ಈ ಪುಟವನ್ನು ಪ್ರಕಟಿಸಲಾಗಿದೆ

ಬೇಕೆಂಬ ನಿರ್ಧಾರ ಮಾಡಿದ್ದಾಯಿತು.

ಆದರೆ ಅಂತಹ ಸಂದರ್ಭ ನನಗೆ ಒದಗಿ ಬಂದದ್ದು ಕೆಲವೇ ವರ್ಷಗಳ ನಂತರ. ಸುಮಾರು ಸನ್ 1995ರಲ್ಲಿ ಯಾವುದೋ ಮಾಯೆಯಲ್ಲಿ ನಾನು ರಚಿಸಿದ 'ವಿಜಯಿನೀ ಗ್ರಂಥ (ನನ್ನ ಎರಡನೆಯ ಕೃತಿ-ಶ್ರೀಮದ್ಭಗವದ್ಗೀತೆಯ ಶ್ಲೋಕರೂಪೀ ಕನ್ನಡ ಅವತರಣಿಕೆ) ಅಚ್ಚುಮನೆಗೆ ಹೋಗಲು ಸಿದ್ಧವಾಗಿತ್ತು. ನಮ್ಮ ಕರಾವಳಿಯ ಉತ್ತುಂಗ ವಿದ್ವಾಂಸ ರಲ್ಲೊಬ್ಬರಾದ ಶ್ರೀ ಬನ್ನಂಜೆ ಗೋವಿಂದಾಚಾರ್ಯರು ಮುನ್ನುಡಿಯನ್ನು ಬರೆದು ಆಶಿರ್ವಚಿಸಲು ಒಪ್ಪಿಕೊಂಡಿದ್ದರು. ಆದರೂ ಹಸ್ತಪ್ರತಿಯನ್ನು ಶ್ರೀ ಬನ್ನಂಜೆಯವರಿಗೆ ಹಸ್ತಾಂತರಿಸುವ ಮುನ್ನ ಯಾರಾದರೂ ಇನ್ನೋರ್ವ ಸಮರ್ಥ ವಿದ್ವಾಂಸರು ನನ್ನೀ ಹಸ್ತಪ್ರತಿಯ ಮೇಲೊಮ್ಮೆ ಕಣ್ಣಾಡಿಸಿ ಯಥಾಯೋಗ್ಯ ತಿದ್ದುಪಡಿಗಳನ್ನು ಸೂಚಿಸಿದರೆ ನನ್ನ ಆತ್ಮಬಲ ವೃದ್ಧಿಯಾದೀತು ಎಂದೆನಿಸಿತು. ತಕ್ಷಣ ನೆನಪಾದವರು ಪ್ರಭಾಕರ ಜೋಶಿಯವರು. ಸ್ವಲ್ಪವೂ ಕಾಲ ವಿಳಂಬ ಮಾಡದೆ ಅವರಿವರನ್ನು ಕೇಳಿ ಜೋಶಿಯವರ ವಿಳಾಸವನ್ನು ಪತ್ತೆ ಮಾಡಿ ಒಂದು ರವಿವಾರದ ಬೆಳಗಿನ ಹೊತ್ತು ಯಾವುದೇ ಪೂರ್ವಸೂಚನೆಯಲ್ಲದೆ ನೇರವಾಗಿ ಅವರ ವಸತಿಸಂಕೀರ್ಣದ ಮೇಲ್ಮಹಡಿಯಲ್ಲಿದ್ದ ಅವರ ಮನೆಬಾಗಿಲಿಗೆ ತಲುಪಿ ಕರೆಗಂಟೆಯೊತ್ತಿದರೆ ಬಾಗಿಲು ತೆರೆದು ದರ್ಶನ ಕೊಟ್ಟಿದ್ದು ಜೋಶಿಯವರ ಶ್ರೀಮತಿಯವರು. ಮುಗಳಗೆಯ ಸ್ವಾಗತ. ನನ್ನ ಬೇಕು ಬೇಡಗಳನ್ನು ಕೇಳದೆ ಬಿಸಿ ಬಿಸಿ ಹಬೆಯಾಡುತ್ತಿದ್ದ ಕಾಫಿಯೊಂದಿಗೆ ಘಮಘಮಿಸುತ್ತಿದ್ದ ತಿಂಡಿಯ ತಟ್ಟೆ ಪ್ರತ್ಯಕ್ಷ. ಅದನ್ನು ಅವಸರವಸರವಾಗಿ ಹೀರಿ ಮುಗಿಸಿದ ಮೇಲೆಯೇ ಸ್ನಾಗೃಹದಿಂದ ಕಿವಿ ಮೂಗುಗಳನ್ನು ಒರೆಸಿಕೊಳ್ಳುತ್ತಾ ಪ್ರತ್ಯಕ್ಷರಾದರು ಜೋಶಿಯವರು. (ಅದೇಕೋ ನನಗಿಂತ ವಯಸ್ಸಿನಲ್ಲಿ ಹಲವು ವರ್ಷಗಳಷ್ಟು ಕಿರಿಯರಾದರೂ ಅವರನ್ನು ನಾನು ಇಂದಿಗೂ 'ಜೋಶಿ ಮಾಮ' ಎಂದೇ ಸಂಬೋಧಿಸುವುದು ಇದು ನಮ್ಮ ಕೊಂಕಣಿಗಳ ಒಂದು ಸ್ತುತ್ಯ ಸಂಪ್ರದಾಯ. ಮಾತ್ರವಲ್ಲದೇ ಅಂತಹ ಸಂಬೋಧನೆ ಕ್ಷಣಮಾತ್ರದಲ್ಲಿ ಇಬ್ಬರ ನಡುವೆ ಒಂತೆರನಾದ ಆತ್ಮೀಯತೆಯನ್ನು ಸೃಷ್ಟಿಸಿಬಿಡುತ್ತದೆ. ಜೋಶಿ ಕೊಂಕಣಿ ಬಲ್ಲವರು, ಕೊಂಕಣಿಗರ ಮಿತ್ರ)

