ನಳಚರಿತ್ರೆ:ಎರಡನೆಯ ಸಂಧಿ

<ನಳಚರಿತ್ರೆ

ನಳಚರಿತ್ರೆ:ಎರಡನೆಯ ಸಂಧಿ(ಸಂಗ್ರಹ} ಸಂಪಾದಿಸಿ

  • (ಮೂಲದೊಂದಿಗೆ ಪರಿಶೀಲಿಸತಕ್ಕದ್ದು)

ಕೇಳು ಕುಂತೀತನಯ ಭೀಮನೃ
ಪಾಲತನುಜೆಗೆ ವಿರಹ ಬಲಿದು ವಿ
ಶಾಲವಾಗಿರಲಿತ್ತ ಕೇಳೈ ನಿಷಧನಗರಿಯನು
ಪಾಲಿಸುವ ನಳಚಕ್ರವರ್ತಿಯು
ಮೇಲೆನಿಪ ಸಭೆಯಲ್ಲಿ ರತ್ನದ
ಸಾಲುಹೊಳಹಿನ ಸಿಂಹಪೀಠದೊಳೆಸೆದು ಕುಳ್ಳಿರ್ದ ||೧||

ಆ ಸಮಯದಲಿ ಬಂದನಲ್ಲಿಗೆ
ದೇಶಯಾತ್ರಿಕ ಭೂಸುರನೊಳವ
ನೀಶ ಕೇಳಿದನಿಳೆಯೊಳೇನುಂಟತಿ ವಿಚಿತ್ರವೆನೆ
ಭೂಸುರೋತ್ತಮನೆಂದನೆಲೆ ಧರ
ಣೀಶ ಕೇಳು ವಿದರ್ಭನಗರದೊ
ಳೇಸು ಪುಣ್ಯೋದಯದಿ ಪಡೆದನೊ ಭೀಮನೃಪ ಸುತೆಯ ||೩||

ಅವಳ ರೂಪಗುಣಾತಿಶಯಗಳ
ನೆವಗೆ ಬಣ್ಣಿಸಲಳವೆ ಕೇಳಾ
ಯುವತಿ ಲೋಕದ ಸತಿಯ ಬಗೆಯಂತಲ್ಲ ಭಾವಿಸಲು
ಪ್ರವಿಮಲಾಕಾರದಲಿ ಮೃದುತರ
ಸವಿನುಡಿಯ ಸಂಭಾಷಣೆಗಳಲಿ
ಭುವನದೊಳು ನಾಕಾಣೆ ದಮಯಂತಿಗೆ ಸಮಾನರನು ||೪||

ಮುರಹರನ ನಿಜಸೊಸೆಯ ರೂಪಂ
ತಿರಲಿ ಚಂದ್ರನ ಮಗಳ ಚೆಲುವಂ
ತಿರಲಿ ಮೈನಾಕನ ಸಹೋದರಿಯಂದವಂತಿರಲಿ
ಶರಧಿತನುಜೆಯ ಸೌಂದರಿಯವನು
ಮರಸಿತೆಂಬುದು ಲೋಕದೊಳಗಾ
ಸರಸಿಜಾಕ್ಷಿಯ ಬಗೆಗೆ ಸರಿಯಿಲ್ಲರಸ ಕೇಳೆಂದ||೫||

ಹೇಳುತಿರೆ ನುಡಿನುಡಿಗೆ ಮೆಚ್ಚುತ
ಕೇಳಿ ತಲೆದೂಗಿದನು ನೈಷದ
ನಾಲಿಗಳಿಗೆ ಸರೋಜಮುಖಿ ಗೋಚರಿಸಿದಂತಾಗೆ
ಬಾಲಿಕೆಯ ಮೋಹಿಸಿದ ಪುಷ್ಷಶ
ರಾಳಿಯಲಿ ಮನನೊಂದು ಶಿವ ಶಿವ
ಲೋಲಲೋಚನೆಯೆಂತು ತನಗಹಳೆನುತ ಚಿಂತಿಸಿದ ||೭||

