ಆದಿಪರ್ವ: ೨೦. ಇಪ್ಪತ್ತನೆಯ ಸಂಧಿ

<ಕುಮಾರವ್ಯಾಸ ಭಾರತ

ಆದಿಪರ್ವ – ಇಪ್ಪತ್ತನೆಯ ಸಂಧಿ ಸಂಪಾದಿಸಿ

ಸೂ. ಖಾಂಡವದ ವನ ದಹನ ದಾವೋ
ಚ್ಚಂಡ ಗಂಡರ ಗಂಡ ದಿವಿಜರ
ಹಿಂಡು ಗೋಳಿಡೆ ಧಾಳಿಯಿಟ್ಟನು ಚಂಡ ಗಾಂಡೀವಿ

ಕೇಳು ಜನಮೇಜಯ ಧರಿತ್ರೀ
ಪಾಲ ಪಾರ್ಥ ಸುಭದ್ರೆಯಲಿ ಭೂ
ಪಾಲತಿಲಕನು ಜನಿಸಿದನಲೈ ಜಾತ ಮಾತ್ರದಲಿ
ಮೇಲು ಮೊಳಗಿನ ದುಂದುಭಿಯ ದಿವಿ
ಜಾಳಿಗಳ ಹೂವಳೆಯ ಹರುಷದ
ಮೇಳವದ ಮೈಸಿರಿಯನೇನೆಂಬೆನು ಧನಂಜಯನ ೧

ಕಲಿತನಕೆ ನೆಲೆಯಾಯ್ತು ಭುಜದ
ಗ್ಗಳಿಕೆಗಾಸ್ಪದವಾಯ್ತು ನಿಜ ಚಾ
ಪಳವ ಬಿಸುಟಳು ವೀರಸಿರಿ ವಿಕ್ರಮದ ಸಿರಿಸಹಿತ
ಹಳಿವು ಕಳವಳ ಭೀತಿ ಭಂಗ
ಸ್ಖಲನ ಕಂಪನವೆಂಬವಾತನ
ನೆಳಲ ಸೀಮೆಯ ಸೋಂಕಲಮ್ಮವು ಭೂಪ ಕೇಳೆಂದ ೨

ಜಾತಕರ್ಮದನಂತರದ ವಿ
ಖ್ಯಾತ ನಾಮ ವಿಧಾನವನು ಸಂ
ಪ್ರೀತಿಯಲಿ ಮಾಡಿದನು ಋಷಿ ಭೂಪತಿಯನುಜ್ಜೆಯಲಿ
ವೀತಭಯನಭಿಮನ್ಯುವೆನೆ ರಿಪು
ಜಾತ ನಡುಗಿತು ಲೋಕ ಮೂರರೊ
ಳೀತನುದಯದ ಕೀರ್ತಿ ಪಸರಿಸಿತರಸ ಕೇಳೆಂದ ೩

ಯಮಸುತಗೆ ಭೀಮಗೆ ಕಿರೀಟಿಗೆ
ಯಮಳರಿಗೆ ಸುಕುಮಾರಕರು ನಿಜ
ರಮಣಿಯಲಿ ಜನಿಸಿದರು ಶ್ರುತಸೋಮಕನು ಪ್ರತಿವಿಂಧ್ಯ
ವಿಮಲ ಶ್ರುತಕೀರ್ತಿ ಪ್ರತಾಪೋ
ತ್ತಮನು ಶ್ರುತಸೇನಾಖ್ಯನುರು ವಿ
ಕ್ರಮ ಶತಾನೀಕಾಭಿಧಾನರು ದ್ರುಪದ ತನುಜೆಯಲಿ ೪

ಇವರು ಕಳುಹಿದ ಹರುಷವಾರ‍್ತಾ
ಶ್ರವಣ ರಸದಲಿ ಮನ ಮುಳುಗಿ ಯಾ
ದವ ಶಿರೋಮಣಿ ರಾಮ ವಸುದೇವಾದಿಗಳು ಸಹಿತ
ಇವರ ಪುರಕೈತಂದರಿವರು
ತ್ಸದಲಿದಿರ್ಗೊಂಡೊಸಗೆಯಲಿ ಬಾಂ
ಧವರ ಸಂಭಾವಿಸಿದರೈ ಯಮನಂದನಾದಿಗಳು ೫

ಅರಸಿ ಕಾಣವು ವೇದತತಿ ತಾ
ನರಸಿ ಬಂದನು ಭಕ್ತರನು ತನ
ಗೆರಗಿ ಮೆಚ್ಚಿಸಲರಿಯರಜ ರುದ್ರಾಮರೇಶ್ವರರು
ಎರಗುವನು ಯಮಜಂಗೆ ತನ್ನನು
ಕುರುಹುಗಾಣವು ವೇದಶಿರವಿದು
ಮರವೆಯೋ ಹರಿ ಬಂದು ಕಂಡನು ಧರ್ಮನಂದನನ ೬

ಲೀಲೊಯೋಯಿದು ಮೇಣು ಕೃಷ್ಣನ
ಬಾಲಕೇಳಿಯ ನೆನಹೊ ಬೊಮ್ಮದ
ಕೌಳಿಕದ ಕಣುಮಾಯೆಯೋ ಶಿವಶಿವ ಮಹಾದೇವ
ಕಾಲಿಗೆರಗಿದ ಕೃಷ್ಣನನು ಭೂ
ಪಾಲ ತೆಗೆದಪ್ಪಿದನು ನಿಗಮದ
ಮೌಳಿ ತಲೆವಾಗಿದವು ಲಜ್ಜಾ ಭೂರಿಭಾವದಲಿ ೭

ಅರಸ ಸಹಿತ ಸಮಸ್ತ ಯಾದವ
ಪರಿಕರದ ಮೇಳದಲಿ ಯಾದವ
ರರಸು ಬಿಜಯಂಗೈದು ಕುಂತಿಯ ಸುತರ ಭವನದಲಿ
ಅರಸಿಯರ ಸುಕುಮಾರ ವರ್ಗವ
ಕರೆಸಿ ಕಾಣಿಸಿಕೊಂಡು ದಿವ್ಯಾ
ಭರಣವಸನಾದಿಯಲಿ ಮನ್ನಿಸಿದನು ಮಹೀಶ್ವರರ ೮

ಜಲಧಿ ಮಧ್ಯದೊಳಿರವೊ ಗಗನ
ಸ್ಥಳವೊ ಮೇಣು ಮಹಾಂಧಕಾರದ
ಕಳಿವುಗಳ ವೈಕುಂಠವೋ ಮುನಿಜನದ ಹೃದ್ಗುಹೆಯೊ
ತಿಳಿಯೆ ಸಚರಾಚರದ ಚೇತನ
ದೊಳಗೆಯೋ ನೆಲೆಯಾವುದೆಂಬ
ಗ್ಗಳೆಯ ದೈವದ ನಿಲವ ಕಂಡೆನು ಪಾರ್ಥಭವನದಲಿ ೯

