ಆದಿಪರ್ವ: ೦೧. ಪೀಠಿಕಾ ಸಂಧಿ

<ಕುಮಾರವ್ಯಾಸ ಭಾರತ

ಆದಿಪರ್ವ – ಪೀಠಿಕಾ ಸಂಧಿ ಸಂಪಾದಿಸಿ

ಪ್ರಾರ್ಥನೆ ಸಂಪಾದಿಸಿ

ಶುಕ್ಲಾಂಬರಧರಂ ವಿಷ್ಣುಂ ಶಶಿವರ್ಣಂ ಚತುರ್ಭುಜಂ
ಪ್ರಸನ್ನವದನಂ ಧ್ಯಾಯೇತ್ ಸರ್ವವಿಘ್ನೋಪಶಾಂತಯೇ
ನಾರಾಯಣಂ ನಮಸ್ಕೃತ್ಯ ನರಂ ಚೈವ ನರೋತ್ತಮಮ್
ದೇವೀಂ ಸರಸ್ವತೀಂ ವ್ಯಾಸಂ ತತೋ ಜಯಮುದೀರಯೇತ್
ಪೀಠಿಕಾ ಸಂಧಿ ಸಂಪಾದಿಸಿ

ಶ್ರೀವನಿತೆಯರಸನೆ ವಿಮಲ ರಾ

ಜೀವ ಪೀಠನ ಪಿತನೆ ಜಗಕತಿ

ಪಾವನನೆ ಸನಕಾದಿ ಸಜ್ಜನನಿಕರ ದಾತಾರ

ರಾವಾಣಾಸುರ ಮಥನ ಶ್ರವಣ ಸು

ಧಾ ವಿನೂತನ ಕಥನ ಕಾರಣ ಕಾವುದಾನತ ಜನವ ಗದುಗಿನ ವೀರನಾರಯಣ ೧


ಶರಣಸಂಗವ್ಯಸನ ಭುಜಗಾ

ಭರಣನಮರ ಕಿರೀಟ ಮಂಡಿತ

ಚರಣ ಚಾರುಚರಿತ್ರ ನಿರುಪಮ ಭಾಳಶಿಖಿನೇತ್ರ

ಕರಣನಿರ್ಮಲ ಭಜಕರಘ ಸಂ

ಹರಣ ದಂತಿ ಚಮೂರು ಚರ್ಮಾಂ

ಬರನೆ ಸಲಹುಗೆ ಭಕುತ ಜನರನು ಪಾರ್ವತೀರಮಣ ೨


ವರಮಣಿಗಳಿಂದೆಸೆವ ಮೌಳಿಯ

ಸರಸಿಜಾರಿಯ ಕಿರಣದೋಳಿಯ

ವಿರಚಿಸಿದ ಸಿಂಧೂರಭಾಳದಿ ಕುಣಿವ ಕುಂತಳದ

ಕರಿ ನಿಭಾಕೃತಿಯೆನಿಪ ವದನದ

ಕರದ ಪಾಶದ ಮೋದಕದ ವಿ

ಸ್ತರದ ಗಣಪತಿ ಮಾಡೆಮಗೆ ನಿರ್ವಿಘ್ನದಾಯಕವ ೩


ಗಜಮುಖನೆ ಮೆರೆವೇಕದಂತನೆ

ನಿಜಗುಣಾನ್ವಿತ ಪರಶುಧಾರನೆ

ರಜತಗಿರಿಗೊಡೆಯನ ಕುಮಾರನೆ ವಿದ್ಯೆವಾರಿಧಿಯೆ

ಅಜನು ಹರಿ ರುದ್ರಾದಿಗಳು ನೆರೆ

ಭಜಿಸುತಿಹರನವರತ ನಿನ್ನನು

ತ್ರಿಜಗವಂದಿತ ಗಣಪ ಮಾಳ್ಪುದು ಮತಿಗೆ ಮಂಗಳವ ೪


ವಾರಿಜಾಸನೆ ಸಕಲಶಾಸ್ತ್ರ ವಿ

ಚಾರದುದ್ಭವೆ ವಚನರಚನೋ

ದ್ಧಾರೆ ಶ್ರುತಿ ಪೌರಾಣದಾಗಮ ಸಿದ್ದಿದಾಯಕಿಯೆ

ಶೌರಿ ಸುರಪತಿ ಸಕಲ ಮುನಿಜನ

