ಕರ್ಣಪರ್ವ: ೧೮. ಹದಿನೆಂಟನೆಯ ಸಂಧಿ

<ಕುಮಾರವ್ಯಾಸ ಭಾರತ

ಕರ್ಣ ಪರ್ವ-ಹದಿನೆಂಟನೆಯ ಸಂಧಿ ಸಂಪಾದಿಸಿ

ಸೂ. ಗಂಡುಗಲಿ ಯಮತನುಜನಲಿ ಮಾ
ರ್ತಾಂಡ ತನಯನ ವಧೆಗೆ ನೇಮವ
ಕೊಂಡು ಕದನೋದ್ದಾಮದಲಿ ಹೊರವಂಟನಾ ಪಾರ್ಥ

ಕೇಳು ಧೃತರಾಷ್ಟ್ರಾವನಿಪ ಭೂ
ಪಾಲನನು ಸಾಮದಲಿ ಮುರರಿಪು
ಬೋಳವಿಸಿ ಭಾವಜ್ಞ ನಂದಿಸಿದನು ಮನೋವ್ಯಥೆಯ
ಮೇಲುಸುರ ಬಿಕ್ಕುಳಿನ ಬಿಗುಹಿನ
ತಾಳಿಗೆಯ ನೀರುಗಳ ಮುಕ್ಕುಳಿ
ನಾಲಿಗಳ ನರನಾಥ ತೆಗೆದಪ್ಪಿದನು ಫಲುಗುಣನ ೧

ಒರಲುತರಸನ ಮುರುಚಿಕೊಂಡಡಿ
ಗೆರಗೆ ಕೈಯೊಡನವನಿಪತಿ ಮುರಿ
ದೆರಗಿ ಪಾರ್ಥನ ಸೇರಿ ತಕ್ಕೈಸಿದನು ಗೋಳಿಡುತ
ಮರುಗಿದಳು ದ್ರೌಪದಿ ದೃಗಂಬುಗ
ಳೊರತೆಯಲಿ ಸಹದೇವ ನಕುಳರ
ಲರಿಯೆನುಪಮಿಸಲವರ ಬಹುಳಾಕ್ರಂದನ ಧ್ವನಿಯ ೨

ಮುರಹರನ ಮಂತ್ರದಲಿ ಶೋಕ
ಜ್ವರಕೆ ಬಿಡುಗಡೆಯಾಯ್ತು ಬಳಿಕಿನೊ
ಳರಸ ಸಿರಿಮೊಗದೊಳೆದು ವಸನಾಂಚಲದೊಳಾನನವ
ಒರಸಿ ಪಾರ್ಥನ ಸಂತವಿಸಿ ಮಂ
ದಿರಕೆ ಬಿಜಯಂಗೈದು ಮುದದಲಿ
ಕರಸಿ ಕಾಣಿಕೆಗೊಂಡು ಪರಿವಾರವನು ಮನ್ನಿಸಿದ ೩

ಇಟ್ಟಣಿಸುವರಿಸೈನ್ಯ ಜಲಧಿಗೆ
ಕಟ್ಟೆಯಾದನು ಭೀಮನೊಬ್ಬನ
ಬಿಟ್ಟು ನೋಡುವುದುಚಿತವೇ ಪರಿವಾರ ಪಂಥದಲಿ
ಕೊಟ್ಟ ನೇಮವ ಯಮಳರಿಗೆ ಜಗ
ಜಟ್ಟಿ ಸಾತ್ಯಕಿ ಕಮಲಮುಖಿಯೊಡ
ಹುಟ್ಟಿದನು ಮೊದಲಾಗಿ ನೃಪಜನವೇಳಿ ನೀವೆಂದ ೪

ದೇವ ಪರಿವಾರಕ್ಕೆ ನೇಮವ
ನೀವ ಸಮಯದಲಿಂದು ನಿಮ್ಮ ಕೃ
ಪಾವಲೋಕನವಾದುದೆನ್ನ ಪರಾಕ್ರಮಾನಳಕೆ
ಜೀವಸಖನಲ್ಲಾ ಸುಯೋಧನ
ನಾವ ಪಾಡು ವಿರೋಧಿಕುಲ ವಿ
ದ್ರಾವಣಕೆ ಕೊಡು ತನಗೆ ನೇಮವನೆಂದನಾ ಪಾರ್ಥ ೫

