ಜೈಮಿನಿ ಭಾರತ ಮೂರನೆಯ ಸಂಧಿ ಸಂಪಾದಿಸಿ

ಪದ್ಯ - ಸೂಚನೆ ಸಂಪಾದಿಸಿ

ಸೂಚನೆ :ಹಸ್ತಿನಾವತಿಯಿಂ ತಳರ್ದು ಭದ್ರಾವತಿಯ |
ವಿಸ್ತಾರಮಂ ತೋರಿದಂ ಸಮೀಪದ ಗಿರಿಯ
ಮಸ್ತಕದೊಳಿರ್ದನಿಲಸಂಭವಂ ಕರ್ಣತನಯಂಗೆ ಸಂಪ್ರೀತಿಯಿಂದ ||

ಪದವಿಭಾಗ-ಅರ್ಥ:
ಸೂಚನೆ :ಹಸ್ತಿನಾವತಿಯಿಂ ತಳರ್ದು = ಹಸ್ತಿನಾವತಿಯನ್ನು ಬಿಟ್ಟು ಕರ್ಣತನಯಂಗೆ = ವೃಷಕೇತುವಿಗೆ ಸಂಪ್ರೀತಿಯಿಂದ =ಪ್ರೀತಿಯಿಂದ ಭದ್ರಾವತಿಯ ವಿಸ್ತಾರಮಂ = ವಿಸ್ತಾರವನ್ನು ತೋರಿದಂ = ತೋರಿದನು. ಸಮೀಪದ ಗಿರಿಯ = ಬೆಡ್ಡದ ಮಸ್ತಕದೊಳಿರ್ದನಿಲಸಂಭವಂ->ಮಸ್ತಕದೊಳ್ ಇರ್ದ ಅನಿಲಸಂಭವಂ.= ಬೆಟ್ಟದ ತುದಿಯಲ್ಲಿ ಇದ್ದ ಭೀಮನು.
  • ತಾತ್ಪರ್ಯ :ಹಸ್ತಿನಾವತಿಯನ್ನು ಬಿಟ್ಟು ಭದ್ರಾವತಿಯ ಹತ್ತಿರ ಬಂದು, ಅಲ್ಲಿ ಬೆಟ್ಟದ ತುದಿಯಲ್ಲಿ ಇದ್ದ ಭೀಮನು ವೃಷಕೇತುವಿಗೆ ಪ್ರೀತಿಯಿಂದ ಭದ್ರಾವತಿಯ ವಿಸ್ತಾರವನ್ನು ತೋರಿಸಿದನು.

(ಪದ್ಯ - ೬೭) ♣♣♣

ಪದ್ಯ – ೧ ಸಂಪಾದಿಸಿ

ಭೂವಧುರಮಣ ಕೇಳೈ ಮುಂದೆ ನಡೆವ ಸುಕ |
ಧಾವಿಸ್ತರವನಿನ್ನು ಪಯಣಗತಿಯಿಂದೆ ಭ |
ದ್ರಾವತೀದೇಶಮಂ ಪೊಕ್ಕರನಿಲಜ ವೃಷಧ್ವಜ ಘಟೋತ್ಕಚತನುಜರು ||
ಆವಗಂ ನಿರ್ಮಲಶ್ರೀಕರಗ್ರಾಹಿ ಮ ||
ತ್ತಾವಗಂ ಪ್ರಣುತವನಮಾಲಾ ಸುಶೋಭಿ ತಾ |
ನಾವಗಂ ಮನ್ಮಥೋದ್ಭವಕಾರಿ ಹರಿವೊಲಾನೆಂಬ ಪೆಂಪಿಂದೆಸೆದುದು ||1||

ಪದವಿಭಾಗ-ಅರ್ಥ:
*ಭೂವಧುರಮಣ = ಭೂಮಿಯ ಒಡೆಯನಾದ ಜನಮೇಜಯನೇ ಕೇಳೈ = ಕೇಳು ಮುಂದೆ ನಡೆವ ಸುಕಧಾವಿಸ್ತರವನಿನ್ನು = ಮುಂದಿನ ಕಥೆಯ ವಿಸ್ತಾರವನ್ನು, ಪಯಣಗತಿಯಿಂದೆ ಭದ್ರಾವತೀದೇಶಮಂ ಪೊಕ್ಕರನಿಲಜ->ಪೊಕ್ಕರು ಅನಿಲಜ ವೃಷಧ್ವಜ ಘಟೋತ್ಕಚತನುಜರು =ಪ್ರಯಾಣ ಮಾಡಿ ಭದ್ರಾವತೀ ದೇಶವನ್ನು ಅನಿಲಜ=ಭೀಮ, ವೃಷಧ್ವಜ, ಘಟೋತ್ಕಚತನುಜರು = ಘಟೊದ್ಘಜನ ಮಗ ಮೇಘನಾದರು ಹೊಕ್ಕರು. ಆ ದೇಶವು ಆವಗಂ = ಯಾವಾಗಲೂ ನಿರ್ಮಲಶ್ರೀಕರಗ್ರಾಹಿ =ಪರಿಶುದ್ಧವಾದ ಶ್ರೀಕರಗ್ರಾಹಿ =ಸಂಪತ್ ಕರಗ್ರಾಹಿ =ಸಂಪತ್ತಹೊಂದಿರುವಂತಹದು, ಮತ್ತಾವಗಂ = ಮತ್ತು ಯಾವಾಗಲೂ ಪ್ರಣುತವನಮಾಲಾ = ಹೊಗಳಿಕೆಗೆ ತಕ್ಕುದಾಗಿ ಸುಶೋಭಿ = ಶೋಭಿಸುತ್ತರಿವುದು ತಾನು ಆವಗಂ =ಅದು ಯಾವಾಗಲೂ ಮನ್ಮಥೋ ದ್ಭವಕಾರಿ ಮನ್ಮಥ ಉದ್ಭವಕಾರಿ = ಹರಿಯಿಮದ ಜನಿಸಿದ ಮನ್ಮಥನಂತೆ ಕಾಮೋತ್ತೇಜನಕಾರಿಯಾಗಿದ್ದು ಹರಿವೊಲಾನೆಂಬ->ಹರಿವೊಲ್ ಆನು = ನಾನು ಎಂಬ = ವಿಷ್ಣುವಿಗೆ ತಾನು ಸಮ ಎಂಬ, ಪೆಂಪಿಂದೆಸೆದುದು ಪೆಂಪು = ಸೊಬಿಗಿನಿಂದ ಎಸೆದುದು = ಕಾಣುತ್ತಿರವುದು.
  • ತಾತ್ಪರ್ಯ : ಭೂಮಿಯ ಒಡೆಯನಾದ ಜನಮೇಜಯನೇ ಕೇಳು, ಮುಂದಿನ ಕಥೆಯ ವಿಸ್ತಾರವನ್ನು, ಪ್ರಯಾಣ ಮಾಡಿ ಭದ್ರಾವತೀ ದೇಶವನ್ನು ಭೀಮ, ವೃಷಧ್ವಜ, ಘಟೊದ್ಘಜನ ಮಗ ಮೇಘನಾದರು ಹೊಕ್ಕರು. ಆ ದೇಶವು ಯಾವಾಗಲೂ ಪರಿಶುದ್ಧವಾದ ಸಂಪತ್ತು ಹೊಂದಿರುವಂತಹದು, ಮತ್ತು ಯಾವಾಗಲೂ ಹೊಗಳಿಕೆಗೆ ತಕ್ಕುದಾಗಿ ಶೋಭಿಸುತ್ತರಿವುದು. ಅದು ಯಾವಾಗಲೂ ಹರಿಯಿಂದ ಜನಿಸಿದ ಮನ್ಮಥನಂತೆ ಕಾಮೋತ್ತೇಜನಕಾರಿಯಾಗಿರುವುದರಿಂದ ತಾನು ವಿಷ್ಣುವಿನಂತೆ ಎಂಬ ಸೊಬಿಗಿನಿಂದ ಕಾಣುತ್ತಿರವುದು.

(ಪದ್ಯ - ೧)

ಪದ್ಯ – ೨ ಸಂಪಾದಿಸಿ

ಎಲ್ಲಿಯುಂ ಪರಿವ ಪೆರ್ದೊರೆಯಿಂದೆ ಕೆರೆಯಿಂದೆ |
ಯೆಲ್ಲಿಯುಂ ಕುಸುಮದಾಗರದಿಂದೆ ಸರದಿಂದೆ |
ಯೆಲ್ಲಿಯುಂ ರತ್ನಮಯದಿಳೆಯಿಂದೆ ಬೆಳೆಯಿಂದೆ ಮಣಿಕೃತಕ ಶೈಲದಿಂದ ||
ಎಲ್ಲಿಯುಂ ಸುಳಿವ ಗೋವ್ರಜದಿಂದೆ ಗಜದಿಂದೆ |
ಯೆಲ್ಲಿಯುಂ ಕತ್ತುರಿಯ ಮೃಗದಿಂದೆ ಖಗದಿಂದೆ |
ಯೆಲ್ಲಿಯುಂ ವಿರಚಿತ ಭವನದಿಂದೆ ಜನದಿಂದೆಯಾನಾಡ ಸಿರಿ ಮೆರೆದುದು ||2||

ಪದವಿಭಾಗ-ಅರ್ಥ:
ಎಲ್ಲಿಯುಂ = ಎಲ್ಲೆಡೆಯೂ ಪರಿವ = ಹರಿವ ಪೆರ್ದೊರೆಯಿಂದೆ-> ಪೆರ್ದು=ಹಿರಿದು= ದೊಡ್ಡ ತೊರೆ ಹಳ್ಳ,,ದೊಡ್ಡದು ಕೆರೆಯಿಂದೆ,

ಯೆಲ್ಲಿಯುಂ = ಎಲ್ಲೆಡೆಯೂ ಕುಸುಮದ = ಹೋವಿನ ಆಗರದಿಂದೆ ಸರದಿಂದೆ=ಸರಸ್ಸಿನಿಂದ, ಯೆಲ್ಲಿಯುಂ = ಎಲ್ಲೆಡೆಯೂ ರತ್ನಮಯದಿಳೆಯಿಂದೆ->ರತ್ನಮಯದ ಇಳೆ=ಭೂಮಿಯಿಂದ ಬೆಳೆಯಿಂದೆ ಮಣಿಕೃತಕ ಶೈಲದಿಂದ = ಕೃತಕ ಮಣಿಯ ಬೆಟ್ಟದಿಂದಲೂ, ಎಲ್ಲಿಯುಂ = ಎಲ್ಲೆಡೆಯೂ ಸುಳಿವ ಗೋವ್ರಜದಿಂದೆ ==ತಿರುಗಾಡುತ್ತಿರುವ ದನಗಳ ಹಿಂಡಿನಿಂದ, ಗಜದಿಂದೆ =ಆನೆಗಳಿಂದ, ಯೆಲ್ಲಿಯುಂ = ಎಲ್ಲೆಡೆಯೂ ಕತ್ತುರಿಯ ಮೃಗದಿಂದೆ =ಕಸ್ತೂರಿ ಮೃಗದಿಂದಲೂ, ಖಗದಿಂದೆ = ಪಕ್ಷಿಗಳಿಂದಲೂ, ಯೆಲ್ಲಿಯುಂ = ಎಲ್ಲೆಡೆಯೂ ವಿರಚಿತ =ಸಂದರವಾಗಿ ರಚಿಸಿದ ಭವನದಿಂದೆ=ಮನೆಗಳಿಂದಲೂ, ಜನದಿಂದೆ= ಜನರಿಂದಲೂ ಆ ನಾಡ ಸಿರಿ=ಸಂಪತ್ತು ಮೆರೆದುದು.

  • ತಾತ್ಪರ್ಯ :ಎಲ್ಲೆಡೆಯೂ ಹರಿವ ದೊಡ್ಡ ತೊರೆ ಹಳ್ಳ,ದೊಡ್ಡದು ಕೆರೆಯಿಂದೆ, ಎಲ್ಲೆಡೆಯೂ ಹೋವಿನ ಇರುವಿಕೆಯಿಂದದ ಸರಸ್ಸಿನಿಂದ, ಎಲ್ಲೆಡೆಯೂ ರತ್ನಮಯದ ಭೂಮಿಯಿಂದ, ಬೆಳೆಯಿಂದ, ಕೃತಕ ಮಣಿಯ ಬೆಟ್ಟದಿಂದಲೂ ಎಲ್ಲೆಡೆಯೂ ತಿರುಗಾಡುತ್ತಿರುವ ದನಗಳ ಹಿಂಡಿನಿಂದ, ಆನೆಗಳಿಂದ, ಎಲ್ಲೆಡೆಯೂ ಕಸ್ತೂರಿ ಮೃಗದಿಂದಲೂ,ಪಕ್ಷಿಗಳಿಂದಲೂ, ಎಲ್ಲೆಡೆಯೂ ಸಂದರವಾಗಿ ರಚಿಸಿದ ಮನೆಗಳಿಂದಲೂ, ಜನರಿಂದಲೂ ಆ ನಾಡ ಸಂಪತ್ತು ಮೆರೆದುದು.

(ಪದ್ಯ - ೨)

ಪದ್ಯ - ೩ ಸಂಪಾದಿಸಿ

ಅಂಚೆವಿಂಡಾಡದಕೊಳಂ ಕೊಳಗಳೊಳು ಸಲೆ ಪ |
ಳಂಚಿ ಸುಳೀಯದ ಗಾಳಿ ಗಾಳಿಗಳ ಬಳಿವಿಡಿದು |
ಸಂಚರಿಸದೆಳದುಂಬಿ ತುಂಬಿಗಳ ಬಿಡಯಕಿಂಪೆನಿಸದಚ್ಚಲರಲರ್ಗಳ |
ಗೊಂಚಲೆರಗಿಸದ ಲತೆ ಲತೆಗಳಡರದತಳ್ಕಿ |
ನಿಂ ಚಿಗುರದಿಮ್ಮಾವು ಮಾವುಗಳ ಚೆಂದಳಿರ್ |
ಮಿಂಚದ ಬನಂ ಬನಗಳಿಂ ಬಳಸದೂರೂರ್ಗಳಿಲ್ಲದೆಡೆಯಿಲ್ಲಿಳೆಯೊಳು ||3||

ಪದವಿಭಾಗ-ಅರ್ಥ:
ಅಂಚೆವಿಂಡಾಡದಕೊಳಂ->ಅಂಚೆವಿಂಡು = ಹಂಸಗಳ ಹಿಂಡು, ಆಡದಕೊಳಂ = ಆಡದ ಕೊಳವು, ಕೊಳಗಳೊಳು ಸಲೆ ಪಳಂಚಿ ಸುಳೀಯದ ಗಾಳಿ->ಕೊಳಗಳಲ್ಲಿ ಪಳಂಚಿ = ಸುತ್ತಿ ಸುಳಿಯದ ಗಾಳಿ, ಗಾಳಿಗಳ ಬಳಿವಿಡಿದು ಸಂಚರಿಸದೆಳದುಂಬಿ-> ಗಾಳಿಗಳ ಬಳಿವಿಡಿದು = ಗಾಳಿಯ ದಿಕ್ಕನ್ನು ಅನುಸರಿಸದ ಎಳೆದುಂಬಿ =ಮರಿಜೇನುಹುಳಗಳು, ತುಂಬಿಗಳ ಬಿಡಯಕಿಂಪೆನಿಸದಚ್ಚಲರಲರ್ಗಳ-> ತುಂಬಿಗಳ ಬಿಡಯಕೆ=ಗುಂಪಿಗೆ, ಇಂಪೆನಿಸದ= ಸವಿ ಎನಿಸದ,ಅಚ್ಚಲರ್ಗಳ = ಹೊಸ ಹೂವುಗಳ, ಗೊಂಚಲೆರಗಿಸದ ಲತೆ = ಹೊಸ ಹೂವುಗಳ ಗೊಂಚಲನ್ನು ಎರಗಿಸದ ಲತೆ= ಬಿಡದ ಬಳ್ಳಿ, ಲತೆಗಳಡರದತಳ್ಕಿನಿಂಚಿಗುರದಿಮ್ಮಾವು-> ಲತೆಗಳ ಅಡರದ ತಳ್ಕಿನಿಂ ಚಿಗುರದ ಇಮ್ಮಾವು = ಬಳ್ಳಿಗಳು ಹಬ್ಬಿದ ಹೊಳೆಯುವ ಇಮ್ಮಾವುಗಳ ಚೆಂದಳಿರ್ =(ಇಮ್ಮು= ಎರಡು)ಅನೇಕ ಮಾವಿನ ಮರಗಳ ಚಿಗುರುಗಳು, ಮರಗಳ ಚಿಗುರುಗಳಿಂದ ಮಿಂಚದ ಬನಂ =ಕಾಡು, ಬನಗಳಿಂ = ಅನೇಕ ಕಾಡುಗಳಿಂದ ಮತ್ತು ತೋಟಗಳಿಂದ , ಬಳಸದೂರೂರ್ಗಳಿಲ್ಲದೆಡೆಯಿಲ್ಲಿಳೆಯೊಳು->ಬಳಸದ ಊರ್ಗಳು ಇಲ್ಲದ ಎಡೆಯಿಲ್ಲ ಇಳೆಯೊಳು = ಬಳಸದ= (ತೋಟಗಳಿಂದ) ಸುತ್ತುವರಿಯಲ್ಪಡದ, ಊರ್ಗಳು = ಊರುಗಳು ಇಲ್ಲದ ಎಡೆಯಿಲ್ಲ ಸ್ಥಳವು ಇಲ್ಲ, ಇಳೆಯೊಳು =ಭದ್ರಾವತಿಯ ಈ ಭೂಮಿಯಲ್ಲಿ.
  • ತಾತ್ಪರ್ಯ : ಹಂಸಗಳ ಹಿಂಡು ಆಡದ ಕೊಳವು, ಕೊಳಗಳಲ್ಲಿ ಸುತ್ತಿ ಸುಳಿಯದ ಗಾಳಿಯೂ,ಗಾಳಿಗಳ ಗಾಳಿಯ ದಿಕ್ಕನ್ನು ಅನುಸರಿಸದ ಮರಿಜೇನುಹುಳಗಳು, ತುಂಬಿಗಳ ಗುಂಪಿಗೆ ಸವಿ ಎನಿಸದ ಹೊಸ ಹೂವುಗಳು, ಹೊಸ ಹೂವುಗಳ ಗೊಂಚಲನ್ನು ಬಿಡದ ಬಳ್ಳಿ, ಬಳ್ಳಿಗಳು ಹಬ್ಬದ ಮಾವಿನ ಮರಗಳು, ಹೊಳೆಯುವ ಅನೇಕ ಮಾವಿನ ಮರಗಳ ಚಿಗುರುಗಳು, ಮರಗಳ ಚಿಗುರುಗಳಿಂದ ಮಿಂಚದ ಕಾಡು, ಅನೇಕ ಕಾಡುಗಳಿಂದ ಮತ್ತು ತೋಟಗಳಿಂದ ಸುತ್ತುವರಿಯಲ್ಪಡದ ಊರುಗಳು ಮತ್ತು ಸ್ಥಳವು ಇಲ್ಲ, ಭದ್ರಾವತಿಯ ಈ ಭೂಮಿಯಲ್ಲಿ!

(ಪದ್ಯ - ೩)

ಪದ್ಯ – ೪ ಸಂಪಾದಿಸಿ

ಬೆಳೆಯದ ಪೊಲಂಗಳಂ ಬೆಳ್ದಾವರೆಗಳಲ |
ರ್ದಳೆಯದಕೊಳಂಗಳಂ ಮಣಿಶಿಲಾ ರೋಚಿಯಿಂ |
ಪೊಳೆಯದಚಲಗಳಂ ತರುಣಾರುಣ ಪ್ರಭಾಲಕ್ಷ್ಮಿಯಂ ನಗುವಂತಿರೆ ||
ತಳೆಯದ ಬನಂಗಳಂ ಕಿವಿಯೊಳಿಡಿದಾಸರಂ |
ಕಳೆಯದ ಸೊನಂಗಳಂ ಮನಕನವರತಸುಖಂ |
ಮೊಳೆಯದ ಜನಂಗಳಂ ಮುಳಿದರಸಲಾಂ ಕಾಣೆನಾಮಹೀಮಂಡಲದೊಳು ||4||

ಪದವಿಭಾಗ-ಅರ್ಥ:
ಬೆಳೆಯದ ಪೊಲಂಗಳಂ= ಬೆಳೆಯದ ಹೊಲಗಳನ್ನು, ಬೆಳ್ದಾವರೆಗಳಲರ್ದಳೆಯದಕೊಳಂಗಳಂ-> ಬೆಳ್ದಾವರೆಗಳು = ಬಿಳಿತಾವರೆ, ಅಲರ್ = ಹೂವು, ದ(ತ)ಳೆಯದ = ಬಿಡದ ಕೊಳಂಗಳಂ = ಕೊಳಗಳನ್ನು, ಮಣಿಶಿಲಾ =ರತ್ನಮಣಿಯಂತೆ ರೋಚಿಯಿಂ =ಕಾಂತಿಯಿಂದ ಪೊಳೆಯದ ಅಚಲಗಳಂ = ಹೊಳೆಯದ ಬೆಟ್ಟಗಳನ್ನು, ತರುಣಾರುಣ-> ತರುಣ = ಎಳೆಯ ಅರುಣ = ಸೂರ್ಯೋದಯದ ಪ್ರಭಾಲಕ್ಷ್ಮಿಯಂ = ಕಾಂತಿಯ ಲಕ್ಷ್ಮಿಯಂ = ಸಿರಿಸಂಪತ್ತು, ನಗುವಂತಿರೆ = ಸಂತಸವನ್ನು ಕೋಡುವಂತಿದ್ದವು. ತಳೆಯದ ಬನಂಗಳಂ ಕಿವಿಯೊಳಿಡಿದಾಸರಂ-> ಚಿಗುರಿಸದೇ ಇರುವ ವನಗಳನ್ನು, ಕಿವಿಯೊಳು ಇಡಿದ ಆಸರಂ = ಕಿವಿಯಲ್ಲಿ ಹೊಕ್ಕು ಆಯಾಸವನ್ನು, ಕಳೆಯದ ಸೋನಂಗಳಂ = ಸ್ವನಂಗಳಂ = ಗಾನವನ್ನು, ಮನಕನವರತಸುಖಂ-> ಮನಕೆ ಅನವರತ = ಸದಾ, ಸುಖಂ =ಆನಂದವನ್ನು ಮೊಳೆಯದ = ಉಂಟಾಗದ, ಜನಂಗಳಂ = ಜನರನ್ನು, ಮುಳಿದರಸಲಾಂ-> ಮುಳಿದು = ಬೇಸರದಿಂದ ಅರಸಲು = ಹುಡುಕಲು ಆಂ = ನಾನು ಕಾಣೆನಾಮಹೀಮಂಡಲದೊಳು-> ಕಾಣೆನು ಆ ಮಹೀಮಂಡಲದೊಳು = ಭದ್ರಾವತೀ ಮಹೀಮಂಡಲದಲ್ಲಿ ಬೆಳೆಯದ ಹೊಲ ಇತ್ಯಾದಿ ಆನಂದವಿಲ್ಲ ಬೇಸರದ ಜನರನ್ನು ಕಾಣೆನು ಎಂದು ಭೀಮನು ಹೇಳಿದನು).
  • ತಾತ್ಪರ್ಯ : 'ಬೆಳೆಯದ ಹೊಲಗಳನ್ನು, ಬಿಳಿತಾವರೆ ಹೂವು ಬಿಡದ ಕೊಳಗಳನ್ನು, ರತ್ನಮಣಿಯಂತೆ ಕಾಂತಿಯಿಂದ ಹೊಳೆಯದ ಬೆಟ್ಟಗಳನ್ನು, ಸೂರ್ಯೋದಯದ ಕಾಂತಿಯ ಸಿರಿಸಂಪತ್ತು, ನಗುವಂತಿರಲು ಸಂತಸವನ್ನು ಕೋಡುವಂತಿರದ ಚಿಗುರಿಸದೇ ಇರುವ ವನಗಳನ್ನು, ಕಿವಿಯಲ್ಲಿ ಹೊಕ್ಕು ಆಯಾಸವನ್ನು, ಕಳೆಯದ ಗಾನವನ್ನು, ಮನಕ್ಕೆ ಸದಾ, ಆನಂದವನ್ನು ಉಂಟುಮಾಡದ, ಬೇಸರದಿಂದಿರುವ ಜನರನ್ನು, ಹುಡುಕಲು ಅಂತಹವರನ್ನು ಭದ್ರಾವತೀ ಮಹೀಮಂಡಲದಲ್ಲಿ ನಾನು ಕಾಣೆನು', ಎಂದು ಭೀಮನು ಹೇಳಿದನು).

(ಪದ್ಯ - ೪)

ಪದ್ಯ – ೫ ಸಂಪಾದಿಸಿ

ಉರ್ವರೆಯ ಶಾಲಿಗಳ ಪಾಲ್ದೆನೆಗೆ ನಭದಿಂ ಮು |
ಸುರ್ವ ಗಿಳಿವಿಂಡುಗಳನುಲಿಯಿಂದೆ ಪಾಮರಿಯ |
ರೆರ್ವಿಸಿದೊಡಿರದೆ ಬಾಂದಳಕೆ ಮುಗುಳೇಳ್ವವೊಲ್ ಕಲಮಂಗಳಿಕ್ಕೆಲದೊಳು ||
ಕೊರ್ವಿ ನಳನಳಿಸಿ ನೀಳ್ದುರೆ ಬೆಳೆದ ರಸದಾಳಿ |
ಗರ್ವುಗಳ ಸೋಗೆಗಳ ಪಸುರುವೊಗರಾಗಸಕೆ |
ರ್ಪುತಿಹುದಾನಾಡೊಳೆಲ್ಲಿಯುಂ ದಾರಿಗರ ಕಣ್ಗೆ ಕೌತುಕಮಾಗಲು ||5||

ಪದವಿಭಾಗ-ಅರ್ಥ:
ಉರ್ವರೆಯ = ಪೈರು ಪಚ್ಚೆಯಿಂದ ಕೂಡಿದ ಭೂಮಿಯ, ಶಾಲಿಗಳ =ಭತ್ತದಗದ್ದೆಗಳ, ಪಾಲ್ದೆನೆಗೆ = ಹಾಲುಗೂಡಿದ ತೆನೆಗೆ, ನಭದಿಂ = ಆಕಾಶದಿಂದ ಮುಸುರ್ವ = ಮುಗಿಬೇಳುವ ಗಿಳಿವಿಂಡುಗಳನುಲಿಯಿಂದೆ-> ಗಿಳಿವಿಂಡುಗಳ ನುಲಿಯಿಂದೆ = ಗಿಳಿಯ ಹಿಂಡುಗಳನ್ನು ಕವಣೆಯಿಂದ, ಪಾಮರಿಯರ್ ರೈತ ಹೆಣ್ಣುಗಳು ಏರ್ವಿಸಿದೊಡೆ = ಕಲ್ಲುಬೀಸಿ ಹಾರಿಸಿದರೆ, ಇರದೆ ಬಾಂದಳಕೆ ಮುಗುಳೇಳ್ವವೊಲ್ = ಆಗಿಳಿಗಳು ಅಲ್ಲಿರದೆ ಆಕಾಶಕ್ಕೆ ಹಾರುವಂತೆ, (ಎಲ್ಲಿಯೆಂದರೆ) ಕಲಮಂಗಳು ಇಕ್ಕೆಲದೊಳು = ಎರಡೂಕಡೆ ಇರುವ, ಕಲಮಂಗಳು=ಗದ್ದೆಗಳಲ್ಲಿ

ಕೊರ್ವಿ= ಕೊಬ್ಬಿ ನಳನಳಿಸಿ = ಸೊಂಪಾಗಿ ನೀಳ್ದುರೆ->ನೀಳ್ದು ಉರೆ (ಹೆಚ್ಚು) = ನಿಂತು ಚೆನ್ನಾಗಿ ಬೆಳೆದ ರಸದಾಳಿ = ರಸದಾಳಿ ಗರ್ವುಗಳ=ರಸದಾಳಿಕಬ್ಬುಗಳ ಸೋಗೆಗಳ = ಉದುದ್ದ ಎಲೆಗಳ ಪಸುರು = ಹಸುರು ವೊಗರು= ಹಸಿರು ಬಣ್ಣ ಆಗಸಕೆ=ಆಕಾಶಕ್ಕೆ ವರ್ಪುತಿಹುದು= ಹಬ್ಬಿಹುದು, ನಾಡೊಳೆಲ್ಲಿಯುಂ-> ನಾಡೋಳ್ = ಈ ನಾಡಿನ ಎಲ್ಲಿಯುಂ = ಎಲ್ಲಡೆಯೂ, ದಾರಿಗರ = ದಾರಿಹೊಕರ ಕಣ್ಗೆ = ಕಣ್ಣಿಗೆ ಕೌತುಕಮಾಗಲು = ಅಚ್ಚರಿಯನ್ನಂಟು ಮಾಡುತ್ತಿರಲು.