ಸೂರಿಗಳಿಗನುಪಮದ ಯುಕುತಿಯೆ

ಶಾರದೆಯೆ ನರ್ತಿಸುಗೆ ನಲಿದೊಲಿದೆನ್ನ ಜಿಹ್ವೆಯಲಿ ೫


ಆದಿ ನಾರಾಯಣಿ ಪರಾಯಣಿ

ನಾದಮಯೆ ಗಜಲಕ್ಷ್ಮಿ ಸತ್ವಗು

ಣಾಧಿದೇವತೆ ಅಮರ ವಂದಿತ ಪಾದಪಂಕರುಹೆ

ವೇದಮಾತೆಯೆ ವಿಶ್ವತೋಮುಖೆ

ಯೈದು ಭೂತಾಧಾರಿಯೆನಿಪೀ

ದ್ವಾದಶಾತ್ಮ ಜ್ಯೋತಿರೂಪಿಯೆ ನಾದೆ ಶಾರದೆಯೆ ೬


ವೀರನಾರಾಯಣನೆ ಕವಿ ಲಿಪಿ

ಕಾರ ಕುವರವ್ಯಾಸ ಕೇಳುವ

ಸೂರಿಗಳು ಸನಕಾದಿಗಳು ಜಂಗಮ ಜನಾರ್ದನರು

ಚಾರುಕವಿತೆಯ ಬಳಕೆಯಲ್ಲ ವಿ

ಚಾರಿಸುವೊಡಳವಲ್ಲ ಚಿತ್ತವ

ಧಾರು ಹೋ ಸರ್ವಜ್ಞರಾದರು ಸಲುಗೆ ಬಿನ್ನಪವ ೭


ಶ್ರೀಮದಮರಾಧೀಶ ನತಪದ

ತಾಮರಸ ಘನವಿಪುಳ ನಿರ್ಮಲ

ರಾಮನುಪಮ ಮಹಿಮ ಸನ್ಮುನಿ ವಿನುತ ಜಗಭರಿತ

ಶ್ರೀಮದೂರ್ಜಿತ ಧಾಮ ಸುದಯಾ

ನಾಮನಾಹವ ಭೀಮ ರಘುಕುಲ

ರಾಮ ರಕ್ಷಿಸುವೂಲಿದು ಗದುಗಿನ ವೀರನಾರಯಣ ೮


ಶರಧಿಸುತೆ ಸನಕಾದಿ ವಂದಿತೆ

ಸುರನರೋರಗ ಮಾತೆ ಸುಜನರ

ಪೂರೆವ ದಾತೆ ಸುರಾಗ್ರಗಣ್ಯಸುಮೌನಿ ವರಸ್ತುತ್ಯೆ

ಪರಮ ಕರುಣಾ ಸಿಂಧು ಪಾವನ

ಚರಿತೆ ಪದ್ಮಜ ಮುಖ್ಯ ಸಕಲಾ

ಮರ ಸುಪೂಜಿತೆ ಲಕ್ಷ್ಮಿ ಕೊಡುಗೆಮಗಧಿಕ ಸಂಪದವ ೯


ಗಜಮುಖನ ವರಮಾತೆ ಗೌರಿಯೆ

ತ್ರಿಜಗದರ್ಚಿತ ಚಾರು ಚರಣಾಂ

ಭುಜೆಯೆ ಪಾವನಮೂರ್ತಿ ಪದ್ಮಜಮುಖ್ಯ ಸುರಪೂಜ್ಯೆ

ಭಜಕರಘ ಸಂಹರಣೆ ಸುಜನ

ವ್ರಜ ಸುಸೇವಿತೆ ಮಹಿಷ ಮರ್ದಿನಿ

ಭುಜಗ ಭೂಷಣನರಸಿ ಕೊಡು ಕಾರುಣ್ಯದಲಿ ಮತಿಯ ೧೦


ದುರಿತಕುಲಗಿರಿ ವಜ್ರದಂಡನು

ಧರೆಯ ಜಂಗಮ ಮೂರ್ತಿ ಕವಿ ವಾ

ರಿರುಹ ದಿನಮಣಿ ನಿಖಿಲ ಯತಿಪತಿ ದಿವಿಜವಂದಿತನು

ತರಳನನು ತನ್ನವನೆನುತ ಪತಿ

ಕರಿಸಿ ಮಗನೆಂದೊಲಿದು ಕರುಣದಿ

