ಈ ಪುಟವನ್ನು ಪರಿಶೀಲಿಸಲಾಗಿಲ್ಲ.
ನೋವು
ಕಟ್ಟುಗಳನ್ನು ಬಿಚ್ಚಿ ಗಜಾನನ ಬೋರ್ಡನ್ನು ಹೊರಕ್ಕೆ ತೆಗೆದಿದ್ದ. ನಾಲ್ಕಾರು ಬಣ್ಣಗಳನ್ನು ಬಳಸಿ ಬರೆದಿದ್ದ ಅಕ್ಷರಗಳು : ಮೇಲೆ ||ಶ್ರೀ|| ದಪ್ಪಗೆ ವಿಘ್ನೇಶ್ವರ ಭವನ ಕಾಫೀ ಕ್ಲಬ್, ಕೆಳಗೆ ಮಾಲಿಕರ ಹೆಸರು. ಮೂಲೆಯಲ್ಲಿ 'ಪೇಂಟರ್: ವಿ. ಎಸ್. ರಾವ್.' “ ಚೆನ್ನಾಗಿದೆ," ಎಂದಿದ್ದ ಗೋವಿಂದ. " ಗಣೇಶ ಭವನದ ಬೋರ್ಡೂ ಇವನೇ ಬರೆದದ್ದು. ಶ್ರೀಪತಿ ಅಂತ." " ಸರಿ.” ಯಾವುದೋ ಸಾಮಾನು ತಗಲಿ ಬೋರ್ಡಿನ ಎಡ ಮೂಲೆಯಲ್ಲಿ ಸ್ವಲ್ಪ ತರಚಿಕೊಂಡಿತ್ತು, ಗಜಾನನ ಅದನ್ನು ಬೆರಳುಗಳಿಂದ ಮೃದುವಾಗಿ ಮುಟ್ಟಿದ್ದ, ಒಳಗಿನ ಕಸಿವಿಸಿಯನ್ನು ತೋರ್ಪಡಿಸದೆ. ಅದನ್ನು ಗಮನಿಸಿದ ಗೋವಿಂದ ಅಂದಿದ್ದ: " ಮೂಲೇಲಿ ಬಣ್ಣ ಹೋಗಿರೋದು ಕಾಣಿಸೋದಿಲ್ಲ. ಫಸ್ಟ್ ಕ್ಲಾಸಾಗಿದೆ ಬೋರ್ಡು. ತೂಗಹಾಕೋಕೆ ಕೊಂಡಿಗಳನ್ನೂ ಇಟ್ಟಿದ್ದಾನೆ. ಎಷ್ಟು ರೂಪಾಯಿ?" "ಗೊತ್ತಿಲ್ಲ. ವಿಷ್ಣುಮೂರ್ತಿ ಮಾವನೇ ಕೊಟ್ರು. ಹತು ರೂಪಾಯಂತ ಕಾಣುತ್ತೆ." - "ಹುಂ, ಕಾಸು ಖರ್ಚಿಲ್ದೆ ಸ್ವಂತದ್ದೊಂದು ಹೋಟ್ಲು ಮಾಡ್ಕೊಂಡೆ, ಅನ್ನು." " ಹೆಹ್ಹೆ " [ಮಾತನಾಡುತ್ತ ಗೋವಿಂದ ಆಗಾಗ್ಗೆ ಜಲಜೆಯತ್ತ ನೋಡಿದ್ದ. ತಾಯಿಯಾಗಿ ಮರಳಿದ ಮೇಲೆ ಕಣ್ಣಿಗೆ ಹಬ್ಬವಾಗಿದಾಳಲ್ಲಾ ಎನಿಸಿತ್ತು ಅವನಿಗೆ. ನಿರ್ಲಜ್ಜ ನೋಟದಿಂದ ಅವಳನ್ನು ನೋಡುವುದು ತಪ್ಪಲ್ಲ: ಇನ್ನು ಹೇಗೂ ಸಂಬಂಧಿಕರು ತಾನೆ – ಎಂದುಕೊಂಡಿದ್ದ. ತನ್ನ ಹೆಂಡತಿಯ ವಿಷಯದಲ್ಲಿ ಗೋವಿಂದ ತೋರಿದ ಆಸಕ್ತಿ ಗಜಾನನನ ಲಕ್ಷ್ಯಕ್ಕೆ ಬಂದಿರಲಿಲ್ಲ.] ..... ಈಗ ಗಜಾನನ ತನ್ನೆಷ್ಟಕ್ಕೆ ಗೊಣಗಿದ : " ಈ ಗೋವಿಂದರಾಯನಾದರೂ ಬಂದಿದ್ದರೆ......" ಗೋವಿಂದ ಬರಲು ಮತ್ತೂ ಒಂದು ಘಂಟೆ ಕಾಲ ಹಿಡಿಯಿತು. ಸರ್ವಾಲಂಕೃತನಾಗಿ ಪಾಯಜಾಮವನ್ನು ಒಂದು ಕೈಯಲ್ಲಿ ಮೇಲಕ್ಕೆತ್ತಿ ಇನ್ನೊಂದರಲ್ಲಿ ಕೊಡೆ ಹಿಡಿದು ಕೊಂಡು ಬಂದವನೇ, "ಇದೆಂಥಾ ಕಳೆ ಮುಖದ್ಮೇಲೆ? ಸ್ವಲ್ಪ ನಗೋದಕ್ಕೆ ಕಲಿ ಗಜಾನನ. ಹಾಲು ಬಂತೆ ? ಎಲ್ಲಿ ಬೀರ ?" ಎಂದ. ಬೀರನಾಗಲೇ ಎದ್ದು ನಿಂತಿದ್ದ. " ಹಾಲು ಬರ್ಲಿಲ್ಲ ಗೋವಿಂದರಾವ್, ಐದು ಘಂಟೆ ಆಗ್ಹೋಯ್ತು, ಪಟೇಲರೂ ಕಾಣೆ," ಎ೦ದ ಗಜಾನನ. " ಐದಾದರೆ ಏನೀಗ? ಮಳೆ ನಿಲ್ಲೋದು ಬೇಡ್ವೆ ಗಜಾನನ? ನೀನೂ ಸರಿ. ಏ ಬೀರ, ಈ ಕೊಡೇನ ತಗೊಂಡ್ಹೋಗಿ ಮನೇಲ್ಕೊಡು. ಎಲ್ಲಿ ಗಜಾನನ, ಇನ್ನೊಂದಿದೆಯಲ್ಲ ಅದನ್ನೂ ಕೊಟ್ಟಿರು. ಹ್ಞ. ವಾಪ್ಸು ಬರ್ತಾ ಲಕ್ಕನ ಮನೆಗ್ಹೋಗಿ ಹಾಲು ತಂದ್ಬಿಡು, ಬೀರ.” “ ಹೂಂ ಬುದ್ದಿ," ಎಂದ ಬೀರ.