<ನಳಚರಿತ್ರೆ

ನಳಚರಿತ್ರೆ:ಏಳನೆಯ ಸಂಧಿ (ಸಂಗ್ರಹ) ಸಂಪಾದಿಸಿ

ಕೇಳು ಧರ್ಮಜ ರತ್ನನಿರ್ಮಿತ
ದಾಲಯದ ಸೊಬಗಿನಲಿಯೋಲಗ
ಶಾಲೆಯಲಿ ಋತುಪರ್ಣನಿದ್ದನು ಸಿಂಹಪೀಠದಲಿ
ಸಾಲ ಮಕುಟದ ನೃಪರು ಭೂಸುರ
ಜಾಲ ಮಂತ್ರಿ ಪುರೋಹಿತರು ಗುಣ
ಶೀಲರುನ್ನತಸತಿಯರಿಂದೆಸೆದಿರ್ದುದಾಸ್ತಾನ ||೧||

ಅವನಿಪತಿ ಕೇಳ್ ನಿಮ್ಮ ಪದಕಮ
ಲವನು ಭಜಿಸುವೆ ಜೀಯ ಚಿತ್ತದಿ
ಸವಡಿನುಡಿ ತನಗಿಲ್ಲ ಬಾಹುಕನೆಂಬುದಭಿಧಾನ
ಭುವನದೊಳು ತಾನಶ್ವಕುಲಹೃದ
ಯವನನು ಬಲ್ಲೆನು ಶಾಕಪಾಕದಿ
ಸವಿಗೊಳಿಪ ವರವಿದ್ಯೆ ತನಗುಂಟೆಂದನವ ನಗುತ ||೩||

ಸೂಪಕಾರದೊಳಗ್ಗಳನು ಕಡು
ರೂಪಿನವ ತಾನಲ್ಲ ಚಿತ್ತದಿ
ಕಾಪುರುಷಷನೆನ್ನದಿರು ನೋಡಾ ತನ್ನ ಪೌರುಷವ
ಭೂಪ ಮುಂಗೈಗಂಕಣಕೆ ಕುಲ
ದೀಪ ಕನ್ನಡಿಯೇಕೆ ತರಿಸು ಪ್ರ
ತಾಪದಾಜಿಯನೆಂದು ಬಿನ್ನೈಸಿದನು ನಸುನಗುತ ||೪||

ಪೊಡವಿಪತಿ ಋತುಪರ್ಣ ಬಾಹುಕ
ನುಡಿದ ವಚನಕೆ ಮೆಚ್ಚಿ ಮನದು
ಗ್ಗಡದ ತೇಜಿಯ ತರಿಸಿ ಕೊಡಲೇರಿದನು ಬೀದಿಯಲಿ
ಮಡದ ಸನ್ನೆಗೆ ಕುಣಿದುರವೆಗಾ
ಲಿಡುತ ಜೋಡಣೆಯಿಂದ ಹಯವಡಿ
ಗಡಿಗೆ ಚಿಮ್ಮಿತು ವಾಯುವೇಗದೊಳರಸ ಕೇಳೆಂದ ||೫||

ಕರದ ವಾಘೆಯ ಸಡಿಲ ಬಿಡೆ ನಿ
ಬ್ಬರದ ಗಮನದೊಳೈದಿತವನಿಯೊ
ಳುರವಣಿಸಿ ಕೆಂಧೂಳಿ ಮುಸುಕಿದುದಂಬರವ ಬಿಡದೆ
ಧರಣಿ ತಲ್ಲಣಿಸಿದುದು ಗಗನದಿ
ಸುರರು ಕೊಂಡಾಡಿದರು ರಾವುತ
ರರಸನಹುದೋ ಭಾಪು ಭಾಪೆಂದು ಸಮಸ್ತಜನ ||೬||

ಮುರುಹಿ ಹಿಡಿಯಲು ಮಡದ ಸನ್ನೆಗೆ
ತಿರುಗಿತತಿವೇಗದಲಿ ಹಯವೋ
ಸರಿಸಿ ಕಿರುಬೆಮರಿಡಲು ನಿಲಿಸುತ ವಾರುವವನಿಳಿದು
ಕರವ ಮುಗಿಯಲು ನೃಪತಿ ಮೆಚ್ಚುತ
ತರಿಸಿ ಕೊಟ್ಟನು ಭೂಷಣಂಗಳ
ಹಿರಿದು ಸಂಬಳವಿತ್ತು ನಿಲಿಸಿದನರಸ ಬಾಹುಕನ ||೭||

