ಈ ಪುಟವನ್ನು ಪ್ರಕಟಿಸಲಾಗಿದೆ

೧೩೬

ಪರಂತಪ ವಿಜಯ


ತಿತ್ತು. ಇಂಥ ಚಂಡಾಲನಾದ ನಿನ್ನ ಮಾತಿನಲ್ಲಿ ನಂಬಿಕೆಯನ್ನು ಯಾರು ಇಡುವರು? ಇಗೊ ನಿನ್ನನ್ನು ಯಮಪುರಿಗೆ ಕಳುಹಿಸುತ್ತೇನೆ, ಸಿದ್ದನಾಗು.
ಎಂದು ಪಿಸ್ತೂಲನ್ನು ಹಾರಿಸುವುದರೊಳಗಾಗಿಯೆ, ಶಂಬರನು ಹುಲಿಯಂತೆ ಅವಳ ಮೇಲೆ ಬಿದ್ದು ಆ ಪಿಸ್ತೂಲನ್ನು ಕಿತ್ತುಕೊಂಡು, ಅದನ್ನು ಅವಳ ಮೇಲೆ ಹಾರಿಸಿದನು. ದೈವಾಧೀನದಿಂದ ಗುರಿಯು ತಪ್ಪಿತು. ಇನ್ನೊಂದಾವೃತ್ತಿ ಹೊಡೆಯುವುದರೊಳಗಾಗಿಯೇ, ಒಂದು ಗುಂಡಿನ ಶಬ್ದ ವಾಯಿತು. ಇವನು ಕಲಾವತಿಯ ಮೇಲೆ ಬಿದ್ದುದನ್ನು ನೋಡಿ, ಆಕೆಯನ್ನು ಬದುಕಿಸಬೇಕೆಂದು ಪರಂತಪನು ಈ ಗುಂಡನ್ನು ಬಿಟ್ಟನು. ಇದು ಶಂಬರನ ತಲೆಗೆ ತಗುಲಿ, ತಲೆಯೆಲ್ಲ ಸಹಸ್ರ ಪಾಲಾಗಿ ಭೇದಿಸಲ್ಪಟ್ಟಿತು. ಶಂಬರನು ಮಾಡಿದ್ದ ಅನೇಕ ಖೂನಿಗಳ ರುಜುವಾತನ್ನು ಬರಮಾಡಿಕೊಂಡು ಅವನನ್ನು ವಿಚಾರಣೆಗೆ ಗುರಿಮಾಡಬೇಕೆಂದು, ಸಮರಸಿಂಹ ಮಂಜೀರಕರು ಪ್ರಯತ್ನ ಮಾಡುತ್ತಿದ್ದರು. ಅಷ್ಟರಲ್ಲಿಯೇ ಶಂಬರನು ಮೃತಪಟ್ಟಿದ್ದರಿಂದ, ಈ ವಿದ್ಯಮಾನಗಳನ್ನೆಲ್ಲ ಸಮರಸಿಂಹನು ಆ ಸಂಸ್ಥಾನದ ಪ್ರಭುವಿಗೆ ತಿಳಿಸಿದನು. ಅವನು ಇವರ ಆಶ್ಚರ್ಯಕರವಾದ ಕಥೆಯನ್ನು ಕೇಳಿ, ಕಾಮಮೋಹಿನಿಯ ಪಾತಿವ್ರತ್ಯಕ್ಕೂ ಕಲಾವತಿಯ ಸಾಹಸಕ್ಕೂ ಮೆಚ್ಚಿ, ಅವರವರ ಆಸ್ತಿಗಳನ್ನು ಅವರವರಿಗೆ ಕೊಡಿಸಿ, ಪರಂತಪ ಸಮರಸಿಂಹ ಮಂಜೀರಕರಿಗೆ ಬಹಳ ಮರ್ಯಾದೆಯನ್ನು ಮಾಡಿ ಕಳುಹಿಸಿಕೊಟ್ಟನು. ಪರಂತಪ ಕಾಮಮೋಹಿನಿಯರು ತಮಗೆ ಆದ ವಿಪತ್ಪರಿಹಾರಾರ್ಥವಾಗಿ ದೇವತಾರಾಧನೆಯನ್ನು ಮಾಡಿಸಿದ್ದಲ್ಲದೆ, ಮಾಧವನಿಂದ ಪ್ರಾಪ್ತವಾಗಿದ್ದ ಉಯಿಲಿಗೆ ಅನುಸಾರವಾಗಿ ಧರ್ಮಗಳಲ್ಲಿ ನಡೆಯುವಂತೆ ಏರ್ಪಾಡುಮಾಡಿ, ಅದರ ಮೇಲುವಿಚಾರಣೆಯನ್ನು ಬಹು ದಿವಸದವರೆಗೂ ತೆಗೆದುಕೊಳ್ಳುತ್ತ ಪರೋಪಕಾರೈಕಪರಾಯಣರಾಗಿದ್ದರು.
ಕಲಾವತಿಯು, ಕಾಮಮೋಹಿನಿಯೊಡನೆ ಕೆಲವು ದಿವಸಗಳು ರತ್ನಾಕರದಲ್ಲಿಯೇ ಇದ್ದಳು. ಅಷ್ಟರಲ್ಲಿಯೇ, ಮಂಜೀರಕನಿಗೂ ಕಲಾವತಿಗೂ ಪರಸ್ಪರ ಅನುರಾಗವುಂಟಾಯಿತು. ಆಗ ಪರಂತಪನು ಇವರಿಗೆ ವಿವಾಹವನ್ನು ಮಾಡಿಸಿ, ಸುಮಿತ್ರನ ಆಸ್ತಿಯನ್ನೆಲ್ಲ ಇವರಿಗೆ ಕೊಟ್ಟು, ಸುಖವಾಗಿ ಬದುಕುವಂತೆ ಏರ್ಪಾಡುಮಾಡಿದನು.

₪₪₪₪