ಈ ಪುಟವನ್ನು ಪ್ರಕಟಿಸಲಾಗಿದೆ
39

ಬಸವಣ್ಣನಿಗೆ ಅಂದು ತನ್ನ ಮುಂದಿನ ಮಹಾಕಾರ್ಯದ ಕಲ್ಪನೆಯು ಇರಲಿಲ್ಲ. ಆಶ್ರಮದಲ್ಲಿ ತನ್ನ ಆದರ್ಶ ಸಮಾಜದ ಚಿತ್ರವನ್ನು ಅವನು ಕಂಡಿದ್ದ. ಆದರೆ ಅದನ್ನು ನಿರ್ಮಿಸುವ ಹೊಣೆಯು ತನ್ನದು-ಸಂಗನು ಅದನ್ನು ತನಗೆ ಒಪ್ಪಿಸಿರುವ ಎಂಬುದು ಆತನಿಗೆ ಅಂದು ಹೊಳೆದಿರಲಿಲ್ಲ. ಆತನಲ್ಲಿ ಆ ವಿಚಾರ ಇನ್ನೂ ಅಷ್ಟು ಮೂರ್ತಸ್ವರೂಪವನ್ನು ತಳೆದಿರಲಿಲ್ಲ. ಪ್ರಭುದೇವರು ಕಲ್ಯಾಣಕ್ಕೆ ಬಂದ ತರುವಾಯ ಅವರೊಡನೆ ನಡೆದ ವಿಚಾರ ಮಂಥನದಿಂದ ಅಂಥ ಸಮಾಜರಚನೆಯ ಆದರ್ಶವೂ ಅದರ ಸಾಧನಗಳೂ ನಿಶ್ಚಯಿಸಲ್ಪಟ್ಟವು. ಮತ್ತು ಆ ಮೇರೆಗೆ ಪ್ರತ್ಯಕ್ಷ ಕಾರ್ಯವು ಪ್ರಾರಂಭವಾಯಿತು.

ಈ ಸಂದರ್ಭದಲ್ಲಿ ಇನ್ನೊಂದು ವಿಷಯವನ್ನು ನಾವು ಅರಿಯುವದಗತ್ಯ, ಭಗವಂತನು ಸರ್ವಾಂತರ್ಯಾಮಿ - ಸರ್ವವ್ಯಾಪಿ ಎಂಬುದನ್ನು ಬಸವಣ್ಣನು ಅರಿತಿದ್ದ ಉದಕದೊಳಗಣ ಕಿಚ್ಚಿನಂತೆ' ಸಸಿಯೊಳಗಣ ರಸದ ರುಚಿಯಂತೆ ನನೆಯೊಳಗಣ ಪರಿಮಳದಂತೆ ಆತನು ಇರುವ ಎಂಬುದನ್ನು ಬಸವಣ್ಣನು ಬಲ್ಲ, ಆದರೆ ಪ್ರಬಲವಾದ ಪೂರ್ವಸಂಸ್ಕಾರಗಳ ಫಲವಾಗಿಯೂ ಹಲವಾರು ವರುಷಗ ನಿಕಟಸಾನ್ನಿಧ್ಯದ ಫಲವಾಗಿಯೂ ಸಂಗನ ವಿಗ್ರಹ, ಸಂಗನ ನಾಮ ಸಂಗಮಕ್ಷೇತ್ರ ಇವುಗಳ ಬಗೆಗೆ ಆತನು ತುಂಬ ಪ್ರೀತಿ ಆದರಗಳನ್ನು ತಳೆದಿದ್ದ. ಆದುದರಿಂದ ಆ ಪಾವನ ಪರಿಸರದಿಂದ ತೆರಳಬೇಕಾಗಿ ಬಂದಾಗಿ ಆತನಿಗೆ ಸ್ವಾಭಾವಿಕವಾಗಿ ಬಹಳ ವ್ಯಸನವಾಯಿತು. ಅದು ಸಂಗನ ಅಗಲಿಕೆಯೇ ಎಂದೆನಿಸಿ, ಬಸವಣ್ಣನು ತುಂಬ ವ್ಯಥಿತನಾದ. ಅತಿಯಾಗಿ ಕಳವಳಗೊಂಡು ಅವನು ಸಂಗನ ಎದುರು ತನ್ನ ದುಗುಡವನ್ನು ಈ ರೀತಿ ತೋಡಿಕಂಡನು :
“ದೇವದೇವ, ಸಂಗ! ಕೆಟ್ಟ ಕೆಟ್ಟೆ.. ಪರಮಬಂಧುವೇ, ಪ್ರಾಣವೇ! ಬೆಳುದಿಂಗಳೇಕೆ, ಬಿಸುಲೇಕೆ? ಅಮೃತವೇಕೆ, ವಿಷವೇಕೆ?... ನೀನೇಕೆ, ಈ ನುಡಿಯೇಕೆ? ಹೊದ್ದಿ ಹರಂ ಹೋಗೆಂಬರೆ? ಸಾರ್ದರಂ ಸೈರಿಸೆಂಬರೆ? ನಂಬಿದವರ ಗೋಣಂ ಕೊಯ್ದರೆ? ಶಿಶುವನಿರಿವರೆ?