ಈ ಪುಟವನ್ನು ಪರಿಶೀಲಿಸಲಾಗಿಲ್ಲ.
ನೋವು ೧೫೭
ಕಣಿವೇಹಳ್ಳಿಯ ಸುಡು ವಾತಾವರಣದತ್ತ ಕಪ್ಪು ಮೋಡಗಳು ದಾಳಿ ಇಡತೊಡಗಿದ ದಿನ, ವಿಷ್ಟುಮೂರ್ತಿಗಳೂ ಮೋಹನರಾಯರೂ ಬಂದು ತಲುಪಿದರು. ಅವರನ್ನು ಸ್ವಾಗತಿಸಲು ಮೋಟಾರು ರಸ್ತೆಯ ಬಳಿಗೆ ಬೀರನನ್ನೂ ಕರೆದುಕೊಂಡು ಗೋವಿಂದ ಹೋಗಿದ್ದ. "ನಾನೂ ಬರಲೆ?" ಎಂದು ಕೇಳಿದ್ದ ಗಜಾನನ. "ನಿನ್ನ ಹೋಟಲಿನ ಕಟ್ಟಡದ ತಳಿರು ತೋರಣ ಇತ್ಯಾದಿ ಮಾಡಿಸು. ಇಲ್ಲೇ ಇರು," ಎಂದಿದ್ದ ಗೋವಿಂದ. ಮೋಹನರಾಯರೊಂದಿಗೆ ಅವಳ ಕಿರಿಯ ಮಗನೂ ಬಂದಿದ್ದ. ಎಂಥ ಹಳ್ಳಿಯೊ, ಏನು ಕಥೆಯೊ ; ನೋಡಿಕೊಂಡು ಬಾ ಎಂದು ಕಳುಹಿಸಿದ್ದಳು ಅಕ್ಕ ಆರತಿ, ಉರಿಬಿಸಿಲಲ್ಲಿ ಎರಡು ಮೈಲು ನಡೆದು, ಮುಖವೆಲ್ಲ ಕೆಂಪಡರಿ, ಕಪ್ಪಿಟ್ಟು, ಹುಡುಗ ಹೆಣ್ಣಾಗಿದ್ದ. ದೊಡ್ಡಮ್ಮ ಬಂದವರನ್ನು ಆದರಿಸಿದರು. ಭಾಗೀರಥಿಗೆ ಅಡುಗೆ ಮನೆಯಲ್ಲಿ ಬಿಡುವಿಲ್ಲದ ದುಡಿಮೆ. ಶ್ರೀಪಾದ ಅಡ್ಡಿಯಾಗುತಾ ನೆಂದು ಕೆಲಸದವಳು ಅವನನ್ನು ಹೊರಕ್ಕೆ ಕರೆದೊಯ್ದಳು. ಆ ಮಧ್ಯೆಯೂ ಭಾಗೀರಥಿ ಒಮ್ಮೆ ಲಾಯರು ನೋಡಲು ಹೇಗಿರುವರೆಂದು ಹಣಿಕಿ ಹಾಕಿದಳು. ಬಾಲ್ಯದಲ್ಲಿ ತನ್ನ ತಂದೆಯ ಮನೆಯಲ್ಲಿ ಆಕೆ ನೋಡಿದ್ದ ಲಾಯರಿಗೂ ಇವರಿಗೂ ಇದ್ದ ಸಾಮ್ಯ ಕರಿಯ ಕೋಟು ಮತ್ತು ಬಿಳಿಯ ಪೇಟ ಮಾತ್ರ. ಹುಡುಗ ಕಣ್ಣಿಗೆ ಬಿದ್ದ. ಕೇಳಿಸಿದ ಮಾತುಕತೆಯಿಂದ ತಿಳಿಯಿತು ಆತ ವಕೀಲರ ಮಗ ಎಂಬುದು. ಅವನ ಹಾಗೆಯೇ ಇರುವಳೇನೋ ಪದ್ಮನ ಕೈ ಹಿಡಿಯುವ ದೊರೆಸಾನಿ? ಭಾಗೀರಥಿಗೆ ಸ್ವಲ್ಪ ನಿರಾಶೆಯಾಯಿತು. ಬಂದವರು ಅಲ್ಪೋಹಾರ ಸ್ವೀಕರಿಸಿದರು. ಅವರು ಕಣಿವೇಹಳ್ಳಿಗೆ ಕಾಲಿರಿಸುವ ವೇಳೆಗೆ ಕವಿಯತೊಡಗಿದ್ದ ಕಪ್ಪು ಮೋಡಗಳು ಈಗ ದಟ್ಟವಾಗಿದ್ದುವು. "ಶುಭ ಲಕ್ಷಣ.. ಬರುತ್ತಾ ಮಳೆ ತಂದಿರಿ."–ಎಂದರು ಶ್ರೀನಿವಾಸಯ್ಯ. ಗಂಗಾಧರಶಾಸ್ತ್ರಿಗಳ ಆಗಮನವಾಯಿತು. ಲಗ್ನಪತ್ರಿಕೆಗಳನ್ನು ಬರೆಸುವ ಕೆಲಸ ಆರಂಭವಾದಂತೆ ಟಪಟಪ ಎಂದುವು ನಾಲ್ಕು ಮಳೆಯ ಹನಿಗಳು. ವಿಷ್ಟುಮೂರ್ತಿಯವರು ತಾವಾಗಿಯೇ ಎತ್ತಿದ ವರದಕ್ಷಿಣೆಯ ಮಾತು; ಬಂಗಾರ.... ದೊಡ್ಡಮ್ಮ ಅಂದರು : "ಈ ಮನೆಗೆ ಸೊಸೆಯಾಗಿ ಬರುವ ಯಾವ ಹೆಣ್ಣೂ ತನ್ನೊಟ್ಟಿಗೆ ಆಸ್ತಿ ತರಬೇಕಾಗಿಲ್ಲ." ವಿಷ್ಟುಮೂರ್ತಿ ಚಂಗನೆದ್ದು ದೊಡ್ಡಮ್ಮನ ಪಾದಗಳಿಗೆ ನಮಿಸಿದರು : "ತಾಯಿ, ನೀವು ಕೇಳ್ತೀರಿ ಅಂತ ನಾವು ಕೊಡೋದಲ್ಲ. ಏನೋ ಇಷ್ಟು ವರ್ಷ ಸಾಕಿ
ದೊಡ್ಡದು ಮಾಡಿದ್ದಿ, ಇನ್ನೊಂದು ಮನೆಗೆ ಕೊಡುವಾಗ ನಮ್ಮ ಕೈಲಾದದ್ದು ಒಪ್ಪಿಸೋದು ನ್ಯಾಯ ಸಮ್ಮತ ಅಲ್ವೆ?" "
ದೊಡ್ಡಮ್ಮ ಸ್ಪಷ್ಟವಾಗಿ ಅಂದರು : "ನಮ್ಮ ಶೀನ ವರದಕ್ಷಿಣೆ ತಗೊಂಡಿಲ್ಲ, ಅವನ ಮಗ ಗೋಪಾಲ ತಗೊಂಡಿಲ್ಲ.