ನಳಚರಿತ್ರೆ:ಮೂರನೆಯ ಸಂಧಿ

<ನಳಚರಿತ್ರೆ

ನಳಚರಿತ್ರೆ:ಮೂರನೆಯ ಸಂಧಿ (ಸಂಗ್ರಹ) ಸಂಪಾದಿಸಿ

ಮೂರನೆಯ ಸಂಧಿ

ಕೇಳಿದನು ನಸುನಗುತ ಭೀಮನೃಪ
ಪಾಲ ತನ್ನಾತ್ಮಜೆಯ ಯೌವನ
ದೇಳಿಗೆಯನಾಲಿಸುತ ವರನಾರೆಂದು ಚಿಂತೆಯಲಿ
ಓಲಗಕೆ ನಡೆತಂದು ಬರೆಸಿದ
ನೋಲೆಗಳ ಕಳುಹಿದನು ಧರಣೀ
ಪಾಲಕರ ಬರಹೇಳೆನುತ ಹೊಯಿಸಿದನು ಡಂಗುರವ ||೪||

ಹರಿದರರಸಾಳುಗಳು ದಿಕ್ಖುಗ
ಳರಸುಗಳ ನಗರವನು ಇತ್ತಲು
ಪುರವ ಶೃಂಗರಿಸಿದರು ಭೀಮನೃಪಾಲನಾಜ್ಞೆಯಲಿ
ತರಿಸಿದರು ಭಂಡಾರದಲಿ ನವ
ಭರಿತವಾದ ಸುವಸ್ತುಗಳ ವಿ
ಸ್ತರಿಸಿ ಕಟ್ಟಿದರಗಲದಲಿ ವೈವಾಹಮಂಟಪವ ||೫||

ಆ ಸಮಯದಲಿ ನಾರದನು ಹರಿ
ವಾಸುದೇವಾಯೆಂಬ ವೀಣೆಯ
ಭಾಸುರದ ಕರಗಳಲಿ ನುಡಿಸುತ ಮುನಿಗಳೊಗ್ಗಿನಲಿ
ವಾಸವನ ಸಭೆಗೈತರಲು ಸಂ
ತೋಷದಿಂದಿದಿರೆದ್ದು ಘನ ಸಂ
ಹಾಸನದಿ ಕುಳ್ಳಿರಿಸಿ ಕೈಮುಗಿದೆಂದನಮರೇಂದ್ರ ||೧೦||

ಎತ್ತಣಿಂದೈತಂದಿರುರ್ವಿಯೊ
ಳುತ್ತಮರು ಧರಣೀಶರಲಿ ನೆರೆ
ಸತ್ಯಧರ್ಮ ಸುಶೀಲರಾರುಂಟಲ್ಲಿ ಗುಣವೇನು
ಚಿತ್ತವಿಸಿ ಮುನಿನಾಥಯೆನಗದ
ಬಿತ್ತರಿಸಿ ಪೇಳೆನಲು ಸುರಮುನಿ
ಚಿತ್ತದಲಿ ನಸುನಗುತ ನುಡಿದನು ಪಾಕಶಾಸನಗೆ ||೧೧||

ಅಮರಪತಿ ಕೇಳವನಿಯಲಿ ಭೂ
ರಮಣರುಂಟು ಅನೇಕವವರೊಳು
ನಿಮಗೆ ಪೇಳ್ವೆ ವಿದರ್ಭಪುರಪತಿ ಭೀಮನೃಪತನುಜೆ
ಕಮಲಮುಖಿ ದಮಯಂತಿಗೆವ್ವನ
ಸಮತಳಿಸೆ ಚಿತ್ತದಿ ಸ್ವಯಂವರ
ಕಮಿತಬಲ ನೃಪರೈದಿ ಬರುತಿರೆ ಧರಣಿಯಗಲದಲಿ ||೧೨||

ಅರಸ ಕೇಳಮರೇಂದ್ರನಾ ಮುನಿ
ವರನ ವಚನವ ಕೇಳಿ ಹೆಚ್ಚಿದ
ವಿರಹದಲಿ ಕರೆಸಿದನು ಸತಿಯರಿಗೆಂದನೀ ಹದನ
ಪರಮಸತಿ ದಮಯಂತಿಯಳನುಪ
ಚರಿಯದಲಿ ಯೆನಗೊಲಿಯೆ ಮಾಡೆಂ
ದುರುತರದ ವಸ್ತುಗಳನಿತ್ತಬಲೆಯರ ಬೀಳ್ಕೊಟ್ಟ||೧೪||