ಈತನರ್ಜುನನರಮನೆಯೊಳಭಿ
ಜಾತನೆನಿಪಭಿಮನ್ಯುವನು ಸಂ
ಪ್ರೀತಿಯಿಂದಪ್ಪಿದನು ಕೊಟ್ಟನು ಬಾಲದೊಡಿಗೆಗಳ
ಖ್ಯಾತಪಂಚ ದ್ರೌಪದಿಯ ಸಂ
ಜಾತರನು ಮನ್ನಿಸಿ ಮಹಾ ವಿಭ
ವಾತಿಶಯದಲಿ ಪತಿಕರಿಸಿದನು ಪಾಂಡುನಂದನರ ೧೦

ಅರಸ ಕೇಳೈ ಹಲವು ದಿನ ಸಂ
ಚರಿಸಿ ಸೌಖ್ಯದೊಳಿರ್ದು ತಮ್ಮಯ
ಪುರಿಗೆ ಬಲಭದ್ರನನು ಯಾದವರಾಯ ದಳಸಹಿತ
ಹರಿ ಸಮಾಧಾನದಲಿ ಕಳುಹಿಸಿ
ನರನೊಡನೆ ವೈಹಾಳಿ ಮೃಗಯಾ
ವರ ವಿಹಾರದೊಳಿದ್ದ ನಿಂದ್ರಪ್ರಸ್ಥ ನಗರಿಯಲಿ ೧೧

ಹರಿ ಧನಂಜಯರೊಂದು ದಿನ ಮೃಗ
ಹರಣ ಕೇಳಿಕಳಾಪದಲಿ ಸಂ
ಚರಿಸಿ ಬನದಲಿ ಬಹಳ ಮಾರ್ಗಶ್ರಮದ ಭಾರದಲಿ
ಬರುತ ನೀರಡಿಸಿದರು ಕಂಡರು
ಸರಸಿಯನು ರಥವಿಳಿದು ನೆಳಲಲಿ
ಪರಿಹೃತ ಶ್ರಮರಾಗೆ ಹರಿ ಹೊಕ್ಕನು ಸರೋವರವ ೧೨

ಆ ಸಮಯದಲಿ ಬಂದನೊಬ್ಬನು
ಭೂಸುರನು ಕಿಡಿಗಳ ತುಷಾರದ
ಮೀಸೆ ಗಡ್ಡದ ಸುಳಿದಲೆಯ ಕಬ್ಬೊಗೆಯ ಜುಂಜುಗಳ
ಬಾಸರದ ಬಳಲುಡಿಗೆ ಮಟ್ಟಿಯ
ಧೂಸರದ ಮೈದೊಡಿಗೆ ಮೆರೆಯೆ ವಿ
ಲಾಸದಲಿ ನಡೆತಂದನರ್ಜುನ ದೇವನಿದ್ದೆಡೆಗೆ ೧೩

ಹರಸಿ ವೇದಾರ್ಥವನು ಮಿಗೆ ವಿ
ಸ್ತರಿಸಿ ಕೊಂಡಾಡಿದನು ವಿಪ್ರನ
ಪರಮ ಯೋಗ್ಯತೆಗಾರು ಸರಿ ಪರಮೇಷ್ಠಿ ಹೊರತಾಗಿ
ಬರವಿದೇನೆನಗೇನನುಗ್ರಹ
ವರಿಸಿದರೆ ನಿಮ್ಮಿಷ್ಟವನು ಗೋ
ಚರಿಸುವೆನು ತಾನೆನುತ ನುಡಿದನು ಪಾರ್ಥ ಭೂಸುರಗೆ ೧೪

ಪಾರ್ಥ ಕೇಳತಿ ಗಹನವೇನ್ ಗ್ರಾ
ಸಾರ್ಥಿಗಳು ನಾವಾದೆವೆಮ್ಮಿ
ಷ್ಟಾರ್ಥಸಿದ್ಧಿಯ ಘಟಿಸು ಸಾಕು ಸಮಗ್ರಫಲವಹುದು
ತೀರ್ಥವೇಕಿನ್ನತಿಥಿಯಿರಲು ಪ
ರಾರ್ಥ ಸಾಧನತನವೆ ಪರಮ
ಸ್ವಾರ್ಥವೆಂಬರು ಸುಜನರೆಂದನು ಕಪಟ ದ್ವಿಜ ನಗುತ ೧೫

ಕೊಟ್ಟೆನೆಂದನು ಪಾರ್ಥನಿವರೊಡ
ಬಟ್ಟರೀ ನುಡಿಗೇಳಿ ದನುಜ ಘ
ರಟ್ಟ ಬಂದನು ಹದನನರಿದನು ಹವ್ಯವಾಹನನ
ಕೊಟ್ಟು ದೇನು ಕಿರೀಟಿಯಿವರೇ
ಮುಟ್ಟಿದರೆ ಮುನಿವವರಲೈ ನೀ
ಕೊಟ್ಟು ದುಣ ಬಡಿಸುವುದು ಭಾರವಿದೆಮದನಸುರಾರಿ ೧೬

ಮುಖರನಾದೈಪಾರ್ಥ ಬರ್ಹಿ
ರ್ಮುಖರ ಬಾಣಸದಾತನೀತನು
ಸುಖವೆ ಹೇಳೈ ತಂದೆ ಖಾಂಡವ ವನದ ನಿರ್ದಹನ
ನಿಖಿಳನಿರ್ಜರ ಬಲಸಹಿತ ಶತ
ಮಖನೊಡನೆ ವಿಗ್ರಹವಲಾ ಸಂ
ಮುಖಕೆ ಬಂದುದು ಭಂಗವೆಂದನು ನಗುತ ಮುರವೈರಿ ೧೭

ಭಂಗವೇಕೈ ಕೃಷ್ಣ ನಿರ್ಜರ
ಪುಂಗವನ ಗೆಲಿದವನಬಾಣಸಿ
ಗಂಗೆ ಬಾಣಸ ಮಾಡುವೆನು ಖಾಂಡವ ಮಹಾವನವ
ಅಂಘವಣೆಯನು ನೋಡು ನೀನೇ
ಕಾಂಗದಲಿ ನಿರ್ವಹಿಸುವೆನು ಭಯ
ಭಂಗವುಂಟೇ ನಿನ್ನ ಕೃಪೆಯಿರಲೆಂದನಾ ಪಾರ್ಥ ೧೮

