ಈ ಪುಟವನ್ನು ಪರಿಶೀಲಿಸಲಾಗಿಲ್ಲ.
೧೬೬ ನೋವು
೨೨
ವಿಘ್ನೇಶ್ವರ ಭವನದಿಂದ ಹೊರಬಿದ್ದ ಶಾಮೇಗೌಡರು ಮನೆಯ ದಾರಿ ಹಿಡಿದರು. ಸೇವಕ ಕರಿಯ ಅವರನ್ನು ಹಿಂಬಾಲಿಸಿದ. ಸ್ವಲ್ಪ ದೂರದ ತನಕ ಖಿನ್ನತೆ ಅವರ ಮನಸನ್ನು ಆವರಿಸಿತು. ಯಾಕೆ ಬೇಸರ? ಅವರಿಗೆ ತಿಲಿಯದು. ಮನಸ್ಸು ಸುಮ್ಮನೆ ಚಡಪಡಿಸಿತು. ಅದು ಸಿಕ್ಕುಗಟ್ಟಿತು. ಗೌಡರು ನಿಧಾನವಾಗಿ ಯೋಚಿಸತೊಡಗಿ ಆ ಸಿಕ್ಕನ್ನು ಬಿಡಿಸಲು ಯತ್ನಿಸಿದರು. ಹೋಟೆಲಿನ ಪರಕೀಯ ವಾತಾವರಣದಲ್ಲಿ ಅನಿರೀಕ್ಷಿತವಾಗಿ ಶ್ರೀನಿವಾಸಯ್ಯ ತಮ್ಮ ಮಕ್ಕಳ ಮದುವೆಯ ವಿಷಯ ಹೇಳಿದರಲ್ಲ? ಹಿಂದೆಯಾದರೆ ಹೀಗಾಗುವುದು ಸಾಧ್ಯವಿತ್ತೆ? ತಮ್ಮ ಕಿವಿಗೆ ಒಂದು ಮಾತು ಹಾಕದೆ ಎಂದೂ ಮುಂದಕ್ಕೆ ಹೆಜ್ಜೆ ಇಟ್ಟ ವರಲ್ಲ ಅವರು. ಹಾಗೆ ನೋಡಿದರೆ ತಾವು ಮಾಡುತ್ತಿರುವುದೇನು ? ಮಗಳಿಗೆ ವರ ಗೊತ್ತಾಗಿದೆ. ಆ ವಿಷಯ ಮೊದಲು ತಿಳಿಸಿದೆನೆ ಅವರಿಗೆ ? ತಿಳಿಸಬಹುದಾಗಿತ್ತು. ಹಿಂದೆ ಮಾಡುತ್ತಿದ್ದ ಹಾಗೆ ಅಲ್ಲಿಗೆ ಹೋಗಿ ಹರಟೆ ಹೊಡೆದು ಬರಬಹುದಾಗಿತ್ತು. ಆದರೆ ಆ ರೀತಿ ನಡೆಯುವುದರಿಂದ ತಮ್ಮ ದೌರ್ಬಲ್ಯವನ್ನು ಸಾರಿದಂತಾಗುವುದಲ್ಲ? ಗೌಡರಿಗೆನಿಸಿತು: ಊಹೂಂ, ಆ ದಿನಗಳು ಕಳೆದೇ ಹೋದುವು. ಇನ್ನೆಂದೂ ಬರುವಂತಿಲ್ಲ. ಅವರ ದಾರಿ ಬೇರೆ, ತಮ್ಮ ದಾರಿ ಬೇರೆ. ಈ ಹೋಟೆಲು ಹಳ್ಳಿಗೆ ಬಂದ್ದದು ಒಳಿತಾಗಲಿಲ್ಲವೇನೊ. ಹಳ್ಳಿಯವರಿಗೆ ಇದು ಒಪ್ಪಿಗೆಯಿಲ್ಲ ಎಂದು ತಿಳಿಸಿ ಬಿಡಬಹುದಾಗಿತ್ತು. ಆ ಗಣೇಶ ಭವನದ ಯಜಮಾನ ಅಸಾಧಾರಣ ಮನುಷ್ಯ. ಒಳ್ಳೇ ನಾಜೂಕಯ್ಯ. ತನ್ನ ಹುಡುಗನಿಗೆ ಹೋಟೆಲೂ ಮಾಡಿಕೊಟ್ಟ ; ಮಗಳಿಗೊಬ್ಬ ಗಂಡನನ್ನೊ ದೊರಕಿಸಿಕೊಂಡ. ಗೋವಿಂದಪ್ಪನನ್ನು ಇನ್ನು ಹಿಡಿಯುವವರೇ ಇಲ್ಲ. ನಗರ ಅನ್ನೋದು ಈಗ ಅವನಿಗೆ ನಿಜವಾಗಿಯೂ ಮಾವನ ಮನೆಯೇ. ಆ ಲಾಯರಿ. ಮನುಷ್ಯ ತುಟಿ ಎರಡು ಮಾಡಲಿಲ್ಲ. ಮಾತನಾಡಿದರೆ ಫೀಸು ಕೊಡಬೇಕೇನೋ ! ಅಂತೂ ಮುನಿಯನ ಕೇಸು ವಾದಿಸಿ ಲಾಯರಿ ಅವನಲ್ಲವೆಂದಾಯ್ತು. ಹಾಗೇನಾದರೂ ಇದ್ದಿದ್ದ ಹೇಳದಿರುತ್ತಿದ್ದನೆ ಗೋವಿಂದಪ್ಪ? ಇನ್ನು ಈತ ಹಳ್ಳಿಯಲ್ಲಿ ಏನಾದರೊಂದು ಕಿತಾಪತಿ ಎಬ್ಬಿಸಿ ಈ ಲಾಯರಿಗೆ ಕೇಸು ಒದಗಿಸುವ ದಳ್ಳಾಳಿಯಾಗುತ್ತಾನೆ. ಇರಲಿ. ಸುಬ್ಬಿಯ ಮದುವೆಯಾಗಿ ತಮ್ಮ ಅಳಿಯ ವಕೀಲಿ ಪರೀಕ್ಷೆ ಪ್ಯಾಸ್ ಮಾಡಿ ಕಪ್ಪು ಕೋಟು ಹಾಕಿಕೊಳ್ಳತೊಡಗಿದಮೇಲೆ ಹೀಗೆಯೇ ಇದ್ದೀತೆ ಪರಿಸಿಥಥತಿ ?...... ...... ಸ್ವಲ್ಪ ದೂರ ಏನೂ ಯೋಚಿಸದೆ ಗೌಡರು ನಡೆದರು. ಕತ್ತಲು. ಹುಷಾರಾಗಿ ಕಾಲಿಡಬೇಕು. ಕೊಚ್ಚೆ, ಕೆಸರು. ಎಲ್ಲೆಡೆಗಳಲ್ಲೂ ಕಪ್ಪೆಗಳ ಸಹಸ್ರ ಕಂಠಗಳಿಂದ ಒಂದೇ ಧ್ವನಿ ಹೊರಡುತ್ತಿತ್ತು: