ಈ ಪುಟವನ್ನು ಪ್ರಕಟಿಸಲಾಗಿದೆ

೪೦

ಕನ್ನಡಿಗರ ಕರ್ಮಕಥೆ

ಏನೋ ಒಟಗುಟ್ಟುವಳು, ಒಮ್ಮೆ ಆಕೆಯ ತುಟಿಗಳಷ್ಟೇ ಅಲ್ಲಾಡುವವು. ಒಮ್ಮೆ ಆಕೆಯು ಅತ್ತಹಾಗೆ ಮಾಡುವಳು. ಒಮ್ಮೆ ನಗುವಳು. ಹೀಗಾಗುತ್ತಾಗುತ್ತ ಆಕೆಯ ಮುಖದಲ್ಲಿ ಭಯದ ಚಿಹ್ನವು ತೋರಹತ್ತಿತು. ಆಕೆಯು ಪಲ್ಲಂಗದ ತುದಿಯನ್ನು ಗಟ್ಟಿಯಾಗಿ ಹಿಡಿಯಹತ್ತಿದಳು. ಆಮೇಲೆ ಆಕೆಯು ಒಮ್ಮಿಂದೊಮ್ಮೆ ಚಿಟ್ಟಿ ಚಿಟ್ಟನೆ ಚೀರುತ್ತ ದೊಪ್ಪನೆ ಮಂಚದ ಕೆಳಗೆ ಕಡಕೊಂಡು ಬಿದ್ದಳು. ಆಕೆಗೆ ಚೀರಿದ್ದು ಮಾರ್ಜೀನೆಯ ಕಿವಿಗೆ ಬೀಳಲು, ಆಕೆಯು ಗಾಬರಿಯಾಗಿ ಮೆಹರ್ಜಾನಳ ಕೋಣೆಯೊಳಗೆ ಬಂದಳು. ಮಾರ್ಜೀನೆಯು ರಾಮರಾಜನನ್ನು ಅದೇ ಕಳಿಸಿ ಬರುತ್ತಿದ್ದಳು. ಆಕೆಯ ಪಲ್ಲಂಗದ ಕೆಳಗೆ ಅಸ್ತವ್ಯಸ್ತವಾಗಿ ಬಿದ್ದಿದ್ದ ಮೆಹರ್ಜಾನಳನ್ನು ನೋಡಿ ವ್ಯಸನಪಟ್ಟು- "ಅಮ್ಮಾ, ಮೆಹರ್ಜಾನ ಹೀಗೆ ಯಾಕೆ ಮಾಡುವೆಯಮ್ಮಾ" ಎಂದು ಮೆಹರ್ಜಾನಳನ್ನು ಹೆಸರುಗೊಂಡು ಕರೆಯುತ್ತ ಮಮತೆಯಿಂದ ಉಪಚರಿಸಹತ್ತಿದಳು. ಆಕೆಯು, ಬಳಿಯಲ್ಲಿರುವ ತಂಬಿಗೆಯೊಳಗಿನ ನೀರನ್ನು ನೆತ್ತಿಗೆ ತಟ್ಟಿ ಕಣ್ಣಿಗೆ ಹಚ್ಚಿ ಮೆಹರ್ಜಾನಳನ್ನು ಎಚ್ಚರಗೊಳಿಸುತ್ತಿದ್ದಳು. ಅಷ್ಟರಲ್ಲಿ ಮೆಹೆರ್ಜಾನಳು ಮತ್ತೆ ಚಿಟ್ಟನೆ ಚೀರಿ "ಬೇಡಿರಿ, ಹೀಗೆ ನನ್ನನ್ನು ಕೊಲ್ಲ......" ಎಂದು ಒಟಗುಟ್ಟುತ್ತ ಮಾರ್ಜೀನೆಯನ್ನು ಕಸುವಿನಿಂದ ಅಪ್ಪಿಕೊಂಡಳು. ಸುಕುಮಾರಿಯಾದ ಮೆಹರ್ಜಾನಳಿಗೆ ಇಷ್ಟು ಕಸುವು ಎಲ್ಲಿಂದ ಬಂದಿರಬಹುದೆಂದು ಮಾರ್ಜೀನೆಗೆ ಆಶ್ಚರ್ಯವಾಯಿತು. ಆಕೆಯ ಮೆಹರ್ಜಾನಳನ್ನು ಒಂದೇಸಮನೆ ಹೆಸರುಗೊಂಡು ಕೂಗಿ ಎಚ್ಚರಗೊಳಿಸಿದ್ದಳು. ಮೆಹರ್ಜಾನಳ ಮೇಲೆ ಮಾರ್ಜೀನೆಯ ಪ್ರೀತಿಯು ಎಷ್ಟಿತೆಂಬುದನ್ನು ವಾಚಕರು ಬಲ್ಲರು. ಹೊಟ್ಟೆಯ ಮಗಳಂತೆ ಇದ್ದ ಮೆಹರ್ಜಾನಳು ಹೀಗೆ ಮಾಡುವದನ್ನು ನೋಡಿ ಮಾರ್ಜೀನೆಯು ಬಹು ದುಃಖಿತಳಾದಳು. ಆಕೆಯ ಕಣ್ಣೂಳಗಿಂದ ಒಂದೇಸಮನೆ ನೀರುಗಳು ಹೋಗಹತ್ತಿದವು, ಯಾವನೊಬ್ಬ ಸೇವಕನನ್ನು ಕರೆಯಬೇಕೆಂಬ ಎಚ್ಚರವು ಸಹ ಇಷ್ಟು ಹೊತ್ತಿನತನಕ ಆಕೆಗೆ ಆಗಿದ್ದಿಲ್ಲ, ಇನ್ನು ಮೆಹರ್ಜಾನಳನ್ನು ಹಾಗೆ ಎಚ್ಚರಗೊಳಿಸಬೇಕೆಂದು ತಿಳಿಯದಿದ್ದರಿಂದ ಆಕೆಯು ಗಟ್ಟಿಯಾಗಿ "ಧನಮಲ್ಲ, ಧನಮಲ್ಲ" ಎಂದು ಕೂಗಿದಳು. ಕೂಡಲೆ ಯಮದೂತನಂತೆ ಭಯಂಕರವಾಗಿ ತೋರುವ ಧನಮಲ್ಲನು ಎದುರಿಗೆ ಬಂದು ನಿಂತನು. ಆತನು ಮಾರ್ಜೀನೆಯನ್ನೂ, ಮೆಹರ್ಜಾನಳನ್ನೂ ನೋಡಿ, ಯಾಕೆ ಕರೆದೆಯೆಂದು ಮಾರ್ಜೀನೆಯನ್ನು ಸನ್ನೆಮಾಡಿ ಕೇಳಿದನು. ಆಗ ಮಾರ್ಜೀನೆಯು-ಯಾಕೆ ಕರೆದೆಯೆಂದು ಏನು ಕೇಳು ಕಣ್ಣಿಗೆ ಕಾಣುವದಿಲ್ಲವೇ ? ಹಿಡಿ, ಇವರನ್ನು ಎತ್ತಿ ಪಲ್ಲಂಗದ ಮೇಲೆ ಮಲಗಿಸೋಣ. ನಿದ್ದೆಯಲ್ಲೇನು ಹೆದರಿದರೋ, ಕೆಟ್ಟ ಕನಸು ಬಿದ್ದಿತೋ