ವನಿತೆ ಗುಣಗಳೊಳೊಂದನೊಂದನು
ಮನದೊಳಗೆ ಸವಿಮಾಡಿ ತರುಣಿಯ
ನೆನೆದು ಹೊಂಪುಳಿವೋಗಿ ವಿರಹದಿ ಮದನಗೀಡಾಗಿ
ಘನವಿರಹದಲಿ ಕಾಯಕುಂದಿದ
ಜನಪ ನಳನಿರೆ ಬೇಂಟೆಕಾರರ
ಜನನಿವಹದಿಂ ಬಂದರಾ ಸಮಯದಲಿ ವನಚರರು ||೮||

ಅರಸ ಕೇಳ್ ಶಶಿಕುಲಶಿರೋಮಣಿ
ಧರಿಸಿದನು ನವರತುನಮಯದಾ
ಭರಣಗಳ ದಿವ್ಯಾಂಬರಾದಿ ಸುಗಂಧಲೇಪದಲಿ
ತರಿಸಿಯೇರಿದ ವಾಯುವೇಗದ
ತುರಗವನು ಸಂದಣಿಸಿ ಮೋಹರ
ತೆರಳಿತಗಣಿತ ವಾದ್ಯದಲಿ ನೆಲ ಬಿರಿಯಲೈತಂದ ||೧೧||

ನಿಲಿಸಿ ಬೇಂಟೆಯನಲ್ಲಿ ಬಳಲಿದ
ಬಲಸಮೇತದಿ ಬಂದು ತತ್ಪುರ
ವಳಯದುದ್ಯಾನವನು ಹೊಕ್ಕನು ಬಲಿದ ವಿರಹದಲಿ
ನಲವು ಹಿಂಗಿದ ಮನದ ದುಗುಡದೊ
ಳಿಳಿದು ತೊಳೆದನು ಜಾನುಜಂಘೆಯ
ಕೊಳದಿ ಪರಿಹೃತನಾಗಿ ಸಂಚರಿಸಿದನು ವನದೊಳಗೆ ||೧೪||

ಆ ಕೊಳದ ತೀರದಲಿ ತರುಗಳ
ನೇಕವದರೊಳಗೊಂದು ಠಾವಿನೊ
ಳೇಕವೃಕ್ಷದ ನೆಳಲಿನಲಿ ನವಕುಸುಮದಿಕ್ಕೆಯಲಿ
ಆ ಕಮಲಜನತುರಗ ನಿದ್ರಾ
ವ್ಯಾಕುಲದಿ ಮಲಗಿರಲು ಡ ಶು
ಭಾಕರೋನ್ನತ ಶುಭ್ರತೇಜದ ರಾಜಹಂಸವನು ||೧೫||

ಅರುಣಮಯದಾನನದ ಪದಯುಗ
ಗರಿಗಳುನ್ನತಧವಳ ದೇಹದ
ಪರಮತೇಜದೊಳೆಸೆವ ಹಂಸೆಯ ಕಂಡು ಬೆರಗಾಗಿ
ಹರಹರಾ ಇದರಾಯತವ ಮುರ
ಹರನು ತಾನೇ ಬಲ್ಲನೆನುತ
ಕ್ಕರದಿ ಮೆಲ್ಲನೆ ಕರವ ನೀಡುತ ಪಿಡಿದ ಹಂಸವನು ||೧೬||

ಒದರಿ ಕುಣಿಯಲು ಹಸ್ತದೊಳಗದ
ಕದಲದಂತಿರೆ ಪಿಡಿಯಲರಸನ
ವದನಕಮಲವ ನೋಡಿ ಹೆದರಿತು ಬಹಳ ಭೀತಿಯಲಿ
ಹೃದಯ ಕರಗುವ ಮಾತನೆಂದುದು
ಮದಕರಿಗೆ ನೊರಜಂತರವೆ ಕೈ
ಸದರದವರನು ಕೊಲುವುದೇನರಿದೆಂದುದಾ ಪಕ್ಷಿ ||೧೭||