ವರವನಿತ್ತನು ದೇವ ವೇದವ್ಯಾಸ ಗುರುರಾಯ ೧೧


ವಂದಿತಾಮಳ ಚರಿತನಮರಾ

ನಂದ ಯದುಕುಲ ಚಕ್ರವರ್ತಿಯ

ಕಂದ ನತಸಂಸಾರ ಕಾನನ ಘನ ದವಾನಳನು

ನಂದನಂದನ ಸನ್ನಿಭನು ಸಾ

ನಂದದಿಂದಲೆ ನಮ್ಮುವನು ಕೃಪೆ

ಯಿಂದ ಸಲಹುಗೆ ದೇವ ಜಗದಾರಾಧ್ಯ ಗುರುರಾಯ ೧೨


ತಿಳಿಯ ಹೇಳುವೆ ಕೃಷ್ಣಕಥೆಯನು

ಇಳೆಯ ಜಾಣರು ಮೆಚ್ಚುವಂತಿರೆ

ನೆಲೆಗೆ ಪಂಚಮ ಶ್ರುತಿಯನೊರೆವೆನು ಕೃಷ್ಣ ಮೆಚ್ಚಲಿಕೆ

ಹಲವು ಜನ್ಮದ ಪಾಪ ರಾಶಿಯ

ತೊಳೆವ ಜಲವಿದು ಶ್ರೀಮದಾಗಮ

ಕುಲಕೆ ನಾಯಕ ಭಾರತಾಕೃತಿ ಪಂಚಮ ಶ್ರುತಿಯ ೧೩


ಪದದಪ್ರೌಢಿಯ ನವರಸಂಗಳ

ವುದಿತವೆನುವಭಿಧಾನ ಭಾವವ

ಬೆದಕಲಾಗದು ಬಲ್ಲ ಪ್ರೌಢರುಮಾ ಕಥಾಂತರಕೆ

ಇದ ವಿಚಾರಿಸೆ ಬರಿಯ ತೊಳಸಿಯ

ವುದಕದಂತಿರೆಯಲ್ಲಿ ನೋಳ್ಪುದು

ಪದುಮನಾಭನ ಮಹಿಮೆ ಧರ್ಮವಿಚಾರ ಮಾತ್ರವನು ೧೪


ಹಲಗೆ ಬಳಪವ ಪಿಡಿಯದೊಂದ

ಗ್ಗಳಿಕೆ ಪದವಿಟ್ಟಳುಪದೊಂದ

ಗ್ಗಳಿಕೆ ಪರರೊಡ್ಡವದ ರೀತಿಯ ಕೊಳ್ಳದಗ್ಗಳಿಕೆ

ಬಳಸಿ ಬರೆಯಲು ಕಂಠಪತ್ರದ

ವುಲುಹುಗೆಡದಗ್ಗಳಿಕೆಯೆಂಬೀ

ಬಲುಹು ಗದುಗಿನ ವೀರನಾರಾಯಣನ ಕಿಂಕರಗೆ ೧೫


ಕೃತಿಯನವಧರಿಸುವುದು ಸುಕವಿಯ

ಮತಿಗೆ ಮಂಗಳವೀವುದಧಿಕರು

ಮಥಿಸುವುದು ತಿದ್ದುವುದು ಮೆರೆವುದು ಲೇಸ ಸಂಚಿಪುದು

ನುತಗುಣರು ಭಾವುಕರು ವರಪಂ

ಡಿತರು ಸುಜನರು ಸೂಕ್ತಿಕಾರರು

ಮತಿಯನೀವುದು ವೀರನಾರಯಣನ ಕಿಂಕರಗೆ ೧೬


ತಿಣಿಕಿದನು ಫಣಿರಾಯ ರಾಮಾ

ಯಣದ ಕವಿಗಳ ಭಾರದಲಿ ತಿಂ

ತಿಣಿಯ ರಘುವರ ಚರಿತೆಯಲಿ ಕಾಲಿಡಿಲು ತೆರಪಿಲ್ಲ

ಬಣಗು ಕವಿಗಳ ಲೆಕ್ಕಿಪನೆ ಸಾ

ಕೆಣಿಸದಿರು ಶುಕರೂಪನಲ್ಲವೆ

ಕುಣಿಸಿ ನಗನೇ ಕವಿ ಕುಮಾರವ್ಯಾಸನುಳಿದವರ ೧೭