ಮೆಚ್ಚಿದನು ಘೃತಯೋನಿ ಪೂತುರೆ
ನಿಚ್ಚಟನು ನೀನೆನುತ ಕಿಡಿಗಳ
ಬಿಚ್ಚಲುದುರಿತು ಚಾಪ ಮಾರ್ಗಣ ರಥ ತುರಂಗಚಯ
ಅಚ್ಚರಿಯನೇನೆಂಬೆನೈ ಸ
ಪ್ತಾರ್ಚಿಯಿತ್ತನು ವನವನಿಂದ್ರನ
ಮುಚ್ಚು ಮರೆಯೇಕಿನ್ನು ನಮಗುಣಬಡಿಸು ಸಾಕೆಂದ ೧೯

ಧರಣಿಪತಿ ಕೇಳಗ್ನಿಯಿತ್ತನು
ಹರಿ ಧನಂಜಯರಿಗೆ ರಥಂಗಳ
ನುರು ಶರಾವಳಿ ದಿವ್ಯಧನು ಕೌಮೋದಕೀ ಗದೆಯ
ವರ ತನುತ್ರ ಸಿತಾಶ್ವವಕ್ಷಯ
ಶರ ನಿಷಂಗಾದಿಗಳನಿವರು
ಬ್ಬರಿಸಿದರು ಹರುಷದಲಿ ನೆನೆದರು ನಯನ ವಾರಿಯಲಿ ೨೦

ಹೂಡಿದರು ರಥವೆರಡನಿವರು ಸ
ಘಾಡದಲಿ ಕಪಿ ಗರುಡ ಸಿಂಧವ
ಜೋಡಿಸಿದರೇರಿದರು ನಗುತ ಧನಂಜಯಾಚ್ಯುತರು
ಮೂಡಿಗೆಯ ಮೊನೆಗನೆಗಳಿಗೆ ಕೈ
ನೀಡಿಬೊಬ್ಬಿರಿದರು ದಿಗಂತವ
ನೀಡಿರಿದುದಬ್ಬರಣೆಬಿರಿದುದು ಧರಣಿ ಧಾಳಿಯಲಿ ೨೧

ಬೊಬ್ಬಿರಿದು ಹರಿ ಪಾಂಚಜನ್ಯವ
ನುಬ್ಬಿ ಧ್ವನಿ ಮಾಡಿದನು ಪಾರ್ಥನ
ತೆಬ್ಬಿನಬ್ಬರ ತೀವಿತಾ ಬ್ರಹ್ಮಾಂಡ ಮಂಡಲವ
ಗಬ್ಬರಿಸಿದುದು ಗಗನವನು ಶರ
ದುಬ್ಬರದ ಬಲುಗಿಡಿಯ ಗಡಣವು
ಹಬ್ಬಿ ಹರಿದವು ದೆಸೆದೆಸೆಗೆ ನರನಾಥ ಕೇಳೆಂದ ೨೨

ಧಾಳಿಯಿಟ್ಟರು ಸುರವನಕೆ ಸುರ
ಜಾಲ ಸರಿಯಿತು ಬೊಬ್ಬೆಯಲಿ ದೆ
ಖ್ಖಾಳಿಸಿದುದುತ್ಪಾತ ಶತ ಖಾಂಡವದ ಮಧ್ಯದಲಿ
ಕೂಳಿಗಳ ಕುಡಿ ಮೀನವೋಲ್ವಿಹ
ಗಾಳಿ ಹುದುಗಿತು ನಡುಗಿದರು ವನ
ಪಾಲಕರು ನಿಂದೊಣಗಿದವು ಹರಿ ಚಂದನಾದಿಗಳು ೨೩

ತೂಗಿ ಬಾಣವ ಹೂಡಿ ಕಿವಿವರೆ
ಗಾಗಿ ಬರಸೆಳೆದಾರಿ ಬೊಬ್ಬಿರಿ
ದಾಗಲಿಂತೆಂದನು ಧನಂಜಯನಾ ಧನಂಜಯಗೆ
ಈಗಲೀ ವನದೊಳಗೆ ಖಗ ಮೃಗ
ನಾಗ ಸುರ ದನುಜಾದಿ ಜೀವರ
ಹೋಗಲೀಯದೆ ತರುಬಿ ಶರದಲಿ ಕಾಯಬೇಕೆಂದ ೨೪

ಹೈ ಸಮಗ್ರಾತಿಥ್ಯದಲಿ ನಿಮ
ಗೀ ಸಮಸ್ತ ಪ್ರಾಣಿಸಹಿತ ಸು
ರೇಶನುದ್ಯಾನವನು ಕೊಟ್ಟೆನು ಬಾಣ ಧಾರೆಯಲಿ
ನೀ ಸಮಾಧಾನದಲಿ ಸುಪುರೋ
ಡಾಶವಿದೆ ಸಮಿದಾಜ್ಯ ಸಹಿತ ಮ
ಹಾ ಸುವಿಸ್ತಾರದಲಿ ಕೊಂಬುದು ಭೀತಿ ಬೇಡೆಂದ ೨೫

ಎನುತ ಬಿಡೆ ತಿರುವಾಯನೊದೆದು
ಬ್ಬಿನಲಿ ಬೊಬ್ಬಿರಿದಂಬು ಸುರಪನ
ವನವ ಮುತ್ತಿತು ಕೂಡೆ ಹೊತ್ತಿತು ಹೊಗೆಯ ಹೊರಳಿಯಲಿ
ತನಿಗಿಡಿಯ ದಳ್ಳುರಿಯ ನಾಲಿಗೆ
ಕೊನೆಗಳಲ್ಲಾಡಿದವು ಕಡು ಲಾ
ಗಿನಲಿ ಲಂಬಿಸಿ ಚುಂಬಿಸಿದುದುರಿ ಲಲಿತನಂದನವ ೨೬

ಹೊದರಿನಲಿ ಭುಗುಭುಗಿಲು ಭುಗಿಲೆಂ
ದೊದೆದುದುರಿಯಂಬರವನೊಣಗಿದ
ಬಿದಿರ ಮೆಳೆಯಲಿ ಧಗಧಗಿಸಿ ಛಟಛಟನೆ ಛಟಛಟಿಸಿ
ಕದಲಿ ಖರ್ಜೂರಾದಿ ತರು ಜಾ
ಲದಲಿ ಸಿಮಿ ಸಿಮಿ ಸಿಮಿ ಸಿಮಾಯತ
ವೊದಗೆ ಗಹನೋದರದೊಳಗೆ ಘಾಡಿಸಿತು ಘನ ವಹ್ನಿ ೨೭

