ಈ ಪುಟವನ್ನು ಪ್ರಕಟಿಸಲಾಗಿದೆ

೧೩೦

ಪರಂತಪ ವಿಜಯ


ಪರಂತಪ- ಅಹುದು! ನೀನು ಚೆನ್ನಾಗಿ ಊಹಿಸಿದೆ. ಸುಮಿತ್ರನನ್ನು ಹುಡುಕಿಕೊಂಡು ನಾನು ಕಲ್ಯಾಣಪುರಕ್ಕೆ ಬಂದೆನು. ಆತನು ಸ್ವರ್ಗಸ್ಥನಾದ ವಿಷಯ ತಿಳಿದದ್ದರಿಂದ ಇಲ್ಲಿಗೆ ಬಂದೆನು.
ಶಂಬರ- ಬಹಳ ಸಂತೋಷವಾಯಿತು. ಸುಮಿತ್ರನಿಗೆ ಬರಬೇಕಾದ ಆ ದ್ರವ್ಯವನ್ನು ತಂದಿರುವೆಯಾ?
ಪರಂತಪ - ಆಹಾ! ತಂದು ಇರುವೆನು! ಅದು ಕಲ್ಯಾಣಪುರದಲ್ಲಿರುವುದು. ನೀನು ವಾರಸುದಾರ ಸರ್ಟಿಫಿಕೆಟನ್ನು ತೆಗೆದುಕೊಂಡು ರಶೀತಿಯನ್ನು ಕೊಟ್ಟ ಪಕ್ಷದಲ್ಲಿ, ಈ ದ್ರವ್ಯವು ನಿನಗೆ ಕೊಡಲ್ಪಡುವುದು.
ಶಂಬರ- ನ್ಯಾಯವೇ ಸರಿ! ಈ ಕೆಲಸಗಳನ್ನೆಲ್ಲ ಮಾಡೋಣ. ನೀನು ಇಷ್ಟು ಶ್ರಮವನ್ನು ತೆಗೆದುಕೊಂಡು ಈ ರತ್ನಾಕರಕ್ಕೆ ಬಂದದ್ದಕೋಸ್ಕರ ನಾನು ಬಹಳ ಕೃತಜ್ಞನಾಗಿ ಇದ್ದೆನೆ.
ಪರಂತಪ- ನಿನ್ನ ಉಪಚಾರದಿಂದ ನಾನು ತೃಪ್ತನಾದೆನು. ನನಗೆ ಆಜ್ಞೆಯಾದರೆ ನಾನು ಕಲ್ಯಾಣಪುರಕ್ಕೆ ಹೊರಡುವೆನು. ನಾಳೇ ದಿವಸ ಭೋಜನಾನಂತರ ಬಂದು ನಿನ್ನ ಭೇಟಿಯನ್ನು ಮಾಡಿಕೊಳ್ಳುವೆನು. (ಎಂದು ಹೊರಡುವುದಕ್ಕೆ ಎದ್ದನು).
ಶಂಬರ- ನೀನು ನನಗೆ ಅತಿಥಿಯಾಗಿರುವೆ. ಈಗ ಕತ್ತಲೆಯಾಯಿತು. ಕಲ್ಯಾಣಪುರಕ್ಕೆ ನಾಳೇದಿವಸ ಪ್ರಯಾಣಮಾಡಬಹುದು. ಈದಿನ ರಾತ್ರಿ ಇಲ್ಲಿಯೇ ಇದ್ದುಕೊಂಡು, ನಾನು ಮಾಡತಕ್ಕೆ ಸತ್ಕಾರವನ್ನು ಪರಿಗ್ರಹಿಸಬೇಕು.
ಪರಂತಪ - ನಿನ್ನ ಸತ್ಕಾರವನ್ನು ಪರಿಗ್ರಹಿಸುವುದಕ್ಕೋಸ್ಕರವೇ ನಾನು ಇಲ್ಲಿಗೆ ಬಂದಿರುವೆನು. ನಿನ್ನ ಇಷ್ಟಕ್ಕೆ ಅನುರೂಪವಾಗಿ ನಡೆದು ಕೊಳ್ಳುವೆನು.
ಶಂಬರ- ಸಿಂಧುದೇಶದಿಂದ ಕಳಿಂಗನೆಂಬವನು ಇಲ್ಲಿಗೆ ಬಂದಿರುವನು. ಆತನೂ ನಿನ್ನಂತೆಯೇ ಲಾಯರಾಗಿರುವನು. ಇದಲ್ಲದೆ, ಅವನೂ ನಿನ್ನಂತೆಯೇ ನನ್ನ ಭಾಗ್ಯಕ್ಕೆ ಮೂಲಕಾರಣನಾಗಿರುವನು. ಆತನೊಡನೆ ಮಾತನಾಡುತ್ತ ಇರು. ನಾನು ಶೀಘ್ರದಲ್ಲಿಯೇ ಭೋಜನಾದಿಗಳಿಗೆ ಏರ್ಪಾಡನ್ನು ಮಾಡಿ ಬರುವೆನು.