ಹರಿಯ ಬಸುರೊಳಗಖಿಲ ಲೋಕದ

ವಿರಡವಡಗಿಹವೋಲು ಭಾರತ

ಶರಧಿಯೊಳಗಡಗಿಹವನೇಕ ಪುರಾಣ ಶಾಸ್ತ್ರಗಳು

ಪರಮ ಭಕ್ತಿಯಲೀ ಕೃತಿಯನವ

ಧರಿಸಿ ಕೇಳ್ದಾನರರ ದುರಿತಾಂ

ಕುರದ ಬೇರಿನ ಬೇಗೆಯೆಂದರುಹಿದನು ಮುನಿನಾಥ ೧೮


ಅರಸುಗಳಿಗಿದು ವೀರ ದ್ವಿಜರಿಗೆ

ಪರಮ ವೇದದ ಸಾರ ಯೋಗೀ

ಶ್ವರರ ತತ್ವವಿಚಾರ ಮಂತ್ರಿಜನಕ್ಕೆ ಬುದ್ಧಿಗುಣ

ವಿರಹಿಗಳ ಶೃಂಗಾರ ವಿದ್ಯಾ

ಪರಿಣತರಲಂಕಾರ ಕಾವ್ಯಕೆ

ಗುರುವೆನಲು ರಚಿಸಿದ ಕುಮಾರವ್ಯಾಸ ಭಾರತವ ೧೯


ವೇದ ಪಾರಾಯಣದ ಫಲ ಗಂ

ಗಾದಿ ತೀರ್ಥಸ್ನಾನ ಫಲ ಕೃ

ಚ್ಛ್ರಾದಿ ತಪಸಿನ ಫಲವು ಜ್ಯೋತಿಷ್ಟೋಮಯಾಗ ಫಲ

ಮೇದಿನಿಯನೊಲಿದಿತ್ತ ಫಲ ವ

ಸ್ತ್ರಾದಿ ಕನ್ಯಾದಾನ ಫಲವಹು

ದಾದರಿಸಿ ಭಾರತದೊಳೊಂದಕ್ಷರವ ಕೇಳ್ದರಿಗೆ ೨೦


ಹೇಮ ಖುರ ಶೃಂಗಾಭರಣದಲಿ

ಕಾಮಧೇನು ಸಹಸ್ರ ಕಪಿಲೆಯ

ಸೋಮ ಸೂರ್ಯ ಗ್ರಹಣದಲಿ ಸುರನದಿಯ ತೀರದಲಿ

ಶ್ರೀಮುಕುಂದಾರ್ಪಣವೆನಿಸಿ ಶತ

ಭೂಮಿದೇವರಿಗಿತ್ತ ಫಲವಹು

ದೀ ಮಹಾಭಾರತದೊಳೊಂದಕ್ಷರವ ಕೇಳ್ದರಿಗೆ ೨೧


ಚೋರ ನಿಂದಿಸಿ ಶಶಿಯ ಬೈದಡೆ

ಕ್ಷೀರವನು ಕ್ಷಯರೋಗಿ ಹಳಿದರೆ

ವಾರಣಾಸಿಯ ಹೆಳವ ನಿಂದಿಸಿ ನಕ್ಕರೇನಹುದು

ಭಾರತದ ಕಥನ ಪ್ರಸಂಗವ

ಕ್ರೂರ ಕರ್ಮಿಗಳೆತ್ತ ಬಲ್ಲರು

ಘೋರತರ ರೌರವವ ಕೆಡಿಸುಗು ಕೇಳ್ದ ಸಜ್ಜನರ ೨೨


ವೇದಪುರುಷನ ಸುತನ ಸುತನ ಸ

ಹೋದರನ ಮೊಮ್ಮಗನ (ಪಾ: ಹೆಮ್ಮಗನ) ಮಗನ ತ

ಳೋದರಿಯ ಮಾತುಳನ ರೂಪ (ಮಾವ)ನನತುಳ ಭುಜಬಲದಿ

ಕಾದಿ ಗೆಲಿದವನಣ್ಣನವ್ವೆಯ

ನಾದಿನಿಯ ಜಠರದಲಿ ಜನಿಸಿದ

ನಾದಿ ಮೂರುತಿ ಸಲಹೊ ಗದುಗಿನ ವೀರನಾರಯಣ ೨೩ [೧][೨]