ಬರಸು ಭಾಷೆಯನಿಂದು ಕರ್ಣನ
ಶಿರವುಳಿದು ತಾವರೆಯ ನಗೆ ಪೈ
ಸರಿಸಿದರೆ ಮೈಬೆಸುಗೆ ಬಿಟ್ಟರೆ ಜಕ್ಕವಕ್ಕಿಗಳ
ಇರುಳ ಬೀಜವನಿಂದು ನಭದಲಿ
ಹರಹಿದರೆ ಕಲಿಭೀಮನಯ್ಯನ
ಹರಹು ನಿಂದರೆ ಬಳಿಕ ನಿಮ್ಮಯ ತಮ್ಮನಲ್ಲೆಂದ ೬

ಖಳನ ಹಿಂಸಾಪರನ ಡಂಬನ
ಚಳಮತಿಯ ನಾಸ್ತಿಕನ ನಿಂದಾ
ಕುಳನ ಪರಧನಬಾಧಕನ ದತ್ತಾಪಹಾರಕನ
ಜ್ವಲನದನ ಶಿಶುಘಾತಕನ ಪರಿ
ದಳಿತಧರ್ಮನ ಗತಿಗಳಲಿ ತಾ
ನಿಳಿವೆನಿಂದೇ ಕೊಲ್ಲದಿರ್ದರೆ ಸೂತನಂದನನ ೭

ನೀನಿನಿತ ನೆರೆ ನುಡಿವರೇ ತ
ನ್ನಾಣೆ ಬಾರೈ ತಂದೆ ಬಾ ಎನು
ತಾ ನರೇಶ್ವರ ತೆಗೆದು ಬಿಗಿಯಪ್ಪಿದನು ಫಲುಗುಣನ
ದಾನವಾಮರರೊಳಗೆ ನಿನಗೆ ಸ
ಮಾನ ಭಟರಿಲ್ಲೆಂಬುದೀ ಸ್ನೇ
ಹಾನುಗುಣವೇ ಲೋಕವರಿಯದೆ ಪಾರ್ಥ ಹೇಳೆಂದ ೮

ತಾಯೆನುತ ಘನ ಸಾರದುರು ತವ
ಲಾಯಿಗಳ ನೂಕಿದನು ಮುದದಲಿ
ಬಾಯ ತಂಬುಲವಿತ್ತು ತಮ್ಮನ ಮತ್ತೆ ತಕ್ಕೈಸಿ
ರಾಯ ಕೇಳೈ ಬಳಿಕಖಿಳ ದಳ
ನಾಯಕರ ಕರೆಕರೆದು ಕದನಪ
ಸಾಯತರಿಗಿತ್ತನು ನೃಪತಿ ಕರ್ಪುರದ ವೀಳೆಯವ ೯

ನೇಮವಾಯಿತು ಮತ್ತೆ ನೃಪತಿ
ಸ್ತೋಮವರ್ಜುನನೊಡನೆ ಕದನೋ
ದ್ದಾಮರುಬ್ಬರಿಸಿದರು ಪತಿಕರಣೆಗೆ ಮಹೀಪತಿಯ
ಸೋಮಕರು ನಕುಲಾದಿಗಳು ಸುತ
ಸೋಮಕಾದಿ ಕುಮಾರರಖಿಳ ಸ (೧೦
ನಾಮರೆದ್ದುದು ತೊಡರ ಝಣಝಣ ರವದ ಖಡೆಯದಲಿ

ನುಡಿವ ವಾದ್ಯದ ಜಡಿವ ಕಹಳೆಯ
ಹೊಡೆವ ಭೇರಿಯ ರವದ ರಭಸದೊ
ಳೊಡೆದುದಾ ದಿಗುಭಿತ್ತಿಯೆನೆ ಚಲಿಸುವ ಚತುರ್ಬಲದ
ತುಡುಕು ಚಮರಿಯ ಝಾಡಿಗೆದರಿನ
ಗಡಣಿಸುವ ಝಲ್ಲರಿಯ ದಳ ಬರ
ಸಿಡಿಲ ಮೇಳವದಂತೆ ನೆರೆದುದು ನೃಪತಿಯಿದಿರಿನಲಿ ೧೧

