ಈ ಪುಟವನ್ನು ಪ್ರಕಟಿಸಲಾಗಿದೆ
ಉತ್ತರ ಕನ್ನಡ ಯಕ್ಷಗಾನ ಪರಂಪರೆ / ೫೧

ಬೇಕೆಂದು ಊಹಿಸಲು ಅವಕಾಶವಿದೆ. ಕಾರಣ, ಸಭಾಲಕ್ಷಣವೆಂಬ ಪೂರ್ವರಂಗದ ಸಾಹಿತ್ಯ (ಪಠ್ಯ) ಮತ್ತು ರಂಗಪ್ರಯೋಗವು ಮೂರು ತಿಟ್ಟುಗಳಿಗೂ ಸಮಾನವಾಗಿದ್ದು, ಆ ಸಭಾಲಕ್ಷಣದಲ್ಲಿ ಸ್ತುತಿಸಲಾಗುವ ದೇವತೆಗಳು ಬಹುಪಾಲು ಇಂದಿನ ದಕ್ಷಿಣ ಕನ್ನಡದವರೇ. ಮದವೂರಿನ ಗಣೇಶನಿಂದ ಆರಂಭಿಸಿ, ಹಲವಾರು ದೇವರುಗಳ ಸ್ತುತಿ ಇದೆ. ಇಡಗುಂಜಿಯ ಗಣಪತಿ, ಯಾಣದ ಭೈರವ ಇವರಿಬ್ಬರು ಉ. ಕನ್ನಡ ಪ್ರದೇಶದ ದೇವರುಗಳು ಸ್ತುತಿಸಲ್ಪಟ್ಟಿದ್ದಾರೆ. ಅದರಲ್ಲೂ ಯಾಣದ ಭೈರವೇಶ್ವರನ ಉಕ್ತಿ ಹಲವು ಪಾಠಗಳಲ್ಲಿಲ್ಲ. ಸಭಾಲಕ್ಷಣವು ಮದವೂರ (ಕಾಸರಗೋಡು) ಕ್ಷೇತ್ರದಿಂದ ಇಡಗುಂಜಿಯವರೆಗೆ ಪ್ರಾದೇಶಿಕ ವಿಸ್ತಾರ ಪಡೆದಿರುವಂತಿದೆ. ಮೂಲದ ವಿಚಾರ ಹೇಗೆಯೇ ಇರಲಿ, ಉ. ಕನ್ನಡದ ಯಕ್ಷಗಾನ ರಂಗವು, ಸಾಕಷ್ಟು ದೀರ್ಘ ಸಂಪ್ರದಾಯವನ್ನು ಹೊಂದಿದ್ದು, ನೃತ್ಯದ ಅರ್ಥವಂತಿಕೆ, ಅಭಿನಯದ ವಿವರ ಮತ್ತು ನಾಜೂಕುಗಳಲ್ಲಿ ಉಳಿದ ತಿಟ್ಟುಗಳಿಗಿಂತ ಬಹಳಷ್ಟು ಹೆಚ್ಚಿನ ಬೆಳವಣಿಗೆ ಸಾಧಿಸಿದೆ ಎಂಬುದು ನಿಶ್ಚಿತ.