  • ತಾತ್ಪರ್ಯ : ಪೈರು ಪಚ್ಚೆಯಿಂದ ಕೂಡಿದ ಭೂಮಿಯ, ಭತ್ತದಗದ್ದೆಗಳ ಹಾಲುಗೂಡಿದ ತೆನೆಗೆಆಕಾಶದಿಂದ ಮುಗಿಬೇಳುವ ಗಿಳಿವಿಂಡುಗಳ ಘೇಂಕಾರದಿಂದಲೂ, ಗಿಳಿಯ ಹಿಂಡುಗಳನ್ನು ಕವಣೆಯಿಂದ, ರೈತ ಹೆಣ್ಣುಮಕ್ಕಳು ಕವಣೆಯಿಂದ ಕಲ್ಲುಬೀಸಿ ಗಿಳಿಗಳನ್ನು ಹಾರಿಸಿದರೆ, ಎರಡೂಕಡೆ ಇರುವ, ಗದ್ದೆಗಳಲ್ಲಿ ಆ ಗಿಳಿಗಳು ಅಲ್ಲಿರದೆ ಆಕಾಶಕ್ಕೆ ಹಾರುವುದು; (ಮತ್ತೆ ಬರುವುವು - ಪುನಃ ಕಲ್ಲು ಬೀಸುವರು; ಭತ್ತ ಕಾಳುಕಟ್ಟಯತ್ತಿರುವಾಗ ಇದು ನಡೆಯುತ್ತಲೇ ಇರುವುದು) ಈ ನಾಡಿನ ಎಲ್ಲಡೆಯೂ,ದಾರಿಹೊಕರ ಕಣ್ಣಿಗೆ ಅಚ್ಚರಿಯನ್ನಂಟು ಮಾಡುತ್ತಿರುವ ಕೊಬ್ಬಿ ಸೊಂಪಾಗಿ ನಿಂತು ಚೆನ್ನಾಗಿ ಬೆಳೆದ ರಸದಾಳಿ ಕಬ್ಬುಗಳ ಉದುದ್ದ ಎಲೆಗಳ ಹಸಿರು ಬಣ್ಣ ಆಕಾಶಕ್ಕೆ ಹಬ್ಬಿದೆ. (ವಿಶಾಲವಾದ ಕಬ್ಬಿನಗದ್ದೆಗಳು ದಿಗಂತದವರೆಗೂ ಹಬ್ಬಿದ್ದಾಗ ಹಾಗೆ ಕಾಣುವುದು).

(ಪದ್ಯ - ೫),

ಪದ್ಯ – ೬ ಸಂಪಾದಿಸಿ

ತಂಬೆಲರ ಸೊಗಸಿಂಗೆ ತಲೆದೂಗುವಂತೆ ತಳೆ |
ದಂಬುಜದ ಪರಿಮಳಕೆ ಶಿರವನೊಲೆವಂತೆ ಮರಿ |
ದುಂಬಿಗಳ ಗಾನಕ್ಕೆ ಕೊರಲನೊಲೆದಾಡುವಂತೊಯ್ಯೊಯ್ಯನೊಲೆದಾಡುವ ||
ಪೊಂಬಣ್ಣಮೆಸೆವ ಕಳಮಶ್ರೀಯ ಪರಿಚರ್ಯೆ |
ಯಂ ಬಿಡದೆ ಮಾಳ್ವ ಕೆಳದಿಯರೆನಲ್ ಕೀರ ನಿಕು |
ರುಂಬಮಂ ಸೋವಲೆಂದಲ್ಲಿರ್ದ ಪಾಮರಿಯರಧ್ವಗರನೆಡೆಗೆಡಿಪರು ||6||

ಪದವಿಭಾಗ-ಅರ್ಥ:
ತಂಬೆಲರ ಸೊಗಸಿಂಗೆ = ತಂಪಾದ ಗಾಳಯ ಸೊಗಸಿಗೆ, ತಲೆದೂಗುವಂತೆ, ತಳೆದಂಬುಜದ ಪರಿಮಳಕೆ ಶಿರವನೊಲೆವಂತೆ = ಕರೆಯಲ್ಲಿರುವ ಕಮಲದ ಪರಿಮಳಕ್ಕೆ ತಲೆಯನ್ನಲ್ಲಾಡಿಸುವಂತೆ, ಮರಿದುಂಬಿಗಳು = ಜೇನುಹುಳುಗಳ ಹಾರುವ ಘೇಂಕಾರದ ಗಾನಕ್ಕೆ ಕೊರಲನೊಲೆದಾಡುವಂತೆ-> ಕೊರಳನ್ನು ಒಲಿದಾಡವಹಾಗೆ ತೊಯ್ಯೊಯ್ಯನೊಲೆದಾಡುವ ಹಾಗೆ, ಪೊಂಬಣ್ಣಮೆಸೆವ ಕಳಮಶ್ರೀಯ ಪರಿಚರ್ಯೆಯಂ-> ಪೊಂಬಣ್ಣಂ = ಬಂಗಾರದ ಬಣ್ಣವನ್ನು ಎಸೆವ = ಹೋಲುವ ಕಳಮಶ್ರೀಯ = ಭತ್ತದ ಧಾನ್ಯಲಕ್ಷಿಯ ಪರಿಚೆರ್ಯೆಯಂ= ಸೇವೆಯನ್ನು, ಬಿಡದೆ ಮಾಳ್ವ = ಮಾಡುವ, ಕೆಳದಿಯರೆನಲ್ = ಸಖಿಯರೋ ಎನ್ನುವಂತೆ, ಕೀರ = ಗಿಳಿಗಳ, ನಿಕುರುಂಬಮಂ = ಸಮೂಹವನ್ನು ಸೋವಲೆಂದಲ್ಲಿರ್ದ-> ಸೋವಲು ಎಂದು ಅಲ್ಲಿರ್ದ = ಓಡಿಸಲು ಎಂದು ಅಲ್ಲಿದ್ದ, ಪಾಮರಿಯರಧ್ವಗರನಡೆಗೆಡೆಪರು-> ಪಾಮರಿಯರ್ ಅಧ್ವಗರ ನೆಡೆಗೆಡೆಪರು =ರೈತ ಹೆಂಗಸರು ಪಯಣಿಗರ ನಡಿಗೆಯನ್ನು ನಡಿಗೆಯನ್ನು ಕೆಡಿಪರು = ನಿಲ್ಲಿಸುವರು.(ಪಾಮರಿಯರರ್ಧ್ವಗರನಡಿಗೆಡಪರು ಪಾಮರಿಯರು ಅಧ್ವಗರನು ಅಡಿಗೆಡಪರು = ರೈತ ಹೆಣ್ಣುಮಕ್ಕಳು ಅಧ್ವಗರನು= ದಾರಿಹೋಕರನ್ನು ಅಡಿಗೆಡಪರು = ನಡಿಗೆ ತಪ್ಪಿಸುವರು.) ಈ ರೈತ ಹೆಂಗಸರು ತಮ್ಮ ಮುಗ್ಧ ಲಾವಣ್ಯದಿಂದ ದಾರಿಹೋಕರ ಗಮನವನ್ನು ಪೂರಾ ಸೆಳೆದು ಅವರು ನಿಂತು ನೋಡುವಂತೆ ಮಾಡುವರು.(ಪಾಮರಿಯರರ್ಧ್ವಗರನಡಿಗೆಡಪರು ಪಾಮರಿಯರು ಅಧ್ವಗರನು ಅಡಿಗೆಡಪರು = ರೈತ ಹೆಣ್ಣುಮಕ್ಕಳು ಅಧ್ವಗರನು= ದಾರಿಹೋಕರನ್ನು ಅಡಿಗೆಡಪರು = ನಡಿಗೆ ತಪ್ಪಿಸುವರು.)
  • ತಾತ್ಪರ್ಯ : ತಂಪಾದ ಗಾಳಯ ಸೊಗಸಿಗೆ, ತಲೆದೂಗುವಂತೆ, ಕರೆಯಲ್ಲಿರುವ ಕಮಲದ ಪರಿಮಳಕ್ಕೆ ತಲೆಯನ್ನಲ್ಲಾಡಿಸುವಂತೆ, ಜೇನುಹುಳುಗಳ ಹಾರುವ ಘೇಂಕಾರದ ಗಾನಕ್ಕೆ ಕೊರಳನ್ನು ಒಲಿದಾಡವಹಾಗೆ, ಬಂಗಾರದ ಬಣ್ಣವನ್ನು ಹೋಲುವ ಭತ್ತದ ಧಾನ್ಯಲಕ್ಷಿಯ ಸೇವೆಯನ್ನು ಬಿಡದೆ ಮಾಡುವ, ಅವಳ ಸಖಿಯರೋ ಎನ್ನುವಂತೆ, ಗಿಳಿಗಳ ಸಮೂಹವನ್ನು ಓಡಿಸಲು ಎಂದು ಅಲ್ಲಿದ್ದ ,ರೈತ ಹೆಂಗಸರು ಪಯಣಿಗರ ನಡಿಗೆಯನ್ನು ನಡಿಗೆಯನ್ನು ನಿಲ್ಲಿಸುವರು. ಈ ರೈತ ಹೆಂಗಸರು ತಮ್ಮ ಮುಗ್ಧ ಲಾವಣ್ಯದಿಂದ ಮತ್ತು ಬೆಳೆದುನಿಂತ ಭತ್ತದಗದ್ದೆಯಲ್ಲಿ ಕವಣೆ ಬೀಸಿ ಹಕ್ಕಿಗಳನ್ನು ಹಾರಿಸುತ್ತದ್ದರೆ, ಆ ದೃಶ್ಯ ದಾರಿಹೋಕರ ಗಮನವನ್ನು ಪೂರಾ ಸೆಳೆದು ಅವರು ನಿಂತು ನೋಡುವಂತೆ ಮಾಡುವುದು.

(ಪದ್ಯ - ೬),

ಪದ್ಯ – ೭ ಸಂಪಾದಿಸಿ

ಪಾಲ್ದೆನೆಯೊಳಂಡಿಸಿದ ಗಿಳೀವಿಂಡನಬಲೆಯರ್ |
ಕಾಲ್ದೆಗೆಯಲಾರ್ದು ಕೈಪರೆಗುಟ್ಟುವಂಡಲೆಗೆ |
ತೇಲ್ದು ಮೇಲುದು ಜಾರೆ ತೋರ್ಪ ಪೊಂಗೊಡಮೊಲೆಯನಂಬುಜದ ಮುಕುಳ(+ಮೆಂದು)||
ಸೋಲ್ದೆರಗಿ ತಿರುತಿರುಗಿ ಬರುತಿರ್ಪ ತುಂಬಿಗಳ |
ಸಾಲ್ದಿವಿಜಗಿರಿಯ ಬಳಸುವ ತಮೋರಾಜಿಯಂ |
ಪೊಲ್ದು ಸಲೆ ಕಂಗೊಳಿಸುತಿರ್ಪುದಾ ಭೂತಲದೊಳೇನೆಂಬೆನಚ್ಚರಿಯನು ||7||

ಪದವಿಭಾಗ-ಅರ್ಥ:
ಪಾಲ್ದೆನೆಯೊಳಂಡಿಸಿದ-> ಪಾಲ್ದೆನೆಯೊಳು = ಹಾಲುತುಂಬಿದ ಭತ್ತದ ತೆನೆಯಲ್ಲಿ ಅಂಡಿಸಿದ = ಕುಳಿತ ಗಿಳೀವಿಂಡನು ಗಳಿಗಳ ಗುಂಪನ್ನು, ಅಬಲೆಯರ್ =ಹೆಣ್ಣುಮಕ್ಕಳು, ಕಾಲ್ದೆಗೆಯಲಾರ್ದು->ಕಾಲ್ದೆಗಯಲು ಹಾರಿಸಲು, ಆರ್ದು = ಕೂಗಿ ಕೈಪರೆಗುಟ್ಟುವಂಡಲೆಗೆ-> ಕೈಪರಗುಟ್ಟುವ = ಚಪ್ಪಾಳೆ ತಟ್ಟುವ,ಅಂಡಲೆಗೆ = ಪರಿಶ್ರಮಕ್ಕೆ, ತೇಲ್ದು ಮೇಲುದು ಜಾರೆ-> ತೇಲ್ದು = ಸೆರಗು ಸರಿದು, ಮೇಲುದು ಜಾರೆ = ಹೊದೆದ ಸೆರಗು ಜಾರಲು, ತೋರ್ಪ = ಕಾಣುವ ಪೊಂಗೊಡಮೊಲೆಯನಂಬುಜದ-> ಕಾಣುವ ಪೊಂಗೊಡ = ಚಿನ್ನದ ಕೊಡದಂತಿರುವ, ಮೊಲೆಯನು = ಮೊಲೆಯನ್ನು ಅಂಬುಜದ = ಕಮಲದ, ಮುಕುಳಮೆಂದು = ಮೊಗ್ಗೆಂದು ಭ್ರಮಿಸಿ, ಸೋಲ್ದೆರಗಿ = ಸೋಲ್ದು = ಆಸೆಪಟ್ಟು ಎರಗಿ =ಬಂದು (ಓಡಿಸಿದಾಗ್ಯೂ) ಅದಕ್ಕೆ ತಿರುತಿರುಗಿ ಬರುತಿರ್ಪ = ಬರುತ್ತಿರುವ ತುಂಬಿಗಳ = ಜೇನುಹುಳುಗಳ ಸಾಲ್=ಸಾಲು ದಿವಿಜಗಿರಿಯ = ಮೇರು ಪರ್ವತವನ್ನು, ಬಳಸುವ = ಸುತ್ತಯತ್ತಿರುವ, ತಮೋರಾಜಿಯಂ ಕತ್ತಲೆಯ ಸಾಲನ್ನು ಪೊಲ್ದು = (ಕಪ್ಪು ತುಂಬಿಗಳು) ಹೋಲುತ್ತಾ ಸಲೆ = ಬಹಳ, ಕಂಗೊಳಿಸುತಿರ್ಪುದಾ = ಮನೋಹರವಾಗಿರುವುದು, ಭೂತಲದೊಳೇನೆಂಬೆನಚ್ಚರಿಯನು-> ಭೂತಲದುಳು ಏನೆಂಬನು ಅಚ್ಚರಿಯನು = ಈ ಭೂಮಿಯಲ್ಲಿ, ಅಶ್ಚರ್ಯವನ್ನು ಏನೆಂದು ಹೇಳಲಿ. (ಮೇರು ಪರ್ವತವನ್ನು ಹಗಲು ರಾತ್ರಿಗಳು ಸುತ್ತುತ್ತಿವೆ ಎಂಬ ನಂಬುಗೆ)
  • ತಾತ್ಪರ್ಯ : ಹಾಲುತುಂಬಿದ ಭತ್ತದ ತೆನೆಯಲ್ಲಿ ಕುಳಿತ ಗಿಳಿಗಳ ಗುಂಪನ್ನು, ಹೆಣ್ಣುಮಕ್ಕಳು, ಹಾರಿಸಲು, ಕೂಗಿ ಚಪ್ಪಾಳೆ ತಟ್ಟುವ ಪರಿಶ್ರಮಕ್ಕೆ, ಹೊದೆದ ಮೇಲುಸೆರಗು ಜಾರಲು, ಕಾಣುವ ಚಿನ್ನದ ಕೊಡದಂತಿರುವ, ಮೊಲೆಯನ್ನು ಕಮಲದ, ಮೊಗ್ಗೆಂದು ಭ್ರಮಿಸಿ, ಅದಕ್ಕೆ ಆಸೆಪಟ್ಟು ಬಂದು (ಓಡಿಸಿದಾಗ್ಯೂ) ತಿರುತಿರುಗಿ ಬರುತ್ತಿರುವ ಜೇನುಹುಳುಗಳ ಸಾಲು, ಮೇರು ಪರ್ವತವನ್ನು,ಸುತ್ತಯತ್ತಿರುವ, ಕತ್ತಲೆಯ ಸಾಲನ್ನು ಈ ಕಪ್ಪು ತುಂಬಿಗಳು ಗುಂಪು ಹೋಲುತ್ತಾ ಬಹಳ ಮನೋಹರವಾಗಿರುವುದು; ಈ ಭೂಮಿಯಲ್ಲಿ, ಅಶ್ಚರ್ಯವನ್ನು ಏನೆಂದು ಹೇಳಲಿ. (ಮೇರು ಪರ್ವತವನ್ನು ಹಗಲು ರಾತ್ರಿಗಳು ಸುತ್ತುತ್ತಿವೆ ಎಂಬ ನಂಬುಗೆ)

(ಪದ್ಯ - ೭),

ಪದ್ಯ – ೮ ಸಂಪಾದಿಸಿ

ಶಾಲಿಗಳ ಕೈಗಂಪ ಪೊಲಗಾವ ಪಾಮರಿಯ |
ರೋಳಿಗಳ ಮೈಗಂಪ ಸತತ ಕುಸುಮಿತ ತರು ಲ |
ತಾಳಿಗಳ ಪೂಗಂಪ ತಿಳಿಗೊಳಂಗಳೋಳಲರ್ದ ಪೊಚ್ಚ ಪೊಂದಾವರೆಗಳ ||
ಧೂಳಿಗಳ ತನಿಗಂಪನುಂಡು ಮಿಂಡೆದ್ದ ಭೃಂ |
ಗಾಳಿಗಳ ಬಳಗಂ ಪರಿಯಲೊಡನೆ ಸುಳಿವ ತಂ |
ಗಾಳಿಗಳ ಕಡುಗಂಪ ಸೇವಿಸುತೆ ಪಥಿಕರಾಸರ್ಗಳೆವರಾನಾಡೊಳು ||8||

ಪದವಿಭಾಗ-ಅರ್ಥ:
(ಆ ನಾಡಿನಲ್ಲಿ) ಶಾಲಿಗಳ = ಭತ್ತದ ಕೈಗಂಪ->ಕೈ= ತೆನೆಗಳ ಕಂಪ = ಪರಿಮಳ, ಪೊಲಗಾವ = ಹೊಲಕಾಯುವ ಪಾಮರಿಯರ ಓರೋಳಿಗಳ= ರೈತ, ಮೈಗಂಪ, ಮಹಿಳೆಯರ ಓಳಿಗಳ ಮೈಗಂಪ = ಸಮೂಹದ ಮೈಯ ಕಂಪು, ಸತತ ಕುಸುಮಿತ ತರು ಲತಾಳಿಗಳ ಪೂಗಂಪ =ಯಾವಾಗಳೂ ಅರಳಿರುವ ಹೂಗಳುಳ್ಳ ಮರ ಬಳ್ಳಿಗಳ ಕಂಪು, ತಿಳಿಗೊಳಂಗಳೋಳಲರ್ದ-> ತಿಳಿ ಕೊಳಂಗಳೊಳ್ ಅಲರ್ದ = ತಿಳಿನೀರಿನ ಕೊಳದಲ್ಲಿ ಅರಳಿದ, ಪೊಚ್ಚ ಪೊಂದಾವರೆಗಳ = ಹೊಸ ಹೊನ್ನಿನ ಬಣ್ಣದ ತಾವರೆಗಳ, ಧೂಳಿಗಳ = ಮಕರಂದದ, ತನಿಗಂಪನುಂಡು = ಹೊಸಪರಿಮಳವನು ಉಂಡು, ಮಿಂಡೆದ್ದ = ಸೊಕ್ಕಿನಿಂದ ಹಾರುತ್ತಿರುವ, ಭೃಂಗಾಳಿಗಳ ಬಳಗಂ = ಜೇನಿನ ಗುಂಪು, ಪರಿಯಲೊಡನೆ =ಹರಿಯಲು = ಹೋಗುತ್ತಿರಲು ಒಡನೆ = ಅದೇ ಸಮಯದಲ್ಲಿ ಸುಳಿವ = ಬೀದುವ ತಂಗಾಳಿಗಳ ಕಡುಗಂಪ = ಪರಿಮಳವನ್ನು ಸೇವಿಸುತೆ = ಸೇವಿಸುತ್ತಾ ಪಥಿಕರಾಸರ್ಗಳೆವರಾನಾಡೊಳು-> ಪಥಿಕರು ಆಸರ = ಆಯಾಸವನ್ನು ಕಳೆವರು ಆ ನಾಡೊಳು.
  • ತಾತ್ಪರ್ಯ : ಆ ನಾಡಿನಲ್ಲಿ ಭತ್ತದ ತೆನೆಗಳ ಪರಿಮಳ, ಹೊಲಕಾಯುವ ರೈತ ಮಹಿಳೆಯರ ಸಮೂಹದ ಮೈಯ ಕಂಪು, ಯಾವಾಗಳೂ ಅರಳಿರುವ ಹೂಗಳುಳ್ಳ ಮರ ಬಳ್ಳಿಗಳ ಕಂಪು, ತಿಳಿನೀರಿನ ಕೊಳದಲ್ಲಿ ಅರಳಿದ ಹೊಸ ಹೊನ್ನಿನ ಬಣ್ಣದ ತಾವರೆಗಳ ಮಕರಂದದ ಹೊಸ ಪರಿಮಳವನ್ನು ಉಂಡು, ಸೊಕ್ಕಿನಿಂದ ಹಾರುತ್ತಿರುವ, ಜೇನಿನ ಗುಂಪು ಹಾರಿ ಹೋಗುತ್ತಿರಲು, ಅದೇ ಸಮಯದಲ್ಲಿ ಬೀಸುವ ತಂಗಾಳಿಗಳ ಪರಿಮಳ, ಇವನ್ನು ಸೇವಿಸುತ್ತಾ ಪಯಣಿಗರು ಆಯಾಸವನ್ನು ಪರಿಹರಿಸಿಕೊಳ್ಳುವರು.

(ಪದ್ಯ - ೮),

ಪದ್ಯ – ೯ ಸಂಪಾದಿಸಿ

ಬಟ್ಟೆಬಟ್ಟೆಯೊಳೆಲ್ಲಿಯುಂ ಕುಳಿರ್ವೆರಸಿದರ |
ವಟ್ಟಿಗೆಯ ಸದನಂಗಳೀಂದೆ ಬಾಗಿಲ್ಗೆ ಪೊರ |
ಮಟ್ಟು ಕಲಶಮನೆತ್ತಿ ನೀರೆರೆವ ಕಾಮಿನಿಯರುರುಬಾಹುಮೂಲದೆಡೆಗೆ ||
ದಿಟ್ಟಿ ಪರಿಪರಿದು ಮೊಗಮೊರ್ಗುಡಿಸೆ ಸರಿಸಕಳ |
ವಟ್ಟಜಲಧಾರೆ ಪೊರಸೂಸೆ ಬಯಲಿಗೆ ಬಾಯ |
ಬಿಟ್ಟು ನಗಿಸುವರಲ್ಲಿ ತೃಷೆಯಿಂದೆ ಬಂದ ಪಥಿಕರ್ಕಳಾ ಬಾಲೆಯರನು ||9||

ಪದವಿಭಾಗ-ಅರ್ಥ:
ಬಟ್ಟೆಬಟ್ಟೆಯೊಳೆಲ್ಲಿಯುಂ = ಬಟ್ಟೆ = ದಾರಿ;ದಾರಿ ದಾರಿಯಲ್ಲಿ ಎಲ್ಲಿಯುಂ= ಎಲ್ಲಾ ಕಡೆ ಕುಳಿರ್ = ತಂಪು (ಹಿಮ) ವೆರಸಿದ = ಸೇರಿಸಿದ ಅರವಟ್ಟಿಗೆಯ = ನೀರುಕೊಡುವ ಸದನಂಗಳೀಂದೆ = ಮನೆಗಳಿಂದ, ಬಾಗಿಲ್ಗೆ = ಬಾಗಿಲಿಗೆ, ಪೊರಮಟ್ಟು = ಹೊರಬಂದು, ಕಲಶಮನೆತ್ತಿ ತಂಬಿಗೆಯನ್ನು ಎತ್ತಿ, ನೀರೆರೆವ = ನೀರು ಹೊಯ್ಯುವ, ಕಾಮಿನಿಯರ = ಹೆಂಗಸರ, ಉರುಬಾಹುಮೂಲದೆಡೆಗೆ-> ಉರು = ಉಬ್ಬಿದ ಬಾಹುಮೂಲ ತೋಳಿನ ಬುಡದ, ಎಡೆಗೆ =ಕಡೆ ದಿಟ್ಟಿ ಪರಿಪರಿದು = ನೀರುಕುಡಿವ ಪಥಿಕರ ದೃಷ್ಟಿ ಹರಿದು, ಮೊಗಮೊರ್ಗುಡಿಸೆ-> ಮೊಗಂ =ಮುಖಕ್ಕೆ ಒರ್ಗುಡಿಸೆ =ಓರೆಮಾಡಿ (ಬೊಗಸೆಗೆ ಬಿದ್ದ ನೀರನ್ನು ಕುಡಿಯಲು ಮುಖವನ್ನು ಓರೆ ಮಾಡಿ ಮೇಲೆ ನೋಡುವುದು) ಸರಿಸಕೆ = ಕೈಹತ್ತಿರಕ್ಕೆ ಅಳವಟ್ಟ = ಬಂದ ಜಲಧಾರೆ ನೀರು, ಪೊರಸೂಸೆ = ಕುಡಿಯದೆ ಹೊರಬೀಳಲು, ಬಯಲಿಗೆ ಬಾಯಬಿಟ್ಟು = ಮೇಲೆ ನೋಡುತ್ತಾ (ಬಯಲಿಗೆ)ನೀರಿಲ್ಲದ ಕಡೆ ಬಾಯಿ ತೆರದು, ನಗಿಸುವರಲ್ಲಿ-> ನಗಿಸುವರು ಅಲ್ಲಿ, ತೃಷೆಯಿಂದೆ = ಬಾಯಾರಿ ಬಂದ ಪಥಿರ್ಕಳಾ-> ಫಥಿರ್ಗಳು = ಪಯಣಿಗರು ಆ ಬಾಲೆಯರನು.
  • ತಾತ್ಪರ್ಯ : ಆ ನಾಡಿನಲ್ಲಿ,ದಾರಿ ದಾರಿಯಲ್ಲಿ ಎಲ್ಲಾ ಕಡೆ ಅರವಟ್ಟಿಗೆ ಎಂಬ ಪಯಣಿಗರಿಗೆ ತಂಪಾದ ನೀರು ಕೊಡುವ ಮನೆಗಳಿವೆ, ಆ ಮನೆಗಳಿಂದ ಬಾಗಿಲಿಗೆ ಬಂದು, ಬಾಯಾರಿದ ಪಯಣಿಗರಿಗೆ ತಂಬಿಗೆಯನ್ನು ಎತ್ತಿ, ನೀರು ಹೊಯ್ಯುವಾಗ ಬೊಗಸೆಗೆ ಬಿದ್ದ ನೀರನ್ನು ಕುಡಿಯಲು ಮುಖವನ್ನು ಓರೆ ಮಾಡಿದಾಗ ಮೇಲೆ ನೋಡುತ್ತಿರಲು, ಹೆಂಗಸರ ಉಬ್ಬಿದ ಎದೆಯ ಕಡೆ,ನೀರು ಕುಡಿವ ಪಥಿಕರ ದೃಷ್ಟಿ ಹರಿದು ಮೈಮರೆತು, ಮೇಲೆ ನೋಡುತ್ತಾ ಕೈ ಹತ್ತಿರಕ್ಕೆ ಬಂದ ನೀರು ಕುಡಿಯದೆ ಹೊರಬೀಳಲು ಬಾಲೆಯರು ನಗುವರು. ಹೀಗೆ ಇವರು ನೀರಿಲ್ಲದ ಕಡೆ ಬೊಗಸೆ ಹಿಡಿದು, ಬಾಯಾರಿ ಬಂದ ಪಯಣಿಗರು ಅಲ್ಲಿ ಆ ಬಾಲೆಯರನ್ನು ನಗಿಸುವರು. ಬಾಯಾರಿದರೂ ಕೈಗೆ ಹಾಕಿದ ನೀರು ಕುಡಿಯದೆ ಮೇಲೆ ನೋಡುತ್ತಿರುವ ಪಯಣಿಗರ ಚಂಚಲತೆಯನ್ನು ಕಂಡು ಬಾಲೆಯರು ನಗುವರು.(ಪಯಣಿಗರಿಗೆ ಬಾಯಾರಿದರೂ ಅದನ್ನು ಮರೆಸುವಷ್ಟು ಸುಂದರಿಯರು ಅವರು.)