ಕರಿಗಳನು ಮುರಿದಿಡುವ ಸಿಂಹಕೆ
ನರಿಗಳಿದಿರೇ ತಾನು ನಿನಗಂ
ತರವೆ ಸಾಕಂತಿರಲಿ ಕಂಡವರೆಲ್ಲ ಕಡುನಗರೆ
ಅರಿಭಯಂಕರ ಶತ್ರುಗಳ ಸಂ
ಹರಿಸುವುದು ನೃಪನೀತಿ ನಿನಗಿದು
ತರವೆ ಬಿಡು ಪರಹಿಂಸೆ ದೋಷವಿದೆಂದುದಾ ಪಕ್ಷಿ ||೧೮||

ಬಡಬಗೌತಣವಿಕ್ಕುವಡೆಯೊ
ಕ್ಕುಡಿತೆ ಹಾಲೇ ಮಂಜು ಸುರಿಯ
ಲ್ಕೊಡನೆ ಕೆರೆ ತುಂಬುವುದೆ ನೃಪ ನೀನೆನ್ನ ಭುಂಜಿಸಲು
ಒಡಲಿಗಾಪ್ಯಾಯನವೆ ಕೇಳೆಲೆ
ಪೊಡವಿಪತಿ ಬಿಡು ನನ್ನ ಮನೆಯಲಿ
ಮಡದಿ ಸುತರುಮ್ಮಳವ ನೋಡೆಂದೊರಲಿತಾ ಪಕ್ಷಿ ||೧೯||

ಮರನ ಹುತ್ತವನಚೇರಿದರ ಸಂ
ಗರದಿ ದೈನ್ಯಂಬಡುವರಾಯುಧ
ಮುರಿದ ಬರಿಗೈಯವರ ನೀರೊಳು ಹೊಕ್ಕು ನಿಂದವರ
ತರುಣಿಯರ ಮರೆಗೊಂಡವರ ನಿ
ಬ್ಬರದಿ ಮುರಿದೋಡುವರ ನಿದ್ರಾ
ಭರದೊಳಿರ್ದರ ಕೊಲುವುದುಚಿತವೆಯೆಂದುದಾ ಪಕ್ಷಿ ||೨೦||

ನುಡಿಗೆ ನಾಚಿದನರಸ ಹಂಸದ
ನಡವಳಿಗೆ ಮೆಚ್ಚಿದನು ನಿನ್ನನು
ಹಿಡಿದು ಕೊಲ್ಲುವವನಲ್ಲ ನಿನ್ನಾಲಯಕೆ ಹೋಗೆಂದು
ಬಿಡಲು ರೆಕ್ಕೆಯ ಕೊಡಹಿ ಹಾರಿತು
ವೊಡನೆ ಮರಳಿತು ಧರೆಗೆ ರಾಯನ
ಕಡೆಗೆ ಮಂಡಿಸಿ ಕುಳಿತು ನುಡಿದುದು ನೃಪಗೆ ವಿನಯದಲಿ ||೨೧||

ಭೂರಮಣ ಕೇಳಸುವ ಕಾಯ್ದುಪ
ಕಾರಮಾಡಿದೆ ನೀನು ನಿನಗುಪ
ಕಾರಮಾಡುವೆನೆನಲದೇನೆಂದರಸ ಬೆಸಗೊಂಡ
ಸಾರಹೃದಯನೆ ಚಿತ್ತವಿಸು ವಿ
ಸ್ತಾರದಿಂದರುಹುವೆನು ಭುವನದೊ
ಳಾರಿಗುಂಟೇ ಪರಮಸುಕೃತಗಳೆಂದುದಾ ಪಕ್ಷಿ ||೨೨||

