ಈ ಪುಟವನ್ನು ಪ್ರಕಟಿಸಲಾಗಿದೆ

೧೬೧

೧೮ನೆಯ ಪ್ರಕರಣ

ಒಳಸಂಚು

ಬಾದಶಹನು ಕಳಿಸಿದ ಇಬ್ಬರೂ ವಕೀಲರಿಗೆ ಇರಲಿಕ್ಕೆ ಕುಂಜವನವು ಸಾಲುವಂತಿದ್ದಿಲ್ಲ; ಆದ್ದರಿಂದ ರಾಮರಾಜನು ಖಾನಖನಾನ ಮಹಮೂದಖಾನನಿಗೆ ಬೇರೆ ಸ್ಥಳವನ್ನು ಇರಲಿಕ್ಕೆ ಕೊಟ್ಟು, ರಣಮಸ್ತಖಾನನನ್ನು ಕುಂಜವನದಲ್ಲಿಯೇ ಇರಗೊಟ್ಟನು. ಇದೊಂದು ಪರಿಯಿಂದ ರಣಮಸ್ತಖಾನನಿಗೆ ಯಾರ ಉಪದ್ರವವೂ ಇಲ್ಲದೆ ಸ್ವತಂತ್ರದಿಂದ ಇರಲಿಕ್ಕೆ ಅನುಕೂಲವಾಯಿತು; ಆದರೆ ವಿಜಾಪುರದಿಂದ ಬಂದಂದಿನಿಂದ ಆತನ ವೃತ್ತಿಯಲ್ಲಿ ಬಹಳ ಹೆಚ್ಚು ಕಡಿಮೆಯಾಗಿತ್ತು. ರಣಮಸ್ತಖಾನನು ವಿಜಾಪುರದಿಂದ ಬಂದಕೂಡಲೆ ಆತನನ್ನು ರಾಮರಾಜನು ಬುದ್ಧಿ ಪೂರ್ವಾಕವಾಗಿ ಒಮ್ಮೆ ತನ್ನ ಬಳಿಗೆ ಕರೆಸಿಕೊಂಡು, ಏಕಾಂತದಲ್ಲಿ ಆತನನ್ನು ಕುರಿತು-ಆದ ಮಾತಿನ ಸಲುವಾಗಿ ನಾನು ಎಷ್ಟು ಮಾತ್ರವೂ ಮನಸ್ಸಿನಲ್ಲಿ ಸಿಟ್ಟು ಹಿಡಿದಿರುವದಿಲ್ಲ. ನಿಮ್ಮ ಈಗಿನ ವಯಸ್ಸಿನಲ್ಲಿ ಇಂಥ ತಪ್ಪುಗಳು ಆಗತಕ್ಕವೇ; ಆದ್ದರಿಂದ ನಾನು ಎಲ್ಲ ಸಂಗತಿಗಳನ್ನು ಮರೆತು ಬಿಟ್ಟಂತೆ, ನೀವೂ ಮರೆತು ಬಿಡಿರಿ. ನಿಮ್ಮ ವಿಷಯವಾಗಿ ನನ್ನ ಅಭಿಪ್ರಾಯವೇನಿರುತ್ತದೆಂಬದನ್ನು ನಾನು ಬಾದಶಹರಿಗೆ ಬರೆದು ತಿಳಿಸಿದ್ದೆನು. ಅವರು ನನ್ನ ಪತ್ರದಂತೆ ನಿಮ್ಮ ಮದುವೆಯನ್ನು ಮಾಡಿಕೊಡತಕ್ಕದ್ದಿತ್ತು. ನಿಮ್ಮ ಅಧಿಕಾರವನ್ನಾದರೂ ಹೆಚ್ಚಿಸ ತಕ್ಕದ್ದಿತ್ತು; ಆದರೆ ಹಾಗೆ ಮಾಡದೆಯಿದದ್ದಕ್ಕಾಗಿ ನನಗೆ ಬಹಳ ಆಶ್ಚರ್ಯವಾಗಿದೆ. ನನ್ನ ಪದರಿನಲ್ಲಿ ನೀವು ಇರುತ್ತಿದ್ದರೆ ನಿಶ್ಚಯವಾಗಿ ನಿಮ್ಮ ಲಗ್ನವನ್ನು ಮಾಡಿಕೊಟ್ಟು ನಿಮ್ಮ ಪದವಿಯನ್ನು ಹೆಚ್ಚಿಸುತ್ತಿದ್ದೆನು. ಯಾಕೆಂದರೆ, ರಾಜಕಾರಣದ ದೃಷ್ಟಿಯಿಂದ ನಿಮ್ಮ ನಡೆತೆಯು ಯೋಗ್ಯವಲ್ಲದಿದ್ದರೂ ರಾಜ್ಯದ ಗೌರವ ಕಾಯುವ ದೃಷ್ಟಿಯಿಂದ ಅದು ಯೋಗ್ಯವಾದದ್ದೇ ಇತ್ತೆಂಬದನ್ನು ನಾನು ಬಲ್ಲೆನು. ನಿಮಗೆ ಜಾಗರೂಕರಾಗಿರುವ ಬಗ್ಗೆ ಸೂಚನೆ ಕೊಡುವದಕ್ಕಿಂತ ಹೆಚ್ಚಿನ ಕೆಲಸವನ್ನೇನು ಬಾದಶಹರು ಮಾಡತಕ್ಕದ್ದಿದ್ದಿಲ್ಲ. ನಾನು ನಿಮ್ಮ ವಯಸ್ಸಿನಲ್ಲಿರುವಾಗ ನನ್ನ ಸ್ವಭಾವವು ನಿಮ್ಮಂತೆಯೇ ಇತ್ತು ; ಆದರಿಂದ ನೀವು ಮನಸ್ಸಿನಲ್ಲಿ