ಈ ಪುಟವನ್ನು ಪ್ರಕಟಿಸಲಾಗಿದೆ

೧೮೮

ಕನ್ನಡಿಗರ ಕರ್ಮಕಥೆ

ಕುದುರೆಯನ್ನು ಸಾವಕಾಶವಾಗಿ ಬಿಟ್ಟಿದ್ದನು; ಆದ್ದರಿಂದ ನಜೀರನಿಗೆ ರಣಮಸ್ತಖಾನನ ಬೆನ್ನಹತ್ತಿ ಹೋಗಿ ಆತನು ಯಾವ ದಿಕ್ಕಿಗೆ ಹೋಗುತ್ತಾನೆಂಬುದನ್ನು ನೋಡಿಕೊಳ್ಳಲಿಕ್ಕೆ ಬಹಳ ಅನುಕೂಲವಾಯಿತು. ರಣಮಸ್ತಖಾನನು ವಿಜಯನಗರದ ದಿಕ್ಕನ್ನೇ ಹಿಡಿದಿದ್ದನು. ಆದಷ್ಟು ಗಟ್ಟಿಮುಟ್ಟಿಯಾಗಿ ಗೊತ್ತಾದ ಕೂಡಲೆ ನಜೀರನು ಹಿಂದಿರುಗಿ ಮಾಸಾಹೇಬರ ಬಳಿಗೆ ಹೋಗಿ ಆ ಸುದ್ದಿಯನ್ನು ಹೇಳಿದನು. ಅದನ್ನು ಕೇಳಿ ಮಾಸಾಹೇಬರ ಚಿತ್ತವೃತ್ತಿಯು ವಿಲಕ್ಷಣವಾಯಿತು; ಆದರೂ ಅದನ್ನೇನು ಹೊರಗೆ ತೋರಗೊಡದೆ ಅವರು ನಜೀರನನ್ನು ಹೊಗಳಿ “ಹೋಗು, ಓಡಿ ಓಡಿ ದಣಿದಿರುತ್ತೀ, ಮಲಗಿಕೋ. ಇನ್ನು ಮೇಲೆ ರಣಮಸ್ತಖಾನನು ಯಾವಾಗ ಬರುತ್ತಾನೆಂಬದನ್ನು ನನಗೆ ಬೆಳಗಾದ ಬಳಿಕ ಯಾವಾಗಾದರೂ ಹೇಳು” ಎಂದು ಹೇಳಿದರು. ನಜೀರನು ಬಹಳ ಆನಂದಪಟ್ಟನು. “ತಪ್ಪದೆ ಹೇಳುತ್ತೇನೆ” ಎಂದು ಹೇಳಿ ಆತನು ಹೊರಟುಹೋದನು. ಮಾಸಾಹೇಬರ ಚಿತ್ತವು ಅತ್ಯಂತ ಅಸ್ವಸ್ಥವಾಯಿತು. ರಣಮಸ್ತಖಾನನ ಬೆನ್ನಹತ್ತಿ ಅಶ್ವಾರೂಢನಾಗಿ ನಾನೇ ಹೋಗಲಾ, ಅನ್ನುವ ಹಾಗೆ ಅವರಿಗೆ ಆಯಿತು; ಆದರೆ ಹಾಗೆ ಮಾಡಲಿಕ್ಕೆ ಬರುವಹಾಗಿದ್ದಿಲ್ಲ; ಇದಲ್ಲದೆ ಅವರು ಕರೀಮಬಕ್ಷಮನನ್ನು ವಿಜಯನಗರದ ಅರ್ಧಹಾದಿಯ ಮೇಲೆ ಕುಳಿತಿರುವಂತೆ ನಿಯಮಿಸಿ ಕಳಿಸಿದ್ದರು. ಆತನು ಮುಂಜಾನೆ ಬಂದು ಸುದ್ದಿಯನ್ನು ಹೇಳಿದ ಬಳಿಕ ಏನುಮಾಡತಕ್ಕದನ್ನು ಮಾಡೋಣವೆಂದು ಅವರು ನಿಶ್ಚಯಿಸಿದರು. ವಿಚಾರ ಮಾಡಿ ಮಾಡಿ ಅವರಿಗೆ ದಣಿವಿಕೆ ಬಂದ ಹಾಗಾದ್ದರಿಂದ ಅವರು ಹಾಸಿಗೆಯ ಮೇಲೆ ಹೋಗಿ ಬಿದ್ದುಕೊಂಡರು; ಆದರೆ ಅವರಿಗೆ ನಿದ್ದೆ ಬರೆಲೊಲ್ಲದು! ಜೀವಕ್ಕೆ ಬಹಳ ತಾಪವಾಗಹತ್ತಿತು. ಹೀಗೆ ಕೆಲವು ಹೊತ್ತು ತಳಮಳಿಸುತ್ತಿರಲು, ಬೆಳಗು ಮುಂಜಾನೆ ಅವರಿಗೆ ಸ್ವಲ್ಪ ನಿದ್ದೆ ಹತ್ತಿದಹಾಗಾಗಿ, ಅವರು ವಿಲಕ್ಷಣ ಕನಸನ್ನು ಕಂಡರು. ಅದೇನೆಂದರೆ ಒಂದು ಎತ್ತರವಾದ ಪರ್ವತ ಶಿಖರದ ಮೇಲೆ ಯಾರದೋ ಹಾದಿಯನ್ನು ನೋಡುತ್ತ ತಾವು ಒಬ್ಬರೇ ನಿಂತುಕೊಂಡಿರುವಂತೆ ಮಾಸಾಹೇಬರಿಗೆ ತೋರಿತು. ಅಷ್ಟರಲ್ಲಿ ರಾಮರಾಜನು ಅಲ್ಲಿಗೆ ಬಂದನು. ಆತನನ್ನು ನೋಡಿದ ಕೂಡಲೆ ತಮ್ಮ ಸರ್ವಾಂಗವು ತಪ್ತವಾಗಿ ಕೆಂಪಡರಿದ ಕಣ್ಣುಗಳಿಂದ ತಾವು ಆತನನ್ನು ನೋಡುತ್ತಿರುವಂತೆ ಮಾಸಾಹೇವರಿಗೆ ಭಾಸವಾಯಿತು. ಆಗ ತಾವು ತಮ್ಮ ಹಲ್ಲುಗಳಿಂದ ತಮ್ಮ ತುಟಿಯನ್ನು ಕಚ್ಚುತ್ತಿರುವಂತೆಯೂ, ತಮ್ಮ ಬಿಗಿಯಾದ ಮುಷ್ಠಿಯನ್ನು ಕಸುವಿನಿಂದ ಹಿಂದಕ್ಕೆ ಜಾಗಿಸಿ ಹಿಡಿದಂತೆಯೂ, ಸಿಟ್ಟಿನಿಂದ