ಈ ಪುಟವನ್ನು ಪರಿಶೀಲಿಸಲಾಗಿದೆ

ಭಾರತ ಸಂಶೋಧನೆ

೧೦೩

ಪ್ರಾಯಶಃ ಭಾರತೀಯ ರೇಷ್ಮೆ ಸ್ವಲ್ಪ ಒರಟು ಇರಬಹುದು. ಚೀನಾ ರೇಷ್ಮೆಯು ಆಗ ಭಾರತದಲ್ಲಿ ದೊರೆಯುತ್ತಿದ್ದಿತೆಂದರೆ ಕ್ರಿಸ್ತಪೂರ್ವ ನಾಲ್ಕನೆಯ ಶತಮಾನದಲ್ಲಿಯೇ ಚೀನ ಇಂಡಿಯಾಗಳ ಮಧ್ಯೆ ವ್ಯಾಪಾರ ವ್ಯವಹಾರವಿತ್ತೆಂಬುದು ಸ್ಪಷ್ಟ.

ತನ್ನ ರಾಜ್ಯಾಭಿಷೇಕ ಕಾಲದಲ್ಲಿ ರಾಜನಾಗುವವನು ಪ್ರಜೆಗಳ ಸೇವೆಗಾಗಿ “ನಾನು ನಿಮ್ಮನ್ನು ಹಿಂಸಿಸಿದರೆ ನನ್ನ ವಂಶ ನಿರ್ವಂಶವಾಗಲಿ, ನನ್ನ ಜೀವ ಹೋಗಲಿ, ನನ್ನ ಗತಿ ಹಾಳಾಗಲಿ” ಎಂದು ಪ್ರಮಾಣಮಾಡಬೇಕಾಗಿತ್ತು. “ತನ್ನ ಪ್ರಜೆಗಳ ಸೌಖ್ಯದಲ್ಲಿ, ಅವರ ಪುರೋಭಿವೃದ್ಧಿಯಲ್ಲಿ ರಾಜನ ಸೌಖ್ಯ, ತನಗೆ ಇಷ್ಟವಾದುದೆಲ್ಲ ಒಳ್ಳೆಯದೆಂದು ಭಾವಿಸಬಾರದು. ತನ್ನ ಪ್ರಜೆಗಳಿಗೆ ಇಷ್ಟವಾದುದೇ ಒಳ್ಳೆಯದು.” “ರಾಜನು ಕಾರ್ಯಶೀಲನಾದರೆ ಪ್ರಜೆಗಳೂ ಕಾರ್ಯಶೀಲರಾಗುತ್ತಾರೆ”. ಸಾರ್ವಜನಿಕ ಕೆಲಸವು ರಾಜನ ಇಷ್ಟಾನಿಷ್ಟಕ್ಕೆ ಗುರಿಯಾಗಿ ತೊಂದರೆಗೀಡಾಗಬಾರದು. ಸದಾ ಅವನು ಸಾರ್ವ ಜನಿಕ ಸೇವೆಗೆ ಸಿದ್ದನಿರಬೇಕು. ರಾಜ ದುರ್ಮಾರ್ಗಿಯಾದರೆ ಅವನನ್ನು ಪದಚ್ಯುತನನ್ನಾ ಗಿಮಾಡಿ ಬೇರೊಬ್ಬನನ್ನು ರಾಜನನ್ನಾಗಿ ಆರಿಸಲು ಪ್ರಜೆಗಳಿಗೆ ಅಧಿಕಾರವಿತ್ತು.

ಅನೇಕ ನಾಲೆಗಳಿದ್ದವು. ಅವುಗಳನ್ನು ನೋಡಿಕೊಳ್ಳಲು ನೀರಾವರಿ ಇಲಾಖೆ ಇತ್ತು. ಬಂದರುಗಳು, ತೆಪ್ಪಗಳು, ಸೇತುವೆಗಳು ಮತ್ತು ನದಿಗಳ ಮೇಲಕ್ಕೂ ಕೆಳಕ್ಕೂ ನಡೆಯುತ್ತ ಇದ್ದ ದೋಣಿಗಳ ವ್ಯಾಪಾರಕ್ಕೆ ಮತ್ತು ಸಮುದ್ರದಾಚೆ ಬರ ಮುಂತಾದ ದೇಶಗಳಿಗೆ ಹೋಗಿ ಬರುತ್ತಿದ್ದ ದೋಣಿಗಳ ಮತ್ತು ಹಡಗುಗಳ ಮೇಲ್ವಿಚಾರಣೆಗೆ ಒಂದು ನಾವಿಕಾ ಇಲಾಖೆ ಇತ್ತು. ಸೈನ್ಯದ ಅಂಗವಾಗಿ ಒಂದು ನಾವಿಕಾ ಪಡೆಯೂ ಇದ್ದಿರಬೇಕು.