ನಳಿನಮಿತ್ರನ ತೇಜದವೊಲಿಳೆ
ಗಿಳಿವ ಮಹಿಮರ ಕಂಡು ರಥದಿಂ
ದಿಳೆಗಿಳಿದು ಭಕ್ತಿಯಲಿ ನಳ ಕೈಮುಗಿದು ನಿಂದಿರಲು
ತಳಿತ ಹರು ಷಾನಂದದಲಿ ಬರ
ಸೆಳೆದು ಬಿಗಿಯಪ್ಪಿದರು ರಾಯನ
ಚೆಲುವನೀಕ್ಷಿಸಿ ನಲಿದು ಕೊಂಡಾಡಿದರು ಮನವೊಲಿದು ||೧೬||

ಕುಶಲವೇ ನಳನೃಪತಿ ಬಾರೈ
ಶಶಿಕುಲೋದ್ಭವ ನಿನ್ನ ಪಿತನೀ
ವಸುಧೆಗಧಿಪತಿ ವೀರಸೇನನು ಪರಮಸಖನೆಮಗೆ
ಒಸೆದು ಬೇಡುವ ಕಾರ್ಯವಿದು ಭರ
ವಸದಿ ಬಂದೆವು ನಮಗೆ ಫಲ ಸಿ
ದ್ಧಿಸಿತು ಉಪಕಾರಾರ್ಥ ನಿನ್ನಿಂದಾಗಬೇಕೆಂದ ||೧೭||

ಭೂತಳದೊಳಿಹ ಸತಿಯರಲಿ ರೂ
ಪಾತಿಶಯೆ ದಮಯಂತಿಯೆನಲಾ
ಮಾತಿನಲಿ ಮನವೊಲಿದುದೆನಗವಳಲ್ಲಿ ನೀಪೋಗಿ
ಆ ತಳೋದರಿಗುಚಿತವಚನವ
ಪ್ರೀತಿಪೂರ್ವಕದಿಂದ ಸತಿಯಳ
ನೀ ತಿಳುಹಿಯನುಕೂಲೆಯನು ಮಾಡೆಂದನಮರೇಂದ್ರ ||೧೯||

ಕೇಳಿದಾಮಾತಿನಲಿ ಚಿಂತೆಯ
ತಾಳಿದನು ಚಿತ್ತದಲಿ ನಳನೃಪ
ಲೋಲಲೋಚನೆ ತನ್ನನೇ ಪತಿಯೆಂದು ಭಜಿಸಿಹಳು
ಆ ಲತಾಂಗಿಯ ಮೇಲೆ ಪರಮವಿ
ಶಾಲಮನವಿಹುದಿನ್ನು ಶಿವಶಿವ
ಬಾಲಕಿಯ ಬೆಸಗೊಳಲು ನಾಲಗೆಯೆಂತು ತನಗೆಂದ ||೨೧||

ಬಂದರಲ್ಲಿಗೆ ಸುರಪ ಕಳುಹಿದ
ಮಂದಗಮನೆಯರಖಿಳವಸ್ತುವ
ತಂದು ಕಾಣಿಕೆಗೊಟ್ಟು ಕೈಮುಗಿದೆರಗಿ ನಿಂದಿರಲು
ಬಂದ ಸತಿಯರ ನೋಡಿ ನೀವೆ
ಲ್ಲಿಂದ ಬಂದಿರಿ ನಿಮ್ಮ ಹದನೇ
ನೆಂದು ಬೆಸಗೊಳೆ ವಿನಯದಿಂದರುಹಿದರು ಮಾನಿನಿಗೆ ||೨೯||

ತಾಯಿ ಕೇಳಮರೇಂದ್ರ ನಿಮ್ಮ ನಿ
ಜಾಯತದ ಚೆಲುವಿಕೆಯ ಕೇಳಿದು
ಕಾಯಜನ ಶರಹತಿಗೆ ನೊಂದುರೆ ಕಳುಹಿದನು ನಮಗೆ
ಆಯತದ ಭೂಷಣವ ತೊಡು ಸುರ
ರಾಯನಿಗೆ ಸತಿಯಾಗು ಮರ್ತ್ಯದ
ರಾಯರಸ್ಥಿರರವರ ನೆಚ್ಚದಿರೆಂದರಾ ಸತಿಗೆ ||೩೦||

