ಈ ಪುಟವನ್ನು ಪ್ರಕಟಿಸಲಾಗಿದೆ

ಬೇಡನ್ ವೀಲರ್: ಲಾಸೆನ್

೨೫

ಅವಕಾಶಕೊಟ್ಟರೆ ಆಗ ನೀನು ನನ್ನ ನ್ನು ಅರ್ಥಮಾಡಿಕೊಳ್ಳುತ್ತಿ.” ಎಂದು ಹೇಳುವಂತೆ ಇತ್ತು, ಆಕೆಯ ಅಂತರಂಗ, ಬಾಯಿಂದ ಹೇಳಿಕೊಳ್ಳಲಿಲ್ಲ; ಆದರೆ ಕ್ರಮೇಣ ಈ ಸಂದೇಶವನ್ನು ಅವಳ ಕಣ್ಣುಗಳಲ್ಲಿ ಕಂಡೆ.

೧೯೩೦ರ ಆದಿಭಾಗದಲ್ಲಿ ಆಕೆಯ ಈ ಇಚ್ಛೆಯನ್ನು ಗ್ರಹಿಸಿದೆ. ನಾವಿಬ್ಬರೂ ಒಟ್ಟಿಗೆ ಕೆಲಸ ಮಾಡಿದೆವು; ಆ ಅನುಭವದಲ್ಲಿ ಒಂದು ಹೊಸ ಆನಂದವಿತ್ತು. ಸ್ವಲ್ಪ ಕಾಲ ಮಾತ್ರ ಜೀವನದ ಆನಂದ ಶಿಖರವನ್ನೇರಿದ್ದಂತೆ ಇತ್ತು. ಮುಂಬರುವ ರಾಷ್ಟ್ರೀಯ ಆಂದೋಳನದ ಗುಡುಗು ಕೇಳಿ ಬರುತ್ತಿತ್ತು, ಕಾರ್ಮೋಡಗಳು ಕವಿಯ ಹತ್ತಿದ್ದವು. ಆ ಸುಖದ ದಿನಗಳು ಬೇಗ ಕೊನೆಗಂಡವು; ಏಪ್ರಿಲ್ ಆರಂಭದಲ್ಲೇ ಶಾಸನಭಂಗ ಚಳವಳಿಯು ಆರಂಭವಾಗಿ ಸರಕಾರದ ದಬ್ಬಾಳಿಕೆಯು ಉಗ್ರರೂಪ ತಾಳಿತ್ತು; ನಾನು ಸೆರೆಮನೆಯನ್ನೂ ಸೇರಿದೆ.

ಗಂಡಸರೆಲ್ಲರೂ ಸೆರೆಮನೆ ಸೇರಿದ್ದೆವು. ಆಗ ಒಂದು ವಿಚಿತ್ರ ಸಂಗತಿ ನಡೆಯಿತು, ನಮ್ಮ ಮಹಿಳೆಯರು ಮುನ್ನುಗ್ಗಿ ಹೋರಾಟ ನಡೆಸಲು ನಿಂತರು. ಮಹಿಳೆಯರೇನೋ ಹೋರಾಟದಲ್ಲಿ ಹಿಂದೆ ಭಾಗವಹಿಸಿ ಇದ್ದರು, ಆದರೆ ಈಗ ತಂಡೋಪತಂಡವಾಗಿ ಕಾರ್ಯರಂಗಕ್ಕಿಳಿಯುವುದು ನೋಡಿ ಬ್ರಿಟಿಷ್ ಸರ್ಕಾರಕ್ಕೆ ಹಾಗಿರಲಿ ಅವರ ಗಂಡಂದಿರಿಗೂ ಆಶ್ಚರ್ಯವಾಯಿತು. ಶ್ರೀಮಂತ ಮತ್ತು ಮಧ್ಯಮವರ್ಗದ ಸುಖಜೀವನದಲ್ಲಿ ತಂಪಿನಲ್ಲಿ ಕೋಮಲವಾಗಿ ಬೆಳದ ಕುಲೀನ ಮಹಿಳೆಯರು, ರೈತ ಮಹಿಳೆಯರು, ಕೂಲಿಗಾರ ಸ್ತ್ರೀಯರು, ಬಡವರು ಬಲ್ಲಿದರು ದಶಸಹಸ್ರಗಟ್ಟಲೆ ಸರಕಾರದ ಆಜ್ಞೆ ಯನ್ನು ಭಂಗಮಾಡುತ್ತ ಲಾಠಿ ಏಟಿಗೆ ತಲೆ ಒಡ್ಡಿದರು. ಈ ಧೈರ್ಯ ಮತ್ತು ಸಾಹಸದ ದೃಶ್ಯ ಹಾಗಿರಲಿ, ಅವರು ತೋರಿಸಿದ ಸಂಘಟನಾಶಕ್ತಿ ಸಹ ವಿಸ್ಮಯಕಾರಕವಾಗಿ ಇತ್ತು,

ಈ ವಾರ್ತೆಯು ನೈನಿ ಸೆರೆಮನೆಯಲ್ಲಿ ನಮಗೆ ತಿಳಿದಾಗ ನಮಗಾದ ಆನಂದವನ್ನು, ಭಾರತದ ಮಹಿಳೆಯರ ವಿಷಯದಲ್ಲುಂಟಾದ ಅದ್ಭುತ ಗೌರವವನ್ನು ನಾನೆಂದಿಗೂ ಮರೆಯಲಾರೆ. ನಮ್ಮ ಎದೆಯುಬ್ಬಿ, ಕಣ್ಣು ಗಳು ಆನಂದ ಭಾಷ್ಪದಲ್ಲಿ ಮಸಕುಗೊಂಡದ್ದರಿಂದ ಪರಸ್ಪರ ಮಾತನಾಡಲು ಸಹ ಶಕ್ತರಾಗಲಿಲ್ಲ.

ಇಷ್ಟು ಹೊತ್ತಿಗೆ ನನ್ನ ತಂದೆಯವರು ನೈನಿ ಸೆರೆಮನೆಗೆ ಬಂದು ಸೇರಿದ್ದರು. ನಮಗೆ ಗೊತ್ತಿಲ್ಲದ ಎಷ್ಟೋ ವಿಷಯಗಳನ್ನು ಅವರು ತಿಳಿಸಿದರು. ಹೊರಗಡೆ ಶಾಸನ ಭಂಗ ಚಳವಳಿಯ ನಾಯಕ ರಾಗಿದ್ದರು. ದೇಶಾದ್ಯಂತ ನಡೆಯುತ್ತಿದ್ದ ಈ ಮಹಿಳಾ ಜಾಗ್ರತಿಗೆ ಅವರು ಬೆಂಬಲ ಕೊಟ್ಟಿದ್ದಿಲ್ಲ. ಪಿತೃಧರ್ಮದ ಹಳೆಯ ಸಂಪ್ರದಾಯದ ಮನೋಧರ್ಮದಿಂದ ಅವರಿಗೆ ಯುವತಿಯರು ಮತ್ತು ವಯಸ್ಕ ಮಹಿಳೆಯರು ಉರಿಯುವ ಬಿಸಿಲಿನಲ್ಲಿ ಬೀದಿಯಲ್ಲಿ ಅಲೆದಾಡುವುದೂ, ಪೋಲೀಸಿನವರೊಂದಿಗೆ ವ್ಯಾಜ್ಯ ಮಾಡುವುದೂ ಸರಿಬೀಳಲಿಲ್ಲ. ಆದರೆ ಜನರ ಮನಸ್ಸಿನ ಕಾವನ್ನು ಅವರು ಅರಿತಿದ್ದ ರು ! ಆದ್ದರಿಂದ ತಮ್ಮ ಹೆಂಡತಿ, ಹೆಣ್ಣು ಮಕ್ಕಳು, ಸೊಸೆಯರು, ಯಾರಿಗೂ ನಿರಾಶೆಗೊಳಿಸಲಿಲ್ಲ. ದೇಶಾ ದ್ಯಂತ ಮಹಿಳೆಯರು ತೋರಿಸಿದ ಅದ್ಭುತ ಶಕ್ತಿ, ಧೈರ್ಯ, ಕಾರ್ಯದಕ್ಷತೆಯನ್ನು ಕಂಡು ಅವರೇ ಬೆರಗಾಗಿದ್ದರು. ತಮ್ಮ ಮನೆಯ ಹೆಣ್ಣು ಮಕ್ಕಳ ವಿಷಯದಲ್ಲಂತೂ ಪ್ರೇಮಪೂರಿತ ಹೆಮ್ಮೆಯಿಂದ ಮಾತನಾಡುತ್ತಿದ್ದರು.

ಭಾರತೀಯ ಸ್ವಾತಂತ್ರ ದಿನಾಚರಣೆಯ ಹುಟ್ಟು ಹಬ್ಬವಾದ ೧೯೩೧ ನೆ ಜನವರಿ ೨೬ ನೆಯ ದಿನ ನಮ್ಮ ತಂದೆಯವರ ಸಲಹೆಯಂತೆ ಇ೦ಡಿಯಾ ದೇಶದ ಸಹಸ್ರಾರು ಬಹಿರಂಗ ಸಭೆಗಳಲ್ಲಿ ಒ೦ದು 'ಜ್ಞಾಪಕಾರ್ಥ ನಿರ್ಣಯ'ವು ಅಂಗೀಕರಿಸಲ್ಪಟ್ಟಿತು. ಪೋಲೀಸ್ ನವರು ಈ ಸಭೆಗಳನ್ನು ನಿಷೇಧಿಸಿ ಅನೇಕ ಸಭೆಗಳನ್ನು ಬಲಾತ್ಕಾರವಾಗಿ ಚದುರಿಸಿದರು. ನಮ್ಮ ತಂದೆಯವರು ಕಾಹಿಲೆಯಲ್ಲಿ ತಮ್ಮ ಹಾಸಿಗೆಯಿಂದಲೇ ಈ ಸಭೆಗಳನ್ನು ಏರ್ಪಡಿಸಿದರು. ಅವರ ಸಂಘಟನ ಶಕ್ತಿಗೆ ಅದೊಂದು ಕಿರೀಟಪ್ರಾಯವಾಗಿತ್ತು; ಏಕೆಂದರೆ ಆ ದಿನ ನಮಗೆ ವರ್ತಮಾನ ಪತ್ರಿಕೆ, ಅಂಚೆ, ತಂತಿ, ಟೆಲಿ ಫೋನ್, ಮುದ್ರಣಮಂದಿರ ಯಾವುದೂ ಇರಲಿಲ್ಲ. ಆದರೂ ಹಿಮಾಚಲದಿಂದ ಕನ್ಯಾಕುಮಾರಿಯ