ಏನನೆಂಬೆನು ದಿವಿಜ ರಾಜೋ
ದ್ಯಾನ ಹಾನಿಯನಾತನಾಳು ಕೃ
ಶಾನುವಿನ ತನಿಗೊಬ್ಬನೀ ಕೃಷ್ಣಾರ್ಜುನರ ಬಲುಹ
ಆ ನಿಖಿಳ ನಿರ್ಜರರು ತಾಗಿ ವಿ
ಮಾನ ಗತಿಯಲಿ ಹಾಯ್ದರಂದವ
ಮಾನಗತಿಯಲಿ ಗಗನದಲಿ ಗೀರ್ವಾಣಪತಿ ಪುರಕೆ ೨೮

ಹೊಗೆಯ ಬಳಿಯಲಿ ತಳಿತ ಹುಯ್ಯಲ
ಬೆಗಡಿದೇನೋ ಕೇಳೆನುತ ಸಿರಿ
ಮೊಗದ ದುಗುಡದ ಸಾವಿರಾಲಿಯೊಳೊಗುವ ಕಿಡಿಗಳಲಿ
ಹಗೆಗಳಾರು ನಿವಾತ ಕವಚಾ
ದಿಗಳೊ ತಾನಾರೆಂಬ ಶಕ್ರನ
ದುಗುಡವನು ದೇವಾಳಿ ಕಂಡುದು ದೂರಿದರು ನರನ ೨೯

ನಿನಗೆ ಮಗನೇ ಪಾರ್ಥ ನಿನ್ನರ
ಮನೆಯ ಬಾಣಸದಾತನೇ ಶಿಖಿ
ಯನುಜನೇ ಮುರವೈರಿ ನಿನಗನುಕೂಲರಾದರೆಲೆ
ಬನದ ಬೇಗೆಯೊ ಪರಿಭವಾಲಂ
ಬನದ ವೊಸಗೆಯೊ ಬಂದುದಿದೆ ಬಿಡು
ಮನೆಯ ಮನ್ನೆಯ ಗಂಡನಾಗೆಂದುದು ಸುರಸ್ತೋಮ ೩೦

ಐಸಲೇ ನಮ್ಮವರಲಾ ಹೋ
ಹೋ ಸುರರು ಕಳವಳಿಸದಿರಿಯಾ
ಪೈಸನಾಹುತಿಗೊಳಲಿ ಪಾವಕನೆಮ್ಮ ಖಾಂಡವವ
ಈ ಸುರರಿಗಾ ನರರಿಗಂತರ
ವೇಸು ಪೂತುರೆ ಕಾಲಗತಿಯೆನು
ತಾ ಸುರೇಶ್ವರ ಖಾತಿಗೊಂಡನು ಕೃಷ್ಣ ಪಾರ್ಥರಿಗೆ ೩೧

ಕಾಹು ತೆಗೆಯಲಿ ಕಲ್ಪಮೇಘ
ವ್ಯೂಹಗಳ ಬರಹೇಳು ಕಾಂಬೆನು
ಸಾಹಸವನಿದರೊಳಗೆ ಕೃಷ್ಣ ಧನಂಜಯ ದ್ವಯದ
ಈ ಹದಕೆ ಪಡಿ ಪಚ್ಛವಿಲ್ಲವ
ಗಾಹಿಸಲಿ ಖಾಂಡವವ ಹುಲ್ಲೆಯ
ಹೂಹೆಗಳು ಹೆಬ್ಬುಲಿಗೆ ಹಾಯ್ವವೆನುತ್ತ ಗರ್ಜಿಸಿದ ೩೨

ಅರಸ ಕೇಳ್ಕಲ್ಪಾಂತ ಮೇಘೋ
ತ್ಕರದ ಪಾಳಯವೆತ್ತಿ ಬಿಟ್ಟುದು
ಧರಣಿಯಗಲಕೆ ಧಾಳಿಯಿಟ್ಟವು ಸಿಡಿಲ ಮಿಂಚುಗಳು
ಕರಿಯ ಬರಿಕೈಗೆಣೆಯೆನಿಪ ನಿ
ಷ್ಠುರದ ಧಾರಾಸಾರ ತೆರಳಿಚಿ
ಸುರಿದುದಾ ಖಾಂಡವದ ಸೀಮಾ ಸನ್ನಿವೇಶದಲಿ ೩೩

ಆ ಸಕಲ ಸಾಗರವನೊಂದೇ
ಶ್ವಾಸದಲಿ ತೆಗೆದೆತ್ತಿ ಮೊಗುಚಿದ
ವೀ ಸಮಸ್ತ ಬಲಾಹಕಾವಳಿ ಬನದ ಮಧ್ಯದಲಿ
ಏಸು ಸಾಹಸಸತ್ವ ತನಗುಂ
ಟೈಸರಲಿ ತಲೆಯೆತ್ತಿ ಜಲದಲಿ
ಘಾಸಿಯಾದನು ವಹ್ನಿ ನುಡಿದನು ಕೃಷ್ಣ ಪಾರ್ಥರಿಗೆ ೩೪

ಕಲಹವಿಂದ್ರನ ಕೂಡೆ ಕಲ್ಪದ
ಮಳೆಗಳಿವು ಮಾಣಿಸಿದವೂಟವ
ನೆಳೆದವಣಲಿನ ತುತ್ತನರ್ಜುನ ಕಾಯ್ದುಕೊಳ್ಳೆನಲು
ಮಳೆಗೆ ಶರಪಂಜರವ ವಿರಚಿಸಿ
ಬಳಿಕ ವಾಯವ್ಯಾಸ್ತ್ರದಲಿ ನಿ
ಸ್ಖಲಿತ ಮೇಘವ್ರಜವನೆಚ್ಚನು ಪಾರ್ಥ ವಹಿಲದಲಿ ೩೫

ಏನ ಹೇಳುವೆನರಸ ಪಾರ್ಥನ
ನೂನ ಶಕ್ತಿಯನುರುಬಿದನು ಪವ
ಮಾನ ಶರದಲಿ ಪುಷ್ಕಳಾವರ್ತಾದಿ ಘನಘಟೆಯ
ಭಾನು ತಿಮಿರಂಗಳಿಗೆ ಮೇಘ ಮ
ಹಾನಿಲಂಗಳಿಗಾವುದಂತರ ೩೬

ಸೋನೆ ತೆತೆದುದು ಹೊಗೆದುದಾ ಖಾಂಡವ ಮಹೋದ್ಯಾನ
ಹಾರಲೂದಿತು ಮೇಗವನು ಕಿಡಿ
ತೂರಲುಬ್ಬರಿಸಿದುದು ವಹ್ನಿಯ
ನೇರಿಸಿತು ಖಾಂಡವದೊಳಗೆ ಬಿರುಗಾಳಿ ಸುಳಿಸುಳಿದು
ಮೋರೆಯೊಣಗಿದುದಮರರಿಗೆ ಮೈ
ಮಾರಿಗಳ ಸುಡು ಮೂಲೆಯವದಿರು
ಮೀರಿದರಲಾಯೆನುತ ಸುರಪತಿ ತರಿಸಿದನು ಗಜವ ೩೭

