ಈ ಪುಟವನ್ನು ಪ್ರಕಟಿಸಲಾಗಿದೆ
ತಾಳಮದ್ದಳೆಯ ಕ್ರಿಯಾತ್ಮಕತೆ / ೩೭

ಗಾರನ ಸಾಮರ್ಥ್ಯಕ್ಕನುಸರಿಸಿ ವಿಶಾಲ ಸ್ವಾತಂತ್ರ್ಯವೂ ಇದೆ. ಒಳ್ಳೆಯ ಹಿಮ್ಮೇಳವಿಲ್ಲವಾದರೆ, ಸಮರ್ಥ ಮಾತುಗಾರರಿದ್ದೂ ತಾಳಮದ್ದಳೆ ಯಶಸ್ವಿಯಾಗದು. ಭಾಗವತಿಕೆಯೂ, ವಾದ್ಯಗಳೂ ಪ್ರದರ್ಶನವನ್ನು ರೂಪಿಸುವ ಶಕ್ತಿಗಳು, ಹಾಡುಗಾರಿಕೆ ಹಾಗಿರಲಿ, ಚೆಂಡೆ, ಮದ್ದಳೆಗಳ ಒಂದು ಗತ್ತು, ಒಂದು ಮುಕ್ತಾಯ, ಪ್ರದರ್ಶನಕ್ಕೆ ಹೊಸ ಸ್ಫೂರ್ತಿ ನೀಡಬಹುದು.

ಸಿದ್ಧ ಸಾಹಿತ್ಯವುಳ್ಳ ನಾಟಕವಾದರೂ, ನಿರ್ದೇಶನ, ನಟನ ಎಂಬ ಎರಡು ಮಟ್ಟದಲ್ಲಿ ಸೃಷ್ಟಿಶೀಲತೆಯ ಉನ್ನತ ಮಟ್ಟವನ್ನು ಪಡೆಯು ಇದೆ. ತಾಳಮದ್ದಳೆಯ ಸಾಹಿತ್ಯವೇ, ಸೃಷ್ಟಿಯಾಗುವ ಮಟ್ಟದಲ್ಲಿ ಸಿದ್ಧವಲ್ಲದ, ನವೀನ ಪಾಠವಾದುದರಿಂದ, ಈ ಅಂಶದಲ್ಲಿ ಇಲ್ಲಿ ಸೃಜನಾತ್ಮಕತೆಯ ಅಂಶ ಬೇರೆ ರೀತಿಯದು. ಹಿಂದೆ ಪ್ರಸ್ತಾಪಿಸಿದ ಕಲಾವಿದನ ಆಕರಗಳು, ಹಿನ್ನೆಲೆ ಮುನ್ನೆಲೆಗಳು ಕ್ಷಣಕ್ಷಣಕ್ಕೆ ಬೆರೆತು ಪಾಕಗೊಳ್ಳುತ್ತ ನಾಟಕ ಸೃಷ್ಟಿಯಾಗುತ್ತ ಹೋಗುತ್ತದೆ.

ಯಾವುದೇ ರಂಗಕ್ರಿಯೆಯಾದರೂ ಅದು ಸಾರತಃ ಸಾಮಾಜಿಕ ಕ್ರಿಯೆಯಷ್ಟೆ? ವಸ್ತುವೊಂದು ನಾಟಕವಾಗುವಾಗ, ಮಾಧ್ಯಮವು ಯಾವುದೇ ಇರಲಿ, ಅದು ಸಾಮಾಜಿಕೀಕರಣಕ್ಕೆ ಒಳಗಾಗುತ್ತದೆ. ಸಮಕಾಲೀನ ಕಥೆಯನ್ನು, ವಸ್ತುವನ್ನು ಹೊಂದಿದ ಕೃತಿಯು, ಪ್ರಸ್ತುತಕ್ಕೆ ಹೆಚ್ಚು ಸ್ಪಂದನಶೀಲವೆಂದು ಹೇಳಬಹುದಾದರೂ, ಪೌರಾಣಿಕ ಅಥವಾ ಐತಿಹಾಸಿಕ ಕಥೆಯನ್ನು ನಾಟಕವಾಗಿಸಿದಾಗಲೂ, ಸಮಕಾಲೀನವಾದ ಸ್ಪಂದನವು ಉತ್ಕೃಷ್ಟ ರೀತಿಯಲ್ಲಿ ಸಾಧಿತವಾಗಬಹುದೆಂದು ಜಗತ್ತಿನಾದ್ಯಂತ ಲೇಖಕರು, ನಿರ್ದೇಶಕರು, ನಟರು ತೋರಿಸಿಕೊಟ್ಟಿರುವರು. ಈ ಸಾಧ್ಯತೆಯು, ತಾಳಮದ್ದಳೆಯಲ್ಲಿ ಪೌರಾಣಿಕ ವಸ್ತುವು ಸಾಧಿಸ ಬಹುದಾದ ಸಾಮಾಜಿಕ ಸ್ಪಂದನ ಯಾ ಕ್ರಿಯಾತ್ಮಕತೆಯನ್ನು ಸೂಚಿಸು ವುದು. ಇಲ್ಲಿ ಯಕ್ಷಗಾನ ಪ್ರದರ್ಶನದ ಆಧಾರವಾದ ಪ್ರಸಂಗ ಕೃತಿಯ ಮಿತಿಗಳು ಇಂತಹ ಸ್ಪಂದನಶೀಲ ಮಾತುಗಾರಿಕೆಯ ಮೇಲೆ ಮಿತಿ ಹೇರುವುದು ನಿಜವಾದರೂ, ಇಲ್ಲಿನ ಸೃಷ್ಟಿಶೀಲತೆಯ ಸಾಧ್ಯತೆಯು ಅಮಿತವಾಗಿಯೇ ಇದೆ. ಭಾರತೀ ವೃತ್ತಿಯನ್ನೂ, ಲೋಕಧರ್ಮಿಯನ್ನೂ