ಅರಸ ಕೇಳತಿದೂರದಲಿ ಸುರ
ಪುರವ ಪೋಲ್ವ ವಿದರ್ಭಪಟ್ಟಣ
ದರಸು ಭೀಮನೃಪಾಲನಾತನ ತನುಜೆ ದಮಯಂತಿ
ಪರಮ ಪುಣ್ಯಾಂಗನೆ ಮಹಾಸುಂ
ದರಿ ನಿಪುಣೆ ಗಜಗಮನೆ ನಯಗುಣ
ಭರಿತೆ ಸೊಬಗಿನ ಸೋನೆ ತಾನಿಹಳಲ್ಲಿ ವನಜಾಕ್ಷಿ ||೨೩||

ಪೊಗಳಲಳವೇ ಸತಿಯ ಚೆಲುವಿನ
ಬಗೆಯ ಭಾವಿಸಿ ನೋಡಲತಿ ಸೋ
ಜಿಗವು ನೆರೆ ದಮಯಂತಿ ಯೌವನರೂಪರೇಖೆಯಲಿ
ನಗೆಮೊಗದ ಪೊಂಬೊಗರ ಮಿಂಚಿನ
ಬೊಗಸೆಗಂಗಳ ಸೆಳೆನಡುವ ಸೆ
ಳ್ಳುಗುರ ಬೆಡಗಿನ ಕಾಂತೆ ರಂಜಿಸುತಿರ್ಪಳಾ ಪುರದಿ ||೨೪||

ಕ್ಷಿತಿಯೊಳಿಹ ಸತಿಯರಲಿಯಮರಾ
ವತಿಯೊಳಿಹ ಪೆಣ್ಗಳಲಿ ಮೇಣಾ
ವತಳದಲ್ಲಿಹ ನಾರಿಯರಲೀಕ್ಷಿಸಿದಡಾ ಸತಿಗೆ
ಪ್ರತಿಯ ಕಾಣೆನು ರೂಪಿನಲಿ ನೀ
ನತಿ ಚೆಲುವ ನಿನಗವಳು ಪಾಸಟಿ
ಸತಿಗೆ ನೀನೇ ರಮಣನಲ್ಲದೆ ಕಾಣೆನಿತರರನು ||೨೫||

ಅವಳು ನಿನಗೊಲಿವಂತೆ ಮಾಡುವೆ
ಶಿವನ ಕೃಪೆ ನಿನಗುಂಟು ನಮ್ಮಲಿ
ಸವನುಡಿಯಿಲ್ಲರಸ ನಂಬುವುದೆನ್ನ ನೀನೆನಲು
ಅವನಿಪತಿ ನಸುನಗುತ ಹಂಸೆಯ
ಸವಿನುಡಿಗೆ ಮನಸೋತು ವಿರಹದ
ತವಕದಲಿ ಹೇವರಿಸಿ ನುಡಿದನು ನೃಪತಿ ಖಗಪತಿಗೆ ||೨೬||

ಮನಸಿಜನ ಶರಹತಿಗೆ ನೊಂದದೆನು
ತನುವ ಸೈರಿಸಲಾರೆನೆನಗಾ
ವನಿತೆಯನು ಸೇರಿಸುತ ಸಲಹೆನ್ನಸುವ ಕರುಣದಲಿ
ಎನಗೆ ನೀನೇ ಪರಮಬಾಂಧವ
ಮನಕೆ ಹರುಷವ ಮಾಡು ನೀನೀ
ಬನಕೆ ಬಹ ಪರಿಯಂತ ತಾನಿಲ್ಲಿಹೆನು ಹೋಗೆಂದ ||೨೭||

ತಳಿತ ಮೇಘದಿ ಹೊಳೆವ ಮಿಂಚಿನ
ಬಳಗವೆನೆ ಹಂಸಗಳು ನಭದಿಂ
ದಿಳೆಗಿಳಿದು ಸತಿಯರ ಸಭಾಮಂಡಲದಿ ಕುಳ್ಳಿರಲು
ನಳಿನಲೋಚನೆ ಕಂಡು ಪಕ್ಷಿಯ
ಲಲನೆಯರ ಮೊಗ ನೋಡಿ ಹಂಸದ
ಚೆಲುವ ಬಣ್ಣಿಸಿ ಹಿ ಡಿಯಬೇಕೆಂದೆನುತ ಗಮಿಸಿದಳು ||೩೨||