ನೆರೆದುದಮರರು ಸಿದ್ಧ ವಿದ್ಯಾ
ಧರ ಮಹೋರಗ ಯಕ್ಷ ರಾಕ್ಷಸ
ಗರುಡ ಕಿನ್ನರ ಸಾಧ್ಯ ಗುಹ್ಯಕ ಭೂತ ಗಂಧರ್ವ
ತರಣಿ ವಸು ರುದ್ರಾದಿಗಳುಮೋ
ಹರಿಸಿದರು ಮುಂಗುಡಿಯಲಿಂದ್ರನ
ಸಿರಿಯ ರಭಸವನೇನನೆಂಬೆನು ಭೂಪ ಕೇಳೆಂದ ೩೮

ಮಸಗಿತಮರವ್ರಾತವಭ್ರವ
ಮುಸುಕಿದವು ಝಲ್ಲರಿಗಳಿಂದ್ರನ
ವಿಸಸನಕೆ ಮೆಚ್ಚಿಸುವೆ ವಸುಗಳನೆನುತ ತಮತಮಗೆ
ಮುಸುಕಿದರು ಮೃಗರಾಜ ಸಿಂಹದ
ಮುಸುಕನುಗಿವಂದದಲಿ ಬಾಣ ೩೯

ಪ್ರಸರವನು ಹರಹಿದರು ಮುಂದೆ ಧನಂಜಯಾಚ್ಯುತರ
ಹೊಣೆ ಮಿಗೆ ಹೊಕ್ಕೆಚ್ಚರೋ ಬಹು
ಬಾಣವನು ದೃಢಬಾಣರೋ ಗೀ
ರ್ವಾಣರೋ ನೀವಾರು ನುಡಿಯಿರಲೈ ಮಹಾದೇವ
ಸಾಣೆಯಲಗಿಗೆ ಸಾಲುವಿರಿ ತನಿ
ಶೋಣಿತವ ನೀವ್ಕೊಡದೆ ಸುರಪತಿ
ಯಾಣೆ ಹಿಮ್ಮೆಟ್ಟಿದರೆನುತ ಬೊಬ್ಬಿರಿದು ನರನೆಚ್ಚ ೪೦

ತುರುಗಿ ಕೂರಂಬುಗಳು ಮೈಯಲಿ
ಮುರಿದರ್ಜುನನೆಸುಗೆಯಲಿ ಕೈ
ಮರೆದುದಮರನಿಕಾಯ ಕೆದರಿತು ದೊರೆಯ ಮನ್ನಿಸದೆ
ಮುರಿದುದೀ ಕೃಷ್ಣಾರ್ಜುನರ ಬೊ
ಬ್ಬಿರಿತಕವರೆದೆಯೊಡೆಯಲಿಂದ್ರನ
ಮರೆಯ ಹೊಕ್ಕುದು ದೇವಸಂತತಿ ಭೂಪ ಕೇಳೆಂದ ೪೧

ನರರು ರಚಿಸಿದ ಹವ್ಯಕವ್ಯೋ
ತ್ತರ ಹವಿರ್ಭಾಗವನು ತಿಂದು
ಬ್ಬರಿಸಿ ದೇವಸ್ತ್ರೀಕದಂಬದ ಖೇಳಮೇಳದಲಿ
ಇರವು ನಿಮಗೀ ರೌದ್ರಬಾಣ
ಸ್ಫುರಿತ ಕರ್ಕಶವಿಸ್ಫುಲಿಂಗೋ ೪೨
ತ್ಕರದ ಝಳ ನಿಮಗೇಕೆಯೆಂದನು ಪಾರ್ಥ ನಸುನಗುತ
ಮುರಿದ ನಿರ್ಜರ ಸೇನೆಗಭಯದ
ಕರವ ನೆಗಹಿ ಕರೀಂದ್ರನನು ಶಿರ
ಬಿರಿಯಲಂಕುಶ ಮೊನೆಯೊಳೊತ್ತಿ ಮಹೋಗ್ರ ಕೋಪದಲಿ
ನರ ಮುರಾಂತಕರಿದಿರಿನಲಿ ಮದ
ಕರಿಯ ಬಿಟ್ಟನು ಶಕ್ರನಾತನ
ಬಿರುದ ಸಂಭಾವಿಸಿದರಭ್ರದ ಸೂತ ಮಾಗಧರು ೪೩

ನಮುಚಿ ಮಸ್ತಕಶೂಲ ಬಲ ಸಂ
ತಮಸಭಾಸ್ಕರ ಜಂಭಭುಜ ವಿ
ಕ್ರಮ ಮಹಾಂಬುಧಿ ಕುಂಭಸಂಭವ ವೃತ್ರ ಗಿರಿ ವಜ್ರ
ಕಮಲಭವ ಹರವಿಷ್ಣು ಹೊರೆಗಾ
ದಮಿತ ಸುರಗಣ ಮೌಳಿಮಣಿ ಸಂ
ಕ್ರಮಣಚತುರ ಪದಾಬ್ಜನೆಂದುದು ವಂದಿ ಸಂದೋಹ ೪೪

ನೂಕಿದನು ಸುರಪತಿ ಗಜವನ
ವ್ಯಾಕುಲರಲೇ ಕೃಷ್ಣ ಪಾರ್ಥರಿ
ದೇಕೆ ನಿಮಗೀ ವಾಸಿ ವಾಸವ ಲೇಸು ಮರಳುವದು
ನಾಕ ನಿಳಯರು ತಂದ ಗೆಲವೇ
ಸಾಕು ಸೋಲುವರಲ್ಲ ನಿಮಗೆ ವಿ
ವೇಕವುಳ್ಳರೆ ತಿರುಗಿಯೆಂದನು ಹರಿಗೆ ಕಲಿಪಾರ್ಥ ೪೫

ಜನಪ ಕೇಳಾ ಸಮಯದೊಳು ವಾ
ಗ್ವನಿತೆಯರಸನು ಗಗನಮಾರ್ಗದೊ
ಳನಿಮಿಷಾಧಿಪನಲ್ಲಿಗೈತರೆ ಕಂಡು ಸುರನಿಕರ
ತನತನಗೆ ಭಾಳದಲಿ ನಿಜ ಕರ
ವನರುಹವ ಮುಗಿಯಿಸಿದರಿಂದ್ರಂ
ಗನುವರವ ಮಾಣಿಸಲು ಬೇಕೆಂದಿಳಿದನಬ್ಜಭವ ೪೬

