ಈ ಪುಟವನ್ನು ಪ್ರಕಟಿಸಲಾಗಿದೆ

೧೦೨

ವಿಜ್ಞಾನದ ವಿಷ


"ಇರಲಿ ಬಿಡು, ಯಾಕ ಅಳೋದು ! ಎಲ್ಲಾ ಮಾಡಸೋ೦ವ ಪರಮಾತ್ಮ! ನಾವು, ನೀವು ಯಾರು? ಅದರ ಇಂವ ಭಾಂವಿ ಯಾಕ ಬೀಳಬೇಕಾಗಿತ್ತು? ಬೀಡಿ ಕಾರಖಾನ್ಯಾಗಿನ ನೌಕರಿ ಹೋದರ, ಮತ್ತೆಲಾ'ದರೂ ನೋಡಬೇಕಾಗಿತ್ತು? ಸಂಗಾಟಲೇ ಹೋಗಿ ಜೀವಾನs ಕೊಡಬೇಕೇನು?"

ಅವನ ಕೊನೆಯ ಮಾತು ಮುಗಿಯುವ ಮೊದಲೇ ಸುಬ್ಬಮ್ಮ ಅವನನ್ನು ಅಪ್ಪಿಕೊಂಡು ಹುಚ್ಛ ಹಿಡಿದವರಂತೆ ದೊಡ್ಡ ಧ್ವನಿ ತೆಗೆದು ಅಳತೊಡಗಿದಳು. ಕೂಡಿದ ಜನರಲ್ಲಿ ತನ್ನ ಸ್ಥಾನಮಾನಕ್ಕೆ ಕುಂದೆಲ್ಲಿ ಬರುವುದೋ ಎಂದು ಆ ಪೊಲಿಸನಿಗೆ ನಾಚಿಕೆ ತಾಗಿರಬೇಕು. ಅದರಿಂದಲೇ ಅವನು ಸುಬ್ಬಮ್ಮನನ್ನು ಹೊರಶಬ್ದಗಳಿಂದ ಸಾ೦ತ್ವನಗೊಳಿಸಿ, ಮತ್ತೆ ಕೈಯಲ್ಲಿ ಲಾಠಿಯನ್ನು ಹಿಡಿದು ಗೇಟಿನತ್ತ ನಡೆದ.

ಆಧಾರವಾಗಿ ನಿಂತ ಹವಾಲ್ದಾರ ದೂರಕ್ಕೆ ಹೋದರೂ ಸುಬ್ಬಮ್ಮನಿಗೆ ದುಃಖವೆನಿಸಲಿಲ್ಲ. ಅವಳ ಜೀವನಾಧಾರವಾಗಿದ್ದ ಮಗನೇ ನಿರುದ್ಯೋಗಿಯಾಗಿ ಭಾಂವಿ ಬಿದ್ದು ಸತ್ತುಹೋಗಿದ್ದ. ಆ ದುಃಖದ ಮುಂದೆ ಕ್ಷಣಕಾಲ ಸಂತೈಸುವವ ದೂರಹೋದ ದುಃಖ ಎಲ್ಲಿಯದು?

ಕುರುಡನು ಧರಿಸಿದ ಅಂಗಿಯ ಮೇಲೆ ಮಸಿ ಸುರುವಿ, 'ನಿನ್ನ ಅಂಗಿ ಕಪ್ಪಾಯಿತು.' ಎಂದು ಕೂಗಿದರೆ, ಕುರುಡನಿಗೆ ದುಃಖವೇ? ಕಣ್ಣಿಲ್ಲದ ದುಃಖದ ಮುಂದೆ, ಕರಿಯದು ಬಿಳಿಯದು--ಒಂದೇ ಅವನಿಗೆ.

ಮುದುಕಿ ಸುಬ್ಬಮ್ಮನೂ ಕಣ್ಣೊರಸಿಕೊಳ್ಳುತ್ತ ಗೇಟಿನ ಹತ್ತಿರ ಬಂದು ನಿಂತಳು. ಮುದುಕಿ ಎಂದು ಪೊಲಿಸರಾರೂ ಅವಳ ಗೋಜಿಗೆ ಹೋಗಲಿಲ್ಲ. ಸುಬ್ಬಮ್ಮ ಗೇಟಿಗೆ ಬಂದ ಮೂರು ನಿಮಿಷಗಳಲ್ಲಿಯೇ ಎರಡು ಮೂರು ಕಾರುಗಳು ಬಂದುವು. ಮೂರನೆಯ ಕಾರಿಗೆ ಮೇಲುಹೊದಿಕೆ ಇರಲಿಲ್ಲ. ಆ ಕಾರಿನಲ್ಲಿಯೇ ರಾಜು ವಿರಾಜಮಾನನಾಗಿದ್ದ. ರಾಜನ ಕಾರು ಗೇಟಿಗೆ ಬರುತ್ತಲೂ ನಗರಸಭೆಯ ಪ್ರತಿಷ್ಠಿತ ಜನ ಅವನಿಗೆ ಹೂವಿನ ಹಾರ ಹಾಕಿ ಕೆಳಗಿಳಿಸಿ ಅವನನ್ನು ಸಭಾಭವನದತ್ತ ಕರೆದುಕೊಂಡು ನಡೆದರು. ಆಗಲೂ ಮುದುಕಿ ಸುಬ್ಬಮ್ಮ ಗೇಟಿನ ಬಳಿಯಲ್ಲಿಯೇ ನಿಂತಿದ್ದಳು. ರಾಜ ಹಾದು ಹೋಗುವಾಗ, ಅವನನ್ನು ಸುಬ್ಬಮ್ಮ ತೀರ ಹತ್ತಿರದಿಂದ ನೋಡಿದಳು.