್ಲಿ ಕುಳಿತ. ಕನಸಿನ ರಾಜ್ಯದಲ್ಲಿ ತೇಲಿಹೋಗುತ್ತಿದ್ದವನನ್ನು ಹಿಡಿದು ಕುಲುಕಿ ನೆಲಕ್ಕೆ ಅಪ್ಪಳಿಸಿದಂ ತಾಗಿತ್ತು ಪದ್ಮನಾಭನ ಪರಿಸ್ಥಿತಿ. ಬೇರಾಡಿದ ತಂದೆಯ ಕೈಗೆ ಬೆಳಗ್ಗೆ ಅವನು ಸಿಕ್ಕಿರಲಿಲ್ಲ. ಮೊಮ್ಮಗನಿಗೆ ತಿಳಿಯಹೇಳುವ ಹೊಣೆಯನ್ನು ದೊಡ್ಡಮ್ಮ ವಹಿಸಿಕೊಂಡಿದ್ದರು, ನಿರ್ವಹಿಸಿದ್ದರು. " ಏನೋ ಹುಡುಗರು ಮಕ್ಕಳಾಟ ಆಡಿವೆ. ಸಾಸಿವೆಕಾಳನ್ನು ಗುಡ್ಡ ಮಾಡೋದೆ? ಶಾಮಣ್ಣನಿಗೆ ಬುದ್ಧಿ ಇಲ್ಲಾಂತ ನಿನಗೂ ಬುದ್ದಿ ಬೇಡ್ವೆ ಶೀನ?" - "ಅಮ್ಮ! ಹಿರಿಯರ ಕಾಲದಿಂದ ನೆಡೆದು ಬ೦ದಿರೋ ಸ್ನೇಹಕ್ಕೆ ಚ್ಯುತಿ ಬರೋ ಹಾಗೆ ಶಾಮಣ್ಣ ಮಾತಾಡ್ದ. ಅವನ ಜತೆ ವಿರಸ ಮಾಡ್ಕೊ೦ಡು ಈ ಹಳ್ಳೀಲಿ ನಾವೇನು ಸುಖ