ಮರುಳನೈ ನೀನಿವರನಾರೆಂ
ದರಿಯಲಾ ನಾರಾಯಣನು ಮುರ
ಹರನು ನರನಲ್ಲಾ ಧನಂಜಯನಿವರು ಕಿರುಕುಳರೆ
ಮರುಳು ನೀನೆಂದಿಂದ್ರನಾನೆಯ
ತಿರುಹಿದನು ಪರಮೇಷ್ಠಿಯಿತ್ತಲು
ಧರಣಿಪತಿ ಕೇಳನಲ ಕೇಳಿಯನಾ ವನಾಂತದಲಿ ೪೭

ಜಂಬು ಚೂತ ಪಲಾಶ ವಟ ದಾ
ಳಿಂಬ ಬಿಲ್ವ ತಮಾಲ ಚಂಪಕ
ನಿಂಬ ಬಕುಳ ಕಪಿತ್ಥ ಕುಟಜವಶೋಕ ಪುನ್ನಾಗ
ತುಂಬುರರಳಿ ಲವಂಗ ಪೂಗ ಕ
ದಂಬ ಗುಗ್ಗುಲ ಸಾಲ ತಿಲಕೌ
ದುಂಬರಾದಿದ್ರುಮ ಕುಲವನಾಲಿಂಗಿಸಿತು ವಹ್ನಿ ೪೮

ಸುಳಿ ಸುಳಿದು ಶಶಿಕಾಂತಮಯದ
ಗ್ಗಳದ ವೇದಿಕೆಗಳಲಿ ನೀಲದ
ನೆಲೆಯ ಚೌಕಿಗೆಗಳಲಿ ಮಂಟಪದಲಿ ಲತಾವಳಿಯ
ಲಲಿತ ಸೌಧದ ಚಾರುಚಿತ್ರಾ
ವಳಿಯ ಮೇಲ್ಕಟ್ಟುಗಳ ಭವನಂ
ಗಳಲಿ ಬಿಟ್ಟುದು ಕೂಡೆ ಪಾಳಯ ವಹ್ನಿಭೂಪತಿಯ ೪೯

ಕುರುಳ ತುಂಬಿಯ ತನಿಗೆದರಿ ಮುಖ
ಸರಸಿಜವ ಚುಂಬಿಸಿ ತಮಾಲದ
ತುರುಬ ಹಿಡಿದಧರ ಪ್ರವಾಳದ ರಸವನೆರೆಸವಿದು
ಉರು ಪಯೋಧರ ಬಿಲ್ವವನು ಹೊ
ಯ್ದೊರಸಿ ಕದಳಿಯ ನುಣ್ದೊಡೆಯನಿ
ಟ್ಟೊರಸಿ ರಮಿಸಿತು ವನಸಿರಿಯ ಪಿಪ್ಪಲದಳಾಂಗಲಿ ೫೦

ಧರಣಿಪತಿ ಕೇಳ್ ಶರಭಮೃಗಪತಿ
ಕರಿ ಕಳಭಶಾರ್ದೂಲ ಸೂಕರ
ಕರಡಿ ಕಾಸರಶಲ ಮೃಗಾವನ ಖಡ್ಗ ಗೋಮಾಯು
ಎರಳೆಮೊಲ ಸಾರಂಗವಾನರ
ನುರು ಕುರಂಗ ಪ್ರಮುಖ ಮೃಗಕುಲ
ವುರುಬಿ ಬಿದ್ದುದು ಧಳ್ಳುರಿಯ ಬೆಳ್ಳಾರವಲೆಗಳಲಿ ೫೧

ಶುಕ ಮರಾಳ ಮಯೂರ ಟಿಟ್ಟಿಭ
ಪಿಕ ಚಕೋರ ಕಪೋತ ವಾಯಸ
ಬಕ ಪದಾಯುಧ ಚಕ್ರವಾಕ ಕಳಿಂಗ ಕಲವಿಂಕ
ಕುಕಿಲ ಸಾರಸ ಕಾಕರಿಪು ಚಾ
ತಕ ಭರದ್ವಾಜಾದಿ ಪಕ್ಷಿ
ಪ್ರಕರ ಬಿದ್ದುದು ಬಿಗಿದ ಕೇಸುರಿ ಕಣ್ಣಿವಲೆಗಳಲಿ ೫೨

ಹರಡೆ ಗೀಜಗ ಮರಗೊಡೆಲೆ ಕಾ
ಬುರುಲೆ ಲಾವುಗೆ ಗೌಜು ಪಾರಿವ
ನಿರಿಲೆ ಸಾಳುವ ಚಿಲಿಮಿಲಿಗೆ ಚೆಂಬೋತ ಮೀನ್ಬುಲಿಗ
ಮರಕುಟಿಗ ಕಬ್ಬಕ್ಕಿ ಕೊಟ್ಟುಗ
ವರಲೆ ಕೊಂಚೆ ಕಪಿಂಜ ಗಿಂಚಲು
ಗರಿಗ ಮೊದಲಾದಖಿಳ ಖಗಕುಲ ಬಿದ್ದುದುರಿಯೊಳಗೆ ೫೩

ಝಳಕೆ ತಿಳಿಗೊಳದುದಕ ಕಾದು
ಚ್ಛಳಿಸಿದವು ತನಿಗುದಿದು ಮತ್ಸ್ಯಾ
ವಳಿಗಳಂಬುಜದೆಸಳು ಸೀದವು ತುಂಬಿಗಳು ಸಹಿತ
ಹಿಳಿದು ಸಿಡಿದವು ಚಾರು ಚಂದ್ರೋ
ತ್ಪಳ ರಚಿತ ಸೋಪಾನ ರತುನಾ
ವಳಿಯ ರಾಶಿಗಳಿದ್ದಲಾದವು ಬಿದ್ದ ಕಿಡಿಗಳಲಿ ೫೪

ಇಟ್ಟಣಿಸಿ ಛಿಟಿಛಿಟಿಸಿ ಶಿಖಿ ಪುಟ
ವಿಟ್ಟುದೊಣಗಿಲು ಹೊದರಿನಲಿ ಮಿಗೆ
ತೊಟ್ಟ ಕಬ್ಬೊಗೆ ಝಗೆಯ ಹೊರಳಿಯ ಕಿಡಿಯ ಗಡಣದಲಿ
ಹುಟ್ಟಿದುರಿ ಹೆಮ್ಮರನ ಸುತ್ತಲು
ಕಟ್ಟಿತಲ್ಲಿಯ ತೊಡಕಿನಲಿ ಭುಗಿ
ಲಿಟ್ಟು ಕವಿದುದು ತುದಿಗೆ ಬಹು ಶಾಖೋಪಶಾಖೆಗಳ ೫೫

