ಈ ಪುಟವನ್ನು ಪ್ರಕಟಿಸಲಾಗಿದೆ

೨೮೬

ಕನ್ನಡಿಗರ ಕರ್ಮಕಥೆ


ಪ್ರಶ್ನೆಮಾಡಿದನು. ಅದನ್ನು ಕೇಳಿದ ಕೂಡಲೆ ರಣಮಸ್ತನ ಮೋರೆಯು ಹುಚ್ಚಿಟ್ಟಿತು; ಆದರೆ ಅಷ್ಟರಲ್ಲಿ ಆ ನೀಚನು ಗಟ್ಟಿಯಾಗಿ ನಕ್ಕು - “ಸರಕಾರ್‌, ಪ್ರತ್ಯಕ್ಷ ತಮಗೆ ಎದುರಾಗಿ ಬರುವ ಧೈರ್ಯವು ಮುಸಲ್ಮಾನ ಸೈನ್ಯಕ್ಕೆ ಸರ್ವಥಾ ಆಗಲಾರದು. ಮುಸಲ್ಮಾನರು ಬೇಕಾದವರ ಸಂಗಡ ಯುದ್ದ ಮಾಡಬಹುದು; ಆದರೆ ಅವರು ತಮಗೆ ಎದುರಾಗಿ ಮಾತ್ರ ಯುದ್ಧಮಾಡುವದು ತೀರ ಅಸಂಭವವು. ಆದ್ದರಿಂದ ತಾವು ನಿಶ್ಚಿಂತರಾಗಿರಬೇಕು. ನಾವೇನು ಸುಮ್ಮನೆ ಕುಳಿತುಕೊಂಡಿರುವದಿಲ್ಲ. ಸರ್ವಸನ್ನಾಹದೊಡನೆ ಪೂರ್ಣ ಜಾಗರೂಕರಾಗಿದ್ದೇವೆ. ಶತ್ರುಗಳು ನಮ್ಮ ಮೇಲೆ ಸಾಗಿಯೊಂದು ಬರಲಿ, ಅವರ ಧೂಳಹಾರಿಸಿಬಿಡೋಣ. ಮುಸಲ್ಮಾನ ಬಾದಶಹರು ನಿಮಗೆ ಎಷ್ಟು ಹೆದರುವರೆಂಬದನ್ನು ನಾನು ಪೂರಾ ಬಲ್ಲೆನು. ರಾಮರಾಜನು ಇರುವವರೆಗೆ ನಾವು ನಾಲ್ವರು ಬಾದಶಹರು ಒಟ್ಟುಗೂಡಿಯಂತು ಇರಲಿ, ಉತ್ತರಹಿಂದುಸ್ತಾನದ ಮುಸಲ್ಮಾನರನ್ನು ಸಹಾಯಕ್ಕೆ ಕರಕೊಂಡರೂ ನಮ್ಮ ಆಟವೇನೂ ನಡೆಯದು, ಎಂದು ಅವರು ನಿಶ್ಚಯಿಸಿಕೊಂಡರು. ಅವರು ಹೀಗೆ ಅಂಜುವದು ಆಶ್ಚರ್ಯವಲ್ಲ. ತಮ್ಮ ಪ್ರತಾಪವೇ ಅಂಥಾದ್ದು ತಾವು ಯಾವತ್ತು ರಾಜ್ಯದ ಸಂರಕ್ಷಕರಾಗಿರಲು, ನಮ್ಮಂಥ ಪಾಮರರಾದ ಅಂಗರಕ್ಷಕರು ತಮ್ಮನ್ನು ರಕ್ಷಿಸುವೆವೆಂಬ ಮಾತು ವ್ಯರ್ಥವಾದದ್ದು; ಆದರೂ ತಮ್ಮ ಸಲುವಾಗಿ ರಣಾಂಗದಲ್ಲಿ ದೇಹವಿಡಲು ನಾವು ಹಿಂದೆ ಮುಂದೆ ನೋಡುವಹಾಗಿಲ್ಲ. ಈಗ ಬಹಳ ಮಾತುಗಳಿಂದ ಪ್ರಯೋಜನವೇನು ? ಪ್ರಸಂಗ ಬಂದಾಗ ಪರೀಕ್ಷಿಸಬಹುದು.

ರಣಮಸ್ತನ ಈ ಮುಖಸ್ತುತಿಯಿಂದ ರಾಮರಾಜನಂಥ ಚಾಣಾಕ್ತನ ಕೂಡ ಕಾಲಮಹಿಮೆಯಿಂದ ಉಬ್ಬಿದನು. ರಣಮಸ್ತನು ತನ್ನ ಸಲುವಾಗಿ ಪ್ರಾಣಕೊಡಲು ಸಿದ್ಧನಾದದ್ದನ್ನು ನೋಡಿ ಆ ರಾಯನು ಬಹು ಸಮಾಧಾನಪಟ್ಟು, ರಣಮಸ್ತನನ್ನು ಮುಂದಕ್ಕೆ ಕರೆದು, ಆತ ನನ್ನ ಪುತ್ರವಾತ್ಸಲ್ಯದಿಂದ ಬಿಗಿಯಾಗಿ ಅಪ್ಪಿಕೊಂಡು, ನೆತ್ತಿಯನ್ನು ಮೂಸಿನೋಡಿ, ಆತನನ್ನು ಕುರಿತು ಏನೂ ಮಾತಾಡಬೇಕೆನ್ನುತ್ತಿರಲು, ಒಬ್ಬಚಾರನು ಅವಸರದಿಂದ ಬಂದು ರಾಯನನ್ನು ಕುರಿತು ಪ್ರಭುವೇ, ಈ ಮೊದಲೇ ಶತ್ರುಗಳು ಕಾಲುದೆಗೆದದ್ದರಲ್ಲಿ ಏನೋ ಮೋಸವಿದ್ದಂತೆ ತೋರುತ್ತದೆ, ಈಗ ಎರಡು ದಿನ ವಿಜಯನಗರದ ಕಡೆಗೆ ನುಗ್ಗಿದ್ದ ಶತ್ರು ಸೈನ್ಯವು ಈಗ ಒಮ್ಮೆಲೆ ಇತ್ತ ಕಡೆಗೆ ಭರದಿಂದ ಸಾಗಿಬರಹತ್ತಿದೆ. ನಮ್ಮ ಸೈನ್ಯದ ಕಸುವು ಕಡಿಮೆಮಾಡುವದಕ್ಕಾಗಿ ಶತ್ರುಗಳು ಈ ಹಂಚಿಕೆಮಾಡಿ ತಮ್ಮ ಹಂಚಿಕೆಯು ಸಾಧಿಸಿದ ಕೂಡಲೇ ಈಗ ಎಲ್ಲರೂ ಒಟ್ಟುಗೂಡಿ ನಮ್ಮ ಅಲ್ಪಸಂಖ್ಯಾಕರವಾದ ಸೈನ್ಯದ ಮೇಲೆ ಬೀಳಬೇಕೆಂದು ಯೋಚಿಸಿದ ಹಾಗೆ ತೋರುತ್ತದೆ. ಇದ್ದ