ಸಂಧಿಗಳು ಸಂಪಾದಿಸಿ

ಸಂಧಿಗಳು>: ೧೦
> ೧೧ ೧೨ ೧೩ ೧೪ ೧೫ ೧೬ ೧೭ ೧೮ ೧೯ ೨೦

ಪರ್ವಗಳು ಸಂಪಾದಿಸಿ

ಪರ್ವಗಳು: ಆದಿಪರ್ವ ಸಭಾಪರ್ವ ಅರಣ್ಯಪರ್ವ ವಿರಾಟಪರ್ವ ಉದ್ಯೋಗಪರ್ವ ಭೀಷ್ಮಪರ್ವ ದ್ರೋಣಪರ್ವ ಕರ್ಣಪರ್ವ ಶಲ್ಯಪರ್ವ ಗದಾಪರ್ವ

ಪರಿವಿಡಿ ಸಂಪಾದಿಸಿ

ಕನ್ನಡ ವಿಕಿಸೋರ್ಸ್ ಸಂಪಾದಿಸಿ

ಹಳಗನ್ನಡ ಸಾಹಿತ್ಯ| ಪಂಪಭಾರತ |ಜೈಮಿನಿ ಭಾರತ |ಕುಮಾರವ್ಯಾಸ ಭಾರತ | ನಾಡಗೀತೆಗಳು | ಜನಪದ ಸಾಹಿತ್ಯ | ಚಲನಚಿತ್ರ ಸಾಹಿತ್ಯ | ಚಲನಚಿತ್ರೇತರ ಸಾಹಿತ್ಯ |ಭಾವಗೀತೆಗಳು | ಭಕ್ತಿಗೀತೆಗಳು | ದಾಸ ಸಾಹಿತ್ಯ | ವಚನ ಸಾಹಿತ್ಯ | ತಾತ್ವಿಕ ಸಾಹಿತ್ಯ | ಭಗವದ್ಗೀತೆ |
ಮಂಕುತಿಮ್ಮನ ಕಗ್ಗ | ಶಿಶು ಸಾಹಿತ್ಯ | ಕವನ ಸಂಕಲನಗಳು | ಸಂಪ್ರದಾಯ ಗೀತೆಗಳು |ಮಂಕುತಿಮ್ಮನ ಕಗ್ಗ| |ಸರ್ವಜ್ಞ | ಜೀವನ ಚರಿತ್ರೆ|ಸ್ತೋತ್ರಗಳು|ಸಂಸ್ಕೃತ ಸಾಹಿತ್ಯ


ಉಲ್ಲೇಖ ಸಂಪಾದಿಸಿ

  1. ಭಾರತ ಕಥಾಮಂಜರಿ- ಕುವೆಂಪು ಮತ್ತು ಮಾಸ್ತಿವೆಂಕಟೇಶ ಐಯಂಗಾರ್ ಸಂಪಾದಿತ. ಇಂದ:ಮೈಸೂರು ಸಂಸ್ಥಾನದ ಸಾಹಿತ್ಯ ಮತ್ತು ಸಂಸ್ಖರತಿ ಇಲಾಖೆ.
  2. ಪೀಠಿಕೆ - ತೋರಣನಾಂದಿ: ಕುವೆಂಪು ; ;ಕರ್ನಾಟ ಭಾರತ ಕಥಾ ಮಂಜರಿ; ಸಂಪಾದಕರು ಮಾಸ್ತಿ ವೆಂಕಟೇಸ ಅಯ್ಯಂಗಾರ್; ಪ್ರಕಾಶನ:ಮೈಸೂರು ಸಂಸ್ಥಾನದ ಸಾಹಿತ್ಯ ಮತ್ತು ಸಂಸ್ಕೃತಿ ಅಭಿವೃದ್ಧಿ ಇಲಾಖೆ; ಕಾಪಿರೈಟ್ ಮುಕ್ತ.