ನೂವು
ಕ್ಷಣ ಮೌನವಾಗಿದ್ದು ಗೌಡರೆಂದರು:
"ಒಂದು ಜೀವ ಓಯ್ತೂಂತ ಇನ್ನೊಂದು ಜೀವ ತೆಗೆಯೋದು ಮನುಷ್ಯ ಮಾಡಿರೋ ಕಾನೂನು. ಅದು ಸರಿ ಅಂತ ದೇವರೇಳಿಲ್ಲ. ಈಗ್ನೋಡು. ನಿನ್ನಿಂದಾಗಿರೋ ತಪ್ಪು ನಿನ್ನೈಲಾದಸು ನೀನು ಸರಿಪಡಿಸ್ಬೇಕು. ಮನಸ್ಸು ಸ್ವಚ್ಛ ಇಟ್ಕೊಂಡು ಅದನ್ನೆ ಮಾಡಿದಿಯೋ ದೇವರು ನಿನ್ನನ್ನೆ ಕ್ಷಮಿಸ್ತಾನೆ.
ಅಬ್ದುಲ್ಲ ಧ್ವನಿ ತೆಗೆದು ಅಳತೊಡಗಿದ. ನಿಂತಿದ್ದವನು ನೆಲದ ಮೇಲೆ ಕುಸಿಕುಳಿತ. ಹತ್ತಿರವೇ ಇದ್ದ ಗೌಡರ ಕಾಲುಗಳನ್ನು ಮತ್ತೊಮ್ಮೆ ಹಿಡಿಯಲೆಂಬಂತೆ ಮೈಯನ್ನು ತುಸು ಮುಂದಕ್ಕೆ ಚಾಚಿದ.
ಗೌಡರು ಪಾದಗಳನ್ನು ಕುರ್ಚಿಯ ಕೆಳಕ್ಕೆ ಎಳೆದುಕೊಂಡು “ಏನಂತೀಯಾ ಅಬುಲ್ಲ? ನಾನು ಯೋಳಿದ್ದು ಸರಿಯೊ?” ಎಂದು ಕೇಳಿದರು.
"ಔದು, ಒಡೆಯಾ. ಏನು ಮಾಡು ಅಂತೀರೋ ಅದನ್ನ ಮಾಡ್ತೀನಿ."
"ಒಂದನೇದು, ನಾಳೆಯೇ ನೀನು ನಿಂಗಿಗೆ ಒಲ ಬಿಟ್ಟುಕೊಡೋದು. ಎರಡ್ನೇದು, ಮುನಿಯ ಎಂಕಟಪ್ಪನಿಂದ ಕೋರ್ಟು ಕರ್ಚಿಗೇಂತ ನೂರು ರೂಪಾಯಿ ಸಾಲ ಪಡೆದಿದ್ನಲ್ಲ?–ಅದನ್ನ ನೀನು ತೀರಿಸೋದು."
"ಒಲ ನಾಳೇನೇ ಬಿಡ್ತೀನಿ, ಒಡೆಯಾ."
"ಹಳ್ಲಿ ಒರಗಡೆ ಎಲ್ಲಾದ್ರೂ ಗುಡ್ಲು ಕಟ್ಟೋ. ನೂರು ರೂಪಾಯಿಗೇನ್ಮಾಡ್ತೀಯ?"
"ನನ್ನ ಹತ್ತಿರ ಒಂದತ್ತಿಪ್ಪತು ರೂಪಾಯಿ ಇದ್ದಾತು, ಒಡೆಯಾ. ಎಣ್ತೀದು ಒಂದು ಒಂದೆಳೆ ಸರ ಐತೆ.”
"ವೀರಾಚಾರಿಗೆ ಅದನ್ನ ಕೊಡು.. ಯಾರಾದ್ರೂ ಮಾರೊಟಾನು."
"ನಿಮ್ಕೇ ತಂದ್ಕೋಡ್ತೀನಿ."
"ಬ್ಯಾಡ."
ಮತ್ತೆ ಮೊದಲಿನ ಧ್ವನಿಯಲ್ಲೇ ಅವರು ಮುಂದುವರಿದರು:
"ವೀರಾಚಾರೀಗೇ ಕೊಡು. ದುಡ್ಡೇನಾರ ಕಮ್ಮಿ ಬಿದ್ರೆಬಿದ್ರೆ ಕೊಟ್ಟಿರುತ್ತೀನಿ."
"ಊಂ."
"ಎಲ್ಲೋಗಿದ್ದೆ ಅಂತ ಅಳ್ಳಿಯೋರು ಕೇಳ್ತಾರೆ. ಮಗನಿಗೆ ಎಣ್ಣು ನೋಡಾಕೆ, ಚಿತ್ರಾ ಪುರಕ್ಕೆ–ಅನ್ನು. ಮುನಿಯನ ಇಸ್ಯ ಯಾರಾದ್ರು ಮಾತಾಡಿದ್ರೆ ಸುಮ್ ಸುಮ್ಕೆ ಗಾಬರಿ ಬೀಳ್ಳೇಡ. ಪಾಪ, ಸತ್ತೋದ–ಅನ್ನು. ನಾಡಿದ್ನಿಂದ ನೀನು ನಿನ್ಹೆಣ್ತಿ ಮಕ್ಕಳೆಲ್ಲ ನಮ್ಮ ಒಲಕ್ಕೆ ದುಡಿಯೋಕ್ಬನ್ನಿ, ಸರಿಯೋ?"
"ಊ೦, ಒಡೆಯಾ."
"ದೆಯ್ಯ ಬಡಿದು ಮುನಿಯ ಸತ್ತ ಅಂತ ಪುಕಾರು ಉಟ್ಟಿಸಿದೀವಿ. ಅದಕ್ಕೆ ಯೆತಿರಿಕ್ತ ಕಾಣದ ಹಾಗೆ ನೀನು ಧೈರ್ಯವಾಗಿ ನಡಕೋ."
"ಊಂ."
"ಪೋಲೀಸರನ್ನ ಕರೀಬೇಕೊಂತಿದ್ರು. ನಾನು ತಡ್ದೆ. ಇನ್ನು ಕೋರ್ಟಿನ್ದು ಒಂದಿದೆ.