(ಪದ್ಯ - ೯),

ಪದ್ಯ – ೧೦ ಸಂಪಾದಿಸಿ

ಸ್ವಾದು ಸ್ವಚ್ಛತೆ ಶೈತ್ಯಮಾಮೋದಮೊಂದಿ ಸೊಗ |
ಸಾದ ಲಲಿತಾಂಗಿಯರ ಕರತಳದ ವಿಮಲ ಕಲ |
ಶೋದಕವನೊಲಿದೀಂಟುತಿರ್ದೊಡಂ ಮನದಣಿಯದಧ್ವರ್ಗಾಹೆಂಗಳ ||
ಮಾದಳಿರ ಪಳಿವ ಚೆಂದುಟಿಯ ಸವಿಗೆಳನಗೆಯೊ |
ಳಾದರಿಪ ಕಡೆಗಣ್ಣ ನಿಚ್ಚಳಕೆ ಪೀವರಪ |
ಯೋಧರದ್ವಯವನಪ್ಪುವ ತಂಪಿಗೆಸೆವ ಮೈಗಂಪಿಂಗೆ ಬಯಸಿ ಬಯಸಿ ||10||

ಪದವಿಭಾಗ-ಅರ್ಥ:
ಸ್ವಾದು = ಸವಿಯಾದ ಸ್ವಚ್ಛತೆ = ಶುದ್ಧ ಶೈತ್ಯಮ್ ==ತಂಪಿನ, ಆಮೋದಮೊಂದಿ = ಪರಿಮಳಹೊಂದಿದ ಸೊಗಸಾದ ಲಲಿತಾಂಗಿಯರ = ಹೆಂಗಸರ ಕರತಳದ = ಕೈಯಿಂದ ನೀಡುವ ವಿಮಲ ಕಲಶೋದಕವನು = ಶುದ್ಧವಾದ ಚೊಂಬಿನ ನೀರನ್ನು, ಒಲಿದು ಈಂಟುತ ಇರ್ದೊಡಂ = ಪ್ರೀತಿಯಿಂದ ಕುಡಿಯುತ್ತಿದ್ದರೂ, ಮನದಣಿಯದ = ತೃಪ್ತಿಯಾಗದ ಅಧ್ವಗರ್ಗೆ =ದಾರಿಗರಿಗೆ, ಆ ಹೆಂಗಳ = ಹೆಂಗಸರ, ಮಾದಳಿರ ಪಳಿವ = ಮಾವಿನ ಚಿಗುರೆಲೆಯನ್ನು ಹಳಿಯುವ-ಮೀರಿಸುವ ಚೆಂದುಟಿಯ ಸವಿಯಾದ ಎಳನಗೆಯೊಳ್ ಮುಗುಳುನಗೆಯಲ್ಲಿ, ಆದರಿಪ = ಆದರಿಸುತ್ತಿರುವ, ಕಡೆಗಣ್ಣ ನಿಚ್ಚಳಕೆ = ನಿಷ್ಕಪಟ ಕಣ್ಣೊಟಕ್ಕೆ, ಪೀವರ ಪಯೋಧರದ್ವಯವನು = ಬಲಿತ ಎರಡು ಸ್ತನಗಳನ್ನು, ಅಪ್ಪುವ =ಅಪ್ಪಿಕೊಳ್ಳುವ ತಂಪಿಗೆಸೆವ = ಸುಖಕ್ಕೆ ಮೈಗಂಪಿಂಗೆ = ಮೈಸುವಾಸನೆಗೆ ಬಯಸಿ ಬಯಸಿ ನೀರುಕುಡಿದಷ್ಟೂ (ತೃಪ್ತಿಯಾಗದು).
  • ತಾತ್ಪರ್ಯ : ಸವಿಯಾದ ಶುದ್ಧ ತಂಪಿನ,ಪರಿಮಳಹೊಂದಿದ ಸೊಗಸಾದ ಲಲಿತಾಂಗಿಯರ (ಹೆಂಗಸರ) ಕೈಯಿಂದ ನೀಡುವ ಶುದ್ಧವಾದ ಚೊಂಬಿನ ನೀರನ್ನು, ಪ್ರೀತಿಯಿಂದ ಕುಡಿಯುತ್ತಿದ್ದರೂ, ಆ ಹೆಂಗಸರ, ಮಾವಿನ ಚಿಗುರೆಲೆಯನ್ನು ಮೀರಿಸುವ ಚೆಂದುಟಿಯ ಸವಿಯಾದ, ಮುಗುಳುನಗೆಯಲ್ಲಿ, ಆದರಿಸುತ್ತಿರುವ, ಮತ್ತು ನಿಷ್ಕಪಟ ಕಣ್ಣೊಟವು, ಜೊತೆಗೆ ಬಲಿತ ಎರಡು ಸ್ತನಗಳನ್ನು ಅಪ್ಪಿಕೊಳ್ಳುವ ಸುಖಕ್ಕೆ ಮತ್ತೆ ಮೈಸುವಾಸನೆಗೆ ಬಯಸಿ ಬಯಸಿ, ನೀರುಕುಡಿದಷ್ಟೂ ದಾರಿಗರಿಗೆ ತೃಪ್ತಿಯಾಗದು. (ಶೃಂಗಾರದಲ್ಲಿ ಹಾಸ್ಯರಸ)

(ಪದ್ಯ - ೧೦),

ಪದ್ಯ – ೧೧ ಸಂಪಾದಿಸಿ

ತಳಿರೆಡೆಯೊಳಿರ್ದ ಮಾವಿನ ತೋರ ತನಿವಣ್ಣ |
ಗಿಳಿ ಕರ್ದುಂಕಿದೊಡೆ ರಸಮೊಸರಿ ಸೋರ್ವಂತೆ ಹೆಂ |
ಗಳ ಕರತಳದ ಪೊಂಗಳಸದ ಜುಳಿಗೆಯೊಳಿಟ್ಟ ಬೆರಲಂ ತೆಗೆದು ಬಿಡಲ್ಕೆ ||
ಲಲಿತ ಚಂಪಕ ತನುಚ್ಛಾಯೆಯಿಂ ಕೆಂಪಿಡಿದ |
ಜಳಧಾರೆ ಕಂಗೊಳಿಸುತಿರ್ಪುದದ್ವಶ್ರಮಂ |
ಗಳನಾಂತು ಬಂದ ಪಥಿಕರ್ಕಳೀಂಟುವ ಸಮಯದೊಳ್ ಪ್ರಪಾಶಾಲೆಗಳೊಳು ||11||

ಪದವಿಭಾಗ-ಅರ್ಥ:
ತಳಿರೆಡೆಯೊಳಿರ್ದ:ತಳಿರ್ ಎಡೆಯೊಳಿರ್ದ =ಚಿಗುರು ಎಲೆಗಳನಡುವೆ ಇರ್ದ=ಇದ್ದ ಮಾವಿನ ತೋರ=ದಪ್ಪ ತನಿವಣ್ಣ =ಕಳಿತ ಹಣ್ಣನ್ನು

ಗಿಳಿ ಕರ್ದುಂಕಿದೊಡೆ = ಕಚ್ಚಲು, ರಸಮೊಸರಿ =ರಸವು ಒಸರಿ ಸೋರ್ವಂತೆ =ಸೋರುವಂತೆ, ಹೆಂಗಳ =ಹೆಂಗಸರ ಕರತಳದ = ಕೈಯೊಳಗಿನ ಪೊಂಗಳಸದ = ಹನ್ನಿನ ಕೊಂಬುಳ್ಳ ತಂಬಿಗೆಯಿಂದ (ಕೊಂಬಿನಗಿಂಡಿ) ಜುಳಿಗೆಯೊಳಿಟ್ಟ =ಕೊಂಬಿನ ತುದಿಯಲ್ಲಟ್ಟ ಬೆರಲಂ = ಬೆರಳನ್ನು ತೆಗೆದು ಬಿಡಲ್ಕೆ = ತೆಗೆದು ನೀರುಬಿಡಲು ಲಲಿತ ಚಂಪಕ = ಕೋಮಲ ಸಂಪಿಗೆಯ ತನುಚ್ಛಾಯೆಯಿಂ: ತನು ಛಾಯೆಯಿಂ ದೇಹ ಕಾಂತಿಯಿಂದ ಕೆಂಪಿಡಿದ ಜಳಧಾರೆ =ನೀರಿನ ಧಾರೆ ಕಂಗೊಳಿಸುತಿರ್ಪುದದ್ವಶ್ರಮಂ: ಕಂಗೊಳಿಸುತ=ನೋಡಲು ಅಂದವಾಗಿ ಇರ್ಪುದು=ಇರುವುದು, ಅದ್ವಶ್ರಮಂ- ಚಂದವಾಗಿ ಕಾಣುವುದು; ದಾರಿ ಪಯಣದ ಆಯಾಸಗಳನಾಂತು: ಆಯಾಸಗಳನು ಆಂತು= ಆಯಾಸಹೊಂದಿ ಬಂದ ಪಥಿಕರ್ಕಳೀಂಟುವ: ಪಥಿಕರ್ಗಳು ಈಂಟುವ= ದಾರಿಗರು ಕುಡಿಯುವ, ಸಮಯದೊಳ್ ಪ್ರಪಾಶಾಲೆಗಳೊಳು->ಸಮಯದಲ್ಲಿ ಅರವಂಟಿಕೆಗಳಲ್ಲಿ .

  • ತಾತ್ಪರ್ಯ : ದಾರಿ ಪಯಣದ ಆಯಾಸಹೊಂದಿ ಬಂದ ದಾರಿಗರು ಅರವಂಟಿಕೆಗಳಲ್ಲಿ, ಚಿಗುರು ಎಲೆಗಳ ನಡುವೆ ಇದ್ದ ಮಾವಿನ ದಪ್ಪ ಕಳಿತ ಹಣ್ಣನ್ನು ಗಿಳಿ ಕಚ್ಚಲು,ರಸವು ಒಸರಿ ಸೋರುವಂತೆ, ಹೆಂಗಸರ ಕೈಯೊಳಗಿನ ಹೊನ್ನಿನ ಕೊಂಬಿನ ತಂಬಿಗೆಯನ್ನು ಬಾಗಿಸಿ (ಕೊಂಬಿನಗಿಂಡಿ) ಕೊಂಬಿನ ತುದಿಯಲ್ಲಟ್ಟ ಬೆರಳನ್ನು ತೆಗೆದು ನೀರುಬಿಡಲು ಅದನ್ನು ಕುಡಿಯುವ ಸಮಯದಲ್ಲಿ (ಹೊನ್ನಿನ ಗಿಂಡಿಯ ನೀರು- ಕೋಮಲ ಸಂಪಿಗೆಯ ಕಾಂತಿಯಿಂದ ಕೆಂಪಿಡಿದ- ಕವಿ ಸಮಯ-) ನೀರಿನ ಧಾರೆ ನೋಡಲು ಚಂದವಾಗಿ ಕಾಣುವುದು;

(ಪದ್ಯ - ೧೧),

ಪದ್ಯ - ೧೨ ಸಂಪಾದಿಸಿ

ಲಲಿತ ಕರತಳದೊಳ್ ಪಿಡಿದ ಚಂದ್ರಕಾಂತಕೃತ |
ಕಲಶಮಾಸ್ಯೇಂದುಮಂಡಲರುಚಿಗೊಸರ್ವನಿ |
ರ್ಮಲ ಜಲಮಿದೆಂಭಂದಿಂದೆ ಸೊಗಯಿಸುವ ಶೀತಾಂಬುಧಾರೆಯನೀಂಟುತೆ ||
ಲಲನೆಯರ ಕೋಮಲಾವಯವ ಲಾವಣ್ಯಮಂ |
ಸಲೆಕಂಡು ಮೆಚ್ಚಿ ಮನಮುಳುಗಿದಾನಂದದಿಂ |
ತಲೆದೂಗುವರ್ ಪಥಿಕರಾನೀರ್ಗೆ ತಣಿವ ನೆವದಿಂದಮಾ ಜನಪದದೊಳು ||12|

ಪದವಿಭಾಗ-ಅರ್ಥ:
ಲಲಿತ =ಕೋಮಲ, ಕರತಳದೊಳ್=ಕೈಯಲ್ಲಿ ಪಿಡಿದ ಚಂದ್ರಕಾಂತಕೃತ = ಹಿಡಿದ ಚಂದ್ರಕಾಂತ ಶಿಲೆಯಿಂದ ಮಾಡಿದ, ಕಲಶಮಾಸ್ಯೇಂದುಮಂಡಲರುಚಿಗೊಸರ್ವನಿರ್ಮಲ -> ಕಲಶಂ =ಪಾತ್ರೆಯು, ಆಸ್ಯ = ಮುಖವೆಂಬ, ಇಂದುಮಂಡಲ = ಚಂದ್ರಮಂಡಲದ, ರುಚಿಗೆ = ಕಾಂತಿಗೆ, ಒಸರ್ವ = ಒಸರುವ, ನಿರ್ಮಲ =ಶುದ್ಧ, ಜಲಮಿದೆಂಬಂದಿಂದೆ = ಜಲಂ =ನೀರು, ಇದು ಎಂಬ ಅಂದದಿಂ = ರೀತಿಯಲ್ಲಿ, ಸೊಗಯಿಸುವ =ಸೊಗಸಾದ, ಶೀತಾಂಬುಧಾರೆಯನೀಂಟುತೆ = ಶೀತ =ತಣ್ಣನೆಯ ಅಂಬುಧಾರೆ = ನೀರಿನ ಧಾರೆಯನ್ನು ಈಂಟುತೆ = ಕುಡಿಯುತ್ತಾ, ಲಲನೆಯರ = ಯುವತಿಯರ, ಕೋಮಲಾವಯವ-> ಕೋಮಲ ಅವಯುವ =ಅವಯುವದ ಲಾವಣ್ಯಮಂ = ಸಂದರ್ಯವನ್ನು ಸಲೆಕಂಡು ಮೆಚ್ಚಿ = ನೋಡಿ ಮೆಚ್ಚಿ ಮನಮುಳುಗಿದಾನಂದದಿಂ-> ಮನಸು ಅದರಲ್ಲಿ ಮುಳುಗಿದ =ತಲ್ಲೀನವಾದ, ಆನಂದದಲ್ಲಿ ತಲೆದೂಗುವರ್ = ತಲೆದೂಗುವರು, ಪಥಿಕರಾನೀರ್ಗೆ-> ಪಥಿಕರು ಆ ನೀರ್ಗೆ ನೀರಿಗೆ ತಣಿವ ನೆವದಿಂದಮಾ = ನೆವದಿಂದಂ ಆ ಜನಪದದೊಳು = ಆ ಜನರಲ್ಲಿ. (ನೀರು ಸವಿಯಾಗಿದೆ, ಚೆನ್ನಾಗಿದೆ ಎಂದಾಗ, ಅವರ ಮನಸ್ಸು ನೀರು ಕೊಡುವವರ ಕುರಿತು ಹೊಗಳಿಕೆಯೇ ಮುಖ್ಯವಾಗಿರುತ್ತದೆ ಎಂದು ಭಾವ)
  • ತಾತ್ಪರ್ಯ : ಈ ಪ್ರಾಂತದಲ್ಲಿ, ಕೋಮಲ ಕೈಯಲ್ಲಿ ಹಿಡಿದ ಚಂದ್ರಕಾಂತ ಶಿಲೆಯಿಂದ (ಚಂದ ಮತ್ತು ತಂಪಿಗೆ ಕಲ್ಪನೆ) ಮಾಡಿದ ಪಾತ್ರೆಯು ಮುಖವೆಂಬ ಕಾಂತಿಗೆ ಒಸರುವ ಶುದ್ಧ ನೀರು, ಇದು ಎಂಬ ರೀತಿಯಲ್ಲಿ, ಸೊಗಸಾದ, ತಣ್ಣನೆಯ ನೀರಿನ ಧಾರೆಯನ್ನು ಪಥಿಕರು ಕುಡಿಯುತ್ತಾ, ಯುವತಿಯರ, ಕೋಮಲ ಅವಯುವದ ಸಂದರ್ಯವನ್ನು ನೋಡಿ ಮೆಚ್ಚಿ ಮನಸು ಅದರಲ್ಲಿ ತಲ್ಲೀನವಾದ, ಆನಂದದಲ್ಲಿ ತಲೆದೂಗುವರು. (ನೀರು ಸವಿಯಾಗಿದೆ, ಚೆನ್ನಾಗಿದೆ ಎಂದಾಗ, ಅವರ ಮನಸ್ಸು ನೀರು ಕೊಡುವವರ ಕುರಿತು ಹೊಗಳಿಕೆಯೇ ಮುಖ್ಯವಾಗಿರುತ್ತದೆ ಎಂದು ಭಾವ)

(ಪದ್ಯ - ೧೨),

ಪದ್ಯ - ೧೩ ಸಂಪಾದಿಸಿ

ಏಂ ತಾಳ್ದುದೋ ಚೆಲ್ವನೀದೇಶಮೆಂದು ನಲ |
ವಾಂತು ಮುಂದಳೆಯುತಿರೆ ಕಂಡರವರಾ ಪುರ |
ವ್ರಾಂತದೊಳ್ ಸನ್ನೆಗೈದಿನಿಯರಂ ಬರಿಸಿ ನವರತಿಕಲಾಪ್ರೌಢಿಯಿಂದೆ ||
ಸ್ವಾಂತಸುಖಮಂ ಪಡೆವ ಪೌರನಾರಿಯರ ವಿ |
ಶ್ರಾಂತಿಗಮರಿದ ರನ್ನವಾಸರೆಗಳಿಂದ ಶಶಿ |
ಕಾಂತಶಿಲೆಗಳ ಕಂದರಂಗಳಿಂದತಿಮನೋಹರಮಾದ ಗಿರಿಯೊಂದನು ||13||

ಪದವಿಭಾಗ-ಅರ್ಥ:
ಏಂ ತಾಳ್ದುದೋ ಚೆಲ್ವನೀದೇಶಮೆಂದು- ಚೆಲ್ವಂ ಈ ದೇಶಂ ಎಂದು = ಈ ದೇಶವು ಇಷ್ಟೊಂದು ಚಂದವನ್ನು ಹೇಹೆ ತಳೆಯಿತೋ ಎನ್ನುತ್ತಾ, ನಲವಾಂತು =ಸಂತೋಷದಿಂದ, ಮುಂದಳೆಯುತಿರೆ - ಮುಂದೆ ಅಳವುತಿರೆ= ಮುಂದಕ್ಕೆ ಹೋಗುತ್ತಿರಲು, ಕಂಡರವರಾ = ಕಂಡರು ಅವರು ಆ ಪುರ ವ್ರಾಂತದೊಳ್= ನಗರದ ಬಳಿಯಲ್ಲಿ, ಸನ್ನೆಗೈದಿನಿಯರಂ = ಸನ್ನೆ ಮಾಡಿ, ಇನಿಯರಂ = ಸ್ನೇಹಿರನ್ನು, ಬರಿಸಿ = ಕರೆಸಿಕೊಂಡು, ನವರತಿಕಲಾಪ್ರೌಢಿಯಿಂದೆ = ಹೊಸ ರತಿಕಲೆಯಲ್ಲಿ ಜಾಣತನದಿಂದ, ಸ್ವಾಂತಸುಖಮಂ =ತಮಗೆ ಬೇಕಾದ ಸುಖವನ್ನು, ಪಡೆವ ಪೌರನಾರಿಯರ = ನಗರದ ನಾರಿಯರನ್ನು (ಕಂಡರು). ವಿಶ್ರಾಂತಿಗಮರಿದ = ವಿಶ್ರಾಂತಿಗೆ ಅನುಕೂಲವಾದ, ರನ್ನವಾಸರೆಗಳಿಂದ = ರತ್ನಮಯವಾದ ಕಲ್ಲು ಮಂಚಗಳಿಂದ, ಶಶಿಕಾಂತಶಿಲೆಗಳ ಕಂದರಂಗಳಿಂದ =ತಂಪು ಕಲ್ಲಿನ ಗುಹೆಗಳಿಂದ- ಕೂಡಿದ, ಅತಿಮನೋಹರಮಾದ ಗಿರಿಯೊಂದನು = ಅತಿಮನೋಹರವಾದ ಬೆಟ್ಟವೊಂದನ್ನು ಕಂಡರು.
  • ತಾತ್ಪರ್ಯ : ಈ ಭದ್ರಾವತಿ ದೇಶವು ಇಷ್ಟೊಂದು ಚಂದವನ್ನು ಹೇಗೆ ತಳೆಯಿತೋ ಎನ್ನುತ್ತಾ, ಸಂತೋಷದಿಂದ, ಮುಂದೆ ಮುಂದಕ್ಕೆ ಹೋಗುತ್ತಿರಲು, ಅವರು ಆ ನಗರದ ಬಳಿಯಲ್ಲಿ,ಸನ್ನೆ ಮಾಡಿ ಸ್ನೇಹಿರನ್ನು ಕರೆಸಿಕೊಂಡು, ಹೊಸಬಗೆಯ ರತಿಕಲೆಯ ವಿದ್ಯೆಯಿಂದ ತಮಗೆ ಬೇಕಾದ ಸುಖವನ್ನು ಪಡೆವ ನಗರದ ನಾರಿಯರನ್ನು (ಕಂಡರು). ನಂತರ ವಿಶ್ರಾಂತಿಗೆ ಅನುಕೂಲವಾದ, ರತ್ನಮಯವಾದ ಕಲ್ಲು ಮಂಚಗಳಿಂದ, ತಂಪು ಕಲ್ಲಿನ ಗುಹೆಗಳಿಂದ ಕೂಡಿದ, ಅತಿಮನೋಹರವಾದ ಬೆಟ್ಟವೊಂದನ್ನು ಕಂಡರು.

(ಪದ್ಯ - ೧೩),

ಪದ್ಯ - ೧೪ ಸಂಪಾದಿಸಿ

ಆ ಗಿರಿಯ ಮಸ್ತಕವನಡರಲ್ಕದರ ಪೂರ್ವ |
ಭಾಗದೊಳ್ ಮೆರೆವ ಭದ್ರಾವತಿಯ ಸಿರಿಗೆ ತಲೆ |
ದೂಗುತ ವೃಕೋದರಂ ನುಡಿದೆನೆಲೆ ವೃಷಕೇತು ನೋಡಿದೈ ಕೌತುಕವನು ||
ಈಗಳೀ ನಗರಂ ಮಹೀಲಲನೆಗಾಸ್ಯಾಬ್ದ |
ಮಾಗಿರ್ಪುದೆತ್ತಲುಂ ಗಗನದೆಡೆಗೇಳ್ವ ಬಹು |
ಯಾಗಧೂಮಂಗೆಳೆಂಬಾಲೋಲನೀಲಾಳಕಾವಳಿಯ ಚೆಲ್ವಿನಿಂದೆ ||14||

ಪದವಿಭಾಗ-ಅರ್ಥ:
ಆ ಗಿರಿಯ ಮಸ್ತಕವನಡರಲ್ಕದರ-:ಈ ಗಿರಿಯ =ಆ ಬೆಟ್ಟದ ಮಸ್ತಕವನು = ಶಿಖರವನ್ನು ಅಡರಲ್ಕೆ = ಹತ್ತಲು, ಅದರ ಪೂರ್ವಭಾಗದೊಳ್ =ಪೂರ್ವಭಾಗದಲ್ಲಿ ಮೆರೆವ =ಇರುವ ಭದ್ರಾವತಿಯ ಸಿರಿಗೆ = ಸಂಪತ್ತಿಗೆ ತಲೆದೂಗುತ = ಮೆಚ್ಚುತ್ತಾ ವೃಕೋದರಂ = ಭೀಮನು, ನುಡಿದೆನೆಲೆ ವೃಷಕೇತು ನೋಡಿದೈ ಕೌತುಕವನು = ನುಡಿದೆನು ಎಲೆ ವೃಷಕೇತು ನೋಡಿದೆಯಾ ಕೌತುಕವನು = ವಿಶೇಷವನ್ನು, ಈಗಳೀ = ಈಗ ಈ ನಗರಂ =ನಗರವು, ಮಹೀಲಲನೆಗಾಸ್ಯಾಬ್ದ ಮಾಗಿರ್ಪುದು ಮಹೀ ಲಲನೆಗೆ = ಭೂದೇವಿಗೆ ಅಸ್ಯಾಬ್ಜ = ಮುಖಕಮಲ ವಾಗಿರುವುದು. ಹೇಗೆಂದರೆ, ಎತ್ತಲುಂ ಗಗನದೆಡೆಗೇಳ್ವ = ಎಲ್ಲಾ ಕಡೆ ಆಕಾಶದ ಕಡೆಗೆ ಏಳುತ್ತಿರುವ, ಬಹುಯಾಗಧೂಮಂಗೆಳೆಂಬ = ಅನೇಕ ಯಾಗದ ಹೊಗೆ, ಆಲೋಲ=ಚಲಿಸುತ್ತರುವ, ನೀಲ = ಕಪ್ಪಾದ ಅಳಕಾವಳಿಯ = ಮಂಗುಳಿನಂತೆ ಕಾಣುವ, ಚೆಲ್ವಿನಿಂದೆ ಸೌಂದರ್ಯದಿಂದ ಕೂಡಿದೆ.
  • ತಾತ್ಪರ್ಯ : ಅವರು, ಆ ಬೆಟ್ಟದ ಶಿಖರವನ್ನು ಹತ್ತಲು, ಅದರ ಪೂರ್ವಭಾಗದಲ್ಲಿ ಇರುವ ಭದ್ರಾವತಿಯ ಸಂಪತ್ತಿಗೆ ಮೆಚ್ಚುತ್ತಾ ಭೀಮನು, ನುಡಿದೆನು ಎಲೆ ವೃಷಕೇತು ನೋಡಿದೆಯಾ ವಿಶೇಷವನ್ನು, ಈಗ ಈ ನಗರವು, ಭೂದೇವಿಗೆ ಮುಖಕಮಲವಾಗಿರುವುದು. ಹೇಗೆಂದರೆ, ಎಲ್ಲಾ ಕಡೆ ಆಕಾಶದ ಕಡೆಗೆ ಏಳುತ್ತಿರುವ, ಅನೇಕ ಯಾಗದ ಚಲಿಸುತ್ತರುವ ಹೊಗೆಗಳು ಭೂದೇವಿಯ ಕಪ್ಪಾದ ಮಂಗುಳಿನಂತೆ ಕಾಣುತ್ತಿದ್ದು ಸೌಂದರ್ಯದಿಂದ ಕೂಡಿದೆ.

(ಪದ್ಯ - ೧೪),

ಪದ್ಯ - ೧೫ ಸಂಪಾದಿಸಿ

ಎನಿಸು ಜನಮಿರ್ದೊಡಂ ತ್ರಿದಶಜನಕಾವಾಸ |
ಮೆನಿಪುದಮರಾವತೀ ಪತ್ತನಂ ಮೂಜಗದೊ |
ಳೆನಿಸು ಜಸವಡೆದೊಡಂ ಗುಹ್ಯಕಾಸ್ಪದಮೆನಿಪುದಳಕಾಪುರಂ ತಿಳಿವೊಡೆ ||
ಎನಿಸುಜನಮಿರಲೆನಿಸು ಜಸವಡೆಯಲದರಿಂದೆ |
ತನಗಿನಿಸು ಕುಂದಿಲ್ಲಮೆಂಬ ಪೆಂಪಿಂದ ಪುರ |
ವನಿತೆ ಗಹಗಹಿಸಿ ನಗುವಂತೆಸೆವ ಸೌಧಂಗಳ ಮರೀಚಿ (ಮರೀಚಿ)ನೋಡೆಂದನು ||15||

ಪದವಿಭಾಗ-ಅರ್ಥ:
ಎನಿಸು = ಎಷ್ಟು ಜನಮಿರ್ದೊಡಂ-ಜನಂ ಇರ್ದೊಡಂ =ಜನವಿದ್ದರೂ ತ್ರಿದಶಜನಕಾವಾಸ- ತ್ರಿದಶಜನಕೆ = ಮೂವತ್ತು ಮಂದಿಗೆ (ದೇವತೆಗಳಿಗೆ), ಆವಾಸ ಎನಿಪುದು ಅಮರಾವತೀ ಪತ್ತನಂ ಎನಿಸು ಜಸವಡೆದೊಡಂ ಮೂಜಗದೊಳು= ಮೂರು ಲೋಕದಲ್ಲಿ ಎಷ್ಟೇ ಪ್ರಸಿದ್ಧಪಡೆದರೂ ಮೂವತ್ತು ಮಂದಿಗೆ (ದೇವತೆಗಳಿಗೆ ಮಾತ್ರಾ ವಾಸಕ್ಕೆ ಅವಕಾಶವಿದೆ ಅಮರಾವತಿ ಪಟ್ಟಣದಲ್ಲಿ; ಮೂರು ಲೋಕದಲ್ಲಿ ಎಷ್ಟೇ ಪ್ರಸಿದ್ಧಪಡೆದರೂ ಗುಹ್ಯಕಾಸ್ಪದಮೆನಿಪುದಳಕಾಪುರಂ ತಿಳಿವೊಡೆ - ಗುಹ್ಯಕೆ ಆಸ್ಪದಂ ಎನಿಪುದು ಅಳಕಾಪುರಂ = ಅಳಕಾಪುರವು ಲೋಕದಲ್ಲಿ ಎಷ್ಟೇ ಪ್ರಸಿದ್ಧಪಡೆದರೂ ಅದು ಗುಹ್ಯಕೆ = ನಿಂದೆಗೆ ಯಕ್ಷಲೋಕ ಎಂದು ನಿಂದೆಗೆ ಒಳಗಾಗಿದೆ; ಎನಿಸುಜನಮಿರಲ್ = ಎಷ್ಟೇಜನರಿದ್ದರೂ,ತನಗೆ ಅನಿಸು ಜಸವಡೆಯಲದರಿಂದೆ ಅ ತನಗಿನಿಸು ಕುಂದಿಲ್ಲಮೆಂಬ ಪೆಂಪಿಂದ = ತನಗೆ ಅಷ್ಟು ಯಶ ಪಡೆಯಲು ಆಗದಿದ್ದರೂ, ತನಗೆ ಇನಿಸು ಸ್ವಲ್ಪಯೂ ಕುಂದು ಇಲ್ಲ, ಎಂಬ ಪೆಂಪಿಂದ = ಘನತೆಯಿಂದ ಪುರವನಿತೆ ಭದ್ರಾವತಿನಗರವೆಂಬ ವನಿತೆಯು, ಗಹಗಹಿಸಿ ನಗುವಂತೆಸೆವ = ನಗುವಂತೆ ಎಸವ = ಕಾಣುವ, ಸೌಧಂಗಳ =ದೊಡ್ಡ ಉಪ್ಪರಿಗೆ ಮನೆಗಳ ಮರೀಚಿ =ಕಾಂತಿಯನ್ನು ನೋಡೆಂದನು.
  • ತಾತ್ಪರ್ಯ : ಎಷ್ಟು ಜನವಿದ್ದರೂ, ಮೂರು ಲೋಕದಲ್ಲಿ ಎಷ್ಟೇ ಪ್ರಸಿದ್ಧಪಡೆದರೂ ಮೂವತ್ತು ಮಂದಿಗ ದೇವತೆಗಳಿಗೆ ಮಾತ್ರಾ ವಾಸಕ್ಕೆ ಅವಕಾಶವಿದೆ ಅಮರಾವತಿ ಪಟ್ಟಣದಲ್ಲಿ; ಕುಬೇರನ ಪಟ್ಟಣ ಅಳಕಾಪುರವು ಮೂರು ಲೋಕದಲ್ಲಿ ಎಷ್ಟೇ ಪ್ರಸಿದ್ಧಪಡೆದರೂ ಅದು ಯಕ್ಷಲೋಕ ಎಂದು ನಿಂದೆಗೆ ಒಳಗಾಗಿದೆ; ತನಗೆ ಅಷ್ಟು ಯಶ ಪಡೆಯಲು ಆಗದಿದ್ದರೂ, ಸ್ವಲ್ಪಯೂ ಕುಂದು ಇಲ್ಲ, ಎಂಬ ಘನತೆಯಿಂದ ಭದ್ರಾವತೀ ಎಂಬ ಪುರವನಿತೆಯು, ಗಹಗಹಿಸಿ ನಗುವಂತೆ ಕಾಣುವ, ದೊಡ್ಡ ಉಪ್ಪರಿಗೆ ಮನೆಗಳ ಕಾಂತಿಯನ್ನು ನೋಡೆಂದು ಭೀಮನು ವೃಷಕೇತುವಿಗೆ ಹೇಳಿದನು.