ಸಂಕ್ಷಿಪ್ತ ಉಭಯಕುಶಲೋಪರಿಯ ನಂತರ ಸ್ವಲ್ಪ ತರಾತುರಿಯಲ್ಲೇ ನಾನು ತಂದಿದ್ದ ಹಸ್ತಪ್ರತಿಯನ್ನು ಅವರ ಕೈಗಳಲ್ಲಿ ಗೌರವಪೂರ್ವಕವಾಗಿ ಇಟ್ಟು ನಾನು ಬಂದಿದ್ದ ಕಾರಣವನ್ನು ತಿಳಿಸಿದೆ. ಅವರು ಹೆಚ್ಚೇನೂ ಮಾತನಾಡಲಿಲ್ಲ ಎಂದು ನೆನಪು. ನಿಂತಿದ್ದಂತೆಯೇ ಪ್ರತಿಯ ಕೆಲವು ಪುಟಗಳನ್ನು ಸಾವಕಾಶ ತಿರುವಿಹಾಕುತ್ತಾ ಆಗಾಗ ನನ್ನೆಡೆಗೆ ಹುಬ್ಬೇರಿಸುತ್ತಾ, ನೋಡುತ್ತಾ ಒಳಕಕ್ಷೆಯನ್ನು ಸೇರಿದರು. ಹೊರಬರುತ್ತಾ ಷರ್ಟನ್ನು ತೊಟ್ಟುಕೊಳ್ಳುತ್ತಿರುವಂತೆಯೇ “ನೀವು ನಿಮ್ಮ ವಾಹನವನ್ನು ತಂದಿರಬೇಕಲ್ಲ! ನಡೆಯಿರಿ ನನ್ನೊಂದಿಗೆ” ಎಂದು ಅಧಿಕಾರಯುತವಾಗಿ ಆಜ್ಞಾಪಿಸಿ ಅಕ್ಷರಶಃ ನನ್ನನ್ನು ಅನಾಮತ್ತಾಗಿ ಎಳೆದುಕೊಂಡೇ ಬಂದು ನನ್ನ ಕಾರಿನಲ್ಲಿ ಆಸೀನರಾಗಿ ಗುರುಪುರದತ್ತ ಚಲಿಸಲು ಸೂಚಿಸಿದರು. ಹದಿನೈದು ನಿಮಿಷಗಳ ನಂತರ ಮಂಗಳೂರಿನ ಹೊರವಲಯ

ವಾಗರ್ಥ ಗೌರವ / 40