ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ/ನಾಸದೀಯ ಸೂಕ್ತ

ನಾಸದೀಯ ಸೂಕ್ತ : ಋಗ್ವೇದದ ಹತ್ತನೆಯ ಮಂಡಲದಲ್ಲಿ ಉಕ್ತವಾಗಿರುವ ಒಂದುನೂರ ಇಪ್ಪತ್ತೊಂಬತ್ತನೆಯ ಸೂಕ್ತ. ಈ ಸೂಕ್ತ ಪರತತ್ತ್ವಾನ್ವೇಷಣೆಯಲ್ಲಿ ತೊಡಗಿ ತನ್ನ ಚಿಂತನೆಗಳಲ್ಲಿ ನ ಅಸತ್ ಇತ್ಯಾದಿ ನಿಷೇಧ ರೂಪದ ಪ್ರಾರಂಭವುಳ್ಳದ್ದಾಗಿ ನಾಸದೀಯ ಸೂಕ್ತವೆನಿಸಿಕೊಂಡಿದೆ. ಏಕೈಕವಾಗಿರುವ ಪರಾತ್ಪರ ವಸ್ತುವೇ ತತ್ತ್ವವಾಗಿದ್ದಿರಬಹುದೆಂಬ ನಂಬಿಕೆಯನ್ನು ಈ ಸೂಕ್ತ ಕಡೆಯ ಭಾಗಗಳಲ್ಲಿ ವ್ಯಕ್ತಪಡಿಸುತ್ತದೆ. ಪರಮೇಷ್ಠೀ ಎಂಬ ಹೆಸರುಳ್ಳ ಪ್ರಜಾಪತಿಯೇ ಈ ಸೂಕ್ತಕ್ಕೆ ಸಂಬಂಧಪಟ್ಟ ಋಷಿ. ಇದರಲ್ಲಿ ಆಕಾಶಾದಿಗಳ ಮತ್ತು ಸೃಷ್ಟಿ ಪ್ರಳಯ ಮುಂತಾದವುಗಳ ವಿಚಾರವಿರುವುದರಿಂದ ಅವುಗಳ ಕರ್ತೃವಾದ ಪರಮಾತ್ಮನೇ ದೇವತೆಯೆಂದು ಸಾಯಣ ಭಾಷ್ಯದಲ್ಲಿ ವಿವರಣೆ ಇದೆ.

ಇದರಲ್ಲಿ ಏಳು ಋಕ್ಕುಗಳಿವೆ. ಮೊದಲನೆಯ ಎರಡು ಋಕ್ಕುಗಳಲ್ಲಿ ಮತ್ತು ಮೂರನೆಯದರ ಪೂರ್ವಾರ್ಧದಲ್ಲಿ ಜಗತ್ತಿನ ಸೃಷ್ಟಿಗೆ ಮುಂಚಿನ ಸ್ಥಿತಿಯ ವರ್ಣನೆ ಇದೆ. ಆಗ ಇಂದ್ರಿಯಗಳಿಗೆ ಗೋಚರವಾಗದ ಅಸತ್ ಮತ್ತು ಗೋಚರವಾಗುವ ಸತ್-ಇವುಗಳಾಗಲಿ, ಲೋಕ ಅಂತರಿಕ್ಷಗಳಾಗಲಿ ಇರಲಿಲ್ಲ. ಮೃತ್ಯು ಅಮರಣಗಳಿರಲಿಲ್ಲ. ರಾತ್ರಿ ಹಗಲುಗಳ ಪರಿಜ್ಞಾನವಿರಲಿಲ್ಲ. ಆ ಏಕೈಕ ವಸ್ತು ಮಾತ್ರ ಶ್ವಾಸೋಚ್ಛ್ವಾಸರಹಿತವಾಗಿ ಸ್ವಸಾಮಥ್ರ್ಯದಿಂದ ಜೀವಂತವಾಗಿದ್ದಿತು.

