ಈ ಪುಟವನ್ನು ಪ್ರಕಟಿಸಲಾಗಿದೆ
62
ಮುಡಿ

ಅರ್ಥೈಸುವಿಕೆಗೆ ಒಳಗಾಗುತ್ತವೆ. ಆದರ್ಶ, ಆರಾಧ್ಯವೆನಿಸಿದ ಪಾತ್ರಗಳಿಗೂ ಇಲ್ಲಿ ಇಕ್ಕಟ್ಟುಗಳು ಎದುರಾಗುತ್ತವೆ. ಪಾತ್ರಾಧಾರಿತ ವಾದಗಳು ತಾಳಮದ್ದಲೆಯ ಒಂದು ಮುಖ್ಯ ಅಂಶವಾದರೂ, ಮುಖ್ಯವಾಗಿ ಅದು ನಾಟಕವೆ ಹೊರತು ವಾದಭೂಮಿಯಲ್ಲ. ಅರ್ಥಗಾರಿಕೆಯು ಭಾರತೀಯ ಸಂಸ್ಕೃತಿಯ ವಿವಿಧ ಕಾಲಗಳನ್ನು, ಪದರುಗಳನ್ನು ಒಗ್ಗೂಡಿಸಿ ವಿಶಿಷ್ಟವಾದ ಪಾಕವನ್ನು ನೀಡುತ್ತದೆ. ಹೊಸ ಸಂವಾದಗಳನ್ನು ನಿರ್ಮಿಸುತ್ತದೆ. ಮಾತಿನ ಸ್ವಾರಸ್ಯ, ವರಸೆಗಳು, ಸಂವಾದ ಸೌಂದಯ್ಯ, ರಸ ಪರಿಪೋಷಗಳಲ್ಲಿ ತಾಳಮದ್ದಲೆಯ ಸಿದ್ದಿ ಬಲು ದೊಡ್ಡದು. ಆಟ ಮತ್ತು ತಾಳಮದ್ದಲೆಗಳ ಅರ್ಥಗಾರಿಕೆಯಲ್ಲಿ ಮೌಲಿಕ ವ್ಯತ್ಯಾಸಗಳಿದ್ದರೂ, ಈ ಮಾತು ಎರಡೂ ಪ್ರಕಾರಗಳಿಗೆ ಅನ್ವಯವಾಗುತ್ತದೆ.

- 10 -

ಪ್ರಸಂಗವೆಂಬ ಕತೆಯು ಅಖಿಲ ಭಾರತೀಯ ಪೌರಾಣಿಕ ರೂಪದ್ದಾದರೂ, ಕಲಾರೂಪವು, ಅದರ ಭಾಷೆ, ಪ್ರಯೋಗ, ವೇಷ, ಮಾತುಗಾರಿಕೆಯಲ್ಲಿರುವ ಪದ ಪ್ರಯೋಗ, ಉದಾಹರಣೆ, ಜೀವಾನಾನುಭವಗಳು ಪ್ರಾದೇಶಿಕ. ಹೀಗಾಗಿ ಭಾರತೀಯತೆ - ಪ್ರಾದೇಶಿಕತೆಗಳ ವಿಶಿಷ್ಟ, ವಿಚಿತ್ರ ಸಂಯೋಗವನ್ನು ಯಕ್ಷಗಾನದಲ್ಲಿ (ಹಾಗೆಯೆ ಅಂತಹ ಇತರ ಕಲೆಗಳಲ್ಲೂ) ಕಾಣುತ್ತೇವೆ.

ಇದರೊಂದಿಗೆಯೆ, ಆ ದಿನದ ಸಂದರ್ಭ, ಅಂದರೆ ಕಾಲ, ಕಾಲಮಿತಿ, ಸ್ಥಳ, ಪರಿಸರ, ಅಂದಂದಿನ ಘಟನೆಗಳು, ಪ್ರೇಕ್ಷಕ ಸ್ವರೂಪ, ಪ್ರೇಕ್ಷಕರ ಪ್ರತಿಕ್ರಿಯೆಗಳು ಪ್ರದರ್ಶನವನ್ನು ಪ್ರಭಾವಿಸುತ್ತವೆ. ಅದೇ ರೀತಿ ಕಲಾವಿದರ ಹೆಸರು, ಊರಿನ ಹೆಸರುಗಳು, ಸಾಮಾಜಿಕ ಘಟನೆಗಳ ಧ್ವನಿ, ರಾಜಕೀಯ ಶ್ಲೇಷೆ, ಮೊದಲಾದ ಅಂಶಗಳೂ ಆಶುರಂಗಕ್ಕೆ ಸಹಜವಾದ ವ್ಯಕ್ತಿವಿನೋದಗಳೂ ಪ್ರದರ್ಶನದಲ್ಲಿ ಹಾದುಹೋಗುತ್ತವೆ. ಇದು ಪ್ರದರ್ಶನಕ್ಕೆ ಒಂದು ಸೊಗಸನ್ನು ನೀಡುತ್ತದೆ. ಯಕ್ಷಗಾನದ ಹಾಸ್ಯವೂ ವಿನೋದದ ಉತ್ತಮ ಮಾದರಿಗಳನ್ನು ಸೃಜಿಸಿದೆ. ಹಾಸ್ಯ ಮತ್ತು ಶೃಂಗಾರಗಳಲ್ಲಿ ತೀರ ಸಾಮಾನ್ಯವೆನ್ನಬಹುದಾದ ಮಟ್ಟವೂ ಕಾಣಿಸುತ್ತಿದ್ದು, ಈ ಪ್ರವೃತ್ತಿ ಈಗ ಹೆಚ್ಚುತ್ತಿದೆ ಎಂದು ಒಂದು ಅಭಿಪ್ರಾಯವಿದೆ.

- 11-

ಯಕ್ಷಗಾನದಲ್ಲಿ ನಿರ್ದೇಶಕರ ಅರ್ಥೈಸುವಿಕೆಯನ್ನು ಆಧರಿಸಿ, ಪರಿಷ್ಕಾರ, ನಾವೀನ್ಯಗಳಿಂದ ಕೂಡಿದ ಪ್ರಾಯೋಗಿಕ ರಂಗಭೂಮಿ ಬೆಳೆದಿರುವುದು ಕಡಿಮೆ. ಶ್ರೀ ಶಿವರಾಮ

ಡಾ. ಎಂ. ಪ್ರಭಾಕರ ಜೋಶಿ