(ಪದ್ಯ - ೧೫),

ಪದ್ಯ - ೧೬ ಸಂಪಾದಿಸಿ

ಶ್ವೇತಾದ್ರಿಶಿಖರದೊಳ್ ಕಂಗೊಳಿಸುವುಜ್ಜ್ವಲ |
ಜ್ಯೋತಿರ್ಲತೆಯೊ ಮೇಣು ಸಲ್ಲಲಿತ ಶುಭ್ರ ಜೀ !
ಮೂತದೊಡ್ಡಿನಮೇಲೆ ಪೊಳೆವ ಸೌದಾಮಿನಿಯೊ ಶಿವನ ಮಸ್ತಕದೊಳೆಸೆವ ||
ಶೀತಾಂಶುರೇಖೆಯೋ ಬಗೆವೊಡೀನಗರದ ವಿ |
ನೂತನ ಪ್ರಾಸಾದದಗ್ರದೊಳ್ ಸುಳಿವಂಬು |
ಜಾತನಯನೆಯರ ತನುವಲ್ಲರಿಯ ಕಾಂತಿಯೋ ಕರ್ಣಸುತ ನೋಡೆಂದನು ||16||

ಪದವಿಭಾಗ-ಅರ್ಥ:
ಶ್ವೇತಾದ್ರಿಶಿಖರದೊಳ್ = ಕೈಲಾಸ ಪರ್ತದ ಶೀಖರದಲ್ಲಿ ಕಂಗೊಳಿಸುವ, ವುಜ್ಜ್ವಲ = ಕಾಂತಿಯುತ ಜ್ಯೋತಿರ್ಲತೆಯೊ =ದೀಪದ ಬಳ್ಳಿಯೋ ಮೇಣು = ಮತ್ತೂ, ಸಲ್ಲಲಿತ = ಲಲಿತವಾದ, ಶುಭ್ರ ಜೀಮೂತದೊಡ್ಡಿನಮೇಲೆ-> ಜೀಮೂತದ = ಮೋಡದ ,ಒಡ್ಡಿನ ಮೇಲೆ, ಪೊಳೆವ =ಹೋಳೆಯುವ ಸೌದಾಮಿನಿಯೊ = ಮಿಂಚೋ, ಶಿವನ ಮಸ್ತಕದೊಳೆಸೆವ = ಶಿವನ ತಲೆಯಲ್ಲರುವ

ಶೀತಾಂಶುರೇಖೆಯೋ = ಚಂದ್ರನ ರೇಖೆಯೋ, ಬಗೆವೊಡೀನಗರದ =ಬಗೆವೊಡೆ = ಯೋಚಿಸಿದರೆ, ಈ ನಗರದ, ವಿನೂತನ = ಹೊಸಬಗೆಯ, ಪ್ರಾಸಾದದಗ್ರದೊಳ್ - ಪ್ರಸಾದದ =ಉಪ್ಪರಿಗೆಯ ಅಗ್ರದಲ್ಲಿ = ಸುಳಿವ =ಓಡಾಡುವ ಅಂಬುಜಾತ ನಯನೆಯರ = ಕಮಲದಂತೆ ಕಣ್ಣುಳ್ಳವರ ತನುವಲ್ಲರಿಯ = ದೇಹವೆಂಬ ಬಳ್ಳಿಯ ಕಾಂತಿಯೋ ಕರ್ಣಸುತ ನೋಡೆಂದನು ಭೀಮ.

  • ತಾತ್ಪರ್ಯ :ಈ ನಗರದ ಕಾಂತಿಯು, ಕೈಲಾಸ ಪರ್ತದ ಶೀಖರದಲ್ಲಿ ಕಂಗೊಳಿಸುವ, ಕಾಂತಿಯುತ ಜ್ಯೋತಿರ್ಲತೆಯೊ ಎಂದರೆ ದೀಪದ ಬಳ್ಳಿಯೋ ಅಥವಾ ಲಲಿತವಾದ, ಶುಭ್ರ ಮೋಡದ ಒಡ್ಡಿನ ಮೇಲೆ, ಹೋಳೆಯುವ ಮಿಂಚೋ, ಶಿವನ ತಲೆಯಲ್ಲರುವ ಚಂದ್ರನ ರೇಖೆಯೋ, ಯೋಚಿಸಿದರೆ, ಈ ನಗರದ, ಹೊಸಬಗೆಯ, ಉಪ್ಪರಿಗೆಯ ಮೇಲೆ ಓಡಾಡುವ ಕಮಲದಂತೆ ಕಣ್ಣುಳ್ಳ ವನಿತಯರ ದೇಹವೆಂಬ ಬಳ್ಳಿಯ ಕಾಂತಿಯೋ ಕರ್ಣಸುತ ನೋಡೆಂದನು ಭೀಮ.

(ಪದ್ಯ - ೧೬),

ಪದ್ಯ - ೧೭ ಸಂಪಾದಿಸಿ

ನಳನಳಿಪ ತರುಣತೆಯ ಸೊಂಪುವೆತ್ತರುಣತೆಯ |
ತಳಿರಿಡಿದ ತೋರಣದ ಚೆಲ್ವನಾಂತೋರಣದ |
ತೊಳಪ ಕಳಸದ ಗುಡಿಯ ಸಾಲ್ದಳೆದ ಕನ್ನಡಿಯ ಸೆಳೆಯ ಸೀಗುರಿ ಚಮರಿಯ||
ಚಲಿತ ಲೀಲಾಸ್ಯದ ಪತಾಕೆಗಳ ಲಾಸ್ಯದ ಪ |
ವಳದ ಮುತ್ತುಗಳ ಗೊಂಚಲ್ಗಳೊತ್ತುಗಳ ಗೊಂ |
ದಳದ ಬಗೆ ಕಂಗಳಿಂಬಿಗೆ ಕೌತುಂಕಂಗಳಿಂ ಬೀದಿಗಳೊಳೆಸೆದಿರ್ಪುವು ||17|||

ಪದವಿಭಾಗ-ಅರ್ಥ:
ನಳನಳಿಪ = ಥಳಥಳಿಸುವ, ತರುಣತೆಯ = ತಾರುಣ್ಯದ, ಸೊಂಪುವೆತ್ತ =ಸೊದಸಾದ ಅರುಣತೆಯ= ಕೆಂಪುಬಣ್ಣದ, ತಳಿರಿಡಿದ =ಹಸಿರಿನ ತೋರಣದ, ಚೆಲ್ವನಾಂತೋರಣದ ತೊಳಪ = ಹೋಳೆಯುವ, ಕಳಸದ = ಶೃಂಗದ ಗುಡಿಯ, ಸಾಲ್ದಳೆದ ಕನ್ನಡಿಯ = ಸಾಲು ಕನ್ನಡಿಯ, ಸೆಳೆಯ ಸೀಗುರಿ ಚಮರಿಯ = ಬೀಸುವಾಗ ಬಳುಕುವ ಚಾಮರದ, ಚಲಿತ ಲೀಲಾಸ್ಯದ ಪತಾಕೆಗಳ = ಹಾರುವಾಗ ಲಾಲಿತ್ಯದಿಂದ ಕುಣಿಯುತ್ತಿರುವ ಪತಾಕೆ ಅಥವಾ ಬಾವುಟಗಳ, ಲಾಸ್ಯದ ಪವಳದ ಮುತ್ತುಗಳ ಗೊಂಚಲ್ಗಳೊತ್ತುಗಳ = ತೂಗಾಡುತ್ತಿರುವ ಹವಳ ಮುತ್ತುಗಳ ಒತ್ತಾಗಿರುವ ಅನೇಕ ಗೊಂಚಲುಗಳ, ಗೊಂದಳದ ಬಗೆಗಳು = ಇವುಗಳೊಡನೆ ಜನರ ಸಮೂಹದ ರೀತಿ-ನಡೆನುಡಿಗಳು, ಕಂಗಳಿಂಬಿಗೆ = ಕಣ್ಣಿನ ಸವಿನೋಟಕ್ಕೆ, ಕೌತುಂಕಂಗಳಿಂ =ಆಶ್ಚರ್ಯಗಳಿಸುವಂತೆ, ಬೀದಿಗಳೊಳೆಸೆದಿರ್ಪುವು = ಆ ನಗರದ ಬೀದಿಗಳು ಕಂಗೊಳಿಸುತ್ತಿದ್ದವು. (ಅತಿಶಯೋಕ್ತಿ - ಉತ್ಪ್ರೇಕ್ಷಾಲಂಕಾರ)
  • ತಾತ್ಪರ್ಯ :ಥಳಥಳಿಸುವ ತಾರುಣ್ಯದ ಸೊದಸಾದ ಕೆಂಪುಬಣ್ಣದ, ಹಸಿರಿನ ತೋರಣದ, ಹೋಳೆಯುವ ಶೃಂಗದ ಗುಡಿಯ, ಸಾಲು ಕನ್ನಡಿಯ, ಬೀಸುವಾಗ ಬಳುಕುವ ಚಾಮರದ, ಹಾರುವಾಗ ಲಾಲಿತ್ಯದಿಂದ ಕುಣಿಯುತ್ತಿರುವ ಪತಾಕೆ ಅಥವಾ ಬಾವುಟಗಳ, ತೂಗಾಡುತ್ತಿರುವ ಹವಳ ಮುತ್ತುಗಳ ಒತ್ತಾಗಿರುವ ಅನೇಕ ಗೊಂಚಲುಗಳ, ಇವುಗಳೊಡನೆ ಜನರ ಸಮೂಹದ ರೀತಿ-ನೀತಿ ನಡೆನುಡಿಗಳು, ಕಣ್ಣಿನ ಸವಿನೋಟಕ್ಕೆ, ಆಶ್ಚರ್ಯಗಳಿಸುವಂತೆಆ ನಗರದ ಬೀದಿಗಳು ಕಂಗೊಳಿಸುತ್ತಿದ್ದವು. (ಅತಿಶಯೋಕ್ತಿ - ಉತ್ಪ್ರೇಕ್ಷಾಲಂಕಾರ)

(ಪದ್ಯ - ೧೬),

ಪದ್ಯ - ೧೮ ಸಂಪಾದಿಸಿ

ಒತ್ತರಿಸಿದುನ್ನತ ಪ್ರಾಸಾದದಬಲೆಯರ
ವೃತ್ತವದನೇಂದು ಮಂದಸ್ಮೇರಚಂದ್ರಿಕೆಯೊ
ಳುತ್ತುಂಗ ದೇವಾಲಯದ ಗೋಪುರದ ಮಾಣಿಕದ ಕಲಶದೆಳಿವಿಸಿಲೊಳು ||
ಕತ್ತಲೆ ಪರಿವುದಲ್ಲದೀ ನಗರದೊಳ್ ಬೇರೆ |
ಮತ್ತೆ ಸೋಮಾದಿತ್ಯ ಕಿರಣಂಗಳೈದುವೊಡೆ |
ಸುತ್ತಲುಂಮುಗಿಲ ಮುಟ್ಟಿದ ಕೋಟೆಗಳ ವಳಯವಣುಗ ನೋಡಚ್ಚರಿಯನು ||18||

ಪದವಿಭಾಗ-ಅರ್ಥ:
ಒತ್ತರಿಸಿದುನ್ನತ = ಒತ್ತೊತ್ತಾಗಿರುವ ಉನ್ನತ = ಎತ್ತರದ, ಪ್ರಾಸಾದದಬಲೆಯರ- ಮಹಡಿ ಮನೆಗಳಲ್ಲಿರುವ ಸ್ತ್ರೀಯರ, ವೃತ್ತವದನೇಂದು-ವೃತ್ತ ವದನ ಇಂದುಮಂದಸ್ಮೇರ ಚಂದ್ರಿಕೆಯೊಳುತ್ತುಂಗ-. ಮಂದಸ್ಮೇರ ಚಂದ್ರಿಯೊಳು, ಉತ್ತಂಗ =ದುಂಡಾದ ಮುಖದ ಚಂದ್ರಕಾಂತಿಯಲ್ಲಿ, ಉತ್ತಂಗ ದೇವಾಲಯದ ಗೋಪುರದ ಮಾಣಿಕದ ಕಲಶದೆಳಿವಿಸಿಲೊಳು = ಎತ್ತರದ ದೇವಾಲಯದ ಗೋಪುರದಲ್ಲಿರುವ ಮಾಣಿಕ್ಯ ಕಳಶದ ಎಳೆ-ಬಿಸಿಲಿನಲ್ಲಿ (ಮಾಣಿಕ್ಯದ ಬೆಳಕಿನಲ್ಲಿ) ಕತ್ತಲೆ ಪರಿವುದಲ್ಲದೀ ನಗರದೊಳ್ = ಕತ್ತಲೆಯು, ಪರಿವುದು = ಹರಿವುದು, ಹೊರಟುಹೋಗುವುದು, ಅಲ್ಲದೆ ಈ, ಬೇರೆ ಮತ್ತೆ ಸೋಮಾದಿತ್ಯ =ಚಂದ್ರಸೂರ್ಯರ ಕಿರಣಂಗಳೈದುವೊಡೆ ಕಿರಣಗಳೂ (ಈ ನಗರದ ಮೇಲೆ) ಐದುವರೆ = ಬಂದರೆ - ಬಿದ್ದರೆ, ಸುತ್ತಲುಂ ಮುಗಿಲ ಮುಟ್ಟಿದ ಕೋಟೆಗಳ ವಳಯವಣುಗ-> ವಳಯವು =ಮಂಡಲವು (ಕಾಣುವುದು ನೋಡು) ಅಣುಗ = ಮಗನೇ ವೃಷಕೇತುವೇ, ನೋಡಚ್ಚರಿಯನು - ನೊಡು ಅಚ್ಚರಿಯನು = ನೋಡು ಆಶ್ಚರ್ಯವನ್ನು.
  • ತಾತ್ಪರ್ಯ :ಒತ್ತೊತ್ತಾಗಿರುವ ಎತ್ತರದ, ಮಹಡಿ ಮನೆಗಳಲ್ಲಿರುವ ಸ್ತ್ರೀಯರ, ದುಂಡಾದ ಮುಖದ ಚಂದ್ರಕಾಂತಿಯಲ್ಲಿ, ಎತ್ತರದ ದೇವಾಲಯದ ಗೋಪುರದಲ್ಲಿರುವ ಮಾಣಿಕ್ಯ ಕಳಶದ ಎಳೆ-ಬಿಸಿಲಿನಲ್ಲಿ (ಮಾಣಿಕ್ಯದ ಬೆಳಕಿನಲ್ಲಿ) ಕತ್ತಲೆಯು ಹೊರಟುಹೋಗುವುದು, ಅಲ್ಲದೆ ಬೇರೆ ಮತ್ತೆ ಚಂದ್ರಸೂರ್ಯರ (ಈ ನಗರದ ಮೇಲೆ)ಬಿದ್ದರೆ, ಸುತ್ತಲೂ ಮುಗಿಲ ಮುಟ್ಟಿದ ಕೋಟೆಗಳ ಮಂಡಲವು ಕಾಣುವುದು ನೋಡು, ಮಗನೇ ವೃಷಕೇತುವೇ,ಈ ಆಶ್ಚರ್ಯವನ್ನು ನೊಡು.

(ಪದ್ಯ - ೧೮),

ಪದ್ಯ - ೧೯ ಸಂಪಾದಿಸಿ

ಕುಸಿದು ಪಾತಾಳದೊಳಗಿರ್ದು ಪಲಕಾಲಮಂ |
ದ್ವಿಸಹಸ್ರ ನಯನಂಗಳಿಂದೆ ನೋಡಿದೊಡೆ ಕಾ |
ಣಿಸಿ ಕೊಳ್ಳದೀ ಪುರದಗಳ ಘಾತಮಿದನಜಂ ಬಲ್ಲನೋ ಕೇಳ್ವೆನೆಂದು ||
ಬಿಸಜಸಂಭವನ ಪೊರೆಗೆಂದಿಳೆಯನುಗಿದುಚ್ಚ |
ಳಿಸಿ ಬಳೆದ ಫಣಿಪತಿಯ ಮಣಿವಡೆಯ ಸಾಲಿವೆನ |
ಲೆಸವುವಾಗಸದೊಳೀ ಪೊಳಲ ಕೋಟೆಯ ರನ್ನದೆನೆಗಳೆಲ್ಲಾ ದೆಸೆಯೊಳು ||19||

ಪದವಿಭಾಗ-ಅರ್ಥ:
ಕುಸಿದು ಪಾತಾಳದೊಳಗಿರ್ದು ಪಲಕಾಲಮಂ-:ಕುಸಿದು ಪಾತಾಳದೊಳಗೆ ಇರ್ದು ಪಲಕಾಲಮಂ = ಈ ನಗರವು ಅಕಸ್ಮಾತ್ ಕೆಲಕಾಲ ಕುಸಿದು ಪಾತಾಳಕ್ಕೆ ಹೋದರೆ ಅಲ್ಲಿ ಆದಿಶೇಷನು ತನ್ನ, ದ್ವಿಸಹಸ್ರ ನಯನಂಗಳಿಂದೆ ನೋಡಿದೊಡೆ ಕಾಣಿಸಿ ಕೊಳ್ಳದೀ ಪುರದಗಳ ಘಾತಂ = ಎರಡುಸಾವಿರ ಕಣ್ಣುಗಳಿಂದ ನೋಡಿದರೂ ಈ ನಗರದ ಉದ್ದ ಅಗಲ ಎಷ್ಟೆಂದು ಕಾಣದು, ಇದನಜಂ ಬಲ್ಲನೋ ಕೇಳ್ವೆನೆಂದು = ಇದರ ಉದ್ದ ಅಗಲಗಳನ್ನು ಅಜನು/ ಬ್ರಹ್ಮನು ಬಲ್ಲನೋ ಅವನನ್ನು ಕೇಳುವೆನು ಎಂದು, ಬಿಸಜಸಂಭವನ ಪೊರೆಗೆಂದಿಳೆಯನುಗಿದುಚ್ಚಳಿಸಿ-: ಬಿಸಜ ಸಂಭವನ= ಕಮಲದಲ್ಲಿ ಹುಟ್ಟಿದ ಬ್ರಹ್ಮನ ಪೊರೆಗೆಂದು =ಬಳಿಗೆಂದು, ಇಳೆಯನು= ಭೂಮಿಯನ್ನು ಉಗಿದು =ಸೀಳಿಕೊಂಡು,ಉಚ್ಚಳಿಸಿ = ಮೇಲೆಬಂದು, ಬಳೆದ = ಹಡೆಬಿಚ್ಚಿ ಬೆಳದ, ಫಣಿಪತಿಯ = ಆದಿಶೇಷನ ಮಣಿವಡೆಯ = ಹೆಡಯ ಮಣಿಗಳ, ಸಾಲು ಇವು ಎನಲು = ಇವು ಮಣಿಗಳ ಸಾಲು ಎನ್ನುವಂತೆ, ಎಸವುವಾಗಸದೊಳೀ-: ಎಸೆವುದು ಆಗಸದೊಳು ಈ ಪೊಳಲ = ಈ ನಗರದ ಕೋಟೆಯ ರನ್ನದೆನೆಗಳೆಲ್ಲಾ= ರನ್ನದ ತೆನೆಗಳು ಎಲ್ಲಾ ದೆಸೆಯೊಳು= ದಿಕ್ಕಿನಲ್ಲಿ ಎಸೆವುದು =ಕಾಣುವುದು..
  • ತಾತ್ಪರ್ಯ : ಈ ನಗರವು ಅಕಸ್ಮಾತ್ ಕೆಲಕಾಲ ಕುಸಿದು ಪಾತಾಳಕ್ಕೆ ಹೋದರೆ ಅಲ್ಲಿ ಆದಿಶೇಷನು ತನ್ನ, ಎರಡುಸಾವಿರ ಕಣ್ಣುಗಳಿಂದ ನೋಡಿದರೂ ಈ ನಗರದ ಉದ್ದ ಅಗಲ ಎಷ್ಟೆಂದು ಕಾಣದು. ಇದರ ಉದ್ದ ಅಗಲಗಳನ್ನು ಅಜನು/ ಬ್ರಹ್ಮನು ಬಲ್ಲನೋ ಅವನನ್ನು ಕೇಳುವೆನು ಎಂದು, ಕಮಲದಲ್ಲಿ ಹುಟ್ಟಿದ ಬ್ರಹ್ಮನ ಬಳಿಗೆಂದು ಬರಲು, ಭೂಮಿಯನ್ನು ಸೀಳಿಕೊಂಡು,ಮೇಲೆ ಬಂದು, ಹಡೆಬಿಚ್ಚಿ ಬೆಳದ, ಆದಿಶೇಷನ ಹೆಡಯ ಮಣಿಗಳ ಸಾಲು ಇವು ಎನ್ನುವಂತೆ, ಈ ನಗರದ ಕೋಟೆಯ ರತ್ನದ ತೆನೆಗಳು ಎಲ್ಲಾ ದಿಕ್ಕಿನಲ್ಲಿ ಕಾಣುವುದು. (ಉತ್ಪ್ರೇಕ್ಷೆ)

(ಪದ್ಯ - ೧೯),

ಪದ್ಯ - ೨೦ ಸಂಪಾದಿಸಿ

ವಾಯುವಾಶಂ ಪರಿಯೆ ಧರೆಗುರುಳ್ದವೆವಿದಕು |
ಪಾಯಮಿನ್ನೇನೆಂದು ನವರತ್ನ ಖಚಿತ ಕಮ |
ನೀಯ ಕಾಂಚನಮಯೋನ್ನತ ದೃಢಪ್ರಾಕಾರದೊತ್ತುಗೊಂಡಲ್ಲಲ್ಲಿಗೆ |
ದಾಯ ಮಿಗೆ ನಿಲಿಸಿದರೊ ಖೇಚರರ್ ತಮ್ಮ ಶೋ |
ಭಾಯಮಾನಾಲಯಂಗಳನೆನಲ್ ಕಣ್ಗೆ ರಮ |
ಣೀಯಮಾಗಿವೆ ಕರ್ಣತನಯ ನೋಡೀಪುರದ ಮುಗಿಲಟ್ಟಳೆಯ ಸಾಲ್ಗಳು ||20||

ಪದವಿಭಾಗ-ಅರ್ಥ:
ವಾಯುವಾಶಂ = ಆಧಾರವಾದ ವಾಯವಿನ ಹಗ್ಗದ ಆಧಾರವು, ಪರಿಯೆ =ಹರಿದರೆ, ಧರೆಗುರುಳ್ದವೆವಿದಕೆ = ಧರೆಗೆ= ಭೂಮಿಗೆ, ಉರಿಳ್ದಪೆವು =ಬೀಳುವೆವು ಇದಕೆ = ಇದಕ್ಕೆ, ಉಪಾಯಮಿನ್ನೇನೆಂದು-ಉಪಾಯಂ ಎನ್ನು ಏನೆಂದು = ಪಾರಾಗಲು ಉಪಾಯವು ಏನೆಂದು, ನವರತ್ನ ಖಚಿತ ಕಮನೀಯ = ಸುಂದರ, ಕಾಂಚನಮಯೋನ್ನತ-ಕಾಂಚನಮಯ ಉನ್ನತ =ಬಂಗಾರದ ಉನ್ನತ = ಉದ್ದವಾದ, ದೃಢಪ್ರಾಕಾರದೊತ್ತುಗೊಂಡಲ್ಲಲ್ಲಿಗೆ-> ಧೃಡ ಪ್ರಾಕಾರ =ಗಟ್ಟಿ ಆವರಣದ, ಒತ್ತುಗೊಂಡು = ಸೇರಿಕೊಂಡಿರುವ, ಅಲ್ಲಲ್ಲಿಗೆ = ಆಯಾಯಾ ಸ್ಥಳಕ್ಕೆ, ದಾಯ ಮಿಗೆ = ದಾಯಕ್ಕೆ ಸರಿಯಾಗಿ, ನಿಲಿಸಿದರೊ =ನಿಲ್ಲಿಸಿರುವರೋ, ಖೇಚರರ್ = (ಆಕಾಶಗಾಮಿಗಳು) ದೇವತೆಗಳು, ತಮ್ಮ ಶೋಭಾಯಮಾನಾಲಯಂಗಳನೆನಲ್ = ಶೋಭಾಯಮಾನ = ಪ್ರಕಾಶಿಸುವ ಆಲಯಂಗಳನು = ಅರಮನೆಗಳನ್ನು, ಎನಲ್ =ಎನ್ನುವಂತೆ; ಕಣ್ಗೆ ರಮಣೀಯಮಾಗಿವೆ = ಕಣ್ನಿಗೆ ರಮಣೀಯವಾಗಿವೆ, ಕರ್ಣತನಯ ವೃಷಕೇತುವೇ, ನೋಡೀಪುರದ ಮುಗಿಲಟ್ಟಳೆಯ ಸಾಲ್ಗಳು-> ನೋಡು ಈ ಪುರದ ಮುಗಿಲಟ್ಟಳೆಯ = ಮುಗಿಲು ಮುಟ್ಟುವ ಮಹಡಿಗಳ ಸಾಲುಗಳನ್ನು ' ಎಂದನು ಭೀಮ.
  • ತಾತ್ಪರ್ಯ : ಖೇಚರರಾದ ದೇವತೆಗಳು,ತಮ್ಮ ಅರಮನೆಗಳಿಗೆ ಆಧಾರವಾದ ವಾಯವಿನಹಗ್ಗವು, ಹರಿದರೆ, ತಾವು ಭೂಮಿಗೆ ಬೀಳುವೆವು, ಪಾರಾಗಲು ಇದಕ್ಕೆ ಉಪಾಯವು ಏನೆಂದು, ಆವರು, ಸುಂದರ, ಕಾಂಚನಮಯ ಬಂಗಾರದ ಉದ್ದವಾದ, ಗಟ್ಟಿ ಆವರಣದ, ಸೇರಿಕೊಂಡಿರುವಂತೆ ಆಯಾಯಾ ಸ್ಥಳಕ್ಕೆ ದಾಯಕ್ಕೆ ಸರಿಯಾಗಿ, ಅರಮನೆಗಳನ್ನು, ನಿಲ್ಲಿಸಿರುವರೋ ಎನ್ನುವಂತೆ ತೋರುವ, ಈ ಪುರದ ಮುಗಿಲು ಮುಟ್ಟುವ ಮಹಡಿಗಳ ಸಾಲುಗಳನ್ನು, ಕರ್ಣತನಯ ವೃಷಕೇತುವೇ, ನೋಡು, ಕಣ್ನಿಗೆ ರಮಣೀಯವಾಗಿವೆ',ಎಂದನು ಭೀಮ. (ಖೇಚರರು = ಆಕಾಶಗಾಮಿಗಳು)

(ಪದ್ಯ - ೨೦),

ಪದ್ಯ - ೨೧ ಸಂಪಾದಿಸಿ

ಮೇಲೆ ನಿಚ್ಚಂ ಪರಿವ ದಿನಮಣಿಯ ಮಣಿರಥದ |
ಗಾಲಿಗಳ ನೇಮಿಗಳ ಪೊಯ್ಲಿಂದ ಪುಡಿವಡೆದ |
ಸಾಲ ಹೊಂಗೋಟೆದೆನೆಗೊನೆಗಳಿಂದೇಳ್ವ ಧೂಳಲ್ಲಿಗಲ್ಲಿಗೆ ನಭದೊಳು |
ಸ್ಥೂಲದಂಡಾಕೃತಿಯನಾಂತಪೋಲ್ ಪ್ರಾಕಾರ |
ಜಾಲಮಂ ಮೀರ್ವ ಹೇಮದ ಡೆಂಕಣಿಯ ಕೈಗ |
ಳಾಲಿಗಚ್ಚರಿಯೆನಿಸಿ ತೋರುತಿವೆ ತನಯ ನೋಡೀ ನಗರದೆಣ್ದೆಸೆಯೊಳು ||21||

ಪದವಿಭಾಗ-ಅರ್ಥ:
ಮೇಲೆ = ಆಕಾಶದಲ್ಲಿ, ನಿಚ್ಚಂ = ನಿತ್ಯವೂ, ಪರಿವ = ಸಂಚರಿಸುವ, ದಿನಮಣಿಯ ಮಣಿರಥದ =ಸೂರ್ಯನ ಮಣಿರಥದ ಗಾಲಿಗಳ ನೇಮಿಗಳ = ಪಟ್ಟಿಗಳ, ಪೊಯ್ಲಿಂದ ಪುಡಿವಡೆದ = ರಭಸದ ಶಬ್ದದಿಂದ ಪುಡಿಪುಡಿಯಾದ, ಸಾಲ ಹೊಂಗೋಟೆದೆನೆಗೊನೆಗಳಿಂದೇಳ್ವ ಧೂಳಲ್ಲಿಗಲ್ಲಿಗೆ ನಭದೊಳು-> ಸಾಲ ಹೊಂಗೋಟೆದೆನೆಗೊನೆ =ಚಿನ್ನದ ತೆನೆಯ ಗೊಂಚಲಕೊನೆಯಿಂದ ಏಳ್ವ= ಏಳುವ, ಧೂಳಲ್ಲಿಗಲ್ಲಿಗೆ ನಭದೊಳು =ಧೂಳು ಅಯಾಯಾ ಪ್ರದೇಶಕ್ಕೆ, ಆಕಾಶದಲ್ಲಿ, ಸ್ಥೂಲದಂಡಾಕೃತಿಯನಾಂತಪೋಲ್- ಸ್ಥೂಲ =ದಪ್ಪ, ದಂಡಾಕೃತಿಯನಾಂತ = ದೊಣ್ಣೆಯ ರೂಪವನ್ನು ಪಡೆದಂತಿರುವಂತಿರುವ (ನೇರವಾಗಿ ನಿಂತಂತಿರುವ), ಪ್ರಾಕಾರಜಾಲಮಂ = ಗೋಡೆಗಳ ಸಾಲುಗಳನ್ನು, ಮೀರ್ವ ಹೇಮದ ಡೆಂಕಣಿಯಕೈಗಳು= ಕೋಟೆಯ ಬುರುಜುಗಳು, ಆಲಿಗಚ್ಚರಿಯೆನಿಸಿ-> ಆಲಿಗೆ = ಕಣ್ಣಿಗೆ ಅಚ್ಚರಿಎನಿಸಿ ತೋರುತಿವೆ ತನಯ =ಮಗನೇ, ನೋಡೀ-. ನೋಡು ಈ ನಗರದೆಣ್ದೆಸೆಯೊಳು- ಈನಗರದ ಎಣ್ದೆಸೆಯಲು= ಎಂಟುದಿಕ್ಕಿನಲ್ಲಿ.
  • ತಾತ್ಪರ್ಯ : ಆಕಾಶದಲ್ಲಿ ಸಂಚರಿಸುವ ಸೂರ್ಯನ ಮಣಿರಥದ ಗಾಲಿಗಳ ಪಟ್ಟಿಗಳ ರಭಸದ ಶಬ್ದದಿಂದ ಪುಡಿಪುಡಿಯಾದ, ಚಿನ್ನದ ತೆನೆಯ ಗೊಂಚಲಕೊನೆಯಿಂದ ಏಳುವ ಧೂಳು ಅಯಾಯಾ ಪ್ರದೇಶಕ್ಕೆ, ಈ ನಗರದ ಎಂಟುದಿಕ್ಕಿನಲ್ಲಿ ಆಕಾಶದಲ್ಲಿ ದಪ್ಪ, ದೊಣ್ಣೆಯ ರೂಪವನ್ನು ಪಡೆದಂತಿರುವಂತಿರುವ (ನೇರವಾಗಿ ನಿಂತಂತಿರುವ), ಗೋಡೆಗಳ ಸಾಲುಗಳನ್ನು ಕೋಟೆಯ ಬುರುಜುಗಳು, ಕಣ್ಣಿಗೆ ಅಚ್ಚರಿ ಎನಿಸಿ ತೋರುತಿವೆ ಮಗನೇ,ವೃಷಕೇತು ನೋಡು ಎಂದನು ಭೀಮ.

