ಈ ಪುಟವನ್ನು ಪ್ರಕಟಿಸಲಾಗಿದೆ

೪೮೨

ಭಾರತ ದರ್ಶನ

ಕೊಡಬಹುದು ಅಥವ ಅಡ್ಡ ತಡೆಯಬಹುದು. ಅಧಿಕಾರಿವರ್ಗ ಮದಾಂಧವಾದರೆ ಆ ಪರಿವರ್ತನೆಗೆ ಪೂರ್ವ ಭಾವಿಯಾಗಿ ಇನ್ನೊಂದು ಮಹಾಪ್ರಳಯವೇ ಆದೀತು.

ಇತರ ಕಡೆಗಳಂತೆ ಭಾರತದಲ್ಲಿ ಸಹ ಇಂದು ಅರ್ಥಶೂನ್ಯ ಪ್ರಾಚೀನ ಇತಿಹಾಸ ಪರಂಪರೆಯ ಆದರ್ಶ ಮತ್ತು ಆದೇಶಗಳ ಬಂಧನದಲ್ಲಿ ಕಟ್ಟು ಬಿದ್ದಿದ್ದೇವೆ. ನಿಷ್ಪಕ್ಷಪಾತ ದೃಷ್ಟಿಯಿಂದ ವಿಚಾರ ಪೂರ್ಣ ಭಾವನೆಯಿಂದ ಪ್ರಸ್ತುತ ಪರಿಸ್ಥಿತಿ ಯೋಚಿಸಲು ಅವಕಾಶ ಕೊಡದೆ ತಡೆಯುವುದೇ ಅವುಗಳ ಮುಖ್ಯ ಕೆಲಸ. ಯಾವುದೋ ಅವ್ಯಕ್ತದಕಡೆ, ಅಸ್ಪಷ್ಟ ಆದರ್ಶಗಳ ಕಡೆ ಮನಸ್ಸನ್ನು ಹರಿಬಿಟ್ಟಿದ್ದೇವೆ. ಅದರಿಂದ ದೊರೆಯುವ ಭಾವಪರವಶತೆಯೂ ಒಂದು ದೃಷ್ಟಿಯಿಂದ ಒಳ್ಳೆಯದಾದರೂ ಮನಸ್ಸು ಚಂಚಲವಾಗುತ್ತದೆ ಮತ್ತು ಅಸ್ವಾಭಾವಿಕವಾಗುತ್ತದೆ. ಈಚೆಗೆ ಭಾರತದ ಭವಿಷ್ಯ ವಿಭಜನೆ ಮತ್ತು ಐಕ್ಯತೆಯ ವಿಷಯ ವಿಪುಲ ಗ್ರಂಥರಾಶಿ ಬೆಳೆದಿದೆ. ಆದರೂ ಪಾಕಿಸ್ತಾನ ಅಥವ ವಿಭಜನೆಯ ಪಕ್ಷಪಾತಿಗಳು ಪಾಕಿಸ್ತಾನ ವೆಂದರೇನು ಎಂದು ತಿಳಿಸಿಲ್ಲ; ಅದರ ಪರಿಣಾಮಗಳೇನೆಂದು ಯೋಚಿಸಿಲ್ಲ. ಅವರೂ, ಅವರ ವಿರೋಧಿ ಗಳನೇಕರೂ ಭಾವಪರವಶತೆಯ ಪ್ರಪಂಚದಲ್ಲೇ ಇದ್ದಾರೆ. ಊಹಾಪೋಹದ ಅಸ್ಪಷ್ಟ ಆಶಾಪ್ರಪಂಚದಲ್ಲಿ; ಆಶೆಯ ಹಿಂದೆ ಸ್ವಾರ್ಥದ ಕಲ್ಪನೆಯಲ್ಲಿ ಈ ಎರಡು ಭಾವಪರವಶತೆ ಕಲ್ಪನೆಗಳಿಗೆ ಸಾಮರಸ್ಯ ಸಾಧ್ಯವೇ ಇಲ್ಲ. ಈ ರೀತಿ ಒಂದು ಕಡೆ ಪಾಕಿಸ್ತಾನದ ಕೂಗು, ಇನ್ನೊಂದು ಕಡೆ ಅಖಂಡ ಹಿಂದೂ ಸ್ಥಾನದ ಕೂಗು. ಇಬ್ಬರಿಗೂ ಮುಷ್ಟಾಮುಷ್ಟಿ ಸಾಮೂಹಿಕ ಭಾವನೆಗಳನ್ನು, ಅಭಿಲಾಷೆಗಳನ್ನು, ಪ್ರಜ್ಞಾ ಪೂರ್ಣವೊ, ಅರೆ ಪ್ರಜ್ಞೆಯವೋ- ಅಲ್ಲಗಳೆಯುವಂತೆ ಇಲ್ಲ; ವಿಚಾರ ಮಾಡಲೇಬೇಕು. ಅಲಕ್ಷೆ ಮಾಡಿದರೆ ಅಥವ ಭಾವಪರವಶತೆಯ ಮುಸುಕು ಮುಚ್ಚಿಕೊಂಡರೆ ನಿಜಪರಿಸ್ಥಿತಿ ಅಥವ ವಾಸ್ತವಿಕತೆ ಮರೆ ಮಾಚಲುಸಾಧ್ಯವಾಗುವುದಿಲ್ಲ; ಅವು ಹೋಗುವುದಿಲ್ಲ. ಇಷ್ಟವಿಲ್ಲದಾಗ ಅನಿರೀಕ್ಷಿತವಾಗಿ ಹೇಗೋ ಹೊರಬೀಳುತ್ತವೆ, ಭಾವಪರವಶತೆಯ ಆಧಾರದಿಂದ ಭಾವೋದ್ರಿಕ್ತ ಸಮಯದಲ್ಲಿ ಮಾಡಿದ ತೀರ್ಮಾನ ಗಳಿಂದ ಅಡ್ಡದಾರಿ ಹಿಡಿವುದೂ, ಭಯಂಕರ ಪರಿಣಾಮಗಳಾಗುವುದೂ ಖಂಡಿತ.

