ಈ ಪುಟವನ್ನು ಪ್ರಕಟಿಸಲಾಗಿದೆ

೨೦೦

ಕನ್ನಡಿಗರ ಕರ್ಮಕಥೆ

ನಿನಗೆ ಹೇಳುವೆನು. ಪುನಃ ಅಜ್ಞಾತವಾಸ ಮಾಡದ ಹೊರತು ನಮಗೆ ಬೇರೆ ಮಾರ್ಗವಿಲ್ಲ. ಇನ್ನು ಮೇಲೆ ನಾವು ಮಾಡಬೇಕಾಗಿರುವ ಅಜ್ಞಾತವಾಸವು ಎಂದೆಂದೂ ಯಾರುಯಾರಿಗೂ ಗೊತ್ತಾಗದಂತೆ ಇರಬೇಕು ! ಎಂದು ನುಡಿದು, ಮಾಸಾಹೇಬರು ಸ್ವಲ್ಪ ನಕ್ಕರು. ಅವರ ನಗೆಯ ಅರ್ಥವು ಲೈಲಿಗೆ ತಿಳಿಯಲಿಲ್ಲೆಂತಲ್ಲ. ಮಾಸಾಹೇಬರು ಆಕೆಯ ಮುಂದೆ ಯಾವ ಸುದ್ದಿಯನ್ನು ಹೇಳದಿದ್ದರೂ, ಲೈಲಿಯ ಕರೀಮನನ್ನೂ, ನಜೀರನನ್ನೂ ಕೇಳಿ ಎಲ್ಲ ಸುದ್ದಿಯನ್ನು ಕೇಳಿಕೊಂಡಿದ್ದಳು, ಸೇವಕರ ಬಾಯಲ್ಲಿ ಮಾತು ಎಲ್ಲಿ ನಿಲ್ಲುವವು ? ಅದರಲ್ಲಿ ರಣಮಸ್ತಖಾನನು ಪಿತೂರಿಗಾಗಿ ಹಿಂದೂ ಜನರಲ್ಲಿ ಕೂಡಿಕೊಂಡಿದ್ದ ಸುದ್ದಿಯು; ಅಂದಬಳಿಕ ಅದು ಗುಪ್ತವಾಗಿ ಬಹಳ ಹೊತ್ತು ಹ್ಯಾಗೆ ಉಳಿಯಬೇಕು ? ಆ ಸುದ್ದಿಯು ಲೈಲಿಯ ಕಿವಿಗೆ ಮುಟ್ಟಿದ್ದಲ್ಲದೆ ಕುಂಜವನದ ತುಂಬ ಹಬ್ಬಿ, ಸ್ವಲ್ಪ ಹೊತ್ತಿನಲ್ಲಿ ಅದು ಮುಖ್ಯ ವಕೀಲನ ಕಿವಿಯ ವರೆಗೂ ಹೋಯಿತು. ಇರಲಿ. ಮಾಸಾಹೇಬರ ಮಾತನ್ನು ಕೇಳಿ ಲೈಲಿಯು ತಾನು ಏನೋ ಮಾತಾಡಬೇಕೆನ್ನುತ್ತಿರಲು, ಅದನ್ನರಿತು ಮಾಸಾಹೇಬರು ಪುನಃ ಲೈಲಿಯನ್ನು ಕುರಿತು-ಲೈಲೀ, ನೀನು ಇನ್ನು ಯಾವ ಮಾತನ್ನೂ ಆಡಬೇಡ. ಮಾತಾಡುವದರಲ್ಲೇನೂ ಅರ್ಥವಿರುವದಿಲ್ಲ. ಈಗ ಮೂವತ್ತು ವರ್ಷಗಳ ಹಿಂದೆ ನಾವು ಈ ಕುಂಜವನವನ್ನು ಬಿಟ್ಟುಹೋಗವಾಗ ಇದ್ದಂತೆಯೇ ಈಗ ಇರುತ್ತೇವೆಂದು ತಿಳಿ, ನಡುವೆ ಆದದ್ದನ್ನೆಲ್ಲ ಮರೆತುಬಿಡು. ಹೋಗು ಒಳಗೆ ಹೋಗು. ನಾನು ಕರೆದ ಕೂಡಲೆ ಬಾ, ಆಗ ಮಾತಾಡೋಣ. ಈಗ ನೀನು ಯಾವ ಮಾತನ್ನೂ ಆಡಬೇಡ, ಎಂದು ಹೇಳಿ ಲೈಲಿಯನ್ನು ಕಳಿಸಿ ಮಾಸಾಹೇಬರು ವಿಚಾರ ಮಗ್ನರಾದರು. ಅವರು ಮನಸ್ಸಿನಲ್ಲಿ ಬಹು ಭಯಂಕರವಾದ ವಿಚಾರ ತರಂಗಗಳು ಉತ್ಪನ್ನವಾದವು. ಕಡೆಗೆ ಅವರು ಪುಷ್ಕರಣಿಯಲ್ಲಿ ಧುಮುಕಿ ತಾವು ಪ್ರಾಣತ್ಯಾಗ ಮಾಡಬೇಕೆಂದು ನಿಶ್ಚಯಿಸಿದರು. ಹೀಗೆ ನಿಶ್ಚಯಮಾಡಿದ ಬಳಿಕ ಅವರ ಮನಸ್ಸಿಗೆ ಸ್ವಲ್ಪ ಸಮಾಧಾನವಾದಂತಾಯಿತು. ಬಳಿಕ ಅವರು, ತಾವು ಪ್ರಾಣತ್ಯಾಗ ಮಾಡುವ ಪೂರ್ವದಲ್ಲಿ ಏನು ಮಾಡಬೇಕೆಂಬುದನ್ನು ಕುರಿತು ಆಲೋಚಿಸತೊಡಗಿದರು. ತಮ್ಮ ನಿಜವಾದ ವೃತ್ತಾಂತವನ್ನೆಲ್ಲ ರಣಮಸ್ತಖಾನನಿಗೆ ತಿಳಿಸಬೇಕೆಂದು ಮೊಟ್ಟ ಮೊದಲು ಅವರು ನಿಶ್ಚಯಿಸಿದರು. ನಾನು ಇಂದು ಪ್ರಾಣತ್ಯಾಗ ಮಾಡಿದರೂ ರಣಮಸ್ತಖಾನನಿಗೆ ನಿಜವಾದ ಸಂಗತಿಯನ್ನು ತಿಳಿಸಬೇಕು; ಅಂದರೆ ತಾನು ಯಾರ ಪಕ್ಷವನ್ನು ವಹಿಸಿರುವೆನೆಂಬುದು ಆತನಿಗೆ ಗೊತ್ತಾಗಿ, ಆತನು ರಾಮರಾಜನ ಸೇಡು ತೀರಿಸಿಕೊಳ್ಳದೆ ಬಿಡಲಿಕ್ಕಿಲ್ಲ; ಅಂದಬಳಿಕ ನನ್ನ ಸಂಕಲ್ಪವು