(ಪದ್ಯ - ೨೧),

ಪದ್ಯ - ೨೨ ಸಂಪಾದಿಸಿ

ಈ ನಗರವಧು ತನ್ನಡೆಯೊಳಾವಗಂ ಬಾಳ್ವ |
ಮಾನಿಸಗೆಯ್ದೆ ಸೌಖ್ಯಂ ಪೆಚ್ರ್ಚಲೆಂದೊಮ್ಮೆ
ತಾನಿಷ್ಟದೇವತೆಯ ಬೇಡಿಕೊಳುತಿರ್ದೊಡಾ ಪರಕೆ ಕೈಗೂಡಲೊಡನೆ ||
ಸಾನುರಾಗದೊಳುಟ್ಟ ಪಸುರುಡಿಗೆಯೆನೆ ಧರಾ |
ಮಾನಿನಿಯ ಮೊಗದಾವರೆಯ ಮುಸುಕಿಕೊಂಡಿಹ ನ |
ವೀನಪತ್ರಾವಳಿಗಳೆನೆ ನಗರಮಂ ಬಳಸಿದುಪವನಂಗಳ್ ಮೆರೆವುವು ||22||

ಪದವಿಭಾಗ-ಅರ್ಥ:
ಈ ನಗರವಧು (ಈ ನಗರವೇ ಒಂದು ವಧು ಎಂಬ ಭಾವ) ತನ್ನಡೆಯೊಳಾವಗಂ ಬಾಳ್ವ = ತನ್ನ ಎಡೆಯಲ್ಲ = ತನ್ನೊಳಗೆ ಬಾಳುವ, ಮಾನಿಸಗೆ = ಮಾನವರಿಗೆ, ಐಯ್ದೆ = ಆಗಲು = ಸೌಖ್ಯಂ ಪೆಚ್ರ್ಚಲೆಂದೊಮ್ಮೆ-: ಪೆರ್ಚಲೆಂದು ಒಮ್ಮೆ ಹೆಚ್ಚಾಗಲಿ ಎಂದು ಒಮ್ಮೆ, ತಾನಿಷ್ಟದೇವತೆಯ ಬೇಡಿಕೊಳುತಿರ್ದೊಡಾ = ತನ್ನ ಇಷ್ಟದೇವತೆಯನ್ನು ಬೇಡಿಕೊಳ್ಳುತ್ತಿರಲು, ಆ ಪರಕೆ ಕೈಗೂಡಲೊಡನೆ = ಆ ಹರಕೆ /ಪ್ರಾರ್ಥನೆ ಕೈಗೂಡಲು, ಒಡನೆ = ಕೂಡಲೆ, ಸಾನುರಾಗದೊಳುಟ್ಟ = ಆ ಸಂತೋಷದಲ್ಲಿ ಉಟ್ಟ ಪಸುರುಡಿಗೆಯೆನೆ = ಹಸಿರು ಉಡುಗೆ ಎಂಬಂತೆ, ಧರಾ ಮಾನಿನಿಯ = ಭೂಮಿಯ ಮೊಗದಾವರೆಯ ಮುಸುಕಿಕೊಂಡಿಹ = ಮುಖಕಮಲವನ್ನು ಆವರಿಸಿದ, ನವೀನಪತ್ರಾವಳಿಗಳೆನೆ =ಹೊಸ ಹಸಿರೆಲೆಯ ತೋರಣವೆಂಬಂತೆ, ನಗರಮಂ = ನಗರವನ್ನು, ಬಳಸಿದುಪವನಂಗಳ್ ಮೆರೆವುವು = ಸುತ್ತುವರಿದ ಹಸಿರು ಉಪವನಗಳು ಕಂಗೊಳಿಸುತ್ತಿವೆ.
  • ತಾತ್ಪರ್ಯ : ಭೀಮನು ನಗರವನ್ನು ಸುತ್ತುವರಿದ ಉಪವನಗಳನ್ನು, ನಗರವಧು ತೊಟ್ಟ ಹಸಿರು ಸೀರೆಗೆ ಹೋಲಿಸುತ್ತಾ ಹೀಗ ಹೇಳಿದನು, 'ಈ ನಗರವಧು (ಈ ನಗರವೇ ಒಂದು ವಧು ಎಂಬ ಭಾವ) ತನ್ನೊಳಗೆ ಬಾಳುವ, ಮಾನವರಿಗೆ, ಸೌಖ್ಯವು ಹೆಚ್ಚಾಗಲಿ ಎಂದು ಒಮ್ಮೆ, ತನ್ನ ಇಷ್ಟದೇವತೆಯನ್ನು ಬೇಡಿಕೊಳ್ಳುತ್ತಿರಲು, ಆ ಹರಕೆ /ಪ್ರಾರ್ಥನೆ ಕೈಗೂಡಲು, ಕೂಡಲೆ, ಆ ಸಂತೋಷದಲ್ಲಿ ಉಟ್ಟ ಹಸಿರು ಉಡುಗೆಯೋ ಎಂಬಂತೆ, ಮತ್ತು ಭೂಮಿಯ ಮುಖಕಮಲವನ್ನು ಆವರಿಸಿದ, ಹೊಸ ಹಸಿರೆಲೆಯ ತೋರಣವೆಂಬಂತೆ, ನಗರವನ್ನು, ಸುತ್ತುವರಿದ ಹಸಿರು ಉಪವನಗಳು ಕಂಗೊಳಿಸುತ್ತಿವೆ'.

(ಪದ್ಯ - ೨೨),

ಪದ್ಯ - ೨೩ ಸಂಪಾದಿಸಿ

ಆವಗಂ ಪುಷ್ಟಿಣಿಯರಾಗಿರ್ಪರಿಲ್ಲಿಯ ಲ |
ತಾವಧುಗಳೀವರ ಸೋಂಕಲೆ ಬಾರದೆಂದು ರಆ |
ಜೀವಮಿತ್ರಂ ತನ್ನ ನಿರ್ಮಲ ಕರಂಗಳಂ ಪೆರದೆಗೆದನೆಂಬಂತಿರೆ ||
ಆವೆಡೆಯೊಳಂ ಛಿದ್ರಮಿಲ್ಲೆನಿಸಿ ವಿವಿಧದ್ರು |
ಮಾವಳಿಯ ನಿಬಿಡಪತ್ರಚ್ಛಾಯೆಗಳ ಸೊಂಪು |
ದೀವಿದಾರಾಮಂಗಳೆಂದುಮೀ ಪುರಜನರ್ಗೇಂ ವಿಲಾಸವನೀವುವೋ ||23||

ಪದವಿಭಾಗ-ಅರ್ಥ:
ಆವಗಂ = ಯಾವಾಗಲೂ, ಪುಷ್ಟಿಣಿಯರಾಗಿರ್ಪರಿಲ್ಲಿಯ ಲತಾವಧುಗಳೀವರ-: ಲತಾವಧುಗಳು = ಬಳ್ಳಿಗಳು ಎಂಬ ಹೆಣ್ಣುಮಕ್ಕಳು, ಹೂವುಬಿಟ್ಟುಕೊಂಡು (ಯಾವಾಗಲೂ) ಪುಷ್ಪಿಣಿಯರು ಆಗಿರುವರು (ಪುಷ್ಪವತಿ ಎಂದರೆ ರಜಸ್ವಲೆ ಅಥವಾ ಮುಟ್ಟಾಗಿರುವವರು,- ಮೈಲಿಗೆಯವರು), ಆದ್ಧರಿಂದ, ಸೋಂಕಲೆ ಬಾರದೆಂದು = ಈ ಲತಾವಧುಗಳನ್ನು ಸೋಂಕಲೇಬಾರದು = ಮುಟ್ಟಬಾರದು ಎಂದು ರಾಜೀವಮಿತ್ರಂ = ಸೂರ್ಯನು,ತನ್ನ ನಿರ್ಮಲ ಕರಂಗಳಂ = ತನ್ನ ಶುದ್ಧವಾದ ಕಿರಣಗಳೆಂಬ ಕರ =ಕೈಗಳನ್ನು ಪೆರದೆಗೆದನೆಂಬಂತಿರೆ = ಹೊರಕ್ಕೆ ಚಾಚಿಕೊಂಡಿದ್ದಾನೆ ಎನ್ನುವಂತೆ, ಆವೆಡೆಯೊಳಂ ಛಿದ್ರಮಿಲ್ಲೆನಿಸಿ = ಎಲ್ಲಿಯೂ,ವನಗಳಲ್ಲಿ ಸೂರ್ಯಕಿರಣ ಬೀಳಲು ಛಿದ್ರ= ಸಂದು ರಂದ್ರ) ಇಲ್ಲವು. ಹಾಗೆ, ವಿವಿಧದ್ರುಮರಗಳಮಾವಳಿಯ ನಿಬಿಡಪತ್ರಚ್ಛಾಯೆಗಳ ಸೊಂಪು = ನಾನಾ ಬಗೆಯ ಮರಗಳ ದಟ್ಟ ಎಲೆಗಳ ನೆರಳಿನ ಹಿತ ವಾತಾವರಣದ

ದೀವಿದಾರಾಮಂಗಳೆಂದುಮೀ =ಉದ್ಯಾನವನಗಳು ಈ ಪುರಜನರ್ಗೇಂ =ನಗರದ ಜನರಿಗೆ, ವಿಲಾಸವನೀವುವೋ = ಆಹ್ಲಾದವನ್ನು ನೀಡುವುವೋ ಎಂದು ಭೀಮ ಉದ್ಗಾರ ಮಾಡಿದನು.

  • ತಾತ್ಪರ್ಯ : ಯಾವಾಗಲೂ, ಇಲ್ಲಿಯ ಬಳ್ಳಿಗಳು ಎಂಬ ಹೆಣ್ಣುಮಕ್ಕಳು, ಹೂವುಬಿಟ್ಟುಕೊಂಡು (ಯಾವಾಗಲೂ) ಪುಷ್ಪಿಣಿಯರು ಆಗಿರುವರು (ಪುಷ್ಪವತಿ ಎಂದರೆ ರಜಸ್ವಲೆ ಅಥವಾ ಮುಟ್ಟಾಗಿರುವವರು,- ಮೈಲಿಗೆಯವರು), ಆದ್ಧರಿಂದ, ಈ ಲತಾವಧುಗಳನ್ನು ಮುಟ್ಟಬಾರದು ಎಂದು, ಸೂರ್ಯನು ತನ್ನ ನಿರ್ಮಲ ತನ್ನ ಶುದ್ಧವಾದ ಕಿರಣಗಳೆಂಬ ಕೈಗಳನ್ನು ಲತಾವಧುಗಳನ್ನು ಮುಟ್ಟದೆ ಹೊರಕ್ಕೆ ಚಾಚಿಕೊಂಡಿದ್ದಾನೆ ಎನ್ನುವಂತೆ, ಎಲ್ಲಿಯೂ,ವನಗಳಲ್ಲಿ ಸೂರ್ಯಕಿರಣ ಬೀಳಲು ಸಂದು (ರಂದ್ರ) ಇಲ್ಲದ ಹಾಗೆ, ನಾನಾ ಬಗೆಯ ಮರಗಳ ದಟ್ಟ ಎಲೆಗಳ ನೆರಳಿನ ಹಿತ ವಾತಾವರಣದ ಉದ್ಯಾನವನಗಳು ಈ ನಗರದ ಜನರಿಗೆ, ಎಷ್ಟೊಂದು ಆಹ್ಲಾದವನ್ನು ನೀಡುವುವೋ ಎಂದು ಭೀಮನು ಉದ್ಗಾರ ಮಾಡಿದನು.

(ಪದ್ಯ - ೨೩),

ಪದ್ಯ - ೨೪ ಸಂಪಾದಿಸಿ

ನಿಚ್ಚಳದೊಳೆಸೆವ ತಿಳಿಗೊಳನ ಕಲಕಾಡಿ ಬಿರಿ |
ದಚ್ಚಲರ ಧೂಳಿಗಳ ಚೆಲ್ಲಾಡಿ ಸಲೆ ಮದಂ |
ವೆಚ್ಚೆತರುಲತೆಯನಣಿದಾಡಿ ಮರಿದುಂಬಿಗಳ ಕೂಡಿಕೊಂಡೀಬನದೊಳು ||
ನಿಚ್ಚಮಲೆವೆಲರೆಂಬ ಸೊಕ್ಕಾನೆ ತಾನೆ ತ |
ನ್ನಿಚ್ಚೆಯಿಂ ತಿರುಗುತಿದೆ ತೊಲತೊಲಗಿ ವಿರಹಿಗಳ್ |
ಬೆಚ್ಚರಗೊಳೆಂದೆತ್ತಲುಂ ಪುಯ್ಯಲಿಡುವಂತೆ ಕೂಗುತಿವೆ ಕೋಗಿಲೆಗಳು ||24||

ಪದವಿಭಾಗ-ಅರ್ಥ:
ನಿಚ್ಚಳದೊಳೆಸೆವ ತಿಳಿಗೊಳನ-: ನಿಚ್ಚದೊಳು =ಸ್ವಚ್ಛತೆಯಿಂದ, ಎಸೆವ = ಕಾಣುವ, ತಿಳಿಕೊಳನ = ತಿಳಿನೀರಿನ ಕೊಳವನ್ನು, ಕಲಕಾಡಿ =ಕದಡಿ, ಬಿರಿದಚ್ಚಲರ = ಅರಳಿದ ಹೂವುಗಳ, ಧೂಳಿಗಳ ಚೆಲ್ಲಾಡಿ =ಮಕರಂದಗಳನ್ನು ಹರಡಿ, ಸಲೆ=ತುಂಬಾ, ಮದಂವೆಚ್ಚೆತರುಲತೆಯನಣಿದಾಡಿ-:ಮದಂ ವೆಚ್ಚೆ=ಹೆಚ್ಚಲು, ತರುಲತೆಯನು =ಮರ ಬಳ್ಳಿಗಳನ್ನು, ಮರಿದುಂಬಿಗಳ ಕೂಡಿಕೊಂಡು ಈ ಬನದೊಳು = ಈ ಅರಣ್ಯದಲ್ಲಿ, ನಿಚ್ಚಮಲೆವೆಲರೆಂಬ ಸೊಕ್ಕಾನೆ-: ನಿಚ್ಚಂ = ಸದಾ ಎಲೆವೆಲರೆಂಬ = ಮಂದಮಾರುತವೆಂಬ, ಸೊಕ್ಕಾನೆ =ಸೊಕ್ಕಿದ ಆನೆಯು, ತಾನೆ ತನ್ನಿಚ್ಚೆಯಿಂ ತಿರುಗುತಿದೆ = ಮನಸ್ಸಿಗೆಬಂದಂತೆ ಸುತ್ತಾಡುತ್ತಿದೆ; ಅದು ತೊಲತೊಲಗಿ ವಿರಹಿಗಳ್ = ವಿರಹಿಗಳು ಸರಿಯಿರಿ ಸರಿಯಿರಿ, ಬೆಚ್ಚರಗೊಳೆಂದೆತ್ತಲುಂ-> ಬೆಚ್ಚರಗೊಳು ಎಂದು ಎತ್ತಲುಂ =ಎಚ್ಚರಿಕೆಯಿಂದ ಎಂದು ಎಲ್ಲಾಕಡೆಯೂ, ಪುಯ್ಯಲಿಡುವಂತೆ = (ಹೊಯಿಲು) ಹೊಯ್ಯಲಿಡುವಂತೆ ಕೂಗುತಿವೆ ಕೋಗಿಲೆಗಳು-> ಕೋಗಿಲೆಗಳು ಕೂಗುತ್ತಿವೆ
  • ತಾತ್ಪರ್ಯ :ಭೀಮನು ಮಂದುವರಿದು ಬೀಸುವ ತಂಗಾಳಿಯನ್ನೂ ಕೋಗಿಲೆಯ ಇಂಚರವನ್ನೂ ವರ್ಣಿಸುತ್ತಾನೆ; ಸ್ವಚ್ಛವಾಗಿ ಕಾಣುವ ತಿಳಿನೀರಿನ ಕೊಳವನ್ನು ಕದಡಿ, ಅರಳಿದ ಹೂವುಗಳ ಧೂಳಿಗಳನ್ನು ಮಕರಂದಗಳನ್ನು ಹರಡಿ,ತುಂಬಾ, ಮದಂ ಹೆಚ್ಚಲು ಮರ ಬಳ್ಳಿಗಳನ್ನು, ಮರಿದುಂಬಿಗಳನ್ನು ಕೂಡಿಕೊಂಡು ಈ ಅರಣ್ಯದಲ್ಲಿ, ಮಂದಮಾರುತವೆಂಬ ಸೊಕ್ಕಿದ ಆನೆಯು ಸದಾ ತಾನೆ ಮನಸ್ಸಿಗೆಬಂದಂತೆ ಬೀಸುತ್ತಿದೆ; ಕೋಗಿಲೆಗಳು ವಿರಹಿಗಳು ಎಚ್ಚರಿಕೆಯಿಂದ ಸರಿಯಿರಿ ಸರಿಯಿರಿ, ಎಂದು (ಹೊಯಿಲು) ಹೊಯ್ಯಲಿಡುವಂತೆ ಎಲ್ಲಾ ಕಡೆಯೂ,ಕೂಗುತ್ತಿವೆ. ( ಆನೆಯ ಮದೋದಕಕ್ಕೆ ತುಂಬಿಗಳು ಮುತ್ತುವುವು ಎಂಬ ನಂಬುಗೆ ಇದೆ).

(ಪದ್ಯ - ೨೪),

ಪದ್ಯ - ೨೫ ಸಂಪಾದಿಸಿ

ಮಿಗೆಮುತ್ತಿ ಮೊರೆವ ತುಂಬಿಗಳ ತಿಂತಿಣಿಯನೇ |
ಮುಗಿಲೆಂದು ಸುಳಿವ ಗಾಳಿಗೆ ಬಿಡದೆ ನರ್ತಿಪಲ |
ತೆಗಳ ಕುಡಿಗೋನರ ನುಣ್ಬೊಗರನೇ ಮಿಂಚೆಂದು ಸೊಗಯಿಸುವ ಪೂಗಳಿಂದೆ ||
ಉಗುವ ಮಕರಂದ ಬಿಂದುಗಳನೇ ಮಳೆಗಳೆಂ |
ದೊಗೆದಸಂತಸದೊಳಾವಗಮೆಯ್ದೆ ಕುಣಿವ ಸೋ |
ಗೆಗಳ ಬಳಗಂಗಳಂ ಮಗನೆ ಕಂಡೈ ತಳಿತ ನಗರೋಪವನದೆಡೆಯೊಳು ||25||

ಪದವಿಭಾಗ-ಅರ್ಥ:
ಮಿಗೆ = ಹೆಚ್ಚಾಗಿ ಮುತ್ತಿ = ಮುತ್ತಿಕೊಂಡು, ಮೊರೆವ =ಶಬ್ದಮಾಡುವ, ತುಂಬಿಗಳ ತಿಂತಿಣಿಯನೇ=ದೊಡ್ಡ ಗಂಪನ್ನು ಮುಗಿಲೆಂದು (ತಿಳಿದು) ಸುಳಿವ ಗಾಳಿಗೆ ಬಿಡದೆ = ಒಂದೇಸಮ, ನರ್ತಿಪಲತೆಗಳ ಕುಡಿಗೋನರ ನುಣ್ಬೊಗರನೇ-> ಒಂದೇಸಮ, ಕುಣಿಯುತ್ತಿರುವ ಲತೆಗಳ ಕುಡಿಯ ತುದಿಯನ್ನು ಮಿಂಚೆಂದು ಸೊಗಯಿಸುವ ಪೂಗಳಿಂದೆ= ಹೂವುಗಳಿಂದ, ಉಗುವ=ಹೊರಡುವ ಮಕರಂದ ಬಿಂದುಗಳನೇ= ಮಕರಂದ ರಸದ ಹನಿಯನ್ನು ಮಳೆಗಳೆಂದೊಗೆದು= ಮಳೆ ಎಂದು ಭಾವಿಸಿ, ಸಂತಸದೊಳಾವಗಮೆಯ್ದೆ = ಸಂತಸದೊಳು ಆವಗಂ = ಆಗ / ಯಾವಾಗಲೂ ಕುಣಿವ ಸೋಗೆಗಳ= ನವಿಲುಗಳ, ಬಳಗಂಗಳಂ = ಗುಂಪನ್ನು, ಮಗನೆ ಕಂಡೈ = ನೋಡಿದೆಯಾ? ತಳಿತ= ಚಿಗುರಿದ, ನಗರೋಪವನದೆಡೆಯೊಳು-> ನಗರದ ಉಪವನದೊಳು.
  • ತಾತ್ಪರ್ಯ : ಅತಿಯಾಗಿ ಮುತ್ತಿಕೊಂಡು,ಶಬ್ದಮಾಡುವ, ತುಂಬಿಗಳ ದೊಡ್ಡ ಗಂಪನ್ನು ಮುಗಿಲೆಂದು (ತಿಳಿದು) ಒಂದೇಸಮ, ಕುಣಿಯುತ್ತಿರುವ ಲತೆಗಳ ಕುಡಿಯ ತುದಿಯನ್ನು ಮಿಂಚೆಂದು, ಹೂವುಗಳಿಂದ, ಹೊರಡುವ ಮಕರಂದ ಮಕರಂದ ರಸದ ಹನಿಯನ್ನು ಮಳೆ ಎಂದು ಭಾವಿಸಿ, ಸಂತಸದೊಳು ಯಾವಾಗಲೂ ಕುಣಿವ ನವಿಲುಗಳ, ಗುಂಪನ್ನು, ಚಿಗುರಿದ, ನಗರದ ಈ ಉಪವನದಲ್ಲಿ, ಮಗನೆ ನೋಡಿದೆಯಾ? ಎಂದನು ಭೀಮ.

(ಪದ್ಯ - ೨೫),

ಪದ್ಯ - ೨೬ ಸಂಪಾದಿಸಿ

ಪೂಗಳ ಪರಾಗಮೊಕ್ಕಿರ್ದಿಳೆಯ ಮೇಲೆ ಹಂ |
ಸೀಗಣಂ ನಡೆಯಲದರಡಿವಜ್ಜೆ ಪತ್ತಿ ಸಾ |
ಲಾಗಿರಲ್ಕೀ ಬನವ ವಿರಹಿಗಳ್ ಪುಗದಂತೆ ಮನ್ಮಥಂ ಬರೆದಿರಿಸಿದ ||
ನಾಗರದ ಯಂತ್ರದಕ್ಕರಗಳೆಂಬಂದದಿಂ |
ದಾಗೆ ತಮಗಿರುಳಹ ವಿಯೋಗಮಂ ನೆನೆದಂಜಿ |
ಬೇಗದಿಂ ತೊಡೆವಂತೆ ಪೊರಳ್ದು ರತಿಗೈವ ಕೋಕಂಗಳಂ ನೋಡೆಂದನು ||26||

ಪದವಿಭಾಗ-ಅರ್ಥ:
ಪೂಗಳ= ಹೂಗಳ, ಪರಾಗಮೊಕ್ಕಿರ್ದಿಳೆಯ-:ಪರಾಗಂ ಒಕ್ಕಿರ್ದ(ಚೆಲ್ಲಿದ) ಇಳೆ =ಪರಾಗ ಹೆಚ್ಚಾಗಿಬಿದ್ದ ನೆಲದ ಮೇಲೆ ಹಂಸೀಗಣಂ = ಹಂಸದ ಗುಂಪು, ನಡೆಯಲದರಡಿವಜ್ಜೆ-: ನಡೆಯಲು ಅದರ ಅಡಿವಜ್ಜೆ=ಪಾದದ ಪತ್ತಿ=ಗುರುತು ಹತ್ತಿ ಅದು, ಸಾಲಾಗಿರಲ್ಕೀ-: ಸಾಲಾಗಿ ಇರಲು, ಈ ಬನವ = ಕಾಡನ್ನು, ವಿರಹಿಗಳ್ ಪುಗದಂತೆ= ವರಹಿಗಳು ಒಳಬರದಂತೆ, ಮನ್ಮಥಂ ಬರೆದಿರಿಸಿದ= ಮನ್ಮಥನು ಬರೆದು ಇಟ್ಟ ನಾಗರದ ಯಂತ್ರದಕ್ಕರಗಳೆಂಬಂದದಿಂದಾಗೆ= ನಾಗಯಂತ್ರ ಅಕ್ಷರದಂತೆ, ತಮಗಿರುಳಹ-:ತಮಗೆ ಇರುಳಹ = ರಾತ್ರಿ ಆಗುವ, ವಿಯೋಗಮಂ ನೆನೆದಂಜಿ= ತಮಗೆ, ಆಗಬಹುದಾದ ಅಗಲಿಕೆಯನ್ನ ನೆನೆದುಕೊಂಡು ಹೆದರಿ, ಬೇಗದಿಂ= ಬೇಗ ತೊಡೆವಂತೆ= ಆ ಲಿಪಿಯನ್ನು ಅಳಿಸುವಹಾಗೆ, ಪೊರಳ್ದು ರತಿಗೈವ= ಹೊರಳಿ ರತಿಕ್ರೀದೆಮಾಡುವ, ಕೋಕಂಗಳಂ= ಚಕ್ರವಾಕ ಪಕ್ಷಿಗಳನ್ನು ನೋಡೆಂದನು, ಭೀಮ.
  • ತಾತ್ಪರ್ಯ : ಹೂಗಳ ಪರಾಗ ಹೆಚ್ಚಾಗಿಬಿದ್ದ ನೆಲದ ಮೇಲೆ ಹಂಸದ ಗುಂಪು ನಡೆಯಲು ಅದರ ಪಾದದ ಗುರುತು ಹತ್ತಿ ಅದು, ಸಾಲಾಗಿ ಇರಲು, ಈ ಕಾಡನ್ನು, ವಿರಹಿಗಳು ಒಳಬರದಂತೆ, ಮನ್ಮಥನು ಬರೆದು ಇಟ್ಟ ನಾಗಯಂತ್ರ ಅಕ್ಷರದಂತೆ ಕಂಡು, ತಮಗೆ ರಾತ್ರಿ ಆಗಬಹುದಾದ ಅಗಲಿಕೆಯನ್ನ ನೆನೆದುಕೊಂಡು ಹೆದರಿ, ಆ ಲಿಪಿಯನ್ನು ಅಳಿಸುವಹಾಗೆ, ಹೊರಳಿ ರತಿಕ್ರೀಡೆಮಾಡುವ,ಚಕ್ರವಾಕ ಪಕ್ಷಿಗಳನ್ನು ನೋಡೆಂದನು, ಭೀಮ.