ವೀರಸೇಸೆಯನಿಕ್ಕಿ ರಾಯನ
ನಾರಿ ಪರಸಿದಳಖಿಳ ವಿಪ್ರರ
ಚಾರು ಚಾತುರ‍್ವೇದ ಮಂಗಳಸೂಕ್ತ ಘೋಷದಲಿ
ತೇರನೇರಿದನಸುರರಿಪು ಸಹಿ
ತಾರುಭಟೆಯಲಿ ನೂಕಿದವು ರತು
ನಾರತಿಯ ತಳಿಗೆಗಳು ವರ ಕಾಂತಾಕದಂಬದಲಿ ೧೨

ಕೂಡೆಗರಿಗಟ್ಟಿದವು ರಥದಲಿ
ಹೂಡಿದಶ್ವವ್ರಾತವಾನೆಗ
ಳೀಡಿರಿದು ಬರಿಕಯ್ಯನೆತ್ತಿದವೊಲೆದವಡಿಗಡಿಗೆ
ಜೋಡಿಸಿತು ಜಯ ಜಯ ಜಯಧ್ವನಿ
ಕೂಡೆ ಜಗದಗಲದಲಿ ಬಿರುದುಪ
ವಾಡಗಳ ಮೊಗ ನೆಗಹಿ ಹೊಗಳಿತು ವಂದಿ ಸಂದೋಹ ೧೩

ನಿಳಯವನು ಹೊರವಂಟು ಬೀದಿಗ
ಳೊಳಗೆ ಬರೆಬರೆ ಮುಂದೆ ಮೋಹಿದ
ತಳಿಗೆದಂಬುಲ ವೀರಸೇಸೆಯ ಮಂಗಳಾರತಿಯ
ಫಲ ಸಮೂಹದ ಕಾಣಿಕೆಯ ಕೋ
ಮಲೆಯರುಪ್ಪಾರತಿಯ ಮನೆಮನೆ
ಗಳಲಿ ಮನ್ನಿಸಿಕೊಳುತ ಪಾಳೆಯದಿಂದ ಹೊರವಂಟ ೧೪

ಮೇಲೆ ಮೊಳಗುವ ದೇವದುಂದುಭಿ
ಜಾಲದೊಸೆಗೆಯ ಪಕ್ಷಿಮೃಗದನು
ಕೂಲ ಶಕುನದ ಸೌಮನಸ್ಯದ ಸಾಧುವಾದದಲಿ
ಲಾಲನೆಯ ಮೈವಳಿಯ ಲಳಿಯ ವಿ
ಶಾಲ ಮಂದಾನಿಲನಖಿಳ ಭೂ
ತಾಳಿ ಸಂತೋಷದಲಿ ಪತಿಕರಿಸಿತು ಧನಂಜಯನ ೧೫

ನಡೆದು ಬಂದುದು ರಾಯದಳ ಮುಂ
ಗುಡಿಯ ವಾದ್ಯಧ್ವನಿಯ ಥಟ್ಟಣೆ
ತುಡುಕಿತರಿಚತುರಂಗ ಚಪಳರ ಕರ್ಣ ಕೋಟರವ
ನಡುಗಿದವು ಕೈದುಗಳು ಜೋಧರ
ಕೊಡಹಿದವು ಗಜರಾಜಿ ವಾಜಿಯ
ಗಡಣವೀಡಾಡಿದವು ರಾವ್ತರನಿವರ ಥಟ್ಟಿನಲಿ ೧೬

ಅರಸ ಕೇಳೈ ಸಮರಭೂಮಿಗೆ
ಪರಿದರರಸಾಳುಗಳು ರಾಯನ
ಸಿರಿಮುಡಿಗೆ ಸುಕ್ಷೇಮ ಮುಚ್ಚಿದವೇರುಮದ್ದಿನಲಿ
ಮರಳಿ ನೇಮವ ಕೊಂಡು ಫಲುಗುಣ
ಬರುತಲೈದನೆ ಜೀಯ ನಿಮ್ಮಯ
ಚರಣ ಸರಸಿಜದಾಣೆಯೆಂದರು ಭೀಮಸೇನಂಗೆ ೧೭