ಹೊಗೆಯ ಹಬ್ಬುಗೆ ಸತ್ಯಲೋಕವ
ನುಗಿದುದುರಿನಾಲಗೆಯ ಗರವೊ
ಟ್ಟಗೆಯ ತೊಳಲಿಕೆ ತೆರಳಿಚಿತು ತೆತ್ತೀಸು ಕೋಟಿಗಳ
ಹಗಲಗಡಿತಕೆ ಹೊಕ್ಕುದೋ ಕಡೆ
ಮುಗಿಲ ಕಾಣೆನು ದಿವವನೆತ್ತಣ
ಗಗನಮಣಿ ನಕ್ಷತ್ರ ಚಂದ್ರಮರರಸ ಕೇಳೆಂದ ೫೬

ಛಳಿ ಛಿಳಿಲು ಛಿಳಿ ರವದ ಘುಳು ಘುಳು
ಘುಳು ಘುಳ ಧ್ವನಿಮಯದಿ ಕಪಿಗಳ
ಕಿಳಿಕಿಳಾಯತ ರವದಿ ಮೃಗ ಸಂಕುಳದ ಕಳ ಕಳದಿ
ಹಿಳಿದುರಿವ ಹೆಬ್ಬಿದಿರ ಗಂಟಿನ
ಠಳಠಳತ್ಕಾರದಿ ದಿಶಾ ಮಂ
ಡಳದ ಮೂಲೆಗಳೊಡೆದುದದ್ಭುತವಾಯ್ತು ವನದಹನ ೫೭

ಅರಸ ಕೇಳೈ ಮುನ್ನ ವಿತಳಕೆ
ಗರುಡ ಭಯವಾಯ್ತೆಂದು ತಕ್ಷಕ
ನಿರಿಸಿದನು ನಿಜಸುತನನಮರೇಶ್ವರನನುಜ್ಜೆಯಲಿ
ಇರಲಿರಲು ಸುತರಾದರಾತಂ
ಗುರಗ ವಂಶದೊಳಶ್ವಸೇನಗೆ
ಹಿರಿದು ಹೆಚ್ಚಿತು ತಕ್ಷಕನ ಸಂತತಿ ವನಾಂತದಲಿ ೫೮

ಆ ಮಹಾ ವನವಹ್ನಿ ಭೂತ
ಸ್ತೋಮ ಸಂಹೃತಿ ಕರ್ಮ ಶೌರ್ಯೋ
ದ್ದಾಮವವಗಾಹಿಸುತ ಬರುತಿರೆ ಮುಂದೆ ಚೂಣಿಯಲಿ
ಧೂಮವಿಳಿದುದು ಹುತ್ತಿನಲಿ ನಿ
ಸ್ಸೀಮ ಜನಿತ ಜ್ವಾಲೆಗಳ ಝಳ
ವಾ ಮಹೋರಗಚಯವ ಚುಂಬಿಸಿತರಸ ಕೇಳೆಂದ ೫೯

ಹೂಸಿ ಹುತ್ತಿನ ಮಣ್ಣ ರಂಧ್ರಿಸಿ
ಕಾಸಿದವು ಫಣಿಕುಲವ ಮೇಣ್ದೊ
ಳ್ಳಾಸದಲಿ ಡಾವರಿಸಿದವು ಕಿಡಿ ಧೂತಧೂಮದಲಿ
ಆಸುರದ ಕಬ್ಬೊಗೆಯ ಕವಚದ
ಕೇಸುರಿಗಳೊಳಬಿದ್ದುದುರಿ ಹೊರ
ಸೂಸಿ ಹಿಡಿದವು ಹಾವುಗಳ ಬಲು ಹೊದರಹೊರಳಿಗಳ ೬೦

ಹೆಡೆಯ ಮಣಿಗಳ ಕಂಡು ಸೂಸಿದ
ಕಿಡಿಗಳಹ ಹಾಯೆನುತ ಶಿರಗಳ
ಕೊಡಹಿ ಮರುಗಿದರುರಗಿಯರು ಮರಿಗಳಿಗೆ ಮೈಚಾಚಿ
ಕಡುಹೊಗೆಯ ಕೇಸುರಿಯ ಕಿಡಿಗಳ
ಗಡಣದಲಿ ಕೌರೆದ್ದು ಮೈಗಳ
ಕೊಡಹಿ ಬಿಸುಸುಯ್ಯುತ್ತ ಮುಗ್ಗಿದವಹಿಗಳುರಿಯೊಳಗೆ ೬೧

ಹುದಿದುರಿವ ಹುತ್ತಿನಲಿ ಕೂಳ್ಗುದಿ
ಗುದಿದು ಸರ್ಪಸ್ತೋಮ ಮಧ್ಯದೊ
ಳೊದೆದು ಹಾಯಿದನಶ್ವಸೇನನು ಗಗನ ಮಂಡಲಕೆ
ಕೆದರಿದವು ಕೆಂಗಿಡಿಗಳುರಿಯು
ಬ್ಬಿದುದು ಘುಳುಘುಳು ರಭಸ ಮಿಗೆ ಹೆ
ಚ್ಚಿದುದು ತಬ್ಬಿದುದೀತನನು ತಡವರಿಸಿ ಗಗನದಲಿ ೬೨

ಉರಿಯ ಗಂಟಲನೊದೆದು ಫನಿ ಮಿ
ಕ್ಕುರವಣಿಸೆ ಹಾಹಾ ಧನಂಜಯ
ಹರಿವುತಿದೆ ಹಾವೊಂದು ಹೋದುದು ಬಾಯ ತುತ್ತೆನಗೆ
ತರಿಸಿಕೊಡು ಶರವೇಢೆಯನು ವಿ
ಸ್ತರಿಸು ವಹಿಲದೊಳೆನಲು ವೈಶ್ವಾ
ನರನ ಮಾತಿಗೆ ನಗುತ ಕೊಂಡನು ವಿಜಯ ಗಾಂಡಿವವ ೬೩

ಆವ ಶರಸಂಧಾನವೋ ಗಗ
ನಾವಲಂಬಿಯ ಕೊರಳನೆಚ್ಚನು
ಪಾವಕನ ಮಧ್ಯದಲಿ ಬಿದ್ದುದು ಮುಂಡವಹಿಪತಿಯ
ಜೀವವುಳಿದುದು ಶಿರದೊಳಾತಂ
ಗಾ ವಿಗಡ ಫಣಿ ನುಡಿದುದೆಲೆ ಗಾಂ
ಡೀವಿ ಮರೆಯದಿರೆನ್ನ ಹಗೆಯಲಿ ಮರಣ ನಿನಗೆನುತ ೬೪