ಎನಲು ಕೇಳಿದಳಾ ನುಡಿಯ ಸುರ
ವನಿತೆಗೆಂದಳು ಚಿತ್ತವೆನಗೊ
ಬ್ಬನಲಿ ಸಿಲುಕಿತು ಮರಳಿಪಡೆ ಕಮಲಾಕ್ಷಗಳವಲ್ಲ
ಅನಿಮಿಷಾಧಿಪ ತನಗೆ ದೇವಾಂ
ಗನೆಯರಿರುತಿರೆ ಮನುಜಸತಿ ಪಾ
ವನವೆ ಬರಿದೆ ದುರಾಸೆ ತನಗೇಕೆಂದಳಿಂದುಮುಖಿ ||೩೩||

ಮರಳಿದರು ಸುರಸತಿಯರಿತ್ತಲು
ಬರುತೆ ನಳನೃಪತಿಲಕ ತಾ ಮನ
ಹರುಷದಲಿ ನಿಜರೂಪ ತಾಳ್ದನು ರಾಜತೇಜದಲಿ
ಅರಸನಿರೆ ದಮಯಂತಿ ಕಂಡ
ಚ್ಚರಿಯ ಮದನನೊ ನಳನೊ ನಳಕೂ
ಬರನೊ ಜಯಂತನೊ ಎನೆ ವಿಸ್ಮಯಗೊಂಡಳಾ ತರುಣಿ ||೩೪||

ಆರು ನೀವೆಲ್ಲಿಂದ ಬಂದಿರಿ
ಕಾರಣವಿದೇನೆಮ್ಮ ರಾಜ
ದ್ವಾರದಲಿ ನೀವ್ ಹೊಕ್ಕ ಹದನೇನಿಲ್ಲಿ ಗಂಡುನೊಣ
ಸೇರಲಮ್ಮದು ನೀವಘಾಡದ
ವೀರರತಿಸೌಂದರ್ಯರೆನೆ ನಳ
ಭೂರಮಣ ನಸುನಗುತ ನುಡಿದನು ಸತಿಗೆವಿನಯದಲಿ ||೩೬||

ಬಲ್ಲವರು ನೀವಧಿಕರೆಮ್ಮೊಳು
ಸಲ್ಲದೀ ನುಡಿಯೇತಕಿದು ಶಚಿ
ವಲ್ಲಭನ ಮಾತೇನು ಸಾಕಂತಿರಲಿಯೆನಗಿನ್ನು
ವಲ್ಲಭನು ನಳನೃಪತಿಯಲ್ಲದೆ
ನಲ್ಲರುಂಟೆ ಜಗದಿ ನೀವ್ ಸುರ
ರಲ್ಲ ನಿಮ್ಮಭಿಧಾನವೇನೆಂದಳು ಸರೋಜಮುಖಿ ||೩೮||

ದೂತರಲಿ ಕುಲಗೋತ್ರಗಳ ನೀ
ನೇತಕರಸುವೆ ತರುಣಿಯಿಂದ್ರನು
ಖ್ಯಾತ ಪುರುಷನು ಬಯಸುವುದು ಕೃತಪುಣ್ಯ ನಿನಗಿನ್ನು
ಭೂತಳದ ನರರಧಿಕರೇ ಸಂ
ಪ್ರೀತಿಯೇಕವರಲ್ಲಿ ಬಿಡು ಪುರು
ಹೂತನನು ಕೈವಿಡಿದು ನೀ ಸುಖಿಯಾಗು ನಡೆಯೆಂದ ||೩೯||

ಮಾನವಾಧೀಶ್ವರರೊಳಗೆ ಸನು
ಮಾನವುಳ್ಳವ ಸತ್ತಸಂಧ ನಿ
ಧಾನಿ ಹಿಮಕರವಂಶಪಾವನ ಸಾರ್ವಭೌಮನಲೆ
ಆ ನರೇಂದ್ರಗೆ ಸರಿಯೆ ಮನುಮುನಿ
ದಾನವಾಮರರಿನ್ನು ನಿಮಗೀ
ಹೀನವೃತ್ತಿಯ ಮಾತದೇಕೆಂದಳು ಸರೋಜಮುಖಿ ||೪೧||