ಸಾಮ್ರಾಜ್ಯದ ವ್ಯಾಪಾರವು ಬಹಳ ಅಭಿವೃದ್ಧಿ ಹೊಂದಿತ್ತು. ದೇಶದ ಮೂಲೆಮೂಲೆಗೂ ರಾಜ ಮಾರ್ಗಗಳು ಹರಡಿದ್ದುವು. ಅಲ್ಲಲ್ಲಿ ಪ್ರಯಾಣಿಕರಿಗೆ ವಸತಿ ಸೌಕರ್ಯವಿತ್ತು. ಮುಖ್ಯ ರಸ್ತೆಗೆ ರಾಜಮಾರ್ಗ ಎಂದು ಹೆಸರಿತ್ತು. ಇದು ನೇರವಾಗಿ ದೇಶದ ಮಧ್ಯೆ ಹಾಯ್ದು ವಾಯವ್ಯದ ಗಡಿಯ ವರೆಗೆ ಹಬ್ಬಿತ್ತು. ಪರದೇಶದ ವರ್ತಕರಿಗೆ ವಿಶೇಷ ಮರ್ಯಾದೆಯೂ ಆದರವೂ ಇತ್ತು. ಅನ್ಯ ದೇಶದವರೆಂದು ವಿಶೇಷ ಸೌಲಭ್ಯಗಳು ದೊರೆಯುತ್ತಿದ್ದವು. ಪ್ರಾಚೀನ ಐಗುಪ್ತರು ತಮ್ಮ ದ್ರವ್ಯ ರಕ್ಷಿತಶವಗಳಿಗೆ ಭಾರತದಿಂದ ಬಂದ ಮಲ್ ಬಟ್ಟೆಯನ್ನು ಉಡಿಸುತ್ತಿದ್ದರಂತೆ; ಮತ್ತು ತಮ್ಮ ಬಟ್ಟೆಗಳಿಗೆ ಇಂಡಿಯ ನೀಲಿಯಿಂದ ಬಣ್ಣ ಹಾಕುತ್ತಿದ್ದರಂತೆ, ಪ್ರಾಚೀನ ಭೂಶೋಧನೆಯಲ್ಲಿ ಒಂದು ವಿಧ ವಾದ ಗಾಜು ಸಹ ದೊರೆತಿದೆ. ಗ್ರೀಕ್ ರಾಯಭಾರಿಯಾದ ಮೆಗಾಸ್ತನೀಸ್ ಭಾರತೀಯರು ಅಲಂಕಾರ ಪ್ರಿಯರು, ಸೌಂದಯ್ಯೋಪಾಸಕರು, ತಮ್ಮ ನಿಲುವನ್ನು ಎತ್ತರಿಸಿಕೊಳ್ಳಲು ಪಾದರಕ್ಷೆ ಸಹ ಧರಿಸುತಿದ್ದರು ಎಂದು ಹೇಳುತ್ತಾನೆ.

ಮೌರ್ಯ ಸಾಮ್ರಾಜ್ಯದಲ್ಲಿ ವಿಲಾಸ ಜೀವನವು ಹೆಚ್ಚಿತು. ಜೀವನವು ಹೆಚ್ಚು ಜಟಿಲವಾಯಿತು, ವಿಶೇಷ ನೈಪುಣ್ಯತೆ ಪಡೆಯಿತು, ಮತ್ತು ಸುಸಂಘಟಿತವಾಯಿತು. ಪಥಿಕ ಗೃಹಗಳು, ಭೋಜನ ಶಾಲೆಗಳು, ಉಪಹಾರಮಂದಿರಗಳು, ಛತ್ರಶಾಲೆಗಳು ಜೂಜುಕಟ್ಟೆಗಳು ಅಸಂಖ್ಯಾತವಾದವು. ಕೆಲವು ಪಂಗಡಗಳು, ಕಸಬುದಾರರು ತಮ್ಮದೇ ಸಭಾ ಮಂದಿರಗಳನ್ನು ಮಾಡಿಕೊಂಡಿರುತ್ತಾರೆ ; ಕಸಬು ದಾರರು ಸಾರ್ವಜನಿಕ ಔತಣಗಳನ್ನು ನಡೆಸುತ್ತಾರೆ. ಅನೇಕ ಬಗೆಯ ನರ್ತಕ ನರ್ತಕಿಯರು, ಸಂಗೀತಗಾರರು ಮತ್ತು ನಟರಿಗೆ ಮನರಂಜನೆಯಿಂದ ಒಳ್ಳೆಯ ಸಂಪಾದನೆಯಿದೆ. ಅವರು ಹಳ್ಳಿಗಳಿಗೆ ಸಹ ಹೋಗುತ್ತಾರೆ. ಗೃಹ ಜೀವನ ಮತ್ತು ಕೃಷಿ ಕರ್ಮ ಹಾಳಾಗುವುದರಿಂದ ಈ ಪ್ರದರ್ಶನಗಳಿಗೆ ಸಾರ್ವಜನಿಕ ಸಭಾಮಂದಿರಗಳು ಇರಕೂಡದೆಂದು “ಅರ್ಥಶಾಸ್ತ್ರ” ಗ್ರಂಥಕರ್ತನು ಹೇಳುತ್ತಾನೆ. ಸಾರ್ವಜನಿಕ ಮನರಂಜನೆಗಳನ್ನು ಏರ್ಪಡಿಸಲು ಸಹಾಯಮಾಡಿದ್ದರೆ ಶಿಕ್ಷೆ ವಿಧಿಸಲಾಗುತ್ತಿದ್ದಿತೆಂದು ಅವನೇ ಹೇಳುತ್ತಾನೆ. ಅದೇ ಉದ್ದೇಶಕ್ಕಾಗಿ ಕಟ್ಟದ ಕ್ರೀಡಾರಂಗಗಳಲ್ಲಿ ನಾಟಕ, ಮುಷ್ಟಿ ಯುದ್ದ ಮುಂತಾದ ಮನುಷ್ಯರ ಮತ್ತು ಮೃಗಗಳ ಪಂದ್ಯಗಳನ್ನು ಜನರ ಮನರಂಜನೆಗಾಗಿ ರಾಜನೇ ಏರ್ಪಡಿಸುತ್ತಿದ್ದನು. ವಿಶೇಷ ವಸ್ತುಗಳ ಚಿತ್ರಗಳ ಪ್ರದರ್ಶನಗಳೂ ನಡೆಯುತ್ತಿದ್ದವು. ಜಾತ್ರೆಗಳ