ಈ ಪುಟವನ್ನು ಪ್ರಕಟಿಸಲಾಗಿದೆ
147

ಮಾತನ್ನು ಆಡಿರಿ ; ಒಳ್ಳೆಯ ಕೃತಿಯನ್ನು ಮಾಡಿರಿ ! ಎಂಬುದು ಬಸವಣ್ಣನವರ ಹಿರಿದಾದ ಬೋಧೆ !
“ತನ್ನಂತೆ ಪರರ ಬಗೆಯಿರಿ' ಎಂಬುದು ಬಸವಣ್ಣನವರ ಸಮತ್ವಧರ್ಮ, ಪ್ರೇಮಧರ್ಮ. 'ತನ್ನಂತೆ ಪರರ ಬಗೆದಡೆ ಕೈಲಾಸ ಬಿನ್ನಣವಕ್ಕು' ಎಂದು ಸರ್ವಜ್ಞನು ಸಾರಿರುವ. 'ತನ್ನಂತೆ ಪರರು' ಎಂಬ ಸೂತ್ರದಲ್ಲಿ ಮೂರು ಬಗೆಯ ಸಮತೆಯು ಒಳಗೊಂಡಿರುವುದು : ಒಂದು ಬೌದ್ಧಿಕ ಸಮತೆ, ನೈತಿಕ ಸಮತೆ ಎರಡನೆಯದು, ಮೂರನೆಯದು ಪಾರಮಾರ್ಥಿಕ ಸಮತೆ, ತಾನೂ ಮಾನವ, ಪರರೂ ಮಾನವರು. ತನಗೆ ದೇಹೇಂದ್ರಿಯಗಳು, ಮನಸ್ಸು-ಬುದ್ದಿಗಳು ಇರುವಂತೆ ಅವರಿಗೂ ಇರುವವು. ತಾನು ಜನಿಸಿ, ಬಾಳಿ ಅಳಿಯುವಂತೆ, ಅವರೂ ಜನಿಸಿ ಬಾಳಿ ಅಳಿಯುವರು. ಸುಖವಾದಾಗ ತನ್ನಂತೆ ಅವರೂ ಆಡುವರು, ಹಾಡುವರು, ನಗುವರು, ಕಲೆಯುವರು. ದುಃಖವಾದಾಗ ಅವರು ತೊಳಲುವರು, ಬಳಲುವರು, ಅಳುವರು, ಕರೆಯುವರು. ಆದುದರಿಂದ ತನ್ನಲ್ಲಿ ಪರರಲ್ಲಿ ಅದಾವ ಭೇದ ? ಎಂಬುದೇ ಬೌದ್ಧಿಕ ಸಮತೆ. ಅದೇ ಮೇರೆಗೆ ತನ್ನಂತೆ ಪರರಿಗೂ ಒಳತಿನಿಂದ ಸುಖವಾಗುವದು, ಕೆಡಕಿನಿಂತ ದುಃಖವಾಗುವದು ; ಹೊಗಳಿಕೆಯಿಂದ ತನ್ನಂತೆ ಅವರೂ ನಲಿಯುವರು, ತೆಗಳಿಕೆಯಿಂದ ನವೆಯುವರು. ತನಗೆ ಸುಖವು ಬೇಕಾಗುವಂತೆ ಹಾಗೂ ದುಃಖವು ಬೇಡ ಆದಂತೆ, ಅವರಿಗೂ ಹಾಗೆಯೇ ಅನಿಸುವದು. ತನಗೆ ಅನ್ಯರು ಸುಖ ಕೊಡಬೇಕೆಂದು ತಾನು ಬಯಸಿದರೆ, ತಾನೂ ಅನ್ಯರಿಗೆ ಸುಖವನ್ನೆಯೇ ಕೊಡಬೇಡವೆ? ಅದು ತನ್ನ ಕರ್ತವ್ಯವಲ್ಲವೇ ? ಎಂಬ ವಿಚಾರವು ನೈತಿಕ ಸಮತೆಯ ನೆಲೆ. ಎಲ್ಲರ ಹೃದಯದಲ್ಲಿ ಭಗವಂತ ನೆಲೆಸಿರುವ. ಎಲ್ಲರಲ್ಲಿ ನೆಲೆಸಿರುವ ಆತ್ಮನು ಒಬ್ಬನೇ. ಈ ಬಗೆಯ ಅನುಭವ ಬಂದು, ಅದರ ಫಲವಾಗಿ ಉಂಟಾದ ಸಮತೆಯು ಪಾರಮಾರ್ಥಿಕ ಸಮತೆ, ಅದೇ ಸರ್ವಶ್ರೇಷ್ಠವಾದ ಸಮತೆ. ಎಲ್ಲರಲ್ಲಿ ಒಬ್ಬ ಆತ್ಮನನ್ನೇ, ಒಬ್ಬ ಭಗವಂತನನ್ನೆ ಸಾಕ್ಷಾತ್ಕರಿಸಿಕೊಂಡ ಹಿರಿಯರೇ ಈ ಬಗೆಯ ಆತ್ಮನ ಅಸ್ತಿತ್ವವೇ ಪರಸ್ಪರರಲ್ಲಿಯ ಪ್ರೀತಿಯ ಸೆಲೆ ಎಂದು ಉಸಿರಿರುವರು :