ಜನಪ ಕೇಳ್ ಬಾಹುಕನು ವಾಲಾ
ಖ್ಯನಲಿ ಸಖ್ಯವ ಬೆಳಸುತಾತನ
ನನುದಿನವು ಕೂಡಿರ್ದನೊಂದಾನೊಂದುದಿನ ರಾತ್ರಿ
ವನಜಮುಖಿ ದಮಯಂತಿಯೊಳು ಚುಂ
ಬನ ಸರಸ ಸಲ್ಲಾಪದಿಂದಿಹ
ಕನಸ ಕಂಡೆಚಚರದಿ ಕಾಣದೆ ಹಲುಬಿದನು ||೮||

ಹಾ ತರುಣಿ ನಳಿನಾಕ್ಷಿ ನಯಸು
ಪ್ರೀತಿಪೂರ್ವಕದಿಂದ ಕನಸಲಿ
ಮಾತುದೋರದೆ ಬಂದು ನನ್ನಲಿ ಕರುಣದಿಂ ನೀನು
ಧಾತುಗುಂದಿದೆನಕಟ ಅಸುರಾ
ರಾತಿ ಬಲ್ಲನೆನುತ್ತ ಮನದಲಿ
ಕಾತರಿಸಿ ನಿಜಸತಿಗೆ ಹಲುಬಿದ ಮದನನೆಸುಗೆಯಲಿ ||೯|
ವಿಕಳನು ವಾಲಾಖ್ಯ ಕೇಳಿದು
ಪಕಪಕನೆ ನಗುತೆಂದನೆಲೆ ಬಾ
ಹುಕನೆ ಹಲುಬುವುದೇನು ಕಾಂತೆಗೆ ತಕ್ಕ ಬೊಂತೆಯನು
ಅಕಟ ನೀನತಿ ಚೆಲುವನೇ ಬಾ
ಲಕಿ ನಿನಗೆ ತಕ್ಕವಳೊ ಲೋಕದಿ
ಮಕರಕೇತನ ಮರುಳನೆಂದಪಹಾಸ್ಯಮಾಡಿದನು ||೧೦||

ಎಂದು ಹಾಸ್ಯವ ಮಾಡಿದವನೊಡ
ನೆಂದನಾ ಬಾಹುಕನು ಪೂರ್ವದೊ
ಳಂದು ಬ್ರಾಹ್ಮಣನೊಬ್ಬ ನಿಜಸತಿಯಗಲಿಯೆನುನೊಡನೆ
ನೊಂದು ನುಡಿದನು ವಿರಹದಲಿಯದ
ನಿಂದು ಕನಸಲಿ ಕಂಡು ಭ್ರಾಂತಿಯೊ
ಳೆಂದಡದು ತಪ್ಪೇನು ಸತಿಸುತರಿಲ್ಲ ತನಗೆಂದ ||೧೧||

ಅರಸ ಕೇಳಾ ಪುರದೊಳೊಬ್ಬರಿ
ಗರಿಯದಂದದಿ ನಳನಿರಲು ಭೂ
ಸುರರ ಮತದಲಿ ಕೇಳ್ದ ಭೀಮನೃಪಾಲನೀ ಹದನ
ಧರೆಯನೆಲ್ಲವ ಜೂಜಿನಲಿ ಪು
ಷ್ಕರಗೆ ಸೋತು ನಳನೃಪನಡವಿಗೆ
ತೆರಳಿದನು ಸತಿಸಹಿತವೆನೆ ಹೊರಳಿದನು ಶೋಕದಲಿ ||೧೨||

ಹಾ ಮಗಳೆ ದಮಯಂತಿ ನಿಷಧಸ
ನಾಮನನು ಕೈಹಿಡಿದು ಬಾಳುವ
ನೇಮವನು ಬಿಸುಟಡವಿಗಟ್ಟಿತೆ ವಿಧಿ ವಿಕರ್ಮಫಲ
ಭೀಮನೃಪನುದರದಲಿ ಜನಿಸಿ ವಿ
ರಾಮವಾದುದೆ ನಿನ್ನ ಸಿರಿಮುಖ
ತಾಮರಸವನು ಕಾಣೆ ತೋರೆಂದರಸ ಹಲುಬಿದನು ||೧೩||