(ಪದ್ಯ - ೨೬),

ಪದ್ಯ - ೨೭ ಸಂಪಾದಿಸಿ

ನಸುಗಾಳಿ ಸಂಧಿಸೆ ಕೆದರ್ದ ಪೊಂಬಾಳೆಗಳ |
ಕುಸುರಿಗಳ್ ತಳಿವಕ್ಷತೆಗಳಮಲಮಂಜರಿಯ |
ಕುಸುಮಂಗಳಾಂತ ಪುಷ್ಟಾಂಜಲಿಗಳೊಂದಿ ಕಿಕ್ಕಿರಿದ ಪೆರ್ಗೊನೆಗಳಿಂದೆ ||
ಎಸೆವ ಚೆಂದೆಂಗಾಯ್ಗಳೊಂದೊಂದನೊಡೆಯುತ್ತ |
ಲೊಸರಿ ಸೋರ್ವೆಳನೀರ್ಗಳಘ್ರ್ಯಂಗಳಾಗೆ ರಂ |
ಜಿಸುವ ಬನದೇವಿ ಭೂದೇವತೆಯನರ್ಚಿಪವೊಲಿದೆ ಕುವರ ನೋಡೆಂದನು ||27||

ಪದವಿಭಾಗ-ಅರ್ಥ:
ನಸುಗಾಳಿ ಸಂಧಿಸೆ ಕೆದರ್ದ ಪೊಂಬಾಳೆಗಳ = ತಂಗಾಳಿ ಬೀಸಲು ಕೆದರಿದ=ಬಿಚ್ಚದ ಹೊಂಬಾಳೆಗಳ (ಅಡಿಕೆಯ/ ತೆಂಗಿನ ಹೂವಿನಗೊನೆಗೆ ಮುಚ್ಚಿದ ಹಳದಿ ಬಣ್ಣದ ಹೊದಿಕೆ), ಕುಸುರಿಗಳ್ = ಕಸುಮದಕಾಳುಗಳು, ತಳಿವಕ್ಷತೆಗಳ = ಹಾಕುವ ಅಕ್ಷತೆಗಳ, ಅಮಲಮಂಜರಿಯ = ಪರಿಶುದ್ಧ ಗೊಂಚಲ, ಕುಸುಮಂಗಳಾಂತ =ಹೂವಿನ ಕುಸುಮಗಳನ್ನು ಹೊಂದಿದ, ಪುಷ್ಟಾಂಜಲಿಗಳೊಂದಿ= ಕೈಯಲ್ಲಿಹಿಡಿದ ಹೂವುಗಳ ಹಾಗೆ, ಕಿಕ್ಕಿರಿದ ಪೆರ್ಗೊನೆಗಳಿಂದೆ= ಒತ್ತೊತ್ತಾಗಿ ಇರುವ ದೊಡ್ಡ ಕೊನೆಗಳಿಂದ, ಎಸೆವ= ಕಾಣುವ, ಚೆಂದೆಂಗಾಯ್ಗಳೊಂದೊಂದನೊಡೆಯುತ್ತಲೊಸರಿ-: ಚಂದಕಾಯ್ಗಳು = ಸುಂದರ ತೆಂಗಿನಕಾಯಿಗಳು ಒಡೆಯುತ್ತ, ಒಸರುವ, ಸೋರ್ವೆಳನೀರ್ಗಳಘ್ರ್ಯಂಗಳಾಗೆ= ಸೋರುವ ಎಳೆನೀರು ಅರ್ಘ್ಯದಂತೆ, ರಂಜಿಸುವ = ಚಂದ ಕಾಣುವ, ಬನದೇವಿ= ವನದೇವಿಯು, ಭೂದೇವತೆಯನರ್ಚಿಪವೊಲಿದೆ ಕುವರ ನೋಡೆಂದನು= ಭೂದೇವಿಯನ್ನ ಅರ್ಚಿಸುವ ರೀತಿಯಲ್ಲಿದೆ, ನೋಡು ಎಂದನು, ಭೀಮ.
  • ತಾತ್ಪರ್ಯ : ತಂಗಾಳಿ ಬೀಸಲು ಬಿಚ್ಚದ ಹೊಂಬಾಳೆಗಳ (ತೆಂಗಿನ ಹೂವಿನಗೊನೆಗೆ ಮುಚ್ಚಿದ ಹಳದಿ ಬಣ್ಣದ ಹೊದಿಕೆ), ಹಾಕುವ ಅಕ್ಷತೆಗಳ, ಪರಿಶುದ್ಧ ಗೊಂಚಲ,ಹೂವಿನ ಕುಸುಮಗಳನ್ನು ಕೈಯಲ್ಲಿಹಿಡಿದ ಹೂವುಗಳ ಹಾಗೆ, ಒತ್ತೊತ್ತಾಗಿ ಇರುವ ದೊಡ್ಡ ಕೊನೆಗಳಿಂದ, ಕಾಣುವ, ಸುಂದರ ತೆಂಗಿನಕಾಯಿಗಳು ಒಡೆಯುತ್ತ, ಸೋರುವ ಎಳೆನೀರು ಅರ್ಘ್ಯದಂತೆ, ಚಂದ ಕಾಣುವ ನೋಟ ವನದೇವಿಯು, ಭೂದೇವಿಯನ್ನ ಅರ್ಚಿಸುವ ರೀತಿಯಲ್ಲಿದೆ, ಕುವರನೇ, ನೋಡು ಎಂದನು, ಭೀಮ.

(ಪದ್ಯ - ೨೭),

ಪದ್ಯ - ೨೮ ಸಂಪಾದಿಸಿ

ತರುಣ ಪಲ್ಲವದ ವಿಸ್ತಾರದಿಂ ನೇರದಿಂ |
ಸರಗೈವ ಕಲಪಿಕೋಚ್ಚಾರದಿಂ ಸಾರದಿಂ |
ಸುರಿವ ಪೂದೊಂಗಲ ತುಷಾರದಿಂ ಸ್ವೈರದಿಂ ಸಲ್ಲಾಪಕೆಳಸಿ ಬಳಸಿ ||
ಮೊರೆವ ತುಂಬಿಗಳ ಝಂಕಾರದಿಂ ತೋರದಿಂ |
ಪರಿಪಕ್ವಮಾದ ಫಲಭಾರದಿಂ ಕೀರದಿಂ |
ಕರಮೆಸೆಯುತಿಪ್ರ್ಪ ಸಹಕಾರದಿಂ ತೀರದಿಂಪೆಲ್ಲಿಯುಂ ನಂದನದೊಳು ||28||

ಪದವಿಭಾಗ-ಅರ್ಥ:
ತರುಣ = ಹೊಸ,ಪಲ್ಲವದ = ಚಿಗುರಿನ, ವಿಸ್ತಾರದಿಂ ನೇರದಿಂ: = ವಿಶಾಲವಾದ ನೇರವಾದ, ಸರಗೈವ: = ಹಾಡುತ್ತಿರುವ, ಕಲಪಿಕೋಚ್ಚಾರದಿಂ ಸಾರದಿಂ: = ಕಪ್ಪು ಕೋಗಿಲೆಯ ಹಾಡಿನಿಂದ, ಅದರ ಇಂಪಿನಿಂದ, ಸುರಿವ ಪೂದೊಂಗಲ ತುಷಾರದಿಂ ಸ್ವೈರದಿಂ := ಉದುರುತ್ತಿರುವ ಪೂ-ಹೂವಗಳ ಗೊಂಚಲ ಹನಿಗಳಿಂದ ಸ್ವೇಚ್ಛೆಯಿಂದ, ಸಲ್ಲಾಪಕೆಳಸಿ ಬಳಸಿ ಮೊರೆವ ತುಂಬಿಗಳ ಝಂಕಾರದಿಂ ತೋರದಿಂ:ಸರಸವನ್ನು ಬಯಸಿ ಸಂಚರಿಸುತ್ತಾ ಘೇಂಕಾರ ತೋರ /ದೊಡ್ಡ ಸದ್ದು ಮಾಡುವ ದುಂಬಿಗಳಿಂದ, ಪರಿಪಕ್ವಮಾದ ಫಲಭಾರದಿಂ ಕೀರದಿಂ:ಚೆನ್ನಾಗಿ ಕಳಿತ ಹಣ್ಣುಗಳಿಂದ ಅಲ್ಲಿ ಗಿಳಿಗಳೀಂದ, ಕರಂ = ಬಹಳ ಎಸೆಯುತಿಪ್ರ್ಪ = ತೋರುತ್ತಿರುವ ಸಹಕಾರದಿಂ = ಹಣ್ಣಿನ (ಮಾವಿನ) ಮರದಿಂದ, ತೀರದಿಂಪೆಲ್ಲಿಯುಂ-: ತೀರದ ಇಂಪು ಎಲ್ಲಿಯುಂ ನಂದನದೊಳು: ಈ ಉದ್ಯಾನ ವನಗಳಲ್ಲಿ ಇಂಪಾದ (ಇಂಪು)ಗಾನ ಸುಖ ತೀರದು ಮುಗಿಯದು, ಎಲ್ಲಡೆಯೂ ಇರುವುದು. (ನದೀತೀರದ ದಡದಲ್ಲಿ ಗಾನದ ಇಂಪು ಎಲ್ಲೆಡೆಯೂ ಇರುವುದು)
  • ತಾತ್ಪರ್ಯ : ಹೊಸ ಚಿಗುರಿನಲ್ಲಿ, ವಿಶಾಲವಾದ ದೀರ್ಘವಾಗಿ ಹಾಡುತ್ತಿರುವ ಕಪ್ಪು ಕೋಗಿಲೆಯ ಹಾಡಿನಿಂದಲೂ, ಅದರ ಇಂಪಿನಿಂದಲೂ, ಉದುರುತ್ತಿರುವ ಪೂ-ಹೂವಗಳ ಗೊಂಚಲ ಹನಿಗಳಿಂದಲೂ, ಸ್ವೇಚ್ಛೆಯಿಂದ ಸರಸವನ್ನು ಬಯಸಿ ಸಂಚರಿಸುತ್ತಾ ಘೇಂಕಾರದ ದೊಡ್ಡ ಸದ್ದು ಮಾಡುವ ದುಂಬಿಗಳಿಂದಲೂ, ಚೆನ್ನಾಗಿ ಕಳಿತ ಹಣ್ಣುಗಳಿಂದ ಅಲ್ಲಿರುವ ಗಿಳಿಗಳಿಂದಲೂ, ಚೆನ್ನಾಗಿ ತೋರುತ್ತಿರುವ ಹಣ್ಣಿನ (ಮಾವಿನ) ಮರದಿಂದಲೂ, ಈ ಉದ್ಯಾನ ವನಗಳಲ್ಲಿ ಇಂಪಾದ (ಇಂಪು)ಗಾನ ಸುಖ ಮುಗಿಯದು, ಎಲ್ಲಡೆಯೂ ಯಾವಾಗಲೂ ಇರುವುದು. (ನದೀ ತೀರದ ದಡದಲ್ಲಿ ಗಾನದ ಇಂಪು ಎಲ್ಲೆಡೆಯೂ ಇರುವುದು?)('ರ'ಕಾರದ ಆದಿ ಅಂತ್ಯ ಪ್ರಾಸ ಮತ್ತು ಶಬ್ದ ಪ್ರಾಸದ ಅಲಂಕಾರ)

(ಪದ್ಯ - ೨೮),

ಪದ್ಯ - ೨೯ ಸಂಪಾದಿಸಿ

ಎಮ್ಮಂತೆ ಕೂರ್ಪರಂ ಬಿಡದಪ್ಪಿಕೊಂಡಿರದೊ |
ಡೊಮ್ಮೆಯುಂ ನಿಲಲೀಯನೀ ಬನದೊಳಂಗೊದ್ಬ |
ಮಮ್ಮೋಹಿಗಳನೆಂದು ದೃಷ್ಟಾಂತಮಂ ತೋರಿ ಭೋಗಿಸುವ ಮಾನವರ್ಗೆ ||
ತಮ್ಮಿಂದ ವಸ್ತುವಂ ಪಡೆಯಲ್ಕೆ ಸಂಯೋಗ |
ವಮ್ಮಾಳ್ವವೊಳ್ ನಾಗವಲ್ಲಿಗಳ್ ಫಲಭಾರ |
ದಿಮ್ಮೆರೆವ ಪೂಗವೃಕ್ಷಂಗಳಂ ಪರ್ವಿ ಕಂಗೊಳಿಸುತಿವೆ ನೋಡೆಂದನು ||29|||

ಪದವಿಭಾಗ-ಅರ್ಥ:
ಎಮ್ಮಂತೆ = ನಮ್ಮಂತೆ ಕೂರ್ಪರಂ = ಪ್ರಿಯರನ್ನು ಬಿಡದೆ ಅಪ್ಪಿಕೊಂಡು ಇರದೊಡೆ =ಇರದೇ ಹೋದರೆ; ಒಮ್ಮೆಯುಂ = ಒಂದು ಸಲವಾದರೂ, ನಿಲಲೀಯನೀ =ನಿಲ್ಲಲು ಈಯನು = ಬಿಡನು ಬನದೊಳಂಗೊದ್ಬಮಮ್ಮೋಹಿಗಳನೆಂದು-: ಬನದೊಳಗೆ ಅಂಗೋಧ್ಬವನು =ಮನ್ಮಥನು ಮೋಹಿಗಳನು ಎಂದು,(ಒಮ್ಮೆಯುಂ =ಒಂದು ಸಲವಾದರೂ ಅಂಗೋಧ್ಬವನು =ಮನ್ಮಥನು ಈ ಬನದೊಳಗೆ ಸ್ತ್ರೀಯರಲ್ಲಿ ಮೋಹಿಗಳನು ನಿಲಲೀಯನೀ =ನಿಲ್ಲಲು ಈಯನು = ಬಿಡುವುದಿಲ್ಲ, ಎಂದು,)ದೃಷ್ಟಾಂತಮಂ = ಉದಾಹರಣೆಯನ್ನು ತೋರಿ ಭೋಗಿಸುವ = ಸುಖಪಡುವ, ಮಾನವರ್ಗೆ =ಮಾನವರಿಗೆ, ತಮ್ಮಿಂದ ವಸ್ತುವಂ =ವಸ್ತುಗಳನ್ನು, ಪಡೆಯಲ್ಕೆ = ಪಡೆಯಲು, ಸಂಯೋಗವಮ್ಮಾಳ್ವವೊಳ್-:ಸಂಯೋಗವಂ ಮಾಳ್ಪವೊಲ್ =ಕೂಟವನ್ನು ಮಾಡುವಹಾಗೆ, ನಾಗವಲ್ಲಿಗಳ್ = ನಾಗವಳ್ಳಿ ವೀಳೆಯದ ಎಲೆಗಳ ಬಳ್ಳಿಗಳು, ಫಲಭಾರದಿಂ ಮೆರೆವ ಪೂಗವೃಕ್ಷಂಗಳಂ= ಫಲ-ಅಡಿಕೆ ಕೊನೆಗಳ ಭಾರದಿಂದ ತೋರುವ ಅಡಿಕೆಮರಗಳನ್ನು ಪರ್ವಿ= ಹಬ್ಬಿಕೊಂಡು ಕಂಗೊಳಿಸುತಿವೆ = ಚಂದವಾಗಿ ಕಾಣಿಸುತ್ತಿವೆ, ನೋಡೆಂದನು.
  • ತಾತ್ಪರ್ಯ : ನಮ್ಮಂತೆ(ಮನುಷ್ಯರಹಾಗೆ) ಪ್ರಿಯರನ್ನು ಒಂದು ಸಲವಾದರೂ ಬಿಡದೆ ಅಪ್ಪಿಕೊಂಡು ಇರದೇ ಹೋದರೆ, ಸ್ತ್ರೀಯರಲ್ಲಿ ಮೋಹಿಗಳನ್ನು ಮನ್ಮಥನು ಈ ಬನದೊಳಗೆ ನಿಲ್ಲಲು ಬಿಡುವುದಿಲ್ಲ ಎಂದು,ಉದಾಹರಣೆಯನ್ನು ತೋರಿ, ಸುಖಪಡುವ ಮಾನವರು ವಸ್ತುಗಳನ್ನು ಪಡೆಯಲು ಕೂಟವನ್ನು ಮಾಡುವಹಾಗೆ, ನಾಗವಳ್ಳಿ ವೀಳೆಯದ ಎಲೆಗಳ ಬಳ್ಳಿಗಳು, ಅಡಿಕೆ ಕೊನೆಗಳ ಭಾರದಿಂದ ತೋರುವ ಅಡಿಕೆಮರಗಳನ್ನು ಹಬ್ಬಿಕೊಂಡು ಚಂದವಾಗಿ ಕಾಣಿಸುತ್ತಿವೆ, ನೋಡೆಂದನು ಭೀಮ. (ವೀಳೆಯದ ಎಲೆಗಳನ್ನು ತಾಂಬೂಲದಲ್ಲಿ ಅಡಿಕೆಯನ್ನು ಸೇರಿಸಿ ಸುಣ್ನಹಚ್ಚಿ ತಿನ್ನುವರು; ಈಗ ವೀಳೆಯದ ಎಲೆಬಳ್ಳಿಗಳು ಅಡಿಕೆ ಮೋಹದಿಂದ ಆ ಮರವನ್ನು ತಬ್ಬಿ ಹಬ್ಬಿಕೊಂಡಿವೆ, ಹೇಗೆಂದರೆ ಪ್ರಿಯೆಯು ಪ್ರಿಯಕರನನ್ನು ಅಪ್ಪಿಕೊಂಡಂತೆ ಎಂಬ ಭಾವ - ಸ್ವಲ್ಪ ತೊಡಕಾಗಿದೆ ಉಪಮಾನ ಉಪಮೇಯ)

(ಪದ್ಯ - ೨೯),

ಪದ್ಯ - ೩೦ ಸಂಪಾದಿಸಿ

ಭೂತಳದ ಬೋಗಿಸಂಕುಲಕೆ ಬಹುವಿಧ ಸುಗಂ |
ಧಾತಿಶಯ ಸೌಖ್ಯದಿಂ ನೆರೆತಣಿಸಿ ಬಳಿಕ ಸಂ |
ಪ್ರೀತಿಯಿಂದತಳದ ಮಹಾಭೋಗಿಚಯಕೊಂದುಬಗೆಯ ಕಂಪಿನ ಸೊಂಪನು ||(ಪ್ರೀತಿಯಿಂದತಳದ ಮಹಾ)
ಏತಕುಣಿಸದೆ ಬಿಡುವಳೀ ವನಾಂಗನೆಯೆಂಬ |
ರೀತಿಯಿಂ ಬೇರ್ವರಿದ ಮುಡಿವಾಳಮಿರಲಳಿ |
ವ್ರಾತಮರಿಯದೆ ತಿರುಗುತಿದೆ ನಿಧಾನವನಭಾಗ್ಯಂ ಕಾಣದಿರ್ಪಂತಿರೆ ||30||

ಪದವಿಭಾಗ-ಅರ್ಥ:
ಭೂತಳದ =ಭೂಮಿಯಲ್ಲಿರುವ, ಬೋಗಿಸಂಕುಲತಕೆ= ಸುಖಿಗಳ ಸಮೂಹಕ್ಕೆ, ಬಹುವಿಧ = ಅನೇಕ ವಿಧದ, ಸುಗಂಧಾತಿಶಯ ಸೌಖ್ಯದಿಂ= ಸುಗಂಧದ ಅತಿಶಯದ ಸುಖದಿಂದ, ನೆರೆತಣಿಸಿ =ಚೆನ್ನಾಗಿ ತೃಪ್ತಿಪಡಿಸಿ, ಬಳಿಕ ಸಂಪ್ರೀತಿಯಿಂ =ಸಂತೋಷವನ್ನು, ಅತಳದ = ಪಾತಾಳದ ಮಹಾಭೋಗಿ =ಸರ್ಪಗಳ ಚಯಕೆ = ಸಮೂಹಕ್ಕೆ, ಒಂದು ಬಗೆಯ ಕಂಪಿನ ಸೊಂಪನು =ಸುವಾಸನೆಯ ಸುಖವನ್ನು, ಏತಕೆ ಉಣಿಸದೆ ಬಿಡುವಳು ಎಂಬ; ಈ ವನಾಂಗನೆ =ಈ ವನವು ಏತಕೆ =ಯಾಕೆ ಉಣಿಸದೆ ಬಿಡುವಳು = ಕೊಡದೆ ಬಿಡುವುದು ಎಂಬ ರೀತಿಯಿಂ = ರೀತಿಯಿಂದ, ಬೇರ್ವರಿದ = ಬೇರುಬಿಟ್ಟ, ಮುಡಿವಾಳಂ = ಲಾವಂಚ ಗಿಡವು ಇರಲು, ಅಳಿವ್ರಾತಂ = ದುಂಬಿಗಳ ಸಮೂಹವು ಸುವಾಸನೆಯ ಮೂಲವನ್ನು ಹುಡುಕುತ್ತಾ, ಅರಿಯದೆ ತಿರುಗುತಿದೆ = ಇದನ್ನು ತಿಳಿಯದೆ = ಮಡಿವಾಳದ ಸುವಾಸನೆ ಬೇರು ಭೂಮಿಯೊಳಗಿರುವುದನ್ನು ತಿಳಿಯದೆ ಗಿಡವನ್ನು ಸುತ್ತುತ್ತಿದೆ. ಹೇಗೆಂದರೆ ನಿಧಾನವನಭಾಗ್ಯಂ ಕಾಣದಿರ್ಪಂತಿರೆ: ನಿಧಾನವನು = ನಿಧಿಯನ್ನು ಅಭಾಗ್ಯಂ = ದರಿದ್ರನು; ಕಾಲುಬುಡದ ಭೂಮಿಯೊಳಗಿರುವ ನಿಧಿಯನ್ನು ಕಾಣದಿರ್ಪಂತೆ = ಕಾಣದಿರುವಂತೆ,ದುಂಬಿಗಳ ಸಮೂಹವು ಗಿಡವನ್ನು ಸುತ್ತುತ್ತಿದೆ.
  • ತಾತ್ಪರ್ಯ : ಭೂಮಿಯ ಸುಖಾಪೇಕ್ಷಿ ಸಮೂಹಕ್ಕೆ ಅನೇಕ ವಿಧದ ಸುಗಂಧದ ಅತಿಶಯದ ಸುಖದಿಂದ,ಚೆನ್ನಾಗಿ ತೃಪ್ತಿಪಡಿಸಿ, ಬಳಿಕ ಸಂತೋಷವನ್ನು, ಪಾತಾಳದ ಸರ್ಪಗಳ ಸಮೂಹಕ್ಕೆ, ಒಂದು ವಿಶಿಷ್ಟ ಬಗೆಯ ಕಂಪಿನ ಸುವಾಸನೆಯ ಸುಖವನ್ನು, ಈ ವನವು ಯಾಕೆ ಕೊಡದೆ ಬಿಡುವುದು? ಎಂಬ ರೀತಿಯಿಂದ, ಬೇರುಬಿಟ್ಟ, ಲಾವಂಚ ಗಿಡವು ಭಾವಿಸಿರಲು, ಇದನ್ನು ತಿಳಿಯದೆ ದುಂಬಿಗಳ ಸಮೂಹವು ಸುವಾಸನೆಯ ಮೂಲವನ್ನು ಹುಡುಕುತ್ತಾ, ಮಡಿವಾಳದ ಸುವಾಸನೆ ಬೇರು ಭೂಮಿಯೊಳಗಿರುವುದನ್ನು ತಿಳಿಯದೆ, ದರಿದ್ರನು ಕಾಲುಬುಡದ ಭೂಮಿಯೊಳಗಿರುವ ನಿಧಿಯನ್ನು ಕಾಣದಿರುವಂತೆ, ದುಂಬಿಗಳ ಸಮೂಹವು ಗಿಡವನ್ನು ಸುತ್ತುತ್ತಿದೆ.

(ಪದ್ಯ - ೩೦),

ಪದ್ಯ - ೩೦ ಸಂಪಾದಿಸಿ

ಕುದ್ದಾಲಹತಿಯನುರೆ ತಾಳ್ದೆಮ್ಮನಿನ್ನೆಗಂ |
ಮುದ್ದುಗೈದೀ ವಸುಧೆ ಬೆಳೆಯಿಸಿದಳೆಂದು ತುರು |
ಗಿದ್ದ ತನಿವಣ್ಗಳಿಂದೆಸೆವ ಪೆರ್ಗೊನೆಗಳಂ ಸಲೆ ಸಮರ್ಪಿಸಲೊಡರ್ಚಿ ||
ಎದ್ದಿರದೆ ಬಾಗಿದುವೊ ಕದಳಿಗಳ್ ಧರಣಿಗೆನ |
ಲಿದ್ದಪರೆ ಮರೆದು ಪುರುಷಾರ್ಥಮಂ ಮಾಡಿದರ |
ನುದ್ದಾಮಗುಣಮುಳ್ಳ ಜೀವಿಗಳ್ ತನುಜ ನೋಡೆಂದನಾ ಪವನಸೂನು ||31||

ಪದವಿಭಾಗ-ಅರ್ಥ:
(ಭೂಮಿಯು), ಕುದ್ದಾಲಹತಿಯನುರೆ-:ಕುದ್ದಾಲ =ಗುದ್ದಲಿಯ, ಹತಿಯನು= ಪೆಟ್ಟನ್ನು, ಉರೆ=ಬಹಲ, ತಾಳ್ದೆಮ್ಮನಿನ್ನೆಗಂ-: ತಾಳ್ದು= ಸಹಿಸಿಕೊಂಡು, ಎಮ್ಮನು= ನಮ್ಮನ್ನು,ಇನ್ನೆಗಂ= ಇದುವರೆಗೆ, ಮುದ್ದುಗೈದೀ ವಸುಧೆ ಬೆಳೆಯಿಸಿದಳೆಂದು-: ಮುದ್ದುಗೈದು= ಪ್ರೀತಿಯಿಂದ,ವಸುಧೆ= ಭೂಮಿಯು, ಬೆಳೆಯಿಸಿದಳೆಂದು= ಬೆಳಸಿದಳು ಎಂದು, ತುರುಗಿದ್ದ= ತಂಬಿರುವ ತನಿವಣ್ಗಳಿಂದೆಸೆವ-: ತನಿ ವಣ್ಗಳಿಂದ ಎಸೆವ= ಕಳಿತ ಹಣ್ಣುಗಳಿಂದ ತೋರುವ, ಪೆರ್ಗೊನೆಗಳಂ-;ಪೆರ್ ಕೊನೆಗಳಿಂ= ದೊಡ್ಡ ಕೊನೆಗಳನ್ನು, ಸಲೆ= ಪೂರ್ಣ, ಸಮರ್ಪಿಸಲೊಡರ್ಚಿ= ಸಮರ್ಪಿಸಲ್ ಒಡರ್ಚಿ= ಸಿದ್ಧವಾಗಿ, ಎದ್ದಿರದೆ ಬಾಗಿದುವೊ ಕದಳಿಗಳ್= ನೆಟ್ಟಗೆ ನಿಲ್ಲದೆ ಬಾಗಿಕೊಂಡಿರುವುದೋ ಬಾಳೆಗಿಡಗಳು, ಧರಣಿಗೆನಲಿದ್ದಪರೆ= ಧರಣಿಗೆ ಎನಲ್ ಇದ್ದಪರೆ= ಭೂಮಿಗೆ ಎನ್ನುವಂತೆ (ಇರುವರೆ) ಮರೆದು ಪುರುಷಾರ್ಥಮಂ= (ಮರೆತು) ಪುರಷಾರ್ಥವನ್ನು / ಉಪಕಾರವನ್ನು ಮಾಡಿದರನುದ್ದಾಮಗುಣಮುಳ್ಳ-:ಮಾಡಿದರ ಉದ್ದಾಮಗುಣಮುಳ್ಳ= ಮಾಡಿದವರ +ಮರತು ಇರುವರೆ? ಜೀವಿಗಳ್= ಪ್ರಾಣಿಗಳು, ತನುಜ= ಮಗನೇ, ನೋಡೆಂದನಾ=ನೋಡು ಎಂದನು ಆ ಪವನಸೂನು=ಭೀಮನು.


  • ತಾತ್ಪರ್ಯ : 'ಭೂಮಿಯು, ಗುದ್ದಲಿಯ ಪೆಟ್ಟನ್ನು ಬಹಳವಾಗಿ ಸಹಿಸಿಕೊಂಡು ನಮ್ಮನ್ನು ಇದುವರೆಗೆ, ಪ್ರೀತಿಯಿಂದ ಬೆಳಸಿದಳು ಎಂದು, ತುಂಬಿರುವ ಕಳಿತ ಹಣ್ಣುಗಳನ್ನು ಪ್ರದರ್ಶಿಸುತ್ತಿರುವ ಬಾಳೆಗಿಡಗಳು, ದೊಡ್ಡ ಕೊನೆಗಳನ್ನು ಪೂರ್ಣವಾಗಿ ಭೂಮಿಗೇ ಸಮರ್ಪಿಸಲು ಸಿದ್ಧವಾಗಿ ನೆಟ್ಟಗೆ ನಿಲ್ಲದೆ ಭೂಮಿಗೆ ಬಾಗಿಕೊಂಡಿರುವುದೋ ಎನ್ನುವಂತೆ ಇರಲು, ಜೀವಿಗಳು ಉಪಕಾರ ಮಾಡಿದವರನ್ನು ಮರೆತುಬಿಡುವರೆ? ಮಗನೇ,ನೋಡು', ಎಂದನು ಆ ಭೀಮನು.

