ಈ ಪುಟವನ್ನು ಪ್ರಕಟಿಸಲಾಗಿದೆ

108

ಮುಡಿ

ಸೀನು ಸೀನರಿಗಳ ಬಳಕೆ

ಕಂಪೆನಿ ನಾಟಕಗಳ ಮಾದರಿಯಲ್ಲಿ ಸ್ಥಾಯೀ ಡೇರೆ ಮತ್ತು ಟ್ರಾನ್ಸ್‌ಫ‌ರ್ ಸೀನರಿಗಳನ್ನಳವಡಿಸಿದ ಯಕ್ಷಗಾನ ನಾಟಕಗಳನ್ನು ದಿ| ವಿಟ್ಲ ಬಾಬುರಾಯರ ಸೀನು ಸೀನರಿಗಳೊಂದಿಗೆ ಶ್ರೀ ಕೆ. ವಿಠಲ ಶೆಟ್ಟರ ಕರ್ನಾಟಕ ಯಕ್ಷಗಾನ ನಾಟಕ ಸಭಾ 1960ರ ದಶಕದಲ್ಲಿ ಮಂಗಳೂರಲ್ಲಿ ಪ್ರದರ್ಶಿಸಿತು. ವಾಸ್ತವ ದೃಶ್ಯಾವಳಿಯ ಈ ಪ್ರಯೋಗವನ್ನು ಇರಾ (ಕುಂಡಾವು), ಕೂಡ್ಲು ಮೇಳಗಳು ತಿರುಗಾಟಗಳಲ್ಲೂ ಸ್ವಲ್ಪ ಮಟ್ಟಿಗೆ ಅಳವಡಿಸಿದ್ದುವು. ಹರಕೆ ಬಯಲಾಟಗಳಲ್ಲಿ ದೇವಿ ಪ್ರತ್ಯಕ್ಷ, ನದಿ ಉದ್ಭವ, ನೃಸಿಂಹಾವತಾರ ಮೊದಲಾದ ವಾಸ್ತವಿಕ ಸಂದರ್ಭಗಳಿಗೆ ಕೆಲವೆಡೆ ಈಗಲೂ 'ದೃಶ್ಯ' ಪ್ರಯೋಗಗಳ ಅಳವಡಿಕೆಯಿದೆ.
ಜೋಡಾಟಗಳ
ಎರಡು (ಮೂರು, ನಾಲ್ಕು) ಮೇಳಗಳು ಒಂದೇ ಪ್ರೇಕ್ಷಾಗೃಹದಲ್ಲಿ ಏಕಕಾಲಕ್ಕೆ ಸ್ಪರ್ಧಾತ್ಮಕವಾಗಿ ಒಂದೇ ಪ್ರಸಂಗವನ್ನು ಪ್ರದರ್ಶಿಸುವ ಜೋಡಾಟಗಳು 1920 -1960ರ ಅವಧಿಯಲ್ಲಿ ಭರಾಟೆಯಲ್ಲಿದ್ದುವು. ಇದು ಮುಖ್ಯವಾಗಿ ಗೌಜಿ, ಗದ್ದಲಗಳ ಮೇಲಾಟ ಕಲಾವಿದರಿಗೆ ಒಂದು ಹಬ್ಬ. ಈ ಆಟಗಳಿಗೆ ವಿಶಿಷ್ಟವಾದ ಜಾಣ್ಮೆಗಳೂ ಸಂಬಂಧಿತ ನಿಯಮಗಳೂ ಇವೆ. ಈಗ ಜೋಡಾಟಗಳ ಯುಗವು ಮುಗಿದಂತೆ ಕಾಣುತ್ತದೆ. ತೆಂಕುತಿಟ್ಟಿನ ಪ್ರದೇಶದಲ್ಲಿ ಜೋಡಾಟದ ಅನುಕರಣೆಯಿಂದ 'ಜೋಡು ತಾಳಮದ್ದಲೆಗಳೂ ಜರಗುತ್ತಿದ್ದವಂತೆ!
ಅರ್ಥಗಾರಿಕೆ, ತಾಳಮದ್ದಲೆ
ಯಕ್ಷಗಾನ ಪ್ರಸಂಗದ ಪದ್ಯಗಳನ್ನಾಧರಿಸಿ ರೂಪುಗೊಳ್ಳುವ ಆಶುನಾಟಕವಾದ ಅರ್ಥಗಾರಿಕೆ (ಮಾತು)ಯು ಸಾಂಪ್ರದಾಯಿಕವಾಗಿ, ಪದ್ಯಗಳ ಭಾವಪೂರ್ಣ ಅನುವಾದದಂತಿದ್ದುದು, ಆಧುನಿಕ ವಿದ್ಯಾಭ್ಯಾಸ, ಸಾಮಾಜಿಕ ಬದಲಾವಣೆಗಳ ಫಲವಾಗಿ ಈ ಶತಮಾನದ ಆರಂಭದಲ್ಲಿ ಬದಲಾಗತೊಡಗಿ, 1930ರ ದಶಕದಲ್ಲಿ ನಿರ್ಣಾಯಕವಾದ ತಿರುವನ್ನು ಕಂಡಿತು. ಅದಕ್ಕೆ ಅನುಭವ' (ಪೌರಾಣಿಕ ಮಾಹಿತಿ) ಕಾವ್ಯಾತ್ಮಕತೆ, ಸೃಷ್ಟಿಶೀಲ ಪಾತ್ರಚಿತ್ರಣ, ವ್ಯಾಖ್ಯಾನ, ಭಾಷಾಪ್ರೌಢಿಮೆ, ಚಿಂತನ, ಸಮಕಾಲೀನತೆ, ತರ್ಕಗಳ ಮೇಳನ ದೊರೆತು ಅದು ಪ್ರೌಢಸಾಹಿತ್ಯವಾಗಿ ಬೆಳೆಯಿತು. ದಿ| ದೇರಾಜೆ, ಶೇಣಿ, ಸಾಮಗರ ಅರ್ಥಗಾರಿಕೆಯಲ್ಲಿ ಅರ್ಥ ಪ್ರಾಯೋಗಿಕತೆಯ ಪ್ರಬುದ್ಧ ಫಲಗಳು ಗೋಚರವಾದುವು. ಇದು ಆಟಗಳ ಅರ್ಥಗಾರಿಕೆಯ ಮೇಲೂ ಪ್ರಭಾವವನ್ನು ಬೀರಿತು. ಅಂತೆಯೆ ಪ್ರತ್ಯೇಕ

ಡಾ. ಎಂ. ಪ್ರಭಾಕರ ಜೋಶಿ