ಉ. ಕನ್ನಡದ ಯಕ್ಷಗಾನ ರಂಗದ ಪ್ರಾಚೀನತೆಯು ಸುಮಾರು ನಾಲ್ಕು ನೂರು ವರ್ಷಗಳಿಗೂ ಹಿಂದಕ್ಕೆ ಹೋಗುವಂತೆ ಕಾಣುತ್ತದೆ. ಶಿರಸಿ ಬಳಿಯ ಸೋದೆಯಲ್ಲಿನ ರಾಜನು ೧೫೮೦ರ ಸುಮಾರಿಗೆ ದಶಾವತಾರ ಆಟವನ್ನು ಆಡಿಸಿದ ಉಲ್ಲೇಖವನ್ನು ವಿದ್ವಾಂಸರು ಗುರುತಿಸಿದ್ದಾರೆ. (ಜಿ. ಎಸ್. ಭಟ್ಟ, ಕ. ಅ. ಸಂ. ಮೈಸೂರು ಇವರು ನೀಡಿದ ಮಾಹಿತಿ.) ಸು. ೧೬೦೦ರವನೆನ್ನಲಾದ ನಗಿರೆ (ಗೆರ ಸೊಪ್ಪೆಯ) ಸುಬ್ಬನು ಈ ಪ್ರದೇಶದ ಮೊದಲ ಯಕ್ಷಗಾನ ಕವಿ, ಮೈಸೂರು ವಿ. ವಿ. ಜಾನಪದ ಸಂಗ್ರಹಾಲಯದಲ್ಲಿ ಸುರಕ್ಷಿತವಾಗಿರುವ, ಕುಮಟಾ ಬಳಿ ದೊರೆತ, ರಥವೊಂದರಲ್ಲಿರುವ ಕೆತ್ತನೆಯಲ್ಲಿ ಯಕ್ಷಗಾನದ ರಾಜವೇಷದ ಶಿಲ್ಪವಿದೆ. ಅದು ಹೆಚ್ಚು ಕಡಿಮೆ ಇಂದಿನ ಕಿರೀಟ ವೇಷವನ್ನು ಪೂರ್ತಿಯಾಗಿ ಹೋಲುತ್ತದೆ. ಇಡಗುಂಜಿ ಮಹಾಗಣಪತಿ ದೇವಾಲಯದಲ್ಲಿರುವ ಹಳೆಯ ರಥದಲ್ಲೂ ಯಕ್ಷಗಾನ ವೇಷಗಳನ್ನು ಹೋಲುವ ಆಕೃತಿಗಳಿವೆ. ಈಯೆಲ್ಲದರ ಮೇಲಿಂದ, ಸು. ೧೬೦೦ರ ಹೊತ್ತಿಗೆ ಇಲ್ಲಿ ಆಟಗಳು ಪ್ರಚಲಿತವಿದ್ದುವೆಂದು ತಿಳಿಯುತ್ತದೆ. ಕೆರೆಮನೆ ಶಿವರಾಮ ಹೆಗ್ಡೆಯವರು ತಾನು ಚಿಕ್ಕಂದಿನಲ್ಲಿ ಇಡಗುಂಜಿಯಲ್ಲಿ ಕಂಡಿದ್ದ ಹಳೆ ವೇಷ ಸಾಮಗ್ರಿಯ ಬಗೆಗೆ ತಿಳಿಸಿದ್ದು, ಅದು ಆಗಲೇ ಪುಡಿಪುಡಿಯಾಗಿತ್ತೆಂದೂ ಕನಿಷ್ಠ ಇನ್ನೂರು ವರ್ಷ ಹಳೆಯದಿರಬೇಕೆಂದೂ ಹೇಳಿದ್ದಾರೆ. ೧೭೦೦ರ ಹೊತ್ತಿಗೆ ಹೊನ್ನಾವರ ಪ್ರದೇಶದಲ್ಲಿ ಆಟದ ಮೇಳವಿತ್ತೆಂಬ ಬಗ್ಗೆ ಖಚಿತ ಸೂಚನೆಗಳಿವೆ ಎಂದು ದಿ| ಪಿ. ವಿ. ಹಾಸ್ಯಗಾರರು ತಿಳಿಸಿದ್ದರು.

ಈ ಪ್ರದೇಶದ ಯಕ್ಷಗಾನ ರಂಗಪ್ರಯೋಗದಲ್ಲಿ ವಿಲಂಬಿತಲಯದ ಪುನರಾವರ್ತನೆಗಳಿಂದ ಕೂಡಿದ ಹಾಡುಗರಿಕೆ ಮತ್ತು