(ಪದ್ಯ - ೩೦),

ಪದ್ಯ - ೩೨ ಸಂಪಾದಿಸಿ

ಕಡುಗೆಂಪೆಸೆವ ತಳಿರ ತನಿಗೆಂಡಮಂ ಕಲಕಿ |
ನಡೆದು ಮೊನೆಮುಗುಳ ಶಸ್ತ್ರಂಗಳಂ ಪಾಯ್ದು ಮಾ |
ಮಿಡಿಯ ಜೊಂಪದ ವಜ್ರಮುಷ್ಟಿಯಂ ಜಡಿದು ಲತೆಗಳ ಕೊನರಚಾಟಿಯಿಂದ ||
ಬಡಿದು ಕೋಗಿಲೆಯ ನಿಡುಸರದ ಬೊಬ್ಬೆಯೊಳಾರ್ದು |
ಬಿಡದೆ ವನದೇವಿಯೋಲಗದೊಳುತ್ಸವದಿಂದ |
ಮಡಿಗಡಿಗೆ ತೂಣಗೊಂಡವನಂತಿಸೆವ ಮಂದಮಾರುತನ ನೋಡೆಂದನು ||32||

ಪದವಿಭಾಗ-ಅರ್ಥ:
ಕಡುಗೆಂಪೆಸೆವ-: ಕಡು=ಅತಿ, ಕೆಂಪು ಎಸೆವ= ಅತಿ ಕೆಂಪಾಗಿ ಕಾಣುವ, ತಳಿರ= ಚಿಗುರೆಲೆಯ, ತನಿಗೆಂಡಮಂ ಕಲಕಿ= ತನಿ ಕೆಂಡವನ್ನು ಕೆದರಿ, ನಡೆದು = ತುಳಿದು ಮೊನೆಮುಗುಳ ಶಸ್ತ್ರಂಗಳಂ= ಚೂಪಾದ ಮಲ್ಲಿಗೆಮೊಗ್ಗಿನ ಶಸ್ತ್ರವನ್ನು ಪಾಯ್ದು= ಹಾದು ಮಾಮಿಡಿಯ ಜೊಂಪದ= ಮಾವಿನ ಮಿಡಿಯ ನಡುಗುವ, ವಜ್ರಮುಷ್ಟಿಯಂ ಜಡಿದು= ಗಟ್ಟಿಯಾದ ಮಷ್ಟಿಯನ್ನು ಹೊಡೆದು, ಲತೆಗಳ ಕೊನರಚಾಟಿಯಿಂದ ಬಡಿದು= ಬಳ್ಳಿಗಳ ತುದಿಯ ಚಾಟಿಯಿಂದ ಬಡಿದು, ಕೋಗಿಲೆಯ ನಿಡುಸರದ ಬೊಬ್ಬೆಯೊಳಾರ್ದು= ಕೋಗಿಲೆಯ ಉದ್ದ ಕೂಗನ್ನು ಆರ್ದು=ಆಲಿಸಿ ಬಿಡದೆ ವನದೇವಿಯೋಲಗದೊಳುತ್ಸವದಿಂದಮಡಿಗಡಿಗೆ-: ಬಿಡದೆ ವನದೇವಿಯ ಓಲಗದ ಉತ್ಸವದಿಂದಂ ಅಡಿಗಡಿಗೆ=ಪುನಃ ಪುನಃ, ತೂಣಗೊಂಡವನಂತಿಸೆವ-: ತೂಣಗೊಂಡವನಂತೆ= ಆವೇಶಬಂದವನಂತೆ, ಎಸೆವ= ತೋರುವ, ಮಂದಮಾರುತನ= ಮೆಲ್ಲನ ಗಾಳಿಯನ್ನು ನೋಡೆಂದನು ಭೀಮ.
  • ತಾತ್ಪರ್ಯ : ಅತಿ ಕೆಂಪಾಗಿ ಕಾಣುವ, ಚಿಗುರೆಲೆಯ, (ಚಿಗುರು ಎಲೆಯೇ ಕೆಂಡ) ತನಿ ಕೆಂಡವನ್ನು ಕೆದರಿ ತುಳಿದು, ಚೂಪಾದ ಮಲ್ಲಿಗೆಮೊಗ್ಗಿನ ಶಸ್ತ್ರವನ್ನು ಹಾದು (ಚೂಪಾದ ಮಲ್ಲಿಗೆ ಮೊಗ್ಗೇ ಶಸ್ತ್ರ) ಮಾವಿನ ಮಿಡಿಯ ನಡುಗುವ ಗೊಂಚಲ ವಜ್ರಮುಷ್ಟಿಯನ್ನು ಗಟ್ಟಿಯಾದ ಮಷ್ಟಿಯನ್ನು ಹೊಡೆದು, ಬಳ್ಳಿಗಳ ತುದಿಯ ಚಾಟಿಯಿಂದ ಬಡಿದು, ಕೋಗಿಲೆಯ ಉದ್ದ ಕೂಗಿನ ಆರ್ಭಟವನ್ನು ಆಲಿಸಿ, ವನದೇವಿಯ ಓಲಗದ ಉತ್ಸವದಿಂದ ಪುನಃ ಪುನಃ, ಆವೇಶ ಬಂದವನಂತೆ ತೋರುವ, ಮಂದಮಾರುತನನ್ನು (ಮೆಲ್ಲನ ಗಾಳಿಯನ್ನು) ನೋಡೆಂದನು ಭೀಮ. (ವನದೇವಿಯ ಉತ್ಸವ,ಮಂದಮಾರುತ- ರೂಪಕ)

(ಪದ್ಯ - ೩೦),

ಪದ್ಯ - ೩೩ ಸಂಪಾದಿಸಿ

ಬಕುಳ ಮಂದಾರ ಕರ್ಣಿಕಾರ ಚಂ |
ಪಕ ಕೋವಿದಾರ ಪ್ರಿಯಂಗು ಕರವೀರ ಕುರ |
ವಕ ತಿಲಕ ಸುರಗಿ ನಂದ್ಯಾವರ್ತ ಮೇರು ಸೇವಂತಿಗೆ ಶಿರೀಷಮೆಂಬ ||
ಸಕಲ ತರುನಿಚಯಂಗಳಂಗಜನ ವಿವಿಧ ಸಾ |
ಯಕದ ಮೂಡಿಗೆಗಳಂತೆಸೆವ ನವಕುಸುಮಸ್ತ |
ಬಕದಿಂದದೊಪ್ಪುತಿವೆ ಕುಂದಮಾಲತಿಮಲ್ಲಿಕಾದಿಪೂವಲ್ಲಿಗೂಡಿ ||33||

ಪದವಿಭಾಗ-ಅರ್ಥ:
ಹೂಗಳಾದ ಬಕುಳ, ಮಂದಾರ, ಕರ್ಣಿಕಾರ (ಬೆಟ್ಟಸೋಗೆ), ಚಂಪಕ (ಸಂಪಿಗೆ), ಕೋವಿದಾರ (ದೇವಕಾಂಚನ) ಪ್ರಿಯಂಗು(ಕುಂಕುಮಗಿಡ), ಕರವೀರ, ಕುರವಕ, ತಿಲಕ, ಸುರಗಿ, ನಂದ್ಯಾವರ್ತ, ಮೇರು(ಧೂಪ), ಸೇವಂತಿಗೆ, ಶಿರೀಷಮೆಂಬ= ಶಿರೀಷಗಳೆಂಬ ಸಕಲ ತರುನಿಚಯಂಗಳಂಗಜನ= ಗಿಡ ನಾನಾ ಸಸ್ಯಗಳು ವಿವಿಧ ಸಾಯಕದ= ಬಾಣದ, ಮೂಡಿಗೆಗಳಂತೆಸೆವ-: ಮೂಡಿಗೆಗಲಂತೆ= ಬತ್ತಳಿಕೆಗಳಂತೆ ಎಸೆವ= ಕಾಣುವ ನವಕುಸುಮಸ್ತಬಕದಿಂದದೊಪ್ಪುತಿವೆ-:ನವಕುಸುಮ=ಹೊಸ ಕುಸುಮದ, ಸ್ತಬಕದಿಂದ=ಗೊಂಚಲುಗಳಿಂದ, ಒಪ್ಪುತಿವೆ= ಶೋಭಿಸುತ್ತವೆ; ಕುಂದಮಾಲತಿಮಲ್ಲಿಕಾದಿಪೂವಲ್ಲಿಗೂಡಿ-:ಕುಂದ =ಕೋಲುಮಲ್ಲಿಗೆ, ಮಾಲತಿ= ಜಾಜಿ, ಮಲ್ಲಿಕಾ=ದುಂಡು ಮಲ್ಲಿಗೆ, ಆದಿ= ಮೊದಲಾದ, ಪೂವಲ್ಲಿ ಕೂಡಿ.


  • ತಾತ್ಪರ್ಯ : ಹೂಗಳಾದ ಬಕುಳ, ಮಂದಾರ, ಕರ್ಣಿಕಾರ (ಬೆಟ್ಟಸೋಗೆ), ಚಂಪಕ (ಸಂಪಿಗೆ), ಕೋವಿದಾರ (ದೇವಕಾಂಚನ) ಪ್ರಿಯಂಗು(ಕುಂಕುಮಗಿಡ), ಕರವೀರ, ಕುರವಕ, ತಿಲಕ, ಸುರಗಿ, ನಂದ್ಯಾವರ್ತ, ಮೇರು(ಧೂಪ), ಸೇವಂತಿಗೆ, ಶಿರೀಷಗಳೆಂಬ ಸಕಲ ಗಿಡ ನಾನಾ ಸಸ್ಯಗಳು ವಿವಿಧ ಬಾಣದ,(ಮನ್ಮಥನ) ಬತ್ತಳಿಕೆಗಳಂತೆ ಕಾಣುವ ಹೂ ಗೊಂಚಲುಗಳಿಂದ,ಶೋಭಿಸುತ್ತವೆ; ಕುಂದ (ಕೋಲುಮಲ್ಲಿಗೆ), ಮಾಲತಿ(ಜಾಜಿ), ಮಲ್ಲಿಕಾ(ದುಂಡು ಮಲ್ಲಿಗೆ) ಮೊದಲಾದ ಹೂವುಗಳು ಅಲ್ಲಿ ಎಲ್ಲಾ ಕೂಡಿಕೊಂಡಿವೆ.

(ಪದ್ಯ - ೩೩),

ಪದ್ಯ - ೩೪ ಸಂಪಾದಿಸಿ

ಸಾಲಸಾಲಂಗಳಿಂ ಬಕುಳ ಕುಳದಿಂದೆ ಹಿಂ |
ತಾಲತಾಲಂಗಳಿಂ ಮಾದಲದಲರ್ಗಳಿಂ ತ |
ಮಾಲಮಾಲತಿಗಳಿಂ ಸಂರಂಭರಂಭದಿಂ ಮಂದಮಂದಾರದಿಂದೆ ||
ಜಾಲಜಾಲಂಗಳಿಂ ಸುರಹೊನ್ನೆ ಹೊನ್ನೆ ಬಗೆ |
ಪಾಲ ಪಾಲಾಶತರು ತರುಣಾಮ್ರಚಯ ಕಿಂಕಿ |
ಲಾಲಿ ಲಾಲಲಿತ ನವಾಶೋಕದಿಂದುದ್ಯದುದ್ಯಾನಮೇಂ ಚೆಲ್ವಿನಿಪುದೋ||34||

ಪದವಿಭಾಗ-ಅರ್ಥ:
ಸಾಲ=ಸಾಲವೃಕ್ಷದ:ಮತ್ತಿಮರದ, ಸಾಲಂಗಳಿಂ=ಸಾಲುಗಳಿಂದ, ಬಕುಳವೃಕ್ಷಗಳ ಕುಳದಿಂದೆ= ಕಲಗಳಿಂದ, ಹಿಂತಾಲ= ತಾಳೆಗಿಡಗಳ ತಾಲಂಗಳಿಂ=ಸಮೂಹದಿಂದ, ಮಾದಲ = ಮಾದಲಗಿಡಗಳ /ಬಳ್ಳಿಗಳ, ದಲರ್ಗಳಿಂ=ದಳ- ದಳ/ಗುಂಪಿನಿಂದ, ತಮಾಲ= ಹೊಗೇಮರಗಳಿಂದ, ಮಾಲತಿಗಳಿಂ= ಜಾಜಿಬಳ್ಳಿಗಳಿಂದ,ಸಂರಂಭ=ದೊಡ್ಡಬಾಳೆಗಿಡ ಮತ್ತು ರಂಭದಿಂ=ಚಿಕ್ಕಬಾಳೇಗಿಡಗಳಿಂದ, ಮಂದ=ಶಮೀಮರಗಳಿಂದ, ಮಂದಾರದಿಂದೆ=ಮಂದಾರಗಿಡಗಳಿಂದ, ಜಾಲ= ಜಾಲಲೀ ಗಿಡಗಳ ಜಾಲಂಗಳಿಂ= ಸಾಲಿನಿಂದ, ಸುರಹೊನ್ನೆ ಮತ್ತು ಹೊನ್ನೆ, ಬಗೆಪಾಲ(ಚಿಪ್ಪಾಲೆಮರ) ಮತ್ತು ಪಾಲಾಶತರು= ಮುತ್ತುಗದ ಮರ, ತರುಣಾಮ್ರಚಯ= ತರುಣ=ಎಳೆಯ ಆಮ್ರ ಚಯ=ಮಾವಿನ ಮರಗಳ ಸಮೂಹ, ಕಿಂಕಿ ಲಾಲಿ= ಕೋಗಿಲೆಯ ಲಾಲಿ=ಲಾಲಿತ್ಯ, ಲಾಲಲಿತ=ಮನೋಹರ ನವಾಶೋಕದಿಂದ= ಹೊಸ ಅಶೋಕ ಮರಗಳಿಂದ, ಉದ್ಯತ್=ಬೆಳೆಯುತ್ತರುವ ಉದ್ಯಾನಮೇಂ=ಉದ್ಯಾನವನವು ಏಂ=ಎಷ್ಟೊಂದು ಚೆಲ್ವಿನಿಪುದೋ=ಚಂದಕಾಣುವುದು.


  • ತಾತ್ಪರ್ಯ :ಸಾಲವೃಕ್ಷದ:ಮತ್ತಿಮರದ ಸಾಲುಗಳಿಂದ, ಬಕುಳವೃಕ್ಷಗಳ ಕುಲಗಳಿಂದ, ತಾಳೆಗಿಡಗಳ ಸಮೂಹದಿಂದ,ಮಾದಲಗಿಡಗಳ /ಬಳ್ಳಿಗಳ,ಗುಂಪಿನಿಂದ, ಹೊಗೇಮರಗಳಿಂದ, ಜಾಜಿಗಿಡಗಳಿಂದ, ದೊಡ್ಡಬಾಳೆ ಗಿಡ ಮತ್ತು ಚಿಕ್ಕಬಾಳೇ ಗಿಡಗಳಿಂದ, ಶಮೀ ಮರಗಳಿಂದ, ಮಂದಾರಗಿಡಗಳಿಂದ, ಜಾಲೀ ಗಿಡಗಳ ಸಾಲಿನಿಂದ, ಸುರಹೊನ್ನೆ ಮತ್ತು ಹೊನ್ನೆ, ಬಗೆಪಾಲ(ಚಿಪ್ಪಾಲೆಮರ) ಮತ್ತು ಮುತ್ತುಗದ ಮರ,ಎಳೆಯ ಮಾವಿನ ಮರಗಳ ಸಮೂಹ, ಜೊತೆಗೆ ಕೋಗಿಲೆಯ ಲಾಲಿತ್ಯ / ಹಾಡು, ಮನೋಹರ ಹೊಸ ಅಶೋಕ ಮರಗಳಿಂದ,ಬೆಳೆಯುತ್ತರುವ ಈ ಉದ್ಯಾನವನವು ಎಷ್ಟೊಂದು ಚಂದಕಾಣುವುದು', ಅಂದನು ಭೀಮ. (ಪುನರುಕ್ತಿ ಅಲಂಕಾರ)

(ಪದ್ಯ - ೩೪),

ಪದ್ಯ - ೩೫ ಸಂಪಾದಿಸಿ

ಬಗೆವೊಡಿವು ಮುನ್ನಮಾಡಿರ್ದ ದೈವದ್ರೋಹ |
ದಘದಿಂದೆ ಬನದ ಪೊರವಳಯದೊಳ್ ಬಹುಕಂಟ |
ಕಿಗಳಾಗಿ ಬಂದು ಸಂಭವಿಸಿರಲ್ ತಳಿತ ಹೊಂಗೇದಗೆಗಳವರೊಳಾಡಿ ||
ಮಿಗೆ ಮಲಿನವಾಯ್ತು ಸರ್ವಾಂಗಮುಂ ಭ್ರಮರಾವ |
ಳಿಗೆ ತಮಗದರ ಸಂಗಮೇಕೆಂದು ಪೂತ ಸಂ |
ಪಗೆಗಳತಿಶುಚಿಗಳಂತೆಸೆಯುತಿವೆ ನೋಡು ನಂದನ ಪುರದ ನಂದನದೊಳು ||35||

ಪದವಿಭಾಗ-ಅರ್ಥ:
ಬಗೆವೊಡಿವು-:ಬಗೆವೊಡೆ ಇವು = ಯೋಚಿಸಿದರೆ (ಈ ಕೇದಿಗೆ ಗಿಡವು), ಮುನ್ನಮಾಡಿರ್ದ= ಹಿಂದೆ ಮಾಡಿದ್ದ, ದೈವದ್ರೋಹದಘದಿಂದೆ-: ದೈವದ್ರೋಹದ ಅಘದಿಂದೆ= ದೇವರಿಗೆ ಮಾಡಿದ ಅಪಚಾರದ ಪಾಪದಿಂದ, ಬನದ ಪೊರವಳಯದೊಳ್= ಈ ವನದ ಹೊರಭಾಗಲ್ಲಿ, ಬಹುಕಂಟಕಿಗಳಾಗಿ= ಬಹಳ ಮುಳ್ಳಿನಿಂದಕೂಡಿ, ಬಂದು ಸಂಭವಿಸಿರಲ್= ಹುಟ್ಟಿರಲು, ತಳಿತ=ಎಳೆಯ ಹೊಂಗೇದಗೆಗಳವರೊಳಾಡಿ-:ಹೊಂಗೇದಗೆಗಳ ಅವರೊಳು ಆಡಿ= ಹೊಂಬಣ್ಣದ ಕೇದಗೆಗಳಲ್ಲಿ ಆಡಿ, ಭ್ರಮರಾವಳಿಗೆ=ಜೇನುಹುಳುಗಳಿಗೆ ಮಿಗೆ=ತುಂಬಾ ಸರ್ವಾಂಗಮುಂ=ಮೈಪೂರಾ ಮಲಿನವಾಯ್ತು=ಕಪ್ಪಾಯಿತು; ತಮಗೆ ಅದರ=ಕೇದಿಗೆಯ ಮತ್ತು ಜೇನುಹುಳುಗಳ, ಸಂಗಮೇಕೆಂದು=ಸಂಗಮು ಏಕೆಂದು= ಸಹವಾಸವು ಏಕೆ? ಬೇಡ ಎಂದು, ಪೂತ= ಹೂವುಬಿಟ್ಟ ಸಂಪಗೆಗಳು ಅತಿಶುಚಿಗಳಂತೆ ಎಸೆಯುತಿವೆ ನೋಡು ನಂದನ ಪುರದ ನಂದನದೊಳು= ಹೂವುಬಿಟ್ಟ ಸಂಪಗೆ ಮರಗಳು ಅತಿಶುದ್ಧರೆಂಬಂತೆ ಶೋಬಿಸುತ್ತವೆ ನಂದನ ನಗರದೊಳಗೆ ನೋಡು', ಎಂದನು ಭೀಮ.
  • ತಾತ್ಪರ್ಯ :ಯೋಚಿಸಿದರೆ ಈ ಕೇದಿಗೆ ಗಿಡವು, ಹಿಂದೆ ದೇವರಿಗೆ ಮಾಡಿದ ಅಪಚಾರದ ಪಾಪದಿಂದ, ಈ ವನದ ಹೊರಭಾಗಲ್ಲಿ, ಬಹಳ ಮುಳ್ಳಿನಿಂದಕೂಡಿ ಹುಟ್ಟಿರಲು, ಎಳೆಯ ಹೊಂಬಣ್ಣದ ಕೇದಗೆ ಹೂವುಗಳಲ್ಲಿ ಆಡಿದ, ಜೇನುಹುಳುಗಳಿಗೆ ಆಗಿಡದ ಪಾಪದಿಂದ ಮೈಪೂರಾ ತುಂಬಾ ಕಪ್ಪಾಯಿತು; ಸಂಪಿಗೆ ಮರಗಳು ತಮಗೆ ಕೇದಿಗೆಯ ಮತ್ತು ಜೇನುಹುಳುಗಳ, ಸಹವಾಸವು ಬೇಡ ಎಂದು, ಹೂವುಬಿಟ್ಟ ಸಂಪಗೆ ಮರಗಳು ಅತಿಶುದ್ಧರೆಂಬಂತೆ ನಗರದ ನಂದನವನದೊಳಗೆ ಶೋಬಿಸುತ್ತವೆ ನೋಡು', ಎಂದನು ಭೀಮ.

(ಪದ್ಯ - ೩೫),

ಪದ್ಯ - ೩೬ ಸಂಪಾದಿಸಿ

ಪದ್ಯ - ೩೬ ಸಂಪಾದಿಸಿ

ಮುಡಿವಾಳ ಲಾಮಂಚಗಳ ಬೇರ್ಗಳಿಂ ಬೇರ್ಗ |
ಳಿಡಿದಗರುಚಂದನಂಗಳ ಕೊಂಬಿನಿಂ ಕೊಂಬು |
ತೊಡರಿದಚ್ಚೆಸಳು ಮಲ್ಲಿಗೆ ಜಾಜಿಗಳ ಪೂಗಳಿಂ ಪೂಗಳೊಂದುಗೂಡಿ ||
ಕಡುಗಂಪುವಡೆದುವಾಮೂಲಾಗ್ರಮೀ ಬನದ |
ನಡುವೆ ಪುಟ್ಟಿದ ಕಾಳ್ಮರಂಗಳೆಲ್ಲಂ ಸೋಂಕಿ |
ದೊಡೆ ತಂಬೆಲರ್ಗೆ ಪರಿಮಳವನೀಯದ ಕುಜಂ ನಂದನದೊಳೊಂದಿಲ್ಲೆನೆ ||36||

ಪದವಿಭಾಗ-ಅರ್ಥ:
ಮುಡಿವಾಳ ಲಾಮಂಚಗಳ ಬೇರ್ಗಳಿಂ= ಮಡಿವಾಳ ಲಾವಂಚದ ಬೇರುಗಳಿಂದ, ಬೇರ್ಗಳಿಡಿದಗರುಚಂದನಂಗಳ-:ಬೇರ್ಗಳು ಇಡಿದ ಅಗರು ಚಂದನಂಗಳ= ಬೇರುಗಳು, ಇಡಿದ=ಕೂಡಿದ ಅಗರು ಚಂದನಗಳನ್ನು, ಅಗರು=ಕಪ್ಪು ಅರಗು, ಚಂದನಂಗಳ= ಶ್ರೀಗಂಧದ ಕೊಂಬಿನಿಂ= ರೆಂಬೆಯಿಂದ ಕೊಂಬು=ರೆಂಬೆಗೆ ತೊಡರಿದಚ್ಚೆಸಳು-:ತೊಡರಿದ ಅಚ್ಚಸೆಳು=ಸುತ್ತಿದ ಬಿಳಿಯ ಮಲ್ಲಿಗೆ ಜಾಜಿಗಳ ಪೂಗಳಿಂ=ಹೂಗಳಿಂದ, ಪೂಗಳೊಂದುಗೂಡಿ= ಹೂವುಗಳು ಒಂದು ಗೂಡಿ, ಕಡುಗಂಪುವಡೆದುವು=ಕಡು=ಹೆಚ್ಚಿನ ಕಂಪು= ಪರಿಮಳವನ್ನು ಪಡೆದವು, ಆಮೂಲಾಗ್ರಮೀ= ಆಮೂಲಾಗ್ರಂ=ಬುಡದಿಂದ ಮೇಲಿನವರೆಗೂ ಈ ಬನದ ನಡುವೆ ಪುಟ್ಟಿದ= ಹುಟ್ಟಿದ, ಕಾಳ್ಮರಂಗಳೆಲ್ಲಂ=ಕಾಡು ಮರಗಳೆಲ್ಲವೂ, ಸೋಂಕಿದೊಡೆ= ಮುಟ್ಟಿದ ಕೂಡಲೆ, ತಂಬೆಲರ್ಗೆ=ತಂಪುಗಾಳಿಗೆ, ಪರಿಮಳವನೀಯದ= ಪರಿಮಳವನ್ನು ಈಯದ=ಕೊಡದ ಕುಜಂ= ಮರವು, ನಂದನದೊಳೊಂದಿಲ್ಲೆನೆ-: ನಂದನ ವನದೊಳು= ನಂದನವನದಲ್ಲಿ ಒಂದೂ ಇಲ್ಲ ಎನೆ= ಒಂದೂ ಇಲ್ಲ ಎನ್ನುವಂತೆ.
  • ತಾತ್ಪರ್ಯ :'ಮಡಿವಾಳ ಲಾವಂಚದ ಬೇರುಗಳಿಂದ, ಬೇರುಗಳು ಕೂಡಿದ ಅಗರು ಚಂದನಗಳನ್ನು, ಕಪ್ಪು ಅರಗು, ಶ್ರೀಗಂಧದ ರೆಂಬೆಯಿಂದ ರೆಂಬೆಗೆ ತೊಡರಿದ ಸುತ್ತಿದ ಬಳ್ಳಿಯ ಬಿಳಿಯ ಮಲ್ಲಿಗೆ ಜಾಜಿಗಳ ಹೂಗಳಿಂದ, ಹೂವುಗಳೆಲ್ಲಾ ಒಂದು ಗೂಡಿ,ಹೆಚ್ಚಿನ ಪರಿಮಳ ಉಂಟಾಯಿತು, ಬುಡದಿಂದ ಮೇಲಿನವರೆಗೂ ಈ ಬನದ ನಡುವೆ ಹುಟ್ಟಿದ, ಕಾಡು ಮರಗಳೆಲ್ಲವೂ, ಮುಟ್ಟಿದ ಕೂಡಲೆ, ತಂಪುಗಾಳಿಗೆ, ಪರಿಮಳವನ್ನು ಕೊಡದ ಮರವು, ನಂದನವನದಲ್ಲಿ ಒಂದೂ ಇಲ್ಲ ಎನ್ನುವಂತೆ ಆಗಿದೆ' ಎಂದು ಭೀಮನು ವೃಷಕೇತುವಿಗೆ ಹೇಳುತ್ತಿದ್ದಾನೆ.

(ಪದ್ಯ - ೩೬),

ಪದ್ಯ - ೩೭ ಸಂಪಾದಿಸಿ

ಈ ವನದ ನಡುನಡುವೆ ತೊಳತೊಳಗುತಿರುತಿಹ ಸ |
ರೋವರವರದೊಳೆ ದಳೆದಳೆದು ಬೆಳೆಬೆಳೆದು ರಾ |
ಜೀವದಲರಲರ ತುಳಿತುಳಿದಿಡಿದಿಡಿದ ಬಂಡನೊಡನೊಡನೆ ಸವಿದು ಸವಿದು ||
ಆವಗಮಗಲದೆ ಯುಗಯುಗಮಾಗಿ ನೆರೆನೆರೆದು |
ಕಾವ ಸೊಗಸೊಗಸಿನಲಿ ನಲಿದು ಮೊರೆಮೊರೆವ ಭೃಂ |
ಗಾವಳಿಯ ಗಾವಳಿಯ ಕಳಕಳಂಗಳ ನೋಡುನೋಡು ರವಿತನಯತನಯ ||37||

ಪದವಿಭಾಗ-ಅರ್ಥ:
ಈ ವನದ ನಡುನಡುವೆ ತೊಳತೊಳಗುತಿರುತಿಹ= ಥಳಥಳಿಸುತ್ತಾ, ಇರುತಿಹ= ಇರುವ, ಸರೋವರವರದೊಳೆ= ಸರೋವರವರದಲ್ಲಿಯೇ, ದಳೆದಳೆದು= ಒತ್ತೊತ್ತಾಗಿ ಬೆಳೆಬೆಳೆದು=ಚೆನ್ನಾಗಿ ಬೆಳೆದು, ರಾಜೀವದಲರಲರಕಮಲದ ಹೂವಿನ ದಳಗಳ, ತುಳಿತುಳಿದಿಡಿದಿಡಿದ= ತೂಳಿದು ತುಳಿದು ಹಿಡಿದ, ಬಂಡನೊಡನೊಡನೆ-: ಬಂಡನು=ಧೂಳಿಯನ್ನು (ರಸವನ್ನು)ಪದೆ ಪದೇ, ಸವಿದು ಸವಿದು= ಚೆನ್ನಾಗಿ ಸವಿದು, ಆವಗಮಗಲದೆ-:ಆವಗಂ ಯಾವಾಗಲೂ ಅಗಲದೆ=ಬೇರೆಯಾಗದೆ, ಯುಗಯುಗಮಾಗಿ= ಯುಗ ಯುಗಗಳಿಂದ ನೆರೆನೆರೆದು= ಒಟ್ಟುಗೂಡಿ, ಕಾವ= ಕಾಯುವ, ಸೊಗಸೊಗಸಿನಲಿ= ಸೊಗಸಿನಿಂದ, ನಲಿದು= ಸಂತೋಷಪಟ್ಟು, ಮೊರೆಮೊರೆವ= ಝೇಂಕಾರ ಮಾಡುತ್ತಿರುವ, ಭೃಂಗಾವಳಿಯ ಗಾವಳಿಯ=ಜೇನುಹುಳುಗಳ ಹಾವಳಿಯನ್ನೂ ಗುಂಪುಗಳನ್ನೂ, ಕಳಕಳಂಗಳ=ಅವುಗಳ ಝೇಂಕಾರದ ಶಬ್ದವನ್ನೂ, ನೋಡುನೋಡು= ಚನ್ನಾಗಿನೋಡು, ರವಿತನಯತನಯ=ರವಿಯ ಮಗನ ಮಗನೇ ನೋಡು ಎಂದು ಭೀಮನು ಹೇಳಿದನು.
  • ತಾತ್ಪರ್ಯ :ಈ ವನದ ನಡುನಡುವೆ ಥಳಥಳಿಸುತ್ತಾ ಇರುವ ಸರೋವರವರದಲ್ಲಿಯೇ ಒತ್ತೊತ್ತಾಗಿ ಚೆನ್ನಾಗಿ ಬೆಳೆದು ಕಮಲದ ಹೂವಿನ ದಳಗಳನ್ನು ತುಳಿದು ತುಳಿದು ಹಿಡಿದ ಧೂಳಿಯನ್ನು (ರಸವನ್ನು)ಪದೆ ಪದೇ ಚೆನ್ನಾಗಿ ಸವಿದು, ಯಾವಾಗಲೂ ಬೇರೆಯಾಗದೆ ಯುಗ ಯುಗಗಳಿಂದ ಒಟ್ಟುಗೂಡಿ ಕಾಯುವ ಸೊಗಸಿನಿಂದ ಸಂತೋಷಪಟ್ಟು ಝೇಂಕಾರ ಮಾಡುತ್ತಿರುವ,ಜೇನುಹುಳುಗಳ ಹಾವಳಿಯನ್ನೂ ಗುಂಪುಗಳನ್ನೂ, ಅವುಗಳ ಝೇಂಕಾರದ ಶಬ್ದವನ್ನೂ, ನೋಡು ನೋಡು , ರವಿಯ ಮಗನ ಮಗನೇ ಗಮನವಿಟ್ಟು ನೋಡು ಎಂದು ಭೀಮನು ಹೇಳಿದನು.