ಭಾರತದ ಭವಿಷ್ಯ ಏನೇ ಆಗಲಿ, ಕ್ರಮವಾದ ವಿಭಜನೆಯೇ ಅನಿವಾರ್ಯವಾಗಲಿ, ಭಾರತದ ಆ ವಿಭಜಿತಭಾಗಗಳು ನೂರಾರು ರೀತಿ ಪರಸ್ಪರ ಸಹಕರಿಸಬೇಕು. ಸ್ವತಂತ್ರ ರಾಷ್ಟ್ರಗಳೇ ಒಂದಕ್ಕೊಂದು ಸಹಕರಿಸುತ್ತವೆ. ಆದ್ದರಿಂದ ವಿಭಜನೆಯಿಂದ ಹುಟ್ಟುವ ಪ್ರಾಂತಗಳು ಮತ್ತು ಭಾಗಗಳು ಸಹಕರಿಸಲೇಬೇಕಾದ್ದು ಇನ್ನೂ ಹೆಚ್ಚು ಅವಶ್ಯಕ. ಪರಸ್ಪರ ಸ್ನೇಹದಿಂದ ಒಗ್ಗಟ್ಟಿನಿಂದ ಬಾಳಬೇಕು, ಇಲ್ಲವಾದರೆ ಶಕ್ತಿಗುಂದಿ, ಛಿದ್ರಗೊಂಡು, ಸ್ವಾತಂತ್ರ್ಯ ನಾಶಮಾಡಿಕೊಳ್ಳಬೇಕು. ಆದ್ದರಿಂದ ಮೊದಲೆ ಮುಖ್ಯ ವ್ಯವಹಾರಯೋಗ್ಯ ಪ್ರಶ್ನೆ ಎಂದರೆ ಭಾರತದ ಸ್ವಾತಂತ್ರ್ಯ ರಕ್ಷಣೆ ಮತ್ತು ಪ್ರಗತಿ ಸಾಧನೆಗೂ, ಭಾರತದ ನಾನಾ ಭಾಗಗಳ ಒಳಾಡಳಿತ ಸ್ವಾತಂತ್ರ್ಯ ಮತ್ತು ಸಾಂಸ್ಕೃತಿಕ ಪ್ರಗತಿಗೂ ಅತ್ಯವಶ್ಯಕವಾದ ಬಾಂಧವ್ಯ ಯಾವುದು? ಎಂದು. ಸಂರಕ್ಷಣೆಯ ಜೊತೆಗೆ ಅದಕ್ಕೆ ಪೋಷಕವಾದ ಕೈಗಾರಿಕೆ, ವಾಹನ ಸೌಕರ್ಯ, ವಾರ್ತಾ ಸೌಕರ್ಯ, ಮತ್ತು ಸ್ವಲ್ಪಮಟ್ಟಿನ ಆರ್ಥಿಕಯೋಜನೆ ಅಷ್ಟೇ ಮುಖ್ಯ ಇವೆ. ಸುಂಕ, ನಾಣ್ಯ ಚಲಾವಣೆ, ಹಣವಿನಿಮಯ ಮತ್ತು ಒಳನಾಡಿನ ವ್ಯಾಪಾರಗಳಲ್ಲಿ ಹೆಜ್ಜೆ ಹೆಜ್ಜೆಗೆ ನಿರ್ಬಂಧಗಳಿಲ್ಲದೆ ಇಡೀ ಭಾರತವೇ ಒಂದು ಸ್ವತಂತ್ರ ವ್ಯಾಪಾರ ಪ್ರದೇಶವಾದರೆ ಕ್ಷೇಮ. ದೇಶದ ಒಳಗೆ ಸುಂಕದ ಅಡ್ಡಗೋಡೆ ಹಾಕಿದರೆ ದೇಶದ ಪ್ರಗತಿಗೆ ಅಪಾಯ. ಇದೇರೀತಿ ಸಮಗ್ರ ದೇಶದ ಮತ್ತು ಪ್ರಾಂತಗಳ ದೃಷ್ಟಿಯಿಂದ ಕೇಂದ್ರದಿಂದ ಮತ್ತು ಒಟ್ಟುಗೂಡಿ ನಡೆಸಬೇಕಾದ ಅನೇಕ ವಿಷಯಗಳಿವೆ. ಪಾಕಿಸ್ತಾನ ಬರಲಿ ಬಿಡಲಿ ತಾತ್ಕಾಲಿಕ ಭಾವೋದ್ರೇಕದಿಂದ ಕುರುಡರಾದರೆ ವಿನಾ ಈ ಪ್ರಶ್ನೆ ಯಾವುದನ್ನೂ ನಾವು ಮರೆಯುವಂತಿಲ್ಲ. ವಿಮಾನಯಾನ ಸೌಕಯ್ಯ ವಿಶೇಷ ಬೆಳೆಯುತ್ತಿರುವುದರಿಂದ ಯಾವುದಾದರೊಂದು ಬಗೆಯ ಅಂತರರಾಷ್ಟ್ರೀಯ ಹತೋಟ ಅವಶ್ಯವೆಂದು ಅಂತರರಾಷ್ಟ್ರೀಕರಣ ಸಮಸ್ಯೆ ಎದ್ದಿದೆ. ಎಲ್ಲ ದೇಶಗಳೂ ಒಪ್ಪುವ ಬುದ್ಧಿವಂತಿಕೆ ತೋರುವುವೋ ಇಲ್ಲವೊ ತಿಳಿಯದು. ಆದರೆ ಭಾರತದಲ್ಲಿ ಮಾತ್ರ ವಿಮಾನಮಾರ್ಗಗಳ ಪ್ರಗತಿ ಅಖಿಲ ಭಾರತದ ದೃಷ್ಟಿಯಿಂದಲೇ ಆಗಬೇಕು. ಭಾರತವು ವಿಭಜನೆಯಾದರೆ ಎರಡು ಭಾಗಗಳಲ್ಲೂ ಪ್ರತ್ಯೇಕ ವಿಮಾನಮಾರ್ಗ ಬೆಳೆಸಲು ಸಾಧ್ಯವೆನ್ನಲಾರೆ. ರಾಷ್ಟ್ರದ ಗಡಿದಾಟ ಬೆಳೆಯಬೇಕಾದ ಎಲ್ಲ