ಎಲೆ ಸರೋರುಹಗಂಧಿ ನೀನೆನ
ಗೊಲಿದು ಮನದಲಿ ಹಿಡಿವೆನೆಂಬೀ
ಛಲವಿದೇತಕೆ ಮಾಣು ನಾವಂಬರದ ಪಕ್ಷಿಗಳು
ನಿಲುಕುವವರಾವಲ್ಲ ಬರಿದೇ
ಬಳಲದಿರು ತಾ ಬಂದ ಪರಿಯನು
ತಿಳುಹುವೆನು ನಿನಗೆಲ್ಲವನು ಕೇಳೆಂದುದಾಪಕ್ಷಿ ||೩೫||

ನಳಿನಮುಖಿ ನಳಚಕ್ರವರ್ತಿಯ
ಬಳಿಯ ವಾಹನವಾಗಿ ತಾನಿಹೆ
ನೊಲಿದು ಸಲಹುವನೆನ್ನ ಪರಮಪ್ರೀತಿಯಲಿ
ಇಳೆಗೆ ನಳಕೂಬರ ಜಯಂತರ
ಚೆಲುವ ಮದನನ ರೂಪರೇಖೆಯ
ಹಳಿವುದಾ ನಳನೃಪನ ನಿಜಸೌಂದರ್ಯದಾಟೋಪ ||೩೬||

ನಿನ್ನ ರೂಪಿಗೆ ಸಲುವುದೌ ನಳ
ನುನ್ನತದ ಸೌಂದರ್ಯ ಜಗದೊಳು
ಗಿನ್ನು ನಾ ಸರಿಗಾಣೆ ನಿಮಗೀರ್ವರಿಗೆ ಸಮನಹುದು
ಎನ್ನಲಾ ನುಡಿಗೇಳಿ ಹಂಸೆಗೆ
ತನ್ನ ಶಿರವನು ಬಾಗಿ ಗುಣಸಂ
ಪನ್ನೆ ನುಡಿದಳು ನಾಚಿ ನಸುನಗೆಯಿಂದ ವಿನಯದಲಿ ||೩೭||

ಪರಮಗುಣನಿಧಿ ಪಕ್ಷಿ ಕೇಳ್ ಬಾ
ಹಿರನು ಪಾತಕಿ ಮದನನೆಲೆ ನಿ
ಷ್ಠುರದೊಳೆಸೆಯಲು ಪುಷ್ಪಬಾಣದಿ ನೊಂದುದೆನ್ನೊಡಲು
ಕರುಣರಸಧಾರೆಯಲಿ ತಾಪವ
ಪರಿಹರಿಸಬೇಕೆಂದು ನೀನಾ
ಧರಣಿಪತಿ ನಳನೃಪಗೆ ಬಿನ್ನೈಸೆಂದಳಿಂದುಮುಖಿ ||೩೮||

ಬಲಿದ ವಿರಹಾಗ್ನಿಯಲಿ ನೊಂದೆನು
ಬಳಲಿದೆನು ತನು ಬಾಡಿ ತಾಪದಿ
ನಲವು ಹಿಂಗಿತು ಬವಣೆ ಹೆಚ್ಚಿತು ತ್ರಾಣವೆಳದಾಯ್ತು
ಹಲವು ಮಾತೇನಿನ್ನು ನಳನೃಪ
ತಿಲಕನೆನ್ನಯ ಪತಿಯಲಾ ಭೂ
ತಳದ ಪುರುಷರು ಪಿತನ ಸಮ ಕೇಳೆಂದಳಿಂದುಮುಖಿ ||೪೦||