ಜೋಡು ಬಿರಿದುದು ಹರುಷಜಲ ಕಡೆ
ಗೋಡಿವರಿದುದು ರೋಮಪುಳಕದ
ಬೀಡು ಬಿಟ್ಟುದು ಮೈಯನುಬ್ಬಿದನೊಲೆದನಡಿಗಡಿಗೆ
ನೀಡುವರೆ ತಳುವೆನುತ ತೆಗೆದೀ
ಡಾಡಿದನು ದೂತರಿಗೆ ರತುನದ
ಜೋಡಣೆಯ ಭುಜ ಕಂಠ ಕರ್ಣಾಂಘ್ರಿಗಳ ಭೂಷಣವ ೧೮

ರಾಯ ಹದುಳಿಸಿದನೆ ಮಹಾದೇ
ವಾಯಿದೆತ್ತಣ ಪುಣ್ಯವೋ ರಣ
ದಾಯಸವ ಸೈರಿಸಿದ ತನಗಿದು ಸಫಲವಾಯಿತಲ
ದಾಯ ಬಂದುದು ನಮಗೆ ಹೋ ಲೇ
ಸಾಯಿತೇಳು ವಿಶೋಕ ಸಾಕುಳಿ
ದಾಯುಧದ ಪರಿಗಣಿತವನು ಹೇಳೆಂದನಾ ಭೀಮ ೧೯

ಉಳಿದ ಕೈದುಗಳೇಸು ಬಂಡಿಯ
ಲುಳಿದ ಸರಳಿನ ಹೊದೆಯ ಲೆಕ್ಕವ
ತಿಳಿದು ಹೇಳೈ ತಂದೆ ಸಾರಥಿ ನೋಡಲಹುದಿನ್ನು
ಅಳಲಿಸಿದ ಕೌರವನ ರಕ್ತದ
ಮಳೆಯೊಳಲ್ಲದೆ ತನ್ನ ಕೋಪಾ
ನಳನ ಝಳವಡಗದು ಯುಧಿಷ್ಠಿರ ರಾಯನಾಣೆಂದ ೨೦

ಅರಸ ಚಿತ್ತವಿಸುಳಿದ ಧನು ಹ
ನ್ನೆರಡುಸಾವಿರ ಬಲುಸರಳು ಹ
ನ್ನೆರಡು ಸಾವಿರ ಬೋಳೆಯೈನೂರರ್ಧಚಂದ್ರಶರ
ಪರಿಗಳಿತ ಲುಳಿಯಂಬು ಕಣಗಿಲ
ಸರಳುಗೂಡಿಪ್ಪತ್ತು ಸಾವಿರ
ವೆರಡು ಸಾವಿರವುಳಿದವೀ ನಾರಾಚ ನಿಕರದಲಿ ೨೧

ಆಲಿಸೈ ಮುಗುಳಂಬು ಸಾವಿರ
ವೇಳು ಬಳಿಕೊಂಬತ್ತು ಸಾವಿರ
ಕೋಲು ಮೀಂಟೆಯ ಕವಲುಗಣೆ ಹನ್ನೆರಡು ಸಾವಿರವು
ಮೇಲೆ ಸಾವಿರ ನಾಲ್ಕು ಮುಮ್ಮೊನೆ
ಬೋಳೆಯಂಬೀರೈದು ಸಾವಿರ
ನಾಳಿಯಂಬುಗಳಾರುಬಂಡಿಯ ಲೆಕ್ಕವಿದೆಯೆಂದ ೨೨