ಅನೀದವಾತಂ ಸ್ವಧಯಾ ತದೇಕಂ ತಸ್ಮಾದ್ಧಾನ್ಯನ್ನ ಪರಃ ಕಿಂ ಚನಾಸ

ಆ ವಸ್ತುವಲ್ಲದೆ ಆಗ ಬೇರೆ ಏನೂ ಇರಲಿಲ್ಲ. ಯಾವುದನ್ನೂ ತಿಳಿಯಲು ಅಸಾಧ್ಯವಾಗುವಂತೆ ಅಂಧಕಾರಮಯ ಕತ್ತಲೋ ಸರ್ವವ್ಯಾಪಿಯಾದ ಉದಕವೋ ಇದ್ದಿರಬೇಕು-ಇವೇ ಮುಂತಾದವು ವರ್ಣನೆಯ ವಿಷಯಗಳು. ಅಂಥ ಸ್ಥಿತಿಯಲ್ಲಿ ಏಕೈಕವಾಗಿದ್ದ ಒಂದು ಅವ್ಯಕ್ತಸ್ವರೂಪ ತಪೋಮಹಿಮೆಯಿಂದ ಜಗತ್ತಾಗಿ ಪರಿಣಮಿಸಿತೆಂಬುದೂ ಮಾನಸಿಕ ಕ್ರಿಯೆಯನ್ನು ಬೀಜರೂಪವಾಗಿ ಪಟಡದ ಸೃಷ್ಟಿಸಂಕಲ್ಪದ ಉತ್ಪತ್ತಿಯೂ ಅನಂತರ ಬಂದ ಸತ್, ಸೃಷ್ಟಿಗೆ ಮುಂಚಿನ ಅವ್ಯಕ್ತಸ್ವರೂಪದ ಅಸತ್ತಿನೊಡನೆ ಸಂಬಂಧವುಳ್ಳದ್ದೆಂಬುದನ್ನು ಋಷಿಗಳು ಬಲ್ಲರೆಂಬುದೂ ಮೂರನೆಯ ಋಕ್ಕಿನ ಉತ್ತರಾರ್ಧದ ಮತ್ತು ನಾಲ್ಕನೆಯದರ ವಿಷಯಗಳು. ಕೆಳಗೆ, ಮೇಲೆ, ಅಡ್ಡಲಾಗೆ ಎಲ್ಲೆಲ್ಲೂ ಅತಿ ವೇಗದಿಂದ ನಡೆದ ಸೃಷ್ಟಿಕಾರ್ಯ ಪ್ರಾರಂಭ, ಭೋಗ್ಯಗಳು ಮತ್ತು ಅವುಗಳಲ್ಲಿ ಭೋಕ್ತøಗಳು ಶ್ರೇಷ್ಠವೆಂಬ ವಿಚಾರ-ಇವು ಐದನೆಯ ಋಕ್ಕಿನಲ್ಲಿ ಪ್ರತಿಪಾದಿತವಾಗಿವೆ. ಆರನೆಯದರಲ್ಲಿ ಜಗತ್ತಿನ ಸೃಷ್ಟಿಯ ರಹಸ್ಯವನ್ನು ಯಾರು ಅರಿತಿರುವರೆಂಬುದನ್ನು ಕುರಿತ ಸಂಶಯ ವ್ಯಕ್ತಗೊಂಡು ದೇವತೆಗಳು ಸೃಷ್ಟಿಯ ತರುವಾಯ ಬಂದವರಾದ್ದರಿಂದ ಆ ರಹಸ್ಯವನ್ನು ನಿಜವಾಗಿ ಬಲ್ಲವರು ಯಾರೆಂಬ ಸಂಶಯ ಪುನರುಕ್ತವಾಗಿದೆ. ಸ್ವಪ್ರಕಾಶದಲ್ಲಿ ಬೆಳಗುತ್ತಿರುವ ಪರಮಾತ್ಮನಿಗೆ ಸೃಷ್ಟಿಯ ರಹಸ್ಯ ತಿಳಿದೇ ಇರಬೇಕೆಂಬುದೂ ಏಳನೆಯ ಋಕ್ಕಿನಲ್ಲಿ ಕಂಡು ಬರುವ ಚಿಂತನೆಗಳು.

ಅನೇಕ ದೇವತೆಗಳ ಆರಾಧನೆಯಲ್ಲಿ ಆಸಕ್ತಿಯನ್ನು ತೋರಿಸಿದ ಋಗ್ವೇದ ಮತಧರ್ಮ ಕ್ರಮೇಣ ಏಕದೇವತಾವಾದದ ಮೂಲಕ ಏಕತತ್ತಾನ್ವೇಷಣೆಯಲ್ಲಿ ಪರಿಣಮಿಸಿದೆಯೆಂಬುದು ವಿದ್ವಾಂಸರ ಅಭಿಪ್ರಾಯ ಈ ತತ್ತ್ವಾನ್ವೇಷಣೆ ಹತ್ತನೆಯ ಮಂಡಲದ ಕೆಲವು ಸೂಕ್ತಗಳಲ್ಲಿ, ತತ್ರಾಪಿ ನಾಸದೀಯ ಸೂಕ್ತದಲ್ಲಿ ವಿಶೇಷವಾಗಿ ಕಂಡುಬರುತ್ತದೆ. ಎಲ್ಲ ವಿಶ್ವವೂ ಒಂದೇ ಒಂದು ಮೂಲದಿಂದ ಹೊರಹೊರಟಿವೆಯೆಂದು ಪ್ರತಿಪಾದಿಸುವ ಏಕತತ್ತ್ವವಾದ ಮುಂದೆ ಉಪನಿಷತ್ತುಗಳಲ್ಲಿ ವಿಸ್ತಾರವಾಗಿ ಪ್ರತಿಪಾದಿತವಾಗಿದೆ; ಆದರೆ ವಿಶ್ವಾತೀತವೂ ವ್ಯಕ್ತ್ಯತೀತವೂ ಆದ ಒಂದು ಆಧ್ಯಾತ್ಮಿಕ ತತ್ತ್ವದ ಅನ್ವೇಷಣೆಯ ರೂಪದಲ್ಲಿ ಆ ವಾದದ ಬೇರುಗಳು ಈ ಸೂಕ್ತದಲ್ಲಿ ಕಂಡುಬರುತ್ತವೆ. ಆದ್ದರಿಂದ ಇದು ಭಾರತೀಯ ತತ್ತ್ವ ಚಿಂತನೆಯಲ್ಲಿ ಪುಷ್ಪಪ್ರಾಯ ಎಂದು ಪ್ರಶಂಸೆ ಪಡೆದಿದೆ. ಏಕತತ್ತ್ವವಾದದ ತಿರುಳನ್ನೊಳಗೊಂಡಿರುವ ಈ ಸೂಕ್ತ ವಿಶ್ವಸಾಹಿತ್ಯಕ್ಕೆ ಸೇರಿದೆಯೆಂದು ಹಿರಿಯಣ್ಣನವರು ಅಭಿಪ್ರಾಯ ಪಟ್ಟಿದ್ದಾರೆ. (ಬಿ.ಕೆ.ಎಸ್.)

ಪೂರಕ ಮಾಹಿತಿ ಸಂಪಾದಿಸಿ

  • (ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶದಲ್ಲಿ - ಇಲ್ಲದೇ ಇರುವ ಈ ಭಾಗವನ್ನು ಓದುಗರಿಗಾಗಿ ಸೇರಿಸಿದೆ)

ನಾಸದೀಯ ಸೂಕ್ತವನ್ನು ಕನ್ನಡಕ್ಕೆ ಕೆಲವರು ಪದ್ಯರೂಪದಲ್ಲಿಯೇ ಅನುವಾದಿಸಿದ್ದು; ಅರಳಿಮರದ ಖಾಸಗಿ ಸಂಗ್ರಹದಲ್ಲಿದ್ದ ಡಾ.ಎಚ್.ರಾಮಚಂದ್ರ ಸ್ವಾಮಿ ಅವರ ಅನುವಾದದ ಸಾರಾಂಶವನ್ನುಇಲ್ಲಿ ನೀಡಿದೆ:

  • ಸತ್ತೆಂಬುದು ಇರಲಿಲ್ಲ, ಅಸತ್ತೂ ಇರಲಿಲ್ಲ; ಲೋಕ, ನೀಲಿ ಆಕಾಶ, ಅವುಗಳಾಚೆ ಎಂಬುದೂ ಇರಲಿಲ್ಲ. ಅದನ್ನು ಯಾರು ಬಲ್ಲರು? ಯಾವ ಆಶ್ರಯದಲ್ಲಿ ಏನನ್ನು ಆಧರಿಸಿತ್ತು ಎಂದು. ಜಲಧಿಯು ಇತ್ತೆ? ಇಲ್ಲ. ||೧||


  • ಮೃತ್ಯುವು ಸಹ ಇರಲಿಲ್ಲ, ಅಮರತ್ವವಸಹ ಇರಲಿಲ್ಲ, ರಾತ್ರಿಹಗಲುಗಳ ಭೇದವು ಇರಲಿಲ್ಲ; ರಾತ್ರಿಹಗಲುಗಳು ಇನ್ನೂ ಹುಟ್ಟಿರಲೇ ಇಲ್ಲದಿರಲು ಅವುಹೇಗೆಇರುವುವು? ಆದಿಮೂಲವದೊಂದು ಉಸಿರಾಡುತಿತ್ತು: ||೨||


  • ಗಾಳಿಯೂ ಇಲ್ಲದೆ ಉಸಿರನ್ನು ಹೊರಸೂಸುತ್ತಿತ್ತು. ಅದರ ಹೊರತು ಬೇರೆ ಏನೂ ಇರಲಿಲ್ಲ ಈ ವಿಶ್ವದಲ್ಲಿ, ಎಲ್ಲವೂ ಕತ್ತಲೆಯ ಕಾಳಗರ್ಭದಲ್ಲಿ ಅಡಗಿತ್ತು. ಎಲ್ಲವೂ ಅವ್ಯಕ್ತ ಕಾಣದ ಸಾಗರವಾಗಿತ್ತು. ||೩||