ನಿಷಧಪತಿಯೇ ಪತಿಯೆನುತ ಭಾ
ವಿಸಿದೆನಾತನ ಕರುಣವೆನ್ನಲಿ
ಪಸರಿಸಿದಡದು ಲೇಸು ಲೇಸಲ್ಲದೊಡೆ ನಳನೃಪಗೆ
ಅಸುವ ತೆರುವೆನು ಎನಗೆ ಫಲ ಸಿ
ದ್ಧಿಸಲಿದೇ ಸಂಕಲ್ಪವೆಂದಾ
ಶಶಿವದನೆ ಕಂಬನಿಯ ಮಿಡಿದಳು ನಖದ ಕೊನೆಯಲ್ಲಿ ||೪೨||

ಕರಗಿತಂತಃಕರಣ ನೃಪತಿಗೆ
ಸರಸಿಜಾಕ್ಷಿಯ ದೃಢವ ಕಂಡನು
ಕರುಣಲತೆ ಕುಡಿದೋರಿತಾಕ್ಷಣ ನುಡಿದನಾ ಸತಿಗೆ
ಸರಸಿಜಾನನೆ ಕೇಳು ತಾನೇ
ಧರಣಿಪತಿ ನಳನೆನಲು ಲಜ್ಜಿಸಿ
ಶಿರವ ನಸು ಬಾಗಿದಳು ಮತ್ತಿಂತೆಂದಳಾ ನೃಪಗೆ ||೪೪||

ನಳನೆನಲು ತನು ಪುಳಕಜಲದಲಿ
ಮುಳುಗಿ ಹೊಂಪುಳಿಯೋಗಿ ತನ್ನಯ
ಕೆಳದಿಯರ ಮರೆಗೊಂಡು ಹರುಷದ ಹೃದಯಭೀತಿಯಲಿ
ತೊಲಗಿದಳು ನೃಪನಿತ್ತ ಪುರವನು
ಕಳೆದು ಬಂದನು ಮನದ ವಿರಹದಿ
ಬಳಲುತಿಹ ದೇವೇಂದ್ರನಿದ್ದೆಡೆಗಾಗಿ ವಹಿಲದಲಿ ||೪೬||

ಬಂದು ಭಯಭೀತಿಯಲಿ ನಳನೃಪ
ನಿಂದ್ರ ಮಾರುತ ಯಮ ವರುಣರಿಗೆ
ವಂದಿಸುತ ದಮಯಂತಿ ಪೇಳಿದ ಮಾತ ವಿವರಿಸಲು
ಒಂದು ನಿನ್ನಲಿ ಕುಟಿಲವಿಲ್ಲರ
ವಿಂದವದನೆಯರಿಂದ ಕೇಳಿದೆ
ವೆಂದು ಸಂತೈಸಿದರು ಭಯಗೊಂಡಿಹ ನೃಪಾಲಕನ ||೪೭||

ಲಲನಯೊಲಿವುದಕಿನ್ನು ಹದನಿದು
ಹಲವು ಮಾತೇನೆಂದು ನಾಲ್ವರು
ನಳನ ರೂಪನು ತಾಳ್ದರಿತ್ತಲು ಧರಣಿವಲ್ಲಭರು
ನಲಿದು ಬರುತಿರೆ ಸ್ವರ್ಗ ಮರ್ತ್ಯಾ
ವಳಿಯ ಸುಜನರು ಸಿದ್ಧ ಕಿನ್ನರ
ರೊಲಿದು ಗುಹ್ಯಕ ಗರುಡ ಗಂಧರ್ವಾದಿ ಸುರರಲ್ಲಿ ||೪೯||

ನೆರೆದುದಗಣಿತದರಸುಗಳು ಕರಿ
ತುರಗ ರಥ ಪಾಯ್ದಳದ ಸಂದಣಿ
ಮೆರೆವ ಶಂಖ ಮೃದಂಗ ತಂಬಟ ಭೇರಿ ನಿಸ್ಸಾಳ
ಉರುಬಿತಲ್ಲಿ ವಿದರ್ಭಪುರಪತಿ
ಧರಿಸಲಾಪನೆ ಹರಮಹಾದೇ
ವರಸ ಬಣ್ಣಿಸಲರಿಯೆ ನೆರೆದ ಮಹಾಮಹೀಸುರರ||೫೦||