(ಪದ್ಯ - ೩೭),

ಪದ್ಯ - ೩೮ ಸಂಪಾದಿಸಿ

ಸಗ್ಗದಾಣ್ಮನ ವಜ್ರಹತಿಯಿಂದೆ ಸಾಗರಕೆ |
ಮುಗ್ಗುವ ಕುಲಾದ್ರಿಗಳ ಮರಿಗಳ ಸಮೂಹಮೆನ |
ಲೊಗ್ಗಿನಿಂ ಪೆರ್ಗಡಲ ನೀರ್ಮೊಗೆಯಲಿಳಿದ ಕಾರ್ಮುಗಿಲ ಬಳಗಂಗಳೆನಲು ||
ದಿಗ್ಗಜಮನೇ ಕಂಗಳಾದುವೆನೆ ಕರಿಘಟೆಯ |
ಮೊಗ್ಗರಂ ತಿಳಿಗೊಳಂಗಳ ಸಲಿಲಪಾನಕಿಳೆ |
ನೆಗ್ಗಿದಲ್ಲದೆ ಮಾಣದೆಂಬಿನಂ ಪೊಳಲ ಪೊರೆಮುಟ್ಟು ಬಂದಪುದೆಂದನು ||38||

ಪದವಿಭಾಗ-ಅರ್ಥ:
ಸಗ್ಗದಾಣ್ಮನ-;ಸಗ್ಗದ ಆಣ್ಮ(ಒಡೆಯ)= ಇಂದ್ರನ, ವಜ್ರಹತಿಯಿಂದೆ ಸಾಗರಕೆ ಮುಗ್ಗುವ= ವಜ್ರಾಯುಧದ ಪೆಟ್ಟಿನಿಂದ ಬಿದ್ದ, ಕುಲಾದ್ರಿಗಳ ಮರಿಗಳ ಸಮೂಹಮೆನಲೊಗ್ಗಿನಿಂ= ದೊಡ್ಡ ಪರ್ವತಗಳ ಮರಿಗಳ ಸಮೂಹವು,ಅಥವಾ, ಪೆರ್ಗಡಲ ನೀರ್ಮೊಗೆಯಲಿಳಿದ ಕಾರ್ಮುಗಿಲ ಬಳಗಂಗಳೆನಲು= ನೀರು ಕುಡಿಯಲು ಇಳಿದ, ಅಥವಾ ಕಪ್ಪುಮೋಡಗಳ ಬಳಗಗಳುನೀರು ಮೊಗೆಯಲು ಬಂದವೋ ಎನಲು,, ದಿಗ್ಗಜಮನೇಕಂಗಳಾದುವೆನೆ= ಅಥವಾ ಅನೇಕ ದಿಗ್ಗಜಗಳು ಬಂದಂತೆ, ಕರಿಘಟೆಯ ಮೊಗ್ಗರಂ=ಆನೆಗಳ ಗುಂಪು, ತಿಳಿಗೊಳಂಗಳ= ಸರೋವರಗಳನ್ನು, ಸಲಿಲಪಾನಕೆ ಇಳೆ ನೆಗ್ಗಿದು ಅಲ್ಲದೆ= ನೀರು ಕುಡಿಯಲು, ಭೂಮಿಯು ಕುಸಿಯದೆ ಮಾಣದೆಂಬಿನಂ-:ಮಾಣದು ಎಂಬಿನಂ=ಇರದು ಎಂಬಂತೆ, ಪೊಳಲ= ನಗರದಿಂದ ಪೊರೆಮುಟ್ಟು=ಹೊರಟು, ಬಂದಪುದೆಂದನು-: ಬಂದಪುದು ಎಂದನು, ಭೀಮ
  • ತಾತ್ಪರ್ಯ :ಇಂದ್ರನ ವಜ್ರಾಯುಧದ ಪೆಟ್ಟಿನಿಂದ ಬಿದ್ದ, ದೊಡ್ಡ ಪರ್ವತಗಳ ಮರಿಗಳ ಸಮೂಹವು,ನೀರು ಕುಡಿಯಲು ಇಳಿದವೋ, ಅಥವಾ ಕಪ್ಪುಮೋಡಗಳ ಬಳಗಗಳು ನೀರು ಮೊಗೆಯಲು ಬಂದವೋ ಎನಲು, ಅಥವಾ ಅನೇಕ ದಿಗ್ಗಜಗಳು ಬಂದಂತೆ, ಆನೆಗಳ ಗುಂಪು,ಸರೋವರಗಳನ್ನು, ಇಳೆ ನೆಗ್ಗಿದು ಅಲ್ಲದೆ= ನೀರು ಕುಡಿಯಲು, ಭೂಮಿಯು ಕುಸಿಯದೆ ಮಾಣದೆಂಬಿನಂ-:ಮಾಣದು ಎಂಬಿನಂ=ಇರದು ಎಂಬಂತೆ, ನಗರದಿಂದ ಹೊರಟು, ಬರುತ್ತವೆ (ಬರುತ್ತಿವೆ) ಎಂದನು, ಭೀಮ

(ಪದ್ಯ - ೩೮),

ಪದ್ಯ - ೩೯ ಸಂಪಾದಿಸಿ

ಖಳರ ಪುರುಷಾರ್ಥಮಂ ಕಾಮಿಸುವ ಯಾಚಕಾ |
ವಳಿಯಂತೆ ಪೊಳಲಿಂದೆ ಪೊರಮಟ್ಟು ಸರಸಿಯೊಳ್ |
ಮುಳುಗುತಿರ್ಪ್ಪಾನೆಗಳ ದಾನಾಭಿಲಾಷೆಯಂ ಬಿಟ್ಟಳಿಕುಳಂ ತೊಲಗಲು ||
ಕಳಕಳಿಸಿ ನಗುವ ಸಜ್ಜನರವೊಲ್ ಸರಸ ಪರಿ |
ಮಳದ ಮಕರಂದಮಂ ಭ್ರಮರಾವಳಿಗೆ ಮಾಜ |
ದೊಲಿದಿತ್ತು ಮರೆವ ಬೆಳ್ದಾವರೆಯ ಬಿಚ್ಚಲರ್ಗಳ ಪೆರ್ಚ ನೋಡೆಂದನು ||

ಪದವಿಭಾಗ-ಅರ್ಥ:
ಖಳರ= ದುಷ್ಟರ,ದುಷ್ಟರಿಂದ, ಪುರುಷಾರ್ಥಮಂ ಕಾಮಿಸುವ ಯಾಚಕಾ ವಳಿಯಂತೆ= ಒಳ್ಳಯದನ್ನು ಅಪೇಕ್ಷಿಸುವ ಬೇಡುವವರ ಸಮೂಹದಂತೆ, ಪೊಳಲಿಂದೆ= ಪಟ್ಟಣದಿಂದ, ಪೊರಮಟ್ಟು= ಹೊರಟು, ಸರಸಿಯೊಳ್= ಸರೋವರದಲ್ಲಿ, ಮುಳುಗುತಿರ್ಪ್ಪಾನೆಗಳ= ಮುಳುಗುತ್ತಿರುವ ಆನೆಗಳ, ದಾನಾಭಿಲಾಷೆಯಂ=ಮದೋದಕವನ್ನು ಕೊಡುವ ಆಸೆಯನ್ನು ಬಿಟ್ಟಳಿಕುಳಂ-: ಬಿಟ್ಟು ಅಳಿಕುಂ= ಸ್ವೀಕರಿಸದೆ ತೊಲಗಲು= ಹೊರಟುಹೋಗಲು, ಕಳಕಳಿಸಿ ನಗುವ= ಸಂತಸದಿಂದ ನಗುವ, ಸಜ್ಜನರವೊಲ್= ಸಜ್ಜನರಂತೆ, ಸರಸ ಪರಿಮಳದ ಮಕರಂದಮಂ= ಮಧುರ ಸುವಾಸನೆಯ ಮಕರಂದವನ್ನು ಭ್ರಮರಾವಳಿಗೆ= ದುಂಬಿಗಳಿಗೆ, ಮಾಜದೊಲಿದಿತ್ತು-: ಮಾಜದೆ ಒಲಿದು ಇತ್ತು= ಮುಚ್ಚಿಡದೆ ಪ್ರೀತಿಯಿಂದ ಕೊಟ್ಟು, ಮರೆವ ಬೆಳ್ದಾವರೆಯ ಬಿಚ್ಚಲರ್ಗಳ ಪೆರ್ಚ= ಹೊಳೆಯುವ ಬಿಳಿತಾವರೆಯ ಅರಳಿದೆಸಳುಗಳ ಹಿರಿಮೆಯನ್ನು, ನೋಡೆಂದನು, ಭೀಮ.
  • ತಾತ್ಪರ್ಯ :ದುಷ್ಟರಿಂದ ಒಳ್ಳಯದನ್ನು ಬೇಡುವವರ ಸಮೂಹದಂತೆ (ದುಂಬಿಗಳು), ಪಟ್ಟಣದಿಂದ ಹೊರಟು ಸರೋವರದಲ್ಲಿ, ಮುಳುಗುತ್ತಿರುವ ಆನೆಗಳ ಮದೋದಕವನ್ನು ಕೊಡುವ ಅವುಗಳ ಆಸೆಯನ್ನು ಸ್ವೀಕರಿಸದೆ ಹೊರಟುಹೋಗಲು, ಸಂತಸದಿಂದ ನಗುವ, ಸಜ್ಜನರಂತೆ (ಬಿಳಿ ತಾವರೆಗಳು), ಮಧುರ ಸುವಾಸನೆಯ ಮಕರಂದವನ್ನು ದುಂಬಿಗಳಿಗೆ, ಮುಚ್ಚಿಡದೆ ಪ್ರೀತಿಯಿಂದ ಕೊಟ್ಟು, ಹೊಳೆಯುವ ಬಿಳಿತಾವರೆಯ ಹಿರಿಮೆಯನ್ನು, ನೋಡೆಂದನು, ಭೀಮ.

(ಪದ್ಯ - ೩೯),

ಪದ್ಯ - ೪೦ ಸಂಪಾದಿಸಿ

ಕಾರ್ಗಾಲದಭ್ರಮಾಲೆಗಳಮರಸರಣಿಯೊಳ್ |
ತಾರ್ಗೂಡುತೆತ್ತಲುಂ ನಿಬಿಡಮಪ್ಪಂದದಿಂ |
ನೀರ್ಗುಡಿಯೆ ಪೊಳಲ ಪೆರ್ಬಾಗಿಲ್ಗಳಿಂದೆ ಪೊರಮಡುವ ವರಸರಸಿಯಿಂದೆ ||
ಊರ್ಗೆ ಮರಳುವ ತೇಜಿಗಳ ಸಾಲ್ಗಳಾ ಮಧ್ಯ |
ಮಾರ್ಗದೊಳ್ ತವೆ ತೀವಿ ಸಂದಣಿಸುತಿವೆ ನೃಪರೊ |
ಳಾರ್ಗಿವನ ಸೌಭಾಗ್ಯಮುಂಟಮಮ ಪೊಗಳ್ವೆನೆಂತಣುಗ ನೋಡಚ್ಚರಿಯನು ||40||

ಪದವಿಭಾಗ-ಅರ್ಥ:
ಕಾರ್ಗಾಲದಭ್ರಮಾಲೆಗಳಮರಸರಣಿಯೊಳ್-:ಕಾರ್ಗಾಲದ= ಮಳೆಗಾಲದ ಅಭ್ರಮಾಲೆಗಳ= ಮೋಡದ ಮಾಲೆಗಳ, ಅಮರಸರಣಿಯೊಳ್= ಆಕಾಶಮಾರ್ಗದಲ್ಲಿ ತಾರ್ಗೂಡುತ=ಒಂದಕ್ಕೊಂದು ಸೇರುತ್ತಾ ಎತ್ತಲುಂ ನಿಬಿಡಮಪ್ಪಂದದಿಂ-:ಎತ್ತಲುಂ ನಿಬಿಡಂ ಅಪ್ಪ ಅಂದದಿಂ;ಎಲ್ಲಾಕಡೆಯೂ ಒತ್ತೊತ್ತಾಗಿ ಇರುವರೀತಿಯಲ್ಲಿ, ನೀರ್ಗುಡಿಯೆ=ನೀರುಕುಡಿಯಲು, ಪೊಳಲ= ಪಟ್ಟಣದ, ಪೆರ್ಬಾಗಿಲ್ಗಳಿಂದೆದೊಡ್ಡಬಾಗಿಲಿಂದ, ಪೊರಮಡುವವರ= ಹೊರಡುವವರ, ಸರಸಿಯಿಂದೆ= ಸರಸ್ಸಿನಿಂದ, ಊರ್ಗೆ= ಊರಿಗೆ, ಮರಳುವ= ಹಿಂತಿರುಗುವ ತೇಜಿಗಳ= ಕುದುರೆಗಳ, ಸಾಲ್ಗಳು= ಶಾಲುಗಳು, ಆ ಮಧ್ಯ ಮಾರ್ಗದೊಳ್ದಾರಿಯ ಮಧ್ಯದಲ್ಲಿ, ತವೆ ತೀವಿ= ಹೆಚ್ಚಾಗಿ, ಸಂದಣಿಸುತಿವೆ= ಸೇರಿಕೊಳ್ಳುತ್ತಿವೆ; ನೃಪರೊ ಳು ಆರ್ಗಿವನ ಸೌಭಾಗ್ಯಮುಂಟುರಾಜರಲ್ಲಿ ಯಾರಿಗೆ ಇವನ ಭಾಗ್ಯವಿದೆ! ಯಾರಿಗೂ ಇಲ್ಲ. ಅಮಮ! ಪೊಗಳ್ವೆನೆಂತು= ಹೇಗೆ ಹೊಗಳಲಿ! ಅಣುಗ= ಬಾಲಕನೇ ನೋಡು ಅಚ್ಚರಿಯನು= ಆಶ್ಚರ್ಯವನ್ನು', ಎಂದನು ಭೀಮ.
  • ತಾತ್ಪರ್ಯ :ಮಳೆಗಾಲದ ಮೋಡದಮಾಲೆಗಳು, ಆಕಾಶಮಾರ್ಗದಲ್ಲಿ ಒಂದಕ್ಕೊಂದು ಸೇರುತ್ತಾ ಎಲ್ಲಾಕಡೆಯೂ ಒತ್ತೊತ್ತಾಗಿ, ಇರುವರೀತಿಯಲ್ಲಿ, ನೀರುಕುಡಿಯಲು, ಪಟ್ಟಣದ, ಹೊರಡುವವರ, ಸರಸ್ಸಿನಿಂದ,ಊರಿಗೆ, ಹಿಂತಿರುಗುವ ಕುದುರೆಗಳ, ಸಾಲುಗಳು, ಆ ಮಾರ್ಗಮಧ್ಯದಲ್ಲಿ, ಹೆಚ್ಚಾಗಿ, ಸೇರಿಕೊಳ್ಳುತ್ತಿವೆ; ರಾಜರಲ್ಲಿ ಯಾರಿಗೆ ಇವನ ಭಾಗ್ಯವಿದೆ! ಯಾರಿಗೂ ಇಲ್ಲ. ಅಮಮ! ಹೇಗೆಂದು ಹೊಗಳಲಿ!ಬಾಲಕನೇ ನೋಡು ಆಶ್ಚರ್ಯವನ್ನು', ಎಂದನು ಭೀಮ.

(ಪದ್ಯ - ೪೦),

ಪದ್ಯ - ೪೧ ಸಂಪಾದಿಸಿ

ಬೇರೆಬೇರಿನಿತೆಲ್ಲಮಂ ಕರ್ಣತನಯಂಗೆ |
ತೋರುತಿರ್ದಂ ಭೀಮನನ್ನೆಗಂ ಬಿಸಿಯ ಬಿಸಿ |
ಲೇರಿದುದು ಭದ್ರಾವತಿಯೊಳುಳ್ಳ ತೇಜಿಗಳ ಚಪಲತೆಯ ಸೌರಂಭದೆ ||
ಮೀರಿದ ಜವಂಗಳಂ ಕಂಡು ಕಾಲ್ಗೆಟ್ಟೆಳೆಯ |
ಲಾರದೊಯ್ಯನೆ ನಡೆವ ತೇರ್ಗುದುರೆಯಂ ಕಂಡು |
ನೂರೆಲೆಗೆಳೆಯನುಗ್ರಕೋಪದಿಂದುರಿಯನುಗುಳದೆ ಮಾಣನೆಂಬಂತಿರೆ ||41||

ಪದವಿಭಾಗ-ಅರ್ಥ:
ಬೇರೆಬೇರಿನಿತೆಲ್ಲಮಂ-:ಬೇರೆ ಬೇರೆ ಇನತು ಎಲ್ಲಮುಂ-:ಪ್ರತ್ಯೇಕ ಪ್ರತ್ಯೇಕವಾಗಿ ಕರ್ಣತನಯನಿಗೆ ತೋರಿಸುತ್ತದ್ದನು ಭೀಮನು. ಅನ್ನೆಗಂ= ಅಷ್ಟುಹೊತ್ತಿಗೆ ಬಿಸಿಯ ಬಿಸಿಲೇರಿದುದು= ಬಿಸಿಲೇರಿ ಸೆಖೆಯಾಯಿತು. ಭದ್ರಾವತಿಯೊಳು ಉಳ್ಳ= ಇರುವ, ತೇಜಿಗಳ= ಕುದುರೆಗಳ, ಚಪಲತೆಯ= ಚುರುಕಿನ ಸೌರಂಭದೆ= ವೇಗದ, ಮೀರಿದ ಜವಂಗಳಂ ಕಂಡು= ಹೆಚ್ಚಿ ವೇಗದವುಗಳನ್ನು ಕಂಡು, ಕಾಲ್ಗೆಟ್ಟೆಳೆಯಲಾರದೊಯ್ಯನೆ= ಆದರೂ ಕಾಲ್ಗೆಟ್ಟು= ಕಾಲುಸೋತು ಎಳೆಯಲಾದೆ ಒಯ್ಯನೆ= ಮೆಲ್ಲಗೆ ನಡೆವ ತೇರ್ಗುದುರೆಯಂ ಕಂಡು= ನಡೆಯುವ ರಥದ ಕುದುರೆಯನ್ನು ನೋಡಿ, ನೂರೆಲೆಗೆಳೆಯನುಗ್ರಕೋಪದಿಂದುರಿಯನುಗುಳದೆ ಮಾಣನೆಂಬಂತಿರೆ-: ನೂರೆಲೆ ಗೆಳೆಯನು= ಸೂರ್ಯನು, ಉಗ್ರಕೋಪದಿಂದ= ಸಿಟ್ಟಿನಿಂದ, ಉರಿಯನು= ಬೆಂಕಿಯನ್ನು, ಉಗುಳದೆ ಮಾಣನು-:ಬೀರದೆ ಬಿಡನು, ಎಂಬಂತೆ ಇರೆ= ಎನ್ನುವ ಹಾಗೆ (ಬಿಸಿಲೇರಿತು).
  • ತಾತ್ಪರ್ಯ :ಭೀಮನು, ಪ್ರತ್ಯೇಕ ಪ್ರತ್ಯೇಕವಾಗಿ ಕರ್ಣತನಯನಿಗೆ ತೋರಿಸುತ್ತಿದ್ದನು. ಅಷ್ಟುಹೊತ್ತಿಗೆ ಬಿಸಿಲೇರಿ ಸೆಖೆಯಾಯಿತು.ಕುದುರೆಗಳು, ಚುರುಕಿನ ವೇಗದವು, ಹೆಚ್ಚಿನ ವೇಗದವುಗಳನ್ನು ಕಂಡರೂ,ಕಾಲುಸೋತು ಎಳೆಯಲಾದೆ ಮೆಲ್ಲಗೆ ನಡೆಯುವ ರಥದ ಕುದುರೆಯನ್ನು ನೋಡಿದಾಗ, ಸೂರ್ಯನು ಸಿಟ್ಟಿನಿಂದ ಬೆಂಕಿಯನ್ನು ಬೀರದೆ ಬಿಡನು ಎನ್ನುವ ಹಾಗೆ (ಬಿಸಿಲೇರಿತು).

(ಪದ್ಯ - ೪೧),

ಪದ್ಯ - ೪೨ ಸಂಪಾದಿಸಿ

ಭಾನು ಮಧ್ಯಾಹ್ನಗತನಾದನೀ ಕುದುರೆಗಳೊ |
ಳಾನುತ್ತಮಾಶ್ವಮಂ ಕಂಡುದಿಲ್ಲದರಿಂದ |
ಮೇನದಂ ಪೊರಮಡಿಸರೋ ಪೊಳಲೊಳಿಲ್ಲವೋ ಕಣ್ಗೆ ಗೋಚರಮಾಗದೋ ||
ಈ ನಿದಾನವನರಿವೊಡೆಂತುಟೆಮಗೆಲೆ ಕರ್ಣ |
ಸೂನು ಪೇಳೆಂದು ಚಿಂತಾವಿಷ್ಟನಾಗಿ ಪವ |
ಮಾನಜಂ ಚಿತ್ತದೊಳ್ ದೇವಪುರ ಲಕ್ಷ್ಮೀಶನಂಘ್ರಿಯಂ ಧ್ಯಾನಿಸಿದನು ||42||

ಪದವಿಭಾಗ-ಅರ್ಥ:
ಭಾನು ಮಧ್ಯಾಹ್ನಗತನಾದನು= ಸೂರ್ಯನು ಮಧ್ಯಾಹ್ನದ ಸಮಯಕ್ಕೆ ಬಂದನು, ಈ ಕುದುರೆಗಳೊಳು= ಈ ನೀರು ಕುಡಿಯಲು ಬಂದ ಕುದುರೆಗಳಲ್ಲಿ ಉನುತ್ತಮಾಶ್ವಮಂ ಕಂಡುದಿಲ್ಲ= ಉತ್ತಮ ಯಜ್ಞಕುದುರೆಯನ್ನು ಕಾಣಲಿಲ್ಲ. ಅದರಿಂದ ಮೇಣ್ ಅದಂ ಪೊರಮಡಿಸರೋ= ಅದ್ದರಿಂದ ಅದನ್ನು ಹೊರತರುವರೋ ಇಲ್ಲವೋಎಂಬ ಚಿಂತೆಯಾಗಿದೆ. ಪೊಳಲೊಳಿಲ್ಲವೋ= ಅಥವಾ ಈನಗರದಲ್ಲಿ ಇಲ್ಲವೋ? ಕಣ್ಗೆ ಗೋಚರಂ ಆಗದೋ= ಅಥವಾ ಅದು ಕಣ್ಣಿಗೆ ಗೋಚರಿಸದೋ? ಈ ನಿದಾನವನು= ಇದರ ಕಾರಣವನ್ನು, ಅರಿವೊಡೆ= ತಿಳಿಯಲು, ಎಂತುಟೆ ಎಮಗೆ ಎಲೆ ಕರ್ಣಸೂನು ಪೇಳು= ನಮಗೆ ಹೇಗೆ (ಸಾಧ್ಯ) ಹೇಳು ಎಂದು ಚಿಂತಾವಿಷ್ಟನಾಗಿ= ಚಿಂತಿತನಾಗಿ, ಪವಮಾನಜಂ= ಭೀಮನು, ಚಿತ್ತದೊಳ್= ಮನಸ್ಸಿನಲ್ಲಿ, ದೇವಪುರ ಲಕ್ಷ್ಮೀಶನಂಘ್ರಿಯಂ ಧ್ಯಾನಿಸಿದನು= ಲಕ್ಷ್ಮೀಶನ ಪಾದವನ್ನು ಧ್ಯಾನಿಸಿದನು.

</poem>

  • ತಾತ್ಪರ್ಯ : ಸೂರ್ಯನು ಮಧ್ಯಾಹ್ನದ ಸಮಯಕ್ಕೆ ಬಂದನು; ಈ ನೀರು ಕುಡಿಯಲು ಬಂದ ಕುದುರೆಗಳಲ್ಲಿ ಉತ್ತಮ ಯಜ್ಞಕುದುರೆಯನ್ನು ಕಾಣಲಿಲ್ಲ. ಆದ್ದರಿಂದ ಅದನ್ನು ಹೊರತರುವರೋ ಇಲ್ಲವೋಎಂಬ ಚಿಂತೆಯಾಗಿದೆ. ಅಥವಾ ಅದು ಈ ನಗರದಲ್ಲಿ ಇಲ್ಲವೋ? ಅಥವಾ ಅದು ಕಣ್ಣಿಗೆ ಗೋಚರಿಸದೋ? ಈ ಇದರ ಕಾರಣವನ್ನು ತಿಳಿಯಲು ನಮಗೆ ಹೇಗೆ (ಸಾಧ್ಯ) ಹೇಳು', ಎಂದು ಚಿಂತಿತನಾಗಿ ಭೀಮನು ಮನಸ್ಸಿನಲ್ಲಿ ಲಕ್ಷ್ಮೀಶನ ಪಾದವನ್ನು ಧ್ಯಾನಿಸಿದನು.

(ಪದ್ಯ - ೪೨),

[೨]

~~ಓಂ~~
V.VII.II00IIIXX

ಹೋಗಿ ಸಂಪಾದಿಸಿ

ನೋಡಿ ಸಂಪಾದಿಸಿ

ಜೈಮಿನಿ ಭಾರತ-ಸಂಧಿಗಳು:*1 * 2 *3 * 4 * 5 *6 * 7 * 8 *9 * 10 * 11* 12* 13 * 14 * 15 * 16 *17* 18 * 19* 20 * 21 * 22‎* 23‎* 24 * 25* 26* 27* 28* 29* 30* 31* 32* 33* 34

ಪರಿವಿಡಿ ಸಂಪಾದಿಸಿ

ಕನ್ನಡ ವಿಕಿಸೋರ್ಸ್ ಸಂಪಾದಿಸಿ

ಹಳಗನ್ನಡ ಸಾಹಿತ್ಯ| ಪಂಪಭಾರತ |ಜೈಮಿನಿ ಭಾರತ |ಕುಮಾರವ್ಯಾಸ ಭಾರತ | ನಾಡಗೀತೆಗಳು | ಜನಪದ ಸಾಹಿತ್ಯ | ಚಲನಚಿತ್ರ ಸಾಹಿತ್ಯ | ಚಲನಚಿತ್ರೇತರ ಸಾಹಿತ್ಯ |ಭಾವಗೀತೆಗಳು | ಭಕ್ತಿಗೀತೆಗಳು | ದಾಸ ಸಾಹಿತ್ಯ | ವಚನ ಸಾಹಿತ್ಯ | ತಾತ್ವಿಕ ಸಾಹಿತ್ಯ | ಭಗವದ್ಗೀತೆ |
ಮಂಕುತಿಮ್ಮನ ಕಗ್ಗ | ಶಿಶು ಸಾಹಿತ್ಯ | ಕವನ ಸಂಕಲನಗಳು | ಸಂಪ್ರದಾಯ ಗೀತೆಗಳು |ಮಂಕುತಿಮ್ಮನ ಕಗ್ಗ| |ಸರ್ವಜ್ಞ | ಜೀವನ ಚರಿತ್ರೆ|ಸ್ತೋತ್ರಗಳು|ಸಂಸ್ಕೃತ ಸಾಹಿತ್ಯ


ಉಲ್ಲೇಖ ಸಂಪಾದಿಸಿ

  1. ಉ(.ದಕ್ಷಿಣಾಮೂರ್ತಿ ಶಾಸ್ತ್ರಿ ಮಕ್ಕಳು ಡಿ.ಸುಬ್ಬಾಶಾತ್ರಿಗಳ ಮಕ್ಕಳಾದ ರಂಗಶೇಷಶಾಸ್ತ್ರಿ ; ದಕ್ಷಿಣಾಮೂರ್ತಿ ಶಾಸ್ತ್ರಿ ; ಇವರಿಂದ ರಚಿತವಾದ ನಡುಗನ್ನಡದಲ್ಲಿರುವ ಸುಮಾರು ೧೯೨೦ರಲ್ಲಿ ಅಚ್ಚಾದ ಜೈಮಿನಿಭಾರತ- ಸಟೀಕಾ ಇದರ ಆಧಾರ. -ಕಳಪೆ ಕಾಗದದ ಪುಸ್ತಕ ಜೀರ್ಣವಾಗಿದ್ದು ಮುದ್ರಣ ವಿವರ ಅಸ್ಪಷ್ಟ)
  2. ಜೈಮಿನಿ ಭಾರತ -ಟಿ ಕೃಷ್ನಯ್ಯ ಶೆಟ್ಟಿ & ಸಂನ್ಸ ಬಳೆಪೇಟೆ ಬೆಂಗಳೂರು.