ಈ ಪುಟವನ್ನು ಪರಿಶೀಲಿಸಲಾಗಿಲ್ಲ.
೮ ನೋವು
"ಪೌರೋಹಿತ್ಯ ಮಾಡೋದೆಲ್ಲಿ, ಭೂಮಿ ಸಾಗುವಳಿ ಎಲ್ಲಿ! ಆಶ್ಚರ್ಯವಪ್ಪ." "ಮಂತ್ರ ಹೇಳಿ ಮಾವಿನಕಾಯಿ ಉದುರಿಸಿದವನು ನಮ್ಮ ತಾತ!" –ರಂಗಣ್ಣ ನೀಳವಾಗಿ ಉಸಿರುಬಿಟ್ಟ. ಇನ್ನಿಲ್ಲವಲ್ಲ ಆ ಬಗೆಯ ಮಾತುಕತೆಗಳು.ಮಂತ್ರ ಹೇಳಿ ಮಾವಿನಕಾಯಿ ಉದುರಿಸಿದರಂತೆ. ಮಾವಿನ ಹಣ್ಣಿನ ಸುಗ್ಗಿ ಈಗ. ಆದರೆ ಕಣಿವೇಹಳ್ಳಿಯಲ್ಲಿ ವಾಟೆಗಳಿಗೂ ಬರಗಾಲವಾಗಿದೆಯಲ್ಲ! ಬಲಿಯುವುದಕ್ಕೆ ಮುನ್ನವೇ ಕಾಯಿಗಳನ್ನು ಕಿತ್ತು ಭಾಗ್ಯನಗರಕ್ಕೆ ಸಾಗಿಸುತ್ತಿದ್ದಾರೆ. ಅದರಲ್ಲೂ ಹೆಚ್ಚು ಕಾಯಿ ಸರಬರಾಜಾಗುವುದು ಶ್ರೀನಿವಾಸಯ್ಯನವರ ಮಾವಿನ ತೋಪಿನಿಂದ. ಪದ್ಮನ ಅಣ್ಣ ಗೋವಿಂದ ಆರಂಭಿಸಿರುವ ಸೊಸೈಟಿ ಈ ವ್ಯಾಪಾರ ಮಾಡುತ್ತಿದೆ. ಹೈಸ್ಕೂಲಲ್ಲಿ ಒಂದೆರಡು ವರ್ಷ ఓది, ಹೆಚ್ಚಿನ ವಿದ್ಯಾಭ್ಯಾಸದ ಗೋಜಿಗೆ ಹೋಗದೆ, ಹಳ್ಳಿಗೆ ಗೋವಿಂದ ವಾಪಸಾಗಿದ್ದ. ಮುಂದೆ ನಾಲ್ಕೈದು ವರ್ಷಗಳಲ್ಲೇ ಹಳ್ಳಿಯನ್ನು ಉದ್ಧರಿಸಲು ಹೊರಟಿದ್ದ! ಅವನ ಚಟುವಟಿಕೆಗಳಿಗೆ ತನ್ನ ತಂದೆಯೂ ಪ್ರೋತ್ಸಾಹವೀಯುತ್ತಿದ್ದಾರೆ ಎಂದು ರಂಗಣ್ಣನಿಗೆ ಕಸಿವಿಸಿ. ಎದ್ದು ರಂಗಣ್ಣ ಎರಡೂ ತೋಳುಗಳನ್ನು ಕೊಡವಿ ಮೈಮುರಿದ. ಕಪಿಲೆ ಹಸು ಕೆಳಕ್ಕಿಳಿದು ಸಂಗಡಿಗರನ್ನು ಸೇರಿಕೊಂಡಿತು. ಬಿಸಿಲು ಬಾಡಿತ್ತು. ಇವರು ಕಾಣಲಿಲ್ಲ. ಸುಭದ್ರೆ ಈ ಕಡೆಗೆ ಬರಲಿಲ್ಲವೇನೋ, ನಿಧಾನವಾಗಿ ಇಳಿಯುತ್ತ ನೋಡಿಕೊಂಡು ಹೋಗೋಣ–ಎಂದುಕೊಂಡು ಪಾಯಜಾಮ ಮತ್ತೊಮ್ಮೆ ಮುಳ್ಳಿಗೆ ಸಿಲುಕಿ ಹರಿಯದಿರಲೆಂದು, ಕಟಿ ಭಾಗದಲ್ಲಿ ಅದರ ಲಾಡಿಯನ್ನು ಹಿಡಿದು ಸ್ವಲ್ಪ ಮೇಲಕ್ಕೆ ಎಳೆದ. ಜಲಬಾಧೆ ತೀರಿಸಬೇಕೆನ್ನಿಸಿ ಗುಡಿಯ ಹಿಂಭಾಗಕ್ಕೆ ಹೋದ. ಛೆ! ಪವಿತ್ರ ಸ್ಥಳದಲ್ಲಿ ಈ ಕೆಲಸ ಮಾಡಬಾರದು ಎಂದು, ತುಸು ದೂರ ನಡೆದು ಒಂದು ಪೊದೆಯ ಬುಡಕ್ಕೆ ನೀರೆರೆದ. ರಂಗಣ್ಣ ಇಳಿಯತೊಡಗಿದುದು ಬೇರೆ ದಿಕ್ಕಿನಿಂದ. ಅಲ್ಲೇ ಕೆಳಗೆ ಒಂದೆಡೆ ಕಾಗೆಗಳು ವಿಕಾರವಾಗಿ ಕೂಗಿಕೊಳ್ಳುತ್ತಿದ್ದುವು. ಒಂದೆರಡು ಹದ್ದುಗಳು ಮೇಲೆ ಎತ್ತರದಲ್ಲಿ ವೃತ್ತಗಳನ್ನು ರಚಿಸುತ್ತಿದ್ದುವು. ರಂಗಣ್ಣನಿಗೆ ಅನಿಸಿತು; ಏನೋ ಪ್ರಾಣಿ ಸತ್ತುಬಿದ್ದಿರಬೇಕು. ಪ್ರಾಣಿಗಳನ್ನು ಕುಯ್ಯುವ, ಪರೀಕ್ಷಿಸುವ ವೃತ್ತಿಯವನು ರಂಗಣ್ಣ. ಈಗ ಮಾತ್ರ ಆ ಜಾಗದಿಂದ ದೂರ ಸರಿದು ನಡೆಯತೊಡಗಿದ. (ವಾಸನೆ ತಿನ್ನುವವರು ಯಾರು ?) ಸುತ್ತಲೂ ಬಂಡೆಗಳಿಂದ ಆವೃತವಾಗಿದ್ದ ಹೊಂಡ. ಪದ್ಮ ಹೇಳುತ್ತಿದ್ದ: ನಾಯಕರ ಕಾಲದಲ್ಲಿ ವಧಸ್ಥಾನವಾಗಿದ್ದಿರಬೇಕು ಅದು. ಒಮ್ಮೆ ಅಂಥ ಮಾತಿಗೆ ರಂಗಣ್ಣನೆಂದಿದ್ದ: "ಬರೀ ಬುರುಡೆ." ಪದ್ಮ ಕೊಟ್ಟ ಉತ್ತರ : “ ಹಾಗಾದರೆ ಇತಿಹಾಸವೆಲ್ಲ ಬುರುಡೇನೇ." ಇಷ್ಟು ಮಾತ್ರ ನಿಜ: ಆ ಹೊಂಡದ ಹತ್ತಿರಕ್ಕೆ ಹಳ್ಳಿಯವರು ಹೆಚ್ಚಾಗಿ ಹೋಗು