ಕುಡಿತೆಗಂಗಳ ಸಿರಿಮುಡಿಯ ಬಡ
ನಡುವ ಸೆಳೆವತಿಬೆಡಗಿನಲಿ ಹೊಂ
ಗೊಡದ ಮೊಲೆ ವೈಯಾರದುಡುಗೆಯ ಸಿರಿಯ ಸಡಗರದ
ತೊಡರ ಝಣಝಣರವದ ಮೆಲ್ಲಡಿ
ಯಿಡುವ ಗಮನದ ಭರದಿ ಕಿರುಬೆಮ
ರಿಡುತ ಬಂದಳು ಸಖಿಯರೊಡನೆ ವಿವಾಹಮಂಟಪಕೆ ||೫೬||

ನಿಗಮನುತೆ ಗೀರ್ವಾಣಿ ರಕ್ಷಿಸು
ಮುಗುದರನು ಕರುಣದಲಿ ನೋಡುತ
ಲಗಣಿತದಲಿ ಅರಸುಗಳು ನೆರೆದಿರೆ ತಿಳಿಯಲರಿದೆಮಗೆ
ಮಗಳ ಮನ ವಿಗಡಿಸಿತು ನಾಲ್ವರು
ಬೆರಗುಗೊಳಿಸಿದರೆನಲು ಭಾರತಿ
ನಗುತ ನುಡಿದಳು ಕರೆದು ದಮಯಂತಿಯನುಪಚರಿಸಿ ||೬೫||

ದೇವಮಾಯವಿದೀಗ ಕೇಳೆಲೆ
ದೇವಿ ಇಂದ್ರನ ಭಜಿಸೆನಲು ಸಂ
ಭಾವನೀಯರ ಸಭೆಗೆ ಬಂದೆರಗಿದಳು ಭಕ್ತಿಯಲಿ
ದೇವಕುಲಸಂಭವರು ರಕ್ಷಿಸಿ
ನೀವು ಮಗಳೆಂದೆನ್ನ ಭಾವಿಸಿ
ಪಾವನರು ತರಳೆಯನು ಪತಿಕರಿಸೆಂದಳಿಂದುಮುಖಿ ||೬೬||

ಘಳಿಲನೇ ಪ್ರಚ್ಛನ್ನವೇಶವ
ಕಳೆದು ಯಮ ಪವಮಾನ ವರುಣರು
ಬಳಿಕ ಸುರಪತಿ ಮೆಚ್ಚಿ ದಮಯಂತಿಯನು ಕೊಂಡಾಡಿ
ನಳನೃಪನ ಕರೆಸಿದರು ಹೂವಿನ
ಮಳೆಯ ಕರೆದರು ದೇವದುಂದುಭಿ
ಮೊಳಗಲರಸನ ಕೊರಳಿಗಿಟ್ಟಳು ಪುಷ್ಪಮಾಲಿಕೆಯ ||೬೭||

ನೋಡಿ ಸಂಪಾದಿಸಿ

ನಳಚರಿತ್ರೆ- ಸಂಧಿಗಳು>:

ನೋಡಿ ಸಂಪಾದಿಸಿ

ಕನ್ನಡ ವಿಕಿಸೋರ್ಸ್ ಸಂಪಾದಿಸಿ

ಹಳಗನ್ನಡ ಸಾಹಿತ್ಯ| ಪಂಪಭಾರತ |ಜೈಮಿನಿ ಭಾರತ |ಕುಮಾರವ್ಯಾಸ ಭಾರತ | ನಾಡಗೀತೆಗಳು | ಜನಪದ ಸಾಹಿತ್ಯ | ಚಲನಚಿತ್ರ ಸಾಹಿತ್ಯ | ಚಲನಚಿತ್ರೇತರ ಸಾಹಿತ್ಯ |ಭಾವಗೀತೆಗಳು | ಭಕ್ತಿಗೀತೆಗಳು | ದಾಸ ಸಾಹಿತ್ಯ | ವಚನ ಸಾಹಿತ್ಯ | ತಾತ್ವಿಕ ಸಾಹಿತ್ಯ | ಭಗವದ್ಗೀತೆ |
ಮಂಕುತಿಮ್ಮನ ಕಗ್ಗ | ಶಿಶು ಸಾಹಿತ್ಯ | ಕವನ ಸಂಕಲನಗಳು | ಸಂಪ್ರದಾಯ ಗೀತೆಗಳು |ಮಂಕುತಿಮ್ಮನ ಕಗ್ಗ| |ಸರ್ವಜ್ಞ | ಜೀವನ ಚರಿತ್ರೆ|ಸ್ತೋತ್ರಗಳು|ಸಂಸ್ಕೃತ ಸಾಹಿತ್ಯ