ಪರಶು ಮುಸಲ ಮುಸುಂಡಿ ಸೆಲ್ಲೆಹ
ಪರಿಘ ತೋಮರ ಚಕ್ರವಸಿ ಮು
ದ್ಗರ ತ್ರಿಶೂಲ ಕಠಾರಿ ಖೇಟಕ ಪಿಂಡಿವಾಳಚಯ
ಸುರಗಿ ಮೊದಲಾದಖಿಳ ಶಸ್ತ್ರೋ
ತ್ಕರವನೊಂದೇ ಬಂಡಿಯಲಿ ಸಂ
ವರಿಸಿದೆನು ರಿಪುರಾಯರೊಡಲಲಿ ಬೀಯಮಾಡೆಂದ ೨೩

ಪೂತು ಸಾರಥಿ ಈಸುಬಾಣ
ವ್ರಾತವುಳಿದುದೆ ತನ್ನ ಕರ ಕಂ
ಡೂತಿಯನು ಕಳುಚುವೆನಲಾ ಕೌರವನ ನೆತ್ತಿಯಲಿ
ಆತನೇನಾದನು ಯುಧಿಷ್ಠಿರ
ಸೋತು ಪಿಂಗಿದನೆಂಬ ಹಂಬಲು
ಬೀತುದಿನ್ನೇನೆನ್ನ ನೋಡಾ ಎನುತ ಗರ್ಜಿಸಿದ ೨೪

ಚಳಯದಲಿ ಫಲುಗುಣನ ಮೋಹರ
ಕಳನ ಪೊಕ್ಕುದು ಹಲವು ಮೊನೆಯಲಿ
ತಳಿತು ನಿಂದುದು ಜಡಿವ ಬಹುವಿಧವಾದ್ಯರಭಸದಲಿ
ಅಳುಕಿತೀ ನಮ್ಮವರು ಭೀಮನ
ಸುಳಿವಿನಲಿ ಸೊಪ್ಪಾದೆವರ್ಜುನ
ನೆಳತಟಕೆ ನಿಲವೆಂತೆನುತ ನೆಗ್ಗಿದುದು ದುಗುಡದಲಿ ೨೫

ದಳದ ಮಧ್ಯದೊಳೊಂದು ರಥದಲಿ
ಹೊಳೆದು ದುವ್ವಾಳಿಸಿ ಧನಂಜಯ
ನಿಲಿಸಿದನು ನಿಜರಥವ ಭೀಮನ ರಥದ ಮುಂಬಿನಲಿ
ಬಳಿಕ ತನ್ನಿಂದಾದ ಕೋಳಾ
ಹಳವನಾ ತರುವಾಯಲವ್ಯಾ
ಕುಳ ಸಮಾಧಾನವನು ಬಿನ್ನಹಮಾಡಿದನು ಪಾರ್ಥ ೨೬

ಜನಪ ಕೇಳೈ ಬಳಿಕ ಭೀಮಾ
ರ್ಜುನರ ಮೋಹರಕೈದುಸಾವಿರ
ಕನಕಮಯರಥಸಹಿತ ಬಿಟ್ಟನು ಶಕುನಿ ಸೂಠಿಯಲಿ
ಅನಿಲಸುತನರ್ಜುನನ ನೀ ಸಾ
ರೆನುತ ಕೆದರಿದನಹಿತನಂಬಿನ
ಮೊನೆಯೊಳಳ್ಳಿರಿದೌಕಿ ತುಡುಕುವ ತೇರ ತೆಕ್ಕೆಯಲಿ ೨೭

ಒಂದು ಶರಸಂಧಾನದಲಿ ಕವಿ
ತಂದವೈಸಾವಿರ ರಥಾವಳಿ
ಯೊಂದು ಧನುವಿನೊಳೀತ ಮೊಗೆದನು ಸರಳಸಾಗರವ
ಸಂದಣಿಸಿತಾ ರಥಿಕರಾ ಹಯ
ವೃಂದವಾ ಸಾರಥಿಗಳಾ ರಥ
ಕೊಂದುಹತ್ತರ ಲೆಕ್ಕದಲಿ ಮಿಕ್ಕವು ಶರವ್ರಾತ ೨೮