ಮಗಳೆ ಮೋಹದ ಸುತರನಾರಿಗೆ
ತೆಗೆದು ಬಿಸುಟೆ ನಿರಾಶೆಯಲಿಯೀ
ಬಗೆಗೆ ತಂದುದೆ ವಿಧಿಯು ನಿನ್ನನು ಹರಮಹಾದೇವ
ಹೊಗಲುಬಹುದೇ ಕಾನನದೊಳಿಹ
ಮೃಗಗಳಿಂದೇನಾದಳೋ ಪತಿ
ಯಗಲಿದನೊ ಭೇತಾಳ ನುಂಗಿತೊಯೆನುತ ಹಲುಬಿದನು ||೧೪||

ಬಡವರುದರದೊಳುದಿಸಿ ಸುಖವನು
ಪಡೆಯಲೊಲ್ಲದೆ ಬಂದು ನೀನೀ
ಪೊಡವಿಪತಿಯುದರದಲಿ ಸಂಜನಿಸುವರೆ ಎಲೆ ತಾಯೆ
ಗಿಡಮೆಳೆಗಳಾರಣ್ಯದಲಿ ತನು
ವಿಡಿದು ಸೈರಿಪುದೆಂತು ಮಗಳೇ
ಸುಡು ತನುವನಿದನೆಂದು ಮರುಗಿದಳವಳ ನಿಜಜನನಿ ||೧೫||

ಸತಿಪತಿಗಳೀಪರಿಯ ಶೋಕೋ
ನ್ನತಿಯ ಸೈರಿಸಲಾರದಾ ಮಾ
ರುತನಸಖನೊಳು ಪುಗುವೆವೆಂದುರವಣಿಸಿ ನಡೆತರಲು
ಕ್ಷಿತಿಪ ಕೇಳಿಂತವರು ಬರುತಿರೆ
ಮತಿಯುತನೆ ಚಿಂತೆಯನು ಬಿಡು ಪತಿ
ವ್ರತೆಗೆ ಹಾನಿಯೆ ಸುಖದೊಳಿಹಳೆಂದುದು ನಭೋನಿನದ ||೧೬||

ಎಂದ ವಾಕ್ಯವ ಕೇಳಿ ಭೂಸುರ
ವೃಂದದಲಿ ಮುನಿಯೋರ್ವ ನುಡಿದನು
ಸಂದ ಪರಮಾನಂದಜ್ಯೋತಿರ್ಮಯನ ವಾಕಯಮಿದು
ಇಂದುಮುಖಿ ದಮಯಂತಿ ನಳನೃಪ
ರೆಂದಿಗೂ ಸುಕ್ಷೇಮಿಗಳು ನೀ
ವಿಂದು ಕಳುಹಿಸಿ ಚರರ ಭೇದಿಸಲೆಂದನಾ ಮುನಿಪ ||೧೭||

ಅರಸ ಕರೆಸಿ ವಿಪ್ರರನು ಭೂ
ಸುರರಿಗೆಂದನು ನೀವು ಕರುಣದಿ
ಧರೆಯೊಳೆಲ್ಲಿಹಳೆನ್ನ ಸುತೆ ದಮಯಂತಿ ನಳನೃಪರ
ಇರವ ಕಾಂಬುದು ಕಂಡು ಕರೆತಂ
ದರಿಗೆ ಕೊಡುವೆನು ಧರೆಯೊಳರ್ಧವ
ನಿರುತವೆಂದುಪಚರಿಸಿ ಕಳುಹಿದ ಭೀಮನೃಪವರ ||೧೯||

ಹರಿದರರಸಾಳುಗಳು ಪಶ್ಚಿಮ
ಶರಧಿ ದಕ್ಷಣಶರದಿ ಪೂರ್ವದ
ಶರಧಿಯುತ್ರರ ಕುರುನರರೇಂದ್ರರ ಸೀಮೆ ಪರಿಯಂತ
ಪುರಗಳಲಿ ವನವೀದಿಯಲಿ ತ
ದ್ಗಿರಿಗಳಲಿ ನಾನಾ ದಿಗಂತದೊ
ಳರಸಿ ಕಾಣದೆ ಮುಂದೆ ನಡೆದರು ಹಲವು ದಿವಸದಲಿ ||೨೦||

ಪುರನಗರ ಬೀದಿಗಳ ಮಧ್ಯದಿ
ನೆರೆದ ಸಭೆಯಲಿ ಮಾರ್ಗದಲಿ ಸಂ
ಚರಿಸುವವರನು ಕಂಡು ಕೇಳುತ ಬಂದರಲ್ಲಲ್ಲಿ
ಇರವ ಕಾಣದೆ ಬಳಲಿ ಚಿಂತಿಸಿ
ಮರುಗುತವನೀಸುರರು ಭೇದಿಸು
ತಿರಲು ಮೂವರು ಬೇರೆ ಹೊಕ್ಕರು ಚೈದ್ಯನಗರಿಯನು ||೨೧||