ಎಂದು ಗಗನದೊಳುಲಿದು ಫಣಿ ಶಿರ
ವಂದು ಪಾಯ್ದುದು ಧರೆಗೆ ರಾಧಾ
ನಂದನನ ಬತ್ತಳಿಕೆಯಲಿ ಶರವಾಗಿ ಜಗವರಿಯೆ
ಸಂದುದದು ಬಳಿಕಿತ್ತಲಿಂದ್ರನ
ನಂದನದ ಬೇಗೆಯಲಿ ಬದುಕಿತು
ಮಂದಪಾಲನ ಸುತಚತುಷ್ಟಯವರಸ ಕೇಳೆಂದ ೬೫

ಮೆಚ್ಚಿಸಿದವವು ವಹ್ನಿ ಸೂಕ್ತವ
ನುಚ್ಚರಿಸಿ ತಜ್ಜ್ವಲನ ಮುಖವನು
ಬಿಚ್ಚಿ ಬದುಕಿದವಾ ಮುನಿಯ ಸಂತಾನ ಪಕ್ಷಿಗಳು
ಹೆಚ್ಚಿದುರಿ ಹಬ್ಬುಗೆಯ ಹೊಯ್ಲಲಿ
ಬೆಚ್ಚಿ ಮಯನರ್ಜುನನ ಹೊಗಳಿದು
ಕಿಚ್ಚಿನಲಿ ಬದುಕಿದನು ಧರಣೀಪಾಲ ಕೇಳೆಂದ ೬೬

ಖಗ ಚತುಷ್ಟಯ ಮಯ ಸಹಿತವುರಿ
ಯುಗುಳಿತುಳಿದ ಸಮಸ್ತ ಭೂತಾ
ಳಿಗಳನಾಹುತಿಗೊಂಡನಗ್ನಿ ಧನಂಜಯಾಜ್ಞೆಯಲಿ
ಗಗನದಿಂದಿಳಿತಂದು ಸುರಪತಿ
ಮಗನ ಮನ್ನಿಸಿ ಕೊಟ್ಟನಗ್ಗದ ೬೭

ಗಗನಮಣಿಗೆಣೆಯೆನಿಪ ಮಕುಟವನೊಲಿದು ಪಾರ್ಥಂಗೆ
ಹರಿಗೆ ವಂದಿಸಿ ಮನಗನೊಲಿದಾ
ದರಿಸಿ ಮರಳಿದನಿಂದ್ರನಿತ್ತಲು
ಭರದಿನಿವರೈತಂದರಿಂದ್ರಪ್ರಸ್ಥ ಪುರವರಕೆ
ಧರಣಿಪತಿಗಾ ಖಾಂಡವದ ದ
ಳ್ಳುರಿಯ ಹೋಮದ ಹೊಸ ಕಥೆಯ ವಿ
ಸ್ತರಿಸಿ ಹೇಳಿದನಸುರರಿಪು ಭೀಮಾದಿಗಳು ನಲಿಯೆ ೬೮

ಧಾರುಣೀಶ್ವರರೈವರನು ಸುಕು
ಮಾರ ವರ್ಗವನಾ ಸುಭದ್ರಾ
ನಾರಿಯನು ಪಾಂಚಾಲೆಯನು ತತ್ಸಕಲ ಬಾಂಧವರ
ಸೂರಿಗಳ ಸಚಿವಾದಿ ನೃಪ ಪರಿ
ವಾರವನು ಪತಿಕರಿಸಿ ಬಂದನು
ದೋರಕಿಗೆ ಹರುಷದಲಿ ಗದುಗಿನ ವೀರನಾರಯಣ ೬೯

ಇತಿ ಶ್ರೀಮದಚಿಂತ್ಯಮಹಿಮ ಗದುಗು ವೀರನಾರಾಯಣ ಚರಣಾರವಿಂದ
ಮಕರಂದ ಮಧುಪಾನ ಪುಷ್ಪವಚಃ ಷಟ್ಪದೀ ನಿಕಾಯ
ಶ್ರೀಮತ್ಕುಮಾರವ್ಯಾಸ ಯೋಗೀಂದ್ರ ವಿರಚಿತಮಪ್ಪ
ಕರ್ಣಾಟ ಭಾರತ ಕಥಾ ಮಂಜರಿಯೊಳ್/
ಆದಿಪರ್ವ ಸಮಾಪ್ತಮಾದುದು.

ನೋಡಿ ಸಂಪಾದಿಸಿ

ಆದಿಪರ್ವ ಸಂಧಿಗಳು>: ೧೦
> ೧೧ ೧೨ ೧೩ ೧೪ ೧೫ ೧೬ ೧೭ ೧೮ ೧೯ ೨೦

ಪರ್ವಗಳು ಸಂಪಾದಿಸಿ

ಕುಮಾರವ್ಯಾಸ ಭಾರತ ಆದಿಪರ್ವ ಸಭಾಪರ್ವ ಅರಣ್ಯಪರ್ವ ವಿರಾಟಪರ್ವ ಉದ್ಯೋಗಪರ್ವ ಭೀಷ್ಮಪರ್ವ ದ್ರೋಣಪರ್ವ ಕರ್ಣಪರ್ವ ಶಲ್ಯಪರ್ವ ಗದಾಪರ್ವ

ಪರಿವಿಡಿ ಸಂಪಾದಿಸಿ

ಕನ್ನಡ ವಿಕಿಸೋರ್ಸ್ ಸಂಪಾದಿಸಿ

ಹಳಗನ್ನಡ ಸಾಹಿತ್ಯ| ಪಂಪಭಾರತ |ಜೈಮಿನಿ ಭಾರತ |ಕುಮಾರವ್ಯಾಸ ಭಾರತ | ನಾಡಗೀತೆಗಳು | ಜನಪದ ಸಾಹಿತ್ಯ | ಚಲನಚಿತ್ರ ಸಾಹಿತ್ಯ | ಚಲನಚಿತ್ರೇತರ ಸಾಹಿತ್ಯ |ಭಾವಗೀತೆಗಳು | ಭಕ್ತಿಗೀತೆಗಳು | ದಾಸ ಸಾಹಿತ್ಯ | ವಚನ ಸಾಹಿತ್ಯ | ತಾತ್ವಿಕ ಸಾಹಿತ್ಯ | ಭಗವದ್ಗೀತೆ |
ಮಂಕುತಿಮ್ಮನ ಕಗ್ಗ | ಶಿಶು ಸಾಹಿತ್ಯ | ಕವನ ಸಂಕಲನಗಳು | ಸಂಪ್ರದಾಯ ಗೀತೆಗಳು |ಮಂಕುತಿಮ್ಮನ ಕಗ್ಗ| |ಸರ್ವಜ್ಞ | ಜೀವನ ಚರಿತ್ರೆ|ಸ್ತೋತ್ರಗಳು|ಸಂಸ್ಕೃತ ಸಾಹಿತ್ಯ