ಒಗ್ಗಿನೈಸಾವಿರ ರಥಾವಳಿ
ಮುಗ್ಗಿದವು ಕಣೆ ತಾಗಿ ರಥಿಕರು
ನೆಗ್ಗಿದರು ಮೇಲಂಬು ಸುಳಿದೊಯ್ದವು ಸಜೀವಿಗಳ
ಒಗ್ಗೊಡೆದು ಕಲಿಶಕುನಿ ಘಾಯದ
ಸುಗ್ಗಿಯಲಿ ಲಘುವಾಗಿ ಹರುಷದ
ಮುಗ್ಗಿಲೊಣಗಿಲ ಮೋರೆಯಲಿ ತಿರುಗಿದನು ಮೋಹರಕೆ ೨೯

ಶಕುನಿ ಮುರಿದನು ಬೇಹ ದಳನಾ
ಯಕರು ತಿರುಗಿತು ಭೀಮಸೇನನ
ವಿಕಟ ಸಿಂಹಧ್ವನಿಗೆ ಜರಿದುದು ಭಟರ ಬಲುಹೃದಯ
ಅಕಟಕಟ ಕುರುಸೇನೆ ನಿರ್ನಾ
ಯಕವಲಾ ಹಾ ಎನುತ ಮಂತ್ರಿ
ಪ್ರಕರ ಮರುಗಿತು ತುರುಗಿತಲ್ಲಿಯದಲ್ಲಿ ಕಳವಳಿಸಿ ೩೦

ನೋಡಿ ಸಂಪಾದಿಸಿ

ಸಂಧಿಗಳು ಸಂಪಾದಿಸಿ

ಕರ್ಣಪರ್ವ: ಸಂಧಿಗಳು>: ೧೦ ೧೧ ೧೨ ೧೩ ೧೪
-ಸಂಧಿಗಳು- ೧೫ ೧೬ ೧೭ ೧೮ ೧೯ ೨೦ ೨೦ ೨೨ ೨೩ ೨೪ ೨೫ ೨೬ ೨೭ -೦೦-

ಪರ್ವ ಸಂಪಾದಿಸಿ

<ಪರ್ವಗಳು <>ಆದಿಪರ್ವ<> ಸಭಾಪರ್ವ <>ಅರಣ್ಯಪರ್ವ <>ವಿರಾಟಪರ್ವ<>ಉದ್ಯೋಗಪರ್ವ< >ಭೀಷ್ಮಪರ್ವ< >ದ್ರೋಣಪರ್ವ<>ಕರ್ಣಪರ್ವ< >ಶಲ್ಯಪರ್ವ<>ಗದಾಪರ್ವ

ಪರಿವಿಡಿ ಸಂಪಾದಿಸಿ

ಕನ್ನಡ ವಿಕಿಸೋರ್ಸ್ ಸಂಪಾದಿಸಿ

ಹಳಗನ್ನಡ ಸಾಹಿತ್ಯ| ಪಂಪಭಾರತ |ಜೈಮಿನಿ ಭಾರತ |ಕುಮಾರವ್ಯಾಸ ಭಾರತ | ನಾಡಗೀತೆಗಳು | ಜನಪದ ಸಾಹಿತ್ಯ | ಚಲನಚಿತ್ರ ಸಾಹಿತ್ಯ | ಚಲನಚಿತ್ರೇತರ ಸಾಹಿತ್ಯ |ಭಾವಗೀತೆಗಳು | ಭಕ್ತಿಗೀತೆಗಳು | ದಾಸ ಸಾಹಿತ್ಯ | ವಚನ ಸಾಹಿತ್ಯ | ತಾತ್ವಿಕ ಸಾಹಿತ್ಯ | ಭಗವದ್ಗೀತೆ |
ಮಂಕುತಿಮ್ಮನ ಕಗ್ಗ | ಶಿಶು ಸಾಹಿತ್ಯ | ಕವನ ಸಂಕಲನಗಳು | ಸಂಪ್ರದಾಯ ಗೀತೆಗಳು |ಮಂಕುತಿಮ್ಮನ ಕಗ್ಗ| |ಸರ್ವಜ್ಞ | ಜೀವನ ಚರಿತ್ರೆ|ಸ್ತೋತ್ರಗಳು|ಸಂಸ್ಕೃತ ಸಾಹಿತ್ಯ