ಜನಪನವನೀಸುರರ ಮಂತ್ರದ
ಲನಿಲಸಖನಾರಾಧಿಸಲು ನೃಪ
ತನುಜೆಯಾದ ಸುನೀತೆಯೊಳು ದಮಯಂತಿ ಭಾವಿಸುತ
ವನಿತೆಯಿರೆ ಕಂಡನು ಸುದೇವನು
ಮನದೊಳನುಮಾನಿಸಿದನೀ ಮಾ
ನಿನಿ ಮಹಾಸತಿಯೆನುತ ವಿಸ್ಮಯಗೊಂಡ ಮನದೊಳಗೆ ||೨೩||

ಮುಗಿಲು ಮುಸುಕಿದ ಚಂದ್ರಬಿಂಬವೊ
ಪಗಲೊಳೆಸೆವ ಸುದೀಪಕಾಂತಿಯೊ
ಹೊಗೆಯೊಳೆಸಗಿದ ಚಿತ್ರಪ್ರತಿಮೆಯೊ ಹೇಳಲೇನವಳ
ಉಗಿದು ಬಿಸುಟ ವಿಭೂಷಣದ ಮೈ
ಲಿಗೆಯ ಸೀರೆಯ ಮಲಿನತನವನು ಕಳೆ
ದೆಗೆದು ಕೈಗಲ್ಲದಲಿ ನಿಂದಿರೆ ಕಂಡನಾ ಸತಿಯ ||೨೪||

ಇದು ಪತಿವ್ರತಧರ್ಮವಹುದೀ
ಸುದತಿ ತೊರೆದಿಹಳೆಲ್ಲವನು ನೃಪ
ವಧುವ ಕಾಣಿಸಿಕೊಂಬೆನೆಂದು ಸುದೇವ ನಡೆತಂದು
ಹದನಿದೇನೌ ತಾಯೆ ನಿಮ್ಮಯ
ವದನಕಮಲವು ಬಾಡಿ ಕಡುಮಾ
ಸಿದುಡುಗೆಯಲಿಹುದೇನು ಕಾರಣವೆನುತಲಿಂತೆಂದ ||೨೫||

ಇಂದುವದನೆ ವಿದರ್ಭಪಟ್ಟಣ
ದಿಂದ ಬಂದೆನು ತಾನು ಭೂಸುರ
ವಂದ್ಯನೆನ್ನಭಿಧಾನಕೇಳು ಸುದೇವನೆಂಬುವುದು
ಇಂದು ನಿಮ್ಮನು ನೋಡ ಕಳುಹಿದ
ತಂದೆ ಭೀಮನೃಪಾಲನಾತನ
ನಂದನಗೆ ತಾ ಸಖನು ಚಿತ್ತೈಸೆನ್ನ ಬಿನ್ನಪವ ||೨೬||

ಕ್ಷಿತಿಪ ಭೀಮನೃಪಾಲನಾತನ
ಸತಿಸುತರು ಬಾಂಧವ ಸಹೋದರ
ರತಿಶಯರು ನಿಮ್ಮಯ ಕುಮಾರರು ಕುಶಲರಿಂದಿನಲಿ
ಕ್ಷಿತಿಯನಗಲುತ ನಳನೃಪತಿ ನಿಜ
ಸತಿಸಹಿತ ವನಕೈದಿದುದ ಕೇ
ಳುತಲಿ ನಿಮ್ಮವರೆಲ್ಲ ಶೋಕಾಬ್ಧಿಯಲಿ ಮುಳುಗಿಹರು ||೨೭||

ಘೋರತರಶೋಕವನು ಸೈರಿಸ
ಲಾರದಾ ಸತಿಪತಿಗಳಿಬ್ಬರು
ಸೋರುತಿಹ ಕಂಬನಿಗಳಲಿ ಕರೆದೆಮ್ಮ ಕಳುಹಿದರು
ಧಾರಿಣಿಯಲರಸುತಲಿ ಬಂದೆವು
ವಾರಿಜಾನನೆ ನಿಮ್ಮ ಕಂಡೆವು
ಸೇರಿತೆಮ್ಮಯ ಪುಣ್ಯವೆಂದು ಸುದೇವ ಕೈಮುಗಿದ ||೨೮||

