ಈ ಪುಟವನ್ನು ಪ್ರಕಟಿಸಲಾಗಿದೆ

ಚರಿತ್ರೆ

೭೧


ವಿಕಲ್ಪವೂ ಉಳಿಯಲಿಲ್ಲ. ಇದ್ದಕ್ಕಿದ್ದ ಹಾಗೆ ಸಮಾಧಿಯಲ್ಲಿ ಮಗ್ನ ನಾದೆನು.”

ಹೀಗೆ ಶಿಷ್ಯನು ಸಮಾಧಿಸ್ಧನಾಗಲು ತೋತಾಪುರಿಯು ಸ್ವಲ್ಪ ಹೊತ್ತು ಅಲ್ಲಿಯೇ ಇದ್ದು ಅನಂತರ ಯಾರಾದರೂ ಬಂದು ತೊಂದರೆಮಾಡಿಯಾರೆಂಬ ಯೋಚನೆಯಿಂದ ಕುಟೀರದ ಬಾಗಿಲನ್ನು ಹಾಕಿ ಬೀಗಹಾಕಿಕೊಂಡು ಪಂಚವಟಿಗೆಹೋಗಿ ಅಲ್ಲಿ ಶಿಷ್ಯನು ಎಚ್ಚೆತ್ತು ಕೂಗುವುದನ್ನೇ ನಿರೀಕ್ಷಿಸಿಕೊಂಡು ಕುಳಿತಿದ್ದನು. ಹಗಲೆಲ್ಲ ಕಳೆಯಿತು ; ರಾತ್ರಿಯಾಯಿತು ; ರಾತ್ರಿಯೂ ಕಳೆಯಿತು; ಒಂದುದಿನವಾಯಿತು, ಎರಡುದಿನವಾಯಿತು, ಮೂರುದಿನವಾಯಿತು ; ಆದರೂ ಪರಮಹಂಸರು ಕೂಗಲೇ ಇಲ್ಲ. ಆಶ್ಚರ್ಯದಿಂದ ತೋತಾ ಪುರಿಯು ಎದ್ದು ಬಂದು ನೋಡಲು ಶಿಷ್ಯನು ಇನ್ನೂ ಸಮಾಧಿಸ್ಧ ನಾಗಿಯೇ ಇದ್ದಾನೆ! ದೇಹದಲ್ಲಿ ಪ್ರಾಣದಚಿಹ್ನೆಯೇ ಇಲ್ಲ! ಆದರೆ ಮುಖವು ಮಾತ್ರ ಪ್ರಶಾಂತವಾಗಿಯೂ, ಗಂಭೀರವಾಗಿಯೂ, ಜ್ಯೋತಿಃ ಪೂರ್ಣವಾಗಿಯೂ ಇತ್ತು. ಸಮಾಧಿರಹಸ್ಯವನ್ನು ತಿಳಿದು ತೋತಾಪುರಿಯು ಆ ಸ್ಥಿತಿಯನ್ನು ನೋಡಿ “ ಇದೇನು ಆಶ್ಚರ್ಯ ! ನಾನು ನಲವತ್ತು ವರ್ಷಗಳ ಕಾಲ ಕಠೋರ ಸಾಧನೆಮಾಡಿ ಯಾವು ದನ್ನು ಪಡೆದೆನೋ ಅದನ್ನು ಈ ಮಹಾಪುರುಷನು ನಿಜವಾಗಿಯೂ ಒಂದೇ ದಿನದಲ್ಲಿ ಹೊಂದಿದನೇ! ” ಎಂದು ಪುನಃ ಶಿಷ್ಯನದೇಹದಲ್ಲಿ ಕಾಣುತ್ತಿದ್ದ ಲಕ್ಷಣಗಳನ್ನು ಪರೀಕ್ಷಿಸಿ ನೋಡಿದನು. ಸತ್ಯವಾಗಿಯೂ ನಿರ್ವಿಕಲ್ಪ ಸಮಾಧಿ! ಆಗ ಆತನು ಅತ್ಯಾಶ್ಚರ್ಯದಿಂದ " ಇದೇನು ದೇವರ ಅದ್ಭುತಮಾಯ ! ” ಎಂದಂದುಕೊಂಡು ತಾನೇ ಶಿಷ್ಯನನ್ನು ಎಬ್ಬಿಸಿದನು.

ಮೂರುದಿನಕ್ಕೆ ಹೆಚ್ಚಾಗಿ ಎಲ್ಲಿಯೂ ನಿಲ್ಲದೆ ತಿರುಗುತ್ತಿದ್ದ ತೋತಾಪುರಿಯು ದಕ್ಷಿಣೇಶ್ವರದಲ್ಲಿ ಹನ್ನೊಂದು ತಿಂಗಳಿದ್ದನು. ಈ ಕಾಲದಲ್ಲಿ ಪರಮಹಂಸರು ನಿರ್ವಿಕಲ್ಪ ಸಮಾಧಿಯಲ್ಲಿ ದೃಢ ಪ್ರತಿಷ್ಟಿತರಾಗಿ, ಸಮಾಧಿಯಲ್ಲಿಯೇ ಇದ್ದು ಬಿಡಬೇಕೆಂದು ಕುಳಿತರು.