  • ಅದು ಕಾರಣಶರೀರವು, ಈ ಲೋಕ ಆಗ ಹಾಗಿತ್ತು – ಹುಟ್ಟಿದೆಲ್ಲವೂ ಶೂನ್ಯದಿಂದ ಕವಿದಿತ್ತು. ಅದರ ತಪ- ಶಾಖ, ಅದರ ಇಚ್ಛೆಯಿಂದ ಮೇಲೆ ಎದ್ದಿತ್ತು ಅದು – ಆ ಕಾಳಗರ್ಭದ ಹೊರಗೆ ಮನಸ್ಸು ಬಂದಿತ್ತು. ||೪||


  • ಮನಸ್ಸು ಈ ಇಚ್ಛೆ ಎಲ್ಲಿಯದು, ಈ ಕಾಮವು- ಬಯಕೆ ಎಲ್ಲಿಯದು? ಅದರ ಎದೆಯಲ್ಲಿ ಆಡಗಿತ್ತು ಮೊಳೆತ ಬೀಜ; ನಶಿತ- ಕಾಣದ ಲೋಕದ ಬೀಜ, ಅದು ಕಾಲಚಕ್ರದ ಬೀಜ; ಋಷಿಯ ಹೃದಯದಲ್ಲಿ ಹೊಳೆದ ಮೊದಲ ಬೀಜ.||೫||


  • ಏನು ಇತ್ತೇ ಯೋಚನೆ? ಮೊಲ ಶಬ್ದ- ಸದ್ದು, ಮೇಲೆಂಬುದಿಲ್ಲ, ಕೆಳಗೆ ಎಂಬುದಿಲ್ಲ – ಯಾರು ಬಲ್ಲರು ಲೋಕಕಾರಣವು ಏನು ಎಂದು? ಭೋಕ್ತೃ ಪರವಾಗಿರಲು- ಬೇರೆಇರಲು ಭೋಗ್ಯವೂ ಬೇರೆ- ಪರವಾಗಿತ್ತು; ಅದೇ ಗರ್ಭಬೀಜವ ಕಟ್ಟಿಸಿತು, ಅದೆ ಗರ್ಭವನ್ನು ತಾಳಿತ್ತು. ||೬||


  • ಅದನ್ನು ತಿಳಿದವರು ಯಾರು? ಏಕೆಂದು, ಹೇಗೆಂದು? ಅದು ಹುಟ್ಟಿದ ನಂತರದಲ್ಲಿ ಬಂದವರು ದೇವರುಗಳು ಎನ್ನವಾಗ? ಮೂಲವಾದ ಅದರ ಹೊರತು ಅದರ ಅರಿವು? ಯಾರಿಗೆಇರಬಲ್ಲುದು? ||೭||

 

ಪರಿವಿಡಿ ಸಂಪಾದಿಸಿ

ಕನ್ನಡ ವಿಕಿಸೋರ್ಸ್ ಸಂಪಾದಿಸಿ

ಹಳಗನ್ನಡ ಸಾಹಿತ್ಯ| ಪಂಪಭಾರತ |ಜೈಮಿನಿ ಭಾರತ |ಕುಮಾರವ್ಯಾಸ ಭಾರತ | ನಾಡಗೀತೆಗಳು | ಜನಪದ ಸಾಹಿತ್ಯ | ಚಲನಚಿತ್ರ ಸಾಹಿತ್ಯ | ಚಲನಚಿತ್ರೇತರ ಸಾಹಿತ್ಯ |ಭಾವಗೀತೆಗಳು | ಭಕ್ತಿಗೀತೆಗಳು | ದಾಸ ಸಾಹಿತ್ಯ | ವಚನ ಸಾಹಿತ್ಯ | ತಾತ್ವಿಕ ಸಾಹಿತ್ಯ | ಭಗವದ್ಗೀತೆ |
ಮಂಕುತಿಮ್ಮನ ಕಗ್ಗ | ಶಿಶು ಸಾಹಿತ್ಯ | ಕವನ ಸಂಕಲನಗಳು | ಸಂಪ್ರದಾಯ ಗೀತೆಗಳು |ಮಂಕುತಿಮ್ಮನ ಕಗ್ಗ| |ಸರ್ವಜ್ಞ | ಜೀವನ ಚರಿತ್ರೆ|ಸ್ತೋತ್ರಗಳು|ಸಂಸ್ಕೃತ ಸಾಹಿತ್ಯ


ಉಲ್ಲೇಖ ಸಂಪಾದಿಸಿ

  1. ಎಚ್.ರಾಮಚಂದ್ರ ಸ್ವಾಮಿ ಅವರ ಅನುವಾದದ ಆಧಾರ: