ಪುಟ:ಅಕ್ಬರ್ ಬೀರಬಲ ಚಾತುರ್ಯವಾದ ವಿನೋದ ಕಥೆಗಳು.djvu/೮೨

ಈ ಪುಟವನ್ನು ಪ್ರಕಟಿಸಲಾಗಿದೆ
ಅಕಬರ ಬೀರಬಲ ಚಾತುರ್ಯವಾದ ವಿನೋದ ಕಥೆಗಳು.
೬೭

ಆಮೇಲೆ ಗಂಗಕವಿಯು ಮನಸ್ಸಿನಲ್ಲಿ ಯೋಚಿಸಿದ್ದೇನಂದರೆ; - "ಈ ಕಾರ್ಯಭಾರವಂತೂ ನನ್ನ ಮೇಲೆಯೇ ಬಿತ್ತು, ಇನ್ನು ವಿಲಂಬಮಾಡಿ ಪ್ರಯೋಜನವಿಲ್ಲ, ಈ ದಿವಸವೇ ಉದ್ಯುಕ್ತನಾಗಲಿಕ್ಕೇ ಬೇಕು ನಾಳಿಗೆ ಮಾಡಿದರೆ ತೀರಿತು ಎಂಬುವಹಾಗೆ ಇಲ್ಲ; ಯಾಕಂದರೆ ಈವಾರ್ತೆಯು ಕರ್ಣೋಪಕಣ೯ವಾಗಿ ಬೇಗಮ್ಮ ಜನರಿಗೆ ತಿಳಿದುಬಂದರೆ ಅವರು ಬಾದಶಹನನ್ನು ಮೊದಲಿನ ಸ್ಥಳದಿಂದ ಬೇರೆ ಕಡೆಗೆ ಇರಿಸಬಹುದು, ಹೀಗಾದರೆ ಯಾವಕಾರ್ಯವೂ ಸಾಧಿಸದೇ ಹೋದೀತು."

ಕವಿರಾಜನು ಈಪ್ರಕಾರ ಯೋಚಿಸಿದ್ದೂ ಸತ್ಯವೇ ಅರ್ಧರಾತ್ರಿಯ ಸಮಯದಲ್ಲಿ ಗಂಗಕವಿಯು ಆಪಾದಮಸ್ತಕವರಿಯಂತರ ಕೃಷ್ಣವಸ್ತ್ರಪರಿಧಾನ ಮಾಡಿಕೊಂಡು, ತಲೆಯಮೇಲೆ ಎರಡುಮೊಳ ಎತ್ತರವಾಗಿರುವ ಒಂದು ಶಿರಸ್ತ್ರಾಣವನ್ನು ಧರಿಸಿಕೊಂಡು, ಕೈಯೊಳಗೆ ಗಟ್ಟಿ ಮುಟ್ಟಾದ ಒಂದು ಡೊಣ್ಣೆಯನ್ನು ಹಿಡಿದುಕೊಂಡು, ಮತ್ತೊಂದು ಕೈಯಲ್ಲಿ ಜಪಮಾಲೆಯನ್ನು ತಕ್ಕೊಂಡು ಮನೆಬಿಟ್ಟು ಹೊರಬಿದ್ದನು. ಮಾರ್ಗದಲ್ಲಿ ಎಷ್ಟೋ ಜನರು ಹೋಗಿಬರುತ್ತಿದ್ದರು. ಅವರೆಲ್ಲರನ್ನು ತಪ್ಪಿಸುತ್ತ ಹೊರಟನು, ಗಾಡಾಂಧಕಾರದಲ್ಲಿ ಇವನ ವೇಷವು ರಾಕ್ಷಸನಂತೆಯೇ ಕಾಣುತ್ತಿತ್ತು; ಈಪ್ರಕಾರ ಅವನು ರಾಣಿವಾಸದ ಉದ್ಯಾನದ ಪರಿಯಂತರ ತಲುವಿದನು. ಮಹಾದ್ವಾರದಲ್ಲಿ ಕಾವಲುಗಾರರು ಎಚ್ಚರದಿಂದ ಕುಳಿತುಕೊಂಡಿದ್ದರು. ಅದನ್ನು ಕಂಡು ಒಂದುಗುಪ್ತ ದ್ವಾರದಿಂದ ಒಳಗೆ ಪ್ರವೇಶ ಮಾಡಿದನು. ಪ್ರಾತಃಕಾಲಕ್ಕೆ ಸ್ವಲ್ಪ ಸಮಯ ಉಳಿದಿತ್ತು. ಆಗ ಅವನು ಅಲ್ಲಿ ಅಲ್ಲಿ ನಿಂತುಕೊಳ್ಳುತ್ತ, ಅಡಗಿಕೊಳ್ಳುತ್ತ ದೀಪದಪ್ರಕಾಶವು ಕಾಣಬರುತ್ತಿದ್ದ ಅಂತಃಪುರದ ಸಮೀಪಕ್ಕೆ ಹೋಗಿ ನಿಂತುಕೊಂಡನು. ಆ ಸಮಯದಲ್ಲಿ ಬಾದಹನು ಎದ್ದು ಕುಳಿತುಕೊಂಡು ದಂತಧಾವನ ನಡೆಸಿದ್ದನು, ಅವನ ಎಡಬಲದಲ್ಲಿ ಚಂದ್ರವದನೆಯರಿಬ್ಬರು ಜಲವನ್ನು ಹಿಡಿದುಕೊಂಡು ಸಿದ್ಧರಾಗಿ ನಿಂತುಕೊಂಡಿದ್ದರು. ಒಬ್ಬಳು ಕರವಸ್ತ್ರವನ್ನು ಹಿಡಿದುಕೊಂಡು ನಿಂತಿದ್ದಳು. ಈ ವೈಭವವನ್ನೆಲ್ಲ ನೋಡಿ ಗಂಗಕವಿಯು ಮನಸ್ಸಿನಲ್ಲಿ ಅನ್ನುತ್ತಾನೆ. "ಅಹಹಾ ಇಂಥ ಸ್ವರ್ಗಸುಖವನ್ನು ಬಿಟ್ಟು ಬರುವದಕ್ಕೆ ಯಾವನ ಮನಸ್ಸು ಆದೀತು ? ಇಂಥಾ ಸುಖದಿಂದ ಬಾದಶಹನನ್ನು ದೂರೀಕರಿಸಿ ಕರೆದುಕೊಂಡು ಹೋಗುವದು ಸಹಾ ಪಾಪದಕೆಲಸವು. ಆದರೆ ನಾನು ಕರ್ತವ್ಯಬದ್ಧನಾಗಿದ್ದೇನೆ; ನನ್ನ ಹಣೇಬರಹದಲ್ಲಿ ಇದ್ದಂತೆ ಆಗಲಿ” ಎಂದು ನಿಶ್ಚಯಿಸಿಕೊಂಡು, ಗವಾಕ್ಷದ ಕೆಳಗೆ ನಿಂತುಕೊಂಡು ಬಾದಶಹನಿಗೆ ಕೇಳಬರುವಂತೆ ಉಚ್ಚಸ್ವರದಿಂದ -