ವನಿತೆ ಕೇಳುತ ಶೋಕಜಲದಲಿ
ನೆನೆದು ಬುಧಕುಲತಿಲಕನನು ಬಾ
ರೆನುತ ಮನ್ನಿಸಿ ತನ್ನವರನಡಿಗಡಿಗೆ ಬೆಸಗೊಳಲು
ವನಿತೆ ನೋಡಿದಳಾ ಸುದೇವನ
ಜನನಿಗರುಹಲು ಬಂದಳಾ ವಿ
ಪ್ರನನು ನೀವಾರೆನಲು ನುಡಿದನು ಬಂದ ಸಂಗತಿಯ ||೨೯||

ಕೇಳು ತಾಯೆ ವಿದರ್ಭಪತಿ ಭೂ
ಪಾಲನಾತ್ಮಜೆ ಪತಿಯೊಡನೆ ತ
ನ್ನಾಲಯವನುಳಿದು ವನಕೈದಿದಳೆನಲು ನೃಪ ಕೇಳಿ
ತಾಳಲಾರದೆ ನೋಡಿ ಕರೆತರ
ಹೇಳಿ ಕಳುಹಲು ಬಂದೆನಿಲ್ಲಿಗೆ
ಬಾಲೆ ದಮಯಂತೆಯಳ ಕಂಡೆನೆನುತ್ತ ಕೈಮುಗಿದ ||೩೦||

ಕೇಳಿ ಶಿವಶಿವಯೆನು ತ ಶೋಕವ
ತಾಳಿ ತೆಗೆದಪ್ಪಿದಳು ಮಗಳೆ ವಿ
ಟಾಳಿಸಿತೆ ಸಿರಿ ರಾಜ್ಯಸಂಪದವೀ ಮಹಾವ್ಯಥೆಯ
ಭಾಳದಲಿ ವಿಧಿ ಬರೆದನೇ ಜನ
ಪಾಲ ನಳನೃಪನೆತ್ತ ಸರಿದನೊ
ಕಾಲಗತಿಯಿಂತಾಯಿತೇ ಹಾಯೆನುತ ಮರುಗಿದಳು ||೩೧||

ಬಾಲೆ ಬಿಡು ಶೋಕವನು ಭೀಮನೃ
ಪಾಲನರಸಿಗೆ ತಂಗಿ ತಾ ತ
ನ್ನಾಲಯದಿ ಕಡುನೊಂದೆ ಮಗಳೇ ಸಾಕು ನಮ್ಮೊಡನೆ
ಪೇಳದಿಹರೆ ಸುನಂದೆಗೆ ಸಮ
ಪಾಳಿ ನೀನೆಮಗೆಂದು ತಳ್ಕಿಸಿ
ಪಾಲಿಸಿದಳತಿಕರುಣದಲಿ ದಮಯಂತಿಯನು ಜನನಿ ||೩೨||

ಕಿರಿಯ ತಂದೆ ಸುಬಾಹು ಮರುಗಿದ
ವರಕುವರಿ ದಮಯಂತಿ ನಿನ್ನಯ
ಪುರುಷನಿಲ್ಲದೆ ಚಿಂತೆಯಿಂದೆಲ್ಲವನು ನೀ ತೊರೆದು
ಕರಗಿ ಕಂದಿದೆ ಮಗಳೆ ತಾನಿಂ
ತರಿದುದಿಲ್ಲಲ ನಿನ್ನ ಪುರುಷನ
ಕರೆಸಿ ಕೊಡುವೆನು ನಾನು ಚಿಂತಿಸಬೇಡ ನೀನೆಂದ ||೩೩||

ತರಳೆ ಬಾರೆಂದೆನುತ ಕಣ್ಣಿನೊ
ಳೊರೆವ ಕಂಬನಿಗಳನು ಸೆರಗಿನೊ
ಳೊರಸಿ ದಮಯಂತಿಯನು ಮನ್ನಿಸಿ ಬಂದನೋಲಗಕೆ
ಕರೆಸಿದನು ಭೂಸುರ ಸುದೇವನ
ನಿರುತ ಮಣಿಭೂಷಣಗಳಿಂದುಪ
ಚರಿಸಿ ಕಳುಹಲು ಬಂದ ಭೀಮನೃಪಾಲನೋಲಗಕೆ ||೩೪||

ಅರಸ ಕೇಳು ವಿದರ್ಭಪತಿ ಮನ
ಮರುಗುತಿರಲಾ ಸಮಯದಲಿ ಭೂ
ಸುರ ಸುದೇವನು ಬಂದು ಕೈಮುಗಿದೆಂದನೀ ಹದನ
ತರುಣಿ ದಮಯಂತಿಯನು ಕಂಡೆನು
ಹರುಷ ಮಿಗಲಾ ಚೈದ್ಯಪುರದಲಿ
ವರಜನನಿ ಚಿಕ್ಕಮ್ಮನಲ್ಲಿಹಳೆಂದನಾ ವಿಬುಧ ||೩೫||

ದೂತರೈದಿದರೊಸಗೆಯಲಿ ಜನ
ಜಾತ ನಲಿಯಲು ಬಂದು ಬೇಗದಿ
ಭೂತಳೇಂದ್ರಗೆ ಕೈಮುಗಿದು ದಮಯಂತಿ ಬಂದಳೆನೆ
ಮಾತ ಕೇಳಿದನದನು ಬಲಸಂ
ಗಾತಲೈತಂದವರ ಕಂಡತಿ
ಪ್ರೀತಿಯಿಂ ತಕ್ಕೈಸಿ ಕರೆತಂದನು ನಿಜಾಲಯಕೆ ||೪೧||

ಅವನಿಪತಿ ಕೇಳಾ ಪುರದೊಳು
ತ್ಸವವನದನೇನನೆಂಬೆನಂದಿನ
ದಿವಸದೊಳಗರಮನೆಯೊಳಾ ದಮಯಂತಿಯನು ಜನನಿ
ತವಕದಿಂ ಬಿಗಿಯಪ್ಪಿದಳು ಬಾಂ
ಧವರು ಸಂತೋಷಿಸಿದರನಿಬರು
ಯುವತಿಯರು ನಿಜತನಯರಾಲಿಂಗಿಸಿದರಂಗನೆಯ ||೪೨||

ಮಗನ ನೋಡಿದಳಿಂದ್ರಸೇನನ
ತೆಗೆದುತಕ್ಕೈಸಿದಳು ಕರೆದಳು
ಮಗಳ ಚಂದ್ರಾಸ್ಯಳನು ತೊಡೆಯೊಳಗಿಟ್ಟು ಮಮತೆಯಲಿ
ಮೊಗವನೀಕ್ಷಿಸಿ ಮೊಲೆಗಳಲಿ ತೊರೆ
ದುಗುವ ಹಾಲಿನ ಜನನಿ ಮಿಗೆ ನೀ
ರೊಗುವ ಕಣ್ಣೀರಿನಲಿ ಸಂತೈಸಿದಳು ನಿಜಸುತರ ||೪೩||




ನೋಡಿ ಸಂಪಾದಿಸಿ

ನಳಚರಿತ್ರೆ- ಸಂಧಿಗಳು>:

ನೋಡಿ ಸಂಪಾದಿಸಿ

ಕನ್ನಡ ವಿಕಿಸೋರ್ಸ್ ಸಂಪಾದಿಸಿ

ಹಳಗನ್ನಡ ಸಾಹಿತ್ಯ| ಪಂಪಭಾರತ |ಜೈಮಿನಿ ಭಾರತ |ಕುಮಾರವ್ಯಾಸ ಭಾರತ | ನಾಡಗೀತೆಗಳು | ಜನಪದ ಸಾಹಿತ್ಯ | ಚಲನಚಿತ್ರ ಸಾಹಿತ್ಯ | ಚಲನಚಿತ್ರೇತರ ಸಾಹಿತ್ಯ |ಭಾವಗೀತೆಗಳು | ಭಕ್ತಿಗೀತೆಗಳು | ದಾಸ ಸಾಹಿತ್ಯ | ವಚನ ಸಾಹಿತ್ಯ | ತಾತ್ವಿಕ ಸಾಹಿತ್ಯ | ಭಗವದ್ಗೀತೆ |
ಮಂಕುತಿಮ್ಮನ ಕಗ್ಗ | ಶಿಶು ಸಾಹಿತ್ಯ | ಕವನ ಸಂಕಲನಗಳು | ಸಂಪ್ರದಾಯ ಗೀತೆಗಳು |ಮಂಕುತಿಮ್ಮನ ಕಗ್ಗ| |ಸರ್ವಜ್ಞ | ಜೀವನ ಚರಿತ್ರೆ|ಸ್ತೋತ್ರಗಳು|ಸಂಸ್ಕೃತ ಸಾಹಿತ್ಯ