ಅರಸ ಕೇಳಾ ಹಂಸ ತರುಣಿಯ
ಕರುಣದಳತೆಯ ಕಂಡು ತಾ ಬಂ
ದಿರುವ ಕಾರ್ಯದ ಹದನು ಲೇಸಾಯ್ತೆಂದು ಮನದೊಳಗೆ
ಹರುಷ ಮಿಗೆ ಕೊಂಡಾಡಿ ಸತಿಯನು
ಕರೆದು ನುಡಿದುದು ನಿನಗೆ ನಳಭೂ
ವರನ ಪತಿಯನು ಮಾಳ್ಪೆನಂಜದಿರೆಂದುದಾ ಹಂಸೆ ||೪೧||

ಬಂದ ಹಂಸೆಯ ಕಂಡು ಮುಖಕಳೆ
ಯಿಂದಲರಿದನು ನೃಪತಿ ಮನದಲಿ
ಯಿಂದುಮುಖಿ ತನಗೊಲಿದ ಹದನಹುದೆಂದು ಹರುಷದಲಿ
ಮಂದಗಮನೆಯ ಕಂಡಿರೇ ಏ
ನೆಂದು ನುಡಿದಳು ಸತಿಯ ಬಗೆಯೇ
ನೆಂದು ಕೇಳಲು ನೃಪಗೆ ಬಳಿಕಿಂತೆಂದುದಾ ಪಕ್ಷಿ ||೪೪||

ಮಾನವಾಧಿಪ ಕೇಳು ಮನದನು
ಮಾನವನು ಬಿಡು ಗುಡಿಯ ಕಟ್ಟಿಸು
ನೀನೆಳಸಿದಿಷ್ಟಾರ್ಥಫಲ ಸಿದ್ಧಿಸಿದುದಿನ್ನೇನು
ಮಾನನಿಧಿ ನೀ ಮುನ್ನ ಮಾಡಿದ
ನೂನ ಸುಕೃತದ ಫಲವೊ ನಿನ್ನನೆ
ಧ್ಯಾನಿಸುವಳನವರತ ಮನ ಬೇರಿಲ್ಲವಾ ಸತಿಗೆ ||೪೫||

ನೋಡಿ ಸಂಪಾದಿಸಿ

ನಳಚರಿತ್ರೆ- ಸಂಧಿಗಳು>:

ನೋಡಿ ಸಂಪಾದಿಸಿ

ಕನ್ನಡ ವಿಕಿಸೋರ್ಸ್ ಸಂಪಾದಿಸಿ

ಹಳಗನ್ನಡ ಸಾಹಿತ್ಯ| ಪಂಪಭಾರತ |ಜೈಮಿನಿ ಭಾರತ |ಕುಮಾರವ್ಯಾಸ ಭಾರತ | ನಾಡಗೀತೆಗಳು | ಜನಪದ ಸಾಹಿತ್ಯ | ಚಲನಚಿತ್ರ ಸಾಹಿತ್ಯ | ಚಲನಚಿತ್ರೇತರ ಸಾಹಿತ್ಯ |ಭಾವಗೀತೆಗಳು | ಭಕ್ತಿಗೀತೆಗಳು | ದಾಸ ಸಾಹಿತ್ಯ | ವಚನ ಸಾಹಿತ್ಯ | ತಾತ್ವಿಕ ಸಾಹಿತ್ಯ | ಭಗವದ್ಗೀತೆ |
ಮಂಕುತಿಮ್ಮನ ಕಗ್ಗ | ಶಿಶು ಸಾಹಿತ್ಯ | ಕವನ ಸಂಕಲನಗಳು | ಸಂಪ್ರದಾಯ ಗೀತೆಗಳು |ಮಂಕುತಿಮ್ಮನ ಕಗ್ಗ| |ಸರ್ವಜ್ಞ | ಜೀವನ ಚರಿತ್ರೆ|ಸ್ತೋತ್ರಗಳು|ಸಂಸ್ಕೃತ ಸಾಹಿತ್ಯ

ನೋಡಿ ಸಂಪಾದಿಸಿ