ಈ ಪುಟವನ್ನು ಪ್ರಕಟಿಸಲಾಗಿದೆ

156

'ಸಮನ್ವಯಶೀಲ ಕಲೆ' ಎಂಬ ಬರಹದಲ್ಲಿ ಯಕ್ಷಗಾನದ ಮೌಲಿಕ ಮತ್ತು ಸಮಕಾಲೀನವಾದ ಹಲವು ಅಂಶಗಳ ಕುರಿತು ಆರೋಗ್ಯಕರವಾದ ಅಭಿಪ್ರಾಯಗಳಿವೆ. ಯಕ್ಷಗಾನವನ್ನು ಕಾಲೋಚಿತವಾಗಿ ಪ್ರಸ್ತುತೀಕರಿಸುವ ಕುರಿತ ಬರಹಗಳಲ್ಲಿ, ಕಲಾರೂಪಕ್ಕೆ ನಿಷ್ಠವಾಗಿದ್ದು, ಅರ್ಥಪೂರ್ಣ ಹೊಸತನ ಹೇಗೆ ಸಾಧ್ಯ ಎಂದು ಲೇಖಕರು ವಿವೇಚಿಸಿದ್ದಾರೆ. ಬಹು ಚರ್ಚಿತವಾದ ಪಾರ್ತಿಸುಬ್ಬನ ಸಮಸ್ಯೆಯ ಕುರಿತೂ ಮುಖ್ಯವಾದ ಕೆಲವು ಅಂಶಗಳನ್ನು ಕಾಣಿಸಿದ್ದಾರೆ. ಇಬ್ಬರು ಪ್ರಮುಖ ಯಕ್ಷಗಾನ ಕವಿಗಳಾದ ಪಾರ್ತಿಸುಬ್ಬ ಮತ್ತು ಮುದ್ದಣರ ಪ್ರಸಂಗಗಳ ರಚನೆಯ ಸಂವಿಧಾನ, ಸೊಗಸು, ವೈಶಿಷ್ಟ್ಯಗಳನ್ನು ಕಾಣಿಸಿರುವ ಲೇಖನಗಳು, ಸ್ವತಃ ಪ್ರಸಂಗಕರ್ತನಾಗಿರುವ ಲೇಖಕರ ಸಮತೋಲ ವಿಮರ್ಶಾ ದೃಷ್ಟಿಗೆ ಸಾಕ್ಷಿ ನುಡಿಯುತ್ತವೆ. ಪ್ರಸಂಗ ಸೃಷ್ಟಿಯ ಕುರಿತು ಬರೆಯುತ್ತ ಇಂದಿನ ಯಕ್ಷಗಾನ ಕವಿಗಳು ಹೊಂದಿರುವ ಹೆಚ್ಚಿನ ಹೊಣೆಯನ್ನು ಪ್ರಸ್ತಾವಿಸಿದ್ದಾರೆ. ತುಳು ಯಕ್ಷಗಾನದ ಕುರಿತ ಬರಹದಲ್ಲಿ ತುಳು ಪ್ರಸಂಗಗಳ ಇತಿಹಾಸ, ಮೌಲ್ಯಮಾಪನ ಮತ್ತು ಅದರೊಂದಿಗೆ ತುಳು ಯಕ್ಷಗಾನದ ಸಾಂಸ್ಕೃತಿಕ ಮಹತ್ವವನ್ನೂ ಕಲಾತ್ಮಕ ಸೌಂದಯ್ಯದ ಆವಶ್ಯಕತೆ, ಪ್ರಯೋಗಗಳ ವಿಚಾರಗಳ ಕುರಿತು ವಸ್ತುನಿಷ್ಠವಾದ ವಿವೇಚನೆ ಇದೆ. ಯಕ್ಷಗಾನದ ಸಾಂಕೇತಿಕತೆಯನ್ನು ವಿಶ್ಲೇಷಿಸಿ, ಯಕ್ಷಗಾನವನ್ನು ಅದರ ವಿವಿಧ ಅಂಗಗಳನ್ನು ವಾಸ್ತವ ದೃಷ್ಟಿಯಿಂದ ನೋಡದೆ, ಸಾಂಕೇತಿಕ ನೆಲೆಯಲ್ಲಿ ಪರಿಭಾವಿಸಬೇಕಾದ ರೀತಿಯನ್ನು ತೋರಿಸಿ, ಒಟ್ಟು ಯಕ್ಷಗಾನ ವಿಮರ್ಶೆಗೆ ಸೂತ್ರಪ್ರಾಯವಾಗಬಹುದಾದ ಕೆಲವು ಅಂಶಗಳನ್ನು ಹೇಳಲಾಗಿದೆ. ಯಕ್ಷಗಾನ ಕಲೆಯು ರೂಪುಗೊಳ್ಳುವಲ್ಲಿ ಮೂಲ ದ್ರವ್ಯಗಳಾಗಿ ಒದಗಿರುವ ಭೂತಾರಾಧನೆ ಮತ್ತಿತರ ಜನಪದ ಕಲಾಂಗಗಳನ್ನು ಗಮನಿಸಿ ಈ ಎರಡು ಪ್ರಕಾರಗಳೊಳಗಿನ ನಿಕಟ ಸಂಬಂಧವನ್ನು ಸೂಕ್ಷ್ಮವಾಗಿ ಪರಿಶೀಲಿಸಿದ ಎರಡು ಲೇಖನಗಳು ಆ ಬಗೆಯ ಸಂಶೋಧನೆಗೆ ಅಡಿಪಾಯ ಒದಗಿಸುವಂತಹವುಗಳು.
ವೇಷ ಭೂಷಣಗಳ ಕುರಿತು ಬರೆದಿರುವ ಬರಹಗಳಲ್ಲಿ, ಯಕ್ಷಗಾನ ವೇಷ ಶೈಲಿಯ ಸೂಕ್ಷ್ಮ ಪರಿಜ್ಞಾನವೂ ಶೈಲಿಯೊಳಗೆಯೆ ಸಾರ್ಥಕ್ಯ ಪಡೆಯಬೇಕಾದ ಹೊಸ ಆವಿಷ್ಕಾರಗಳ ವಿನ್ಯಾಸದ ಕುರಿತ ರೂಪನಿಷ್ಠತೆಯೂ ಗೋಚರವಾಗುತ್ತದೆ. ನೂತನ ವೇಷವಿಧಾನಗಳನ್ನು ಸೂಚಿಸುವಾಗ, ಈಗ ಇರುವ ವೇಷ ವಿಧಾನಗಳ ಮಾದರಿಗಳನ್ನು ಗಮನಿಸಿ, ಅವುಗಳನ್ನಾಧರಿಸಿದ ನಾವೀನ್ಯವು ಯಕ್ಷಗಾನದ ಶೈಲಿಯ ವಿಸ್ತರಣೆಯಾಗಿ ರೂಪುಗೊಳ್ಳುವ

ಡಾ. ಎಂ. ಪ್ರಭಾಕರ ಜೋ